Thursday, October 22, 2020

ಕೊರೋನಾಗೆ ಎಂಪಿಎಂ ಹಣಕಾಸು ಅಧಿಕಾರಿ ಬಲಿ

ವಿಶ್ವನಾಥ ಮಲಗನ್
ಭದ್ರಾವತಿ: ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆಯ  ಮುಖ್ಯ ಹಣಕಾಸು ಅಧಿಕಾರಿ ವಿಶ್ವನಾಥ ಮಲಗನ್(೫೯) ಗುರುವಾರ ನಿಧನ ಹೊಂದಿದರು.
     ಪತ್ನಿ, ಓರ್ವ ಪುತ್ರ ಹೊಂದಿದ್ದರು. ಹಳೇನಗರದ ವೀರಶೈವ ರುದ್ರಭೂಮಿಯಲ್ಲಿ ಇವರ ಅಂತ್ಯಕ್ರಿಯೆ ನೆರವೇರಿತು. ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ಕಳೆದ ೨ ವಾರದ ಹಿಂದೆ ಅನಾರೋಗ್ಯಕ್ಕೆ ಒಳಗಾಗಿ ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
     ಸರ್ಕಾರ ಜಾರಿಗೊಳಿಸಿದ ೨೦೧೭ ಸ್ವಯಂ ನಿವೃತ್ತಿ ಯೋಜನೆಯಡಿ ಸ್ವಯಂ ನಿವೃತ್ತಿ ಹೊಂದಿದ್ದರು. ನಂತರ ನಿಯೋಜನೆ ಮೇಲೆ ಹುದ್ದೆಯಲ್ಲಿ ಮುಂದುವರೆದಿದ್ದರು. ಕಾರ್ಮಿಕರಿಗೆ ಸ್ವಯಂ ನಿವೃತ್ತಿ ಹಣ ಕೊಡಿಸುವ ಕಾರ್ಯದಲ್ಲಿ ಹೆಚ್ಚಿನ ಶ್ರಮ ವಹಿಸಿದ್ದರು. ಅಲ್ಲದೆ ಹಣಕಾಸಿನ ಇಲಾಖೆಗೆ ಸಂಬಂಧಿಸಿದ ಬಹುತೇಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದರು.
   ಮೃತರ ನಿಧನಕ್ಕೆ ಎಂಪಿಎಂ ಕಾರ್ಖಾನೆಯ ವಿವಿಧ ಕಾರ್ಮಿಕ ಸಂಘಟನೆಗಳು, ಅಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.


Saturday, October 17, 2020

ಕೋವಿಡ್ ಸಂಕಷ್ಟದ ನಡುವೆಯೂ ರು.೪೦೦ ಕೋ. ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಅನುಮೋದನೆ

ಶೀಘ್ರದಲ್ಲಿಯೇ ಕಾಮಗಾರಿಗಳ ಆರಂಭ : ಪತ್ರಿಕಾಗೋಷ್ಠಿಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ವಿವರಣೆ


ಶನಿವಾರ ಶಾಸಕ ಗೃಹ ಕಛೇರಿಯಲ್ಲಿ ನಡೆದ  ಪತ್ರಿಕಾಗೋಷ್ಠಿಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿದರು. 
ಭದ್ರಾವತಿ, ಅ. ೧೭: ಕ್ಷೇತ್ರದಲ್ಲಿ ಒಟ್ಟು ಸುಮಾರು ೪೦೦ ಕೋ. ರು. ವೆಚ್ಚದ ಹಲವು ಅಭಿವೃದ್ದಿ ಕಾರ್ಯಗಳಿಗೆ ಮಂಜೂರಾತಿ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಕಾಮಗಾರಿಗಳು ಶೀಘ್ರದಲ್ಲಿಯೇ ಆರಂಭಗೊಳ್ಳಲಿವೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ತಿಳಿಸಿದರು.
    ಕೋವಿಡ್-೧೯ ಸಂಕಷ್ಟದ ಸಮಯದಲ್ಲೂ ಕ್ಷೇತ್ರದ ಅಭಿವೃದ್ದಿಗೆ ಹೆಚ್ಚಿನ ಕಾಳಜಿ ವಹಿಸಲಾಗಿದೆ. ಬೆಂಗಳೂರಿನಲ್ಲಿ ಕೋವಿಡ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ ನಂತರ ಗುಣಮುಖರಾಗಿದ್ದು, ಬಿಡುಗಡೆಗೊಂಡ ನಂತರ ಬೆಂಗಳೂರಿನಲ್ಲಿಯೇ ಉಳಿದುಕೊಂಡು ಎಲ್ಲಾ ಇಲಾಖೆಗಳಲ್ಲಿ ಸುಮಾರು ೧ ವರ್ಷದಿಂದ ಬಾಕಿ ಉಳಿದಿದ್ದ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳು ಹಾಗು ಸಂಬಂಧಪಟ್ಟ ಸಚಿವರು, ಸಂಸದರನ್ನು ಭೇಟಿ ಮಾಡಿ ಮಂಜೂರಾತಿ ಪಡೆಯುವಲ್ಲಿ ಯಶಸ್ವಿಯಾಗಿದ್ದೇನೆ ಎಂದರು.
    ಬಹುಮುಖ್ಯವಾಗಿ ಗ್ರಾಮೀಣ ಮತ್ತು ನಗರ ಭಾಗಗಳಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರಿನ ಯೋಜನೆಗಳಿಗೆ ಹೆಚ್ಚಿನ ಗಮನ ನೀಡಲಾಗಿದೆ. ಈ ನಡುವೆ ಭದ್ರಾ ನದಿಗೆ ತಡೆ ಗೋಡೆ ನಿರ್ಮಾಣ, ವಸತಿ ನಿರ್ಮಾಣ, ಭದ್ರಾ ಜಲಾಶಯ ಮುಂಭಾಗ ಮಿನಿ ಉದ್ಯಾನವನ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಿಗೂ ಮಂಜೂರಾತಿ ಪಡೆಯಲಾಗಿದೆ ಎಂದರು.
     ಮಂಜೂರಾತಿ ಪಡೆದ ಅಭಿವೃದ್ಧಿ ಕಾಮಗಾರಿಗಳ ವಿವರಗಳು:
    ರು.೨ ಕೋ. ವೆಚ್ಚದಲ್ಲಿ ಕೋಡಿಹಳ್ಳಿ ಬಳಿ ಚರಂಡಿ ನಿರ್ಮಾಣ,  ರು. ೫ ಕೋ. ವೆಚ್ಚದಲ್ಲಿ ಸೀತಾರಾಂಪುರದಿಂದ ತಳ್ಳಿಕಟ್ಟೆ, ಕುಮರಿ ನಾರಾಯಣಪುರ ಮಾರ್ಗವಾಗಿ ೫.೫ ಕಿ.ಮೀ ರಸ್ತೆ ನಿರ್ಮಾಣ,  ರು. ೫ ಕೋ. ವೆಚ್ಚದಲ್ಲಿ ವೀರಾಪುರದಿಂದ ಕೊಮಾರನಹಳ್ಳಿ, ಜಯನಗರ ಕಾಚಗೊಂಡನಹಳ್ಳಿಗೆ ಸಂಪರ್ಕಿಸುವ ೫ ಕಿ.ಮೀ ರಸ್ತೆ ನಿರ್ಮಾಣ, ರು.೪.೨೭ ಲಕ್ಷ ರು. ವೆಚ್ಚದಲ್ಲಿ ಡೈರಿ ಸರ್ಕಲ್ ಬಳಿಯಿಂದ ಮಜ್ಜಿಗೇನಹಳ್ಳಿ, ಕೆರೆಕೋಡಿ ಸರ್ಕಲ್, ಬಿಳಕಿ ರಸ್ತೆ ಮೂಲಕ ನವುಲೆ ಬಸಾಪುರ ಮಾರ್ಗದ ೪.೮ ಕಿ.ಮೀ ರಸ್ತೆ ನಿರ್ಮಾಣ, ರು. ೨ ಕೋ. ವೆಚ್ಚದಲ್ಲಿ ನೆರೆ ಹಾವಳಿಯಿಂದಾಗಿ ಹಾಳಾದ ಕಾಗೆಕೋಡಮಗ್ಗಿ, ತಿಮ್ಲಾಪುರ, ಹೊಸೂರು, ಅರಳಿಹಳ್ಳಿ, ರೆಡ್ಡಿ ಕ್ಯಾಂಪ್ ರಸ್ತೆ ದುರಸ್ತಿ ಕಾಮಗಾರಿಗೆ ಅನುಮೋದನೆ ಪಡೆಯಲಾಗಿದೆ ಎಂದುರು.
    ಸುಮಾರು ರು. ೪೫ ಕೋ. ವೆಚ್ಚದಲ್ಲಿ ಗೋಣಿಬೀಡಿನಿಂದ ಕಂಬದಾಳು ಹೊಸೂರು ಮೂಲಕ ೪೫ ಕೆರೆಗಳಿಗೆ ನೀರು ತುಂಬಿಸುವ ಬೃಹತ್ ಯೋಜನೆ,  ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಈ ಹಿಂದೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ತಡೆ ಹಿಡಿದಿದ್ದ ೮ ಕೋ. ರು. ನುದಾನ, ರು. ೯.೯೯ ಕೋ. ವೆಚ್ಚದಲ್ಲಿ ಗೊಂದಿ ಸೇತುವೆಯಿಂದ ಕರಕುಚ್ಚಿ ಮಾರ್ಗದ ನಾಲೆಗೆ ಸೇತುವೆ ನಿರ್ಮಾಣ, ರು. ೨ ಕೋ. ವೆಚ್ಚದಲ್ಲಿ ಭದ್ರಾ ಜಲಾಶಯ ಮುಂಭಾಗದಲ್ಲಿ ಮಿನಿ ಉದ್ಯಾನವನ ನಿರ್ಮಾಣ, ರು.೪.೫ ಕೋ. ವೆಚ್ಚದಲ್ಲಿ ದೊಣಬಘಟ್ಟ ಏತ ನೀರಾವರಿ ಯೋಜನೆ, ರು.೨೧.೦೬ ಕೋ. ವೆಚ್ಚದಲ್ಲಿ ನಗರಸಭೆ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಬಾಕಿ ಉಳಿದಿರುವ ಯುಜಿಡಿ ಕಾಮಗಾರಿ,  ರು.೨೫.೪೦ ಕೋ. ವೆಚ್ಚದಲ್ಲಿ ದೊಣಬಘಟ್ಟದಿಂದ ಬಾಬಳ್ಳಿ, ಹೊಳೆಹೊನ್ನೂರು ಸೇತುವೆ ನಿರ್ಮಾಣ, ರು.೧೮ ಕೋ. ಹೆಚ್ಚುವರಿ ಅನುದಾನದಲ್ಲಿ ಸಿದ್ದರೂಢನಗರದ ಅಭಿವೃದ್ಧಿ, ರು.೧.೨೦ ಕೋ. ವೆಚ್ಚದಲ್ಲಿ ಮಾರುತಿನಗರದ ಬಳಿ ಇರುವ ಸೇತುವೆ ಅಗಲೀಕರಣ ಮತ್ತು ರು. ೭೦ ಲಕ್ಷ ವೆಚ್ಚದಲ್ಲಿ ಹೊಳೆಹೊನ್ನೂರು ಕಾಗೆಕೋಡಮಗ್ಗಿ ಬಳಿಯಲ್ಲಿ ರಸ್ತೆ ಅಭಿವೃದ್ಧಿಗೆ ಅನುಮೋದನೆ ಪಡೆಯಲಾಗಿದೆ ಎಂದರು.
    ರು. ೬೦ ಲಕ್ಷ ವೆಚ್ಚದಲ್ಲಿ ಬಾರಂದೂರು ಕುಂಬಾರಗುಂಡಿ, ಬೊಮ್ಮೇನಹಳ್ಳಿಗೆ ಸಂಪರ್ಕಿಸುವ ಕಾಂಕ್ರಿಟ್ ರಸ್ತೆ ಕಾಮಗಾರಿ, ರು.೬೫ ಲಕ್ಷ ವೆಚ್ಚದಲ್ಲಿ ಕೊಮಾರನಹಳ್ಳಿ ಕೆರೆ ಅಭಿವೃದ್ಧಿ, ರು. ೩೫ ಲಕ್ಷ ವೆಚ್ಚದಲ್ಲಿ ಸಿರಿಯೂರು-ಕಲ್ಲಹಳ್ಳಿ-ಹಾಗಲಮನೆ ರಸ್ತೆಯಲ್ಲಿ ಕಿರು ಸೇತುವೆ ಮರು ನಿರ್ಮಾಣ,
    ರು. ೨ ಕೋ. ವೆಚ್ಚದಲ್ಲಿ ನಗರಸಭೆ ವ್ಯಾಪ್ತಿಯ ಜಯಶ್ರೀ ಸರ್ಕಲ್, ಜನ್ನಾಪುರ, ಮಲ್ಲೇಶ್ವರ ಸಮುದಾಯ ಭವನ, ಜಿಂಕ್‌ಲೈನ್ ಮಾರ್ಗವಾಗಿ ಪಿಡಬ್ಲ್ಯೂಡಿ ಇಲಾಖೆಯಿಂದ ರಸ್ತೆ ಅಭಿವೃದ್ಧಿ,  ಒಟ್ಟು ರು. ೬೦ ಲಕ್ಷ ವೆಚ್ಚದಲ್ಲಿ ನರಸೀಪುರ ಮತ್ತು ಕಾರೇಹಳ್ಳಿಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ, ರು.೨೦ ಲಕ್ಷ ವೆಚ್ಚದಲ್ಲಿ ಎರೆಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿ, ರು.೧ ಕೋ. ವೆಚ್ಚದಲ್ಲಿ ನೀರಾವರಿ ಇಲಾಖೆಯಿಂದ ಭದ್ರಾ ಕಾಲೋನಿ, ಕಬಳಿಕಟ್ಟೆ, ಗುಂಡಪ್ಪ ಕ್ಯಾಂಪ್‌ವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಹಾಗು ರು. ೧೦ ಕೋ. ವೆಚ್ಚದಲ್ಲಿವಿಶ್ವಸ್ವರೂಪಿಣಿ ಮಾರಿಯಮ್ಮ ದೇವಾಸ್ಥಾನದ ಬಳಿ ಭದ್ರಾ ನದಿಗೆ ತಡೆಗೋಡೆ ನಿರ್ಮಾಣ ಸೇರಿದಂತೆ ಇನ್ನಿತರ ಕಾಮಗಾರಿಗಳಿಗೆ ಅನುಮೋದನೆ ಪಡೆಯಲಾಗಿದೆ ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಮುಖಂಡರಾದ ಬಾಲಕೃಷ್ಣ, ಬಿ.ಟಿ ನಾಗರಾಜ್, ಅಣ್ಣೋಜಿರಾವ್, ಚನ್ನಪ್ಪ, ರಮೇಶ್‌ನಾಯಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಪತ್ರಿಕಾ ವಿತರಕ ಭಾನುಪ್ರಕಾಶ್ ನಿಧನ


ಭಾನುಪ್ರಕಾಶ್
ಭದ್ರಾವತಿ, ಅ. ೧೭: ನಗರದ ಹೊಸಮನೆ ನಿವಾಸಿ, ದಿನ ಪತ್ರಿಕೆಗಳ ವಿತರಕ ಭಾನುಪ್ರಕಾಶ್(೭೦) ಶುಕ್ರವಾರ ರಾತ್ರಿ ನಿಧನ ಹೊಂದಿದರು.
      ಪತ್ನಿ, ಒಂದು ಹೆಣ್ಣು, ಇಬ್ಬರು ಗಂಡು ಮಕ್ಕಳು, ಮೊಮ್ಮಕ್ಕಳನ್ನು ಹೊಂದಿದ್ದರು. ಸುಮಾರು ೨೦ಕ್ಕೂ ಹೆಚ್ಚು ವರ್ಷಗಳಿಂದ ಪತ್ರಿಕಾ ವಿತರಕರಾಗಿ ಸೇವೆ ಸಲ್ಲಿಸುತ್ತಿದ್ದರು. ಕೆಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರ ನಿಧನಕ್ಕೆ ಪತ್ರಿಕಾವಿತರಕರು ಸಂತಾಪ ಸೂಚಿಸಿದ್ದಾರೆ.

ನಿವೃತ್ತ ಸೈನಿಕರನ್ನು ಗುರುತಿಸುವ ಕಾರ್ಯ ಶ್ಲಾಘನೀಯ : ಸುಬೇದಾರ್ ಎಲ್.ಡಿ ಅಶೋಕ್

ಗ್ರಾಮ ದೇವತೆ ಶ್ರೀ ಹಳದಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ನಾಡಹಬ್ಬಕ್ಕೆ ಚಾಲನೆ

ಭದ್ರಾವತಿ ನಗರಸಭೆ ವತಿಯಿಂದ ೯ ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ಸರಳ ದಸರಾ ಮಹೋತ್ಸವಕ್ಕೆ ಹಳೇನಗರದ ಗ್ರಾಮ ದೇವತೆ ಶ್ರೀ ಹಳದಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಮಾಜಿ ಸೈನಿಕರ ಸಂಘದ ತಾಲೂಕು ಅಧ್ಯಕ್ಷ, ಸುಬೇದಾರ್ ಎಲ್.ಡಿ ಅಶೋಕ್ ಚಾಲನೆ ನೀಡಿದರು.
ಭದ್ರಾವತಿ, ಅ. ೧೭:  ದೇಶ ರಕ್ಷಣೆಯಲ್ಲಿ ತೊಡಗಿ ನಿವೃತ್ತಿ ಹೊಂದಿರುವ ಸೈನಿಕರನ್ನು ಗುರುತಿಸುವ ಜೊತೆಗೆ ದಸರಾ ಉದ್ಘಾಟನೆಗೆ ಆಹ್ವಾನಿಸುವ ಮೂಲಕ ಅವರಿಗೆ ಗೌರವ ನೀಡುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರವಾಗಿದೆ ಎಂದು ಮಾಜಿ ಸೈನಿಕರ ಸಂಘದ ತಾಲೂಕು ಅಧ್ಯಕ್ಷ, ಸುಬೇದಾರ್ ಎಲ್.ಡಿ ಅಶೋಕ್ ಪ್ರಶಂಸೆ ವ್ಯಕ್ತಪಡಿಸಿದರು.
        ಅವರು ಶನಿವಾರ ಹಳೇನಗರದ ಗ್ರಾಮ ದೇವತೆ ಶ್ರೀ ಹಳದಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ನಗರಸಭೆ ವತಿಯಿಂದ ೯ ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ಸರಳ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
       ಮಾಜಿ ಸೈನಿಕರನ್ನು ನಿರ್ಲಕ್ಷಿಸುತ್ತಿರುವ ಇಂದಿನ ಸಂದರ್ಭದಲ್ಲಿ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಅವರನ್ನು ಗುರುತಿಸುವ ಮೂಲಕ ದಸರಾ ಉದ್ಘಾಟನೆಗೆ ಅವಕಾಶ ಮಾಡಿಕೊಟ್ಟಿರುವುದು ತಾಲೂಕಿನ ಎಲ್ಲಾ ಮಾಜಿ ಸೈನಿಕರಿಗೆ ಸಲ್ಲುವ ಗೌರವಾಗಿದೆ. ಪ್ರತಿಯೊಬ್ಬರ ರಕ್ಷಣೆ ಇಂದು ಅಗತ್ಯವಾಗಿದ್ದು, ನಾಡಹಬ್ಬ ದಸರಾ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.
       ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ತಾಯಿ ಚಾಮುಂಡೇಶ್ವರಿ ದೇವಿ ಎಲ್ಲರನ್ನು ರಕ್ಷಿಸುವ ಜೊತೆಗೆ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಹೆಚ್ಚಿನ ರೀತಿಯಲ್ಲಿ ನಡೆಯುವಂತಾಗಲಿ ಎಂದು ಪ್ರಾರ್ಥಿಸಿದರು.
       ವೇದಿಕೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಡಾ. ನಾಗೇಂದ್ರ ಹೊನ್ನಾಳಿ, ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್, ತಹಸೀಲ್ದಾರ್ ಡಾ. ಎನ್.ಜೆ ನಾಗರಾಜ್, ಸುಬೇದಾರ್ ಬೋರೇಗೌಡ, ಹಲ್ದಾರ್‌ಗಳಾದ ವಿನೋದ್‌ಪೂಜಾರಿ, ಪ್ರಸಾದ್, ನಾಯಕ್ ರಾಜೇಶ್, ಮಾಜಿ ಸೈನಿಕ ಗುಳ್‌ಗುಳೇ, ಮುಖಂಡರಾದ ನರಸಿಂಹಚಾರ್, ರಮಾಕಾಂತ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
     ನಗರಸಭೆ ಪೌರಾಯುಕ್ತ ಮನೋಹರ್ ಸ್ವಾಗತಿಸಿದರು. ಕಂದಾಯಾಧಿಕಾರಿ ರಾಜ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮೊದಲು ದಸರಾ ಉದ್ಘಾಟನೆಗೆ ಆಗಮಿಸಿದ ಸುಬೇದಾರ್ ಎಲ್.ಡಿ ಅಶೋಕ್‌ರವರನ್ನು ಸ್ವಾಗತಿಸಲಾಯಿತು. ಶ್ರೀ ಹಳದಮ್ಮ ದೇವಸ್ಥಾನದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.


ಭದ್ರಾವತಿ ನಗರಸಭೆ ವತಿಯಿಂದ ೯ ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ಸರಳ ದಸರಾ ಮಹೋತ್ಸವದಲ್ಲಿ ಕೊರೋನಾ ವಾರಿಯರ್ಸ್‌ಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
   ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಮಹಿಳಾ ಸಂಘಟನೆಗಳ ಪ್ರಮುಖರು, ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ಕೊರೋನಾ ವಾರಿಯರ್ಸ್‌ಗಳಾದ ಹಳೇನಗರ ಪೊಲೀಸ್ ಠಾಣಾಧಿಕಾರಿ ಶ್ರೀನಿವಾಸ್, ಹಿರಿಯ ಆರೋಗ್ಯ ನಿರೀಕ್ಷಕ ನಿಲೇಶ್‌ರಾಜ್ ಸೇರಿದಂತೆ ಅಂಗನವಾಡಿ ಹಾಗು ಆಶಾಕಾರ್ಯಕರ್ತೆಯರನ್ನು ಸನ್ಮಾನಿಸಿ ಗೌರವಿಸಲಾಯಿತು.

Friday, October 16, 2020

ಹಟ್ಟಿ ಚಿನ್ನದ ಗಣಿ ಕಂಪನಿ ನಿರ್ದೇಶಕರಾಗಿ ಕೂಡ್ಲಿಗೆರೆ ಎಸ್. ಹಾಲೇಶ್ ನೇಮಕ

ಕೂಡ್ಲಿಗೆರೆ ಎಸ್. ಹಾಲೇಶ್
ಭದ್ರಾವತಿ, ಅ. ೧೬: ತಾಲೂಕಿನ ಕೂಡ್ಲಿಗೆರೆ ಗ್ರಾಮದ ನಿವಾಸಿ, ಬಿಜೆಪಿ ಪಕ್ಷದ ಹಿರಿಯ ಮುಖಂಡ ಕೂಡ್ಲಿಗೆರೆ ಎಸ್ ಹಾಲೇಶ್‌ರವರನ್ನು ಹಟ್ಟಿ ಚಿನ್ನದ ಗಣಿ ಕಂಪನಿ ಆಡಳಿತ ಮಂಡಳಿಯ ಅಧಿಕಾರೇತರ ನಿರ್ದೇಶಕರನ್ನಾಗಿ ಸರ್ಕಾರ ನೇಮಕಗೊಳಿಸಿ ಆದೇಶ ಹೊರಡಿಸಿದೆ.
      ಕೂಡ್ಲಿಗೆರೆ ಹಾಲೇಶ್‌ರವರು ಹಲವಾರು ವರ್ಷಗಳಿಂದ ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸುವ ಜೊತೆಗೆ ಪಕ್ಷದಲ್ಲಿ ಹಲವಾರು ಹುದ್ದೆಗಳನ್ನು ಅಲಂಕರಿಸಿದ್ದರು. ಅಲ್ಲದೆ ರೋಟರಿ ಸೇರಿದಂತೆ ಹಲವಾರು ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದರು. ಇದೀಗ ಹಟ್ಟಿ ಚಿನ್ನದ ಗಣಿ ಕಂಪನಿ ಆಡಳಿತ ಮಂಡಳಿಯ ಅಧಿಕಾರೇತರ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.




೯ ದಿನಗಳ ದಸರಾ ಆಚರಣೆಗೆ ನಗರಾಡಳಿತ ಸಿದ್ದತೆ : ಶಾಸಕರಿಗೆ ಆಹ್ವಾನ

ನಾಡಹಬ್ಬ ದಸರಾ ಆಚರಣೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಪೌರಾಯುಕ್ತ ಮನೋಹರ್ ಆಮಂತ್ರಣ ನೀಡುವ ಮೂಲಕ ಆಹ್ವಾನಿಸಿದರು.
ಭದ್ರಾವತಿ, ಅ. ೧೬: ಕೊರೋನಾ ಸಂಕಷ್ಟದ ನಡುವೆಯೂ ೯ ದಿನಗಳ ನಾಡಹಬ್ಬ ದಸರಾ ಆಚರಣೆಗೆ ನಗರಸಭೆ ಆಡಳಿತ ಮುಂದಾಗಿದ್ದು, ಮಾಜಿ ಸೈನಿಕ ಸುಬೇದಾರ್ ಎಲ್.ಡಿ ಅಶೋಕ್ ಅ.೧೭ರ ಶನಿವಾರ ಚಾಲನೆ ನೀಡಲಿದ್ದಾರೆ.
      ಹಳೇನಗರದ ಗ್ರಾಮ ದೇವತೆ ಶ್ರೀ ಹಳದಮ್ಮ ದೇವಸ್ಥಾನದ  ಆವರಣದಲ್ಲಿ ಬೆಳಿಗ್ಗೆ ೧೦ ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ನಾಡ ದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ಪೂಜೆಯೊಂದಿಗೆ ಆಚರಣೆಗೆ ಚಾಲನೆ ದೊರೆಯಲಿದ್ದು, ಈ ನಡುವೆ ನಗರದ ವಿವಿಧ ದೇವಾಲಯಗಳಲ್ಲಿ ೯ ದಿನಗಳ ಆಚರಣೆಗೆ ಸಕಲ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ. ಬಹುತೇಕ ದೇವಾಲಯಗಳ ಸಮಿತಿಗಳು ಸರ್ಕಾರದ ಮಾರ್ಗಸೂಚಿಗಳಂತೆ ಸರಳ ಆಚರಣೆಗೆ ಮುಂದಾಗಿವೆ.
        ಶಾಸಕರಿಗೆ ಆಹ್ವಾನ:  
    ನಾಡಹಬ್ಬ ದಸರಾ ಆಚರಣೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಪೌರಾಯುಕ್ತ ಮನೋಹರ್ ಆಮಂತ್ರಣ ನೀಡುವ ಮೂಲಕ ಆಹ್ವಾನಿಸಿದರು.
ನಗರಸಭೆ ಆಡಳಿತದ ಪರವಾಗಿ ಶಾಸಕರ ನಿವಾಸಕ್ಕೆ ತೆರಳಿದ ಮನೋಹರ್ ನೇತೃತ್ವದ ತಂಡ ದಸರಾ ಆಚರಣೆ ಯಶಸ್ವಿಗೆ ಹೆಚ್ಚಿನ ಸಹಕಾರ ನೀಡುವಂತೆ ಕೋರಿತು.
       ಕಂದಾಯಾಧಿಕಾರಿ ರಾಜ್‌ಕುಮಾರ್, ಲೇಖಾಧಿಕಾರಿ ಸೈಯದ್  ಮಹಬೂಬ್ ಆಲಿ, ಮಂಜುನಾಥ್, ಸತ್ಯನಾರಾಯಣ, ನರಸಿಂಹಚಾರ್, ರಮಾಕಾಂತ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮನೆ ಬಾಡಿಗೆ ಹೆಚ್ಚಳ, ಕುಡಿಯುವ ನೀರು ಅಸಮರ್ಪಕ ಪೂರೈಕೆ ವಿರುದ್ಧ ಪ್ರತಿಭಟನೆ

ವಿಐಎಸ್‌ಎಲ್ ನಗರಾಡಳಿತದಿಂದ ಬೇಡಿಕೆ ಈಡೇರಿಕೆಗೆ ಭರವಸೆ

ಮನೆ ಬಾಡಿಗೆ ಹೆಚ್ಚಳ, ಅಸಮರ್ಪಕ ಕುಡಿಯುವ ನೀರು ಪೂರೈಕೆ ಸೇರಿದಂತೆ  ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ವಿಫಲವಾಗಿರುವ ಭದ್ರಾವತಿ ವಿಐಎಸ್‌ಎಲ್ ನಗರಾಡಳಿತ ವಿರುದ್ಧ ನಿವೃತ್ತ ಕಾರ್ಮಿಕರು ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು
ಭದ್ರಾವತಿ, ಅ. ೧೬ :  ಮನೆ ಬಾಡಿಗೆ ಹೆಚ್ಚಳ, ಅಸಮರ್ಪಕ ಕುಡಿಯುವ ನೀರು ಪೂರೈಕೆ ಸೇರಿದಂತೆ  ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ವಿಫಲವಾಗಿರುವ ವಿಐಎಸ್‌ಎಲ್ ನಗರಾಡಳಿತ ವಿರುದ್ಧ ನಿವೃತ್ತ ಕಾರ್ಮಿಕರು ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
         ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡರು, ಕಾರ್ಖಾನೆಯಲ್ಲಿ ಸುಮಾರು ೩೦-೪೦ ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಕಾರ್ಮಿಕರು ವಾಸಿಸುತ್ತಿರುವ ಮನೆಗಳಿಗೆ  ಅಧಿಕ ಬಾಡಿಗೆ ನಿಗದಿಪಡಿಸಿರುವುದು ಸರಿಯಲ್ಲ.  ವಾಸಕ್ಕೆ ಯೋಗ್ಯವಲ್ಲದ ಹಾಳಾದ ಮನೆಗಳನ್ನು ಸುಮಾರು ೫-೬ ಲಕ್ಷ ರು. ವೆಚ್ಚದಲ್ಲಿ ದುರಸ್ತಿ ಪಡಿಸಿಕೊಂಡು ವಾಸಿಸುತ್ತಿದ್ದು,  ನಿವೃತ್ತಿ ಹಣವನ್ನು  ಬಹುತೇಕ ವ್ಯಯ ಮಾಡಿದ್ದಾರೆ.  ಇದೀಗ  ಇದೀಗ ಶೇಕಡ ನೂರರಷ್ಟು ಮನೆ ಬಾಡಿಗೆ ಹೆಚ್ಚಳ ಮಾಡಿರುವುದು ನಿವೃತ್ತ ಕಾರ್ಮಿಕರನ್ನು ಮತ್ತಷ್ಟು  ಸಂಕಷ್ಟಕ್ಕೆ ತಳ್ಳಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
        ಈ ನಡುವೆ  ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಸುತ್ತಿಲ್ಲ.  ಬೆಳಿಗ್ಗೆ ಮಾತ್ರ ನೀರು ಪೂರೈಕೆ ಮಾಡಲಾಗುತ್ತಿದೆ.  ಇದರಿಂದಾಗಿ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ. ಕಾರ್ಖಾನೆಯ ನಗರಾಡಳಿತ ಯಾವುದೇ ರೀತಿಯಲ್ಲಿ ಪೂರಕವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.


ಮನೆ ಬಾಡಿಗೆ ಹೆಚ್ಚಳ, ಅಸಮರ್ಪಕ ಕುಡಿಯುವ ನೀರು ಪೂರೈಕೆ ಸೇರಿದಂತೆ  ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ವಿಫಲವಾಗಿರುವ ಭದ್ರಾವತಿ ವಿಐಎಸ್‌ಎಲ್ ನಗರಾಡಳಿತ ವಿರುದ್ಧ ನಿವೃತ್ತ ಕಾರ್ಮಿಕರು ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿದರು.
      ಶಾಸಕ ಬಿ.ಕೆ ಸಂಗಮೇಶ್ವರ,  ಸಮಿತಿ ಅಧ್ಯಕ್ಷ ಬಾಲಕೃಷ್ಣ, ಡಿಎಸ್‌ಎಸ್ ಮುಖಂಡ ಸತ್ಯ, ಮುಖಂಡರಾದ ಗೋವಿಂದ ಸ್ವಾಮಿ, ಕಾಂತರಾಜು, ವಿಲ್ಸನ್ ಬಾಬು, ಕಬಡ್ಡಿ ಕೃಷ್ಣೇಗೌಡ, ಎನ್, ರಾಮಕೃಷ್ಣ, ಡಿ. ನರಸಿಂಹಮೂರ್ತಿ, ಎಸ್.ಎಸ್ ಭೈರಪ್ಪ, ಮುಕುಂದಯ್ಯ, ವೆಂಕಟೇಶ್, ಕೀರ್ತಿ ಗುಜ್ಜಾರ್, ಚನ್ನಪ್ಪ, ವಿಶ್ವನಾಥಗಾಯಕ್‌ವಾಡ್, ಗಿರಿನಾಯ್ಡು, ಎಎಪಿ ಪಕ್ಷದ ಪ್ರಮುಖರಾದ ಜಿಲ್ಲಾಧ್ಯಕ್ಷ ರವಿಕುಮಾರ್, ಪರಮೇಶ್ವರಾಚಾರ್, ಜಯಶ್ರೀ ವೃತ್ತ ಹಿರಿಯ ನಾಗರೀಕರ ಸಂಘದ ಅಧ್ಯಕ್ಷ ದೊಡ್ಡಯ್ಯ, ಲಾಜರ್, ವಿಐಎಸ್‌ಎಲ್ ಕಾರ್ಮಿಕ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಪದಾಧಿಕಾರಿಗಳು ಸೇರಿದಂತೆ ನಿವೃತ್ತ ಕಾರ್ಮಿಕರ ಕುಟುಂಬ ವರ್ಗದವರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.
      ಪ್ರತಿಭಟನೆಗೆ ಮಣಿದ ವಿಐಎಸ್‌ಎಲ್ ನಗರಾಡಳಿತ:
      ಪ್ರತಿಭಟನೆ ಹೆಚ್ಚಾದ ಹಿನ್ನಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಕಾರ್ಖಾನೆ ಹಿರಿಯ ಅಧಿಕಾರಿಗಳು ಉಕ್ಕು ಪ್ರಾಧಿಕಾರದ ಮುಖ್ಯ ಆಡಳಿತ ಕಛೇರಿ ಅಧಿಕಾರಿಗಳೊಂದಿಗೆ ಚರ್ಚಿಸುವ  ಮೂಲಕ ಮುಂದಿನ ೬ವರ್ಷಗಳ ವರೆಗೆ ಯಾವುದೇ ಕಾರಣಕ್ಕೂ ಬಾಡಿಗೆ ಹೆಚ್ಚಳ ಮಾಡುವುದಿಲ್ಲ. ಮುಂದಿನ ಒಂದು ವಾರದ ನಂತರ ಸಮರ್ಪಕವಾಗಿ ನೀರು ಪೂರೈಕೆ ಮಾಡುವುದಾಗಿ ಭರವಸೆ ನೀಡಿದರು.