Friday, June 11, 2021

ಪತ್ರಕರ್ತರ ಹಿತರಕ್ಷಣೆ ಜೊತೆಗೆ ಕುಟುಂಬದವರ ರಕ್ಷಣೆ ಸಹ ಮುಖ್ಯ : ಬಿ.ವೈ ರಾಘವೇಂದ್ರ


ಭದ್ರಾವತಿ ಹಳೇನಗರದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶುಕ್ರವಾರ ಪತ್ರಕರ್ತರ ಕುಟುಂಬದವರಿಗೆ ಹಮ್ಮಿಕೊಳ್ಳಲಾಗಿದ್ದ ಕೊರೋನಾ ಲಸಿಕೆ ಕಾರ್ಯಕ್ರಮದಲ್ಲಿ ಪತ್ರಕರ್ತರಿಗೆ ಕೊರೋನಾ ಸೋಂಕಿನ ರಕ್ಷಣೆಗಾಗಿ ಫೇಸ್ ಶೀಲ್ಡ್, ಸ್ಯಾನಿಟೈಜರ್, ಮಾಸ್ಕ್ ಮತ್ತು ಸ್ಟೀಮ್ ಇನ್‌ಹಲೇರ್ ಸೇರಿದಂತೆ ಇನ್ನಿತರ ವಸ್ತುಗಳನ್ನೊಳಗೊಂಡ ಕಿಟ್ ವಿತರಿಸಲಾಯಿತು.
    ಭದ್ರಾವತಿ, ಜೂ. ೧೧: ಕೊರೋನಾ ಸಂಕಷ್ಟದ ಸಮಯದಲ್ಲೂ ಹಗಲಿರುಳು ಶ್ರಮಿಸುತ್ತಿರುವ ಪತ್ರಕರ್ತರ ಹಿತರಕ್ಷಣೆ ಜೊತೆಗೆ ಕುಟುಂಬದವರ ರಕ್ಷಣೆ ಸಹ ಮುಖ್ಯವಾಗಿದೆ. ಈ ಹಿನ್ನಲೆಯಲ್ಲಿ ಕುಟುಂಬದವರಿಗೂ ಕೊರೋನಾ ಲಸಿಕೆ ಹಾಕುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಇದೀಗ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಲಸಿಕೆ ನೀಡುವ ಕಾರ್ಯ ನಡೆಯುತ್ತಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.
    ಅವರು ಹಳೇನಗರದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತರ ಕುಟುಂಬದವರಿಗೆ ಹಮ್ಮಿಕೊಳ್ಳಲಾಗಿದ್ದ ಕೊರೋನಾ ಲಸಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
     ಎಲ್ಲರೂ ಲಸಿಕೆ ಹಾಕಿಸಿಕೊಂಡಾಗ ಮಾತ್ರ ೩ನೇ ಅಲೆ ನಿಯಂತ್ರಿಸಲು ಸಾಧ್ಯ. ಈಗಾಗಲೇ ೨ನೇ ಅಲೆ ಪರಿಣಾಮ ಜನರು ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಕೊರೋನಾ ಸೋಂಕು ಪುನಃ ಕಾಣಿಸಿಕೊಳ್ಳದಂತೆ ಸಂಪೂರ್ಣವಾಗಿ ನಿರ್ಮೂಲನೆಯಾಗಬೇಕು. ಈ ನಿಟ್ಟಿನಲ್ಲಿ ಎಲ್ಲರ ಪ್ರಯತ್ನ ಬಹಳ ಮುಖ್ಯವಾಗಿದೆ ಎಂದರು.
     ಸಂಕಷ್ಟದ ಸಮಯದಲ್ಲೂ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಅಭಿವೃದ್ಧಿ ಕಡೆಗೆ ಹೆಚ್ಚಿನ ಗಮನ ನೀಡುತ್ತಿವೆ. ಅಭಿವೃದ್ಧಿ ಕಾರ್ಯಗಳಿಗೂ ಆರ್ಥಿಕ ನೆರವು ಒದಗಿಸುತ್ತಿವೆ. ಈ ನಡುವೆ ಸಂಕಷ್ಟದ ಸಮಯದಲ್ಲೂ ಹಲವು ಸಂಘ ಸಂಸ್ಥೆಗಳು ನೆರವಿಗೆ ಮುಂದಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಅದರಲ್ಲೂ ಭದ್ರಾವತಿ ನಗರದಲ್ಲಿ ಹಲವು ಸಂಘ-ಸಂಸ್ಥೆಗಳು ತೆರೆಮರೆಯಲ್ಲಿ ಸೇವೆ ಸಲ್ಲಿಸುತ್ತಿವೆ. ವಿಶೇಷವಾಗಿ ಬಜರಂಗದಳ ಕಾರ್ಯಕರ್ತರು ಸುಮಾರು ೫೦ಕ್ಕೂ ಅಧಿಕ ಕೊರೋನಾ ಸೋಂಕಿತ ಮೃತದೇಹಗಳ ಅಂತ್ಯಸಂಸ್ಕಾರ ನೆರವೇರಿಸಿರುವುದು ಎಲ್ಲರೂ ಮೆಚ್ಚುವ ಕಾರ್ಯವಾಗಿದೆ ಎಂದರು.
ಪತ್ರಿಕಾಭವನ ಕಾಮಗಾರಿ ಶೀಘ್ರವಾಗಿ ಮುಕ್ತಾಯಗೊಳ್ಳಬೇಕು. ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ. ಮುಂದಿನ ದಿನಗಳಲ್ಲಿ ಸುಂದರವಾದ ಸಭಾ ಆವರಣದಲ್ಲಿ ಕಾರ್ಯಕ್ರಮಗಳು ನಡೆಯುವಂತಾಗಬೇಕೆಂದರು.
      ಇದೆ ಸಂದರ್ಭದಲ್ಲಿ ಪತ್ರಕರ್ತರಿಗೆ ಕೊರೋನಾ ಸೋಂಕಿನ ರಕ್ಷಣೆಗಾಗಿ ಫೇಸ್ ಶೀಲ್ಡ್, ಸ್ಯಾನಿಟೈಜರ್, ಮಾಸ್ಕ್ ಮತ್ತು ಸ್ಟೀಮ್ ಇನ್‌ಹಲೇರ್ ಸೇರಿದಂತೆ ಇನ್ನಿತರ ವಸ್ತುಗಳನ್ನೊಳಗೊಂಡ ಕಿಟ್ ವಿತರಿಸಲಾಯಿತು.
     ಸೂಡಾ ಅಧ್ಯಕ್ಷ ಎಸ್.ಎಸ್ ಜ್ಯೋತಿಪ್ರಕಾಶ್, ಸದಸ್ಯರಾದ ರಾಮಲಿಂಗಯ್ಯ, ವಿ. ಕದಿರೇಶ್, ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಎಸ್. ದತ್ತಾತ್ರಿ, ಪ್ರಮುಖರಾದ ಎಂ. ಪ್ರಭಾಕರ್, ಬಿ.ಕೆ ಶ್ರೀನಾಥ್, ಕೂಡ್ಲಿಗೆರೆ ಹಾಲೇಶ್, ಮಂಗೋಟೆ ರುದ್ರೇಶ್, ಕೆ. ಮಂಜುನಾಥ್, ಅವಿನಾಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ದೇಶದ ಪ್ರತಿಯೊಬ್ಬರಿಗೂ ಲಸಿಕೆ : ಸವಾಲುಗಳ ನಡುವೆ ೩ನೇ ಅಲೆ ಸಮರ್ಥವಾಗಿ ಎದುರಿಸಿ

ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆಯಲ್ಲಿ ತಾಲೂಕಿನ ಸರ್ಕಾರಿ ನೌಕರರಿಗಾಗಿ ಪ್ರತ್ಯೇಕವಾಗಿ ತೆರೆಯಲಾಗಿರುವ ಕೋವಿಡ್ ಆರೈಕೆ ಕೇಂದ್ರ ಉದ್ಘಾಟಿಸಿ ಸಂಸದ ಬಿ.ವೈ ರಾಘವೇಂದ್ರ ಮಾತನಾಡಿದರು.
    ಭದ್ರಾವತಿ, ಜೂ. ೧೧: ಕೊರೋನಾ ನಿರ್ಮೂಲನೆಗಾಗಿ ಎಲ್ಲೆಡೆ ನಿರಂತರವಾದ ಹೋರಾಟಗಳು ನಡೆಯುತ್ತಿವೆ. ಈ ನಡುವೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈಗಾಗಲೇ ದೇಶದ ಪ್ರತಿಯೊಬ್ಬರಿಗೂ ಲಸಿಕೆ ಲಭ್ಯವಾಗಬೇಕೆಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲೆಡೆ ಲಸಿಕೆ ಕಾರ್ಯ ಭರದಿಂದ ನಡೆಯುತ್ತಿದ್ದು, ಮುಂದಿನ ವಾರ ರಾಜ್ಯಕ್ಕೆ ೧ ಕೋಟಿ ಲಸಿಕೆ ಬರಲಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದರು.
    ಅವರು ಶುಕ್ರವಾರ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆಯಲ್ಲಿ ತಾಲೂಕಿನ ಸರ್ಕಾರಿ ನೌಕರರಿಗಾಗಿ ಪ್ರತ್ಯೇಕವಾಗಿ ತೆರೆಯಲಾಗಿರುವ ಕೋವಿಡ್ ಆರೈಕೆ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
     ಇದೀಗ ೨ನೇ ಅಲೆ ಮುಕ್ತಾಯಗೊಳ್ಳುವ ಹಂತದಲ್ಲಿದ್ದು, ೩ನೇ ಅಲೆ ಕಾಣಿಸಿಕೊಳ್ಳುವ ಬಗ್ಗೆ ತಜ್ಞರು ಈಗಾಗಲೇ ಮುನ್ಸೂಚನೆ ನೀಡಿದ್ದಾರೆ. ಇದೀಗ ನಮ್ಮ ಮುಂದೆ ಹಲವು ಸವಾಲುಗಳಿವೆ. ಅವುಗಳನ್ನು ಸಮರ್ಥವಾಗಿ, ಪ್ರಾಮಾಣಿಕವಾಗಿ ಎದುರಿಸುವ ಪ್ರಯತ್ನ ಎಲ್ಲರೂ ಕೈಗೊಳ್ಳಬೇಕಾಗಿದೆ. ಸರ್ಕಾರಿ ನೌಕರರು  ಜೀವದ ಹಂಗು ತೊರೆದು ಹಗಲಿರುಳು ಶ್ರಮಿಸುತ್ತಿದ್ದಾರೆ. ರಾಜ್ಯದಲ್ಲಿ ಸರ್ಕಾರಿ ನೌಕರರ ಸಂಘಟನೆ ಹೆಚ್ಚು ಪ್ರಬಲವಾಗಿದ್ದು, ಕ್ರಿಯಾಶೀಲ ಅಧ್ಯಕ್ಷರ ಮಾರ್ಗದರ್ಶನದಲ್ಲಿ ರಾಜ್ಯಾದ್ಯಂತ ನಿರಂತರವಾದ ಚಟುವಟಿಕೆಗಳು ನಡೆಯುತ್ತಿವುದು ಶ್ಲಾಘನೀಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು.


ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆಯಲ್ಲಿ ತಾಲೂಕಿನ ಸರ್ಕಾರಿ ನೌಕರರಿಗಾಗಿ ಪ್ರತ್ಯೇಕವಾಗಿ ತೆರೆಯಲಾಗಿರುವ ಕೋವಿಡ್ ಆರೈಕೆ ಕೇಂದ್ರ ಉದ್ಘಾಟಿಸಿದ ಸಂಸದ ಬಿ.ವೈ ರಾಘವೇಂದ್ರ ನಂತರ ಪರಿಶೀಲನೆ ನಡೆಸಿದರು.
    ಶಾಸಕ ಬಿ.ಕೆ ಸಂಗಮೇಶ್ವರ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ, ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ, ಸೂಡಾ ಅಧ್ಯಕ್ಷ ಎಸ್.ಎಸ್ ಜ್ಯೋತಿಪ್ರಕಾಶ್, ಸದಸ್ಯರಾದ ರಾಮಲಿಂಗಯ್ಯ, ವಿ. ಕದಿರೇಶ್, ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಎಸ್. ದತ್ತಾತ್ರಿ, ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ಕೂಬಾನಾಯ್ಕ, ಯು. ಮಹಾದೇವಪ್ಪ, ಧನಂಜಯ, ನಿಲೇಶ್‌ರಾಜ್, ರಾಜ್‌ಕುಮಾರ್, ಎಂ.ಎಸ್. ಬಸವರಾಜ್, ರಾಜಪ್ಪ, ರಂಗನಾಥಪ್ರಸಾದ್, ರೇವಣಪ್ಪ, ಸರ್ಕಾರಿ ನೌಕರರ ಸಂಘದ ಪ್ರಮುಖರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

Thursday, June 10, 2021

ಸರ್ಕಾರಿ ನೌಕರರಿಗೆ ಪ್ರತ್ಯೇಕ ಕೋವಿಡ್ ಆರೈಕೆ ಕೇಂದ್ರ : ಜೂ.೧೧ರ ಬೆಳಿಗ್ಗೆ ೯.೩೦ಕ್ಕೆ ಉದ್ಘಾಟನೆ

   ಭದ್ರಾವತಿ, ಜೂ. ೧೦: ತಾಲೂಕಿನ ಸರ್ಕಾರಿ ನೌಕರರಿಗಾಗಿ ಪ್ರತ್ಯೇಕವಾಗಿ ಕೋವಿಡ್ ಆರೈಕೆ ಕೇಂದ್ರ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆಯಲ್ಲಿ ಕಾರ್ಯಾರಂಭಗೊಳ್ಳುತ್ತಿದ್ದು, ಸಂಸದ ಬಿ.ವೈ ರಾಘವೇಂದ್ರ ಮತ್ತು ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ ಆರೈಕೆ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸುವರು.
     ಕಳೆದ ೩-೪ ದಿನಗಳ ಹಿಂದೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ನೂತನ ಅಧ್ಯಕ್ಷ ಬಿ. ಸಿದ್ದಬಸಪ್ಪ ತಾಲೂಕಿನಲ್ಲಿ ಸರ್ಕಾರಿ ನೌಕರರು ಹೆಚ್ಚಾಗಿ ಕೊರೋನಾ ಸೋಂಕಿಗೆ ಒಳಗಾಗುತ್ತಿದ್ದು, ಈ ಹಿನ್ನಲೆಯಲ್ಲಿ ನೌಕರರಿಗೆ ಪ್ರತ್ಯೇಕವಾದ ಆರೈಕೆ ಕೇಂದ್ರ ತೆರೆಯುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.
    ತಕ್ಷಣ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಪ್ರತ್ಯೇಕ ಆರೈಕೆ ಕೇಂದ್ರ ತೆರೆಯಲು ಆದೇಶಿಸಿದ್ದರು. ಈ ಹಿನ್ನಲೆಯಲ್ಲಿ ವಿಐಎಸ್‌ಎಲ್ ಆಸ್ಪತ್ರೆಯಲ್ಲಿ ಪ್ರತ್ಯೇಕವಾದ ಆರೈಕೆ ಕೇಂದ್ರ ತೆರೆಯಲಾಗಿದೆ. ಬೆಳಿಗ್ಗೆ ೯.೩೦ಕ್ಕೆ ಉದ್ಘಾಟನೆ ನಡೆಯಲಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಸಿದ್ದಬಸಪ್ಪ ಕೋರಿದ್ದಾರೆ.

ಜೂ.೧೪ರ ವರೆಗೆ ಗೋಣಿ ಬೀಡು, ಮಲ್ಲಿಗೇನಹಳ್ಳಿ ಸೀಲ್‌ಡೌನ್


ಭದ್ರಾವತಿ ತಾಲೂಕಿನ ತಾವರಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಣಿ ಬೀಡು ಮತ್ತು ಮಲ್ಲಿಗೇನಹಳ್ಳಿ ಎರಡು ಗ್ರಾಮಗಳನ್ನು ಜೂ.೧೪ರ ವರೆಗೆ ಸೀಲ್‌ಡೌನ್ ಮಾಡಿರುವ ಹಿನ್ನಲೆಯಲ್ಲಿ ಗ್ರಾಮದ ರಸ್ತೆಗಳು ಬಿಕೋ ಎನ್ನುತ್ತಿರುವುದು.
     ಭದ್ರಾವತಿ, ಜೂ. ೧೦: ತಾಲೂಕಿನ ತಾವರಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಣಿ ಬೀಡು ಮತ್ತು ಮಲ್ಲಿಗೇನಹಳ್ಳಿ ಎರಡು ಗ್ರಾಮಗಳನ್ನು ಜೂ.೧೪ರ ವರೆಗೆ ಸೀಲ್‌ಡೌನ್ ಮಾಡಲಾಗಿದೆ.
   ಗೋಣಿ ಬೀಡು ಮತ್ತು ಮಲ್ಲಿಗೇನಹಳ್ಳಿ ಈ ಎರಡು ಗ್ರಾಮಗಳಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಗ್ರಾಮ ಪಂಚಾಯಿತಿ ಕೋವಿಡ್ ಕಾರ್ಯ ಪಡೆ ಸಭೆಯಲ್ಲಿ ಸೀಲ್‌ಡೌನ್ ಮಾಡಲು ತೀರ್ಮಾನಿಸಲಾಯಿತು.
   ಗ್ರಾಮದಲ್ಲಿ ದಿನಸಿ ಹಾಗು ಮಾಸದಂಗಡಿಗಳಲ್ಲಿ ಬೆಳಿಗ್ಗೆ ೬ ರಿಂದ ೮ ಗಂಟೆಗೆ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ಹೋಟೆಲ್ ಸೇರಿದಂತೆ ಯಾವುದೇ ಅಂಗಡಿಮುಂಗಟ್ಟುಗಳು ತೆರೆಯುವಂತಿಲ್ಲ. ಗ್ರಾಮ ಪಂಚಾಯಿತಿ ಆಡಳಿತ ಮಾಸ್ಕ್ ಧರಿಸದೆ ಸಂಚರಿಸುವವರಿಗೆ ೧೦೦ ರು. ದಂಡ ವಿಧಿಸಲಿದೆ.

ಭದ್ರಾವತಿ ನಗರಸಭೆ ೩೫ ವಾರ್ಡ್‌ಗಳಲ್ಲಿ ೧೨ ಲಸಿಕಾ ಕೇಂದ್ರಗಳಿಗೆ ಚಾಲನೆ


ಭದ್ರಾವತಿ ನಗರಸಭೆ ವಾರ್ಡ್ ನಂ. ೨೬ರ ವ್ಯಾಪ್ತಿಯಲ್ಲಿ ಸರ್‌ಎಂವಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ತೆರೆಯಲಾಗಿರುವ ಲಸಿಕಾ ಕೇಂದ್ರಕ್ಕೆ ಗುರುವಾರ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು. ನಗರಸಭೆ ಪೌರಾಯುಕ್ತ ಕೆ ಪರಮೇಶ್, ಸದಸ್ಯರಾದ ಕೆ. ಸುದೀಪ್‌ಕುಮಾರ್, ಸರ್ವಮಂಗಳ ಭೈರಪ್ಪ, ಮಾಜಿ ಸದಸ್ಯ ಮುಕುಂದಪ್ಪ ಸೇರಿದಂತೆ ಸ್ಥಳೀಯ ಮುಖಂಡರು ಇನ್ನಿತರರು ಉಪಸ್ಥಿತರಿದ್ದರು.
    ಭದ್ರಾವತಿ, ಜೂ. ೧೦: ನಗರಸಭೆ ೩೫ ವಾರ್ಡ್‌ಗಳ ವ್ಯಾಪ್ತಿಯಲ್ಲಿ ನಗರಸಭೆ ವತಿಯಿಂದ ತೆರೆಯಲಾಗಿರುವ ಕೋವಿಡ್-೧೯ ಲಸಿಕಾ ಕೇಂದ್ರಗಳಿಗೆ ಗುರುವಾರ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ  ನೀಡಿದರು.
    ಇತ್ತೀಚೆಗೆ ನಗರಸಭೆ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಕೋವಿಡ್ ಕಾರ್ಯಪಡೆ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ನಗರಸಭೆ ವ್ಯಾಪ್ತಿಯಲ್ಲಿ ೧, ೨ ರಿಂದ ೩ ಹಾಗು ೩ ರಿಂದ ೪ ವಾರ್ಡ್‌ಗಳು ಒಳಗೊಂಡಂತೆ ಒಟ್ಟು ೧೨ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ.  
         ನಗರಸಭೆ ೩೫ ವಾರ್ಡ್‌ಗಳಲ್ಲಿ ತೆರೆಯಲಾಗಿರುವ ಲಸಿಕಾ  ಕೇಂದ್ರಗಳು:
     ವಾರ್ಡ್ ನಂ.೧, ೨ ಮತ್ತು ೩೫ರ ವ್ಯಾಪ್ತಿಯ ಹೆಬ್ಬಂಡಿ, ಕಡದಕಟ್ಟೆ, ಶಿವರಾಮನಗರ, ವಿಶ್ವೇಶ್ವರಾಯ ನಗರ, ಭಂಡಾರಹಳ್ಳಿ, ಜೇಡಿಕಟ್ಟೆ, ಲಕ್ಷ್ಮೀಪುರ, ಕವಲಗುಂದಿ ಹಾಗು ಲೋಯರ್ ಹುತ್ತಾ ಪ್ರದೇಶಗಳ ನಿವಾಸಿಗಳಿಗೆ ಅನುಕೂಲವಾಗುವಂತೆ ಬಿ.ಎಚ್ ರಸ್ತೆಯ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಲಸಿಕಾ ಕೇಂದ್ರ ತೆರೆಯಲಾಗಿದೆ. ಕಡದಕಟ್ಟೆ ಎಚ್‌ಪಿಎಸ್ ಶಾಲೆಯ ಸಹ ಶಿಕ್ಷಕ ನಾಗೇಶ್‌ನಾಯ್ಕ, ನ್ಯೂಟೌನ್ ಎಸ್‌ಎವಿ ಶಾಲೆ ಸಹ ಶಿಕ್ಷಕ ಖಂಡೋಜಿರಾವ್, ಪದ್ಮೇನಹಳ್ಳಿ ಎಚ್‌ಪಿಎಸ್ ಶಾಲೆ ಸಹ ಶಿಕ್ಷಕ ಎಚ್. ತಿಮ್ಮಪ್ಪ ಹಾಗು ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಲತಾಮಣಿ ಅವರನ್ನು ಸಿಬ್ಬಂದಿಗಳಾಗಿ ನಿಯೋಜಿಸಲಾಗಿದೆ.



       ವಾರ್ಡ್ ನಂ.೨೮, ೨೯ ಮತ್ತು ೩೦ರ ವ್ಯಾಪ್ತಿಯ ಹೊಸ ಹಾಗು ಹಳೇ ಸಿದ್ದಾಪುರ, ಸಿದ್ದಾಪುರ ತಾಂಡ, ಹೊಸೂರು, ಸಂಕ್ಲಿಪುರ ಮತ್ತು ಜನ್ನಾಪುರ ಪ್ರದೇಶಗಳ ನಿವಾಸಿಗಳಿಗೆ ಅನುಕೂಲವಾಗುವಂತೆ ಜನ್ನಾಪುರ ಬಸವೇಶ್ವರ ಪ್ರೌಢ ಶಾಲೆಯಲ್ಲಿ ಲಸಿಕಾ ಕೇಂದ್ರ ತೆರೆಯಲಾಗಿದೆ. ರಬ್ಬರ್‌ಕಾಡು ಜಿಎಚ್‌ಪಿಎಸ್ ಶಾಲೆಯ ಸಹ ಶಿಕ್ಷಕ ಶಿವಕುಮಾರ ಸ್ವಾಮಿ, ದೇವರ ನರಸೀಪುರ ಜಿಎಚ್‌ಪಿಎಸ್ ಶಾಲೆಯ ಸಹ ಶಿಕ್ಷಕ ದೇವೇಂದ್ರ ನಾಯ್ಕ, ಹಾಗಲಮನೆ ಜಿಎಚ್‌ಪಿಎಸ್ ಶಾಲೆಯ ಸಹ ಶಿಕ್ಷಕ ನಾರಾಯಣ ನಾಯ್ಕ ಹಾಗು ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಲತಾಮಣಿ ಅವರನ್ನು ಸಿಬ್ಬಂದಿಗಳಾಗಿ ನಿಯೋಜಿಸಲಾಗಿದೆ.
    ವಾರ್ಡ್ ನಂ.೨೦, ೨೬ ಮತ್ತು ೨೭ರ ವ್ಯಾಪ್ತಿಯ ಸುರಗೀತೋಪು, ಬಾಲಭಾರತಿ, ಬೆಣ್ಣೆ ಕೃಷ್ಣ ಸರ್ಕಲ್, ಆಂಜನೇಯ ಅಗ್ರಹಾರ, ಕೂಲಿ ಬ್ಲಾಕ್ ಶೆಡ್ ಪ್ರದೇಶಗಳ ನಿವಾಸಿಗಳಿಗೆ ಅನುಕೂಲವಾಗುವಂತೆ ನ್ಯೂಟೌನ್ ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಲಸಿಕಾ ಕೇಂದ್ರ ತೆರೆಯಲಾಗಿದೆ. ಚಿಕ್ಕಗೊಪ್ಪೇನಹಳ್ಳಿ ಜಿಎಚ್‌ಪಿಎಸ್ ಸರ್ಕಾರಿ ಸಹ ಶಿಕ್ಷಕ ನಾಗರಾಜ ನಾಯ್ಕ, ವಿಶ್ವಭಾರತಿ ವಿದ್ಯಾಸಂಸ್ಥೆಯ ಎಚ್‌ಪಿಎಸ್ ಶಾಲೆಯ ಸಹ ಶಿಕ್ಷಕ ಟಿ. ಸುರೇಶ್, ಸಿದ್ದಾಪುರ ತಾಂಡ ಜಿಎಚ್‌ಪಿಎಸ್ ಶಾಲೆಯ ಸಹ ಶಿಕ್ಷಕ ಪುರುಷೋತ್ತಮ್ ಮತ್ತು ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಲತಾಮಣಿ ಅವರನ್ನು ಸಿಬ್ಬಂದಿಗಳಾಗಿ ನಿಯೋಜಿಸಲಾಗಿದೆ.
    ವಾರ್ಡ್ ನಂ. ೪, ೫ ಮತ್ತು ೬ ವ್ಯಾಪ್ತಿಯ ಕನಕಮಂಟಪ ಪ್ರದೇಶ, ಕೋಟೆ ಏರಿಯಾ, ಖಾಜಿ ಮೊಹಲ್ಲಾ, ಖಂಡೇರಾವ್ ಕೊಪ್ಪಲ್, ಸಿದ್ದಾರೂಢ ನಗರ, ಹಳದಮ್ಮ ಬೀದಿ, ಸಣ್ಣ ಮತ್ತು ದೊಡ್ಡ ಕುರುಬರ ಬೀದಿ, ಸೀಗೆಹಟ್ಟಿ, ರಥಬೀದಿ ಪ್ರದೇಶಗಳ ನಿವಾಸಿಗಳಿಗೆ ಅನುಕೂಲವಾಗುವಂತೆ ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಲಸಿಕಾ ಕೇಂದ್ರ ತೆರೆಯಲಾಗಿದೆ. ಕನಕ ವಿದ್ಯಾಸಂಸ್ಥೆ ಎಚ್‌ಪಿಎಸ್ ಶಾಲೆಯ ಸಹ ಶಿಕ್ಷಕರಾದ ಎಚ್. ಶ್ರೀನಿವಾಸ್, ಇಮ್ರಾನ್ ಆಲಿ ಮತ್ತು ಗಾಂಧಿನಗರ ವಿಜಯ ಶಾಲೆಯ ಸಹ ಶಿಕ್ಷಕ ಎಚ್. ಹನುಮಂತಪ್ಪ ಹಾಗು ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಆರ್.ಬಿ ಸತೀಶ್ ಅವರನ್ನು ಸಿಬ್ಬಂದಿಗಳಾಗಿ ನಿಯೋಜಿಸಲಾಗಿದೆ.



       ವಾರ್ಡ್ ನಂ.೧೦, ೧೧ ಮತ್ತು ೧೨ರ ವ್ಯಾಪ್ತಿಯ ಕಬಳಿಕಟ್ಟೆ, ಹನುಮಂತ ನಗರ, ಅಶ್ವಥ್ ನಗರ, ಸುಭಾಷ್ ನಗರ ಮತ್ತು ಅಣ್ಣಾ ನಗರ ಪ್ರದೇಶಗಳ ನಿವಾಸಿಗಳಿಗೆ ಅನುಕೂಲವಾಗುವಂತೆ ಸುಭಾಷ್ ನಗರದ ಅಕ್ಕಮಹಾದೇವಿ ವಿದ್ಯಾ ಸಂಸ್ಥೆಯಲ್ಲಿ ಲಸಿಕಾ ಕೇಂದ್ರ ತೆರೆಯಲಾಗಿದೆ. ಅರಳಿಹಳ್ಳಿ ಜ್ಞಾನೋದಯ ಶಾಲೆಯ ಸಹ ಶಿಕ್ಷಕರಾದ ಎಸ್.ಆರ್ ಸ್ವಾಮಿ, ಇ. ದಿನೇಶ್ ಮತ್ತು ಕುಮಾರಿ ನಾರಾಯಣ ಪುರ ಜಿಎಲ್‌ಪಿಎಸ್ ಶಾಲೆಯ ಸಹ ಶಿಕ್ಷಕ ಗದಿಗ ಸ್ವಾಮಿ ಹಾಗು ನಗರಸಭೆ ಕಿರಿಯ ಆರೋಗ್ಯ ನಿರೀಕ್ಷಕಿ ಶೃತಿ ಅವರನ್ನು ಸಿಬ್ಬಂದಿಗಳಾಗಿ ನಿಯೋಜಿಸಲಾಗಿದೆ.
      ವಾರ್ಡ್ ನಂ.೭, ೮ ಮತ್ತು ೯ರ ವ್ಯಾಪ್ತಿಯ ದುರ್ಗಿನಗರ, ಕಲಂದರ್ ನಗರ, ಜೈ ಭೀಮಾ ನಗರ, ಅನ್ವರ್ ಕಾಲೋನಿ, ಸೀಗೆಬಾಗಿ, ಭದ್ರಾ ಕಾಲೋನಿ ಮತ್ತು ಕಣಕಟ್ಟೆ ಪ್ರದೇಶದ ನಿವಾಸಿಗಳಿಗೆ ಅನುಕೂಲವಾಗುವಂತೆ ಸೀಗೆಬಾಗಿ ರಾಜೀವ್‌ಗಾಂಧಿ  ಬಿ.ಎಡ್ ಕಾಲೇಜಿನಲ್ಲಿ ಲಸಿಕಾ ಕೇಂದ್ರ ತೆರೆಯಲಾಗಿದೆ. ಗುಡ್ಡದನೇರಲಕೆರೆ ಜಿಎಚ್‌ಪಿಎಸ್ ಶಾಲೆಯ ಸಹ ಶಿಕ್ಷಕ ಎಸ್. ಶಂಕರಪ್ಪ, ಕಡದಕಟ್ಟೆ ನವಚೇತನ ಎಚ್‌ಪಿಎಸ್ ಶಾಲೆಯ ಸಹ ಶಿಕ್ಷಕ ನಾಗೇಂದ್ರಪ್ಪ, ಕೆಜಿಆರ್ ಪ್ರೌಢಶಾಲೆ ಸಹ ಶಿಕ್ಷಕ ಮಂಜುನಾಥ ಹಾಗು ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಆರ್.ಬಿ ಸತೀಶ್ ಅವರನ್ನು ಸಿಬ್ಬಂದಿಗಳಾಗಿ ನಿಯೋಜಿಸಲಾಗಿದೆ.
      ವಾರ್ಡ್ ನಂ.೩೧, ೩೨, ೩೩ ಮತ್ತು ೩೪ರ ವ್ಯಾಪ್ತಿಯ ಜಿಂಕ್‌ಲೈನ್, ಜನ್ನಾಪುರ, ಹುತ್ತಾಕಾಲೋನಿ ಮತ್ತು ಅಪ್ಪರ್‌ಹುತ್ತಾ ಪ್ರದೇಶಗಳ ನಿವಾಸಿಗಳಿಗೆ ಅನುಕೂಲವಾಗುವಂತೆ ಉಂಬ್ಳೆಬೈಲು ರಸ್ತೆಯಲ್ಲಿರುವ ಸೇಂಟ್ ಚಾರ್ಲ್ಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ ಲಸಿಕಾ ಕೇಂದ್ರ ತೆರೆಯಲಾಗಿದೆ. ಹೊಸೂರು ಸಿದ್ದಾಪುರ ಜಿವಿಎಚ್‌ಪಿಎಸ್  ಶಾಲೆಯ ಸಹ ಶಿಕ್ಷಕರಾದ ಕೆ. ನಾಗರಾಜ, ಇಮ್ರಾನ್ ಆಲಿ, ಭಂಡಾರಹಳ್ಳಿ ಜಿಎಚ್‌ಪಿಎಸ್ ಶಾಲೆಯ ಸಹ ಶಿಕ್ಷಕ ರವಿಕುಮಾರ್ ಹಾಗು ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಲತಾಮಣಿ ಅವರನ್ನು ಸಿಬ್ಬಂದಿಗಳಾಗಿ ನಿಯೋಜಿಸಲಾಗಿದೆ.
     ವಾರ್ಡ್ ನಂ. ೧೯, ೨೧ ಮತ್ತು ೨೨ರ ವ್ಯಾಪ್ತಿಯ ಎಂಪಿಎಂ ಆಸ್ಪತ್ರೆ ಏರಿಯಾ, ಎಂಪಿಎಂ ೬ ಮತ್ತು ೮ನೇ ವಾರ್ಡ್, ಉಜ್ಜನಿಪುರ ಪ್ರದೇಶಗಳ ನಿವಾಸಿಗಳಿಗೆ ಅನುಕೂಲವಾಗುವಂತೆ ಕಾಗದ ನಗರದ ಪಶ್ಚಿಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಸಿಕಾ ಕೇಂದ್ರ ತೆರೆಯಲಾಗಿದೆ. ಅರಳಿಹಳ್ಳಿ ಸರ್ಕಾರಿ ಶಾಲೆಯ ಸಹ ಶಿಕ್ಷಕ ಬಸವರಾಜಪ್ಪ, ಸುಣ್ಣದಹಳ್ಳಿ ಸರ್ಕಾರಿ ಶಾಲೆಯ ಸಹ ಶಿಕ್ಷಕ ಕಮಲರಾಜ್, ಹಳ್ಳಿಕೆರೆ ಜಿಎಚ್‌ಪಿಎಸ್ ಶಾಲೆಯ ಸಹ ಶಿಕ್ಷಕ ಕೆ. ನಾಗರಾಜ್ ಹಾಗು ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಲತಾಮಣಿ  ಅವರನ್ನು ಸಿಬ್ಬಂದಿಗಳಾಗಿ ನಿಯೋಜಿಸಲಾಗಿದೆ.
    ವಾರ್ಡ್ ನಂ.೨೩, ೨೪ ಮತ್ತು ೨೫ರ ವ್ಯಾಪ್ತಿಯ ತಿಮ್ಲಾಪುರ, ದೊಡ್ಡಗೊಪ್ಪೇನಹಳ್ಳಿ, ಬೊಮ್ಮನಕಟ್ಟೆ, ಹುಡ್ಕೋ ಕಾಲೋನಿ, ಮೂಲೆಕಟ್ಟೆ ಮತ್ತು ಹೊಸಬುಳ್ಳಾಪುರ ಪ್ರದೇಶಗಳ ನಿವಾಸಿಗಳಿಗೆ ಅನುಕೂಲವಾಗುವಂತೆ ಬೊಮ್ಮನಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿ ಶಾಲೆಯಲ್ಲಿ ಲಸಿಕಾ ಕೇಂದ್ರ ತೆರೆಯಲಾಗಿದೆ. ಬೊಮ್ಮನಕಟ್ಟೆ ಎಚ್‌ಪಿಎಸ್ ಶಾಲೆಯ ಸಹ ಶಿಕ್ಷಕರಾದ ಎ. ತಿಪ್ಪೇಸ್ವಾಮಿ, ಜಿ.ಸಿ ವಿಶ್ವನಾಥ್, ವಿಶ್ವ ಭಾರತಿ ಶಾಲೆಯ ಸಹ ಶಿಕ್ಷಕ ಬಿ.ಕೆ ರವೀಶ್ ಹಾಗು ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಲತಾಮಣಿ ಅವರನ್ನು ಸಿಬ್ಬಂದಿಗಳಾಗಿ ನಿಯೋಜಿಸಲಾಗಿದೆ.
     ವಾರ್ಡ್ ನಂ.೧೩, ೧೭ ಮತ್ತು ೧೮ರ ವ್ಯಾಪ್ತಿಯ ಭೂತನಗುಡಿ, ನೆಹರು ನಗರ, ಎಂ.ಎಂ ಕಾಂಪೌಂಡ್, ಯಕಿನ್ ಷಾ ಕಾಲೋನಿ, ಸುಣ್ಣದಹಳ್ಳಿ, ಸಾದತ್ ಕಾಲೋನಿ, ಬಸಾಪುರ ಪ್ರದೇಶಗಳ ನಿವಾಸಿಗಳಿಗೆ ಅನುಕೂಲವಾಗುವಂತೆ ನಗರದ ತರೀಕೆರೆ ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಲಸಿಕಾ ಕೇಂದ್ರ ತೆರೆಯಲಾಗಿದೆ. ಸಾದತ್ ಕಾಲೋನಿ ಜಿಯುಎಲ್‌ಪಿಎಸ್ ಶಾಲೆಯ ಸಹ ಶಿಕ್ಷಕರಾದ ದಾದಾಪೀರ್, ಪಿ. ಶಿವಪ್ಪ, ಮೊಸರಹಳ್ಳಿ ಜಿಎಲ್‌ಪಿಎಸ್ ಶಾಲೆಯ ಸಹ ಶಿಕ್ಷಕ ಆರ್. ರಂಗನಾಥ್ ಮತ್ತು ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಆಶಾಲತಾ ಅವರನ್ನು ಸಿಬ್ಬಂದಿಗಳಾಗಿ ನಿಯೋಜಿಸಲಾಗಿದೆ.



      ವಾರ್ಡ್ ನಂ.೧೪, ೧೫ ಮತ್ತು ೧೬ರ ವ್ಯಾಪ್ತಿಯ ಭೋವಿ ಕಾಲೋನಿ, ಹೊಸಮನೆ, ಅಶ್ವಥ್ ನಗರ ಬಲಭಾಗ, ಗಾಂಧಿನಗರ ಪ್ರದೇಶಗಳ ನಿವಾಸಿಗಳಿಗೆ ಅನುಕೂಲವಾಗುವಂತೆ ಭೋವಿ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಸಿಕಾ ಕೇಂದ್ರ ತೆರೆಯಲಾಗಿದೆ. ಹೊಸಮನೆ ಜಿಎಚ್‌ಪಿಎಸ್ ಶಾಲೆಯ ಸಹ ಶಿಕ್ಷಕರಾದ ಗಿರಿಧರ, ಮಂಜುನಾಥ್, ಎನ್‌ಎಂಸಿ ಜಿಟಿಎಚ್‌ಪಿಎಸ್ ಶಾಲೆಯ ಸಹ ಶಿಕ್ಷಕ ಲಾರೆನ್ಸ್ ಹಾಗು ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಆಶಾಲತಾ ಅವರನ್ನು ಸಿಬ್ಬಂದಿಗಳಾಗಿ ನಿಯೋಜಿಸಲಾಗಿದೆ.
     ಉಳಿದಂತೆ ವಾರ್ಡ್ ನಂ.೩ರ ವ್ಯಾಪ್ತಿಯ ಬಿ.ಎಚ್ ರಸ್ತೆ ಎಡ ಮತ್ತು ಬಲ ಭಾಗ, ಚಾಮೇಗೌಡ ಏರಿಯಾ ನಿವಾಸಿಗಳಿಗೆ ಅನುಕೂಲವಾಗುವಂತೆ ಹಾಲಪ್ಪ ವೃತ್ತದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಸಿಕಾ ಕೇಂದ್ರ ತೆರೆಯಲಾಗಿದೆ. ಹಾಲಪ್ಪ ವೃತ್ತ ಜಿಎಚ್‌ಪಿಎಸ್ ಶಾಲೆ ಸಹ ಶಿಕ್ಷಕರಾದ ಎಸ್. ಶಿವಕುಮಾರ್, ಕೆಂಚಪ್ಪ, ಬಸವೇಶ್ವರ ವಿದ್ಯಾಸಂಸ್ಥೆ ಎಚ್‌ಪಿಎಸ್ ಶಾಲೆಯ ಸಹ ಶಿಕ್ಷಕ ಶಶಿಕುಮಾರ್ ಹಾಗು ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಆರ್.ಬಿ ಸತೀಶ್ ಅವರನ್ನು ಸಿಬ್ಬಂದಿಗಳಾಗಿ ನಿಯೋಜಿಸಲಾಗಿದೆ.
     ಲಸಿಕಾ ಕೇಂದ್ರಗಳು ಬೆಳಿಗ್ಗೆ ೮ ಗಂಟೆಯಿಂದ ಆರಂಭಗೊಳ್ಳಲಿವೆ. ಯಾವುದೇ ಮಧ್ಯವರ್ತಿಗಳಿಗೆ ಅವಕಾಶ ವಿರುವುದಿಲ್ಲ. ಲಭ್ಯತೆ ಆಧಾರ ಮೇಲೆ ಟೋಕನ್ ನೀಡುವುದು. ನಿಗದಿತ ದಿನಾಂಕದಂದು ಮೊದಲು ಬಂದವರಿಗೆ ಲಸಿಕೆ ಹಾಕುವುದು. ಬೇರೆ ವಾರ್ಡ್‌ಗಳ ನಿವಾಸಿಗಳಿಗೆ ಅವಕಾಶ ವಿರುವುದಿಲ್ಲ.

ಸಂಕಷ್ಟಕ್ಕೆ ಒಳಗಾದ ಬಡವರ ನೆರವಿಗೆ ಧಾವಿಸಿದ ಶ್ರೀ ಧರ್ಮಶಾಸ್ತ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್

ಕಳೆದ ಬಾರಿ ಸಿದ್ದಪಡಿಸಿದ ಆಹಾರ, ಈ ಬಾರಿ ದಿನಸಿ ಸಾಮಗ್ರಿ ವಿತರಣೆ


ಭದ್ರಾವತಿ ತರೀಕೆರೆ ರಸ್ತೆಯ ವಲಯ ಅರಣ್ಯಾಧಿಕಾರಿಗಳ ಕಛೇರಿ ಪಕ್ಕದಲ್ಲಿ ಭದ್ರಾನದಿ ದಡದಲ್ಲಿರುವ ಶ್ರೀ ಧರ್ಮಶಾಸ್ತ ಅಯ್ಯಪ್ಪ ಸ್ವಾಮಿ ದೇವಸ್ಥಾನ ಸೇವಾ ಟ್ರಸ್ಟ್ ವತಿಯಿಂದ ತೀರ ಸಂಕಷ್ಟಕ್ಕೆ ಒಳಗಾದ ಬಡವರಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.
    ಭದ್ರಾವತಿ, ಜೂ. ೧೦: ನಗರದ ತರೀಕೆರೆ ರಸ್ತೆಯ ವಲಯ ಅರಣ್ಯಾಧಿಕಾರಿಗಳ ಕಛೇರಿ ಪಕ್ಕದಲ್ಲಿ ಭದ್ರಾನದಿ ದಡದಲ್ಲಿರುವ ಶ್ರೀ ಧರ್ಮಶಾಸ್ತ ಅಯ್ಯಪ್ಪ ಸ್ವಾಮಿ ದೇವಸ್ಥಾನ ಕೇವಲ ಧಾರ್ಮಿಕ ಆಚರಣೆಗಳಿಗೆ ಸೀಮಿತವಾಗದೆ. ಹಲವು ಸಾಮಾಜಿಕ ಸೇವಾ ಕಾರ್ಯಗಳನ್ನು ಸಹ ಮೈಗೂಡಿಸಿಕೊಂಡಿದೆ. ಕೊರೋನಾ ಹಿನ್ನಲೆಯಲ್ಲಿ ಸಂಕಷ್ಟಕ್ಕೆ ಒಳಗಾದವರ ನೆರವಿಗೆ ದೇವಸ್ಥಾನ ಸೇವಾ ಟ್ರಸ್ಟ್ ಮುಂದಾಗುತ್ತಿದೆ.
     ಕೊರೋನಾ ಸೋಂಕಿನ ೨ನೇ ಅಲೆ ಹಿನ್ನಲೆಯಲ್ಲಿ ಜಾರಿಗೊಳಿಸಲಾದ ಸೆಮಿ ಲಾಕ್‌ಡೌನ್ ಪರಿಣಾಮ ಕಡು ಬಡವರು ತೀರ ಸಂಕಷ್ಟಕ್ಕೆ ಒಳಗಾಗಿದ್ದು, ಒಂದೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂದಿಗ್ದ ಪರಿಸ್ಥಿತಿಯಲ್ಲಿ ಟ್ರಸ್ಟ್ ಮಾನವೀಯತೆ ಮೆರೆಯುವ ಮೂಲಕ  ಸಂಕಷ್ಟಕ್ಕೆ ಒಳಗಾದವರಿಗೆ ಅಗತ್ಯವಿರುವ ದಿನಸಿ ಸಾಮಗ್ರಿಗಳನ್ನು ವಿತರಿಸುತ್ತಿದೆ. ಕಳೆದ ಬಾರಿ ಸಹ ಕೊರೋನಾ ಲಾಕ್‌ಡೌನ್ ಅವಧಿಯಲ್ಲಿ ಸಿದ್ದಪಡಿಸಿದ ಆಹಾರ ವಿತರಿಸುವ ಮೂಲಕ ಹಸಿದವರ ನೆರವಿಗೆ ಮುಂದಾಗಿತ್ತು.
    ದೇವಸ್ಥಾನ ಸೇವಾ ಟ್ರಸ್ಟ್ ಅಧ್ಯಕ್ಷ ಮುನಿರಾಜು ಹಾಗು ಪ್ರಧಾನ ಅರ್ಚಕ ಸಂಜಯ್‌ಕುಮಾರ್ ನೇತೃತ್ವದಲ್ಲಿ ನಡೆದ ವಿತರಣಾ ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಆರ್. ಕರುಣಾಮೂರ್ತಿ, ಯುವ ಮುಖಂಡ ಬಿ.ಎಸ್ ಗಣೇಶ್, ವಲಯ ಅರಣ್ಯಾಧಿಕಾರಿ ಮಂಜುನಾಥ್, ಉಪ ವಲಯ ಅರಣ್ಯಾಧಿಕಾರಿ ಬಿ.ಆರ್ ದಿನೇಶ್‌ಕುಮಾರ್, ಸಂಚಾರಿ ಪೊಲೀಸ್ ಠಾಣಾಧಿಕಾರಿ ಕವಿತಾ ಹಾಗು ಟ್ರಸ್ಟ್ ಪದಾಧಿಕಾರಿಗಳು, ಸೇವಾಕರ್ತರು ಉಪಸ್ಥಿತರಿದ್ದರು.

ಶಿವಮೊಗ್ಗ ಮೆಗ್ಗಾನ್‌ಗೆ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಒಳಗೊಂಡ ಹೆಚ್ಚುವರಿ ಹಾಸಿಗೆ ವ್ಯವಸ್ಥೆ ಕಲ್ಪಿಸಿ

ಕೋವಿಡ್-೧೯ರ ಪರಿಣಾಮ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡಿ : ಪ್ರಧಾನಿಗೆ ಮನವಿ


ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರ ಚಿಕಿತ್ಸೆಗಾಗಿ ವೆಂಟಿಲೇಟರ್ ಒಳಗೊಂಡ ಹೆಚ್ಚುವರಿ ಹಾಸಿಗೆ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿ ಗುರುವಾರ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ತಹಸೀಲ್ದಾರ್ ಜಿ. ಸಂತೋಷ್ ಕುಮಾರ್ ಮೂಲಕ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಿದರು.
     ಭದ್ರಾವತಿ, ಜೂ.೧೦: ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರ ಚಿಕಿತ್ಸೆಗಾಗಿ ವೆಂಟಿಲೇಟರ್ ಒಳಗೊಂಡ ಹೆಚ್ಚುವರಿ ಹಾಸಿಗೆ ವ್ಯವಸ್ಥೆ ಕಲ್ಪಿಸಬೇಕೆಂದು ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಆಗ್ರಹಿಸಿದ್ದಾರೆ.
   ಡಿ. ದೇವರಾಜ ಅರಸ್ ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ, ಭಾರತರತ್ನ ಸರ್.ಎಂ ವಿಶ್ವೇಶ್ವರಾಯ ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ಗುರುವಾರ ಪ್ರಧಾನ ಮಂತ್ರಿಗಳಿಗೆ ತಹಸಿಲ್ದಾರ್ ಜಿ. ಸಂತೋಷ್ ಕುಮಾರ್ ಮೂಲಕ ಮನವಿ ಸಲ್ಲಿಸಲಾಗಿದೆ.
    ಮೆಗ್ಗಾನ್ ಆಸ್ಪತ್ರೆಯಲ್ಲಿ ಸೂಕ್ತ ವೆಂಟಿಲೇಟರ್ ಹಾಸಿಗೆ ವ್ಯವಸ್ಥೆ ಇಲ್ಲದ ಕಾರಣ ಅಪಘಾತದಲ್ಲಿ ಗಾಯಗೊಂಡವರನ್ನು ದಾಖಲಾತಿ ಮಾಡಿಕೊಳ್ಳದೆ ಕಳುಹಿಸಲಾಗುತ್ತಿದೆ. ಇದರಿಂದಾಗಿ ಅಪಘಾತದಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ಲಭ್ಯವಾಗದೆ ಸಾವನ್ನಪ್ಪುತ್ತಿದ್ದಾರೆ. ತಕ್ಷಣ ಈ ಸಂಬಂಧ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್‌ಗೆ ನಿರ್ದೇಶನ ನೀಡಬೇಕು.
     ಕೋವಿಡ್-೧೯ರ ಹಿನ್ನಲೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸೂಕ್ತ ಪರಹಾರ ನೀಡಬೇಕು. ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್‌ಗೆ ತಕ್ಷಣ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಬೇಕೆಂದು ಮನವಿ ಮಾಡಿದ್ದಾರೆ.