Thursday, December 3, 2020

ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಕನಕಶ್ರೀ ಚೇತನ ಪತಂಜಲಿ ರತ್ನ ಪ್ರಶಸ್ತಿ

ಭದ್ರಾವತಿ ಕ್ಷೇತ್ರದಲ್ಲಿ ೩ ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಎಲ್ಲಾ ಧರ್ಮ, ಜಾತಿ, ಜನಾಂಗದವರೊಂದಿಗೆ ಗುರುತಿಸಿಕೊಂಡಿರುವ ಬಿ.ಕೆ ಸಂಗಮೇಶ್ವರ್‌ರವರ ರಾಜಕೀಯ ಸೇವೆಯನ್ನು ಪರಿಗಣಿಸಿ ಕನಕಶ್ರೀ ಚೇತನ ಪತಂಜಲಿ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಭದ್ರಾವತಿ, ಡಿ. ೩: ಕ್ಷೇತ್ರದಲ್ಲಿ ೩ ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಎಲ್ಲಾ ಧರ್ಮ, ಜಾತಿ, ಜನಾಂಗದವರೊಂದಿಗೆ ಗುರುತಿಸಿಕೊಂಡಿರುವ ಬಿ.ಕೆ ಸಂಗಮೇಶ್ವರ್‌ರವರ ರಾಜಕೀಯ ಸೇವೆಯನ್ನು ಪರಿಗಣಿಸಿ ಕನಕಶ್ರೀ ಚೇತನ ಪತಂಜಲಿ ರತ್ನ ಪ್ರಶಸ್ತಿ ನೀಡಲಾಗಿದೆ.
      ಶಿವಮೊಗ್ಗ ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ ಮತ್ತು ನಗರದ ಕನಕ ಯುವಪಡೆ ವತಿಯಿಂದ ೫೩೩ನೇ ಶ್ರೀ ಕನಕದಾಸರ ಜಯಂತ್ಯೋತ್ಸವ ಮತ್ತು ೨೫ನೇ ವರ್ಷದ ಬೆಳ್ಳಿ ಹಬ್ಬ ಸಂಭ್ರಮೋತ್ಸವದ ಅಂಗವಾಗಿ ರಾಜ್ಯಮಟ್ಟದ ಕನಕ ಕಥಾಕೀರ್ತನ ಮಹೋತ್ಸವ ಸಮ್ಮೇಳನ, ತರಬೇತಿ ಕಾರ್ಯಾಗಾರ ಹಾಗೂ ಕನಕದಾಸರ ಗೀತಾಗಾಯನ, ಹಾಲುಮತ ಸಂಸ್ಕೃತಿ, ಕನಕ ಕಲಾ ವೈಭವ, ಕನಕಶ್ರೀ ಚೇತನ ಪತಂಜಲಿ ರತ್ನ ಮತ್ತು ವಿಶ್ವಕನ್ನಡ ಕಣ್ಮಣಿ ರಾಜ್ಯ ಪ್ರಶಸ್ತಿ ಸಮಾರಂಭದಲ್ಲಿ ಶಾಸಕರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
    ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ ಕಾರ್ಯದರ್ಶಿ ಪತಂಜಲಿ ಜೆ ನಾಗರಾಜ್ ಹಾಗೂ ಕನಕ ಯುವ ಪಡೆ ಉಪಾಧ್ಯಕ್ಷ ಕೆ. ಕೇಶವ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಜನ್ನಾಪುರದ ವಿವಿಧೆಡೆ ಸಿಮೆಂಟ್ ರಸ್ತೆ, ಬಾಕ್ಸ್ ಡ್ರೈನೇಜ್ ಕಾಮಗಾರಿಗಳಿಗೆ ಗುದ್ದಲಿ ಪೂಜೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಜನ್ನಾಪುರದ ವಿವಿಧೆಡೆ ಶಾಸಕ ಬಿ.ಕೆ ಸಂಗಮೇಶ್ವರ್ ಸಿಮೆಂಟ್ ರಸ್ತೆ ಮತ್ತು ಬಾಕ್ಸ್ ಡ್ರೈನೇಜ್ ಕಾಮಗಾರಿಗೆ ಗುರುವಾರ ಗುದ್ದಲಿ ಪೂಜೆ ನೆರವೇರಿಸಿದರು.
ಭದ್ರಾವತಿ, ಡಿ. ೩: ನಗರಸಭೆ ವ್ಯಾಪ್ತಿಯ ಜನ್ನಾಪುರದ ವಿವಿಧೆಡೆ ಶಾಸಕ ಬಿ.ಕೆ ಸಂಗಮೇಶ್ವರ್ ಸಿಮೆಂಟ್ ರಸ್ತೆ ಮತ್ತು ಬಾಕ್ಸ್ ಡ್ರೈನೇಜ್ ಕಾಮಗಾರಿಗೆ ಗುರುವಾರ ಗುದ್ದಲಿ ಪೂಜೆ ನೆರವೇರಿಸಿದರು.
      ೧.೭೦ ಕೋ.ರು ವೆಚ್ಚದಲ್ಲಿ ಜನ್ನಾಪುರ ಜಯಶ್ರೀ ವೃತ್ತದಿಂದ ಗಣಪತಿ ದೇವಸ್ಥಾನದವರೆಗೆ ಮತ್ತು ೧.೮೪ ಕೋ. ರು ವೆಚ್ಚದಲ್ಲಿ ಜನ್ನಾಪುರ ಮಹಾಗಣಪತಿ ದೇವಸ್ಥಾನದಿಂದ ಶ್ರೀ ಮಲ್ಲೇಶ್ವರ ಸಮುದಾಯ ಭವನ ಸಮೀಪದ ಶ್ರೀ ಈಶ್ವರ ದೇವಸ್ಥಾನದವರೆಗೆ ಸಿಮೆಂಟ್ ರಸ್ತೆ ನಿರ್ಮಾಣ, ೫೩ ಲಕ್ಷ ರು. ವೆಚ್ಚದಲ್ಲಿ ವೆಲೂರುಶೆಡ್‌ನಿಂದ ಜಿಂಕ್‌ಲೈನ್‌ವರೆಗೆ ಸಿವೆಂಟ್ ರಸ್ತೆ ಮತ್ತು ಬಾಕ್ಸ್ ಚರಂಡಿ ನಿರ್ಮಾಣ ಹಾಗು ೧೩ ಲಕ್ಷ ರು. ವೆಚ್ಚದಲ್ಲಿ ಜನ್ನಾಪುರ ಮಹಾಗಣಪತಿ ದೇವಸ್ಥಾನದಿಂದ ಬಸವೇಶ್ವರ ಶಾಲೆವರೆಗೆ ಸಿಮೆಂಟ್ ರಸ್ತೆ ನಿರ್ಮಾಣ ಹಾಗು ೬೮ ಲಕ್ಷ ರು. ವೆಚ್ಚದಲ್ಲಿ ಜನ್ನಾಪುರ ಕೆ.ಸಿ ಬ್ಲಾಕ್‌ನಿಂದ ಹಾಲಪ್ಪಶೆಡ್‌ವರೆಗೆ ಸಿಮೆಂಟ್ ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.
     ಪೌರಾಯುಕ್ತ ಮನೋಹರ್, ಮುಖಂಡರಾದ ಬಾಲಕೃಷ್ಣ, ಲೋಕೇಶ್, ಚನ್ನಪ್ಪ, ಕಾಂತರಾಜ್, ಆರ್. ವೇಣುಗೋಪಾಲ್, ಆಟೊ ಶಂಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Wednesday, December 2, 2020

ಡಿ.೩ರಂದು ವಿಶ್ವ ವಿಕಲಚೇತನರ ದಿನಾಚರಣೆ

ಭದ್ರಾವತಿ, ಡಿ. ೨: ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗು ಬ್ಲಾಕ್ ಯೋಜನಾ ಸಮನ್ವಯಾಧಿಕಾರಿಗಳ ಕಛೇರಿ ವತಿಯಿಂದ ಡಿ.೩ರಂದು ಬೆಳಿಗ್ಗೆ ೯ ಗಂಟೆಗೆ ಹಳೇನಗರದ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.
    ೬ ರಿಂದ ೧೬ ವರ್ಷ ವಯೋಮಾನದ (೧ ರಿಂದ ೧೦ನೇ ತರಗತಿ) ವಿಕಲಚೇತನ ಮಕ್ಕಳಿಗೆ ಕ್ರೀಡಾಕೂಟ ಮತ್ತು ಸಾಂಸ್ಕರತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ೧ ರಿಂದ ೫ನೇ ತರಗತಿ ಮಕ್ಕಳಿಗೆ ಕಪ್ಪೆ ಓಟ ಮತ್ತು ೧೦೦ ಮೀ. ಓಟ, ೬ ರಿಂದ ೧೦ನೇ ತರಗತಿ ಮಕ್ಕಳಿಗೆ ಮಡಿಕೆ ಒಡೆಯುವುದು, ಮ್ಯೂಸಿಕಲ್ ಚೇರ್, ಚಮಚದಲ್ಲಿ ನಿಂಬೆ ಹಣ್ಣು ಇಟ್ಟುಕೊಂಡು ಹಲ್ಲಿನಲ್ಲಿ ಕಚ್ಚಿಕೊಂಡು ಓಡುವ ಕ್ರೀಡಾ ಸ್ಪರ್ಧೆಗಳನ್ನು ಹಾಗು ೧ ರಿಂದ ೫ನೇ ತರಗತಿ ಮಕ್ಕಳಿಗೆ ಛದ್ಮ ವೇಷ, ದೇಶ ಭಕ್ತಿ ಗೀತೆ, ೬ ರಿಂದ ೧೦ನೇ ತರಗತಿ ಮಕ್ಕಳಿಗೆ ಜಾನಪದ ಗೀತೆ, ಚಿತ್ರಕಲೆ ಮತ್ತು ಆಶುಭಾಷಣೆ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಅಲ್ಲದೆ ವಿಕಲಚೇತನ ಮಕ್ಕಳ ಪೋಷಕರಿಗೂ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
    ಕೋವಿಡ್-೧೯ರ ಹಿನ್ನಲೆಯಲ್ಲಿ ನಗರ ಪ್ರದೇಶ ವ್ಯಾಪ್ತಿಯ ವಿಕಲಚೇತನ ಮಕ್ಕಳು ಮಾತ್ರ ಭಾಗವಹಿಸಹುದಾಗಿದೆ. ಉಳಿದಂತೆ ಗ್ರಾಮಾಂತರ ಭಾಗದ ಮಕ್ಕಳಿಗೆ ಆಯಾ ಶಾಲೆಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಡಿ.೩ರಂದು ರೈತ ಸಂಘದಿಂದ ಪ್ರತಿಭಟನೆ

ಭದ್ರಾವತಿ, ಡಿ. ೨: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿಗೆ ಸಂಬಂಧಿಸಿದ ೩ ರೈತ ವಿರೋಧಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಚಳುವಳಿ ಬೆಂಬಲಿಸಿ ಡಿ.೩ರಂದು ಬೆಳಿಗ್ಗೆ ೧೦ ಗಂಟೆಗೆ ನಗರದ ರಂಗಪ್ಪ ವೃತ್ತದಲ್ಲಿ ಶಿವಮೊಗ್ಗ ಜಿಲ್ಲಾ ರೈತ ಸಂಘ ಹಸಿರು ಸೇನೆ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
     ರೈತರು, ಕಾರ್ಮಿಕರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ವಿ ವೀರೇಶ್ ಕೋರಿದ್ದಾರೆ.  .

ರಾಷ್ಟ್ರೀಯ ಬಜರಂಗದಳ ಹೊಸಮನೆ ಘಟಕ ಉದ್ಘಾಟನೆ

ಹಿಂದೂ ಧರ್ಮ, ಸಂಸ್ಕೃತಿಗಾಗಿ ಹೋರಾಟ ನಡೆಸುತ್ತಿರುವ ಬಾಲವಾಗ್ಮಿ ಹರಿಕ ಮಂಜುನಾಥ್ ರಾಷ್ಟ್ರೀಯ ಬಜರಂಗದಳ ಭದ್ರಾವತಿ ಹೊಸಮನೆ ಘಟಕ ಉದ್ಘಾಟಿಸಿದರು.
ಭದ್ರಾವತಿ, ಡಿ. ೨: ಹಿಂದೂ ಧರ್ಮ, ಸಂಸ್ಕೃತಿಗಾಗಿ ಹೋರಾಟ ನಡೆಸುತ್ತಿರುವ ಬಾಲವಾಗ್ಮಿ ಹರಿಕ ಮಂಜುನಾಥ್ ರಾಷ್ಟ್ರೀಯ ಬಜರಂಗದಳ ಹೊಸಮನೆ ಘಟಕ ಉದ್ಘಾಟಿಸಿದರು.
   ಮಂಜುನಾಥ್ ಕೇಸರಿಪಡೆ ಅಧ್ಯಕ್ಷ  ಗಿರೀಶ್, ರಾಷ್ಟ್ರೀಯ ಬಜರಂಗದಳದ ಜಿಲ್ಲಾಧ್ಯಕ್ಷ ಚಂದನ್‌ರಾವ್, ಓಂ ಹಿಂದೂ ಕೋಟೆ ಅಧ್ಯಕ್ಷ ಮಂಜುನಾಥ್ , ಗೋ ಪ್ರಮುಖರಾದ ಚರಣ್ ದೇವಾಂಗ, ನಗರ ಅಧ್ಯಕ್ಷ ವಿವೇಕ್ ಹಾಗೂ ಗ್ರಾಮಾಂತರ ಅಧ್ಯಕ್ಷ ಮನುಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನಗರ ಆಶ್ರಯ ಸಮಿತಿಗೆ ೪ ಮಂದಿ ಸದಸ್ಯರು ನಾಮನಿರ್ದೇಶನ

ಸಂಪತ್ ರಾಜ್ ಬಾಂಟಿಯಾ
ಭದ್ರಾವತಿ, ಡಿ. ೨: ರಾಜ್ಯ ಸರ್ಕಾರದ ವಸತಿ ಇಲಾಖೆ ಕಾರ್ಯದರ್ಶಿಯವರು ರಾಜ್ಯಪಾಲರ ಆದೇಶದ ಮೇರೆಗೆ ನಗರದ ಆಶ್ರಯ ಸಮಿತಿಗೆ ೪ ಮಂದಿಯನ್ನು ನಾಮನಿರ್ದೇಶನ ಸದಸ್ಯರನ್ನಾಗಿ ನೇಮಕಗೊಳಿಸಿದ್ದಾರೆ.
ಹಿಂದುಳಿದ ವರ್ಗದಿಂದ ಹುತ್ತಾಕಾಲೋನಿ ನಿವಾಸಿ ಸತೀಶ್, ಸಾಮಾನ್ಯ ವರ್ಗದಿಂದ ಭಂಡಾರಹಳ್ಳಿ ನಿವಾಸಿ ದೇವರಾಜ್, ಅಲ್ಪ ಸಂಖ್ಯಾತರ ವಿಭಾಗದಿಂದ ಜೈನ ಸಮಾಜದ ಭೂತನಗುಡಿ ನಿವಾಸಿ ಸಂಪತ್ ರಾಜ್ ಬಾಂಟಿಯಾ ಹಾಗು ಮಹಿಳಾ ವರ್ಗದಿಂದ ಪರಿಶಿಷ್ಟ ಜಾತಿಯ ಬಸಲೀಕಟ್ಟೆ ಗ್ರಾಮದ ಗೌರಮ್ಮರವರನ್ನು ಅಧಿಕಾರೇತರ ಸದಸ್ಯರನ್ನಾಗಿ  ಅಧೀನ ಕಾರ್ಯದರ್ಶಿ ಜಿ. ಲಕ್ಷ್ಮಣ ನೇಮಕಗೊಳಿಸಿದ್ದಾರೆ.

ರೈಲ್ವೆ ಟರ್ಮಿನಲ್ ಕುರಿತು ತೀ.ನಾ ಶ್ರೀನಿವಾಸ್ ಹೇಳಿಕೆಗೆ ಎನ್. ವಿಶ್ವನಾಥರಾವ್ ಅಸಮಾಧಾನ

೬೦ ವರ್ಷಗಳಿಂದ ನಡೆಯದ ರೈಲ್ವೆ ಅಭಿವೃದ್ಧಿ ಕಾಮಗಾರಿಗಳು ಬಿಎಸ್‌ವೈ, ಬಿವೈಆರ್ ಅವಧಿಯಲ್ಲಿ ಅನುಷ್ಠಾನ

ಮೈಸೂರು ರೈಲ್ವೆ ವಿಭಾಗ ಸಲಹಾ ಸಮಿತಿ ಸಮಿತಿ ಸದಸ್ಯ ಎನ್. ವಿಶ್ವನಾಥರಾವ್
ಭದ್ರಾವತಿ, ಡಿ. ೨: ಕೋಟೆ ಗಂಗೂರು ರೈಲ್ವೆ ಕೋಚಿಂಗ್ ಟರ್ಮಿನಲ್ ಕುರಿತು ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ತೀ.ನಾ ಶ್ರೀನಿವಾಸ್ ನೀಡಿರುವ ಹೇಳಿಕೆ ಸರಿಯಲ್ಲ. ಜಿಲ್ಲೆಯಲ್ಲಿ ರೈಲ್ವೆ ಇಲಾಖೆಗೆ ಸಂಬಂಧಿಸಿದಂತೆ ಇದುವರೆಗೂ ನಡೆದಿರುವ ಅಭಿವೃದ್ಧಿ ಕಾರ್ಯಗಳನ್ನು ಅವರು ಸರಿಯಾಗಿ ಅರ್ಥ ಮಾಡಿಕೊಳ್ಳದಿರುವುದು ವಿಷಾದನೀಯ ಎಂದು ರೈಲ್ವೆ ಮೈಸೂರು ವಿಭಾಗದ ಸಲಹಾ ಸಮಿತಿ ಸದಸ್ಯ, ನಗರದ ನಿವಾಸಿ ಎನ್. ವಿಶ್ವನಾಥರಾವ್ ತಿಳಿಸಿದ್ದಾರೆ.
     ಅವರು ಈ ಕುರಿತು ಪತ್ರಿಕಾ ಹೇಳಿಕೆ ನೀಡಿ, ನಾನು ಕಳೆದ ೪ ವರ್ಷಗಳಿಂದ ರೈಲ್ವೆ ಸಲಹಾ ಸಮಿತಿ ಸದಸ್ಯನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಸಂಸದ ಬಿ.ವೈ ರಾಘವೇಂದ್ರರವರ ಪರಿಶ್ರಮದಿಂದಾಗಿ ಜಿಲ್ಲೆಯಲ್ಲಿ ಸುಮಾರು ೬೦ ವರ್ಷಗಳಿಂದ ನಡೆಯದಿರುವ ರೈಲ್ವೆ ಇಲಾಖೆಗೆ ಸಂಬಂಧಿಸಿದ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ.
    ಉದಾಹರಣೆಗೆ ಭದ್ರಾವತಿ ರೈಲ್ವೆ ನಿಲ್ದಾಣವನ್ನು ಯಾರು ಸಹ ನಿರೀಕ್ಷಿಸಲಾರದಷ್ಟು ಮಟ್ಟದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಜಿಲ್ಲೆಯಲ್ಲಿ ರೈಲ್ವೆ ಇಲಾಖೆಯಿಂದ ರೈಲ್ವೆ ಮೇಲ್ಸೇತುವೆಗಳು, ವರ್ತುಲ ರಸ್ತೆ, ಅರಸಾಳು ಶಂಕರ್‌ನಾಗ್‌ರವರ ಕನಸಿನ ಮಾಲ್ಗುಡಿ ನೆನಪಿನ ಮ್ಯೂಸಿಯಂ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಅಲ್ಲದೆ ಬೆಂಗಳೂರು-ಶಿವಮೊಗ್ಗ ಸಿಂಟರ್ ಸಿಟಿ, ಜನಶತಾಬ್ದಿ, ಮೈಸೂರು, ಚೆನ್ನೈ, ತಿರುಪತಿಗಳಿಗೆ ಹೊಸ ರೈಲುಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಹೀಗೆ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಇದೀಗ ರೈಲ್ವೆ ಕೋಚಿಂಗ್ ಟರ್ಮಿನಲ್ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿಸಲಾಗಿದೆ. ಇದೊಂದು ದೊಡ್ಡ ಪ್ರಮಾಣದ ಕಾರ್ಯವಾಗಿದ್ದು, ಇದರಿಂದ ಸಾವಿರಾರು ಜನರಿಗೆ ಉದ್ಯೋಗ ಲಭಿಸಲಿದೆ. ಈ ಯೋಜನೆಯನ್ನು ಅಧಿಕಾರಿಗಳ ಸೂಕ್ತ ನಿರ್ದೇಶನ ದ ಮೇರೆಗೆ ಜಿಲ್ಲೆಯ ಕೋಟೆ ಗಂಗೂರಿಗೆ ಸ್ಥಳಾಂತರಿಸಲಾಗಿದೆ. ಇದರಿಂದ ಜಿಲ್ಲೆಗೆ ಯಾವುದೇ ರೀತಿ ನಷ್ಟವಾಗಿಲ್ಲ. ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ತೀ.ನಾ ಶ್ರೀನಿವಾಸ್‌ರವರು ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
    ಮೊದಲು ಈ ಹಿಂದಿನ ಕಾಂಗ್ರೆಸ್ ಸರ್ಕಾರ ರೈಲ್ವೆ ಇಲಾಖೆಗೆ ಸಂಬಂಧಿಸಿದಂತೆ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು ಹಾಗು ಬಿ.ಎಸ್ ಯಡಿಯೂರಪ್ಪ ಮತ್ತು ಸಂಸದ ಬಿ.ವೈ ರಾಘವೇಂದ್ರರವರ ಅವಧಿಯಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ತುಲನೆ ಮಾಡಿ ನೋಡಿ. ಪ್ರಸ್ತುತ ಟರ್ಮಿನಲ್ ನಿರ್ಮಾಣಕ್ಕೆ ಹೆಚ್ಚಿನ ಸಹಕಾರ ನೀಡಿ. ಇಲ್ಲವಾದಲ್ಲಿ ಗಂಡ-ಹೆಂಡತಿ ನಡುವಿನ ಜಗಳದ ಮಧ್ಯೆ ಕೂಸು ಬಡವಾದಂತೆ ಯೋಜನೆ ಕೈತಪ್ಪಿ ಹೋಗುವುದು ಖಚಿತ ಎಂದು ಎಚ್ಚರಿಸಿದ್ದಾರೆ.