ಭದ್ರಾವತಿ ತಾಲೂಕು ಕಚೇರಿಯಲ್ಲಿ ಸರಕಾರದ ಆದೇಶದಂತೆ ಪ್ರಥಮ ವರ್ಷವಾಗಿ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತ್ಯೋತ್ಸವ ಆಚರಿಸಲಾಯಿತು.
ಭದ್ರಾವತಿ, ಮಾ. ೫ : ಸಾವಿರಾರು ವರ್ಷಗಳ ಇತಿಹಾಸವಿರುವ ಜಗದ್ಗುರು ಶ್ರೀ ರೇಣುಕಾಚಾರ್ಯರ ಸಮಾಜಮುಖಿ ಕಾರ್ಯಗಳು ಸೂರ್ಯ ಚಂದ್ರರಿರುವಂತೆ ಎಂದೆಂದಿಗೂ ಶಾಶ್ವತವಾಗಿರುತ್ತವೆ. ಸಮಾಜಕ್ಕೆ ನೀಡಿದ ಕೊಡುಗೆಗಳು ಅಪಾರ. ಸಮಾಜದಲ್ಲಿನ ಅನಿಷ್ಟತೆ ಜಾತಿ ವ್ಯವಸ್ಥೆಗಳು ದೂರಾಗುವಂತೆ ಶ್ರಮಿಸಿ ಮಾನವ ಧರ್ಮ ಒಂದೇ, ಮಾನವ ಧರ್ಮಕ್ಕೆ ಜಯವಾಗಲೆಂದು ಆಶಿಸಿದವರು ರೇಣುಕಾಚಾರ್ಯರು ಎಂದು ತಹಸೀಲ್ದಾರ್ ಸುರೇಶಾಚಾರ್ಯ ಹೇಳಿದರು.
ಅವರು ಭಾನುವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ರೇಣುಕಾಚಾರ್ಯ ಜಗದ್ಗುರುಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಜನರಲ್ಲಿ ಮಾಹಿತಿ ಅಷ್ಟಾಗಿಲ್ಲದ ಕಾರಣ ಜಗದ್ಗುರುಗಳ ಕುರಿತು ಸರ್ವರಲ್ಲೂ ಮಾಹಿತಿ ಮೂಡಿಸಲು ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲು ಮುಂದಾಗಿರುವುದು ಸಂತಸ ತಂದಿದೆ. ಇದರಿಂದ ಸಮಾಜಕ್ಕೆ ಬೆಳಕು ಚೆಲ್ಲಿದಂತಾಗುತ್ತದೆ ಎಂದರು.
ವೀರಶೈವ ಸೇವಾ ಸಮಿತಿ ಕಾರ್ಯದರ್ಶಿ ವಾಗೀಶ್ ಕೋಠಿ ಮಾತನಾಡಿ, ಸರ್ಕಾರ ಇದೇ ಮೊದಲ ಬಾರಿಗೆ ಜಗದ್ಗುರುಗಳ ಜಯಂತಿ ಆಚರಿಸುತ್ತಿರುವುದು ಶ್ಲಾಘನೀಯವಾಗಿದೆ. ಮುಂದಿನ ವರ್ಷದಿಂದ ವೀರಶೈವ ಸಮಾಜಗಳು ಸೇರಿದಂತೆ ಇತರೆ ಸಮಾಜಗಳನ್ನು ಒಗ್ಗೂಡಿಸಿಕೊಂಡು ಪೂರ್ವ ಭಾವಿ ಸಭೆ ನಡೆಸಿ ಅದ್ದೂರಿಯಾಗಿ ಸಮಾರಂಭ ಆಯೋಜಿಸಲು ಕ್ರಮ ಕೈಗೊಳ್ಳಬೇಕೆಂದರು.
ವೀರಶೈವ ಲಿಂಗಾಯತ ಮಹಿಳಾ ಸಮಾಜದ ಅಧ್ಯಕ್ಷೆ ಆರ್.ಎಸ್.ಶೋಭಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗ್ರೇಡ್-೨ ತಹಸೀಲ್ದಾರ್ ರಂಗಮ್ಮ, ನಗರಸಭಾ ಸದಸ್ಯ ಬಿ.ಕೆ ಮೋಹನ್, ಡಾ. ಜಿ.ಎಂ ನಟರಾಜ್, ಶಿವಯೋಗಿ ಮಠದ್, ಇಂಜಿನಿಯರ್ ದಯಾನಂದ್ ಮುಂತಾದವರು ಮಾತನಾಡಿದರು.
ಉಪ ತಹಸೀಲ್ದಾರ್ ರಾಧಾಕೃಷ್ಣಭಟ್ ಸ್ವಾಗತಿಸಿದರು. ಭಾಗ್ಯ ಮೂರ್ತಿ ಸಂಗಡಿಗರು ಸಿದ್ದಾಂತ ಶಿಖಾಮಣಿಯ ಕುರಿತು ನುಡಿಗಳನ್ನಾಡಿದರು. ನಗರಸಭಾ ಸದಸ್ಯೆ ಅನುಪಮ, ಮುಖಂಡರಾದ ಬಿ.ಕೆ ಜಗನ್ನಾಥ್, ಟಿ.ಎಸ್ ಆನಂದಕುಮಾರ್, ಚನ್ನೇಶ್, ಷಣ್ಮುಖಪ್ಪ, ಬಸವರಾಜಪ್ಪ, ಮಹೇಶ್ಮೂರ್ತಿ, ನಾಗರಾಜ್, ನಾಗರತ್ನ ಕೋಠಿ ಮುಂತಾದವರಿದ್ದರು.
No comments:
Post a Comment