Saturday, July 4, 2020

ಕೊರೋನಾ ಸೋಂಕು ಪತ್ತೆ : ಶ್ರೀಸಾಮಾನ್ಯರಿಗೆ ಸಂಕಷ್ಟ

ಭದ್ರಾವತಿ ಹೊಸಮನೆ  ೧೨ನೇ ವಾರ್ಡ್ ಮುತ್ತು ಮಾರಿಯಮ್ಮ ದೇವಸ್ಥಾನ ಸಮೀಪ ಸೀಲ್‌ಡೌನ್ ಮಾಡಲಾಗಿರುವ ವ್ಯಾಪ್ತಿಯಲ್ಲಿನ ನಿವಾಸಿಗಳಿಗೆ ಆನಂದ ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ಶನಿವಾರ ಸುಮಾರು ೧೦ ದಿನಗಳಿಗೆ ಸಾಕಾಗುವಷ್ಟು ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು. 
ಭದ್ರಾವತಿ, ಜು. ೪: ನಗರದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ನಡುವೆ ಸೋಂಕು ಪತ್ತೆಯಾದ ಸ್ಥಳದ ಸುತ್ತಮುತ್ತ ಸೀಲ್‌ಡೌನ್ ಮಾಡಲಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗುತ್ತಿದೆ. 
ಈಗಾಗಲೇ ಕಾಗದನಗರ, ಸುರಗಿತೋಪು, ಹಳೇನಗರ, ಹೊಸಮನೆ, ಗಾಂಧಿನಗರ ಸೇರಿದಂತೆ ಹಲವೆಡೆ ಸೀಲ್‌ಡೌನ್ ಮಾಡಲಾಗಿದ್ದು, ಸ್ಥಳೀಯರಿಗೆ ನಗರಸಭೆ ಸಿಬ್ಬಂದಿಗಳು ದಿನನಿತ್ಯದ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದಾರೆ. 
ಈ ನಡುವೆ ಹೊಸಮನೆ ೧೨ನೇ ವಾರ್ಡ್ ಮುತ್ತು ಮಾರಿಯಮ್ಮ ದೇವಸ್ಥಾನ ಸಮೀಪ ಸೀಲ್‌ಡೌನ್ ಮಾಡಲಾಗಿರುವ ವ್ಯಾಪ್ತಿಯಲ್ಲಿನ ನಿವಾಸಿಗಳಿಗೆ ಆನಂದ ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ಶನಿವಾರ ಸುಮಾರು ೧೦ ದಿನಗಳಿಗೆ ಸಾಕಾಗುವಷ್ಟು ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು. 
ಸಂಸ್ಥೆಯ ಅಧ್ಯಕ್ಷ, ವಾರ್ಡ್ ಸದಸ್ಯ ಜಿ. ಆನಂದಕುಮಾರ್, ಬಿಜೆಪಿ ಪಕ್ಷದ ಮುಖಂಡರಾದ ಮಂಗೋಟೆ ರುದ್ರೇಶ್, ಮೋಹನ್ ಮತ್ತು ಬಿ.ಎಸ್ ಶ್ರೀನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
ಭದ್ರಾವತಿಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ನಗರಸಭೆ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರೊಂದಿಗೆ ಹೊಸಮನೆ ಹಿಂದೂ ಮಹಾಸಭಾ ವಿನಾಯಕ ಸೇವಾ ಸಮಿತಿ ಸಮೀಪ ಸೀಲ್‌ಡೌನ್ ಮಾಡಲಾಗಿರುವ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳೀಯ ನಿವಾಸಿಗಳ ಕುಂದು ಕೊರತೆಗಳನ್ನು ವಿಚಾರಿಸಿದರು. 
ಈ ನಡುವೆ ಶಾಸಕ ಬಿ.ಕೆ ಸಂಗಮೇಶ್ವರ್ ನಗರಸಭೆ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರೊಂದಿಗೆ ಹೊಸಮನೆ ಹಿಂದೂ ಮಹಾಸಭಾ ವಿನಾಯಕ ಸೇವಾ ಸಮಿತಿ ಸಮೀಪ ಸೀಲ್‌ಡೌನ್ ಮಾಡಲಾಗಿರುವ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳೀಯ ನಿವಾಸಿಗಳ ಕುಂದು ಕೊರತೆಗಳನ್ನು ವಿಚಾರಿಸಿದರು. 

ಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ ಕಳೆದ ಬಾರಿಗಿಂತ ೧೬ ಅಡಿ ಏರಿಕೆ

೨೭ ಟಿಎಂಸಿ ನೀರು ಸಂಗ್ರಹ : ಈ ಬಾರಿ ರೈತರ ಕನಸು ನನಸಾಗುವುದೇ..?


ಭದ್ರಾವತಿ, ಜು. ೪: ಕಳೆದ ಬಾರಿ ಜುಲೈ ತಿಂಗಳು ಅರಂಭಗೊಂಡರೂ ಸಹ ಮಳೆ ಬರುವ ಲಕ್ಷಣಗಳು ಕಂಡು ಬಾರದೆ ರೈತರು ಆತಂಕಗೊಂಡಿದ್ದರು. ಆದರೆ ಈ ಬಾರಿ ಮೇ ತಿಂಗಳಿನಿಂದಲೇ ಮಳೆ ಆರಂಭಗೊಂಡಿದ್ದು, ಶನಿವಾರ ಭದ್ರಾ ಜಲಾಶಯದ ನೀರಿನ ಮಟ್ಟ ೧೪೦ ಅಡಿ ತಲುಪಿದೆ. 
ಹವಾಮಾನ ವೈಫರಿತ್ಯದಿಂದಾಗಿ ಈ ಬಾರಿ ಮಳೆಯಾಗಿದ್ದು, ಕಳೆದ ಬಾರಿ ಜುಲೈ ಅಂತ್ಯದ ನಂತರ ರಾಜ್ಯದೆಲ್ಲೆಡೆ ಧಾರಕಾರ ಮಳೆಯಾಗುವ ಜೊತೆಗೆ ನೆರೆ ಹಾವಳಿ ಸಂಭವಿಸಿ ಸಾಕಷ್ಟು ನಷ್ಟ ಅನುಭವಿಸುವಂತಾಗಿತ್ತು. ಗರಿಷ್ಠ ೧೮೬ ಅಡಿ ಎತ್ತರದ ಜಲಾಶಯದಲ್ಲಿ ಕಳೆದ ಬಾರಿಗೆ ಹೋಲಿಕೆ ಮಾಡಿದರೆ  ಈ ಬಾರಿ ೧೬ ಅಡಿ ಹೆಚ್ಚಾಗಿದ್ದು, ೨೭ ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ಬಾರಿ ೧೭.೫ ಅಡಿ ಟಿಎಂಸಿ ನೀರು ಸಂಗ್ರಹವಾಗಿತ್ತು. ಈ ಬಾರಿ ಸಹ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದ್ದು, ರೈತರ ಆತಂಕ ಸ್ವಲ್ಪಮಟ್ಟಿಗೆ ದೂರವಾಗಿದೆ. 
ಪ್ರತಿ ಬಾರಿ ಒಂದಲ್ಲ ಒಂದು ಕಾರಣಕ್ಕೆ ರೈತರು ಸಂಕಷ್ಟಕ್ಕೆ ಒಳಗಾಗುತ್ತಿದ್ದು, ಉತ್ತಮವಾಗಿ ಮಳೆಯಾಗಿ ಜಲಾಶಯ ಭರ್ತಿಯಾದರೂ ಸಹ ಹಲವು ಸಮಸ್ಯೆಗಳು ರೈತರನ್ನು ಕಾಡುತ್ತಿವೆ. ಈ ಬಾರಿ ಮಹಾಮಾರಿ ಕೊರೋನಾ ವೈರಸ್ ಸೋಂಕು ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದ್ದು, ಕೇಂದ್ರ ಸರ್ಕಾರ ಲಾಕ್‌ಡೌನ್ ಘೋಷಿಸಿದ ನಂತರ ಶ್ರೀಸಾಮಾನ್ಯರು ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ನಿರುದ್ಯೋಗ ಸಮಸ್ಯೆ ಮತ್ತಷ್ಟು ಹೆಚ್ಚಾಗಿದ್ದು, ಇದೀಗ ಯುವ ಸಮೂಹ ಸಹ ಕೃಷಿ ಕಡೆ ಮುಖ ಮಾಡುತ್ತಿದೆ. ಲಾಭ-ನಷ್ಟ ಏನೇ ಇರಲಿ ಕೃಷಿಯಿಂದಲೇ ಬದುಕು ಕಟ್ಟಿಕೊಳ್ಳಬೇಕಾಗಿದೆ. ಈ ಹಿನ್ನಲೆಯಲ್ಲಿ ಈ ಬಾರಿ ರೈತರ ಭವಿಷ್ಯ ಎಲ್ಲರ ಕಡೆ ಗಮನ ಸೆಳೆದಿದೆ. 
ಜಲಾಶಯ ೧೮೬ ಅಡಿ ಗರಿಷ್ಠ ಮಟ್ಟ ತಲುಪಿದರೂ ಸಹ ಎಡ ಮತ್ತು ಬಲ ದಂಡೆ ನಾಲೆಗಳ ಕೊನೆಯ ಭಾಗದ ರೈತರಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ. ಜಲಾಶಯದ ನೀರು ಪೋಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಹೆಚ್ಚಿನ ಗಮನ ಹರಿಸಿ ನೀರು ಪೋಲಾಗದಂತೆ ಎಚ್ಚರ ವಹಿಸಬೇಕಾಗಿದೆ. 
ಕಡಿಮೆ ಅವಧಿಯ ಬೆಳೆ ಬೆಳೆಯಲು ಸೂಕ್ತ ಸಮಯ: 
ಪ್ರಸ್ತುತ ತಾಲೂಕಿನಲ್ಲಿ ಮೆಕ್ಕೆ ಜೋಳ ಭಿತ್ತನೆ ಕಾರ್ಯ ಜೂನ್ ಅಂತ್ಯಕ್ಕೆ ಪೂರ್ಣಗೊಂಡಿದ್ದು, ಗರಿಷ್ಠ ೩-೪ ದಿನಗಳ ವರೆಗೆ ಮಾತ್ರ ಭಿತ್ತನೆ ಮಾಡಬಹುದಾಗಿದೆ. ಮೆಕ್ಕೆ ಜೋಳ ಬೆಳೆಗೆ ಇದೀಗ ಸೂಕ್ತ ವಾತಾವರಣವಿದ್ದು, ಮಳೆ ಬಿಟ್ಟು ಬಿಟ್ಟು ಬರುತ್ತಿರುವ ಕಾರಣ ಯಾವುದೇ ಸಮಸ್ಯೆ ಇಲ್ಲ ಎಂದು ಕೃಷಿ ಸಹಾಯಕ ನಿರ್ದೇಶಕ ಶಶಿಧರ್ ತಿಳಿಸಿದ್ದಾರೆ. 
ಭತ್ತದ ಬೆಳೆ ನಾಟಿ ಕಾರ್ಯಕ್ಕೆ ಇನ್ನೂ ಸಮಯವಿದ್ದು, ಜಲಾಶಯದಲ್ಲಿ ನೀರು ಕಳೆದ ಬಾರಿಗಿಂತ ಹೆಚ್ಚು ಸಂಗ್ರಹವಿದ್ದರೂ ಕಾಡಾ ಸಮಿತಿ ಕೈಗೊಳ್ಳುವ ನಿರ್ಧಾರದ ಮೇಲೆ ರೈತರು ಬೆಳೆ ಬೆಳೆಯಬೇಕಾಗಿದೆ. ಒಂದು ವೇಳೆ ಮುಂದಿನ ದಿನಗಳಲ್ಲಿ ಮಳೆ ಕೊರತೆ ಕಂಡು ಬಂದಲ್ಲಿ ಇದಕ್ಕೆ ಅನುಗುಣವಾಗಿ ರೈತರು ಭತ್ತದ ಬೆಳೆ ಬೆಳೆಯಲು ಸೂಚಿಸಲಾಗುವುದು. ಕಡಿಮೆ ಅವಧಿ ೧೧೦ದಿನಗಳ ಬೆಳೆಗೆ ಸಂಬಂಧಿಸಿದ ಭತ್ತದ ಬೀಜ ೧೦೦೧ ಮತ್ತು ೧೦೧೦ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಇಲಾಖೆಯಲ್ಲಿ ಭತ್ತ, ರಾಗಿ ಮತ್ತು ತೊಗರಿ ಬೀಜ ದಾಸ್ತಾನು ಇದ್ದು, ರೈತರಿಗೆ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಉಳಿದಂತೆ ಗೊಬ್ಬರ ಸಹ ಸಾಕಷ್ಟು ಪ್ರಮಾಣದಲ್ಲಿದ್ದು, ಯಾವುದೇ ಸಮಸ್ಯೆ ಇಲ್ಲ ಎಂದರು. 

Friday, July 3, 2020

ವಿಐಎಸ್‌ಎಲ್ ಆಸ್ಪತ್ರೆ ಸದ್ಬಳಕೆಗೆ ಮುಂದಾದ ಜಿಲ್ಲಾಡಳಿತ

ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ನೇತೃತ್ವದ ತಂಡ ಪರಿಶೀಲನೆ 

 ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಸೇರಿದ ವಿಐಎಸ್‌ಎಲ್ ಆಸ್ಪತ್ರೆ ಸದ್ಬಳಕೆ ಮಾಡಿಕೊಳ್ಳಲು ಇದೀಗ ಜಿಲ್ಲಾಡಳಿತ ಮುಂದಾಗಿದ್ದು, ಈ ಹಿನ್ನಲೆಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ನೇತೃತ್ವದ ತಂಡ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. 
ಭದ್ರಾವತಿ, ಜು. ೩: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಸೇರಿದ ವಿಐಎಸ್‌ಎಲ್ ಆಸ್ಪತ್ರೆ ಸದ್ಬಳಕೆ ಮಾಡಿಕೊಳ್ಳಲು ಇದೀಗ ಜಿಲ್ಲಾಡಳಿತ ಮುಂದಾಗಿದೆ. 
ಸುಮಾರು ೬೦ ವರ್ಷಗಳಿಗೂ ಹಳೇಯದಾದ ಬೃಹತ್ ಆಸ್ಪತ್ರೆ ಇದಾಗಿದ್ದು, ಈ ಹಿಂದೆ ದೊಡ್ಡಾಸ್ಪತ್ರೆ ಎಂದೇ ಪ್ರಸಿದ್ದಿ ಹೊಂದಿತ್ತು. ವಿಶಾಲವಾದ ಸ್ಥಳಾವಕಾಶ, ಸುಸಜ್ಜಿತ ಕಟ್ಟಡ ಹೊಂದಿರುವ ಆಸ್ಪತ್ರೆ ವಿಐಎಸ್‌ಎಲ್ ಮತ್ತು ಎಂಪಿಎಂ ೨ ಕಾರ್ಖಾನೆಗಳ ಸಾವಿರಾರು ಕಾರ್ಮಿಕರಿಗೆ ಹಾಗೂ ಕುಟುಂಬ ವರ್ಗದವರ ಆರೋಗ್ಯ ಸೇವೆ ಒದಗಿಸುವಲ್ಲಿ ಯಶಸ್ವಿಯಾಗಿತ್ತು.  

      ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳು ಕಳೆದ ಸುಮಾರು ೨ ದಶಕಗಳಿಂದ ಅವನತಿ ದಾರಿ ಹಿಡಿದಿರುವ ಕಾರಣ ಕಾರ್ಮಿಕ ಕುಟುಂಬಗಳು ಬೇರೆಡೆಗೆ ವಲಸೆ ಹೋಗಿದ್ದು, ಈ ಹಿನ್ನಲೆಯಲ್ಲಿ ಆಸ್ಪತ್ರೆಯಲ್ಲಿ  ಆರೋಗ್ಯ ಸೇವೆಗಳು ಕ್ಷೀಣಗೊಂಡಿವೆ. ಪ್ರಸ್ತುತ ಕೊರೋನಾ ವೈರಸ್ ಸೋಂಕು ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದ್ದು, ಸೋಂಕಿತರಿಗೆ ಚಿಕಿತ್ಸೆ ನೀಡುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಜಿಲ್ಲಾ ಮಟ್ಟದಲ್ಲಿ ಈಗಾಗಲೇ ಮೆಗ್ಗಾನ್ ಆಸ್ಪತ್ರೆಯಲ್ಲಿ ಪತ್ಯೇಕವಾಗಿ ಕೋವಿಡ್-೧೯ ಆಸ್ಪತ್ರೆ ತೆರೆಯಲಾಗಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಇದೀಗ ಜಿಲ್ಲಾಡಳಿತ ತಾಲೂಕು ಮಟ್ಟದಲ್ಲಿಯೇ ಚಿಕಿತ್ಸೆಗೆ ಆಸ್ಪತ್ರೆಗಳನ್ನು ಗುರುತಿಸುವ ಕಾರ್ಯ ಕೈಗೊಂಡಿದೆ. ಈ ಹಿನ್ನಲೆಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ನೇತೃತ್ವದ ತಂಡ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈಗಾಗಲೇ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಪೂರ್ವ ಸಿದ್ದತೆಗಳನ್ನು ಕೈಗೊಳಲಾಗಿದೆ. 
ಜಿಲ್ಲಾ ಆರೋಗ್ಯಾಧಿಕಾರಿಗಳು, ತಹಸೀಲ್ದಾರ್ ಶಿವಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ಕಂದಾಯಾಧಿಕಾರಿ ಪ್ರಶಾಂತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಎಲ್ಲರ ಸಹಕಾರದಿಂದ ಸೇವಾ ಕಾರ್ಯ ಯಶಸ್ವಿ : ಎನ್.ಎಸ್ ಶ್ರೀಧರ್

ಭದ್ರಾವತಿ ರೋಟರಿ ಕ್ಲಬ್ ನೂತನ ಅಧ್ಯಕ್ಷರಾಗಿ ಶುಕ್ರವಾರ ಬಿ.ಎಂ ಶಾಂತಕುಮಾರ್ ಅಧಿಕಾರ ಸ್ವೀಕರಿಸಿದರು. 
ಭದ್ರಾವತಿ, ಜು. ೩: ಎಲ್ಲರೂ ಸಹಕಾರ ನೀಡಿದಾಗ ಮಾತ್ರ ಸೇವಾ ಕಾರ್ಯಗಳು ಯಶಸ್ವಿಗೊಳ್ಳುತ್ತವೆ ಎಂದು ಸಹಾಯಕ ಜಿಲ್ಲಾ ಗೌರ‍್ನರ್ ಎನ್.ಎಸ್ ಶ್ರೀಧರ್ ತಿಳಿಸಿದರು. 
ಅವರು ಶುಕ್ರವಾರ ನಗರದ ರೋಟರಿ ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಸ್ವೀಕಾರ ಸಮಾರಂಭದ ನೇತೃತ್ವ ವಹಿಸಿ ಮಾತನಾಡಿದರು. 
ಯಾವುದೇ ಕಾರ್ಯ ಪೂರ್ಣಗೊಳ್ಳಬೇಕಾದರೆ ಪ್ರತಿಯೊಬ್ಬರ ಸಹಕಾರ ಅತಿ ಅವಶ್ಯಕ ಎಂಬುದನ್ನು ಮುಂಚೂಣಿ ನಾಯಕರು ಅರಿತುಕೊಳ್ಳಬೇಕು. ಸ್ವಯಂ ಪ್ರೇರಣೆಯಿಂದ ಸೇವೆಗೆ ಮುಂದಾಗಬೇಕೆಂದರು. 
ನಿಕಟ ಪೂರ್ವ ಅಧ್ಯಕ್ಷ ಕೆ.ಎಚ್ ತೀರ್ಥಯ್ಯ ಪ್ರಸಕ್ತ ಸಾಲಿನ ನೂತನ ಅಧ್ಯಕ್ಷ ಬಿ.ಎಂ ಶಾಂತಕುಮಾರ್ ಅವರಿಗೆ ಅಧಿಕಾರ ಹಸ್ತಾಂತರಿಸಿ ತಮ್ಮ ಅಧಿಕಾರದ ಅವಧಿಯಲ್ಲಿನ ಸೇವಾ ಕಾರ್ಯಗಳನ್ನು ಸ್ಮರಿಸಿ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. 
ನಿಕಟ ಪೂರ್ವ ಕಾರ್ಯದರ್ಶಿ ಅಡವೀಶಯ್ಯ ತಮ್ಮ ಅವಧಿಯ ಕಾರ್ಯ ಚಟುವಟಿಕೆಗಳ ವರದಿ ಮಂಡಿಸಿದರು. ಝೋನಲ್ ಟ್ರೈನರ್ ರವೀಂದ್ರನಾಥ್ ಐತಾಳ್, ಝೋನಲ್ ಲೆಫ್ಟಿನೆಂಟ್ ಡಾ. ಕೆ ನಾಗರಾಜ್ ಮಾತನಾಡಿದರು. 
ನೂತನ ಕಾರ್ಯದರ್ಶಿ ಎಂ.ಎನ್ ಗಿರೀಶ್, ಆನ್ಸ್ ಕ್ಲಬ್ ಅಧ್ಯಕ್ಷೆ ಕುಸುಮ ತೀರ್ಥಯ್ಯ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.  ನಗರದ ಸಂಚಾರಿ ಪೊಲೀಸ್ ಠಾಣಾಧಿಕಾರಿ ಕವಿತಾ ಅವರಿಗೆ ಗೌರವ ಸದಸ್ಯತ್ವದೊಂದಿಗೆ ಅಭಿನಂದಿಸಲಾಯಿತು. 
ಕಾರ್ಯದರ್ಶಿ ಬಿ. ಮಂಜುನಾಥ್, ಖಜಾಂಚಿ ಅಮಿತ್ ಕುಮಾರ್ ಜೈನ್, ವಿವಿಧ ವಿಭಾಗಗಳ ನಿರ್ದೇಶಕರಾದ ಕೂಡ್ಲಿಗೆರೆ ಎಸ್ ಹಾಲೇಶ್, ಪ್ರಭಾಕರ ಬೀರಯ್ಯ, ಧರ್ಮೇಂದ್ರ, ವಿವಿಧ ವಿಭಾಗಗಳ ಛೇರ‍್ಮನ್‌ಗಳಾದ ಆರ್.ಸಿ ಬೆಂಗಳೂರಿ, ಟಿ.ಎಸ್ ದುಷ್ಯಂತ್‌ರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ರಾಘವೇಂದ್ರ ಉಪಧ್ಯಾಯ ಕಾರ್ಯಕ್ರಮ ನಿರೂಪಸಿದರು.   

ಉಕ್ಕಿನ ನಗರದಲ್ಲಿ ಒಟ್ಟು ೨೩ ಸೋಂಕಿತರು, ಒಂದೇ ದಿನ ೪ ಪ್ರಕರಣ ಪತ್ತೆ

ತಾಲೂಕು ಕಛೇರಿ, ಶಾಸಕರ ಗೃಹ ಕಛೇರಿಗೂ ಸ್ಯಾನಿಟೈಸರ್

ಭದ್ರಾವತಿ ನಗರಸಭೆ ವ್ಯಾಪ್ತಿಯ ಘೋಷಿತ ಕೊಳಚೆ ಪ್ರದೇಶ ಸುರಗಿತೋಪಿನಲ್ಲಿ ಗುರುವಾರ ಯುವಕನೊಬ್ಬ ಸೋಂಕಿಗೆ ಒಳಗಾಗಿರುವುದು ಪತ್ತೆಯಾಗಿದ್ದು, ಈ ಹಿನ್ನಲೆಯಲ್ಲಿ ೪ ರಸ್ತೆಗಳನ್ನು ಸೀಲ್‌ಡೌನ್ ಮಾಡಲಾಗಿದೆ.
ಭದ್ರಾವತಿ, ಜು. ೩: ತಾಲೂಕಿನಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಆತಂಕಕ್ಕೆ ಒಳಗಾಗುವಂತಾಗಿದೆ. ಇದುವರೆಗೂ ಒಟ್ಟು ೨೩ ಸೋಂಕಿತ ಪ್ರಕರಣಗಳು ದಾಖಲಾಗಿದ್ದು, ಶುಕ್ರವಾರ ಒಂದೇ ದಿನ ೪ ಪ್ರಕರಣಗಳು ಪತ್ತೆಯಾಗಿವೆ. 
ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ, ಆರೋಗ್ಯ ಹಾಗೂ ಪೊಲೀಸ್ ಇಲಾಖೆಗಳು ರಾಜ್ಯದಲ್ಲಿ ಕೊರೋನಾ ವೈರಸ್ ಪ್ರಕರಣಗಳು ಕಾಣಿಸಿಕೊಂಡ ಆರಂಭದಿಂದಲೂ ನಿರಂತರವಾಗಿ ಕಾರ್ಯಾಚರಣೆ ಕೈಗೊಂಡಿದ್ದರೂ ಸಹ ಇದೀಗ ಸೋಂಕಿನ ಪ್ರಕರಣ ೨೩ಕ್ಕೆ ತಲುಪಿದೆ. ೩-೪ ದಿನಗಳ ಹಿಂದೆ ಒಂದೇ ದಿನ ೮ ಸೋಂಕಿನ ಪ್ರಕರಣ ದಾಖಲಾಗಿದ್ದವು. 
ಶುಕ್ರವಾರ ಪುನಃ ೪ ಪ್ರಕರಣ ದಾಖಲಾಗಿವೆ. ಹೊಳೆಹೊನ್ನೂರಿನಲ್ಲಿ ೧೯ ವರ್ಷದ ಯುವಕನಿಗೆ, ವಿಶ್ವೇಶ್ವರಯ್ಯ ನಗರದಲ್ಲಿ ಬೆಂಗಳೂರಿನಿಂದ ಬಂದಿರುವ ೨೨ ಹಾಗೂ ೨೦ ವರ್ಷದ ಇಬ್ಬರು ಸಹೋದರಿಯರಿಗೆ ಮತ್ತು ಕಡದಕಟ್ಟೆಯಲ್ಲಿ ಬೆಂಗಳೂರಿನಿಂದ ಬಂದಿರುವ ೨೮ ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. ನಗರಸಭೆ ಆಡಳಿತ ಸೋಂಕು ಪತ್ತೆಯಾಗಿರುವ ಸ್ಥಳದ ೧೦೦ ಹಾಗೂ ೨೦೦ ಮೀಟರ್ ವಿಸ್ತೀರ್ಣದಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಸ್ಯಾನಿಟೈಸರ್ ಮಾಡಿಸಿ ಕಂಟೈನ್‌ಮೆಂಟ್ ವಲಯವನ್ನಾಗಿಸಿ ಸೀಲ್ ಡೌನ್‌ಗೆ ಮುಂದಾಗಿದೆ. 
ಸುರಗಿತೋಪು ಸೀಲ್‌ಡೌನ್: 
ನಗರಸಭೆ ವ್ಯಾಪ್ತಿಯ ಘೋಷಿತ ಕೊಳಚೆ ಪ್ರದೇಶ ಸುರಗಿತೋಪಿನಲ್ಲಿ ಗುರುವಾರ ಯುವಕನೊಬ್ಬ ಸೋಂಕಿಗೆ ಒಳಗಾಗಿರುವುದು ಪತ್ತೆಯಾಗಿದ್ದು, ಈ ಹಿನ್ನಲೆಯಲ್ಲಿ ೪ ರಸ್ತೆಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಕೊಳಚೆ ಪ್ರದೇಶವಾಗಿರುವ ಹಿನ್ನಲೆಯಲ್ಲಿ ನಗರಸಭೆ ಆಡಳಿತ ಹೆಚ್ಚಿನ ಮುಂಜಾಗ್ರತೆ ವಹಿಸಲಾಗಿದೆ. 
ತಾಲೂಕು ಕಛೇರಿ, ಶಾಸಕರ ಗೃಹ ಕಛೇರಿಗೂ ಸ್ಯಾನಿಟೈಸರ್: 
ತಾಲೂಕಿನ ಕೂಡ್ಲಿಗೆರೆ ನಾಡಕಛೇರಿ ಅಧಿಕಾರಿಯೊಬ್ಬರ ಪತ್ನಿಗೆ ಸೋಂಕು ತಗುಲಿದೆ ಎನ್ನುವ ಮಾಹಿತಿ ಗುರುವಾರ ಎಲ್ಲೆಡೆ ಹರದಾಡುತ್ತಿತ್ತು. ಈ ನಡುವೆ ನಾಡಕಛೇರಿ ಅಧಿಕಾರಿ ನಗರದ ತಾಲೂಕು ಕಛೇರಿಗೂ ಭೇಟಿ ನೀಡಿರುವ ಮಾಹಿತಿ ಹಿನ್ನಲೆಯಲ್ಲಿ ನಗರಸಭೆವತಿಯಿಂದ ತಾಲೂಕು ಕಛೇರಿಗೆ ಸ್ಯಾನಿಟೈಸರ್ ಮಾಡಿಸಲಾಗಿದೆ. 
ಕಳೆದ ೪-೫ ದಿನಗಳ ಹಿಂದೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮನವಿ ಸಲ್ಲಿಸಲು ಆಶಾ ಕಾರ್ಯಕರ್ತೆಯರು ಹೊಸಮನೆ ಎನ್‌ಎಂಸಿ ರಸ್ತೆಯಲ್ಲಿರುವ ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಗೃಹ ಕಛೇರಿಗೆ ಭೇಟಿ ನೀಡಿದ್ದರು. ಈ ಪೈಕಿ ಆಶಾ ಕಾರ್ಯಕರ್ತೆಯೊಬ್ಬರಿಗೆ ಸೋಂಕು ಹರಡಿರುವುದು ಪತ್ತೆಯಾಗಿದ್ದು, ಈ ಹಿನ್ನಲೆಯಲ್ಲಿ ಶಾಸಕರ ಗೃಹ ಕಛೇರಿಗೂ ನಗರಸಭೆ ವತಿಯಿಂದ ಸ್ಯಾನಿಟೈಸರ್ ಮಾಡಿಸಲಾಗಿದೆ. 

Thursday, July 2, 2020

ಎಂಪಿಎಂ ಆಡಳಿತ ಮಂಡಳಿಯಿಂದ ತಾರತಮ್ಯ ದೂರು

ಸೇವಾ ಭದ್ರತೆ ನೀಡಿ, ಪುನಃ ಕಾರ್ಖಾನೆ ಆರಂಭಿಸಿ ಸಚಿವರಿಗೆ ಮನವಿ 

ಭದ್ರಾವತಿ ಮೈಸೂರು ಕಾಗದ ಕಾರ್ಖಾನೆಗೆ ಭೇಟಿ ನೀಡಿದ  ಮಧ್ಯಮ ಹಾಗೂ ಬೃಹತ್ ಕೈಗಾರಿಕಾ ಖಾತೆ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ವಿವಿಧ ಕಾರ್ಮಿಕ ಸಂಘಟನೆಗಳಿಂದ, ಪಕ್ಷದ ಮುಖಂಡರಿಂದ ಮನವಿ ಹಾಗೂ ದೂರುಗಳನ್ನು ಸಲ್ಲಿಸಲಾಯಿತು.
ಭದ್ರಾವತಿ, ಜು. ೨: ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆಯಲ್ಲಿ ಸೇವೆ ಸಲ್ಲಿಸಿ ಸರ್ಕಾರ ಜಾರಿಗೊಳಿಸಿದ ವಿಎಸ್‌ಎಸ್ ಯೋಜನೆಯಡಿ ಸ್ವಯಂ ನಿವೃತ್ತಿ ಹೊಂದಿರುವ ಗುತ್ತಿಗೆ ಕಾರ್ಮಿಕರಿಗೆ ಕಾರ್ಖಾನೆ ಆಡಳಿತ ಮಂಡಳಿ ತಾರತಮ್ಯ ವೆಸಗಿದೆ ಎಂದು ಆರೋಪಿಸಿ ಮೈಸೂರು ಕಾಗದ ಕಾರ್ಖಾನೆ ಮಜ್ದೂರು ಸಂಘ ಮಧ್ಯಮ ಹಾಗೂ ಬೃಹತ್ ಕೈಗಾರಿಕಾ ಖಾತೆ ಸಚಿವ ಜಗದೀಶ್‌ಶೆಟ್ಟರ್‌ಗೆ ದೂರು ಸಲ್ಲಿಸಿದೆ.
ಬುಧವಾರ ಕಾರ್ಖಾನೆಗೆ ಭೇಟಿ ನೀಡಿದ ಸಚಿವರಿಗೆ ಸಲ್ಲಿಸಿರುವ ದೂರಿನಲ್ಲಿ ವಿಎಸ್‌ಎಸ್ ಯೋಜನೆ ಜಾರಿಗೊಳಿಸಿ ಸರ್ಕಾರ ತೀರ್ಮಾನಿಸಿರುವ ಆದೇಶಕ್ಕೆ ಅನುಗುಣವಾಗಿ ಆಡಳಿತ ಮಂಡಳಿ ಸ್ಪಂದಿಸಿಲ್ಲ. ಕಾಯಂ ಕಾರ್ಮಿಕರು ಹಾಗೂ ಗುತ್ತಿಗೆ ಕಾರ್ಮಿಕರ ನಡುವೆ ತಾರತಮ್ಯ ವೆಸಗಿದೆ. ಸರ್ಕಾರ ನ.೩೦, ೨೦೧೭ರಂತೆ ೧೦೩೪ ಗುತ್ತಿಗೆ ಕಾರ್ಮಿಕರನ್ನು ವಿಎಸ್‌ಎಸ್ ಯೋಜನೆಗೆ ಒಳಪಡಿಸುವಂತೆ ಸೂಚಿಸಿದೆ ಆದರೆ ಆಡಳಿತ ಮಂಡಳಿ ಯಾರನ್ನು ಸಹ ಪರಿಗಣಿಸಿರುವುದಿಲ್ಲ. ೧೦೩೪ ಮಂದಿಯಲ್ಲಿ ಮೃತ ಕಾರ್ಮಿಕರ ಕುಟುಂಬಕ್ಕೆ ಮೃತ ನಿಧಿ ಅಥವಾ ವಿಎಸ್‌ಎಸ್ ಸೌಲಭ್ಯ ಯಾವುದನ್ನು ಸಹ ಕೊಟ್ಟಿರುವುದಿಲ್ಲ.
ಸರ್ಕಾರ ನ.೩೦, ೨೦೧೭ರಂತೆ ಅಂತಿಮ ಸೇವಾ ಅವಧಿ ನಿಗದಿಗೊಳಿಸಿದೆ. ಆದರೆ ಆಡಳಿತ ಮಂಡಳಿ ೨೦೧೫/೨೦೧೬/೨೦೧೭ರ ಸೇವಾ ಅವಧಿ ಮೊಟಕುಗೊಳಿಸಿದೆ. ೧೬೩/೬೬ರಂತೆ ಕನಿಷ್ಠ ವೇತನದ ತುಟ್ಟಿಭತ್ಯೆ ನೀಡುವ ಬದಲು ಕನಿಷ್ಠ ವೇತನಕ್ಕಿಂತ ಕಡಿಮೆ ವೇತನ ನೀಡಲಾಗಿದೆ. ೪೫ ದಿನಗಳ ವೇತನ ಬದಲಾಗಿ ಕೆಲವು ಕಾರ್ಮಿಕರಿಗೆ ೨೨ ೧/೨ ದಿನ ವೇತನ ನೀಡಲಾಗಿದೆ. ೨೦೧೧ ರಿಂದ ೨೦೧೫ರ ಉತ್ಪಾದನೆ ಅವಧಿಯ ಹೆಚ್ಚುವರಿ ಕೆಲಸದ ವ್ಯತ್ಯಾಸ ಹಣ ಕೊಟ್ಟಿರುವುದಿಲ್ಲ. ನ.೩೦, ೨೦೧೭ರಂತೆ ಸೇವಾ ಅವಧಿ ಪರಿಗಣಿಸಿ ಗ್ರಾಚ್ಯುಟಿ ನೀಡುವಂತೆ ಸರ್ಕಾರ ಸೂಚಿಸಿದೆ. ಆದರೆ ಆಡಳಿತ ೨೦೧೫, ೨೦೧೬ ಮತ್ತು ೨೦೧೭ರಂತೆ ಮೊಟಕುಗೊಳಿಸಿದೆ ಎಂದು ಆರೋಪಿಸಲಾಗಿದೆ.
  ಸೇವಾ ಭದ್ರತೆ ನೀಡಿ :
  ಕಾರ್ಖಾನೆಯಲ್ಲಿ ಕನಿಷ್ಠ ೧೦ ವರ್ಷ ಸೇವೆ ಸಲ್ಲಿಸದ ಮತ್ತು ೧೦ ವರ್ಷಕ್ಕಿಂತ ಹೆಚ್ಚಿನ ಸೇವಾವಧಿ ಹೊಂದಿರುವ ಉದ್ಯೋಗಿಗಳಿಗೆ ಸೇವಾ ಭದ್ರತೆ ಅಥವಾ ಎರವಲು ಸೇವೆಗೆ ಅವಕಾಶ ಕಲ್ಪಿಸಿಕೊಡುವಂತೆ ದಿ ಮೈಸೂರು ಪೇಪರ್ ಮಿಲ್ಸ್ ಎಂಪ್ಲಾಯಿಸ್ ಅಸೋಸಿಯೇಷನ್ ಸಚಿವ ಜಗದೀಶ್‌ಶೆಟ್ಟರ್‌ಗೆ ಒತ್ತಾಯಿಸಿದೆ.
ಪ್ರಸ್ತುತ ಕಾರ್ಖಾನೆಯಲ್ಲಿರುವ ೨೨೦ ಉದ್ಯೋಗಿಗಳ ಪೈಕಿ ಸುಮಾರು ೧೦ ರಿಂದ ೨೦ ವರ್ಷಗಳ ಸೇವಾವಧಿ ಬಾಕಿ ಇರುವ ಎಸ್.ಸಿ/ಎಸ್.ಟಿ ಬ್ಯಾಕ್‌ಲಾಗ್ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅತ್ಯಂತ ಕನಿಷ್ಠ ವೇತನವನ್ನು ಪಡೆಯುತ್ತಿದ್ದಾರೆ. ವಿಆರ್‌ಎಸ್ ಯೋಜನೆಯ ಸೌಲಭ್ಯದಿಂದಲೂ ವಂಚಿತರಾಗಿದ್ದು, ಅಲ್ಲದೆ ಕ್ಲೋಸರ್ ಯೋಜನೆಗೆ ಒಳಪಟ್ಟಲ್ಲಿ ಅತ್ಯಂತ ಕಡಿಮೆ ಅಂದರೆ ಸುಮಾರು ೬೦ ರಿಂದ ೭೦ ಸಾವಿರಗಳು ಮಾತ್ರ ಸಿಗಲಿದೆ.
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಸ್ತುತ ೧೧೭ ಮಂದಿಯನ್ನು ವಿವಿಧ ನಿಗಮ/ಮಂಡಳಿಗಳಿಗೆ ಎರವಲು ಸೇವೆ ಮೇಲೆ ಕಳುಹಿಸಿದೆ. ಉಳಿದ ೧೦೩ ಮಂದಿಯನ್ನು ನಿಯೋಜನೆಗೆ ಕಳುಹಿಸಲು ಪ್ರಯತ್ನಿಸುತ್ತಿದೆ. ಈ ಹಿನ್ನಲೆಯಲ್ಲಿ ಎಲ್ಲಾ ೨೨೦ ಉದ್ಯೋಗಿಗಳನ್ನು ವಿವಿಧ ನಿಗಮ/ಮಂಡಳಿಗಳಲ್ಲಿ ನಿಯೋಜಿಸಿ ಅವರ ಸೇವೆ ಪೂರ್ಣಗೊಳ್ಳುವವರೆಗೆ ಸೇವಾ ಭದ್ರತೆ ನೀಡಬೇಕೆಂದು ಸಚಿವರಿಗೆ ಮನವಿ ಮಾಡಿದೆ.
ಪುನಃ ಕಾರ್ಖಾನೆ ಆರಂಭಿಸಿ:
೨೦೧೫ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಸಿರು ಪೀಠ ನ್ಯಾಯಾಲಯದ ಆದೇಶವನ್ನು ನೆಪವಾಗಿಟ್ಟುಕೊಂಡು ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್.ಎಂ ವಿಶ್ವೇಶ್ವರಾಯನವರ ಕನಸಿನ ಕೂಸಾದ ಎಂಪಿಎಂ ಕಾರ್ಖಾನೆಯನ್ನು ಸ್ಥಗಿತಗೊಳಿಸಿ ನಗರದ ಆರ್ಥಿಕ ಸ್ಥಿತಿಯನ್ನು ಕುಗ್ಗಿಸಿರುವುದು ವಿಪರ್ಯಾಸದ ಸಂಗತಿಯಾಗಿದ್ದು, ತಕ್ಷಣ ಪುನಃ ಕಾರ್ಖಾನೆ ಆರಂಭಿಸುವಂತೆ ಆಮ್ ಆದ್ಮಿ ಪಾರ್ಟಿ ಸಚಿವರಿಗೆ ಆಗ್ರಹಿಸಿದೆ.
ಪುನಃ ಕಾರ್ಖಾನೆಯನ್ನು ಆರಂಭಿಸುವ ಜೊತೆಗೆ ನಗರದಲ್ಲಿ ಯುವ ಸಮುದಾಯಕ್ಕೆ ಉದ್ಯೋಗ ಕಲ್ಪಿಸಿಕೊಡಬೇಕು. ನಗರದ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಬೇಕೆಂದು ಒತ್ತಾಯಿಸಿದೆ.

ವೈದ್ಯರ ಸೇವೆ ಎಂದಿಗೂ ಅವಿಸ್ಮರಣೀಯ : ಎನ್. ಕೃಷ್ಣಪ್ಪ

ಭದ್ರಾವತಿ ಹೊಸಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ವೈದ್ಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. 
ಭದ್ರಾವತಿ, ಜು. ೨: ಜಗತ್ತಿನಾದ್ಯಂತ ಕೊರೋನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಇಂತಹ ಸಂದರ್ಭದಲ್ಲಿ ವೈದ್ಯರ ಸೇವೆ ಅವಿಸ್ಮರಣೀಯ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ಅಧ್ಯಕ್ಷ ಎನ್. ಕೃಷ್ಣಪ್ಪ ಹೇಳಿದರು. 
ಅವರು ಹೊಸಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು. 
ಕೊರೋನಾ ವೈರಸ್ ನಿರ್ಮೂಲನೆಯಲ್ಲಿ ವೈದ್ಯರ ಪಾತ್ರ ಪ್ರಮುಖವಾಗಿದೆ. ತಾಲೂಕಿನಲ್ಲಿ ವೈದ್ಯರು ಯಾವುದೇ ಭೀತಿ ಇಲ್ಲದೆ ಪ್ರಾಮಾಣಿಕ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರ ಸೇವೆ ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ವಿದ್ಯಾಸಂಸ್ಥೆ ವತಿಯಿಂದ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳನ್ನು ಸನ್ಮಾನಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು. 
ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ ಮಾತನಾಡಿ, ಜನರು ತಮ್ಮ ಜವಾಬ್ದಾರಿಗಳನ್ನು ಅರಿತು ನಡೆದುಕೊಂಡಲ್ಲಿ ಮಾತ್ರ ಕೊರೋನಾ ವೈರಸ್ ನಿಮೂರ್ಲನೆ ಸಾಧ್ಯ. ಕೊರೋನಾ ವೈರಸ್‌ಗೆ ಯಾರು ಸಹ ಭೀತಿಪಡುವ ಅಗತ್ಯವಿಲ್ಲ. ಎಲ್ಲರೂ ಜಾಗ್ರತೆಯಿಂದ ನಡೆದುಕೊಳ್ಳಬೇಕೆಂದರು. 
ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ಪ್ರಭಾರ ಹಿರಿಯ ಆರೋಗ್ಯ ನಿರೀಕ್ಷಕ ನೀಲೇಶ್‌ರಾಜ್, ಕಿರಿಯ ಆರೋಗ್ಯ ಸಹಾಯಕ ಎಚ್.ಎಂ ನಾಗರಾಜಪ್ಪ, ಶ್ರೀಕಾಂತ್, ಎಸ್.ಜೆ. ಮಹೇಶ್ವರ, ಪಿ. ಕೃಷ್ಣ ಸೇರಿದಂತೆ ಇನ್ನಿತರರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. 
ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಎಲ್ ರಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಎ.ಕೆ ಚಂದ್ರಪ್ಪ, ಉಪಾಧ್ಯಕ್ಷ ಅಶೋಕ್‌ರಾವ್, ಖಜಾಂಚಿ ಎಸ್.ಕೆ ಮೋಹನ್, ರಂಗನಾಥ ಪ್ರಸಾದ್, ಎಂ.ಡಿ ಮಲ್ಲಿಕಾರ್ಜುನ, ಎಂ.ಎಸ್ ಬಸವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.