Tuesday, December 31, 2024

ಜ.೧ರಂದು ಭೀಮಾ ಕೊರೆಗಾವ್ ವಿಜಯೋತ್ಸವ

 

    ಭದ್ರಾವತಿ: ಜನವರಿ ೧, ಜಗತ್ತಿಗೆ ಹೊಸ ವರ್ಷದ ಸಂಭ್ರಮಾಚಾರಣೆಯಾದರೆ ಶೋಷಿತರ ಪಾಲಿಗೆ ಇದು ಅಸ್ಪೃಶ್ಯತೆಯ ವಿರುದ್ಧ ಬಂಡೆದ್ದು ವಿಜಯ ಸಾಧಿಸಿದ ಮಹಾರ್ ಯೋಧರ ಶೌರ್ಯದ ದಿನ. ಬಾಬಾ ಸಾಹೇಬ ಡಾ. ಬಿ.ಆರ್. ಅಂಬೇಡ್ಕರ್‌ರವರ ಬದುಕಿನಲ್ಲಿ ಮುಖ್ಯ ಪ್ರೇರಣೆ ನೀಡಿದ ಈ ದಿನವು ನಮ್ಮೆಲ್ಲರ ಪಾಲಿಗೆ ವಿಜಯೋತ್ಸವದ ದಿನವಾಗಿದೆ. ಈ ಹಿನ್ನಲೆಯಲ್ಲಿ ನಗರದಲ್ಲಿ ಹೊಲಯ-ಮಾದಿಗರ ಸಮನ್ವಯ ಸಮಿತಿ ವತಿಯಿಂದ ಜ.೧ರ ಬುಧವಾರ ಸಂಜೆ ೫.೩೦ಕ್ಕೆ  ನ್ಯೂಟೌನ್, ಉಂಬ್ಳೆಬೈಲ್ ರಸ್ತೆ, ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ೨೦೭ನೇ ವರ್ಷದ ಭೀಮಾ ಕೊರೆಗಾವ್ ವಿಜಯೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಮುಖಂಡ ಸುರೇಶ್ ಹೇಳಿದರು. 
    ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕ್ರಿ.ಶ. ೧೮೦೦ರ ಸಂದರ್ಭದಲ್ಲಿ ಮಹರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿದ್ದ ಪೇಶ್ವೆಗಳು ಮನು ಸಂವಿಧಾನವನ್ನು ಜಾರಿಗೆ ತರುವ ಮೂಲಕ ಅಸ್ಪೃಷ್ಯದ ಜೀವನವನ್ನು ಕಠೋರವಾಗಿಸಿದ್ದರು. ಸಾರ್ವಜನಿಕ ಸ್ಥಳಗಳಲ್ಲಿ ಅಸ್ಪೃಶ್ಯರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಊರೊಳಗೆ ಸತ್ತ ದನಗಳನ್ನು ಹೊತ್ತುಕೊಂಡು ಹೋಗಿ ಮಾಂಸವನ್ನು ತಿನ್ನಬೇಕಾಗಿತ್ತು, ಅವರಿಗೆ ವಿದ್ಯೆ ಕಲಿಯುವ ಹಕ್ಕನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಚಿನ್ನ ಅಥವಾ ಬೆಳ್ಳಿಯ ಆಭರಣ ತೊಡುವಂತಿರಲಿಲ್ಲ. ಅಸ್ಪೃಶ್ಯ ಹೆಣ್ಣು ಮಕ್ಕಳ ಮೇಲೆ ನಿರಂತರ ಅತ್ಯಾಚಾರಗಳನ್ನು ನಡೆಸಲಾಗುತ್ತಿತ್ತು. ಸಾರ್ವಜನಿಕ ಕೆರೆಗಳನ್ನು ಬಳಸದಂತೆ ನಿರ್ಬಂಧ ಹೇರಲಾಗಿತ್ತು. ತಮ್ಮ ಮೇಲೆ ಈ ರೀತಿಯ ಅಮಾನುಷ ಕೃತ್ಯಗಳನ್ನು ನಡೆಸುತ್ತಿದ್ದ ಪೇಶ್ವೆಗಳ ದೌರ್ಜನ್ಯ ದಬ್ಬಾಳಿಕೆಯಿಂದ ರೋಸಿ ಹೋಗಿದ್ದ ಅಸ್ಪಷ್ಯರು ತಮ್ಮ ಜನಾಂಗದ ಮುಕ್ತಿಗಾಗಿ ಹಾತೊರೆಯುತ್ತಿದ್ದರು ಎಂದರು. 
    ಇದೇ ಸಂದರ್ಭದಲ್ಲಿ ಉತ್ತರಭಾರತದಲ್ಲಿ ಅಧಿಪತ್ಯ ಸ್ಥಾಪಿಸಿದ್ದ ಬ್ರಿಟಿಷರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಮಹಾರ್ ವೀರ ಸಿದ್ಧನಾಕನ ನೇತೃತ್ವದಲ್ಲಿ ಮಾತುಕತೆ ನಡೆಸಿ ತಮ್ಮನ್ನು ಬೆಂಬಲಿಸಿದರೆ ಅಸ್ಪೃಷ್ಟರ ಎಲ್ಲಾ ದೌರ್ಜನ್ಯ ದಬ್ಬಾಳಿಕೆಗೆ ಅಂತ್ಯ ಹಾಡುತ್ತೇವೆ ಹಾಗೂ ಮಕ್ಕಳಿಗೆ ವಿದ್ಯಾಭ್ಯಾಸ ಕಲ್ಪಿಸುವ ಭರವಸೆ ನೀಡಿದರು. ಅಸ್ಪೃಷ್ಯ ಆಚರಣೆಯಿಂದ ನೊಂದು ಬೆಂದಿದ್ದ ವೀರ ಮಹಾರ್ ಜನಾಂಜದ ೫೦೦ ಜನ ಯುವ ಯೋಧರು ಯುದ್ಧ ತರಬೇತಿಯೊಂದಿಗೆ ೧೮೧೮ರ ಜನವರಿ ೧ ರಂದು ಬ್ರಿಟಿಷ್ ಕ್ಯಾಪ್ಟನ್ ಎಸ್.ಎಸ್. ಸಂಡನ್ ನೇತೃತ್ವದಲ್ಲಿ ಭೀಮಾ ನದಿಯ ತೀರದಲ್ಲಿ ಕೊರೆಗಾವ್ ಎಂಬ ಸ್ಥಳದಲ್ಲಿ ಸುಮಾರು ೨೮೦೦೦ ಸೈನಿಕರಿದ್ದ ಬ್ರಾಹ್ಮಣ ಪೇಶ್ವೆಗಳ ಮೇಲೆ ಯುದ್ಧ ಸಾರಿ ಸುಮಾರು ೫೦೦೦ಕ್ಕೂ ಹೆಚ್ಚಿನ ಪೇಶ್ವೆ ಸೈನಿಕರನ್ನು ಕೊಂದು ರಾಜ್ಯವನ್ನು ವಶಪಡಿಸಿಕೊಳ್ಳುವ ಮೂಲಕ ತಮ್ಮ ಮೇಲಿನ ಅಸ್ಪೃಷ್ಯತಾ ಆಚರಣೆಗೆ ಅಂತ್ಯ ಹಾಡಿದರು. ಈ ಸಂದರ್ಭದಲ್ಲಿ ಸುಮಾರು ೨೨ ಜನ ವೀರ ಮಹಾರ್ ಯೋಧರು ಬಲಿದಾನವಾಗುವ ಮೂಲಕ ನಮ್ಮ ಸಮುದಾಯವೇ ತಲೆ ಎತ್ತಿ ನಿಲ್ಲುವಂತೆ ಮಾಡಿದ್ದಾರೆ ಎಂದರು. 
    ವೀರ ಯೋಧರ ಗೌರವಾರ್ಥ ಯುದ್ಧ ನಡೆದ ಜಾಗದಲ್ಲಿ ೬೫ ಅಡಿಯ ಎತ್ತರದ ಭವ್ಯ `ವಿಜಯ ಸ್ಥಂಭ' ನಿರ್ಮಿಸಿ ಆ ಸ್ಥಂಭದ ಮೇಲೆ ಅಮರ ವೀರರ ಹೆಸರನ್ನು ಕೆತ್ತಿಸಿದ್ದಾರೆ. ಅಸ್ಪೃಷ್ಯರ ಸ್ವಾಭಿಮಾನದ ಸಂಕೇತವಾದ ಈ ಘಟನೆಯು ನಮ್ಮೆಲ್ಲರಿಗೂ ಆತ್ಮ ಗೌರವನ್ನು ಎತ್ತಿ ಹಿಡಿಯುವ ದಿನವಾಗಿದೆ. ಇಂತಹ ಸ್ವಾಭಿಮಾನದ, ಆತ್ಮಗೌರವದ ದಿನವನ್ನು ಶೋಷಿತ ಸಮುದಾಯದವರು ನೆನಪಿಸಿಕೊಂಡು ಅಮರ ವೀರರ ಕೆಚ್ಚೆದೆಯ ಸ್ವಾಭಿಮಾನವನ್ನು ಮೈಗೂಡಿಸಿಕೊಳ್ಳಬೇಕಾಗಿದೆ. ಅವರ ತ್ಯಾಗ ಬಲಿದಾನದಿಂದ ಮನು ಸಂವಿದಾನಕ್ಕೆ ಪೆಟ್ಟು ಬಿದ್ದು ಅಸ್ಪೃಷ್ಯರಿಗೆ ವಿದ್ಯಾಭ್ಯಾಸ ನೀಡಲು, ಸೈನ್ಯಕ್ಕೆ ಸೇರಲು, ಸಾಮಾಜಿಕವಾಗಿ ಅಲ್ಪ ಪ್ರಮಾಣದಲ್ಲಿ ನಾಗರೀಕ ಬದುಕು ಕಾಣಲು ಸಾಧ್ಯವಾಗಿದೆ ಎಂದರು. 
    ಅಂದು ಅಸ್ಪೃಷ್ಯರು ಬ್ರಿಟಿಷರ ಪರವಾಗಿ ಯುದ್ಧ ಮಾಡಿದ್ದು ಅಭಿಮಾನ ಪಡುವ ಸಂಗತಿಯಲ್ಲದಿದ್ದರೂ ಅಸ್ಪಷ್ಟತೆಯಿಂದ ನೊಂದ ಜನಾಂಗಕ್ಕೆ ತಮ್ಮ ಮಕ್ಕಳ ಮುಂದಿನ ಭವಿಷ್ಯ, ಹೊಟ್ಟೆಗೆ ಅನ್ನ ದೊರಕಿಸಿಕೊಳ್ಳುವ ಸ್ವಾಭಿಮಾನದಿಂದ ಬದುಕುವ ಉದ್ದೇಶಕ್ಕೆ ತಮ್ಮ ಅಮೂಲ್ಯ ಜೀವವನ್ನು ಅರ್ಪಣೆ ಮಾಡಿದ ನಮ್ಮ ಹುತಾತ್ಮ ವೀರ ಯೋಧರಿಗೆ ನಾವೆಲ್ಲ ಗೌರವಿಸಬೇಕಾಗಿದೆ. ನಮ್ಮ ವೀರ ಯೋಧರ ಸ್ವಾಭಿಮಾನದ ಯುದ್ಧವನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸಬೇಕಾಗಿದೆ. ಶೋಷಿತರ ಸ್ವಾಭಿಮಾನಕ್ಕೆ ಪೆಟ್ಟು ಕೊಡುವ ಎಲ್ಲಾ ಶಕ್ತಿಗಳ ವಿರುದ್ದ ತಲೆ ಎತ್ತಿ ನಿಂತು ನಮ್ಮಲ್ಲಿರುವ ಸ್ವಾಭಿಮಾನದ ಜಾಗೃತಿಯನ್ನು ಪ್ರದರ್ಶಿಸಬೇಕಾಗಿದೆ. ನಮ್ಮ ಪೂರ್ವಜರ ಗತ ಇತಿಹಾಸವು ನಮ್ಮನ್ನು ವೀರ ಯೋಧರನ್ನಾಗಿಸಬೇಕಾಗಿದೆ. ಮನುವಾದಿಗಳ ಗುಲಾಮತನದಿಂದ ಹೊರ ಬಂದು ಬಾಬಾ ಸಾಹೇಬರ ವಿಚಾರ ಧಾರೆಗಳಿಂದ ಶೋಷಿತರ ವಿಮೋಚನೆಗಾಗಿರುವ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಬೇಕಾಗಿದೆ ಎಂದರು. 
    ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಶಿವಬಸಪ್ಪ, ಸತ್ಯ ಭದ್ರಾವತಿ, ಚಿನ್ನಯ್ಯ, ಶಿವಕುಮಾರ್, ಧರ್ಮರಾಜ್, ಮಹೇಶ್ ಛಲವಾದಿ, ಕುಬೇಂದ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

No comments:

Post a Comment