Tuesday, July 19, 2022

‎ ಮುಂಗಾರು ಸಂಭ್ರಮ : 26 ಕವಿಗಳಿಂದ ಸ್ವ ರಚಿತ ಕವನ ವಾಚನ



ಭದ್ರಾವತಿ, ಜು. 19: ಸಿದ್ದಾರೂಢ ನಗರದ ಹೆಬ್ಬೂರು ಮಹಾವಿದ್ಯಾಲಯದ  ಡಿ ಕೆ ಶಿವಕುಮಾರ್ ಬಿ.ಎಡ್ ಕಾಲೇಜಿನಲ್ಲಿ ಮಂಗಳವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ ಮುಂಗಾರು ಸಂಭ್ರಮ ಕವಿಗೋಷ್ಠಿಯಲ್ಲಿ 26 ಕವಿಗಳು ಪಾಲ್ಗೊಳ್ಳುವ ಮೂಲಕ ಗಮನ ಸೆಳೆದರು.
       ಮುಂಗಾರು ಮಳೆ, ಪ್ರವಾಹ,  ಮಾತೃ ಮಮತೆ ಮತ್ತು ಪ್ರಕೃತಿ ಸೊಬಗು ಕುರಿತ  ತಮ್ಮ ಸ್ವ ರಚಿತ ಕವನ ವಾಚಿಸಿದರು.  ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ ಶಾಲಾ ಕಾಲೇಜುಗಳಲ್ಲಿ ಸಾಹಿತ್ಯ ಚಟುವಟಿಕೆಗಳನ್ನು  ಆಯೋಜಿಸಿಕೊಂಡು ಬರುತ್ತಿದೆ. ವಿದ್ಯಾರ್ಥಿಗಳಲ್ಲೂ ಸಾಹಿತ್ಯ ಚಟುವಟಿಕೆಗಳ ಕುರಿತು ಆಸಕ್ತಿ ಮೂಡಿಸುವುದು ಪರಿಷತ್ ಉದ್ದೇಶವಾಗಿದೆ. 
      ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ  ಚುಟುಕು ಕವನ ವಾಚಿಸುವ ಮೂಲಕ ಕವಿಗೋಷ್ಠಿ ಉದ್ಘಾಟಿಸಿದರು. ಪರಿಷತ್ ತಾಲೂಕು ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
     ಹೆಬ್ಬೂರು ಮಹಾವಿದ್ಯಾಲಯದ ಸಲಹಾ ಮಂಡಳಿ ಅಧ್ಯಕ್ಷ  ಮೋಹನ್, ಪ್ರಾಂಶುಪಾಲ ಪಾಲಾಕ್ಷ,  ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ಎಂ.ಎಸ್  ಸುಧಾಮಣಿ, ಪರಿಷತ್ ಕಾರ್ಯದರ್ಶಿಗಳಾದ ಟಿ. ತಿಮ್ಮಪ್ಪ, ಜಗದೀಶ್, ಮಾಯಮ್ಮ, ಕಮಲಕರ, ಹಿರಿಯ ಸಾಹಿತಿಗಳಾದ ಜೆ. ಎನ್ ಬಸವರಾಜಪ್ಪ, ಕಾಂತಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

No comments:

Post a Comment