Wednesday, December 15, 2021

ಅತ್ಯಾಚಾರ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರಿಗೆ ತಕ್ಷಣ ಶಿಕ್ಷೆ ವಿಧಿಸಿ

ಬಂಜಾರ ಯುವಕರ ಸಂಘದ ವತಿಯಿಂದ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ

ಬಂಜಾರ ಸಮುದಾಯದ ಪರಿಶಿಷ್ಟ ಜಾತಿಗೆ ಸೇರಿದ ಹೆಣ್ಣು ಮಕ್ಕಳ ಮೇಲೆ ಇತ್ತೀಚೆಗೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದೆ. ಅತ್ಯಾಚಾರ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಭದ್ರಾವತಿಯಲ್ಲಿ ತಾಲೂಕು ಬಂಜಾರ ಯುವಕರ ಸಂಘದ ವತಿಯಿಂದ ಬುಧವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಡಿ. ೧೫: ಬಂಜಾರ ಸಮುದಾಯದ ಪರಿಶಿಷ್ಟ ಜಾತಿಗೆ ಸೇರಿದ ಹೆಣ್ಣು ಮಕ್ಕಳ ಮೇಲೆ ಇತ್ತೀಚೆಗೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದೆ. ಅತ್ಯಾಚಾರ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ತಾಲೂಕು ಬಂಜಾರ ಯುವಕರ ಸಂಘದ ವತಿಯಿಂದ ಬುಧವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
    ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ್ ತಾಲೂಕಿನ ಹುಲ್ಲೂರ ತಾಂಡದ ಬಂಜಾರ ಸಮುದಾಯದ ಅಪ್ರಾಪ್ತ ಬಾಲಕಿ ರಂಜಿತಾ ರಾಥೋಡ್ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಘಟನೆಯನ್ನು ಖಂಡಿಸಿ ಮಾತನಾಡಿದ ಪ್ರಮುಖರು, ಇತ್ತೀಚೆಗೆ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದರಲ್ಲೂ ಬಂಜಾರ ಸಮುದಾಯದ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಹೆಚ್ಚಾಗುತ್ತಿರುವುದು ವಿಷಾದನೀಯ ಬೆಳವಣಿಗೆಯಾಗಿದೆ ಎಂದರು.
    ಅತ್ಯಾಚಾರ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಅತ್ಯಾಚಾರಿಗಳಿಗೆ ತಕ್ಷಣ ಕಠಿಣ ಶಿಕ್ಷೆ ವಿಧಿಸಬೇಕು. ಆ ಮೂಲಕ ಸಮಾಜದಲ್ಲಿ ಎಚ್ಚರಿಕೆ ಮೂಡಿಸುವಂತಾಗಬೇಕು. ರಂಜಿತಾ ರಾಥೋಡ್ ಮೇಲಿನ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥರಾಗಿರುವವರನ್ನು ತಕ್ಷಣ ಬಂಧಿಸಿ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.
    ಸರ್ಕಾರ ರಂಜಿತಾ ರಾಥೋಡ್ ಬಾಲಕಿಯ ಕುಟುಂಬಕ್ಕೆ ತಕ್ಷಣ ಆರ್ಥಿಕ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಜೊತೆಗೆ ಪ್ರಕರಣದ ತಪ್ಪಿತಸ್ಥರಿಗೆ ೨೦ ಲಕ್ಷ ರು. ದಂಡ ವಿಧಿಸಿ ಕುಟುಂಬಕ್ಕೆ ಸಂಪೂರ್ಣ ಆಶ್ರಯ ನೀಡುವ ಮೂಲಕ ಕಾನೂನಿನ ರಕ್ಷಣೆ ಒದಗಿಸಬೇಕೆಂದು ಆಗ್ರಹಿಸಿದರು.
    ಬಂಜಾರ ಸಮುದಾಯದ ಮಂಜು ಮಹಾರಾಜ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಕೃಷ್ಣಾನಾಯ್ಕ, ಪ್ರಮುಖರಾದ ಗಿರೀಶ್, ಚಂದ್ರನಾಯ್ಕ, ಸಂತೋಷ್, ಪ್ರವೀಣ್‌ಕುಮಾರ್, ಭೋಜ್ಯನಾಯ್ಕ, ವೇವೇಶ, ನಾಗನಾಯ್ಕ, ಮಂಜನಾಯ್ಕ, ರಮೇಶ್, ಕಾಂತ ದಿನೇಶ್, ಮಂಜುಳ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಒಕ್ಕಲಿಗರ ಸಂಘದಲ್ಲಿ ಹಿಡಿತ ಸಾಧಿಸಲು ಮುಂದಾದ ಎಸ್. ಕುಮಾರ್‌ಗೆ ಹಿನ್ನಡೆ

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಸೋಲು

ಎಸ್. ಕುಮಾರ್
    ಭದ್ರಾವತಿ, ಡಿ. ೧೫: ತಾಲೂಕು ಒಕ್ಕಲಿಗರ ಸಂಘದಲ್ಲಿ ಹಿಡಿತ ಸಾಧಿಸಲು ಮುಂದಾಗಿರುವ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್‌ಗೆ ಹಿನ್ನಡೆ ಎದುರಾಗಿದೆ. ಡಿ.೧೨ರಂದು ನಡೆದ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಎಸ್. ಕುಮಾರ್ ಸೋಲುಂಡಿದ್ದಾರೆ.
    ಈ ಬಾರಿ ಶಿವಮೊಗ್ಗ-ಉತ್ತರ ಕನ್ನಡ ನಿರ್ದೇಶಕ ಸ್ಥಾನ ತಮ್ಮದಾಗಿಸಿಕೊಳ್ಳಬೇಕೆಂಬ ಉದ್ದೇಶದೊಂದಿಗೆ ತಾಲೂಕು ಒಕ್ಕಲಿಗರ ಸಂಘ ತೀವ್ರ ಪೈಪೋಟಿಗೆ ಮುಂದಾಗಿತ್ತು. ಈ ನಡುವೆ ಸಮುದಾಯದಲ್ಲಿ ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪ್ರಮುಖರು ಸ್ಪರ್ಧೆಗೆ ಮುಂದಾಗಿದ್ದರು. ಕೊನೆ ಕ್ಷಣದಲ್ಲಿ ಎಸ್. ಕುಮಾರ್ ಅವರನ್ನು ಕಣಕ್ಕಿಳಿಸಲು ಸಂಘ ತೀರ್ಮಾನ ಕೈಗೊಂಡಿತ್ತು. ಇದಕ್ಕೆ ಆರಂಭದಲ್ಲಿಯೇ ಕೆಲವರು ತೀವ್ರ ಅಸಮಧಾನ ವ್ಯಕ್ತಪಡಿಸಿದ್ದರು. ಆದರೂ ಸಹ ಈ ನಡುವೆ ಎಸ್. ಕುಮಾರ್ ಯಾವುದನ್ನು ಸಹ ಗಂಭೀರವಾಗಿ ಪರಿಗಣಿಸದೆ ಚುನಾವಣೆಗೆ ಸ್ಪರ್ಧಿಸಿ ತೀವ್ರ ಪೈಪೋಟಿ ನಡೆಸಿದ್ದರು.
    ಅಸಮಧಾನಗೊಂಡಿದ್ದ ಸಮುದಾಯದ ಕೆಲವರು ಇಲ್ಲಿಯೇ ಸಭೆ ನಡೆಸಿ ತೀರ್ಥಹಳ್ಳಿ ತಾಲೂಕಿನ ಧರ್ಮೇಶ್ ಸಿರಿಬೈಲು ಅವರನ್ನು ಬೆಂಬಲಿಸಲು ನಿರ್ಧರಿಸಿದ್ದರು. ತಾಲೂಕಿನಲ್ಲಿ ಒಟ್ಟು ೪೦೫೪ ಮತದಾರರಿದ್ದು, ಈ ಪೈಕಿ ಬಹುತೇಕ ಮಂದಿ ಚಲಾಯಿಸಿದ್ದರು. ಚಲಾವಣೆಗೊಂಡ ಮತಗಳಲ್ಲಿ ಎಸ್. ಕುಮಾರ್ ೨೧೮೪ ಮತಗಳನ್ನು ಪಡೆದುಕೊಂಡಿದ್ದು,  ಧರ್ಮೇಶ್ ಸಿರಿಬೈಲು ೧೦೧೬ ಮತಗಳನ್ನು ಪಡೆದುಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಕುಮಾರ್ ಹಿನ್ನಡೆ ಅನುಭವಿಸುವಂತಾಯಿತು. ಒಟ್ಟಾರೆ ಎಸ್. ಕುಮಾರ್ ೩೪೮೬ ಮತ್ತು ಧರ್ಮೇಶ್ ಸಿರಿಬೈಲ್‌ರವರು ೫೮೦೮ ಮತಗಳನ್ನು ಪಡೆದುಕೊಂಡಿದ್ದು, ೨೩೨೨ ಮತಗಳ ಅಂತರದಿಂದ ಧರ್ಮೇಶ್ ಸಿರಿಬೈಲು ಗೆಲುವು ಸಾಧಿಸಿದ್ದಾರೆ.

Tuesday, December 14, 2021

ಪರಿಷತ್ ಚುನಾವಣೆ : ಜೆಡಿಯು ಅಭ್ಯರ್ಥಿ ಶಶಿಕುಮಾರ್ ಎಸ್ ಗೌಡಗೆ ೩ ಮತ


ಶಶಿಕುಮಾರ್ ಎಸ್ ಗೌಡ
    ಭದ್ರಾವತಿ, ಡಿ. ೧೪: ಸಮಾಜವಾದಿ ಚಿಂತನೆಗಳ ನೆಲೆಗಟ್ಟಿನ ಮೇಲೆ ಈಗಲೂ ಸಾರ್ವತ್ರಿಕ ಚುನಾವಣೆಗಳನ್ನು ಎದುರಿಸುತ್ತಿರುವ ನಗರದ ಜನ್ನಾಪುರ ಹಾಲಪ್ಪಶೆಡ್ ನಿವಾಸಿ ಶಶಿಕುಮಾರ್ ಎಸ್ ಗೌಡ ಈ ಬಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ೩ ಮತಗಳನ್ನು ಪಡೆದುಕೊಂಡಿದ್ದಾರೆ.
    ಸಾರ್ವತ್ರಿಕ ಚುನಾವಣೆಗಳಲ್ಲಿ ನೈತಿಕತೆ, ಪಾರದರ್ಶಕತೆ ಕಾಯ್ದುಕೊಳ್ಳಬೇಕೆಂಬ ಉದ್ದೇಶದೊಂದಿಗೆ ಶಶಿಕುಮಾರ್ ಎಸ್ ಗೌಡ ಲೋಕಸಭೆ, ವಿಧಾನಸಭೆ, ನಗರಸಭೆ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದರು. ಇದೀಗ ವಿಧಾನಪರಿಷತ್ ಚುನಾವಣೆಯಲ್ಲೂ ಸ್ಪರ್ಧಿಸಿ ಗಮನ ಸೆಳೆದಿದ್ದರು.
    ಜನತಾದಳ(ಸಂಯುಕ್ತ) ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಶಿಕುಮಾರ್ ಎಸ್ ಗೌಡ ಪರವಾಗಿ ಪಕ್ಷದ ರಾಜ್ಯಾಧ್ಯಕ್ಷ ಮಹಿಮಾ ಜೆ. ಪಟೇಲ್, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣಗೌಡ ಮತ್ತು ಕರ್ನಾಟಕ ರಾಷ್ಟ್ರ ಸಮಿತಿ ರಾಜ್ಯಾಧ್ಯಕ್ಷ ರವಿಕೃಷ್ಣ ರೆಡ್ಡಿ ಪ್ರಚಾರ ನಡೆಸಿದ್ದರು.

ಅಕ್ರಮವಾಗಿ ಕೂಡಿಹಾಕಲಾಗಿದ್ದ ೧೬ ಗೋವುಗಳ ರಕ್ಷಣೆ :

ಭದ್ರಾವತಿ ಹಳೇನಗರ ಠಾಣೆ ಪೊಲೀಸರ ಕಾರ್ಯಾಚರಣೆ

ಅಕ್ರಮವಾಗಿ ಕೂಡಿಹಾಕಲಾಗಿದ್ದ ಸುಮಾರು ೧೬ ಗೋವುಗಳನ್ನು ಭದ್ರಾವತಿ ಹಳೇನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದು ರಕ್ಷಿಸಿರುವುದು.  
     ಭದ್ರಾವತಿ, ಡಿ. ೧೪: ಅಕ್ರಮವಾಗಿ ಕೂಡಿಹಾಕಲಾಗಿದ್ದ ಸುಮಾರು ೧೬ ಗೋವುಗಳನ್ನು ಇಲ್ಲಿನ ಹಳೇನಗರ ಠಾಣೆ ಪೊಲೀಸರು ವಶಕ್ಕೆ ಪಡೆದು ರಕ್ಷಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
    ನಗರಸಭೆ ವ್ಯಾಪ್ತಿಯ ಅನ್ವರ್ ಕಾಲೋನಿಯಲ್ಲಿ ತಬ್ರೇಜ್ ಎಂಬುವವರಿಗೆ ಸೇರಿದ ಒಂದು ಮನೆಯಲ್ಲಿ ಕೂಡಿ ಹಾಕಲಾಗಿದ್ದ ಒಟ್ಟು ೧೦ ಗೋವುಗಳನ್ನು ಹಾಗು ಈತನಿಗೆ ಸೇರಿದ ಮತ್ತೊಂದು ಮನೆಯಲ್ಲಿ ಕೂಡಿ ಹಾಕಲಾಗಿದ್ದ ೩ ಗೋವುಗಳನ್ನು ಹಾಗು ಜಾಫರ್ ಸಾಧಿಕ್ ಎಂಬುವರ ಮನೆಯಲ್ಲಿ ಕೂಡಿ ಹಾಕಲಾಗಿದ್ದ ೩ ಗೋವುಗಳನ್ನು ಒಟ್ಟು ೧೬ ಗೋವುಗಳನ್ನು ಪೊಲೀಸರು ರಕ್ಷಿಸಿದ್ದಾರೆ.
    ಗೋ ಮಾಂಸದ ಉದ್ದೇಶಕ್ಕಾಗಿ ಗೋವುಗಳನ್ನು ಕೂಡಿಹಾಕಲಾಗಿತ್ತು ಎನ್ನುವ ಮಾಹಿತಿಗಳ ಆಧಾರದ ಮೇರೆಗೆ ಪೊಲೀಸರು ದಾಳಿ ನಡೆಸಿ ಗೋವುಗಳನ್ನು ರಕ್ಷಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತಬ್ರೇಜ್ ಮತ್ತು ಜಾಫರ್ ಸಾಧಿಕ್ ತಲೆ ಮರೆಸಿಕೊಂಡಿದ್ದಾರೆ.

Monday, December 13, 2021

ನ್ಯಾಯಬೆಲೆ ಅಂಗಡಿ ಸಿಬ್ಬಂದಿ ದಿನೇಶ್ ನಿಧನ

ದಿನೇಶ್
    ಭದ್ರಾವತಿ, ಡಿ. ೧೩: ನಗರಸಭೆ ವ್ಯಾಪ್ತಿಯ ಹೊಸಸಿದ್ದಾಪುರ ಗ್ರಾಮದ ನ್ಯಾಯಬೆಲೆ ಅಂಗಡಿಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ದಿನೇಶ್(೪೮) ಸೋಮವಾರ ನಿಧನ ಹೊಂದಿದರು.
    ಪತ್ನಿ, ಇಬ್ಬರು ಪುತ್ರಿಯರನ್ನು ಹೊಂದಿದ್ದರು. ದಿನೇಶ್ ಕೆಲವು ತಿಂಗಳುಗಳಿಂದ ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಇವರ ಅಂತ್ಯಕ್ರಿಯೆ ಬೈಪಾಸ್ ರಸ್ತೆ ಬುಳ್ಳಾಪುರದಲ್ಲಿರುವ ಹಿಂದೂ ರುದ್ರ ಭೂಮಿಯಲ್ಲಿ ನೆರವೇರಲಿದೆ. ಮೃತರ ನಿಧನಕ್ಕೆ ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗಯ್ಯ ಸೇರಿದಂತೆ ಪಡಿತರ ವಿತರಕರು ಸಂತಾಪ ಸೂಚಿಸಿದ್ದಾರೆ.

ಕಟ್ಟಡ ಕಾರ್ಮಿಕರಿಗೆ ಸುರಕ್ಷತಾ, ಪ್ರತಿರೋಧಕ ಕಿಟ್ ವಿತರಣೆ


ಕಾರ್ಮಿಕ ಇಲಾಖೆಯಿಂದ ಅಸಂಘಟಿತ ಕಾರ್ಮಿಕರಿಗೆ ನೀಡಲಾಗುವ ಸುರಕ್ಷಾ ಮತ್ತು ಪ್ರತಿರೋಧಕ ಕಿಟ್‌ಗಳನ್ನು ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ಗ್ರಾಮಾಂತರ ಶಾಖೆ ವತಿಯಿಂದ ಭದ್ರಾವತಿ ತಾಲೂಕಿನ ದೊಡ್ಡೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸೋಮವಾರ ವಿತರಿಸಲಾಯಿತು.
    ಭದ್ರಾವತಿ, ಡಿ. ೧೩: ಕಾರ್ಮಿಕ ಇಲಾಖೆಯಿಂದ ಅಸಂಘಟಿತ ಕಾರ್ಮಿಕರಿಗೆ ನೀಡಲಾಗುವ ಸುರಕ್ಷಾ ಮತ್ತು ಪ್ರತಿರೋಧಕ ಕಿಟ್‌ಗಳನ್ನು ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ಗ್ರಾಮಾಂತರ ಶಾಖೆ ವತಿಯಿಂದ ತಾಲೂಕಿನ ದೊಡ್ಡೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸೋಮವಾರ ವಿತರಿಸಲಾಯಿತು.
    ದೊಡ್ಡೇರಿ, ಎಮ್ಮೆದೊಡ್ಡಿ, ಗಂಗೂರು, ಬದನೇಹಾಳ್, ಬಂಡಿಗುಡ್ಡ, ಸಿಕಂದರ್ ಕ್ಯಾಂಪ್, ಬಾಳೆಕಟ್ಟೆ  ಮತ್ತು ಬಿಸಿಲು ಮನೆ ಇನ್ನಿತರ ಗ್ರಾಮಗಳಲ್ಲಿ ಕಟ್ಟಡ ಕಾರ್ಮಿಕರಿಗೆ ಯುವ ಮುಖಂಡ ಬಿ.ಎಸ್ ಗಣೇಶ್,  ಗ್ರಾಮ ಪಂಚಾಯಿತಿ ಅಧ್ಯಕ್ಷ ಷರೀಫ್ ಮತ್ತು ಉಪಾಧ್ಯಕ್ಷೆ  ಹೇಮಾವತಿ ಶ್ರೀನಿವಾಸ್ ನೇತೃತ್ವದಲ್ಲಿ ಕಿಟ್‌ಗಳನ್ನು ವಿತರಿಸಿದರು.
    ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್‌ಬಾಬು, ತಾಲೂಕು ಅಧ್ಯಕ್ಷ ಚಂದ್ರಶೇಖರ್, ತಾಲ್ಲೂಕು ಕಾರ್ಯಾಧ್ಯಕ್ಷ ಅಭಿಲಾಷ್, ಗೌರವ ಸಲಹೆಗಾರ ಶಿವಣ್ಣಗೌಡ, ಪಿಡಿಒ ಶಿವಶಂಕರ್, ಧನಂಜಯ, ಕೃಷ್ಣಮೂರ್ತಿ, ಹರಿಯಪ್ಪ ಸೇರಿದಂತೆ ಗ್ರಾಮಾಂತರ ಶಾಖೆಯ ಪದಾಧಿಕಾರಿಗಳು,  ಗ್ರಾಮದ ಮುಖಂಡರು, ಕಾರ್ಮಿಕರು ಉಪಸ್ಥಿತರಿದ್ದರು.

ದಯಾನಂದ ನಿಧನ


ದಯಾನಂದ
    ಭದ್ರಾವತಿ, ಡಿ. ೧೩: ತಾಲೂಕಿನ ಕಾಳಿಂಗನಹಳ್ಳಿ ನಿವಾಸಿ, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಬದರಿನಾರಾಯಣ ಅವರ ಸಹೋದರ ದಯಾನಂದ(೪೭) ಭಾನುವಾರ ನಿಧನ ಹೊಂದಿದರು.
    ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಹೊಂದಿದ್ದರು. ಅನಾರೋಗ್ಯಕ್ಕೆ ಒಳಗಾಗಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರ ಅಂತ್ಯಕ್ರಿಯೆ ಗ್ರಾಮದ ಸ್ಮಶಾನದಲ್ಲಿ ಸೋಮವಾರ ಬೆಳಿಗ್ಗೆ ನೆರವೇರಿಸಲಾಯಿತು. ತಾಲೂಕು ಛಲವಾದಿ ಸಮಾಜ(ಪ.ಜಾ) ಹಾಗು ಛಲವಾದಿ ಮಹಾಸಭಾ ಸಂತಾಪ ಸೂಚಿಸಿವೆ.