Friday, July 31, 2020

ರಾಮ ಮಂದಿರ ಭೂಮಿ ಪೂಜೆ ವೀಕ್ಷಣೆಗೆ ಎಲ್‌ಇಡಿ ವ್ಯವಸ್ಥೆ

ಭದ್ರಾವತಿ, ಜು. ೩೧: ಅಯೋಧ್ಯೆ ಶ್ರೀರಾಮ ಜನ್ಮ ಭೂಮಿಯಲ್ಲಿ ಆ.೫ರಂದು ಬೆಳಿಗ್ಗೆ ೧೦.೩೦ಕ್ಕೆ ನಡೆಯಲಿರುವ ಶ್ರೀರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮದ ನೇರ ಪ್ರಸಾರವನ್ನು ವೀಕ್ಷಿಸಲು ಹಿಂದೂ ಮಹಾಸಭಾ, ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಎಲ್‌ಇಡಿ ಪರದೆ ವ್ಯವಸ್ಥೆ ಕೈಗೊಳ್ಳಲಾಗಿದೆ. 
ಹೊಸಮನೆ ಮುಖ್ಯರಸ್ತೆಯಲ್ಲಿರುವ ಸಮಿತಿಯ ಹಿಂದೂ ಮಹಾಸಭಾ ಸಭಾಭವನದಲ್ಲಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ಸಮಿತಿ ಅಧ್ಯಕ್ಷ ವಿ. ಕದಿರೇಶ್, ಪ್ರಧಾನ ಕಾರ್ಯದರ್ಶಿ ಟಿ.ಎಸ್ ಭವಾನಿಕುಮಾರ್ ಕೋರಿದ್ದಾರೆ.

೫.೫೦ ಕೋ. ರು. ವೆಚ್ಚದ ರಸ್ತೆ ಕಾಮಗಾರಿಗಳಿಗೆ ಶಾಸಕರಿಂದ ಚಾಲನೆ

ಭದ್ರಾವತಿ ತಾಲ್ಲೂಕಿನ ಸಿಂಗನಮನೆ, ತಾವರಘಟ್ಟ ಮತ್ತು ಮಾಳೇನಹಳ್ಳಿ ಗ್ರಾಮಗಳಲ್ಲಿ ಒಟ್ಟು ಸುಮಾರು ೫.೫೦ ಕೋ. ರು.  ವೆಚ್ಚದ ಕಾಂಕ್ರೀಟ್ ರಸ್ತೆ ಮತ್ತು ಬಾಕ್ಸ್ ಡ್ರೈನೇಜ್ ಕಾಮಗಾರಿಗಳಿಗೆ ಶುಕ್ರವಾರ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು. 
ಭದ್ರಾವತಿ, ಜು. ೩೧:  ತಾಲ್ಲೂಕಿನ ಸಿಂಗನಮನೆ, ತಾವರಘಟ್ಟ ಮತ್ತು ಮಾಳೇನಹಳ್ಳಿ ಗ್ರಾಮಗಳಲ್ಲಿ ಒಟ್ಟು ಸುಮಾರು ೫.೫೦ ಕೋ. ರು.  ವೆಚ್ಚದ ಕಾಂಕ್ರೀಟ್ ರಸ್ತೆ ಮತ್ತು ಬಾಕ್ಸ್ ಡ್ರೈನೇಜ್ ಕಾಮಗಾರಿಗಳಿಗೆ ಶುಕ್ರವಾರ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು. 
ಗ್ರಾಮೀಣ ಭಾಗದಲ್ಲೂ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಲಾಗಿದ್ದು, ಈಗಾಗಲೇ ಬಹುತೇಕ ರಸ್ತೆಗಳು ಪೂರ್ಣಗೊಂಡಿವೆ. ಗುಣಮಟ್ಟದ ಕಾಮಗಾರಿ ನಡೆಸುವ ಮೂಲಕ ಶೀಘ್ರವಾಗಿ ಮುಕ್ತಾಯಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು. 
ಸಿಂಗನಮನೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆರ್. ಉಮಾ, ಸದಸ್ಯರಾದ ಟಿ.ಡಿ ಶಶಿಕುಮಾರ್, ಜೆ. ಸುಜಾತ ಸೇರಿದಂತೆ ಗ್ರಾಮದ ಪ್ರಮುಖರು, ಗ್ರಾಮಸ್ಥರು ಉಪಸ್ಥಿತರಿದ್ದರು.

ನಗರಕ್ಕೆ ಅಂತರಾಷ್ಟ್ರೀಯ ಹಿಂದೂ ಪರಿಷತ್ ರಾಜ್ಯ ಸಂಘಟನಾ ಪ್ರಮುಖ್ ಪ್ರವೀಣ್ ವಾಲ್ಕೆ ಆಗಮನ

ರಾಷ್ಟ್ರೀಯ ಬಜರಂಗದಳ ಕಾರ್ಯ ಚಟುವಟಿಕೆ ಪರಿಶೀಲನೆ

ಅಂತರಾಷ್ಟ್ರೀಯ ಹಿಂದೂ ಪರಿಷತ್ ರಾಜ್ಯ ಸಂಘಟನಾ ಪ್ರಮುಖರಾದ ಪ್ರವೀಣ್‌ವಾಲ್ಕೆ ಭದ್ರಾವತಿ ನಗರಕ್ಕೆ ಆಗಮಿಸಿ ರಾಷ್ಟ್ರೀಯ ಬಜರಂಗದಳ ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸಿದರು. 
ಭದ್ರಾವತಿ, ಜು. ೩೧: ಅಂತರಾಷ್ಟ್ರೀಯ ಹಿಂದೂ ಪರಿಷತ್ ರಾಜ್ಯ ಸಂಘಟನಾ ಪ್ರಮುಖರಾದ ಪ್ರವೀಣ್‌ವಾಲ್ಕೆ ನಗರಕ್ಕೆ ಆಗಮಿಸಿ ರಾಷ್ಟ್ರೀಯ ಬಜರಂಗದಳ ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸಿದರು. 
ಹೊಸಮನೆ ಓಂ ಹಿಂದು ಕೋಟೆ ರಾಮಮಂದಿರದಲ್ಲಿ ನಡೆದ ಸಭೆಯಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲು ಸೂಚಿಸಿದರು. 
ಜಿಲ್ಲಾಧ್ಯಕ್ಷ ಬಿ.ವಿ. ಚಂದನ್ ರಾವ್, ಜಿಲ್ಲಾ ಗೋರಕ್ಷಾ ಪ್ರಮುಖ್ ಚರಣ್ ದೇವಾಂಗ, ಜಿಲ್ಲಾ ಮಾಧ್ಯಮ ಪ್ರಮುಖ್ ಲತೇಶ್ ಶೆಟ್ಟಿ, ಶಿವಮೊಗ್ಗ ತಾಲೂಕು ಅಧ್ಯಕ್ಷ ಕಿರಣ್ ಗೌಡ, ಭದ್ರಾವತಿ ತಾಲೂಕು ಅಧ್ಯಕ್ಷ ಮನು ಗೌಡ, ಗ್ರಾಮಾಂತರ ಅಧ್ಯಕ್ಷ ನವೀನ್ ಕುಮಾರ್ ಹಾಗೂ ಇನ್ನಿತರರಿಗೆ ಜವಾಬ್ದಾರಿಗಳನ್ನು ಘೋಷಿಸಿದರು.  
ಓಂ  ಹಿಂದೂ ಕೋಟೆ ಅಧ್ಯಕ್ಷ ಮಂಜುನಾಥ್, ಪ್ರಮುಖರಾದ ಯೋಗೇಶ್, ರಂಗನಾಥ, ಟೀ ಗೋಪಾಲ, ಪರಶುರಾಮ್ ಸೇರಿದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು. 

ಬಿಜೆಪಿ ಓಬಿಸಿ ಮೋರ್ಚಾದಿಂದ ಪರಿಸರ ದಿನಾಚರಣೆ

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಭದ್ರಾವತಿಯಲ್ಲಿ ಭಾರತೀಯ ಜನತಾ ಪಕ್ಷ ಓಬಿಸಿ ಮೋರ್ಚಾ ವತಿಯಿಂದ ನಗರಸಭೆ ವ್ಯಾಪ್ತಿ ಹಳೇನಗರದ ೬ನೇ ವಾರ್ಡ್ ಜಟ್‌ಪಟ್‌ನಗರದಲ್ಲಿರುವ ಡಿ. ದೇವರಾಜ್ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯದಲ್ಲಿ ಸಸಿ ನೆಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು. 
ಭದ್ರಾವತಿ, ಜು. ೩೧: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಭಾರತೀಯ ಜನತಾ ಪಕ್ಷ ಓಬಿಸಿ ಮೋರ್ಚಾ ವತಿಯಿಂದ ನಗರಸಭೆ ವ್ಯಾಪ್ತಿ ಹಳೇನಗರದ ೬ನೇ ವಾರ್ಡ್ ಜಟ್‌ಪಟ್‌ನಗರದಲ್ಲಿರುವ ಡಿ. ದೇವರಾಜ್ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯದಲ್ಲಿ ಸಸಿ ನೆಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು. 
ಒಬಿಸಿ ಮೋರ್ಚಾ ಜಿಲ್ಲಾ ಪ್ರಮುಖರಾದ ಅರುಣ್ ಕುಮಾರ್, ಜಿಲ್ಲಾಧ್ಯಕ್ಷ ಮಾಲತೇಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಾಲೂಕು ಅಧ್ಯಕ್ಷ ಸುಬ್ರಮಣಿ ಅಧ್ಯಕ್ಷತೆ ವಹಿಸಿದ್ದರು. 
  ತಾಲೂಕು ಬಿಜೆಪಿ ಮಂಡಲ ಉಪಾಧ್ಯಕ್ಷ ಮಂಜಪ್ಪ, ಕಾರ್ಯದರ್ಶಿ ಕೆ.ಆರ್ ಸತೀಶ್, ಮೋರ್ಚಾ ತಾಲೂಕು ಪ್ರಧಾನ ಕಾರ್ಯದರ್ಶಿ ಆರ್.ಪಿ ವೆಂಕಟೇಶ್, ಉಪಾಧ್ಯಕ್ಷರಾದ ಈಶ್ವರ್, ರಮೇಶ್, ಮಹಿಳಾ ಮೋರ್ಚಾ ಅಧ್ಯಕ್ಷೆ ಕಲ್ಪನಾ, ಪ್ರಮುಖರಾದ ರುದ್ರಪ್ಪ, ತೀರ್ಥಪ್ಪ, ಪರಶುರಾಮ್, ಮುರುಳಿ, ಕರಿಬಸಪ್ಪ, ರವಿ, ನಾಗೇಂದ್ರಪ್ರಸಾದ್ ಮತ್ತು ಚಂದ್ರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 

Thursday, July 30, 2020

ಜು.೩೧ರಿಂದ ಪ್ರೌಢಶಾಲಾ ಶಿಕ್ಷಕರಿಗೆ ಜೀವನ ಕೌಶಲ ಆನ್‌ಲೈನ್ ತರಬೇತಿ ಕಾರ್ಯಕ್ರಮ

ಭದ್ರಾವತಿ, ಜು. ೩೦: ಎಲ್ಲೆಡೆ ಕೋವಿಡ್-೧೯ ತೀವ್ರವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಮನೆಯಿಂದಲೇ ಕೆಲಸ ನಿರ್ವಹಿಸಲು ಅವಕಾಶ ಕಲ್ಪಿಸಿರುವ ಹಿನ್ನಲೆಯಲ್ಲಿ ಹಾಗೂ ಸರ್ಕಾರದ ಆದೇಶದಂತೆ ತಾಲೂಕಿನ ಪ್ರೌಢಶಾಲಾ ಶಿಕ್ಷಕರಿಗೆ ಜೀವನ ಕೌಶಲ ಆನ್‌ಲೈನ್ ತರಬೇತಿ ಕಾರ್ಯಕ್ರಮವನ್ನು ಜು.೩೧ ರಿಂದ ಆ.೧೩ರ ವರೆಗೆ ಹಮ್ಮಿಕೊಳ್ಳಲಾಗಿದೆ. 
ಆನ್‌ಲೈನ್ ತರಬೇತಿ ಪ್ರತಿದಿನ ಬೆಳಿಗ್ಗೆ ೧೧ ರಿಂದ ೧೨.೩೦ರವರೆಗೆ ನಡೆಯಲಿದ್ದು, ಜು.೩೧ರಂದು ವಿದ್ಯಾಗಮ ನಿರಂತರ ಕಲಿಕಾ ಕಾರ್ಯಕ್ರಮ ಅನುಷ್ಠಾನ ಏಕೆ? ಹೇಗೆ? ವಿಷಯ ಕುರಿತು ಬಿಆರ್‌ಸಿ ಗಣೇಶ್ ಮಾಹಿತಿ ನೀಡಲಿದ್ದಾರೆ. 
ಆ.೩ರಂದು ಸೇತುಬಂಧ ಮತ್ತು ಎಸ್‌ಎಪಿ ಪರಿಚಯ ಕುರಿತು ಅಂತರಗಂಗೆಯ ಇಮ್ತಿಯಾಜ್ ಅಹ್ಮದ್ ಹಾಗೂ ೪ರಂದು ಹದಿಹರೆಯ/ತಾರುಣ್ಯ ಪರಿಚಯ, ಸವಾಲು, ಹದಿಹರೆಯ ಸಾಧಕರು, ವೈಯಕ್ತಿಕ ನೈರ್ಮಲ್ಯ, ಸಕಾರಾತ್ಮಕ ಮನೋಭಾವನೆ ಕುರಿತು ಸ್ತ್ರೀರೋಗ ತಜ್ಞೆ ಡಾ. ವೀಣಾ ಎಸ್ ಭಟ್ ಮಾಹಿತಿ ನೀಡಲಿದ್ದಾರೆ. 
೫ರಂದು ಜೀವನ ಕೌಶಲಗಳು-ಮಹತ್ವ ಡಬ್ಲ್ಯೂಎಚ್‌ಓ ಅನುಮೋದಿಸಿರುವ ೧೦ ಜೀವನ ಕೌಶಲಗಳು ಏನು?ಏಕೆ?ಹೇಗೆ? ವಿಷಯ ಕುರಿತು ಅರಹತೊಳಲು ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಅಣ್ಣಪ್ಪ ಮಾಹಿತಿ ನೀಡಲಿದ್ದು, ೬ರಂದು ರಚನಾವಾದಿ ತರಗತಿ ಪ್ರಕ್ರಿಯೆ ಚರ್ಚೆ ಶಾಲಾ ಅಭ್ಯಾಸಗಳಲ್ಲಿ ಮೌಲ್ಯಮಾಪನ ಕುರಿತು ಹಳೇನಗರ ಕನಕ ವಿದ್ಯಾಸಂಸ್ಥೆಯ ಸಹ ಶಿಕ್ಷಕ ಪ್ರಶಾಂತ್ ಸಣ್ಣಕ್ಕಿ ಮಾಹಿತಿ ನೀಡಲಿದ್ದಾರೆ.
೭ರಂದು ಕೆಎಸ್‌ಕ್ಯೂಎಎಸಿ/ಸಿಎಸ್‌ಎಎಸ್ ಸಾಮರ್ಥ್ಯಗಳ ಪರಿಚಯ, ಪ್ರಶ್ನೆ ಸ್ವರೂಪದ ನೆಲೆಗಳು, ಕಲಿಕಾ ಫಲಗಳು, ಏನು?ಯಾವುವು?ಏಕೆ?ಹೇಗೆ? ವಿಷಯ ಕುರಿತು ಚಿಕ್ಕಮಗಳೂರು ಕಡೂರು ತಾಲೂಕಿನ ಜಿಗಣೇಹಳ್ಳಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಎ.ಜಿ ರಾಜಶೇಖರ್ ಮಾಹಿತಿ ನೀಡಲಿದ್ದು, ೧೦ರಂದು ಎನ್‌ಸಿಎಫ್-೨೦೦೫, ಸಿಸಿಇ ಅರ್ಥ ಮತ್ತು ಹೊಸ ಆಯಾಮಗಳ ಚರ್ಚೆ, ಕಲಿಕೆ ಹಾಗೂ ಮೌಲ್ಯಮಾಪನ ಕುರಿತು ಹೊಳೆಹೊನ್ನೂರು ಸರ್ಕಾರಿ ಉರ್ದು ಪ್ರೌಢ ಶಾಲೆ ಮುಖ್ಯ ಶಿಕ್ಷಕಿ ಶಬನಾ ಅಂಜುಂ ಮಾಹಿತಿ ನೀಡಲಿದ್ದಾರೆ. 
೧೧ರಂದು ಸಿಸಿಇ ಮೌಲ್ಯಮಾಪನದ ತಂತ್ರಗಳು, ಸಾಧನಗಳು, ಸಾಂದರ್ಭಿಕ ದಾಖಲೆಗಳ ನಿರ್ವಹಣೆ ಮತ್ತು ನಿಯೋಜಿತ ಕಾರ್ಯಗಳು ವಿಷಯ ಕುರಿತು ಯಡೇಹಳ್ಳಿ ಸರ್ಕಾರಿ ಪ್ರೌಢಶಾಲೆ ಸಹ ಶಿಕ್ಷಕ ಜಯಕುಮಾರ್ ಮಾಹಿತಿ ನೀಡಲಿದ್ದು, ೧೨ರಂದು ಎಸ್‌ಡಿಪಿ ಮತ್ತು ಫಲಿತಾಂಶ ಕ್ರಿಯಾ ಯೋಜನೆ ಶಾಲಾ ಗ್ರಂಥಾಲಯ ಮತ್ತು ಶಾಲಾ ವಿವಿಧ ಕ್ಲಬ್‌ಗಳ ನಿರ್ವಹಣೆ ಹೇಗೆ? ಏಕೆ? ವಿಷಯ ಕುರಿತು ಹಳೇನಗರ ಸಂಚಿಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಸಹ ಶಿಕ್ಷಕ ದಿವಾಕರ್ ಮತ್ತು ರಸ್ತೆ ಸುರಕ್ಷತೆ, ಸಂಚಾರ ನಿಯಮಗಳು, ರಸ್ತೆ ಬಳಕೆದಾರರ ವರ್ತನೆಗಳು ಮತ್ತು ಪ್ರಥಮ ಚಿಕಿತ್ಸೆ ಕುರಿತು ಕಾಗದನಗರ ಪೇಪರ್‌ಟೌನ್ ಪ್ರೌಢಶಾಲೆ ಸಹ ಶಿಕ್ಷಕ ಮಂಜುನಾಥ್ ಮಾಹಿತಿ ನೀಡಲಿದ್ದಾರೆ. 

ರೋಟರಿ ಕ್ಲಬ್ ವತಿಯಿಂದ ರೈತ ಮಿತ್ರ : ಭತ್ತದ ನಾಟಿ ಮೂಲಕ ರೈತರ ಸಂಕಷ್ಟಗಳಿಗೆ ಸ್ಪಂದನೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಸಿದ್ದಾಪುರ ಗ್ರಾಮದಲ್ಲಿ ರೋಟರಿ ಕ್ಲಬ್‌ನ ಪದಾಧಿಕಾರಿಗಳು ರೈತರೊಂದಿಗೆ ಭತ್ತದ ನಾಟಿಯಲ್ಲಿ ತೊಡಗುವ ಮೂಲಕ ರೈತರ ಸಂಕಷ್ಟಗಳಿಗೆ ಸ್ಪಂದಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. 
ಭದ್ರಾವತಿ, ಜು. ೩೦: ಹಲವಾರು ಸೇವಾ ಕಾರ್ಯಗಳೊಂದಿಗೆ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡಿರುವ ರೋಟರಿ ಕ್ಲಬ್ ರೈತರ ನೆರವಿಗೂ ಮುಂದಾಗುತ್ತಿದ್ದು, ಈ ಹಿನ್ನಲೆಯಲ್ಲಿ ಹಲವಾರು ವರ್ಷಗಳಿಂದ ರೈತ ಮಿತ್ರ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರುತ್ತಿದೆ. 
ಈ ಬಾರಿ ನಗರಸಭೆ ವ್ಯಾಪ್ತಿಯ ಸಿದ್ದಾಪುರ ಗ್ರಾಮದಲ್ಲಿ ಕ್ಲಬ್‌ನ ಪದಾಧಿಕಾರಿಗಳು ರೈತರೊಂದಿಗೆ ಭತ್ತದ ನಾಟಿಯಲ್ಲಿ ತೊಡಗುವ ಮೂಲಕ ರೈತರ ಸಂಕಷ್ಟಗಳಿಗೆ ಸ್ಪಂದಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. 
ಕ್ಲಬ್ ಅಧ್ಯಕ್ಷ ಬಿ.ಎಂ. ಶಾಂತಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಗಿರೀಶ್, ವಲಯ ಪ್ರತಿನಿಧಿ ಡಾ. ಕೆ. ನಾಗರಾಜ್, ಸುಂದರ್ ಬಾಬು ಹಾಗೂ ಸ್ಥಳೀಯ ಪುರುಷ ಹಾಗೂ ಮಹಿಳಾ ರೈತರು ಉಪಸ್ಥಿತರಿದ್ದರು. 



ಕೊರೋನಾ ಸೋಂಕು : ನಗರಸಭೆ ವ್ಯಾಪ್ತಿಯಲ್ಲಿ ಒಂದೇ ದಿನ ೧೦ ಪ್ರಕರಣ

ಭದ್ರಾವತಿ, ಜು. ೩೦:  ಉಕ್ಕಿನ ನಗರದಲ್ಲಿ ಕೆಲವು ದಿನಗಳಿಂದ ಕೊರೋನಾ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಗುರುವಾರ ಒಂದೇ ದಿನ ನಗರಸಭೆ ವ್ಯಾಪ್ತಿಯಲ್ಲಿ ೧೦ ಪ್ರಕರಣಗಳು ದಾಖಲಾಗಿವೆ. 
  ವೇಲೂರ್‌ಶೆಡ್‌ನಲ್ಲಿ ೧೯ ಮತ್ತು ೨೩ ವರ್ಷದ ಇಬ್ಬರು ಯುವಕರಿಗೆ, ಅರಣ್ಯ ಕಛೇರಿ ಬಳಿ ೩೦ ವರ್ಷದ ಯುವಕ ಮತ್ತು ೬೫ ವರ್ಷದ ವ್ಯಕ್ತಿಗೆ, ಚಾಮೇಗೌಡ ಏರಿಯಾದಲ್ಲಿ ೨೭ ವರ್ಷದ ಮಗಳು ಹಾಗೂ ೬೨ ವರ್ಷದ ತಂದೆಗೆ, ಜೈಭೀಮಾ ನಗರದಲ್ಲಿ ೨೬ ವರ್ಷದ ವ್ಯಕ್ತಿಗೆ, ಭೋವಿಕಾಲೋನಿಯಲ್ಲಿ ೫೫ ವರ್ಷದ ಗುತ್ತಿಗೆದಾರನಿಗೆ ಮತ್ತು ೪೦ ವರ್ಷದ ಮಹಿಳೆಗೆ ಹಾಗೂ ನೃಪತುಂಗ ನಗರದಲ್ಲಿ ೬೦ ವರ್ಷದ ಮಹಿಳೆಗೆ ಸೋಂಕು ತಗುಲಿದೆ. 
ನಗರಸಭೆ ಪೌರಾಯುಕ್ತ ಮನೋಹರ್, ಪರಿಸರ ಅಭಿಯಂತರ ರುದ್ರೇಗೌಡ,  ಹಿರಿಯ ಆರೋಗ್ಯ ನಿರೀಕ್ಷರಾದ ಲತಾಮಣಿ, ಆರ್.ಬಿ ಸತೀಶ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ಹಿರಿಯ ಆರೋಗ್ಯ ಸಹಾಯಕ ನೀಲೇಶ್‌ರಾಜ್ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳನ್ನೊಳಗೊಂಡ ತಂಡ ಸೋಂಕು ಪತ್ತೆಯಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,  ಸ್ಯಾನಿಟೈಜರ್ ಕೈಗೊಂಡು ೧೦೦ ಹಾಗೂ ೨೦೦ ಮೀಟರ್ ವ್ಯಾಪ್ತಿಯಲ್ಲಿ ಕಂಟೈನ್ಮೆಂಟ್ ವಲಯವನ್ನಾಗಿಸಿದೆ.