Wednesday, May 26, 2021

ನಗರಸಭೆ ಗುತ್ತಿಗೆ ನೌಕರ ಕೊಲೆ : ಮತ್ತೊಬ್ಬನಿಗೆ ಗಾಯ

ಸ್ಥಳಕ್ಕೆ ಪೂರ್ವ ವಲಯ ಪೊಲೀಸ್ ಮಹಾನಿರ್ದೇಶಕ ಭೇಟಿ

ಭದ್ರಾವತಿ ಜೈಭೀಮಾ ನಗರದಲ್ಲಿ ಕೊಲೆಯಾದ ನಗರಸಭೆ ಗುತ್ತಿಗೆ ನೌಕರ ಸುನಿಲ್
ಭದ್ರಾವತಿ, ಮೇ. ೨೬: ಕೊರೋನಾ ಹಿನ್ನಲೆಯಲ್ಲಿ ಲಾಕ್‌ಡೌನ್ ಘೋಷಿಸಿದ್ದರೂ ಸಹ ನಗರಸಭೆ ವ್ಯಾಪ್ತಿಯ ಜೈ ಭೀಮಾ ನಗರದಲ್ಲಿ ಹೊರಗಿನಿಂದ ಬಂದು ವಿನಾಕಾರಣ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದವರನ್ನು ಪ್ರಶ್ನಿಸಿದ ಅಲ್ಲಿನ ಯುವಕನೊಬ್ಬನನ್ನು ಕೊಲೆ ಮಾಡಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.
    ನಗರಸಭೆ ಗುತ್ತಿಗೆ ನೌಕರ ಸುನಿಲ್(೨೫) ಕೊಲೆಯಾಗಿದ್ದು, ಶ್ರೀಕಂಠ ಎಂಬ ಯುವಕ ಹಲ್ಲೆಗೊಳಗಾಗಿದ್ದಾನೆ. ಈ ಸಂಬಂಧ ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
        ಘಟನೆ ವಿವರ:
    ಹಳೇನಗರದ ನಿರ್ಮಲಾ ಆಸ್ಪತ್ರೆ ಹಿಂಭಾಗ ಲಕ್ಷ್ಮೀ ಸಾಮಿಲ್‌ಗೆ ಹೋಗುವ ರಸ್ತೆಗೆ ಜೈ ಭೀಮಾ ನಗರದ ರಸ್ತೆ ಸಂಪರ್ಕಗೊಂಡಿದ್ದು, ಇಲ್ಲಿನ ನಿವಾಸಿಗಳಾದ ಸುನಿಲ್, ಶ್ರೀಕಂಠ ಮತ್ತು ರಹೀಂ ರಸ್ತೆ ಸಂಪರ್ಕಗೊಂಡಿರುವ ಸ್ಥಳದ ಸಮೀಪದಲ್ಲಿ ಮಾತನಾಡಿಕೊಂಡು ನಿಂತಿರುವ ಸಂದರ್ಭದಲ್ಲಿ ಇಬ್ಬರು ಅಪರಿಚಿತರು ದ್ವಿಚಕ್ರ ವಾಹನದಲ್ಲಿ ವಿನಾಕಾರಣ ಜೈಭೀಮಾ ನಗರದಲ್ಲಿ ಸುತ್ತಾಡುವುದನ್ನು ಕಂಡು ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ಜಗಳ ಉಂಟಾಗಿದೆ.  ಈ ಜಗಳ ಇಷ್ಟಕ್ಕೆ ಮುಗಿಯದೆ ಪುನಃ ಇಬ್ಬರು ಇನ್ನಿಬ್ಬರೊಂದಿಗೆ ಜೈ ಭೀಮಾ ನಗರಕ್ಕೆ  ಆಗಮಿಸಿ ಸುನಿಲ್ ಮೇಲೆ ಜಾಕುವಿನಿಂದ ಹಲ್ಲೆ ನಡೆಸಿದ್ದು,  ಈ ಸಂದರ್ಭದಲ್ಲಿ ಬಿಡಿಸಲು ಬಂದ ಶ್ರೀಕಂಠ ಮತ್ತು ರಹೀಂ ಇಬ್ಬರ ಮೇಲೂ ಸಹ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ತೀವ್ರ ಗಾಯಗೊಂಡಿದ್ದ ಸುನಿಲ್ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
     ಹಲ್ಲೆಗೊಳಗಾಗಿರುವ ಶ್ರೀಕಂಠ ಈ ಸಂಬಂಧ ಪೊಲೀಸರಿಗೆ ನೀಡಿರುವ ದೂರಿನಲ್ಲಿ ೪ ಜನರ ಪೈಕಿ ಓರ್ವನನ್ನು ನಗರದ ಮೋಮಿನ್ ಮೊಹಲ್ಲಾ ನಿವಾಸಿ ಸಾಬೀತ್ ಎಂದು ತಿಳಿಸಿದ್ದು, ಉಳಿದ ಮೂವರ ಬಗ್ಗೆ ಯಾವುದೇ ಮಾಹಿತಿ ಇಲ್ಲ.


ಭದ್ರಾವತಿ ಜೈಭೀಮಾ ನಗರದಲ್ಲಿ ನಡೆದಿರುವ ಘಟನೆಯಲ್ಲಿ ಹಲ್ಲೆಗೊಳಗಾಗಿರುವ ಶ್ರೀಕಂಠ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು.

      ಸ್ಥಳಕ್ಕೆ ಭೇಟಿ ನೀಡಿದ ಪೂರ್ವ ವಲಯ ಪೊಲೀಸ್ ಮಹಾನಿರ್ದೇಶಕ:
   ಘಟನಾ ಸ್ಥಳಕ್ಕೆ ಬುಧವಾರ ಬೆಳಿಗ್ಗೆ ಪೂರ್ವ ವಲಯ ಪೊಲೀಸ್ ಮಹಾನಿರ್ದೇಶಕ ರವಿ, ಜಿಲ್ಲಾ ರಕ್ಷಣಾಧಿಕಾರಿ ಬಿ.ಎಂ ಲಕ್ಷ್ಮಿಪ್ರಸಾದ್ ಹಾಗು ಶಾಸಕ ಬಿ.ಕೆ ಸಂಗಮೇಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯರಿಂದ ಮಾಹಿತಿ ಪಡೆದು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನಚ್ಚರಿಕೆ ವಹಿಸಿದ್ದಾರೆ. ಕೊರೋನಾ ಲಾಕ್‌ಡೌನ್ ನಡುವೆಯೂ ಪೊಲೀಸರು ಪ್ರಕರಣದ ತನಿಖೆ ಚುರುಕುಗೊಳಿಸಿದ್ದಾರೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
       ಗಾಂಜಾ, ಮಟ್ಕಾ, ಇಸ್ಪೀಟ್ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆ ಹೆಚ್ಚಳ :
    ಘಟನೆ ಕುರಿತು ನಗರದ ಅಂಜುಮಾನ್ ಇಸ್ಲಾವುಲ್ ಮುಸ್ಲಿಮೀನ್ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಸಿ.ಎಂ ಖಾದರ್ ಹಳೇನಗರ ಪೊಲೀಸರ ಕಾರ್ಯ ವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಕೊಲೆ ಪ್ರಕರಣ ಕಾನೂನು ಬಾಹಿರ ಚಟುವಟಿಕೆಗಳ ಹಿನ್ನಲೆಯಲ್ಲಿ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.
    ಈ ಕುರಿತು ಪೂರ್ವ ವಲಯ ಪೊಲೀಸ್ ಮಹಾನಿರ್ದೇಶಕರಿಗೆ, ಜಿಲ್ಲಾ ರಕ್ಷಣಾಧಿಕಾರಿಗಳಿಗೆ ದ್ವನಿ ಮುದ್ರಣ ರವಾನಿಸಿದ್ದು, ಹಳೇನಗರ ಭಾಗದ ಹಲವೆಡೆ ಗಾಂಜಾ, ಮಟ್ಕಾ, ಇಸ್ಪೀಟ್ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚಾಗಿದೆ. ಈ ಸಂಬಂಧ ಸುಮಾರು ೬ ತಿಂಗಳ ಹಿಂದೆಯೇ ಸಾಕ್ಷ್ಯಾಧಾರಗಳೊಂದಿಗೆ ದೂರು ನೀಡಲಾಗಿತ್ತು. ಆದರೆ ಹಳೇನಗರ ಠಾಣೆ ಪೊಲೀಸರು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಪೊಲೀಸರ ಈ ನಿರ್ಲಕ್ಷ್ಯತನವೇ ಈ ಘಟನೆಗೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.

Tuesday, May 25, 2021

ಛಾಯಾಗ್ರಾಹಕ ವಡಿವೇಲು ನಿಧನ

ವಡಿವೇಲು
ಭದ್ರಾವತಿ, ಮೇ. ೨೫: ನಗರದ ಆಂಜನೇಯ ಅಗ್ರಹಾರ ಕೂಲಿಬ್ಲಾಕ್ ಶೆಡ್ ನಿವಾಸಿ, ಛಾಯಾಗ್ರಾಹಕ ವಡಿವೇಲು(೩೭) ಅನಾರೋಗ್ಯದಿಂದ ಮಂಗಳವಾರ ನಿಧನ ಹೊಂದಿದರು.
    ತಂದೆ, ಇಬ್ಬರು ಸಹೋದರಿಯರನ್ನು ಹೊಂದಿದ್ದರು. ಹಲವಾರು ವರ್ಷಗಳಿಂದ ನಗರದಲ್ಲಿ ಛಾಯಾಗ್ರಾಹಕ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದು, ತಾಲೂಕು ಛಾಯಾಗ್ರಾಹಕರ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರ ನಿಧನಕ್ಕೆ ತಾಲೂಕು ಛಾಯಾಗ್ರಾಹಕರ ಸಂಘ ಸಂತಾಪ ಸೂಚಿಸಿದೆ.

ವಿವಿಧೆ ಬೇಡಿಕೆ ಈಡೇರಿಕೆಗಾಗಿ ಆಶಾ ಕಾರ್ಯಕರ್ತೆಯರ ಪೋಸ್ಟರ್ ಚಳುವಳಿ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಲಾಕ್‌ಡೌನ್ ಹಿನ್ನಲೆಯಲ್ಲಿ ವಿಶೇಷವಾಗಿ ರಾಜ್ಯ ವ್ಯಾಪಿ ಆನ್ಲೈನ್ ಮೂಲಕ ಪೋಸ್ಟರ್ ಚಳುವಳಿ ನಡೆಸಿ ಗಮನ ಸೆಳೆದರು.
    ಭದ್ರಾವತಿ, ಮೇ. ೨೫: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಲಾಕ್‌ಡೌನ್ ಹಿನ್ನಲೆಯಲ್ಲಿ ವಿಶೇಷವಾಗಿ ರಾಜ್ಯ ವ್ಯಾಪಿ ಆನ್ಲೈನ್ ಮೂಲಕ ಪೋಸ್ಟರ್ ಚಳುವಳಿ ನಡೆಸಿ ಗಮನ ಸೆಳೆದರು.
   ಎಐಯುಟಿಯುಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಮನೆಯಿಂದ, ಕೆಲಸದ ಸ್ಥಳದಿಂದಲೇ ಪೋಸ್ಟರ್ ಚಳುವಳಿ ನಡೆಸಿದ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ವಿವಿಧ ಕೊರೋನಾ ವಾರಿಯರ್ಸ್‌ಗಳಿಗೆ ನೀಡಿರುವಂತೆ ಆಶಾ ಕಾರ್ಯಕರ್ತೆಯರಿಗೂ ಸಹ ಕೋವಿಡ್ ವಿಶೇಷ ಪ್ರೋತ್ಸಾಹ ಧನ ಮಾಸಿಕ ರು. ೫೦೦೦ ನೀಡುವಂತೆ ಆಗ್ರಹಿಸಿದರು.
    ಸೋಂಕಿಗೆ ಒಳಗಾದ ಕಾರ್ಯಕರ್ತೆಯರಿಗೆ ಸೋಂಕಿನ ತೀವ್ರತೆಗೆ ಅನುಗುಣವಾಗಿ (ಕನಿಷ್ಠ ೨೫ ಸಾವಿರ ರು.) ಪರಿಹಾರ ನೀಡುವುದು. ಅಗತ್ಯವಿರುವಷ್ಟು ಮಾಸ್ಕ್, ಸ್ಯಾನಿಟೈಸರ್, ಗ್ಲೌಸ್ ನೀಡುವುದು. ೩ ತಿಂಗಳು ಬಾಕಿ ಇರುವ ೪,೦೦೦ ರು. ಮಾಸಿಕ ಗೌರವ ಧನ ತಕ್ಷಣ ಬಿಡುಗಡೆಗೊಳಿಸುವುದು ಹಾಗು ಮೊದಲ ಅಲೆಯಲ್ಲಿ ನಿಧನ ಹೊಂದಿರುವ ಆಶಾ ಕಾರ್ಯಕರ್ತೆಯರ ಕುಟುಂಬಗಳಿಗೆ ಕೋವಿಡ್ ವಿಮೆ ಹಣ ತಕ್ಷಣ ನೀಡುವಂತೆ ಒತ್ತಾಯಿಸಿದರು.
   ಸಂಘದ ಜಿಲ್ಲಾಧ್ಯಕ್ಷೆ ರಾಜೇಶ್ವರಿ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಚಳುವಳಿ ನಡೆಸಲಾಯಿತು. ಶಾಯಿನಾ ಬಾನು, ಚಂದ್ರಕಲಾ, ಆಶಾ, ವಸಂತ ಮತ್ತು ಸುಜಾತ ನಗರದಲ್ಲಿ ಚಳುವಳಿ ನಡೆಸುವ ಮೂಲಕ ಗಮನ ಸೆಳೆದರು.

೧೩೫ ಸೋಂಕು, ಶತಕ ದಾಟಿದ ಸಾವಿನ ಸಂಖ್ಯೆ

ಭದ್ರಾವತಿ, ಮೇ. ೨೫: ಮೊದಲ ಹಂತದ ಲಾಕ್‌ಡೌನ್ ಮುಗಿದು ಎರಡನೇ ಹಂತದ ಲಾಕ್‌ಡೌನ್ ಜಾಲ್ತಿಯಲ್ಲಿದ್ದು, ಆದರೂ ಸಹ ತಾಲೂಕಿನಲ್ಲಿ ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗಿಲ್ಲ. ಮಂಗಳವಾರ ೧೩೫ ಸೋಂಕು ದೃಢಪಟ್ಟಿದೆ.
    ಒಟ್ಟು ೩೫೨ ಮಂದಿಯ ಮಾದರಿ ಸಂಗ್ರಹಿಸಲಾಗಿದ್ದು, ಈ ಪೈಕಿ ೧೩೫ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಒಟ್ಟು ೮೮ ಮಂದಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ಒಂದು ಸಾವು ಸಂಭವಿಸಿದೆ.
     ತಾಲೂಕಿನಲ್ಲಿ ಒಟ್ಟು ಸಾವಿನ ಸಂಖ್ಯೆ ಶತಕ ದಾಟಿದ್ದು, ೧೦೧ ಮಂದಿ ಮೃತಪಟ್ಟಿದ್ದಾರೆ. ಒಟ್ಟು ೩೨೭ ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ತಾಲೂಕಿನ ನಗರ ವ್ಯಾಪ್ತಿಯಲ್ಲಿ ಒಟ್ಟು ೬೬ ಕಂಟೈನ್‌ಮೆಂಟ್ ಜೋನ್‌ಗಳಿವೆ.

ನಿರ್ಮಲಾ ನಿಧನ

ನಿರ್ಮಲಾ
   ಭದ್ರಾವತಿ, ಮೇ. ೨೫: ನಗರದ ಹೊಸಮನೆ ನಿವಾಸಿ, ಸುಗಮ ಸಂಗೀತ ಗಾಯಕ ಹಾಗು ಚಿತ್ರ ಕಲಾವಿದ ವಾಣಿ ಆರ್ಟ್ಸ್‌ನ ಸುಬ್ರಹ್ಮಣ್ಯ ಕೆ. ಅಯ್ಯರ್ ಅವರ ಪತ್ನಿ ನಿರ್ಮಲಾ(೪೯) ಮಂಗಳವಾರ ನಿಧನ ಹೊಂದಿದರು.
    ಪತ್ನಿ, ಓರ್ವ ಪುತ್ರಿಯನ್ನು ಹೊಂದಿದ್ದರು. ನಿರ್ಮಲಾ ಅವರು ಸುಬ್ರಹ್ಮಣ್ಯ ಅವರ ಕಲಾ ಕ್ಷೇತ್ರದ ಸಾಧನೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಜೊತೆಗೆ ಬೆನ್ನೆಲುಬಾಗಿದ್ದರು. ಇವರ ನಿಧನಕ್ಕೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.


ರಂಗಪ್ಪ ನಿಧನ

ರಂಗಪ್ಪ  
   ಭದ್ರಾವತಿ, ಮೇ. ೨೫: ತಾಲೂಕಿನ ಬಾರಂದೂರು ಗ್ರಾಮದ ನಿವಾಸಿ ರಂಗಪ್ಪ(೭೦) ಮಂಗಳವಾರ ಹೃದಯಾಘಾತದಿಂದ ನಿಧನ ಹೊಂದಿದರು.
  ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಹೊಂದಿದ್ದರು. ಮಾದಿಗ ಸಮಾಜ, ಆದಿ ಜಾಂಬವ ಸಮಾಜ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದರು. ಅಲ್ಲದೆ ಹಿರಿಯ ಮಾರ್ಗದರ್ಶಕರಾಗಿ ಬಾರಂದೂರು ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತಿದ್ದರು.
  ಇವರ ನಿಧನಕ್ಕೆ ಬಾರಂದೂರು ಗ್ರಾಮಸ್ಥರು, ಕರ್ನಾಟಕ ರಾಜ್ಯ ಮಾದಿಗ ಸಮಾಜ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸಂತಾಪ ಸೂಚಿಸಿದ್ದಾರೆ.

ವಾಡ್.೨೯ ಬಡಕುಟುಂಬಗಳಿಗೆ ದಿನಸಿ ಸಾಮಗ್ರಿ ವಿತರಣೆ


ಭದ್ರಾವತಿ, ಮೇ. ೨೫: ನಗರಸಭೆ ಜನ್ನಾಪುರ ಕಿತ್ತೂರು ರಾಣಿ ಚನ್ನಮ್ಮ ಬಡಾವಣೆ ಒಳಗೊಂಡಿರುವ ವಾರ್ಡ್ ನಂ.೨೯ರ ವ್ಯಾಪ್ತಿಯ ಬಡ ಕುಟುಂಬಗಳಿಗೆ ವಾರ್ಡ್ ನಿವಾಸಿ, ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಎ.ಜಿ ರಾಧಮ್ಮ ಪ್ರಭಾಕರ್ ಕುಟುಂಬದವರು ದಿನಸಿ ಸಾಮಗ್ರಿಗಳನ್ನು ವಿತರಿಸಿದರು.
    ಭದ್ರಾವತಿ, ಮೇ. ೨೫: ನಗರಸಭೆ ಜನ್ನಾಪುರ ಕಿತ್ತೂರು ರಾಣಿ ಚನ್ನಮ್ಮ ಬಡಾವಣೆ ಒಳಗೊಂಡಿರುವ ವಾರ್ಡ್ ನಂ.೨೯ರ ವ್ಯಾಪ್ತಿಯ ಬಡ ಕುಟುಂಬಗಳಿಗೆ ವಾರ್ಡ್ ನಿವಾಸಿ, ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಎ.ಜಿ ರಾಧಮ್ಮ ಪ್ರಭಾಕರ್ ಕುಟುಂಬದವರು ದಿನಸಿ ಸಾಮಗ್ರಿಗಳನ್ನು ವಿತರಿಸಿದರು.
    ಕೋವಿಡ್ ಹಿನ್ನಲೆಯಲ್ಲಿ ಸರ್ಕಾರ ಲಾಕ್‌ಡೌನ್ ಜಾರಿಗೊಳಿಸಿರುವ ಪರಿಣಾಮ ವಾರ್ಡ್‌ನಲ್ಲಿ ವಾಸಿಸುತ್ತಿರುವ ಬಡ ಕುಟುಂಬಗಳು ಸಂಕಷ್ಟಕ್ಕೆ ಒಳಗಾಗಿವೆ. ಇದನ್ನು ಮನಗಂಡು ರಾಧಮ್ಮ ಕುಟುಂಬದವರು ಸುಮಾರು ೭೦ ಕುಟುಂಬಗಳಿಗೆ ವೈಯಕ್ತಿಕವಾಗಿ ದಿನಸಿಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರದಿದ್ದಾರೆ. ಕಳೆದ ಬಾರಿ ಸಹ ಲಾಕ್‌ಡೌನ್ ಸಂದರ್ಭದಲ್ಲಿ ದಿನಸಿ ಸಾಮಗ್ರಿಗಳನ್ನು ವಿತರಿಸಲಾಗಿತ್ತು.