ಭದ್ರಾವತಿ, ಮಾ. ೧೪: ಮಿಲ್ಟ್ರಿ ಹೋಟಲ್ನಲ್ಲಿ ಕುಡಿದ ಅಮಲಿನಲ್ಲಿದ್ದ ಗುಂಪೊಂದು ಪುಂಡಾಟಿಕೆ ನಡೆಸಿ ಹೋಟೆಲ್ನಲ್ಲಿ ಅಡುಗೆ ಕೆಲಸ ಮಾಡುವ ಸಿಬ್ಬಂದಿಯೋರ್ವನ ಮುಖದ ಮೇಲೆ ಕುದಿಯುವ ಎಣ್ಣೆ ಎರಚಿರುವ ಘಟನೆ ನಗರದ ಜನ್ನಾಪುರದಲ್ಲಿ ಕೆಲವು ದಿನಗಳ ಹಿಂದೆ ನಡೆದಿದೆ.
ಜನ್ನಾಪುರದ ವಾಣಿಜ್ಯ ರಸ್ತೆಯಲ್ಲಿರುವ ಗರುಡ ಮಿಲ್ಟ್ರಿ ಹೋಟೆಲ್ನಲ್ಲಿ ಈ ಘಟನೆ ನಡೆದಿದ್ದು, ಹೋಟೆಲ್ನಲ್ಲಿ ಅಡುಗೆ ಕೆಲಸ ಮಾಡುವ ಮನೋಜ್ ಕುಮಾರ್ ಮುಖ ಸುಟ್ಟು ತೀವ್ರ ಗಾಯಗೊಂಡಿದೆ. ಈತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹುತ್ತಾ ಕಾಲೋನಿ ಹಾಗು ಜಿಂಕ್ಲೈನ್ ನಿವಾಸಿಗಳಾದ ಅಜಯ್, ಯೋಗೇಶ್, ಜಗದೀಶ್ ಮತ್ತು ದೀಪು ಹಾಗು ಇನ್ನಿತರರನ್ನೊಳಗೊಂಡ ಗುಂಪು ಹೋಟೆಲ್ ಮುಂಭಾಗದಲ್ಲಿರುವ ಮದ್ಯದಂಗಡಿಯಲ್ಲಿ ಮದ್ಯಸೇವಿಸಿ ಹೋಟೆಲ್ಗೆ ಬಂದು ತಿಂದುಂಡು ನಂತರ ಹೋಟೆಲ್ ಮಾಲೀಕ ಲೋಹಿತ್ಕುಮಾರ್ ಬಿಲ್ ಕೇಳಿದಾಗ ಕೊಡದೆ ಪುಂಡಾಟ ನಡೆಸಿದ್ದು, ಅಲ್ಲದೆ ಹೋಟೆಲ್ನಲ್ಲಿ ಊಟ ಮಾಡುತ್ತಿದ್ದ ಸುರೇಶ್ ಎಂಬಾತನ ಮೇಲೆ ಹಲ್ಲೆ ನಡೆಸಿದೆ. ಈ ಸಂದರ್ಭದಲ್ಲಿ ಮಾಲೀಕನ ಬೆಂಬಲಕ್ಕೆ ನಿಂತ ಅಡುಗೆ ಸಿಬ್ಬಂದಿ ಮನೋಜ್ಕುಮಾರ್ ಮುಖಕ್ಕೆ ಕುದಿಯುವ ಎಣ್ಣೆ ಎರಚಲಾಗಿದೆ. ಜೊತೆಗೆ ಹೋಟಲ್ನಲ್ಲಿದ್ದ ಪೀಠೋಪಕರಣಗಳನ್ನು ಧ್ವಂಸಗೊಳಿಸಲಾಗಿದೆ ಎನ್ನಲಾಗಿದೆ. ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment