Wednesday, July 8, 2020

ಜು.೯ರಂದು ವಿದ್ಯುತ್ ವ್ಯತ್ಯಯ

ಭದ್ರಾವತಿ, ಜು. ೮: ನಗರದ ಜೆಪಿಎಸ್ ಕಾಲೋನಿ ಮೆಸ್ಕಾಂ ೧೧೦/೩೩/೧೧ ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣೆ ಕಾರ್ಯ ಹಮ್ಮಿಕೊಂಡಿರುವುದರಿಂದ ಜು.೯ರಂದು ಮಧ್ಯಾಹ್ನ ೧೨ ಗಂಟೆಯಿಂದ ಸಂಜೆ ೪ ಗಂಟೆ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 
ನ್ಯೂಟೌನ್, ನ್ಯೂಕಾಲೋನಿ, ಬಿ.ಎಚ್ ರಸ್ತೆ, ಐಟಿಐ, ಆಕಾಶವಾಣಿ, ಕಾಗದನಗರ, ಸುರಗಿತೋಪು, ಆನೆಕೊಪ್ಪ, ಉಜ್ಜನಿಪುರ, ಬುಳ್ಳಾಪುರ, ಹುಡ್ಕೋ ಕಾಲೋನಿ, ಬೊಮ್ಮನಕಟ್ಟೆ, ಹೊಸಸಿದ್ದಾಪುರ, ಹಳೇ ಸಿದ್ದಾಪುರ, ಹೊಸೂರು ತಾಂಡ, ಹುಡ್ಕೋ ಕಾಲೋನಿ, ಜನ್ನಾಪುರ, ಅಪ್ಪರ್‌ಹುತ್ತಾ, ಲೋಯರ್ ಹುತ್ತಾ, ಜಿಂಕ್‌ಲೈನ್, ಸಿರಿಯೂರು, ತರೀಕೆರೆ ರಸ್ತೆ, ಸಾದತ್ ಕಾಲೋನಿ, ನೆಹರು ನಗರ, ಸುಣ್ಣದಹಳ್ಳಿ, ಬಸವನಗುಡಿ, ಶಿವನಿ ವೃತ್ತ, ಹಿರಿಯೂರು, ಹೊಳೆ ಗಂಗೂರು, ಕಾರೇಹಳ್ಳಿ, ಕಂಬದಾಳ್ ಹೊಸೂರು, ಹೊನ್ನಹಟ್ಟಿ ಹೊಸೂರು, ಹುಣಸೇಕಟ್ಟೆ, ಕಾಳನಕಟ್ಟೆ, ಹೊಳೆ ನೇರಳೆಕೆರೆ, ಅಂತರಗಂಗೆ, ದೊಣಬಘಟ್ಟ, ಬಾರಂದೂರು, ಕಲ್ಲಹಳ್ಳಿ, ಯರೇಹಳ್ಳಿ, ಮಾವಿನಕೆರೆ, ದೊಡ್ಡೇರಿ, ತಡಸ, ಬಿಳಿಕಿ, ಕೆಂಪೇಗೌಡನಗರ, ಬೊಮ್ಮನಹಳ್ಳಿ, ಕುಂಬಾರ್ ಗುಂಡಿ, ಹಳೇ ಬಾರಂದೂರು, ಹಳ್ಳಿಕೆರೆ, ಅಪ್ಪಾಜಿ ಬಡಾವಣೆ, ಉಕ್ಕುಂದ, ರತ್ನಾಪುರ, ಕೆಂಚೇನಹಳ್ಳಿ, ಗಂಗೂರು, ಬಿಸಿಲುಮನೆ, ದೇವನರಸೀಪುರ, ಶಿವಪುರ, ಅಡ್ಲಘಟ್ಟ, ಅಂಬುದಹಳ್ಳಿ, ಅರಳಿಕೊಪ್ಪ ಸೇರಿದಂತೆ ಇತ್ಯಾದಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು ಗ್ರಾಹಕರು ಸಹಕರಿಸುವಂತೆ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ. 

ಭದ್ರಾವತಿ : ೩ ಮಂದಿಗೆ ಕೊರೋನಾ ಸೋಂಕು

ಭದ್ರಾವತಿ, ಜು. ೮: ನಗರದಲ್ಲಿ ಪುನಃ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಬೆಂಗಳೂರಿನಿಂದ ಬಂದಿರುವ ಸುಮಾರು ೪೧ ವರ್ಷದ ವ್ಯಕ್ತಿ ಹಾಗೂ ಪ್ರಾಥಮಿಕ ನಿಗಾದಲ್ಲಿರಿಸಲಾಗಿದ್ದ ಇಬ್ಬರು ಮಹಿಳೆಯರಲ್ಲಿ ಬುಧವಾರ ಕೊರೋನಾ ಸೋಂಕು ಕಾಣಿಸಿಕೊಂಡಿದೆ. 
ವಿದ್ಯಾಮಂದಿರದ ೨ನೇ ತಿರುವಿನಲ್ಲಿ ವಾಸವಿರುವ ವ್ಯಕ್ತಿಯೊಬ್ಬರು ಬೆಂಗಳೂರಿನಿಂದ ಬಂದಿದ್ದು, ಸೋಂಕು ಕಾಣಿಸಿಕೊಂಡಿದೆ. ಇದು ಹೊಸ ಪ್ರಕರಣವಾಗಿದ್ದು, ಉಳಿದಂತೆ ಹಳೇನಗರದ ಗಾಂಧಿನಗರದ ಮೊದಲಿಯಾರ್ ಸಮುದಾಯ ಭವನ ಸಮೀಪ ಒಂದು ಕುಟುಂಬದ ೫ ಮಂದಿಯಲ್ಲಿ ಈ ಹಿಂದೆ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಕುಟುಂಬದ ೩ ಮಂದಿಯನ್ನು ಪ್ರಾಥಮಿಕ ನಿಗಾದಲ್ಲಿರಿಸಲಾಗಿತ್ತು. ಈ ಪೈಕಿ ೪೧ ವರ್ಷದ ತಾಯಿ ಹಾಗೂ ೧೮ ಮಗಳು ಸೋಂಕಿಗೆ ಒಳಗಾಗಿದ್ದಾರೆ. 
ವಿದ್ಯಾಮಂದಿರದಲ್ಲಿ ವ್ಯಕ್ತಿ ವಾಸವಿದ್ದ ಸ್ಥಳದ ೧೦೦ ಮೀ ಹಾಗೂ ೨೦೦ ಮೀಟರ್ ವ್ಯಾಪ್ತಿಯಲ್ಲಿ ನಗರಸಭೆ ಆಡಳಿತ ಕಂಟೈನ್ಮೆಂಟ್ ವಲಯವನ್ನಾಗಿಸಿದ್ದು, ಸೀಲ್‌ಡೌನ್‌ಗೊಳಿಸಲು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗಿದೆ. 
ಉಳಿದಂತೆ ನಗರಸಭೆ ವ್ಯಾಪ್ತಿಯಲ್ಲಿ ಪ್ರಸ್ತುತ ಒಟ್ಟು ೭ ಸೀಲ್‌ಡೌನ್ ಪ್ರದೇಶಗಳು ಜಾಲ್ತಿಯಲ್ಲಿದ್ದು, ಈಗಾಗಲೇ ಚನ್ನಗಿರಿ ರಸ್ತೆ, ಉಪ್ಪಾರ ಬೀದಿ ಹಾಗೂ ಗಾಂಧಿನಗರ ವ್ಯಾಪ್ತಿಯಲ್ಲಿ ಸೀಲ್‌ಡೌನ್ ತೆರವುಗೊಳಿಸಲಾಗಿದೆ. ಸೀಲ್‌ಡೌನ್ ಹೆಚ್ಚಾದಂತೆ ಸ್ಥಳೀಯರಲ್ಲಿ ಆತಂಕ ಸಹ ಹೆಚ್ಚಾಗುತ್ತಿದೆ.

ಕುಡಿಯಲು ಹಣ ನೀಡದ ವೃದ್ಧೆಯ ಕೊಲೆ

ಕುಡಿಯಲು ಹಣ ನೀಡದ ವೃದ್ಧೆಯೊಬ್ಬರನ್ನು ಕುಡುಗೋಲಿನಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಬುಧವಾರ ಬೆಳಿಗ್ಗೆ ಭದ್ರಾವತಿ ತಾಲೂಕಿನ ಹೊಸಮನೆ ಪೊಲೀಸ್ ಠಾಣೆ ವ್ಯಾಪ್ತಿಯ ತಾಷ್ಕೆಂಟ್ ನಗರದಲ್ಲಿ ನಡೆದಿರುವುದು. 
ಭದ್ರಾವತಿ, ಜು. ೮: ಕುಡಿಯಲು ಹಣ ನೀಡದ ವೃದ್ಧೆಯೊಬ್ಬರನ್ನು ಕುಡುಗೋಲಿನಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಬುಧವಾರ ಬೆಳಿಗ್ಗೆ ತಾಲೂಕಿನ ಹೊಸಮನೆ ಪೊಲೀಸ್ ಠಾಣೆ ವ್ಯಾಪ್ತಿಯ ತಾಷ್ಕೆಂಟ್ ನಗರದಲ್ಲಿ ನಡೆದಿದೆ. 
ಕಿಟ್ಟಮ್ಮ(೭೫) ಕೊಲೆಯಾದ ದುರ್ದೈವಿಯಾಗಿದ್ದು, ಇನ್ನೊಬ್ಬ ವೃದ್ಧೆ ಪಾಪಮ್ಮ(೭೨) ತೀವ್ರವಾಗಿ ಗಾಯಗೊಂಡು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. 
ವೃದ್ಧೆಯನ್ನು ಕುಡುಗೋಲಿನಿಂದ ಕೊಲೆ ಮಾಡಿದ ಅರುಣ್‌ಕುಮಾರ್‌ನನ್ನು ಗ್ರಾಮಸ್ಥರು ಹಿಡಿದು ಕೈಕಾಲು ಕಟ್ಟಿ ಪೊಲೀಸರಿಗೆ ಒಪ್ಪಿಸಿದರು. 
           ಮೃತ ವೃದ್ಧೆಯ ಮೊಮ್ಮಗ ಅರುಣ್‌ಕುಮಾರ್(೨೮) ಮದ್ಯವ್ಯಸನಿಯಾಗಿದ್ದು, ಅಲ್ಲದೆ ಗಾಂಜಾ ಸೇವನೆ ಸಹ ಮಾಡುತ್ತಿದ್ದನು. ಈತ ಬೆಳಿಗ್ಗೆ ೧೧ ಗಂಟೆ ಸಮಯದಲ್ಲಿ ಕುಡಿಯಲು ಅಜ್ಜಿ ಕಿಟ್ಟಮ್ಮ ಬಳಿ ಹಣ ನೀಡಲು ಪೀಡಿಸಿದ್ದು, ಹಣ ಕೊಡಲು ನಿರಾಕರಿಸಿದ ಕಾರಣ ಅಜ್ಜಿಯನ್ನು ಕುಡುಕೋಲಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಈ ಸಂದರ್ಭದಲ್ಲಿ ಅಜ್ಜಿಯನ್ನು ಬಿಡಿಸಲು ಬಂದ ಸಂಬಂಧಿಕರಾದ ವೃದ್ಧೆ ಪಾಪಮ್ಮ ಮೇಲೂ ಹಲ್ಲೆ ನಡೆಸಿದ್ದಾನೆ. 
ಗ್ರಾಮಸ್ಥರು ಈತನನ್ನು ಹಿಡಿದು ಕೈಕಾಲು ಕಟ್ಟಿ ಪೊಲೀಸರಿಗೆ ಒಪ್ಪಿಸಿದ್ದು, ಸ್ಥಳಕ್ಕೆ ಭೇಟಿ ನೀಡಿದ ಹೊಸಮನೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.