Wednesday, July 14, 2021

ಭದ್ರಾವತಿಯಲ್ಲಿ ೧೦ ಮಂದಿಯಲ್ಲಿ ಕೊರೋನಾ ಸೋಂಕು

     ಭದ್ರಾವತಿ, ಜು. ೧೪: ತಾಲೂಕಿನಲ್ಲಿ ಬುಧವಾರ ಒಟ್ಟು ೧೦ ಕೊರೋನಾ ಸೋಂಕು ಪ್ರಕರಣಗಳು ದಾಖಲಾಗಿದ್ದು, ಇಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ.
     ಒಟ್ಟು ೮೨೨ ಮಂದಿಯ ಮಾದರಿ ಸಂಗ್ರಹಿಸಲಾಗಿದ್ದು, ೧೦ ಸೋಂಕು ದೃಢಪಟ್ಟಿದೆ. ೧೨ ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಇದುವರೆಗೂ ಒಟ್ಟು ೭೪೫೫ ಸೋಂಕು ಪತ್ತೆಯಾಗಿದ್ದು, ೭೩೯೫ ಮಂದಿ ಗುಣಮುಖರಾಗಿದ್ದಾರೆ. ೬೦ ಸಕ್ರಿಯ ಪ್ರಕರಣಗಳು ಇದ್ದು, ಸೋಂಕಿಗೆ ಇಬ್ಬರು ಬಲಿಯಾಗಿದ್ದಾರೆ.
    ತಾಲೂಕಿನಲ್ಲಿ ಸೋಂಕು ಇಳಿಮುಖವಾದರೂ ಸಾವಿನ ಪ್ರಮಾಣ ಇಳಿಮುಖವಾಗುತ್ತಿಲ್ಲ. ಇದರಿಂದಾಗಿ ನಾಗರಿಕರಲ್ಲಿ ಆತಂಕ ಹೆಚ್ಚು ಮಾಡಿದೆ.  

ಕಾರ್ಯದರ್ಶಿಯಾಗಿ ಕೃಷ್ಣೋಜಿರಾವ್

ಕೃಷ್ಣೋಜಿರಾವ್
    ಭದ್ರಾವತಿ, ಜು. ೧೪: ಹೊಸ ಬುಳ್ಳಾಪುರ ವಾಡ್ ನಂ.೨೬ ನಿವಾಸಿ ಕೃಷ್ಣೋಜಿರಾವ್ ಅವರನ್ನು ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಕಾರ್ಯದರ್ಶಿಯಾಗಿ ನೇಮಕಗೊಳಿಸಲಾಗಿದೆ.
   ಕೃಷ್ಣೋಜಿರಾವ್ ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ವರ್ಷಗಳಿಂದ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಸೂಚನೆ ಮೇರೆಗೆ ಸಮಿತಿ ಅಧ್ಯಕ್ಷ ಟಿ. ಚಂದ್ರೇಗೌಡ ನೇಮಕಗೊಳಿಸಿ ಆದೇಶಿಸಿದ್ದಾರೆ. ಪಕ್ಷದ ತತ್ವ ಸಿದ್ದಾಂತಗಳಿಗೆ ಬದ್ದರಾಗಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ನೇಮಕಾತಿ ಆದೇಶದಲ್ಲಿ ಸೂಚಿಸಿದ್ದಾರೆ.
    ಕಾರ್ಯದರ್ಶಿಯಾಗಿ ನೇಮಕಗೊಳ್ಳಲು ಕಾರಣಕರ್ತರಾದ ಶಾಸಕ ಬಿ.ಕೆ ಸಂಗಮೇಶ್ವರ್, ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಎಸ್.ಸಿ ಘಟಕದ ಜಿಲ್ಲಾ ಉಪಾಧ್ಯಕ್ಷರಾದ ಎಸ್.ಎನ್ ಶಿವಪ್ಪ, ಕೆಪಿಸಿಸಿ ಸದಸ್ಯ ಮಹಮದ್ ಸನಾವುಲ್ಲಾ ಹಾಗು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ನ್ಯಾಯಬೆಲೆ ಅಂಗಡಿ ಪಡಿತರ ವಿತರಣೆ ತೂಕದಲ್ಲಿ ಅಕ್ರಮ : ೪೦ ಕೆ.ಜಿ ಅಕ್ಕಿ ವಿತರಣೆಯಲ್ಲಿ ೩ ಕೆ.ಜಿ ವಂಚನೆ

ಜಿಂಕ್‌ಲೈನ್ ಕಾಮಧೇನು ನ್ಯಾಯಬೆಲೆ ಅಂಗಡಿ ಪ್ರಾಧಿಕಾರ ಅಮಾನತ್ತು


ಭದ್ರಾವತಿ, ಜು. ೧೪: ನಗರಸಭೆ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಯೊಂದರಲ್ಲಿ ಪಡಿತರ ಆಹಾರ ವಿತರಣೆ ತೂಕದಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿರುವ ಹಿನ್ನಲೆಯಲ್ಲಿ ಈ ನ್ಯಾಯಬೆಲೆ ಅಂಗಡಿಯ ಪ್ರಾಧಿಕಾರವನ್ನು ಅಮಾನತ್ತುಗೊಳಿಸಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
      ನಗರಸಭೆ ೩೧ನೇ ವಾರ್ಡ್ ವ್ಯಾಪ್ತಿಯ ಜಿಂಕ್‌ಲೈನ್‌ನಲ್ಲಿರುವ ವೈ.ವಿ ಮೋಹನ್‌ಕುಮಾರ್ ಎಂಬುವರ ಕಾಮಧೇನು ನ್ಯಾಯಬೆಲೆ ಅಂಗಡಿಯಲ್ಲಿ ತೂಕದಲ್ಲಿ ಅಕ್ರಮ ನಡೆಯುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಕೆಯಾದ ಹಿನ್ನಲೆಯಲ್ಲಿ ಕಾನೂನು ಮಾಪನ ಶಾಸ್ತ್ರ ನಿರೀಕ್ಷಕರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
    ವಿಶೇಷ ತಂಡ ಜು.೧೨ರಂದು ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ವೇಳೆ ಪಡಿತರ ಚೀಟಿಯೊಂದರ ಕುಟುಂಬಕ್ಕೆ ೪೦ ಕೆ.ಜಿ ಅಕ್ಕಿ ವಿತರಣೆಯಾಗಿದ್ದು, ಇದನ್ನು ಪರಿಶೀಲನೆ ನಡೆಸಿದಾಗ ೩ ಕೆ.ಜಿ ಕಡಿಮೆ ಇರುವುದು ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ವಿಶೇಷ ತಂಡದ ವರದಿಯನ್ನು ಆಧರಿಸಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಬಿ.ಟಿ ಮಂಜುನಾಥನ್ ಅವರು ಅಂಗಡಿಯ ಪ್ರಾಧಿಕಾರವನ್ನು ಅಮಾನತ್ತುಗೊಳಿಸಿದ್ದಾರೆ.

Tuesday, July 13, 2021

ಭದ್ರಾವತಿಯಲ್ಲಿ ೬ ಕೊರೋನಾ ಸೋಂಕು, ೨ ಬಲಿ

ಭದ್ರಾವತಿ, ಜು. ೧೩: ತಾಲೂಕಿನಲ್ಲಿ ಮಂಗಳವಾರ ೬ ಕೊರೋನಾ ಸೋಂಕು ಪ್ರಕರಣಗಳು ದಾಖಲಾಗಿದ್ದು, ಇಬ್ಬರು ಸೋಂಕಿಗೆ ಬಲಿಯಾಗಿದ್ದಾರೆ.
     ಒಟ್ಟು ೪೮೧ ಮಂದಿಯ ಮಾದರಿ ಸಂಗ್ರಹಿಸಲಾಗಿದ್ದು, ೪ ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಗ್ರಾಮಾಂತರ ಭಾಗದಲ್ಲಿ ಒಬ್ಬರು ಹಾಗು ನಗರ ಭಾಗದಲ್ಲಿ ಒಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ. ಇದುವರೆಗೂ ಒಟ್ಟು ೭೪೪೫ ಸೋಂಕು ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ೭೩೮೩ ಮಂದಿ ಗುಣಮುಖರಾಗಿದ್ದಾರೆ. ಉಳಿದಂತೆ ೬೨ ಸಕ್ರಿಯ ಪ್ರಕರಣ ಬಾಕಿ ಇದ್ದು, ಇದುವರೆಗೂ ಸೋಂಕಿನಿಂದ ಒಟ್ಟು ೧೪೯ ಮಂದಿ ಮೃತಪಟ್ಟಿದ್ದಾರೆ.
    ನಗರ ಭಾಗದಲ್ಲಿ ಒಟ್ಟು ೪ ಕಂಟೈನ್‌ಮೆಂಟ್ ಜೋನ್‌ಗಳು ಸಕ್ರಿಯವಾಗಿದ್ದು, ಇದುವರೆಗೂ ೧೬೬ ಜೋನ್‌ಗಳನ್ನು ತೆರವುಗೊಳಿಸಲಾಗಿದೆ. ಗ್ರಾಮಾಂತರ ಭಾಗದಲ್ಲಿ ೫ ಜೋನ್‌ಗಳು ಸಕ್ರಿಯವಾಗಿದ್ದು, ೪೪ ಜೋನ್‌ಗಳನ್ನು ಇದುವರೆಗೂ ತೆರವುಗೊಳಿಸಲಾಗಿದೆ.

ವಿರೋಧದ ನಡುವೆ ನವ ದಾಂಪತ್ಯಕ್ಕೆ ಕಾಲಿಟ್ಟ ಅಂಧ ಜೋಡಿಗಳು

ನವ ಜೋಡಿಗಳ ಹೊಸ ಬದುಕಿಗೆ ಮುನ್ನುಡಿ ಬರೆದ ಶ್ರೀ ರಾಮರಾಜ್ಯ ಸಂಘದ ಪದಾಧಿಕಾರಿಗಳು


ಎರಡು ಕುಟುಂಬಗಳ ವಿರೋಧದ ನಡುವೆಯೂ ಪ್ರೀತಿಸುತ್ತಿದ್ದ ಅಂಧ ಜೋಡಿಗಳ ವಿವಾಹ ನೆರವೇರಿಸುವ ಮೂಲಕ ಭದ್ರಾವತಿ ಜನ್ನಾಪುರದ ಶ್ರೀ ರಾಮರಾಜ್ಯ ಸಂಘದ ಪದಾಧಿಕಾರಿಗಳು ನವ ಜೋಡಿಗಳ ಹೊಸ ಬದುಕಿಗೆ ಮುನ್ನುಡಿ ಬರೆದಿದ್ದಾರೆ.
    ಭದ್ರಾವತಿ, ಜು. ೧೩: ಎರಡು ಕುಟುಂಬಗಳ ವಿರೋಧದ ನಡುವೆಯೂ ಪ್ರೀತಿಸುತ್ತಿದ್ದ ಅಂಧ ಜೋಡಿಗಳ ವಿವಾಹ ನೆರವೇರಿಸುವ ಮೂಲಕ ನಗರದ ಜನ್ನಾಪುರದ ಶ್ರೀ ರಾಮರಾಜ್ಯ ಸಂಘದ ಪದಾಧಿಕಾರಿಗಳು ನವ ಜೋಡಿಗಳ ಹೊಸ ಬದುಕಿಗೆ ಮುನ್ನುಡಿ ಬರೆದಿರುವ ಘಟನೆ ಬೆಳಕಿಗೆ ಬಂದಿದೆ.
    ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ಆಶ್ರಯ ಪಡೆದು ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಮೊದಲ ವರ್ಷದ ಪದವಿ ವ್ಯಾಸಂಗದಲ್ಲಿ ತೊಡಗಿದ್ದ ದಿವ್ಯಾ ಹಾಗು ಜನ್ನಾಪುರದ ಹಂಚಟೆ ಡೆಂಟಲ್ ಆಸ್ಪತ್ರೆಯಲ್ಲಿ ಸಹಾಯಕನಾಗಿ ದುಡಿಯುತ್ತಿರುವ ಮಲ್ಲೇಶ್ ಇಬ್ಬರು ಕಳೆದ ೨ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ದಿವ್ಯ ಪೂರ್ಣ ಪ್ರಮಾಣದಲ್ಲಿ ಅಂಧತ್ವ ಹೊಂದಿದ್ದು, ಮಲ್ಲೇಶ್ ಭಾಗಶಃ ಅಂಧತ್ವ ಹೊಂದಿದ್ದಾನೆ.
    ದಿವ್ಯ ಪೋಷಕರಾದ ಚನ್ನಗಿರಿ ತಾಲೂಕಿನ ಸಂಗವಳ್ಳಿಯ ಚನ್ನಬಸಪ್ಪ ಮತ್ತು ಶಾರದ ದಂಪತಿ ಹಾಗು ಮಲ್ಲೇಶ್ ಪೋಷಕರಾದ ಜನ್ನಾಪುರದ ನಾಗರಾಜ ಮತ್ತು ಪುಷ್ಪ ದಂಪತಿ ಇಬ್ಬರ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಈ ಎರಡು ಕುಟುಂಬಗಳ ವಿರೋಧದ ನಡುವೆ ಕಳೆದ ೬ ದಿನಗಳ ಹಿಂದೆ ನ್ಯೂಟೌನ್ ಪೊಲೀಸ್ ಠಾಣೆ ಸಿಬ್ಬಂದಿಗಳು ಹಾಗು ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪನವರ ಸಹಕಾರದೊಂದಿಗೆ ಶ್ರೀ ರಾಮರಾಜ್ಯ ಸಂಘದ ಪದಾಧಿಕಾರಿಗಳಾದ ಗೌರವಾಧ್ಯಕ್ಷ ಪಿ. ಶ್ರೀನಿವಾಸ್, ಅಧ್ಯಕ್ಷ ಯುವರಾಜ್, ಉಪಾಧ್ಯಕ್ಷ ಶ್ರೀಕಾಂತ್, ರಾಜ್ಯ ಲೆಕ್ಕ ಪರಿಶೋಧನ ಮತ್ತು ಲೆಕ್ಕ ಪತ್ರ ಇಲಾಖೆ ಉದ್ಯೋಗಿ ಕೇಶವಮೂರ್ತಿ ಸೇರಿದಂತೆ ಇನ್ನಿತರರು ವಿವಾಹ ನೆರವೇರಿಸುವ ಮೂಲಕ ನವ ಜೋಡಿಗಳಿಗೆ ಶುಭ ಹಾರೈಸಿದ್ದಾರೆ.

Monday, July 12, 2021

ಕರ್ತವ್ಯ ನಿರ್ವಹಿಸುತ್ತಿದ್ದಾಗ ಮೃತಪಟ್ಟ ಇಬ್ಬರು ಕಟ್ಟಡ ಕಾರ್ಮಿಕರ ಕುಟುಂಬಗಳಿಗೆ ಪರಿಹಾರದ ಚೆಕ್ ವಿತರಣೆ

ಕಟ್ಟಡ ಮಾಲೀಕರೊಂದಿಗೆ ಮಾತುಕತೆ ನಡೆಸಿ ತಲಾ ೫ ಲಕ್ಷ ರು. ಪರಿಹಾರ ಕೊಡಿಸಿದ ಶಾಸಕ ಬಿ.ಕೆ ಸಂಗಮೇಶ್ವರ್


ಶಿವಮೊಗ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಮೃತಪಟ್ಟ ಭದ್ರಾವತಿ ಅಶ್ವಥ್‌ನಗರದ ಇಬ್ಬರು ಕಟ್ಟಡ ಕಾರ್ಮಿಕರ ಕುಟುಂಬಗಳಿಗೆ ತಲಾ ೫ ಲಕ್ಷ ರು. ಪರಿಹಾರದ ಚೆಕ್ ಶಾಸಕ ಬಿ.ಕೆ ಸಂಗಮೇಶ್ವರ್ ಸೋಮವಾರ ವಿತರಿಸಿದರು.
    ಭದ್ರಾವತಿ, ಜು. ೧೨: ಕರ್ತವ್ಯ ನಿರ್ವಹಿಸುತ್ತಿದ್ದಾಗ ಮೃತಪಟ್ಟ ಇಬ್ಬರು ಕಟ್ಟಡ ಕಾರ್ಮಿಕರ ಕುಟುಂಬಗಳಿಗೆ ತಲಾ ೫ ಲಕ್ಷ ರು. ಪರಿಹಾರದ ಚೆಕ್ ಶಾಸಕ ಬಿ.ಕೆ ಸಂಗಮೇಶ್ವರ್ ಸೋಮವಾರ ವಿತರಿಸಿದರು.
    ನಗರದ ಹೊಸಮನೆ ಅಶ್ವಥ್‌ನಗರದ ಇಬ್ಬರು ಕಟ್ಟಡ ಕಾರ್ಮಿಕರು ಇತ್ತೀಚೆಗೆ ಶಿವಮೊಗ್ಗದಲ್ಲಿ ಕಟ್ಟಡ ಕಾಮಗಾರಿಯಲ್ಲಿ ತೊಡಗಿದ್ದಾಗ ಮೃತಪಟ್ಟಿದ್ದರು. ಶಾಸಕ ಬಿ.ಕೆ ಸಂಗಮೇಶ್ವರ್ ಮೃತಪಟ್ಟ ಬಡ ಕಾರ್ಮಿಕರ ಕುಟುಂಬಗಳಿಗೆ ಕಟ್ಟಡ ಮಾಲೀಕರೊಂದಿಗೆ ಮಾತುಕತೆ ನಡೆಸಿ ತಲಾ ೫ ಲಕ್ಷ ರು. ಪರಿಹಾರಕ್ಕೆ ಒತ್ತಾಯಿಸಿದ್ದರು.
    ನಗರಸಭಾ ಸದಸ್ಯರಾದ ಜಾರ್ಜ್, ಚನ್ನಪ್ಪ, ಕೆ. ಸುದೀಪ್‌ಕುಮಾರ್, ಕರ್ನಾಟಕ ಸ್ಟೇಟ್ ಕನ್ಸ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್ ಬಾಬು, ತಾಲೂಕು ಅಧ್ಯಕ್ಷ ನಾಗರಾಜ್, ಉಪಾಧ್ಯಕ್ಷ ನಾಗೇಂದ್ರ ರೆಡ್ಡಿ, ಪ್ರಧಾನ ಕಾರ್ಯದರ್ಶಿ ನಾರಾಯಣಸ್ವಾಮಿ, ನಿಯೋಜಿತ ಅಧ್ಯಕ್ಷ ಚಂದ್ರಶೇಖರ್, ತಾಂತ್ರಿಕ ಸಲಹೆಗಾರ ಮನೋಹರ್, ಸಂಘಟನಾ ಕಾರ್ಯದರ್ಶಿ ಅಭಿಲಾಷ್, ಮಂಜು, ಸಲಹೆಗಾರ ಸಂಪತ್ ಕುಮಾರ್, ಪೈಂಟರ್ ಸಂಘದ ಗೌರವಾಧ್ಯಕ್ಷ ಶಿವಣ್ಣ, ಅಧ್ಯಕ್ಷ ಶ್ರೀನಿವಾಸ್ ಹಾಗು ಪದಾಧಿಕಾರಿಗಳು, ಇಂಜಿನಿಯರ್ ಲಕ್ಷಣ್, ರವಿಕುಮಾರ್, ಸರವಣ ಮೇಸ್ತ್ರಿ ಮತ್ತು ಟೈಲ್ಸ್ ವೆಂಕಟೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ನಿರೀಕ್ಷಕರ ಕಛೇರಿ ಮುಂಭಾಗ ಪ್ರತಿಭಟನೆ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ಸ್ಟೇಟ್ ಕನ್ಸ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ಭದ್ರಾವತಿ ತಾಲೂಕು ಶಾಖೆ ವತಿಯಿಂದ ಸೋಮವಾರ ನಗರದ ಸಿ.ಎನ್ ರಸ್ತೆಯಲ್ಲಿರುವ ಕಾರ್ಮಿಕ ನಿರೀಕ್ಷಕರ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ, ಜು. ೧೨: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ಸ್ಟೇಟ್ ಕನ್ಸ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ತಾಲೂಕು ಶಾಖೆ ವತಿಯಿಂದ ಸೋಮವಾರ ನಗರದ ಸಿ.ಎನ್ ರಸ್ತೆಯಲ್ಲಿರುವ ಕಾರ್ಮಿಕ ನಿರೀಕ್ಷಕರ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
    ಕೋವಿಡ್-೧೯ರ ಹಿನ್ನಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಬಡ ಕಾರ್ಮಿಕರಿಗೆ ಸರ್ಕಾರ ಘೋಷಿಸಿರುವ ೩ ಸಾವಿರ ರು. ಆರ್ಥಿಕ ನೆರವನ್ನು ೧೦ ಸಾವಿರ ರು.ಗಳಿಗೆ ಹೆಚ್ಚಿಸಬೇಕು. ದಿನಸಿ ಸಾಮಗ್ರಿ ವಿತರಣೆಯಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗಿದ್ದು, ಅಲ್ಲದೆ ಹಗರಣಗಳು ನಡೆದಿರುವುದು ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಸರ್ಕಾರ ತಕ್ಷಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು.
    ನಗರಸಭಾ ಸದಸ್ಯ ಜಾರ್ಜ್, ಕರ್ನಾಟಕ ಸ್ಟೇಟ್ ಕನ್ಸ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್ ಬಾಬು, ತಾಲೂಕು ಅಧ್ಯಕ್ಷ ನಾಗರಾಜ್, ಉಪಾಧ್ಯಕ್ಷ ನಾಗೇಂದ್ರ ರೆಡ್ಡಿ, ಪ್ರಧಾನ ಕಾರ್ಯದರ್ಶಿ ನಾರಾಯಣಸ್ವಾಮಿ, ನಿಯೋಜಿತ ಅಧ್ಯಕ್ಷ ಚಂದ್ರಶೇಖರ್, ತಾಂತ್ರಿಕ ಸಲಹೆಗಾರ ಮನೋಹರ್, ಸಂಘಟನಾ ಕಾರ್ಯದರ್ಶಿ ಅಭಿಲಾಷ್, ಮಂಜು, ಸಲಹೆಗಾರ ಸಂಪತ್ ಕುಮಾರ್, ಪೈಂಟರ್ ಸಂಘದ ಗೌರವಾಧ್ಯಕ್ಷ ಶಿವಣ್ಣ, ಅಧ್ಯಕ್ಷ ಶ್ರೀನಿವಾಸ್ ಹಾಗು ಪದಾಧಿಕಾರಿಗಳು, ಇಂಜಿನಿಯರ್ ಲಕ್ಷಣ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.