Sunday, March 21, 2021

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ : ಗ್ರಾಮೀಣ ಆಟದೊಂದಿಗೆ ಸಂಭ್ರಮ

ನೆಹರು ಯುವ ಕೇಂದ್ರ, ಸಮೃದ್ಧಿ ಯುವತಿ ಮಂಡಳಿ, ಅರಿವು ಮಹಿಳಾ ಸಂಘ ಹಾಗು ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದ ವತಿಯಿಂದ ಜನ್ನಾಪುರ ಎನ್‌ಟಿಬಿ ರಸ್ತೆಯಲ್ಲಿರುವ ಅಂಬೇಡ್ಕರ್ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಗ್ರಾಮೀಣ ಆಟ ಜರುಗಿತು.

ಭದ್ರಾವತಿ, ಮಾ. ೨೧: ನೆಹರು ಯುವ ಕೇಂದ್ರ, ಸಮೃದ್ಧಿ ಯುವತಿ ಮಂಡಳಿ, ಅರಿವು ಮಹಿಳಾ ಸಂಘ ಹಾಗು ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದ ವತಿಯಿಂದ ಜನ್ನಾಪುರ ಎನ್‌ಟಿಬಿ ರಸ್ತೆಯಲ್ಲಿರುವ ಅಂಬೇಡ್ಕರ್ ಸಮುದಾಯ ಭವನದಲ್ಲಿ ಭಾನುವಾರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಡೆಯಿತು.
    ಮಹಿಳೆಯರಿಗಾಗಿ ಗ್ರಾಮೀಣ ಆಟಗಳ ಸ್ಪರ್ಧೆ ಜರುಗಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಸಮೃದ್ಧಿ ಯುವತಿ ಮಂಡಳಿ ಅಧ್ಯಕ್ಷೆ ಶಿಲ್ಪ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.
    ಎಂಪಿಎಂಇಎಸ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಸಿಎಸ್ ಜಮುನ ಕಾರ್ಯಕ್ರಮ ಉದ್ಘಾಟಿಸಿದರು. ಆಶಾ ಮೇಲ್ವಿಚಾರಕಿ ಬಿ.ಎಂ ವಸಂತ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವಿಶೇಷವಾಗಿ ಪೌರಕಾರ್ಮಿಕರಾದ ನಂಜಮ್ಮ ಹಾಗು ಸೋಬಾನಪದ ಆಕಾಶವಾಣಿ ಕಲಾವಿದೆ ಗಿರಿಜಮ್ಮ ತಿಮ್ಮಪ್ಪರವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ತಮಟೆ ಜಗದೀಶ್, ಜಿ. ದಿವಾಕರ್, ಜಿ. ರವಿಕುಮಾರ್, ಸೋಮಶೇಖರ್, ಸಹನಾ, ವೀರೇಶ್, ಶಾರದಮ್ಮ, ಟಿ. ರಘುನಾಯ್ಕ್, ಕೆ. ಮಂಜು ಮತ್ತು ಲತಾ ಪ್ರಸಾದ್ ಸೇರಿದಂತೆ ಇನ್ನಿತರರು ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದರು.


ಮೇ.೩೦ರಂದು ಉಚಿತ ಸಾಮೂಹಿಕ ವಿವಾಹ : ಸದುಪಯೋಗಪಡಿಸಿಕೊಳ್ಳಲು ಕರೆ

ಭದ್ರಾವತಿ, ಮಾ. ೨೧: ವಿಶ್ವ ಹಿಂದು ಪರಿಷತ್, ವಿಶ್ವ ಭಾರತಿ ವಿಶ್ವಸ್ಥ ಮಂಡಳಿ ವತಿಯಿಂದ ಶ್ರೀ ಕಾಲಭೈರವೇಶ್ವರ ಚಾರಿಟಬಲ್ ಟ್ರಸ್ಟ್, ಶ್ರೀ ಬಸವೇಶ್ವರ ಧರ್ಮಸಂಸ್ಥೆ ಹಾಗು ಶಾಶ್ವತಿ ಮಹಿಳಾ ಸಮಾಜದ ಸಹಯೋಗದೊಂದಿಗೆ ಮೇ.೩೦ರಂದು ೩೮ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
   ವಿಶ್ವ ಹಿಂದು ಪರಿಷತ್, ವಿಶ್ವ ಭಾರತಿ ವಿಶ್ವಸ್ಥ ಮಂಡಳಿ ವತಿಯಿಂದ ಕಳೆದ ೩೭ ವರ್ಷಗಳಿಂದ ನಿರಂತರವಾಗಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದ್ದು, ಇದುವರೆಗೂ ಒಟ್ಟು ೭೭೧ ಜೊತೆ ವಿವಾಹ ನೆರವೇರಿಸಲಾಗಿದೆ. ಈ ಬಾರಿ ಚನ್ನಗಿರಿ ಕೇದಾರ ಶಾಖಾ ಹಿರೇಮಠದ ಶ್ರೀ ಕೇದಾರಲಿಂಗಶಾಂತವೀರ ಶಿವಾಚಾರ್ಯ ಮಹಾಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದು, ಅರ್ಹ ವಧು-ವರರು ಈ ಉಚಿತ ಸಾಮೂಹಿಕ ವಿವಾಹದ ಸದುಪಯೋಗಪಡೆದುಕೊಳ್ಳಬಹುದಾಗಿದೆ.
    ಹೆಚ್ಚಿನ ಮಾಹಿತಿಗೆ ಹಾ. ರಾಮಪ್ಪ, ಮೊ: ೯೮೮೦೭೭೯೨೯೩ ಅಥವಾ ಡಿ.ಆರ್ ಶಿವಕುಮಾರ್, ಮೊ: ೯೯೬೪೨೩೭೦೭೮ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

Saturday, March 20, 2021

ಕೋಡಿಹಳ್ಳಿಯಲ್ಲಿ ತಹಸೀಲ್ದಾರ್ ಗ್ರಾಮ ವಾಸ್ತವ್ಯ

ಭದ್ರಾವತಿ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ನೇತೃತ್ವದ ತಂಡ ಶನಿವಾರ ತಾಲೂಕಿನ ಕೂಡ್ಲಿಗೆರೆ ಹೋಬಳಿ ಕೋಡಿಹಳ್ಳಿ ಗ್ರಾಮದಲ್ಲಿ ವಾಸ್ತವ್ಯ ನಡೆಸಿತು.
    ಭದ್ರಾವತಿ, ಮಾ. ೨೦: ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ನೇತೃತ್ವದ ತಂಡ ಶನಿವಾರ ತಾಲೂಕಿನ ಕೂಡ್ಲಿಗೆರೆ ಹೋಬಳಿ ಕೋಡಿಹಳ್ಳಿ ಗ್ರಾಮದಲ್ಲಿ ವಾಸ್ತವ್ಯ ನಡೆಸಿತು.
     ಗ್ರಾಮದ ಸರ್ವೆ ನಂ.೨೮ರಲ್ಲಿ ರಸ್ತೆ ವಿಚಾರಕ್ಕೆ ಸಂಬಂಧಿಸಿದಂತೆ, ಕೊಟ್ಟದಾಳು ಸರ್ವೆ ನಂ. ೧ ಮತ್ತು ೨ರಲ್ಲಿ ಬಗರ್‌ಹುಕುಂ ಸಾಗುವಳಿ ವಿಚಾರಕ್ಕೆ ಸಂಬಂಧಿಸಿದಂತೆ, ಕೂಡ್ಲಿಗೆರೆ ಗ್ರಾಮದ ಸ್ಮಶಾನ ಹಾಗು ಗುಂಡುತೋಪು ಜಾಗ ಹಾಗು ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮಂಜೂರಾತಿಯಾಗಿರುವ ಜಾಗ ಪರಿಶೀಲನೆ, ಕೋಡಿಹಳ್ಳಿ ಗ್ರಾಮದ ಬಳಸೋಕೆರೆ ಹೂಳು ತೆಗೆಯುವ ಸಂಬಂಧ ಪಿಡಿಓ ಜೊತೆ ಚರ್ಚೆ, ಗ್ರಾಮದ ಪರಿಶಿಷ್ಟ ಜಾತಿ/ಪಂಗಡ ಕಾಲೋನಿಯಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯಗಳ  ಕುರಿತು ಪಿಡಿಓ ಮತ್ತು ಕಂದಾಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಯಿತು.
ಜಿಲ್ಲಾ ಪಂಚಾಯಿತಿ ಸದಸ್ಯ ಎಸ್. ಮಣಿಶೇಖರ್, ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲಕ್ ಬಿ ವೀರಪ್ಪ, ಸದಸ್ಯರಾದ ಜಿ.ಆರ್ ನಾಗರಾಜ್, ಕೂಡ್ಲಿಗೆರೆ ರುದ್ರೇಶ್, ಉಪತಹಸೀಲ್ದಾರ್‌ಗಳಾದ ನಾರಾಯಣಗೌಡ, ಮಂಜಾನಾಯ್ಕ, ಆರ್.ಆರ್ ಶಿರಸ್ತೆದಾರ್ ಮಲ್ಲಿಕಾರ್ಜುನಯ್ಯ, ರಾಜ್ಯಸ್ವ ನಿರೀಕ್ಷಕ ಪ್ರಶಾಂತ್, ಜಗದೀಶ್ ಹಾಗು ಎಲ್ಲಾ ಗ್ರಾಮ ಪಂಚಾಯಿತಿಗಳ ಪಿಡಿಓಗಳು, ಗ್ರಾಮ ಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು.  

ಕೋವಿಡ್ ಲಸಿಕೆ ಪಡೆದ ಬಿಳಿಕಿ ಶ್ರೀ

ಭದ್ರಾವತಿ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಶನಿವಾರ ಲಸಿಕೆ ಪಡೆದರು.
   ಭದ್ರಾವತಿ, ಮಾ. ೨೦: ಕೊರೋನಾ ೨ನೇ ಹಂತದ ಅಲೆ ಎಲ್ಲೆಡೆ ಹೆಚ್ಚಾಗುತ್ತಿದ್ದು, ಈ ನಡುವೆ ಕೊರೋನಾ ಲಸಿಕೆ ಪಡೆಯುವವರ ಸಂಖ್ಯೆ ಸಹ ಅಧಿಕವಾಗುತ್ತಿದೆ. ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಶನಿವಾರ ಲಸಿಕೆ ಪಡೆದರು.
    ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಓ. ಮಲ್ಲಪ್ಪ, ಡಾ. ದಿವ್ಯ ಕೋವಿಡ್-೧೯ ವ್ಯಾಕ್ಸಿನ್ ನೀಡಿದರು. ಸಮಾಜದ ಮುಖಂಡರಾದ ಸಿದ್ದಲಿಂಗಯ್ಯ, ಎಸ್ ವಾಗೀಶ್, ಸತೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಈಗಾಗಲೇ ಆಸ್ಪತ್ರೆಯಲ್ಲಿ ಪೌರಕಾರ್ಮಿಕರು, ಆರೋಗ್ಯ ಮತ್ತು ಕಂದಾಯ ಇಲಾಖೆ ಸಿಬ್ಬಂದಿಗಳು ಹಾಗು ಇನ್ನಿತರ ಇಲಾಖೆಗಳ ಆಯ್ದ ಸಿಬ್ಬಂದಿಗಳಿಗೆ   ೧ ಮತ್ತು ೨ನೇ ಹಂತದ ಲಸಿಕೆಯನ್ನು ನೀಡಲಾಗಿದೆ. ಉಳಿದಂತೆ ಕಳೆದ ಸುಮಾರು ೧೦ ದಿನಗಳಿಂದ ೪೫ ವರ್ಷ ಮೇಲ್ಪಟ್ಟ ೬೦ ವರ್ಷದೊಳಗಿನ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಹಾಗು ೬೦ ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಲಾಗುತ್ತಿದೆ.

೧೮ ವರ್ಷ ಸೇವೆ ಸಲ್ಲಿಸಿ ಮರಳಿ ಬಂದ ವೀರ ಯೋಧನಿಗೆ ಅಭಿನಂದನೆ

ಹೆಬ್ಬಂಡಿ ತಾಂಡಾ ಎಚ್.ಪಿ ಮೋಹನ್ ಮೇಘಾಲಯ, ಜಮ್ಮು-ಕಾಶ್ಮೀರ, ಚೀನಾ ಗಡಿಯಲ್ಲಿ ಕರ್ತವ್ಯ


ಭಾರತೀಯ ಸೇನೆಯಲ್ಲಿ ಸುಮಾರು ೧೮ ವರ್ಷ ಸೇವೆ ಸಲ್ಲಿಸಿ ಹಿಂದಿರುಗಿದ ಭದ್ರಾವತಿ ತಾಲೂಕಿನ ಹೆಬ್ಬಂಡಿ ತಾಂಡಾದ ನಿವಾಸಿ, ವೀರಯೋಧ ಎಚ್.ಪಿ ಮೋಹನ್‌ರನ್ನು ಅಭಿನಂದಿಸಲಾಯಿತು.
    ಭದ್ರಾವತಿ, ಮಾ. ೨೦: ಭಾರತೀಯ ಸೇನೆಯಲ್ಲಿ ಸುಮಾರು ೧೮ ವರ್ಷ ಸೇವೆ ಸಲ್ಲಿಸಿ ಹಿಂದಿರುಗಿದ ತಾಲೂಕಿನ ಹೆಬ್ಬಂಡಿ ತಾಂಡಾದ ನಿವಾಸಿ, ವೀರಯೋಧ ಎಚ್.ಪಿ ಮೋಹನ್‌ರನ್ನು ಅಭಿನಂದಿಸಲಾಯಿತು.
    ತಾಂಡಾದ ದಿವಂಗತ ಪೀಕ್ಯಾನಾಯ್ಕ, ರುಕ್ಮಿಣಿ ಬಾಯಿರವರ ಪುತ್ರರಾಗಿರುವ ಎಚ್.ಪಿ ಮೋಹನ್ ೨೦೦೨-೦೩ರಲ್ಲಿ ಭಾರತೀಯ ಸೇನೆಗೆ ಸೇವೆಗೆ ಸೇರಿದ್ದು, ಮೇಘಾಲಯ, ಜಮ್ಮು-ಕಾಶ್ಮೀರ ಹಾಗು ಚೀನಾ ಗಡಿಯಲ್ಲಿ ಕರ್ತವ್ಯ ನಿರ್ವಹಿಸಿ ಮರಳಿದ್ದಾರೆ.
   ಎಚ್.ಪಿ ಮೋಹನ್ ಮರಳಿ ಬಂದ ಹಿನ್ನಲೆಯಲ್ಲಿ ತಾಂಡಾದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಕುಟುಂಬಸ್ಥರು, ತಾಂಡಾ ನಿವಾಸಿಗಳು ಸಿಹಿ ಹಂಚಿ ಸಂಭ್ರಮಿಸಿದರು.
ಮುಖ್ಯ ಶಿಕ್ಷಕರಾದ ಹನುಮಂತನಾಯ್ಕ, ಎಸ್. ಕೂಬಾನಾಯ್ಕ, ಜಮೀನ್ದಾರ್ ಪ್ರೇಮ್‌ಕುಮಾರ್, ಆನಂದನಾಯ್ಕ, ಎಂ.ಎಸ್ ನಾಯ್ಕ, ಕೇಶವಮೂರ್ತಿ ಮತ್ತು ಪಿ. ಧನಂಜಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ತ್ರಿಕೋನಾಸನ ಯೋಗ ಸ್ಪರ್ಧೆಯಲ್ಲಿ ಡಿ. ನಾಗರಾಜ್ ಯೂನಿವರ್ಸಲ್ ರೆಕಾರ್ಡ್

ಭದ್ರಾವತಿ, ಮಾ. ೨೦: ನಗರದ ವಿವೇಕಾನಂದ ಯೋಗ ಟ್ರಸ್ಟ್ ಅಧ್ಯಕ್ಷ, ಅಂತರಾಷ್ಟ್ರೀಯ ಯೋಗಪಟು ಡಿ. ನಾಗರಾಜ್ ೩ ನಿಮಿಷಗಳ ತ್ರಿಕೋನಾಸನ ಯೋಗ ಸ್ಪರ್ಧೆಯಲ್ಲಿ ಯೂನಿವರ್ಸಲ್ ರೆಕಾರ್ಡ್‌ಗೆ ಪಾತ್ರರಾಗಿದ್ದಾರೆ.
   ಭದ್ರಾವತಿ, ಮಾ. ೨೦: ನಗರದ ವಿವೇಕಾನಂದ ಯೋಗ ಟ್ರಸ್ಟ್ ಅಧ್ಯಕ್ಷ, ಅಂತರಾಷ್ಟ್ರೀಯ ಯೋಗಪಟು ಡಿ. ನಾಗರಾಜ್ ೩ ನಿಮಿಷಗಳ ತ್ರಿಕೋನಾಸನ ಯೋಗ ಸ್ಪರ್ಧೆಯಲ್ಲಿ ಯೂನಿವರ್ಸಲ್ ರೆಕಾರ್ಡ್‌ಗೆ ಪಾತ್ರರಾಗಿದ್ದಾರೆ.
   ಶಿವಮೊಗ್ಗ ಕೋಟೆ ರಸ್ತೆಯಲ್ಲಿರುವ ವಾಸವಿ ಪಬ್ಲಿಕ್ ಶಾಲೆಯಲ್ಲಿ ವರ್ಷಿಣಿ ಯೋಗ ಶಿಕ್ಷಣ ಸಂಸ್ಥೆ ಮತ್ತು ಸಾಂಸ್ಕೃತಿಕ ಕ್ರೀಡಾ ಟ್ರಸ್ಟ್ ಹಾಗು ಜೈ ಭೀಮ್ ಕನ್ನಡ ಸೈನ್ಯ ರಕ್ಷಣಾವೇದಿಕೆ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಸ್ಪರ್ಧೆಯಲ್ಲಿ ಈ ಸಾಧನೆಗೆ ಪಾತ್ರರಾಗಿದ್ದು, ಈಗಾಗಲೇ ನಾಗರಾಜ್‌ರವರು ಹಲವಾರು ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗು ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
   ವರ್ಷಿಣಿ ಯೋಗಕೇಂದ್ರದ ಅಧ್ಯಕ್ಷ ಪಿ. ಪೆಂಚಾಲಯ್ಯ, ಕಾರ್ಯದರ್ಶಿ ವೆಂಕಟೇಶ್, ಯೋಗ ತೀರ್ಪುಗಾರರಾದ ಮುದ್ದುಕೃಷ್ಣ, ಗೋಪಾಲ್‌ರಾಜ್, ಪುರಶುರಾಮ್ ಹಾಗು ಡಾ. ನಿಂಗೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ಸುಮಾರು ೧೩೫ಕ್ಕೂ ಹೆಚ್ಚು ಯೋಗಪಟುಗಳು ಭಾಗವಹಿಸಿದ್ದರು.

ತಂಬಾಕು ಉತ್ಪನ್ನಗಳ ಮಾರಾಟ ಕಾಯ್ದೆ ಉಲ್ಲಂಘನೆ : ೧೩೫೦ ರು. ದಂಡ

ಭದ್ರಾವತಿಯಲ್ಲಿ ಕಾಯ್ದೆ ಉಲ್ಲಂಘಿಸಿ ಅಕ್ರಮವಾಗಿ ತಂಬಾಕು ಉತ್ಪನ್ನಗಳ ಮಾರಾಟದಲ್ಲಿ ತೊಡಗಿರುವ ಅಂಗಡಿಮುಂಗಟ್ಟುಗಳ ಮೇಲೆ ಶನಿವಾರ ದಾಳಿ ನಡೆಸಿ ಸುಮಾರು ೧೩೫೦ ರು. ದಂಡ ವಸೂಲಾತಿ ಮಾಡಿರುವ ಘಟನೆ ನಡೆದಿದೆ.
     ಭದ್ರಾವತಿ, ಮಾ. ೨೦: ಕಾಯ್ದೆ ಉಲ್ಲಂಘಿಸಿ ಅಕ್ರಮವಾಗಿ ತಂಬಾಕು ಉತ್ಪನ್ನಗಳ ಮಾರಾಟದಲ್ಲಿ ತೊಡಗಿರುವ ಅಂಗಡಿಮುಂಗಟ್ಟುಗಳ ಮೇಲೆ ದಾಳಿ ನಡೆಸಿ ಸುಮಾರು ೧೩೫೦ ರು. ದಂಡ ವಸೂಲಾತಿ ಮಾಡಿರುವ ಘಟನೆ ಶನಿವಾರ ನಡೆದಿದೆ.
     ಶಿವಮೊಗ್ಗ ಜಿಲ್ಲಾ ತಂಬಾಕು ಕೋಶ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಮತ್ತು ಪೊಲೀಸ್ ಇಲಾಖೆ ವತಿಯಿಂದ  ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣ ಸಮೀಪ ಅಂಗಡಿಮುಂಗಟ್ಟುಗಳ ಮೇಲೆ ದಾಳಿ ನಡೆಸಲಾಯಿತು.
     ಕಾರ್ಯಾಚರಣೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಎಂ.ವಿ ಅಶೋಕ್, ತಾಲೂಕು ಆರೋಗ್ಯ ಶಿಕ್ಷಣ ಅಧಿಕಾರಿ ರಾಜೇಗೌಡ, ತಾಲೂಕು ಹಿರಿಯ ಸಹಾಯಕ ಆನಂದಮೂರ್ತಿ, ಕಿರಿಯ ಆರೋಗ್ಯ ಸಹಾಯಕ ಹರೀಶ್, ಜಿಲ್ಲಾ ತಂಬಾಕು ಕೋಶದ ಹೇಮಂತ್ ರಾಜ್, ರವಿರಾಜ್ ಹಾಗು ಪೊಲೀಸ್ ಠಾಣಾಧಿಕಾರಿ ಅನ್ನಪೂರ್ಣ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.