Thursday, April 8, 2021

ಏ.೧೧ರಂದು ವಿದ್ಯುತ್ ವ್ಯತ್ಯಯ

ಭದ್ರಾವತಿ, ಏ. ೮: ಲೋಕೋಪಯೋಗಿ ಇಲಾಖೆವತಿಯಿಂದ ನಗರದ ಹೊಸಮನೆ ಭಾಗದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಏ.೧೧ರಂದು ಬೆಳಿಗ್ಗೆ ೧೦.೩೦ರಿಂದ ಸಂಜೆ ೫.೩೦ರ ವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ), ಹೊಳೆಹೊನ್ನೂರು ವೃತ್ತ, ಎನ್.ಎಂ.ಸಿ ರಸ್ತೆ, ಸಂತೆ ಮೈದಾನ, ಭೋವಿ ಕಾಲೋನಿ, ಹೊಸಮನೆ, ಕುವೆಂಪು ನಗರ, ಸುಭಾಷ್‌ನಗರ, ತ್ಯಾಗರಾಜ ನಗರ, ತಮ್ಮಣ್ಣ ಕಾಲೋನಿ, ಶಿವಾಜಿ ವೃತ್ತ, ಹನುಮಂತ ನಗರ, ವಿಜಯ ನಗರ, ಅಶ್ವತ್ಥ ನಗರ, ಕಬಳಿಕಟ್ಟೆ ಕೇಶವಪುರ ಮತ್ತು ಗಾಂಧಿನಗರ ಸೇರಿದಂತೆ ಇನ್ನಿತರ ಪ್ರದೇಶಗಳ ಗ್ರಾಹಕರು ಸಹಕರಿಸುವಂತೆ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.

ರಾಜ್ಯ ಬೆಂಚ್ ಪ್ರೆಸ್ ಸ್ಪರ್ಧೆಗೆ ಆಯ್ಕೆ

ಭದ್ರಾವತಿ, ಏ. ೮: ದಾವಣಗೆರೆಯಲ್ಲಿ ಏ.೧೦ ಮತ್ತು ೧೧ರಂದು ನಡೆಯಲಿರುವ ರಾಜ್ಯ ಬೆಂಚ್ ಪ್ರೆಸ್ ಸ್ಪರ್ಧೆಗೆ ಶಿವಮೊಗ್ಗ ಡಿಸ್ಟ್ರಿಕ್ಟ್ ಪವರ್‌ಲಿಫ್ಟಿಂಗ್ ಅಸೋಸಿಯೇಷನ್ ವತಿಯಿಂದ ಸ್ಟೀಲ್ ಫಿಟ್‌ನೆಸ್ ೨೪*೭ ಸುಜಿತ್‌ಕುಮಾರ್ ನೇತೃತ್ವದಲ್ಲಿ ಸ್ಪರ್ಧಾಳುಗಳನ್ನು ಆಯ್ಕೆ ಮಾಡಲಾಗಿದೆ.
೪೭ ಕೆ.ಜಿ ಸಬ್ ಜ್ಯೂನಿಯರ್ ವಿಭಾಗಕ್ಕೆ ಭದ್ರಾವತಿ ಬೊಮ್ಮನಕಟ್ಟೆ ಶಮನ್ ಷಾವಲಿ ವ್ಯಾಯಾಮ ಶಾಲೆಯ ಎಂ. ಸಾನಿಯ, ಶಿವಮೊಗ್ಗ ಸೋಲಿಟ್ ಫಿಟ್‌ನೆಸ್ ಸೆಂಟರ್‌ನ ಎಸ್. ರಜನಿ ಮತ್ತು ಡಿ. ಸಹನ ೫೭ ಕೆ.ಜಿ ಸೀನಿಯರ್ ಮತ್ತು ಜ್ಯೂನಿಯರ್ ವಿಭಾಗಕ್ಕೆ, ಎಸ್.ಕೆ ಪಲ್ಲವಿ, ಬಿ.ಜೆ ಶಂಕೇಶ್ವರಿ ೬೩ ಕೆ.ಜಿ ಸಬ್ ಜ್ಯೂನಿಯರ್ ವಿಭಾಗಕ್ಕೆ ಹಾಗು ಬಿ.ಎಚ್ ಪದ್ಮಶ್ರೀ ೮೪ ಕೆ.ಜಿ ಜ್ಯೂನಿಯರ್ ವಿಭಾಗಕ್ಕೆ ಮತ್ತು ಶಿವಮೊಗ್ಗ ಸಹ್ಯಾದ್ರಿ ಸೈನ್ಸ್ ಕಾಲೇಜಿನ ಎಸ್. ಸ್ನೇಹ ೮೪ ಕೆ.ಜಿ ಸಬ್ ಜ್ಯೂನಿಯರ್ ವಿಭಾಗಕ್ಕೆ ಆಯ್ಕೆಯಾಗಿದ್ದಾರೆ.
ಭದ್ರಾವತಿ ಕಾರಂತ್ ಜಿಮ್‌ನ ಲುಕ್‌ಮಾನ್ ಆಹ್ಮದ್ ೫೩ ಕೆ.ಜಿ ಹಾಗು ಲಿಂಗರಾಜು ೫೯ ಕೆ.ಜಿ ಸಬ್ ಜ್ಯೂನಿಯರ್ ವಿಭಾಗಕ್ಕೆ, ಎಸ್. ಹರ್ಷಿತ್ ೬೬ ಕೆ.ಜಿ ಸಬ್ ಜ್ಯೂನಿಯರ್, ಕೆ.ಎಲ್ ದಯಾನಂದ ೧೦೫ ಕೆ.ಜಿ ಸಬ್ ಜ್ಯೂನಿಯರ್ ಹಾಗು ಕೆ. ಪ್ರಕಾಶ್ ಕಾರಂತ್ ೮೩ ಕೆ.ಜಿ ಮಾಸ್ಟರ್-ವಿಭಾಗಕ್ಕೆ ಆಯ್ಕೆಯಾಗಿದ್ದಾರೆ.
ಶಿವಮೊಗ್ಗ ಸ್ಟೇಡಿಯಂ ಜಿಮ್‌ನ ಶಶಿಧರ್.ಎ ೭೪ ಕೆ.ಜಿ ಮಾಸ್ಟರ್-೨ ವಿಭಾಗ, ವರ್ಷಿತ್ ಎಸ್ ರಾವ್ ೯೩ ಕೆ.ಜಿ ಸಬ್ ಜ್ಯೂನಿಯರ್ ವಿಭಾಗ, ಕೆ. ಭಾಸ್ಕರ್ ೬೬ ಕೆ.ಜಿ ಮಾಸ್ಟರ್-೨ ವಿಭಾಗ ಹಾಗು ಇ. ರಕ್ಷಿತ್ ೧೦೫ ಕೆ.ಜಿ ಸಬ್ ಜ್ಯೂನಿಯರ್ ವಿಭಾಗಕ್ಕೆ, ಶಿವಮೊಗ್ಗ ಕಿಷನ್ ಬಾಡಿ ಲೈನ್‌ನ ಆರ್. ಅವಿನಾಶ್ ೬೬ ಕೆ.ಜಿ ಸೀನಿಯರ್, ಎಚ್. ಅರುಣ್ ೮೩ ಕೆ.ಜಿ ಸೀನಿಯರ್, ಸಾಗರ ಕಾರ್ಗಲ್ ಪೊಲೀಸ್ ಠಾಣೆಯ ಗಿಲ್ ಬರ್ಟ್ಸ್ ಡಯಾಸ್ ೮೩ ಕೆ.ಜಿ ಮಾಸ್ಟರ್-೨ ವಿಭಾಗಕ್ಕೆ ಹಾಗು ಭದ್ರಾವತಿ ಮಯೂರ್ ಜಿಮ್‌ನ ಶಶಿಧರ್ ಎಸ್. ೯೩ ಕೆ.ಜಿ ಮಾಸ್ಟರ್-೨ ವಿಭಾಗಕ್ಕೆ ಆಯ್ಕೆಯಾಗಿದ್ದಾರೆಂದು ಶಿವಮೊಗ್ಗ ಡಿಸ್ಟ್ರಿಕ್ಟ್ ಪವರ್‌ಲಿಫ್ಟಿಂಗ್ ಅಸೋಸಿಯೇಷನ್ ಕಾರ್ಯದರ್ಶಿ ಕೆ. ಪ್ರಕಾಶ್ ಕಾರಂತ್ ತಿಳಿಸಿದ್ದಾರೆ.

Wednesday, April 7, 2021

ನಗರಸಭೆ ಚುನಾವಣೆ ಏ.೮ರಿಂದ ನಾಮಪತ್ರ ಸಲ್ಲಿಕೆ ಆರಂಭ : ಅಭ್ಯರ್ಥಿಗಳ ಘೋಷಣೆಯಲ್ಲಿ ಬಿಜೆಪಿ ಮೊದಲು

ಆಕಾಂಕ್ಷಿಗಳಿಂದ ಟಿಕೇಟ್‌ಗಾಗಿ ಮಾತೃ ಪಕ್ಷದಿಂದ ಇತರೆ ಪಕ್ಷಕ್ಕೆ ಜಿಗಿತ


ಭದ್ರಾವತಿ ಜನ್ನಾಪುರ ವಾರ್ಡ್ ನಂ.೨೯ರಲ್ಲಿ ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಸುಮಾರು ೩ ವಾರಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಸಿದ್ದ ಕರ್ನಾಟಕ ಜನಸೈನ್ಯ ಸಂಘಟನೆ ಜಿಲ್ಲಾಧ್ಯಕ್ಷ ಕೆ. ಮಂಜುನಾಥ್ ಪತ್ನಿ ಶೃತಿ ಮಾತೃ ಪಕ್ಷದಲ್ಲಿ ಸ್ಪರ್ಧಿಸಲು ಅವಕಾಶ ಸಿಗದಿರುವುದು ತಿಳಿಯುತ್ತಿದ್ದಂತೆ ಬುಧವಾರ ಶಾಸಕ ಬಿ.ಕೆ ಸಂಗಮೇಶ್ವರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
      * ಅನಂತಕುಮಾರ್
   ಭದ್ರಾವತಿ: ಸುಮಾರು ೨ ವರ್ಷಗಳ ನಂತರ ನಡೆಯುತ್ತಿರುವ ಇಲ್ಲಿನ ನಗರಸಭೆ ಚುನಾವಣೆಗೆ ಗುರುವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಈ ನಡುವೆ ವಿವಿಧ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಘೋಷಣೆಗೆ ಮುಂದಾಗಿವೆ.
    ಎಲ್ಲಾ ಪಕ್ಷಗಳಿಗಿಂತ ಮೊದಲು ಭಾರತೀಯ ಜನತಾ ಪಕ್ಷ ೩೫ ವಾರ್ಡ್‌ಗಳ ಪೈಕಿ ೨೧ ವಾರ್ಡ್‌ಗಳಿಗೆ ಅಭ್ಯರ್ಥಿಗಳನ್ನು ಬುಧವಾರ ಘೋಷಿಸಿದೆ. ಉಳಿದ ೧೪ ವಾರ್ಡ್‌ಗಳಿಗೆ ೨ನೇ ಹಂತದಲ್ಲಿ ಘೋಷಣೆ ಮಾಡಲಿದೆ.
    ಪ್ರಸ್ತುತ ಘೋಷಣೆ ಮಾಡಿರುವ ಬಹುತೇಕ ಅಭ್ಯರ್ಥಿಗಳು ಪಕ್ಷದ ವಿವಿಧ ಪದಾಧಿಕಾರಿಗಳು, ಅವರ ಸಂಬಂಧಿಕರು, ಕಾರ್ಯಕರ್ತರು ಹಾಗು ಹಿಂದೂಪರ ಸಂಘಟನೆಗಳ ಪ್ರಮುಖರಾಗಿದ್ದಾರೆ. ಪ್ರತಿ ಬಾರಿ ಚುನಾವಣೆಯಲ್ಲೂ ಬಿಜೆಪಿ ಬೂತ್‌ಮಟ್ಟದ ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದೆ. ಈ ಬಾರಿ ಸಹ ಬೂತ್‌ಮಟ್ಟದಲ್ಲಿಯೇ ಅಭ್ಯರ್ಥಿಗಳ ಆಯ್ಕೆ ನಡೆದಿದೆ ಎನ್ನಲಾಗಿದೆ.
     ಇನ್ನುಳಿದಂತೆ ಯಾವುದೇ ಪಕ್ಷಗಳು ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಆದರೆ ಕೆಲವರು ನಾವೇ ಪಕ್ಷದ ಅಧಿಕೃತ ಅಭ್ಯರ್ಥಿಗಳೆಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಕ್ಕೆ ಮುಂದಾಗಿದ್ದಾರೆ. ಇನ್ನೂ ಕೆಲವರು ಮಾತೃ ಪಕ್ಷದಲ್ಲಿ ಸ್ಪರ್ಧಿಸಲು ಅವಕಾಶ ಸಿಗದಿರುವುದು ತಿಳಿದು ಬಂದ ತಕ್ಷಣ ಬೇರೆ ಪಕ್ಷಗಳಿಗೆ ಸೇರ್ಪಡೆಗೊಳ್ಳುತ್ತಿದ್ದು, ಜನ್ನಾಪುರ ವಾರ್ಡ್ ನಂ.೨೯ರಲ್ಲಿ ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಸುಮಾರು ೩ ವಾರಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಸಿದ್ದ ಕರ್ನಾಟಕ ಜನಸೈನ್ಯ ಸಂಘಟನೆ ಜಿಲ್ಲಾಧ್ಯಕ್ಷ ಕೆ. ಮಂಜುನಾಥ್ ಪತ್ನಿ ಶೃತಿ ಮಾತೃ ಪಕ್ಷದಲ್ಲಿ ಸ್ಪರ್ಧಿಸಲು ಅವಕಾಶ ಸಿಗದಿರುವುದು ತಿಳಿಯುತ್ತಿದ್ದಂತೆ ಬುಧವಾರ ಶಾಸಕ ಬಿ.ಕೆ ಸಂಗಮೇಶ್ವರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
   ಉಳಿದಂತೆ ಸುಮಾರು ೩-೪ ವರ್ಷಗಳಿಂದ ಆಮ್ ಆದ್ಮಿ ಪಾರ್ಟಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಪ್ರಮುಖರಾದ ಉಪಾಧ್ಯಕ್ಷರಾಗಿದ್ದ ಮುಳ್ಕೆರೆ ಲೋಕೇಶ್, ಪ್ರಧಾನ ಕಾರ್ಯದರ್ಶಿಯಾಗಿದ್ದ ವಿ. ವಿನೋದ್, ಕಾರ್ಯದರ್ಶಿಯಾಗಿದ್ದ ಪ್ರದೀಪ್ ಹಾಗು ಮಹಿಳಾ ಘಟಕದ ತಾಲೂಕು ಅಧ್ಯಕ್ಷೆಯಾಗಿದ್ದ ಕಾಂತ ದಿನೇಶ್ ಪಕ್ಷವನ್ನು ತೊರೆದು ಸ್ನೇಹ ಜೀವಿ ಬಳಗ ಸೇರ್ಪಡೆಗೊಂಡಿದ್ದಾರೆ.
  ಉಳಿದಂತೆ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ನಿಧನದ ನಂತರ ಜೆಡಿಎಸ್ ಪಕ್ಷ ಒಡೆದ ಮನೆಯಂತಾಗಿದ್ದು, ಇದೀಗ ಪುನಃ ಶಾರದ ಅಪ್ಪಾಜಿ ನೇತೃತ್ವದಲ್ಲಿ ಒಗ್ಗಟ್ಟು ಪ್ರದರ್ಶಿಸಲಾಗುತ್ತಿದೆ. ಪ್ರಮುಖವಾಗಿ ಗ್ರಾಮ ಪಂಚಾಯಿತಿ ಚುನಾವಣೆ ವೇಳೆ ಪಕ್ಷದಿಂದ ದೂರ ಉಳಿದಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಅಪ್ಪಾಜಿ ರಾಜಕೀಯ ಒಡನಾಡಿಯಾಗಿದ್ದ ಎಸ್. ಕುಮಾರ್ ಶಾಸಕ ಬಿ.ಕೆ ಸಂಗಮೇಶ್ವರ್ ಪರ ಗುರುತಿಸಿಕೊಂಡಿದ್ದರು. ಇದೀಗ ಪುನಃ ಜೆಡಿಎಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಅಭ್ಯರ್ಥಿಗಳ ಗೆಲುವಿಗೆ ಶಕ್ತಿಮೀರಿ ಶ್ರಮಿಸುವುದಾಗಿ ಇತ್ತೀಚಿಗೆ ಸುದ್ದಿಗೋಷ್ಠಿಯಲ್ಲಿ ಭರವಸೆ ನೀಡಿದ್ದಾರೆ.
          ೫ ಕಡೆ ನಾಮಪತ್ರ ಸಲ್ಲಿಕೆಗೆ ಅವಕಾಶ:
      ತಾಲೂಕು ಚುನಾವಣಾಧಿಕಾರಿಯಾಗಿರುವ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ನಗರಸಭೆ ೩೫ ವಾರ್ಡ್‌ಗಳ ಚುನಾವಣೆ ಹಿನ್ನಲೆಯಲ್ಲಿ ನಾಮಪತ್ರ ಸಲ್ಲಿಸಲು ೫ ಕಡೆ ಕೇಂದ್ರಗಳನ್ನು ತೆರೆದಿದ್ದಾರೆ.
ವಾರ್ಡ್ ನಂ. ೧, ೨, ೩, ೪, ೩೩, ೩೪ ಮತ್ತು ೩೫ರಲ್ಲಿ ಸ್ಪರ್ಧಿಸುವವರು  ಸಮಾಜ ಕಲ್ಯಾಣ ಇಲಾಖೆ, ಸಹಾಯಕ ನಿರ್ದೇಶಕರ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಬಹುದಾಗಿದೆ. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ. ನಾಗರಾಜ್ ಚುನವಣಾಧಿಕಾರಿಯಾಗಿ, ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ಸಹಾಯಕ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
     ವಾರ್ಡ್ ನಂ. ೫, ೬, ೭, ೮, ೯, ೧೦ ಮತ್ತು ೧೧ರಲ್ಲಿ ಸ್ಪರ್ಧಿಸುವವರು ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಬಹುದಾಗಿದೆ. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಅನ್ಸರ್ ಆಲಿ ಬೇಗ್ ಚುನಾವಣಾಧಿಕಾರಿಯಾಗಿ, ತಾಲೂಕು ಪಂಚಾಯಿತಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಹಾಯಕ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
ವಾರ್ಡ್ ನಂ. ೧೨, ೧೩, ೧೪, ೧೫, ೧೬, ೧೭ ಮತ್ತು ೧೮ರಲ್ಲಿ ಸ್ಪರ್ಧಿಸುವವರು ನಗರಸಭೆ ಉಪಾಧ್ಯಕ್ಷರ ಕೊಠಡಿಯಲ್ಲಿ ನಾಮಪತ್ರ ಸಲ್ಲಿಸಬಹುದಾಗಿದೆ. ಮೀನುಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಷಡಾಕ್ಷರಿ ಚುನಾವಣಾಧಿಕಾರಿಯಾಗಿ, ತಾಲೂಕು ಪಂಚಾಯಿತಿ ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಸಹಾಯಕ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
     ವಾರ್ಡ್ ನಂ. ೧೯, ೨೦, ೨೧, ೨೨, ೨೩, ೨೪ ಮತ್ತು ೨೫ರಲ್ಲಿ ಸ್ಪರ್ಧಿಸುವವರು ಕೃಷಿ ಇಲಾಖೆ ಸಹಾಯಕ ನಿರ್ದೇಶಕರ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಬಹುದಾಗಿದೆ. ಕೃಷಿ ಇಲಾಖೆ ಉಪ ನಿರ್ದೇಶಕ ಡಿ.ಎಂ ಬಸವರಾಜ್ ಚುನಾವಣಾಧಿಕಾರಿಯಾಗಿ, ಸಹಾಯಕ ಕೃಷಿ ನಿರ್ದೇಶಕ ಬಿ.ಸಿ ಶಶಿಧರ್ ಸಹಾಯಕ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
      ವಾರ್ಡ್ ನಂ.೨೬, ೨೭, ೨೮, ೨೯, ೩೦, ೩೧ ಮತ್ತು ೩೨ರಲ್ಲಿ ಸ್ಪರ್ಧಿಸುವವರು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಬಹುದಾಗಿದೆ. ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರು ಚುನಾವಣಾಧಿಕಾರಿಯಾಗಿ, ಹಿರಿಯ ಸಹಾಯಕ ನಿರ್ದೇಶಕ ಜೆ. ಕಾಂತರಾಜ್ ಸಹಾಯಕ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
         ಅರ್ಜಿ ವಜಾ :
    ನಗರಸಭೆ ಚುನಾವಣೆ ತಡೆಯಾಜ್ಞೆ ಸಂಬಂಧ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ಬುಧವಾರ ನಡೆದಿದ್ದು, ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಚುನಾವಣಾ ಪ್ರಕ್ರಿಯೆಗಳು ಯಥಾಸ್ಥಿತಿಯಲ್ಲಿ ಮುಂದುವರೆಯಲಿವೆ.

ಎಬಿವಿಪಿ ವತಿಯಿಂದ ವೀರ ಯೋಧರಿಗೆ ಶ್ರದ್ದಾಂಜಲಿ

ಛತ್ತಿಸ್‌ಗಡದಲ್ಲಿ ಶನಿವಾರ ನಡೆದ ನಕ್ಸಲ್ ದಾಳಿಯಲ್ಲಿ ಮೃತಪಟ್ಟ ವೀರ ಯೋಧರಿಗೆ ಭದ್ರಾವತಿಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಶ್ರದ್ದಾಂಜಲಿ ಸಲ್ಲಿಸಲಾಯಿತು.
   ಭದ್ರಾವತಿ, ಏ. ೭: ಛತ್ತಿಸ್‌ಗಡದಲ್ಲಿ ಶನಿವಾರ ನಡೆದ ನಕ್ಸಲ್ ದಾಳಿಯಲ್ಲಿ ಮೃತಪಟ್ಟ ವೀರ ಯೋಧರಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಶ್ರದ್ದಾಂಜಲಿ ಸಲ್ಲಿಸಲಾಯಿತು.
  ನಕ್ಸಲ್ ದಾಳಿಯನ್ನು ಖಂಡಿಸಿರುವ ವಿದ್ಯಾರ್ಥಿ ಪರಿಷತ್ ನಕ್ಸಲರ ಅಟ್ಟಹಾಸಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸುವ ಮೂಲಕ ಹುತಾತ್ಮರಾದ ವೀರ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪರಿಷತ್‌ನ ಪ್ರಮುಖರಾದ ಆಕಾಶ್, ಮನು, ಕೇಶವ, ದಿಲೀಪ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕೆಎಸ್‌ಆರ್‌ಟಿಸಿ ನೌಕರರ ಹೋರಾಟಕ್ಕೆ ಬೆಂಬಲ : ಬಸ್‌ಗಳಿಲ್ಲದೆ ಬಿಕೋ ಎನ್ನುತ್ತಿರುವ ನಿಲ್ದಾಣ

ಭದ್ರಾವತಿ ಬಸ್ ನಿಲ್ದಾಣ ಬಸ್‌ಗಳಿಲ್ಲದೆ ಬಿಕೋ ಎನ್ನುತ್ತಿರುವುದು. 
    ಭದ್ರಾವತಿ, ಏ. ೭: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಹೋರಾಟಕ್ಕೆ ನಗರದಲ್ಲೂ ಪೂರಕ ಬೆಂಬಲ ವ್ಯಕ್ತವಾಗಿದ್ದು, ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಲ್ಲಿ ಬೆಳಿಗ್ಗೆಯಿಂದ ಯಾವುದೇ ಬಸ್‌ಗಳ ಸಂಚಾರ ಕಂಡು ಬರಲಿಲ್ಲ. ಇದರಿಂದಾಗಿ ದೂರದ ಊರುಗಳಿಗೆ ತೆರಳಬೇಕಾದ ಪ್ರಯಾಣಿಕರು ಸಂಕಷ್ಟಕ್ಕೆ ಒಳಗಾಗುವಂತಾಯಿತು.
   ಖಾಸಗಿ ಬಸ್‌ಗಳ ಸಂಚಾರ ಎಂದಿನಂತೆ ಕಂಡು ಬಂದಿದ್ದು, ಹೊಳೆಹೊನ್ನೂರು, ಚನ್ನಗಿರಿ, ದಾವಣಗೆರೆ, ಚಿತ್ರದುರ್ಗ ಹಾಗು ಹುಣಸೇಕಟ್ಟೆ, ಶಂಕರಘಟ್ಟ ಮಾರ್ಗವಾಗಿ ಸಂಚರಿಸುವ ಖಾಸಗಿ ಬಸ್‌ಗಳಲ್ಲಿ ಹೆಚ್ಚಿನ ಪ್ರಯಾಣಿಕರು ಕಂಡು ಬಂದರು. ಉಳಿದಂತೆ ಭದ್ರಾವತಿ-ಶಿವಮೊಗ್ಗ ನಡುವೆ ಸಂಚರಿಸುವ ಪ್ರಯಣಿಕರು ಮ್ಯಾಕ್ಸಿಕ್ಯಾಬ್‌ಗಳನ್ನು ಅವಲಂಬಿಸುವಂತಾಯಿತು. ಕೆಲವರು ಸ್ವಂತ ವಾಹನಗಳಲ್ಲಿ ಸಂಚರಿಸುತ್ತಿರುವುದು ಕಂಡು ಬಂದಿತು.

ಭದ್ರಾವತಿ ನಗರಕ್ಕೆ ನಶಿಸಿಹೋಗುತ್ತಿರುವ ಜೀವವೈವಿಧ್ಯತೆ ಕುರಿತು ಕನ್ನಡದಲ್ಲಿ ಮಾಹಿತಿ ಪುಸ್ತಕ ವಿತರಣೆ

ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ

ಭದ್ರಾವತಿಯಲ್ಲಿ ಬುಧವಾರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಮಾತನಾಡಿದರು.
   ಭದ್ರಾವತಿ, ಏ. ೭: ವಿಶೇಷವಾಗಿ ಭದ್ರಾವತಿ ನಗರವನ್ನು ಗಮನದಲ್ಲಿಟ್ಟುಕೊಂಡು ನಶಿಸಿ ಹೋಗುತ್ತಿರುವ ಜೀವವೈವಿಧ್ಯತೆಗಳನ್ನು ಗುರುತಿಸಿ ಸುಮಾರು ೫೦ ಪುಟಗಳಷ್ಟು ಮಾಹಿತಿಯನ್ನೊಳಗೊಂಡಿರುವ ಪುಸ್ತಕವನ್ನು ಕನ್ನಡದಲ್ಲಿ ಮುದ್ರಿಸಿ ವಿತರಿಸಲಾಗುವುದು. ಈ ಪುಸ್ತಕದಲ್ಲಿನ ಮಾಹಿತಿಗಳನ್ನು ತಿಳಿದುಕೊಂಡು ಅನುಷ್ಠಾನಗೊಳಿಸಿದರೆ ಸಾಕು. ಇಲ್ಲಿನ ಜೀವವೈವಿಧ್ಯತೆ ಉಳಿಸಿಕೊಳ್ಳಬಹುದಾಗಿದೆ ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ವಿಶ್ವಾಸ ವ್ಯಕ್ತಪಡಿಸಿದರು.
    ಅವರು ಬುಧವಾರ ನಗರದ ಬಿ.ಎಚ್ ರಸ್ತೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
     ಭದ್ರಾವತಿ ನಗರ ಒಂದು ಕಾಲದಲ್ಲಿ ರಾಷ್ಟ್ರ, ಅಂತರಾಷ್ಟ್ರಿಯ ಮಟ್ಟದಲ್ಲಿ ಹೆಸರು ಮಾಡಿರುವುದು ಸರಿಯಷ್ಟೆ ಆದರೆ ಪರಿಸರ, ಜೀವ ವೈವಿಧ್ಯತೆ ಸಾಕಷ್ಟು ನಶಿಸಿ ಹೋಗಿದೆ. ಈ ಕುರಿತು ಈಗಾಗಲೇ ವರದಿಯನ್ನು ಸಿದ್ದಪಡಿಸಲಾಗಿದೆ ಎಂದರು.
    ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳ ಹಾಗು ನಗರಸಭೆ ವ್ಯಾಪ್ತಿಯ ಖಾಲಿ ಜಾಗಗಳಲ್ಲಿ ಸಸಿಗಳನ್ನು ನೆಡುವ ಯೋಜನೆಗಳನ್ನು ರೂಪಿಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯೊಂದಿಗೆ ನಗರಸಭೆ ಹಾಗೂ ಎರಡು ಕಾರ್ಖಾನೆಗಳ ಆಡಳಿತ ಮಂಡಳಿಗಳು, ಸಾಮಾಜಿ ಅರಣ್ಯ ಸಮಿತಿಗಳು ಕೈಜೋಡಿಸಬೇಕಾಗಿದೆ. ಈ ಉದ್ದೇಶಕ್ಕಾಗಿ ಸಸಿಗಳನ್ನು ಬೆಳೆಸಲಾಗಿದೆ. ಈ ಹಿಂದೆ ಮಳೆಗಾಲದಲ್ಲಿ ಸುಮಾರು ೧ ಲಕ್ಷ ಸಸಿಗಳನ್ನು ನೆಡುವ ಗುರಿಯನ್ನು ಹೊಂದಲಾಗಿತ್ತು. ಆದರೆ ಸುಮಾರು ೮೦ ರಿಂದ ೯೦ ಸಾವಿರದಷ್ಟು ಸಸಿಗಳನ್ನು ನೆಡಲಾಗಿದೆ. ಈ ಉದ್ದೇಶಕ್ಕಾಗಿಯೇ ಕೊರೋನಾ ಸಂದರ್ಭದಲ್ಲಿಯೂ ಒಟ್ಟು ಸುಮಾರು ೬ ಲಕ್ಷ ಸಸಿಗಳನ್ನು ಹಾಗು ಸುಮಾರು ೩ ಲಕ್ಷ ಸಸಿಗಳನ್ನು ಸಾರ್ವಜನಿಕರಿಗೆ ವಿತರಿಸುವ ಉದ್ದೇಶದಿಂದ ಬೆಳೆಯಾಗಿದೆ. ಮುಂದಿನ ವರ್ಷದಲ್ಲಿ ರಾಜ್ಯಾದ್ಯಂತ ಸುಮಾರು ೫೦೦ ಹೆಕ್ಟೇರ್ ಪ್ರದೇಶದಲ್ಲಿ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ ಎಂದರು.
    ನಮ್ಮ ಪರಿಸರದಲ್ಲಿ ಜೀವವೈವಿಧ್ಯತೆ ಕಡಿಮೆಯಾಗುತ್ತಿರುವ ಹಿನ್ನಲೆಯಲ್ಲಿ ಉಂಟಾಗುತ್ತಿರುವ ಸಮಸ್ಯೆಗಳನ್ನು ನಿಭಾಯಿಸಲು ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಇಲಾಖೆ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಜೀವವೈವಿಧ್ಯ ಮಂಡಳಿ ಮುಂದಾಗಿದ್ದು, ೨೦೦೩-೦೪ರಲ್ಲಿ ರೂಪುಗೊಂಡ ಮಂಡಳಿ ಕಾಯ್ದೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದೆ ಎಂದರು.
    ರಾಜ್ಯದ ಎಲ್ಲೆಡೆ ನಗರ ಹಾಗು ಗ್ರಾಮಾಂತರ ಪ್ರದೇಶಗಳ ಸ್ಥಳೀಯ ಸಂಸ್ಥೆಗಳಲ್ಲಿ ಮಂಡಳಿಯ ಸಮಿತಿಗಳನ್ನು ರಚಿಸಲಾಗಿದ್ದು, ಅದರಲ್ಲೂ ಗ್ರಾಮ ಮಟ್ಟದಲ್ಲಿ ರಚಿಸಲಾಗಿರುವ ಸಮಿತಿಗಳಿಗೆ ಹೆಚ್ಚಿನ ಬಲ ನೀಡಬೇಕಾಗಿದೆ. ಜೀವವಿವೈಧ್ಯತೆ ಉಳಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುವುದು ಈ ಗ್ರಾಮ ಸಮಿತಿಗಳಾಗಿವೆ. ಈ ಹಿನ್ನಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿ ಮಾಡಲಾಗಿದೆ ಎಂದರು.
   ಈಗಾಗಲೇ ಬಹುತೇಕ ಅರಣ್ಯ ನಾಶವಾಗಿದ್ದು, ಈ ಬಗ್ಗೆ ಚಿಂತಿಸುವ ಬದಲು ಉಳಿದಿರುವ ಅರಣ್ಯವನ್ನು ಉಳಿಸಿಕೊಳ್ಳುವ ನಿಟ್ಟಿಲ್ಲಿ ಹೆಚ್ಚು ಗಮನ ಹರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯೊಂದಿಗೆ ಹಲವಾರು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಪರೂಪದ ಔಷಧಿ ಗಿಡಗಳಿದ್ದು, ಇವುಗಳಲ್ಲಿ ಬಹುತೇಕ ನಶಿಸಿ ಹೋಗಿವೆ. ನಶಿಸಿ ಹೋಗುತ್ತಿರುವ ಔಷಧಿ ಗಿಡಗಳನ್ನು ರಂರಕ್ಷಿಸುವ ನಿಟ್ಟಿನಲ್ಲಿ ಹಾಗು ನಶಿಸಿ ಹೋಗುತ್ತಿರುವ ಕೆರೆಗಳು, ನದಿ ಮೂಲಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಂಡಳಿ ಮುಂದಾಗಿದೆ ಎಂದರು.  ಸುದ್ದಿಗೋಷ್ಠಿಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಗಾಮನಗಟ್ಟಿ ಉಪಸ್ಥಿತರಿದ್ದರು.

Tuesday, April 6, 2021

ದೆಹಲಿ ರೈತರ ಹೋರಾಟಕ್ಕೆ ಪಾದಯಾತ್ರೆ ಮೂಲಕ ಬೆಂಬಲ

ಉಕ್ಕಿನ ನಗರ ತಲುಪಿದ ಎಂಜಿನಿಯರ್ ನಾಗರಾಜ್ ಕಲಗುಟಕರ್


ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಬೆಂಬಲಿಸಿ ಬಾಗಲಕೋಟೆಯ ಎಂಜಿನಿಯರ್, ಸಾಮಾಜಿಕ ಕಾರ್ಯಕರ್ತ ನಾಗರಾಜ್ ಕಲಗುಟಕರ್ ಹಮ್ಮಿಕೊಂಡಿರುವ ಪಾದಯಾತ್ರೆಗೆ ಭದ್ರಾವತಿಯಲ್ಲಿ ಆಮ್ ಆದ್ಮಿ ಪಾರ್ಟಿ ಮುಖಂಡರು, ಕಾರ್ಯಕರ್ತರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು.  
    ಭದ್ರಾವತಿ, ಏ. ೬: ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಬೆಂಬಲಿಸಿ ಬಾಗಲಕೋಟೆಯ ಎಂಜಿನಿಯರ್, ಸಾಮಾಜಿಕ ಕಾರ್ಯಕರ್ತ ನಾಗರಾಜ್ ಕಲಗುಟಕರ್ ಹಮ್ಮಿಕೊಂಡಿರುವ ಪಾದಯಾತ್ರೆಗೆ ನಗರದ ಆಮ್ ಆದ್ಮಿ ಪಾರ್ಟಿ ಮುಖಂಡರು, ಕಾರ್ಯಕರ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
    ನಾಗರಾಜ್ ಕಲಗುಟಕರ್ ಸುಮಾರು ೭ ತಿಂಗಳು ಕಾಲ ಪಾದಯಾತ್ರೆ ಹಮ್ಮಿಕೊಂಡಿದ್ದು, ಒಟ್ಟು ೬ ಸಾವಿರ ಕಿ.ಮೀ. ದೂರ ಸಾಗಲಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪಾದಯಾತ್ರೆ ನಡೆಸಿ ಅಂತಿಮವಾಗಿ ವಿಜಯಪುರದಿಂದ ಮಹಾರಾಷ್ಟ್ರ ಮಾರ್ಗವಾಗಿ ದೆಹಲಿಗೆ ತೆರಳಲಿದ್ದಾರೆ.
     ಚಾಮರಾಜನಗರದಿಂದ ಫೆ.೧೧ರಂದು ಪಾದಯಾತ್ರೆ ಆರಂಭಿಸಿರುವ ನಾಗರಾಜ್ ಏ.೪ರ ಭಾನುವಾರ ಉಕ್ಕಿನ ನಗರಕ್ಕೆ ಆಗಮಿಸಿದರು. ಆಮ್ ಆದ್ಮಿ ಪಾರ್ಟಿ ಸ್ಥಳಿಯ ಮುಖಂಡರು, ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸುವ ಮೂಲಕ ರೈತರ ಹೋರಾಟಕ್ಕೆ ವಿಶೇಷವಾಗಿ ಪಾದಯಾತ್ರೆ ಮೂಲಕ ಬೆಂಬಲ ವ್ಯಕ್ತಪಡಿಸುತ್ತಿರುವುದು ಶ್ಲಾಘನೀಯ ಎಂದು ಅಭಿನಂದಿಸಿದರು.
     ಆಮ್ ಆದ್ಮಿ ಪಾರ್ಟಿ ಪ್ರಮುಖರಾದ ಪರಮೇಶ್ವರಚಾರ್, ಎಚ್. ರವಿಕುಮಾರ್, ಇಬ್ರಾಹಿಂ ಖಾನ್, ಅಬ್ದುಲ್ ಖದೀರ್, ಮಹಿಳಾ ಕಾರ್ಯಕರ್ತರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  
      ಕೆಎಸ್‌ಆರ್‌ಟಿಸಿ ನೌಕರರ ಹೋರಾಟಕ್ಕೆ ಬೆಂಬಲ:
   ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ನಡೆಸುತ್ತಿರುವ ಹೋರಾಟಕ್ಕೆ ಆಮ್ ಆದ್ಮಿ ಪಾರ್ಟಿ ಬೆಂಬಲ ವ್ಯಕ್ತಪಡಿಸಿದೆ.
     ಈ ಕುರಿತು ಪಕ್ಷದ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ಪತ್ರಿಕೆಗೆ ಮಾಹಿತಿ ನೀಡಿ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ನೌಕರರು ಈ ಹಿಂದೆಯೇ ಹೋರಾಟ ನಡೆಸಿದ್ದರು. ರಾಜ್ಯ ಸರ್ಕಾರ ೩ ತಿಂಗಳಲ್ಲಿ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿತ್ತು. ಆದರೆ  ಇದುವರೆಗೂ ಬೇಡಿಕೆ ಈಡೇರಿಸಿಲ್ಲ. ಇದೀಗ ಚುನಾವಣೆ ನೆಪದಲ್ಲಿ ಮುಂದಿನ ದಿನಗಳಲ್ಲಿ ಬೇಡಿಕೆಗಳನ್ನು ಈಡೇರಿಸಿಕೊಡುವುದಾಗಿ ಪುನಃ ಸುಳ್ಳು ಭರವಸೆಗಳನ್ನು ನೀಡುತ್ತಿದೆ. ಈ ಹಿನ್ನಲೆಯಲ್ಲಿ ರೈತರ ಹೋರಾಟಕ್ಕೆ ಆಮ್ ಆದ್ಮಿ ಪಾರ್ಟಿ ಬೆಂಬಲ ಸೂಚಿಸುವ ಜೊತೆಗೆ ಸಾರ್ವಜನಿಕರು, ವಿವಿಧ ಸಂಘ-ಸಂಸ್ಥೆಗಳು, ವಿವಿಧ ರಾಜಕೀಯ ಪಕ್ಷಗಳು, ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಮಹಿಳೆಯರು ಹೋರಾಟಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.