Thursday, February 3, 2022

ಮಂಗಳ ವಾದ್ಯ ಕಲಾವಿದರ ಸಮುದಾಯ ಭವನ ನಿವೇಶನ ಖರೀದಿಗೆ ೧ ಲಕ್ಷ ರು. ದೇಣಿಗೆ : ಶಾಸಕ ಬಿ.ಕೆ ಸಂಗಮೇಶ್ವರ್

ಭದ್ರಾವತಿ ನ್ಯೂಟೌನ್ ಮಹಾತ್ಮಗಾಂಧಿ ಉದ್ಯಾನವನ ಮುಂಭಾಗದಲ್ಲಿರುವ ಶ್ರೀ ರಾಮ ದೇವಾಸ್ಥಾನದಲ್ಲಿ ತಾಲೂಕು ಸವಿತಾ ಸಮಾಜ ಮಂಗಳ ವಾದ್ಯ ಕಲಾವಿದರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೧೭ನೇ ವರ್ಷ ಶ್ರೀ ತ್ಯಾಗರಾಜ ಸ್ವಾಮಿ ಆರಾಧನಾ ಮಹೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.   
    ಭದ್ರಾವತಿ, ಫೆ. ೩: ಮಂಗಳ ವಾದ್ಯ ಕಲಾವಿದರ ಸಮುದಾಯ ಭವನಕ್ಕೆ ನಿವೇಶನ ಖರೀದಿಸಲು ವೈಯಕ್ತಿಕವಾಗಿ ೧ ಲಕ್ಷ ರು. ದೇಣಿಗೆ ನೀಡುವ ಜೊತೆಗೆ ೧೦ ಲಕ್ಷ ರು. ಅನುದಾನ ಬಿಡುಗಡೆಗೊಳಿಸುವುದಾಗಿ ಶಾಸಕ ಬಿ.ಕೆ ಸಂಗಮೇಶ್ವರ್ ಭರವಸೆ ನೀಡಿದರು.
    ಅವರು ನ್ಯೂಟೌನ್ ಮಹಾತ್ಮಗಾಂಧಿ ಉದ್ಯಾನವನ ಮುಂಭಾಗದಲ್ಲಿರುವ ಶ್ರೀ ರಾಮ ದೇವಾಸ್ಥಾನದಲ್ಲಿ ತಾಲೂಕು ಸವಿತಾ ಸಮಾಜ ಮಂಗಳ ವಾದ್ಯ ಕಲಾವಿದರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೧೭ನೇ ವರ್ಷ ಶ್ರೀ ತ್ಯಾಗರಾಜ ಸ್ವಾಮಿ ಆರಾಧನಾ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಶುಭ ಸಮಾರಂಭಗಳಲ್ಲಿ ಮಂಗಳ ವಾದ್ಯ ಕಲಾವಿದರ ಕೊಡುಗೆ ಅನನ್ಯವಾಗಿದ್ದು, ವೃತ್ತಿ ಬದುಕಿನ ಜೊತೆಗೆ ಕಲಾ ಸೇವೆಯಲ್ಲಿ ತೊಡಗಿರುವುದು ಹೆಮ್ಮೆಯ ವಿಚಾರವಾಗಿದೆ. ಸರ್ಕಾರದ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಕಲ್ಪಿಸಿಕೊಡುವ ಜೊತೆಗೆ ವೈಯಕ್ತಿಕವಾಗಿ ಸಹ ಸಾಧ್ಯವಾದಷ್ಟು ನೆರವು ಕಲ್ಪಿಸಿ ಕೊಡುವ ಮೂಲಕ ಸಂಕಷ್ಟಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.
    ನಗರಸಭೆ ಉಪಾಧ್ಯಕ್ಷ ಚನ್ನಪ್ಪ ಮಾತನಾಡಿ, ಮಂಗಳ ವಾದ್ಯಕ್ಕೆ ಮನಸ್ಸಿನಲ್ಲಿನ ನೋವುಗಳನ್ನು ದೂರ ಮಾಡುವ ಅದ್ಭುತ ಶಕ್ತಿ ಇದೆ. ಶುಭ ಸಮಾರಂಭಗಳಲ್ಲಿ ಪ್ರತಿಯೊಬ್ಬರ ಮನಸ್ಸಿಗೆ ನೆಮ್ಮದಿ ನೀಡುವ ಮಂಗಳ ವಾದ್ಯಕ್ಕೆ ಇಂದಿಗೂ ಹೆಚ್ಚಿನ ಮಹತ್ವವಿದೆ. ಈ ಕಲಾವಿದರ ಬದುಕು ವಿಭಿನ್ನವಾಗಿದ್ದು, ಸಮಾಜದಲ್ಲಿ ಯಾರೊಂದಿಗೂ ಸಂಘರ್ಷಕ್ಕೆ ಇಳಿಯದೆ ತಮ್ಮಷ್ಟಕ್ಕೆ ತಾವು ಬದುಕು ಕಟ್ಟಿಕೊಂಡಿದ್ದಾರೆ. ಇಂತಹ ಕಲಾವಿದರಿಗೆ ಸಂಕಷ್ಟಗಳಿಗೆ ಸ್ಪಂದಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ನಗರಸಭೆ ವತಿಯಿಂದ ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯವಿರುವ ನಿವೇಶನ ಕಲ್ಪಿಸಿ ಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.
    ಸಂಘದ ಅಧ್ಯಕ್ಷ ಪಿ. ವರದರಾಜು(ಮಹೇಶ್) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷರಾದ ಗೋವಿಂದರಾಜು, ಎನ್. ರಮೇಶ್, ಪ್ರಧಾನ ಕಾರ್ಯದರ್ಶಿ ತುಳಸಿ ಏಳುಮಲೈ, ಖಜಾಂಚಿ ಬೊಮ್ಮನಕಟ್ಟೆ ಚನ್ನಯ್ಯ, ಗೌರವ ಸಲಹೆಗಾರರಾದ ಗಣೇಶ್, ಅರುಳಲಿಂಗಂ, ಡೋಲು ರಾಜಣ್ಣ, ರಮೇಶ್, ಹೊನ್ನಟ್ಟಿ ಹೊಸೂರು ರಾಜಣ್ಣ, ಪ್ರಕಾಶ್, ಸುರೇಶ್, ಶ್ರೀನಿವಾಸ, ಹಂಸಲಿಂಗಂ, ಶಿವಶಂಕರ್, ಜನ್ನಾಪುರ ಮಹೇಶ್, ರವಿಚಂದ್ರ, ಏಳುಮಲೈ, ಮೂರ್ತಿ,  ಸವಿತಾ ಸಮಾಜ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಎಸ್ ರಮೇಶ್,  ತಾಲೂಕು ಉಪಾಧ್ಯಕ್ಷ ಜಿ. ವೆಂಕಟೇಶ್, ಮಾಜಿ ಅಧ್ಯಕ್ಷ ಎಂ. ರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment