Tuesday, July 21, 2020

ಎರಡು ದಿನ ರೈತರಿಗೆ ಆನ್‌ಲೈನ್ ಮೂಲಕ ತರಬೇತಿ ಕಾರ್ಯಾಗಾರ

ಭದ್ರಾವತಿ, ಜು. ೨೧: ತಾಲೂಕಿನ ಹಳ್ಳಿಕೆರೆಯಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ಜು.೨೨ ಮತ್ತು ೨೪ರಂದು ಎರಡು ದಿನ ರೈತರಿಗೆ  ಆನ್‌ಲೈನ್ ಮೂಲಕ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. 
ಜು.೨೨ರ ಮಧ್ಯಾಹ್ನ ೩ ಗಂಟೆಯಿಂದ ಮಧ್ಯಾಹ್ನ ೪ವರೆಗೆ ಹವಾಮಾನ ಮತ್ತು ಕೃಷಿ ವಿಷಯ ಕುರಿತು ಶಿವಮೊಗ್ಗ ಕೃಷಿ ತೋಟಗಾರಿಕೆ ವಿಶ್ವ ವಿದ್ಯಾನಿಲಯದ ಗ್ರಾಮೀಣ್ ಕೃಷಿ ಮೌಸಮ್ ಪ್ರಾಜೆಕ್ಟ್ ತಾಂತ್ರಿಕ ಅಧಿಕಾರಿ ಡಾ. ಪ್ರದೀಪ್ ಗೋಪಕ್ಕಲಿ ಮಾಹಿತಿ ನೀಡಲಿದ್ದು, ಗೂಗಲ್ ಮೀಟ್ ಲಾಗಿನ್ ಐ.ಡಿ ಡಬ್ಲ್ಯೂಟಿಎಸ್-ಎಐಎಸ್‌ಕೆ-ಎಎಂಎನ್(Wts-aisk-amn), ಲಿಂಕ್ಎಚ್‌ಟಿಟಿಪಿಎಸ್://ಮೀಟ್.ಗೂಗಲ್. ಕಾಂ. ಡಬ್ಲ್ಯೂ/ಡಬ್ಲ್ಯೂಟಿಎಸ್-ಎಐಎಸ್‌ಕೆ-ಎಎಂಎನ್(https://meet.google.com/Wts-aisk-amn) ಸಂಪರ್ಕಿಸಬಹುದಾಗಿದೆ. 
೨೪ರಂದು ಮಧ್ಯಾಹ್ನ ೩.೩೦ ರಿಂದ ೫ ಗಂಟೆ ವರೆಗೆ ಭತ್ತದ ಬೆಳೆಯಲ್ಲಿ ತಾಂತ್ರೀಕರಣ ವಿಷಯ ಕುರಿತು ತಾಲೂಕು ಕೃಷಿ ಇಲಾಕೆ ಆತ್ಮ ಯೋಜನೆ ತಾಂತ್ರಿಕ ವ್ಯವಸ್ಥಾಪಕ ಬಿ. ರಾಕೇಶ್ ಮಾಹಿತಿ ನೀಡಲಿದ್ದು, ಲಾಗಿನ್  ಐ.ಡಿ ಕೆ.ಎಚ್.ಎಫ್-ಸಿಡಿವಿಎ-ಬಿಎಓ(khf-cdva-bao), ಲಿಂಕ್ ಎಚ್‌ಟಿಟಿಪಿಎಸ್://ಮೀಟ್.ಗೂಗಲ್.ಕಾಂ.ಡಬ್ಲ್ಯೂ/ಕೆ.ಎಚ್.ಎಫ್-ಸಿಡಿವಿಎ-ಬಿಎಓ(https://meet.google.com/khf-cdva-bao) ಸಂಪರ್ಕಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ. 


ಸ್ಮಶಾನ ಜಾಗಕ್ಕೆ ಸಂಬಂಧಿಸಿದಂತೆ ಹಾಲಿ-ಮಾಜಿ ಶಾಸಕರ ಬಣಗಳ ನಡುವೆ ಮಾತಿನ ಚಕಮಕಿ

ತಾವರಘಟ್ಟ ಗ್ರಾಮದಲ್ಲಿ ಬಿಗುವಿನ ವಾತಾವರಣ, 

ಪೊಲೀಸರಿಂದ  ಲಘು ಲಾಟಿ ಪ್ರಹಾರ 

ಭದ್ರಾವತಿ ತಾಲೂಕಿನ ತಾವರಘಟ್ಟ ಗ್ರಾಮ ಪಂಚಾಯಿತಿಗೆ ಸೇರಿದ ತಾವರಘಟ್ಟ ಸ್ಮಶಾನ ಜಾಗಕ್ಕೆ ಸಂಬಂಧಿಸಿದಂತೆ ಶಾಸಕ ಬಿ.ಕೆ ಸಂಗಮೇಶ್ವರ್ ಪ್ರತಿಭಟನಾಕಾರನ್ನುದ್ದೇಶಿಸಿ ಮಾತನಾಡುತ್ತಿರುವುದು. 
ಭದ್ರಾವತಿ: ತಾಲೂಕಿನ ತಾವರಘಟ್ಟ ಗ್ರಾಮ ಪಂಚಾಯಿತಿಗೆ ಸೇರಿದ ತಾವರಘಟ್ಟ ಸ್ಮಶಾನ ಜಾಗಕ್ಕೆ ಸಂಬಂಧಿಸಿದಂತೆ ಹಾಲಿ ಮತ್ತು ಮಾಜಿ ಶಾಸಕರ ಎರಡು ಬಣಗಳ ನಡುವೆ ಮಂಗಳವಾರ ಮಾತಿನ ಚಕಮಕಿ ನಡೆದು ಬಿಗುವಿನ ವಾತಾವರಣ ನಿರ್ಮಾಣಗೊಂಡಿದ್ದು, ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿರುವ ಘಟನೆ ನಡೆದಿದೆ. 
ತಾವರಘಟ್ಟ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಸರ್ವೆ ನಂ. ೨೯(ಹಳೇ ಸರ್ವೆ ನಂ.೧೪)ರ ಗೋಮಾಳ ಜಾಗದಲ್ಲಿ ಸ್ಮಶಾನ ನಿರ್ಮಾಣಕ್ಕೆ ಸರ್ಕಾರದಿಂದ ೧ ಎಕರೆ ೨೦ ಗುಂಟೆ ಜಮೀನು ಮಂಜೂರಾತಿಯಾಗಿದ್ದು, ಈ ಹಿನ್ನಲೆಯಲ್ಲಿ ತಾಲೂಕು ಆಡಳಿತದಿಂದ ಸರ್ವೆ ಕಾರ್ಯ ನಡೆಸಲು ಗ್ರಾಮಕ್ಕೆ ತೆರಳಿದ್ದಾಗ ಗೋಮಾಳ ಒತ್ತುವರಿ ಮಾಡಿರುವ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಭದ್ರಾವತಿ ತಾಲೂಕಿನ ತಾವರಘಟ್ಟ ಗ್ರಾಮ ಪಂಚಾಯಿತಿಗೆ ಸೇರಿದ ತಾವರಘಟ್ಟ ಸ್ಮಶಾನ ಜಾಗಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಬೆಂಬಲಿಗರು ಪ್ರತಿಭಟನೆ ನಡೆಸಿರುವುದು. 
     ಇದರಿಂದಾಗಿ ಸ್ಥಳಕ್ಕೆ ಆಗಮಿಸಿದ ಶಾಸಕ ಬಿ.ಕೆ ಸಂಗಮೇಶ್ವರ್ ಸ್ಮಶಾನಕ್ಕೆ ಜಾಗ ಬಿಟ್ಟುಕೊಡುವಂತೆ ಮನವಿ ಮಾಡಿದ್ದು, ಇದಕ್ಕೆ ಒಪ್ಪಂದ ರೈತರು ಗೋಮಾಳದಲ್ಲಿ ಖಾಲಿ ಜಾಗವಿದ್ದು, ಆ ಜಾಗವನ್ನು ಬಳಸಿಕೊಳ್ಳುವಂತೆ ಪಟ್ಟು ಹಿಡಿದಿದ್ದಾರೆ. 
ಒತ್ತುವರಿ ರೈತರ ಪರವಾಗಿ ಮಾಜಿ ಶಾಸಕ ಅಪ್ಪಾಜಿ ಬೆಂಬಲಕ್ಕೆ ಬಂದ ಹಿನ್ನಲೆಯಲ್ಲಿ ಹಾಲಿ ಮತ್ತು ಮಾಜಿ ಶಾಸಕರ ಬಣಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದಾಗಿ ಬಿಗುವಿನ ವಾತಾವರಣ ನಿರ್ಮಾಣವಾದ ಹಿನ್ನಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಲಘು ಲಾಟಿ ಪ್ರಹಾರ ನಡೆಸಿ ಪರಿಸ್ಥಿತಿ ಹತೋಟಿಗೆ ತರುವಲ್ಲಿ ಯಶಸ್ವಿಯಾದರು ಎಂದು ಪ್ರತ್ಯಕ್ಷದರ್ಶಿಗಳು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. 
ಗೋಮಾಳ ಜಾಗದ ವಿಸ್ತೀರ್ಣದ ಬಗ್ಗೆ ಸ್ಪಷ್ಟ ಮಾಹಿತಿ ಯಾರ ಬಳಿಯೂ ಇಲ್ಲ. ಪ್ರಸ್ತುತ ಗೋಮಾಳ ಜಾಗದ ಸುತ್ತಮುತ್ತ ೫ ಮಂದಿ ರೈತರು ಜಮೀನು ಹೊಂದಿದ್ದು, ಈ ರೈತರಿಂದ ಗೋಮಾಳ ಜಾಗ ಒತ್ತುವರಿ ಮಾಡಲಾಗಿದೆ ಎನ್ನಲಾಗುತ್ತಿದೆ. ಈ ಹಿನ್ನಲೆಯಲ್ಲಿ ಈ ರೈತರ ಖಾತೆಯಲ್ಲಿ ದಾಖಲಾಗಿರುವ ಮಾಹಿತಿಯಂತೆ ಸರ್ವೆ ಕಾರ್ಯ ನಡೆಸಿ ಉಳಿದ  ಜಾಗವನ್ನು ಸ್ಮಶಾನಕ್ಕೆ ಬಿಟ್ಟು ಕೊಡಲಿ ಎಂಬುದು ಗ್ರಾಮಸ್ಥರ ವಾದವಾಗಿದೆ. 
ಭದ್ರಾವತಿ ತಾಲೂಕಿನ ತಾವರಘಟ್ಟ ಗ್ರಾಮ ಪಂಚಾಯಿತಿಗೆ ಸೇರಿದ ತಾವರಘಟ್ಟ ಸ್ಮಶಾನ ಜಾಗಕ್ಕೆ ಸಂಬಂಧಿಸಿದಂತೆ ಹಾಲಿ ಮತ್ತು ಮಾಜಿ ಶಾಸಕರ ಎರಡು ಬಣಗಳ ನಡುವೆ ಮಾತಿನ ಚಕಮಕಿ ನಡೆದು ಬಿಗುವಿನ ವಾತಾವರಣ ನಿರ್ಮಾಣಗೊಂಡ ಹಿನ್ನಲೆಯಲ್ಲಿ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. 
       ಆದರೆ ಒತ್ತುವರಿ ಮಾಡಿರುವ ರೈತರು ಈಗಾಗಲೇ ಒತ್ತುವರಿ ಮಾಡಿರುವ ಜಾಗದಲ್ಲಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಖಾಲಿ ಇರುವ ಜಾಗವನ್ನು ಸ್ಮಶಾನಕ್ಕೆ ಬಳಿಸಿಕೊಳ್ಳುವಂತೆ ಪಟ್ಟು ಹಿಡಿದ್ದಾರೆ. 

ಜು.೨೨ರಂದು ವಿದ್ಯುತ್ ವ್ಯತ್ಯಯ

ಭದ್ರಾವತಿ, ಜು. ೨೧: ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆವತಿಯಿಂದ ರಸ್ತೆ ಅಗಲೀಕರಣ ಕಾರ್ಯ ಹಮ್ಮಿಕೊಂಡಿರುವುದರಿಂದ ನಗರದ ಹೊಸಮನೆ ರಸ್ತೆಯ ಇಕ್ಕೆಲಗಳಲ್ಲಿರುವ ವಿದ್ಯುತ್ ಕಂಬಗಳನ್ನು ಜು.೨೨ರಂದು ಸ್ಥಳಾಂತರಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಬೆಳಿಗ್ಗೆ ೧೦.೩೦ ರಿಂದ ಸಂಜೆ ೬ ಗಂಟೆವರೆಗೆ ವಿದ್ಯುತ್ ನಿಲುಗಡೆಯಾಗಲಿದೆ. 
ಹೊಸಮನೆ ಶಿವಾಜಿ ವೃತ್ತ, ತಮ್ಮಣ್ಣ ಕಾಲೋನಿ, ಕುವೆಂಪು ನಗರ, ಹನುಮಂತ ನಗರ, ತ್ಯಾಗರಾಜ ನಗರ, ವಿಜಯ ನಗರ, ಅಶ್ವಥ್ ನಗರ ಮತ್ತು ಕಬಳಿಕಟ್ಟೆ ಇತ್ಯಾಧಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ. 


ನಿವೇಶನ, ವಸತಿ ರಹಿತರಿಗೆ ಯೋಜನೆ ಕುರಿತು ಮಾಹಿತಿ ನೀಡದೆ ನಿರ್ಲಕ್ಷ್ಯತನ

ತಪ್ಪಿತಸ್ಥರ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ 

ಭದ್ರಾವತಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ನಿವೇಶನ ಹಾಗೂ ವಸತಿ ರಹಿತರಿಗೆ ಸರ್ಕಾರದ ಯೋಜನೆ ಕುರಿತು ಸರಿಯಾಗಿ ಮಾಹಿತಿ ನೀಡದೆ ನಿರ್ಲಕ್ಷ್ಯ ವಹಿಸುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಂಗಳವಾರ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ತಾಲೂಕು ಪಂಚಾಯಿತಿ ಆಡಳಿತಕ್ಕೆ ವ್ಯವಸ್ಥಾಪಕ ಶಿವಕುಮಾರ್ ಮೂಲಕ ಮನವಿ ಸಲ್ಲಿಸಲಾಯಿತು. 
ಭದ್ರಾವತಿ, ಜು. ೨೧: ತಾಲೂಕಿನ ಗ್ರಾಮೀಣ ಭಾಗದಲ್ಲಿ ನಿವೇಶನ ಹಾಗೂ ವಸತಿ ರಹಿತರಿಗೆ ಸರ್ಕಾರದ ಯೋಜನೆ ಕುರಿತು ಸರಿಯಾಗಿ ಮಾಹಿತಿ ನೀಡದೆ ನಿರ್ಲಕ್ಷ್ಯ ವಹಿಸುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಂಗಳವಾರ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ತಾಲೂಕು ಪಂಚಾಯಿತಿ ಆಡಳಿತಕ್ಕೆ ವ್ಯವಸ್ಥಾಪಕ ಶಿವಕುಮಾರ್ ಮೂಲಕ ಮನವಿ ಸಲ್ಲಿಸಲಾಯಿತು. 
ಸರ್ಕಾರದ ಆದೇಶದಂತೆ ರಾಜೀವ್‌ಗಾಂಧಿ ವಸತಿ ನಿಗಮದ ವತಿಯಿಂದ ಬಹಳ ವರ್ಷಗಳ ನಂತರ ಫೆ.೧೩, ೨೦೨೦ರಂದು ಗ್ರಾಮೀಣ ಪ್ರದೇಶಗಳಲ್ಲಿ ವಸತಿ ಮತ್ತು ನಿವೇಶನ ರಹಿತರು ಅರ್ಜಿ ಸಲ್ಲಿಸಲು ಮತ್ತೊಮ್ಮೆ ಅವಕಾಶ ಕಲ್ಪಿಸಿದ್ದು, ಶಿವಮೊಗ್ಗ ಜಿಲ್ಲಾ ಪಂಚಾಯತ್ ವತಿಯಿಂದ ಜೂ.೨೬, ೨೦೨೦ರಂದು ಎಲ್ಲಾ ತಾಲೂಕು ಪಂಚಾಯಿತಿಗಳಿಗೆ ಕೈಬಿಟ್ಟು ಹೋಗಿರುವ ಅರ್ಹ ಫಲಾನುಭವಿಗಳನ್ನು ನಿಗಮದ ವೆಬ್‌ಸೈಟ್‌ನಲ್ಲಿ ನಮೂದಿಸಲು ಆ.೩೧ರವರೆಗೂ ಕಾಲಾವಕಾಶ ಕಲ್ಪಿಸಲಾಗಿದೆ. 
ಈ ಕುರಿತು ಜು.೧ರಂದು ತಾಲೂಕಿನ ಎಲ್ಲಾ ೪೧ ಗ್ರಾಮ ಪಂಚಾಯಿತಿಗಳಿಗೆ ಸುತ್ತೋಲೆ ಹೊರಡಿಸಲಾಗಿದ್ದು, ಆದರೆ ಗ್ರಾಮ ಪಂಚಾಯಿತಿಗಳಲ್ಲಿ ಇದುವರೆಗೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಯೋಜನೆ ಕುರಿತು ಗ್ರಾಮಗಳಲ್ಲಿ ಟಾಂಟಾಂ ಹೊಡೆಸಿ ಪ್ರಚಾರ ಮಾಡಿ ಯಾವುದೇ ನಿವೇಶನ ರಹಿತ ಫಲಾನುಭವಿಗಳು ಕೈಬಿಟ್ಟು ಹೋಗದಂತೆ ಕ್ರಮ ವಹಿಸಬೇಕಾಗಿದೆ. ಆದರೆ ಇದುವರೆಗೂ ಟಾಂಟಾಂ ಹೊಡೆಸಿಲ್ಲ. ಅಲ್ಲದೆ ಪ್ರತಿಕಾ ಪ್ರಚಾರ, ಭಿತ್ತಿಪತ್ತ ಹಂಚದೆ ಕರ್ತವ್ಯ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಲಾಗಿದೆ. 
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ವಸತಿ ಸಚಿವ ವಿ. ಸೋಮಣ್ಣ, ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಕೆ.ಎಸ್ ಈಶ್ವರಪ್ಪ ಈ ಸಂಬಂಧ ಗಮನ ಹರಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ. 
ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಪ್ರಧಾನ ಕಾರ್ಯದರ್ಶಿ ಅಕ್ರಂ ಖಾನ್, ಉಪಾಧ್ಯಕ್ಷ ಬ್ರಹ್ಮಲಿಂಗಯ್ಯ, ಸಂಚಾಲಕರಾದ ಗಾಯಕ್‌ವಾಡ್, ಸುಬ್ಬೇಗೌಡ, ಆನಂದಮೂರ್ತಿ, ರಾಮಾನಾಯ್ಕ್  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

Monday, July 20, 2020

ಜಿಲ್ಲೆಯಲ್ಲಿಯೇ ಅತಿಹೆಚ್ಚು ಸೋಂಕು ಉಕ್ಕಿನ ನಗರದಲ್ಲಿ ಪತ್ತೆ : ಒಂದೇ ದಿನ ೭ ಸೋಂಕು

ಭದ್ರಾವತಿ, ಜು. ೨೦: ಉಕ್ಕಿನ ನಗರದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸೋಮವಾರ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಸೋಂಕು ನಗರದಲ್ಲಿ ಪತ್ತೆಯಾಗಿದೆ. 
ಜಿಲ್ಲಾ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಒಟ್ಟು ೬ ಸೋಂಕು ಪತ್ತೆಯಾಗಿದ್ದು, ಆದರೆ ತಾಲೂಕು ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ೭ ಸೋಂಕು ಪತ್ತೆಯಾಗಿವೆ. ಇದೆ ಮೊದಲ ಬಾರಿಗೆ ಜುಲೈ ತಿಂಗಳಿನಲ್ಲಿ ೫ಕ್ಕೂ ಹೆಚ್ಚು ಸೋಂಕು ಪತ್ತೆಯಾಗಿದ್ದು, ಕಾಗದನಗರದಲ್ಲಿ ೫೪ ವರ್ಷದ ವ್ಯಕ್ತಿಗೆ, ಹುತ್ತಾಕಾಲೋನಿ ೩೬ ವರ್ಷ ವಯಸ್ಸಿನ ವಿಐಎಸ್‌ಎಲ್ ಕಾರ್ಖಾನೆ ಉದ್ಯೋಗಿಗೆ, ಗೋಲ್ಡನ್ ಜ್ಯೂಬಿಲಿಯಲ್ಲಿ ೪೨ ವರ್ಷದ ಮಹಿಳೆಗೆ, ಶಿವರಾಮನಗರದಲ್ಲಿ ೪೨ ವರ್ಷದ ವ್ಯಕ್ತಿಗೆ, ಶ್ರೀರಾಮನಗರದ ೫೫ ವರ್ಷದ ಮಹಿಳೆಗೆ, ಸಿರಿಯೂರು ತಾಂಡದಲ್ಲಿ ೫ ವರ್ಷದ ಮಗುವಿಗೆ ಮತ್ತು ಕೆಂಚೇನಹಳ್ಳಿ ಗ್ರಾಮದಲ್ಲಿ ೨೦ ವರ್ಷದ ಯುವತಿಗೆ ಸೋಂಕು ತಗುಲಿದೆ. 
೭ ಪ್ರಕರಣಗಳ ಪೈಕಿ ೫ ನಗರಸಭೆ ವ್ಯಾಪ್ತಿಯಲ್ಲಿದ್ದು, ಇದರಿಂದಾಗಿ ನಗರದ ನಾಗರೀಕರಲ್ಲಿ ಆತಂಕ ಹೆಚ್ಚಾಗಿದೆ. ಜೂನ್ ಅಂತ್ಯದಲ್ಲಿ ಒಂದೇ ದಿನ ೭ ಸೋಂಕು ಪತ್ತೆಯಾಗಿತ್ತು. ಆನಂತರ ಸೋಂಕಿನ ಪ್ರಮಾಣದಲ್ಲಿ ಏರಿಳಿತ ಕಂಡು ಬಂದಿತ್ತು. 
ನಗರಸಭೆ, ಆರೋಗ್ಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಸೋಂಕು ಪತ್ತೆಯಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,  ಸ್ಯಾನಿಟೈಜರ್ ಕೈಗೊಂಡು ೧೦೦ ಹಾಗೂ ೨೦೦ ಮೀಟರ್ ವ್ಯಾಪ್ತಿಯಲ್ಲಿ ಕಂಟೈನ್ಮೆಂಟ್ ವಲಯವನ್ನಾಗಿಸಿದ್ದಾರೆ. 

ಖಾಸಗಿ ಶಾಲೆ ವಿರುದ್ಧ ಬಲವಂತದಿಂದ ಶುಲ್ಕ ವಸೂಲಾತಿ ಆರೋಪ

ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೊಂದ ಪೋಷಕರಿಂದ ದೂರು 

ಭದ್ರಾವತಿ ನ್ಯೂಟೌನ್ ಭಾಗದ ಖಾಸಗಿ ಶಾಲೆಯೊಂದರ ಆಡಳಿತ ಮಂಡಳಿ ಪೋಷಕರಿಗೆ ಬಲವಂತವಾಗಿ ಶುಲ್ಕ ಪಾವತಿಸುವಂತೆ ಒತ್ತಾಯಿಸುತ್ತಿದ್ದು, ಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸಂಯುಕ್ತ ಜನಾತದಳ ರಾಜ್ಯ ಯುವ ಮುಖಂಡ ಶಶಿಕುಮಾರ್ ಎಸ್. ಗೌಡ ನೇತೃತ್ವದಲ್ಲಿ ನೊಂದ ಪೋಷಕರಿಂದ ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. 
ಭದ್ರಾವತಿ, ಜು. ೨೦: ನಗರದ ನ್ಯೂಟೌನ್ ಭಾಗದ ಖಾಸಗಿ ಶಾಲೆಯೊಂದರ ಆಡಳಿತ ಮಂಡಳಿ ಪೋಷಕರಿಗೆ ಬಲವಂತವಾಗಿ ಶುಲ್ಕ ಪಾವತಿಸುವಂತೆ ಒತ್ತಾಯಿಸುತ್ತಿದ್ದು, ಪ್ರಸ್ತುತ ಎದುರಾಗಿರುವ ಸಂದಿಗ್ದ ಪರಿಸ್ಥಿತಿಯಲ್ಲಿ ಬಲವಂತವಾಗಿ ಶುಲ್ಕ ವಸೂಲಾತಿ ಮಾಡುವುದು ಸರಿಯಲ್ಲ. ಈ ಸಂಬಂಧ ಸರ್ಕಾರ ಸಹ ಆದೇಶ ಹೊರಡಿಸಿದ್ದು, ಈ ಹಿನ್ನಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸಂಯುಕ್ತ ಜನಾತದಳ ರಾಜ್ಯ ಯುವ ಮುಖಂಡ ಶಶಿಕುಮಾರ್ ಎಸ್. ಗೌಡ ನೇತೃತ್ವದಲ್ಲಿ ನೊಂದ ಪೋಷಕರಿಂದ ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. 
ಪ್ರಸ್ತುತ ವಿಶ್ವದೆಲ್ಲೆಡೆ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಲಾಕ್‌ಡೌನ್ ಪರಿಣಾಮ ಯಾವುದೇ ಉದ್ಯೋಗ, ವಹಿವಾಟು ಇಲ್ಲದೆ ಆರ್ಥಿಕ ಸಂಕಷ್ಟ ಎದುರಾಗಿದೆ. ಶ್ರೀಸಾಮಾನ್ಯರು ಜೀವನ ನಡೆಸುವುದೇ ಕಷ್ಟಕರವಾಗಿದೆ. ಇಂತಹ ಸಂದರ್ಭದಲ್ಲಿ ನ್ಯೂಟೌನ್ ಸೆಂಟ್‌ಚಾರ್ಲ್ಸ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಪೋಷಕರಿಗೆ ಕರೆ ಮಾಡಿ ಶುಲ್ಕ ಪಾವತಿಸುವಂತೆ ಒತ್ತಾಯಿಸುತ್ತಿದೆ ಎಂದು ಆರೋಪಿಸಲಾಯಿತು. 
ಈ ಹಿಂದೆ ನಗರದಲ್ಲಿ ಖಾಸಗಿ ಶಾಲೆಗಳು ಬಲವಂತದಿಂದ ಶುಲ್ಕ ವಸೂಲಾತಿ ಮಾಡದಿರುವಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಇಲಾಖೆಗೆ ಮನವಿ ಸಲ್ಲಿಸಲಾಗಿತ್ತು. ಆದರೂ ಸಹ ಖಾಸಗಿ ಶಾಲೆಗಳು ಶುಲ್ಕ ವಸೂಲಾತಿ ಮಾಡುತ್ತಿವೆ. ತಕ್ಷಣ ಖಾಸಗಿ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಜು.೨೭ರಿಂದು ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಲಾಯಿತು. 
ನೊಂದ ಪೋಷಕರಾದ ಡಿ. ಮಂಜುನಾಥ್, ನಾಗರಾಜು, ಮಧುಸೂದನ್, ಶಿವಕುಮಾರ್ ಮತ್ತು ಸತೀಶ್, ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್‌ಶೆಟ್ಟಿ ಬಣ) ತಾಲೂಕು ಅಧ್ಯಕ್ಷ ಬಿ.ವಿ ಗಿರೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕೋವಿಡ್-೧೯ರ ನಗರ ಟಾಕ್ಸ್ ಫೋರ್ಸ್ ಕಾರ್ಯಪಡೆ ಸದಸ್ಯರಿಗೆ ಕಾರ್ಯಾಗಾರ

ಭದ್ರಾವತಿ ನಗರಸಭೆ ವತಿಯಿಂದ ಕೋವಿಡ್-೧೯ರ ನಗರ ಟಾಕ್ಸ್ ಫೋರ್ಸ್ ಕಾರ್ಯಪಡೆ ಸದಸ್ಯರಿಗೆ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಆನ್‌ಲೈನ್ ತರಬೇತಿ ಕಾರ್ಯಾಗಾರವನ್ನು ಶಿವಮೊಗ್ಗ ಅಭಿವೃದ್ಧಿ ಯೋಜನಾ ನಿರ್ದೇಶಕ ನಾಗೇಂದ್ರ ಹೊನ್ನಾಳಿ ಉದ್ಘಾಟಿಸಿದರು.
ಭದ್ರಾವತಿ, ಜು. ೨೦: ನಗರಸಭೆ ವತಿಯಿಂದ ಕೋವಿಡ್-೧೯ರ ನಗರ ಟಾಕ್ಸ್ ಫೋರ್ಸ್ ಕಾರ್ಯಪಡೆ ಸದಸ್ಯರಿಗೆ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಆನ್‌ಲೈನ್ ತರಬೇತಿ ಕಾರ್ಯಾಗಾರವನ್ನು ಶಿವಮೊಗ್ಗ ಅಭಿವೃದ್ಧಿ ಯೋಜನಾ ನಿರ್ದೇಶಕ ನಾಗೇಂದ್ರ ಹೊನ್ನಾಳಿ ಉದ್ಘಾಟಿಸಿದರು.
ಹಳೇನಗರದ ವೀರಭದ್ರೇಶ್ವರ ಚಿತ್ರ ಮಂದಿರ, ನಗರಸಭೆ ಸರ್.ಎಂ ವಿಶ್ವೇಶ್ವರಯ್ಯ ಸಭಾಂಗಣ ಹಾಗೂ ಬಿ.ಎಚ್ ರಸ್ತೆ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಕಾರ್ಯಾಗಾರ ಆಯೋಜಿಸಲಾಗಿತ್ತು.
ಭದ್ರಾವತಿ ನಗರಸಭೆ ವತಿಯಿಂದ ಕೋವಿಡ್-೧೯ರ ನಗರ ಟಾಕ್ಸ್ ಫೋರ್ಸ್ ಕಾರ್ಯಪಡೆ ಸದಸ್ಯರಿಗೆ ಸೋಮವಾರ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಆನ್‌ಲೈನ್ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಸಮುದಾಯದಲ್ಲಿ ಕೋವಿಡ್-೧೯ ಯಶಸ್ವಿಯಾಗಿ ನಿರ್ವಹಿಸಲು ಅನುಸರಿಸಬೇಕಾದ ಪ್ರಮುಖ ಕ್ರಮಗಳು, ಸೋಂಕಿಗೆ ಒಳಗಾದವರನ್ನು ಪ್ರಾಥಮಿಕ ಹಂತದಲ್ಲಿಯೇ ಗುರುತಿಸುವುದು. ಸೋಂಕು ಹರಡದಂತೆ ಮುನ್ನಚ್ಚರಿಕೆ ವಹಿಸುವುದು. ಸಾರ್ವಜನಿಕ ಸ್ಥಳಗಳಲ್ಲಿ ವಹಿಸಬೇಕಾದ ಅಗತ್ಯ ಕ್ರಮಗಳು ಹಾಗೂ ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಇತ್ಯಾದಿ ವಿಷಯಗಳನ್ನು ಕಾರ್ಯಾಗಾರದಲ್ಲಿ ಆನ್‌ಲೈನ್ ಮೂಲಕ ತಿಳಿಸಿಕೊಡಲಾಯಿತು.
ಭದ್ರಾವತಿ ನಗರಸಭೆ ವತಿಯಿಂದ ಕೋವಿಡ್-೧೯ರ ನಗರ ಟಾಕ್ಸ್ ಫೋರ್ಸ್ ಕಾರ್ಯಪಡೆ ಸದಸ್ಯರಿಗೆ ಸೋಮವಾರ ನಗರಸಭೆ ಸರ್.ಎಂ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಆನ್‌ಲೈನ್ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ನಗರಸಭೆ ಪೌರಾಯುಕ್ತ ಮನೋಹರ್, ಪರಿಸರ ಅಭಿಯಂತರ ರುದ್ರೇಗೌಡ ಮತ್ತು ಕಂದಾಯಾಧಿಕಾರಿ ರಾಜ್‌ಕುಮಾರ್ ನೇತೃತ್ವದಲ್ಲಿ ೩ ಕಡೆ ಕಾರ್ಯಾಗಾರ ಯಶಸ್ವಿಯಾಗಿ ಜರುಗಿತು. ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಟಾಕ್ಸ್ ಫೋರ್ಸ್ ಕಾರ್ಯಪಡೆ ಸದಸ್ಯರು ಪಾಲ್ಗೊಂಡಿದ್ದರು.