Thursday, January 30, 2025

ಮಹಾತ್ಮಗಾಂಧಿ ಕೊಂದವರ ವೈಭವೀಕರಣ ವಿಷಾದನೀಯ : ಶಶಿಕುಮಾರ್ ಗೌಡ

ಭದ್ರಾವತಿ ನಗರದ ಜನ್ನಾಪುರ ಫಿಲ್ಟರ್‌ಶೆಡ್ ಅಂತರಘಟ್ಟಮ ದೇವಸ್ಥಾನದ ಬಳಿ ನಿರ್ಮಿಸಲಾಗಿರುವ ಸಮುದಾಯ ಭವನ ಮುಂಭಾಗ ಫಿಲ್ಟರ್‌ಶೆಡ್ ನಾಗರಿಕರ ಹಿತರಕ್ಷಣಾ ಸಮಿತಿ ವತಿಯಿಂದ ಗುರುವಾರ ಮಹಾತ್ಮಗಾಂಧಿಯವರ ಹುತಾತ್ಮ ದಿನ, ಸರ್ವೋದಯ ದಿನ ಆಚರಿಸಲಾಯಿತು. 
    ಭದ್ರಾವತಿ: ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಮನುವಾದಿಗಳ ಸಂಸ್ಕೃತಿ ಹೆಚ್ಚಾಗಿದ್ದು, ಮಹಾತ್ಮಗಾಂಧಿ ಕೊಂದವರನ್ನು ಮಹಾನ್ ವ್ಯಕ್ತಿಗಳಂತೆ ಬಿಂಬಿಸುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ ವಿಷಾದ ವ್ಯಕ್ತಪಡಿಸಿದರು.  
    ಅವರು ಗುರುವಾರ ನಗರದ ಜನ್ನಾಪುರ ಫಿಲ್ಟರ್‌ಶೆಡ್ ಅಂತರಘಟ್ಟಮ ದೇವಸ್ಥಾನದ ಬಳಿ ನಿರ್ಮಿಸಲಾಗಿರುವ ಸಮುದಾಯ ಭವನ ಮುಂಭಾಗ ಫಿಲ್ಟರ್‌ಶೆಡ್ ನಾಗರಿಕರ ಹಿತರಕ್ಷಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಹಾತ್ಮಗಾಂಧಿಯವರ ಹುತಾತ್ಮ ದಿನ, ಸರ್ವೋದಯ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 
    ರಾಷ್ಟ್ರಪಿತ ಮಹಾತ್ಮಗಾಂಧಿಯವರು ಜಾತಿ, ಧರ್ಮ, ಮತಪಂಥಗಳನ್ನು ಮೀರಿ ಎಲ್ಲರನ್ನು ಒಗ್ಗೂಟಿಸಿಕೊಂಡು ಅಹಿಂಸಾ ಮಾರ್ಗದಲ್ಲಿ ತ್ಯಾಗ, ಬಲಿದಾನದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದು, ಸರ್ವಕಾಲಕ್ಕೂ ಮಹಾತ್ಮಗಾಂಧಿಯವರು ಆದರ್ಶಪ್ರಾಯರಾಗಿದ್ದಾರೆ. ಆದರೆ ಇಂದು ದೇಶದಲ್ಲಿ ಅವರ ತತ್ವ, ಸಿದ್ಧಾಂತಗಳನ್ನು ವಿರೋಧ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕದ ಸಂಗತಿಯಾಗಿದ್ದು, ಇದನ್ನು ಖಂಡಿಸುವ ಜೊತೆಗೆ ಮುಂದಿನ ದಿನಗಳಲ್ಲಿ ಮಹಾತ್ಮಾ ಗಾಂಧಿಯವರ ವಿಷಯದಲ್ಲಿ ಬಾಯಿಗೆ ಬಂದಂತೆ ಮಾತನಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು. 
    ಮಾದೇವಿ, ಪಾರ್ವತಿಬಾಯಿ, ದಿವ್ಯಶ್ರೀ, ಇಂದ್ರಮ್ಮ, ಶಾಂತಮ್ಮ ಸೇರಿದಂತೆ ಫಿಲ್ಟರ್‌ಶೆಡ್ ನಾಗರಿಕರ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಪ್ರಮುಖರು, ಸ್ಥಳೀಯ ನಿವಾಸಿಗಳು ಪಾಲ್ಗೊಂಡಿದ್ದರು. 

No comments:

Post a Comment