Wednesday, March 16, 2022

ಪವರ್‌ಸ್ಟಾರ್ ಪುನೀತ್‌ರಾಜ್‌ಕುಮಾರ್ ಹುಟ್ಟುಹಬ್ಬ, ಜೇಮ್ಸ್ ಚಿತ್ರ ಪ್ರದರ್ಶನಕ್ಕೆ ಸಕಲ ಸಿದ್ದತೆ

ಭದ್ರಾವತಿ ಸಿ.ಎನ್ ರಸ್ತೆಯಲ್ಲಿರುವ ನೇತ್ರಾವತಿ-ವೆಂಕಟೇಶ್ವರ(ಸತ್ಯ) ಚಿತ್ರ ಮಂದಿರದ ಬಳಿ ಅಳವಡಿಸಲಾಗಿರುವ ಪುನೀತ್‌ರಾಜ್‌ಕುಮಾರ್‌ರವರ ೫೦ ಅಡಿ ಎತ್ತರದ ಕಟೌಟ್.
    ಭದ್ರಾವತಿ, ಮಾ. ೧೬: ನಗರದಲ್ಲೆಡೆ ಪವರ್‌ಸ್ಟಾರ್ ದಿವಂಗತ ಪುನೀತ್ ರಾಜ್‌ಕುಮಾರ್ ಅಭಿನಯದ ಜೇಮ್ಸ್ ಚಲನಚಿತ್ರ ಬಿಡುಗಡೆ ಹಾಗು ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಭರದ ಸಿದ್ದತೆಗಳು ನಡೆದಿದ್ದು, ಹಲವು ಸಂಘಟನೆಗಳು ಒಗ್ಗಟ್ಟಾಗಿ ಅದ್ದೂರಿ ಆಚರಣೆಗೆ ಮುಂದಾಗಿವೆ.
    ನಗರದ ಸಿ.ಎನ್ ರಸ್ತೆಯಲ್ಲಿರುವ ನೇತ್ರಾವತಿ-ವೆಂಕಟೇಶ್ವರ(ಸತ್ಯ) ಚಿತ್ರ ಮಂದಿರದಲ್ಲಿ ಗುರುವಾರ ಜೇಮ್ಸ್  ಚಲನಚಿತ್ರ ಪ್ರದರ್ಶನಗೊಳ್ಳಲಿದ್ದು, ಈಗಾಗಲೇ ಚಿತ್ರಮಂದಿರ ಸುತ್ತಮುತ್ತ ಜೇಮ್ಸ್ ಚಲನಚಿತ್ರದ ಪೋಸ್ಟರ್‌ಗಳು ಹಾಗು ಪುನೀತ್‌ರಾಜ್‌ರವರ ಕಟೌಟ್‌ಗಳು ರಾರಾಜಿಸುತ್ತಿವೆ. ಪುನೀತ್‌ರಾಜ್‌ಕುಮಾರ್‌ರವರ ಅಭಿಮಾನಿ ಬಳಗದ ವಿವಿಧ ಸಂಘಟನೆಗಳು ಚಿತ್ರ ಪ್ರದರ್ಶನಕ್ಕೆ ಶುಭ ಕೋರಿವೆ.
    ೫೦ ಅಡಿ ಎತ್ತರ ಕಟೌಟ್‌ಗೆ ಪುಷ್ಪಾಲಂಕಾರ-ಹಾಲಿನ ಅಭಿಷೇಕ:
    ನಗರದ ಬಿ.ಎಚ್ ರಸ್ತೆ ೩ನೇ ವಾರ್ಡ್ ವ್ಯಾಪ್ತಿಯ ಚಾಮೇಗೌಡ ಏರಿಯಾದ ಡಾ. ರಾಜ್‌ಕುಮಾರ್ ಅಭಿಮಾನಿಗಳು ಮತ್ತು ಕರ್ನಾಟಕ ರತ್ನ ಪುನೀತ್‌ರಾಜ್‌ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಬುಧವಾರವಾರ ಸಂಜೆ ನಗರದ ಬಿ.ಎಚ್ ರಸ್ತೆ ಹುತ್ತಾ ಬಸ್‌ನಿಲ್ದಾಣದಿಂದ ಸತ್ಯ ಚಿತ್ರ ಮಂದಿರದವರೆಗೂ ಜೇಮ್ಸ್ ಉತ್ಸವ ಹಮ್ಮಿಕೊಳ್ಳಲಾಗಿತ್ತು. ಚಿತ್ರಮಂದಿರದ ಆವರಣದಲ್ಲಿ ಪುನೀತ್‌ರಾಜ್‌ಕುಮಾರ್‌ರವರ ಭಾವಚಿತ್ರ ಅನಾವರಣಗೊಳಿಸಲಾಯಿತು. ಸಿಡಿಮದ್ದು ಸಿಡಿಸುವ ಮೂಲಕ ಸಂಭ್ರಮಾಚರಣೆ ನಡೆಸಿ ಸಿಹಿ ಹಂಚಲಾಯಿತು.
ಗುರುವಾರ ಬೆಳಿಗ್ಗೆ ಚಿತ್ರಮಂದಿರ ಮುಂಭಾಗದಲ್ಲಿರುವ ೫೦ ಅಡಿ ಎತ್ತರ ಕಟೌಟ್‌ಗೆ ಹೂವಿನ ಅಲಂಕಾರ ಹಾಗು ಹಾಲಿನ ಅಭಿಷೇಕ ನಡೆಯಲಿದ್ದು, ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ.


ಭದ್ರಾವತಿ ತಾಲೂಕು ಕಚೇರಿ ರಸ್ತೆ ನಿರ್ಮಲ ಆಸ್ಪತ್ರೆ ಬಳಿ ಕನಕ ಆಟೋ ನಿಲ್ದಾಣದ ವತಿಯಿಂದ ಪ್ರತಿಷ್ಠಾಪನೆಗೆ ಸಿದ್ದಗೊಂಡಿರುವ ಪುನೀತ್‌ರಾಜ್‌ಕುಮಾರ್‌ರವರ ಪ್ರತಿಮೆ.
ಪುನೀತ್ ರಾಜ್‌ಕುಮಾರ್ ಪತ್ರಿಮೆ ಅನಾವರಣಕ್ಕೆ ಸಿದ್ದತೆ :
ತಾಲೂಕು ಕಚೇರಿ ರಸ್ತೆ ನಿರ್ಮಲ ಆಸ್ಪತ್ರೆ ಬಳಿ ಕನಕ ಆಟೋ ನಿಲ್ದಾಣದ ವತಿಯಿಂದ ಪುನೀತ್‌ರಾಜ್‌ಕುಮಾರ್ ಹುಟ್ಟುಹಬ್ಬ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಪುನೀತ್‌ರಾಜ್‌ಕುಮಾರ್‌ರವರ ಪತ್ರಿಮೆ ಅನಾವರಣಗೊಳ್ಳಲಿದೆ.
೩ ಅಡಿ ಎತ್ತರದ ಸಿಮೆಂಟ್‌ನಿಂದ ತಯಾರಿಸಲಾದ ಪ್ರತಿಮೆ ಸಿದ್ದಗೊಂಡಿದ್ದು, ಪ್ರಸ್ತುತ ಸುಮಾರು ಒಟ್ಟು ೧೮ ಸಾವಿರ ರು. ವೆಚ್ಚದಲ್ಲಿ ಪ್ರತಿಷ್ಠಾಪನೆ ಕಾರ್ಯ ಕೈಗೊಳ್ಳಲಾಗುತ್ತಿದೆ. ಮಧ್ಯಾಹ್ನ ೧೨.೩೦ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಸ್ವರ ಸಂಗೀತ ಹಾಗು ಅನ್ನಸಂತರ್ಪಣೆ ಸಹ ನಡೆಯಲಿದೆ. ಆಟೋ ನಿಲ್ದಾಣದ ಬಳಿ ಕಟೌಟ್‌ಗಳು ರಾರಾಜಿಸುತ್ತಿವೆ. ಅಭಿಮಾನಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಆಟೋ ಚಾಲಕರು ಕೋರಿದ್ದಾರೆ.
    ಅಭಿಮಾನಿಯಿಂದ ನಗರದೆಲ್ಲೆಡೆ ಫ್ಲೆಕ್ಸ್, ಉಚಿತ ಟಿಕೇಟ್:
ನಗರಸಭೆ ೩೩ನೇ ವಾರ್ಡ್ ಸದಸ್ಯ, ಪುನೀತ್‌ರಾಜ್‌ಕುಮಾರ್ ಅಭಿಮಾನಿ ಆರ್. ಮೋಹನ್‌ಕುಮಾರ್ ತಮ್ಮ ಸ್ವಂತ ಖರ್ಚಿನಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ, ವೃತ್ತಗಳಲ್ಲಿ ಹಾಗು ಸತ್ಯ ಚಿತ್ರ ಮಂದಿರ ಬಳಿ ಸುಮಾರು ಒಂದು ವಾರದ ಹಿಂದೆಯೇ ಜೇಮ್ಸ್ ಚಿತ್ರ ಪ್ರದರ್ಶನಕ್ಕೆ ಶುಭಕೋರಿ ಫ್ಲೆಕ್ಸ್‌ಗಳನ್ನು ಅಳವಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಇದರ ಜೊತೆಗೆ ಸುಮಾರು ೫೦ಕ್ಕೂ ಹೆಚ್ಚು ಟಿಕೇಟ್ ಖರೀದಿಸಿ ಕುಟುಂಬ ಸದಸ್ಯರು, ಸ್ನೇಹಿತರು, ಹಿತೈಷಿಗಳಿಗೆ ಉಚಿತವಾಗಿ ನೀಡಿದ್ದಾರೆ.
     ಉಚಿತ ಆರೋಗ್ಯ ತಪಾಸಣೆ :
    ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಲ್ಪವೃಕ್ಷ ಸೇವಾ ಟ್ರಸ್ಟ್ ಉದ್ಘಾಟನೆ ಹಾಗು ಪುನೀತ್‌ರಾಜ್‌ಕುಮಾರ್‌ರವರ ಹುಟ್ಟುಹಬ್ಬದ ಅಂಗವಾಗಿ ಗುರುವಾರ ಜಯಶ್ರೀ ವೃತ್ತದಲ್ಲಿರುವ ಲೇಡಿಸ್ ಕ್ಲಬ್‌ನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.
    ಶಾಸಕ ಬಿ.ಕೆ ಸಂಗಮೇಶ್ವರ್ ಬೆಳಿಗ್ಗೆ ೧೦ ಗಂಟೆಗೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಂಘದ ಅಧ್ಯಕ್ಷ ಲಾಜರ್ ಅಧ್ಯಕ್ಷತೆ ವಹಿಸಲಿದ್ದಾರೆ. ತಹಸೀಲ್ದಾರ್ ಆರ್. ಪ್ರದೀಪ್, ನಗರಸಭೆ ಪೌರಾಯುಕ್ತ ಕೆ. ಪರಮೇಶ್, ವಿಐಎಸ್‌ಎಲ್ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಸುರಜಿತ್‌ಮಿಶ್ರಾ, ನಗರಸಭೆ ಅಧ್ಯಕ್ಷೆ ಗೀತಾರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸಮಾಜ ಸೇವಕ ಬಾಲಕೃಷ್ಣ, ನಗರಸಭಾ ಸದಸ್ಯ ಕಾಂತರಾಜ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.
    ಒಂದು ಚಿತ್ರಮಂದಿರ ಭರ್ತಿ:
    ನಗರದ ಸಿ.ಎನ್ ರಸ್ತೆಯಲ್ಲಿರುವ ನೇತ್ರಾವತಿ-ವೆಂಕಟೇಶ್ವರ(ಸತ್ಯ) ಚಿತ್ರ ಮಂದಿರದಲ್ಲಿ ಜೇಮ್ಸ್ ಚಿತ್ರ ಪ್ರದರ್ಶನಗೊಳ್ಳಲಿದ್ದು, ಚಿತ್ರಮಂದಿರದಲ್ಲಿ ಭಾನುವಾರದಿಂದ ಟಿಕೇಟ್ ಕಾಯ್ದಿರಿಸುವ ಪ್ರಕ್ರಿಯೆ ಆರಂಭಗೊಂಡಿದೆ. ೨ ಚಿತ್ರಮಂದಿರಗಳಿಂದ ಒಟ್ಟು ೮೦೦ ಆಸನಗಳಿದ್ದು, ಈ ಪೈಕಿ ನೇತ್ರಾವತಿ ಭರ್ತಿಯಾಗಿದೆ. ಉಳಿದಂತೆ ವೆಂಕಟೇಶ್ವರ ಚಿತ್ರಮಂದಿರದಲ್ಲಿ ಸ್ವಲ್ಪ ಟಿಕೇಟ್ ಮಾತ್ರ ಉಳಿದು ಕೊಂಡಿವೆ.

No comments:

Post a Comment