Wednesday, September 29, 2021

ಆಧುನಿಕ ಒತ್ತಡದ ಜೀವನ ಶೈಲಿ, ಆಹಾರ ಪದ್ದತಿಯಿಂದ ಅನಾರೋಗ್ಯ : ಡಾ. ಮಂಜುನಾಥ್

ಭದ್ರಾವತಿ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಎನ್‌ಸಿಡಿ ಘಟಕ, ರೋಟರಿ ಕ್ಲಬ್ ಸಹಯೋಗದೊಂದಿಗೆ ಬುಧವಾರ ಹಮ್ಮಿಕೊಳ್ಳಲಾಗಿದ್ದ 'ವಿಶ್ವ ಹೃದಯ ದಿನ' ಕಾರ್ಯಕ್ರಮದಲ್ಲಿ ಆಸ್ಪತ್ರೆಯ ತಜ್ಞ ವೈದ್ಯ ಡಾ. ಮಂಜುನಾಥ್ ಮಾತನಾಡಿದರು.
    ಭದ್ರಾವತಿ, ಸೆ. ೨೯: ಇಂದಿನ ಆಧುನಿಕ ಒತ್ತಡದ ಜೀವನ ಶೈಲಿ ಹಾಗು ಆಹಾರ ಪದ್ದತಿ ಬಹಳಷ್ಟು ರೀತಿಯ ಅನಾರೋಗ್ಯಗಳಿಗೆ ಕಾರಣಗಳಾಗುತ್ತಿವೆ ಎಂದು ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯ ಡಾ. ಮಂಜುನಾಥ್ ಹೇಳಿದರು.
    ಅವರು ಬುಧವಾರ ಎನ್‌ಸಿಡಿ ಘಟಕ, ರೋಟರಿ ಕ್ಲಬ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ 'ವಿಶ್ವ ಹೃದಯ ದಿನ' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಒತ್ತಡದ ಜೀವನ ಶೈಲಿ ಜೊತೆಗೆ ಮದ್ಯಪಾನ, ಧೂಮಪಾನ ಸೇರಿದಂತೆ ಇನ್ನಿತರ ದುಶ್ಚಟಗಳು ಸಹ ಅನಾರೋಗ್ಯಕ್ಕೆ ಕಾರಣಗಳಾಗುತ್ತಿವೆ. ಇಂದು ಹೃದಯ ಸಂಬಂಧಿ ರೋಗಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಈ ರೋಗಗಳು ತಕ್ಷಣಕ್ಕೆ ಕಂಡು ಬರುತ್ತಿಲ್ಲ. ಉಲ್ಬಣವಾದ ನಂತರ ಕಂಡು ಬರುವುದರಿಂದ ಚಿಕಿತ್ಸೆ ನೀಡುವುದು ಬಹಳ ಕಷ್ಟ. ನಿಶ್ಯಕ್ತಿ, ನಡೆದಾಡಲು, ಮೆಟ್ಟಿಲುಗಳನ್ನು ಹತ್ತಲು ಕಷ್ಟವಾಗುವುದು ಹಾಗು ಆಯಾಸವಾಗುವ ಲಕ್ಷಣ ಕಂಡು ಬಂದಲ್ಲಿ ಅದು ನಿಶ್ಚಿತವಾಗಿ ಹೃದಯ ಖಾಯಿಲೆ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಪ್ರಾರಂಭಿಕ ಹಂತದಲ್ಲಿಯೇ ಸೂಕ್ತ ಚಿಕಿತ್ಸೆ ಪಡೆದಾಗ ಮಾತ್ರ ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು.
    ಶಸ್ತ್ರ ಚಿಕಿತ್ಸಕ ಡಾ.ಶಿವಪ್ರಕಾಶ್ ಮಾತನಾಡಿ, ಹೃದಯ ಸಂಬಂಧಿ ಹಾಗು ಮಧುಮೇಹ ಈ ಎರಡು ರೋಗಗಳನ್ನು ಸಹ ಗಂಭೀರವಾಗಿ ಪರಿಗಣಿಸಬೇಕು. ಮಧುಮೇಹ ಕಾಣಿಸಿಕೊಂಡವರಲ್ಲಿ ಸಹಜವಾಗಿ ಹೃದಯ ಸಂಬಂಧಿ ರೋಗಗಳು ಸಹ ಕಾಣಿಸಿಕೊಳ್ಳಲಿವೆ. ಉತ್ತಮ ಆರೋಗ್ಯಕರ ಜೀವನ, ಹಿತಮಿತವಾದ ಆಹಾರ ಸೇವನೆ, ದುಶ್ಚಟಗಳಿಂದ ದೂರವಿರುವುದು ಇತ್ಯಾದಿ ಕ್ರಮಗಳಿಂದ ಆರೋಗ್ಯ ರಕ್ಷಿಸಿಕೊಳ್ಳಲು ಸಾಧ್ಯ ಎಂದರು.
    ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಶಂಕರಪ್ಪ ಮಾತನಾಡಿ, ಹಿಂದಿನ ಕಾಲದಲ್ಲಿದ್ದ ಸಾಂಕ್ರಾಮಿಕ ರೋಗಗಳು ಇಂದಿನ ದಿನಗಳಲ್ಲಿ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ. ಆದರೆ ಆಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿರುವುದು ಬಹಳ ಕಳವಳಕಾರಿ ಸಂಗತಿಯಾಗಿದೆ. ರೋಗಗಳು ಕಾಣಿಸಿಕೊಂಡು ಚಿಕಿತ್ಸೆ ಪಡೆಯುವ ಬದಲು ಅವುಗಳು ಕಾಣಿಸಿಕೊಳ್ಳದಂತೆ ಎಚ್ಚರವಹಿಸುವುದು ಬಹಳ ಮುಖ್ಯ ಎಂದರು.  
    ಶ್ರಮರಹಿತ ಚಟುವಟಿಕೆಗಳು, ರಾಸಾಯನಿಕಯುಕ್ತ ಆಹಾರಗಳು, ಬೇಕರಿ ಪದಾರ್ಥಗಳ ಸೇವನೆಯಿಂದ ಹಲವಾರು ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಹಿನ್ನಲೆಯಲ್ಲಿ ಪ್ರತಿಯೊಬ್ಬರು ಎಚ್ಚರವಹಿಸುವುದು ಅವಶ್ಯಕ ಎಂದರು.  
    ಎನ್‌ಸಿಡಿ ಘಟಕದ ವೈದ್ಯಾಧಿಕಾರಿ ಡಾ.ಎಂ ರವೀಂದ್ರನಾಥ ಕೋಠಿ ಪ್ರಸ್ತಾಸ್ತಾವಿಕವಾಗಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಹೃದಯ ಸಂಬಂಧಿ ರೋಗಗಳಿಂದ ಹೆಚ್ಚಿನ ಜನರು ಸಾವನ್ನಪ್ಪುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಇದರ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ 'ವಿಶ್ವ ಹೃದಯ ದಿನ' ಆಚರಿಸಲಾಗುತ್ತಿದೆ ಎಂದರು.
    ರೋಟರಿ ಕ್ಲಬ್ ಅಧ್ಯಕ್ಷ ಹೆಚ್.ವಿ ಆದರ್ಶ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಸುಂದರ್ ಬಾಬು, ನಾಗೇಶ್, ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಗಣಪತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ವಿಶ್ವ ಹೃದಯ ದಿನದ ಅಂಗವಾಗಿ ಸಾರ್ವಜನಿಕರಿಗೆ ಉಚಿತ ರಕ್ತದೊತ್ತಡ ಹಾಗು ರಕ್ತ ತಪಾಸಣೆ ನಡೆಸಲಾಯಿತು. ಬಿ.ಆರ್ ಯಶೋಧ ಪ್ರಾರ್ಥಿಸಿದರು. ನಾಗರಾಜ ಸ್ವಾಗತಿಸಿದರು. ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು. ವೀರಪ್ಪ ವಂದಿಸಿದರು.  

Tuesday, September 28, 2021

ಬಗರ್‌ಹುಕುಂ ಸಾಗುವಳಿ ಸಮಿತಿಗೆ ೫ ಮಂದಿ ಸದಸ್ಯರ ನಾಮನಿರ್ದೇಶನ

ಅಧ್ಯಕ್ಷರಾಗಿ ಅಂತರಗಂಗೆ ಗ್ರಾಮ ಪಂಚಾಯಿತಿ ಸದಸ್ಯ ಬಿ. ನಾಗೇಶ್ ನೇಮಕ

ಬಿ. ನಾಗೇಶ್
    ಭದ್ರಾವತಿ, ಸೆ. ೨೮: ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಗೆ ಹೊಸದಾಗಿ ೫ ಮಂದಿ ಸದಸ್ಯರನ್ನು ಸರ್ಕಾರ ನಾಮನಿರ್ದೇಶನಗೊಳಿಸಿ ಆದೇಶ ಹೊರಡಿಸಿದೆ.
    ಅಂತರಗಂಗೆ ಗ್ರಾಮದ ನಿವಾಸಿ, ಗ್ರಾಮ ಪಂಚಾಯಿತಿ ಸದಸ್ಯ ಬಿ. ನಾಗೇಶ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕಗೊಳಿಸಲಾಗಿದ್ದು, ಉಳಿದಂತೆ ಒಕ್ಕಲಿಗ ಸಮಾಜದ ಹಿರಿಯ ಮುಖಂಡ, ಅಪ್ಪರ್‌ಹುತ್ತಾ ನಿವಾಸಿ ಎಚ್. ಕರಿಗೌಡ, ಭದ್ರಾಕಾಲೋನಿ ನಿವಾಸಿ, ಪರಿಶಿಷ್ಟ ಜಾತಿಯ ಮಾಲಾ ಧರ್ಮನಾಯ್ಕ್ ಮತ್ತು ಗುಡ್ಡದನೇರಲೆಕೆರೆ ಗ್ರಾಮದ ನಿವಾಸಿ ಸರಸ್ವತಿ ಅವರನ್ನು ಸದಸ್ಯರನ್ನಾಗಿ ಹಾಗು ತಾಲೂಕು ದಂಡಾಧಿಕಾರಿ ತಹಸೀಲ್ದಾರ್ ಅವರನ್ನು ಸದಸ್ಯ ಕಾರ್ಯದರ್ಶಿಯಾಗಿ ನೇಮಕಗೊಳಿಸಿ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸಿ. ಬಲರಾಮ್ ಆದೇಶ ಹೊರಡಿಸಿದ್ದಾರೆ.
    ಈ ಹಿಂದೆ ಸರ್ಕಾರ ೨೪.೦೧.೨೦೨೦ರಲ್ಲಿ ನಾಮನಿರ್ದೇಶನಗೊಳಿಸಿದ್ದ ಸದಸ್ಯರ ಸದಸ್ಯತ್ವ ರದ್ದುಪಡಿಸಿ ಇದೀಗ ಹೊಸದಾಗಿ ಸದಸ್ಯರನ್ನು ನೇಮಕಗೊಳಿಸಿದೆ.

ಶಿಕ್ಷಕ ಸಿ.ಎಚ್ ನಾಗೇಂದ್ರಪ್ಪರಿಗೆ ರಾಜ್ಯಮಟ್ಟದ ಚಿನ್ಮಯಿಜ್ಞಾನಿ ಶಿಕ್ಷಕ ಪ್ರಶಸ್ತಿ

ಮೈಸೂರಿನ ಶರಣ ವಿಶ್ವವಚನ ಫೌಂಡೇಷನ್ ವತಿಯಿಂದ ನೀಡಲಾಗುವ ರಾಜ್ಯಮಟ್ಟದ 'ಚಿನ್ಮಯಿಜ್ಞಾನಿ ಶಿಕ್ಷಕ ಪ್ರಶಸ್ತಿ'ಯನ್ನು ಈ ಬಾರಿ ಭದ್ರಾವತಿ ನಗರಸಭೆ ವ್ಯಾಪ್ತಿಯ ಕಡದಕಟ್ಟೆ ಗ್ರಾಮದ ನವಚೇತನ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸಿ.ಎಚ್.ನಾಗೇಂದ್ರಪ್ಪ ಪಡೆದುಕೊಂಡಿದ್ದಾರೆ.
    ಭದ್ರಾವತಿ: ಮೈಸೂರಿನ ಶರಣ ವಿಶ್ವವಚನ ಫೌಂಡೇಷನ್ ವತಿಯಿಂದ ನೀಡಲಾಗುವ ರಾಜ್ಯಮಟ್ಟದ 'ಚಿನ್ಮಯಿಜ್ಞಾನಿ ಶಿಕ್ಷಕ ಪ್ರಶಸ್ತಿ'ಯನ್ನು ಈ ಬಾರಿ ನಗರಸಭೆ ವ್ಯಾಪ್ತಿಯ ಕಡದಕಟ್ಟೆ ಗ್ರಾಮದ ನವಚೇತನ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸಿ.ಎಚ್.ನಾಗೇಂದ್ರಪ್ಪ ಪಡೆದುಕೊಂಡಿದ್ದಾರೆ.
    ಪ್ರತಿ ಜಿಲ್ಲೆಯಿಂದ ಒಬ್ಬರಂತೆ ರಾಜ್ಯಾದ್ಯಂತ ಸುಮಾರು ೩೨ ಸಾಧಕ ಶಿಕ್ಷಕ, ಶಿಕ್ಷಕಿಯರನ್ನು ಗುರುತಿಸಿ ಆಯ್ಕೆಮಾಡುವ ಮೂಲಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮೈಸೂರಿನ ಹೊಸಮಠದ ನಟರಾಜ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ಬೀದರ್ ಜಿಲ್ಲೆಯ ಬಸವ ಕಲ್ಯಾಣ ಅನುಭವ ಮಂಟಪದ ಡಾ. ಶ್ರೀ ಬಸವಲಿಂಗ ಪಟ್ಟದೇವರು ದಿವ್ಯ ಸಾನಿಧ್ಯ ವಹಿಸಿದ್ದರು.
    ಮೈಸೂರಿನ ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ, ಶರಣು ವಿಶ್ವ ವಚನ ಫೌಂಡೇಶನ್ ಸಂಸ್ಥಾಪಕ ಡಾ. ವಚನ ಕುಮಾರಸ್ವಾಮಿ, ರೂಪ ಕುಮಾರಸ್ವಾಮಿ, ವಿಶ್ರಾಂತ ಉಪ ನಿರ್ದೇಶಕ ಸ್ವಾಮಿ, ಮೈಸೂರು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಬಿ ಸೋಮೇಗೌಡ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಮಾಲಂಗಿ ಸುರೇಶ್, ಮೈಸೂರು ಜಿಲ್ಲಾ ಶರಣು ವಿಶ್ವವಚನ ಫೌಂಡೇಶನ್ ಅಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ ಅನಿಲ್, ಕ್ರಿಷ್ಟಿ, ಪ್ರಶಸ್ತಿ ಪುರಸ್ಕೃತ ಸಿ.ಎಚ್ ನಾಗೇಂದ್ರಪ್ಪನವರ ಅವರ ತಾಯಿ ಚಂದ್ರಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವರಮಹಾಲಕ್ಷ್ಮಿ ಜ್ಞಾನವಿಕಾಸ ಕೇಂದ್ರ ಉದ್ಘಾಟನೆ

ಭದ್ರಾವತಿ ವಿದ್ಯಾಮಂದಿರ ವಲಯದ ಚಾಮೇಗೌಡ ಏರಿಯಾದಲ್ಲಿ ನೂತನವಾಗಿ ವರಮಹಾಲಕ್ಷ್ಮಿ ಜ್ಞಾನವಿಕಾಸ ಕೇಂದ್ರ ಅಸ್ತಿತ್ವಕ್ಕೆ ಬಂದಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಒಕ್ಕೂಟದ ಅಧ್ಯಕ್ಷೆ ಪ್ರಮೀಳಾ ಉದ್ಘಾಟಿಸಿದರು.
    ಭದ್ರಾವತಿ, ಸೆ. ೨೮: ನಗರದ ವಿದ್ಯಾಮಂದಿರ ವಲಯದ ಚಾಮೇಗೌಡ ಏರಿಯಾದಲ್ಲಿ ನೂತನವಾಗಿ ವರಮಹಾಲಕ್ಷ್ಮಿ ಜ್ಞಾನವಿಕಾಸ ಕೇಂದ್ರ ಅಸ್ತಿತ್ವಕ್ಕೆ ಬಂದಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಒಕ್ಕೂಟದ ಅಧ್ಯಕ್ಷೆ ಪ್ರಮೀಳಾ ಉದ್ಘಾಟಿಸಿದರು.
    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ವಲಯದ ವ್ಯಾಪ್ತಿಯಲ್ಲಿ ಸಾಮಾಜಿಕ ಸೇವಾ ಯೋಜನೆಗಳ ಜೊತೆಗೆ ಸದಸ್ಯರಿಗೆ ಆರೋಗ್ಯ, ಶಿಕ್ಷಣ, ಕಾನೂನು ಅರಿವು ಸೇರಿದಂತೆ ಇತ್ಯಾದಿ ವಿಷಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಜ್ಞಾನವಿಕಾಸ ಕೇಂದ್ರಗಳನ್ನು ಆರಂಭಿಸಲಾಗಿದೆ.
    ಸ್ತ್ರೀ ರೋಗ ತಜ್ಞೆ ಡಾ. ವೀಣಾ ಎಸ್. ಭಟ್, ವಲಯದ ಮೇಲ್ವಿಚಾರಕ ವೀರೇಶ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಪ್ರೀತಿ, ಸೇವಾ ಪ್ರತಿನಿಧಿ ಹಾಗು ಕೇಂದ್ರದ ಎಲ್ಲಾ  ಸದಸ್ಯರು ಉಪಸ್ಥಿತರಿದ್ದರು.

ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ

    ಭದ್ರಾವತಿ, ಸೆ. ೨೮: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
    ೬ ರಿಂದ ೧೦ನೇ ತರಗತಿವರೆಗಿನ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದಾಗಿದ್ದು, ಪ್ರವರ್ಗ-೧, ೨ಎ, ೨ಬಿ, ೩ಎ, ೩ಬಿ, ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗ ಮತ್ತು ಇತರೆ ಹಿಂದುಳಿದ ವರ್ಗಗಳ ಜನಾಂಗದ ವಿದ್ಯಾರ್ಥಿಗಳು ಸಹ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
    ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯ ಮಿತಿ ಪ್ರವರ್ಗ-೧, ಎಸ್.ಸಿ ಮತ್ತು ಎಸ್.ಟಿ ರು. ೨.೫೦ ಲಕ್ಷ, ಪ್ರವರ್ಗ-೨ಎ, ೨ಬಿ, ೩ಎ, ೩ಬಿ ಇತರೆ ಹಿಂದುಳಿದ ವರ್ಗ ರು.೧ ಲಕ್ಷ ನಿಗದಿಗೊಳಿಸಲಾಗಿದೆ.
    ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿ.೧೧.೧೦.೨೦೨೧ ಕಡೆಯ ದಿನವಾಗಿದ್ದು, ತಾಲೂಕುವಾರು ವಿದ್ಯಾರ್ಥಿ ನಿಲಯಗಳ ವಿವರ ಹಾಗು ವಿದ್ಯಾರ್ಥಿ ನಿಲಯದ ಪ್ರವೇಶಕ್ಕೆ ಇರಬೇಕಾದ ಅರ್ಹತೆ, ಸಲ್ಲಿಸಬೇಕಾದ ದಾಖಲೆಗಳ ವಿವರ ಮತ್ತು ಸರ್ಕಾರದ ಆದೇಶಕ್ಕಾಗಿ ಇಲಾಖೆಯ ವೆಬ್‌ಸೈಟ್ ನೋಡುವುದು.
    ಅರ್ಜಿ ಸಲ್ಲಿಸಲು ತಾಂತ್ರಿಕ ತೊಂದರೆಗಳು ಕಂಡು ಬಂದಲ್ಲಿ ಇಲಾಖೆಯ ಈ-ಮೇಲ್ ವಿಳಾಸಕ್ಕೆ ಅಥವಾ ಜಿಲ್ಲಾ/ತಾಲೂಕು ಅಧಿಕಾರಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರನ್ನು ಅಗತ್ಯ ದಾಖಲೆಗಳೊಂದಿಗೆ ಸಂಪರ್ಕಿಸುವುದು. ಹೆಚ್ಚಿನ ಮಾಹಿತಿಗೆ ೦೮೨೮೨-೨೬೪೬೪೪, ೦೮೦-೮೦೫೦೩೭೦೦೦೬ ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದು ಹಿಂದು ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.

Monday, September 27, 2021

ಕೇಂದ್ರ, ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿಗಳಿಂದ ಭವಿಷ್ಯದಲ್ಲಿ ಆತಂಕ

ಭಾರತ್ ಬಂದ್ ಹಿನ್ನಲೆಯಲ್ಲಿ ಸೋಮವಾರ ಭದ್ರಾವತಿ ನಗರದ ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಅಂಬೇಡ್ಕರ್ ವೃತ್ತದಿಂದ ತಾಲೂಕು ಕಛೇರಿ ವರೆಗೂ ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ಪ್ರತಿಭಟನಾ ಮೆರವಣಿಗೆ ನಂತರ ಪ್ರಮುಖರು ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು.
    ಭದ್ರಾವತಿ, ಸೆ. ೨೭: ಈಗಿನ ಕೇಂದ್ರ ಸರ್ಕಾರ ದೇಶದ ಆಸ್ತಿಗಳನ್ನು ಬಂಡವಾಳಶಾಹಿಗಳಿಗೆ ಮಾರಾಟ ಮಾಡುವ ಜೊತೆಗೆ ಅನೇಕ ಜನ ವಿರೋಧಿ ನೀತಿಗಳನ್ನು ಜಾರಿಗೆ ತಂದಿರುವುದು ಭವಿಷ್ಯದಲ್ಲಿ ಆತಂಕಕ್ಕೆ ಎಡೆಮಾಡಿಕೊಟ್ಟಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಪ್ರಮುಖರು ಆರೋಪಿಸಿದರು.
    ಸೋಮವಾರ ಭಾರತ್ ಬಂದ್ ಹಿನ್ನಲೆಯಲ್ಲಿ ನಗರದ ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಅಂಬೇಡ್ಕರ್ ವೃತ್ತದಿಂದ ತಾಲೂಕು ಕಛೇರಿ ವರೆಗೂ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಮೆರವಣಿಯ ನೇತೃತ್ವವಹಿಸಿ ಮಾತನಾಡಿದ ಪ್ರಮುಖರು, ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಡವರು, ರೈತರು ಮತ್ತು ಕಾರ್ಮಿಕರು ನೆಮ್ಮದಿ ಕಳೆದುಕೊಳ್ಳಲುವಂತಾಗಿದೆ. ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜೊತೆಗೆ ಕೃಷಿಯಿಂದ ವಿಮುಖರಾಗುತ್ತಿದ್ದಾರೆ.  ಈ ನಡುವೆ ಹಲವಾರು ಜನ ವಿರೋಧಿ ನೀತಿಗಳಿಂದಾಗಿ ಬದುಕುವುದು ಅಸಾಧ್ಯವಾಗಿದೆ ಎಂದು ದೂರಿದರು.
    ಎಪಿಎಂಸಿ ಕಾಯ್ದೆಗೆ ತಂದಿರುವ ತಿದ್ದುಪಡಿ, ಅಗತ್ಯ ವಸ್ತುಗಳ ನಿಯಂತ್ರಣ ಕಾಯ್ದೆಗೆ ತಂದಿರುವ ತಿದ್ದುಪಡಿ, ವಿದ್ಯುಚ್ಛಕ್ತಿ ಖಾಸಗೀಕರಣ, ರಾಜ್ಯ ಸರ್ಕಾರದ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಭವಿಷ್ಯದಲ್ಲಿ ಮಾರಕವಾಗಿದ್ದು, ಇದರಿಂದಾಗಿ ಬಡ ವರ್ಗದವರು, ರೈತರು ಮತ್ತು ಕಾರ್ಮಿಕರು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಇಂದಿನ ಸರ್ಕಾರ ದೇಶದ ಆಸ್ತಿಗಳನ್ನು ಮಾರಾಟ ಮಾಡಲು ಮುಂದಾಗಿರುವುದು ದುರಾದುಷ್ಟಕರ ಬೆಳವಣಿಗೆಯಾಗಿದ್ದು, ದೇಶವನ್ನು ಸಂಪೂರ್ಣವಾಗಿ ಬಂಡವಾಳಶಾಹಿಗಳ ಕೈಗೊಪ್ಪಿಸುವ ಹುನ್ನಾರ ನಡೆಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಎಲ್ಲರೂ ಎಚ್ಚತ್ತುಕೊಂಡು ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಕ್ಷಣ ಜನ ವಿರೋಧಿ ನೀತಿಗಳನ್ನು ಕೈಬಿಡಬೇಕು. ದೇಶಕ್ಕೆ ಮಾರಕವಾಗಿರುವ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.
    ಪ್ರತಿಭಟನೆ ಅಂಬೇಡ್ಕರ್ ವೃತ್ತದಿಂದ, ಹಾಲಪ್ಪ ವೃತ್ತ, ಮಾಧವಚಾರ್ ವೃತ್ತ ಮತ್ತು ರಂಗಪ್ಪ ವೃತ್ತ ಮೂಲಕ ತಾಲೂಕು ಕಚೇರಿ ತಲುಪಿತು. ನಂತರ ತಹಸೀಲ್ದಾರ್ ಆರ್. ಪ್ರದೀಪ್ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ರೈತಪರ ಸಂಘಟನೆಗಳು, ದಲಿತಪರ ಸಂಘಟನೆಗಳು, ಕಾರ್ಮಿಕಪರ ಸಂಘಟನೆಗಳು, ಮಹಿಳಾಪರ ಸಂಘಟನೆಗಳು, ಪ್ರಗತಿಪರ ಸಂಘಟನೆಗಳ ಒಕ್ಕೂಟ ಭಾರತ್ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು.
    ಪ್ರಮುಖರಾದ ಹಿರಿಯ ಕಾರ್ಮಿಕ ಮುಖಂಡ ಡಿ.ಸಿ ಮಾಯಣ್ಣ, ರೈತ ಮುಖಂಡರಾದ ಯಶವಂತರಾವ್ ಘೋಷರ್ಪಡೆ, ಹಿರಿಯಣ್ಣಯ್ಯ, ಡಿ.ವಿ ವೀರೇಶ್, ಶರತ್ಚಂದ್ರ, ಮಂಜಪ್ಪಗೌಡ, ಪ್ರಗತಿಪರ ಮುಖಂಡರಾದ ಸುರೇಶ್(ಪ್ರಜಾಪ್ರತಿನಿಧಿ), ಜಿ. ರಾಜು, ಯಲ್ಲೋಜಿರಾವ್, ದಲಿತ ಮುಖಂಡರಾದ ಚಿನ್ನಯ್ಯ, ಪಳನಿರಾಜ್, ಕಾಣಿಕ್‌ರಾಜ್, ಬಿಪಿಎಲ್ ಸಂಘದ ಅಧ್ಯಕ್ಷ ಜಗದೀಶ್, ಎಎಪಿ ಪ್ರಮುಖರಾದ ಎಚ್. ರವಿಕುಮಾರ್, ಪರಮೇಶ್ವರಚಾರ್, ಎನ್.ಪಿ ಜೋಸೆಫ್, ರೇಷ್ಮಾ, ಎ. ಮಸ್ತಾನ್, ಜೋಸೆಫ್  ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಕನ್ನಡ ಭಾಷೆ ಬೆಳವಣಿಗೆಗೆ ಕೃತಿಗಳು ಸಹಕಾರಿ : ಅನಿಕೇತನ ಮಾಯಣ್ಣ

ಅಪೇಕ್ಷ ಮಂಜುನಾಥ್, ಕಾಂತೇಶ್ ಕದರಮಂಡಲಿಗಿ ಅವರಿಗೆ ದತ್ತಿ ಪ್ರಶಸ್ತಿ

ಭದ್ರಾವತಿ ತಾಲೂಕಿನ ಬಿ.ಆರ್ ಪ್ರಾಜೆಕ್ಟ್ ಪತ್ರ ಸಂಸ್ಕೃತಿ ಸಂಘಟನೆ ಹಾಗೂ ಬೆಂಗಳೂರಿನ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪತ್ರೋತ್ಸವ ಕಾದಂಬರಿ ಮತ್ತು ಸೊಬಗು ಕವನ ಸಂಕಲನ ಪುಸ್ತಕಗಳ ಲೋಕಾರ್ಪಣೆ ಹಾಗು ದಿವಂಗತ ದೇಶೀಗೌಡ ಮತ್ತು ಶ್ರೀಮತಿ ನಿಂಗಮ್ಮ 'ರಂಗಭೂಮಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದತ್ತಿ ಪ್ರಶಸ್ತಿಯನ್ನು ಶಿವಮೊಗ್ಗ ಕಾಂತೇಶ್ ಕದರಮಂಡಲಗಿ ಹಾಗೂ ಭದ್ರಾವತಿ ತಾಲೂಕು ಕಸಾಪ ಅಧ್ಯಕ್ಷ, ಶಿಕ್ಷಕ ಅಪೇಕ್ಷಾ ಮಂಜುನಾಥ್ ಅವರಿಗೆ ನೀಡಿ ಗೌರವಿಸಲಾಯಿತು.
    ಭದ್ರಾವತಿ, ಸೆ. ೨೭:  ಕನ್ನಡ ಭಾಷೆ ಬೆಳವಣಿಗೆಗೆ ಕೃತಿಗಳು ಸಹಕಾರಿಯಾಗಿದ್ದು, ಹೆಚ್ಚು ಹೆಚ್ಚು ಕೃತಿಗಳನ್ನು ಹೊರತರುವ ಪ್ರಯತ್ನ ನಾಡಿನಾದ್ಯಂತ ನಡೆಯಬೇಕೆಂದು ಬೆಂಗಳೂರು ನಗರ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಅನಿಕೇತನ ಮಾಯಣ್ಣ ಹೇಳಿದರು.
    ಅವರು ತಾಲೂಕಿನ ಬಿ.ಆರ್ ಪ್ರಾಜೆಕ್ಟ್ ಪತ್ರ ಸಂಸ್ಕೃತಿ ಸಂಘಟನೆ ಹಾಗೂ ಬೆಂಗಳೂರಿನ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪತ್ರೋತ್ಸವ ಕಾದಂಬರಿ ಮತ್ತು ಸೊಬಗು ಕವನ ಸಂಕಲನ ಪುಸ್ತಕಗಳ ಲೋಕಾರ್ಪಣೆ ಹಾಗು ದಿವಂಗತ ದೇಶೀಗೌಡ ಮತ್ತು ಶ್ರೀಮತಿ ನಿಂಗಮ್ಮ 'ರಂಗಭೂಮಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಕನ್ನಡ ಭಾಷೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕೆಂದರು.
    ಇಂ. ಹೊಸಹಳ್ಳಿ ದಾಳೇಗೌಡ ಹಾಗೂ ಜಯಂತಿ ಚಂದ್ರಶೇಖರ ಅವರ 'ಪತ್ರೋತ್ಸವ'  ಕಾದಂಬರಿ ಪುಸ್ತಕ ಕುರಿತು ಮಾತನಾಡಿದ ಕೊಪ್ಪಳದ ಗಜಲ್ ಕವಿ ಅಲ್ಲಾಗಿರಿ ರಾಜ್‌ರವರು, ಕಾದಂಬರಿಯಲ್ಲಿನ ಗ್ರಾಮೀಣ ಭಾಷೆಯ ಸೊಗಡು ಇಂದಿನ ಯುವ ಪೀಳಿಗೆಗೆ ತಲುಪಿಸುವ ಕೆಲಸವಾಗಬೇಕು.  ಪ್ರಸ್ತುತ ಇಂತಹ ಕೃತಿ ಪದವಿ ತರಗತಿಗಳಿಗೆ ಪಠ್ಯ ಪುಸ್ತಕವನ್ನಾಗಿ ಮಾಡುವ ಅಗತ್ಯವಿದೆ ಎಂದರು.  
    'ಸೊಬಗು' ಕವನ ಸಂಕಲನ ಪುಸ್ತಕ ಕುರಿತು ಮಾತನಾಡಿದ ಸಾಹಿತಿ ಕೆ.ಎಸ್.ವೀರಭದ್ರಪ್ಪ, ಕವನ ಸಂಕಲನದಲ್ಲಿ ಅತ್ಯಂತ ಪರಿಣಾಮಕಾರಿಯಾಗಬಹುದಾದ ಕವಿತೆಗಳಿವೆ. ಒಮ್ಮೆ ಓದಿದರೆ ಅರ್ಥವಾಗದ ಶಬ್ದಗಳ ಬಳಕೆ ಅಚ್ಚರಿ ಮೂಡಿಸುತ್ತದೆ. ಇಂತಹ ಕವಿತೆಗಳು ಅಪರೂಪ ಎಂದರು.
    ದಿವಂಗತ ದೇಶಿಗೌಡ ಮತ್ತು ಶ್ರೀಮತಿ ನಿಂಗಮ್ಮ ರಂಗಭೂಮಿ ದತ್ತಿ ಪ್ರಶಸ್ತಿಯನ್ನು ಶಿವಮೊಗ್ಗ ಕಾಂತೇಶ್ ಕದರಮಂಡಲಗಿ ಹಾಗೂ ಭದ್ರಾವತಿ ತಾಲೂಕು ಕಸಾಪ ಅಧ್ಯಕ್ಷ, ಶಿಕ್ಷಕ ಅಪೇಕ್ಷ ಮಂಜುನಾಥ್ ಅವರಿಗೆ ನೀಡಿ ಗೌರವಿಸಲಾಯಿತು.