Sunday, January 16, 2022

ಜ.೧೭ರಂದು ‘ನಿರಾಕರಣೆ’ ಏಕವ್ಯಕ್ತಿ ನಾಟಕ ಪ್ರದರ್ಶನ

    ಭದ್ರಾವತಿ, ಜ. ೧೬: ಭದ್ರಾವತಿ ನಾಗರೀಕ ವೇದಿಕೆ ವತಿಯಿಂದ ಜ.೧೭ರಂದು ಸಿದ್ದರೂಢನಗರದ ಶ್ರೀ ಭಾರತಿತೀರ್ಥ ಸಮುದಾಯಭವನದಲ್ಲಿ ಏಕವ್ಯಕ್ತಿ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
    'ನಿರಾಕರಣೆ' ಎಂಬ ಏಕವ್ಯಕ್ತಿ ನಾಟಕ ಪ್ರದರ್ಶನ ಸಂಜೆ ೬.೩೦ಕ್ಕೆ ಆರಂಭಗೊಳ್ಳಲಿದ್ದು,  ಕೋವಿಡ್ ೩ನೇ ಹಿನ್ನಲೆಯಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಸರ್ಕಾರದ ಮಾರ್ಗ ಸೂಚಿಗಳನ್ನು ಪಾಲಿಸುವ ಮೂಲಕ ಪ್ರದರ್ಶನ ವೀಕ್ಷಿಸಿ ಕಲಾವಿದರನ್ನು ಪ್ರೋತ್ಸಾಹಿಸುವಂತೆ ವೇದಿಕೆ ಸಂಚಾಲಕ ಸಿದ್ದಲಿಂಗಯ್ಯ ಕೋರಿದ್ದಾರೆ.

ಗ್ರಾಮೀಣ ಕ್ರೀಡೆಗಳ ಉಳಿವಿಗೆ ಶ್ರಮಿಸಿ : ಕೆ.ಟಿ.ಕೆ ಉಲ್ಲಾಸ್

ಅರಳಿಕೊಪ್ಪ ಗ್ರಾಮದಲ್ಲಿ ೨ ದಿನಗಳ ತಾಲೂಕು ಮಟ್ಟದ ಕ್ರೀಡಾಕೂಟ

ಶಿವಮೊಗ್ಗ ನೆಹರು ಯುವ ಕೇಂದ್ರ ಹಾಗೂ ಅರಳಿಕೊಪ್ಪ ಡಾ. ಬಿ.ಆರ್ ಅಂಬೇಡ್ಕರ್ ಗ್ರಾಮಾಭಿವೃದ್ಧಿ ಯುವಕರ ಸಂಘ ಮತ್ತು ಛಾಯಾ ಯುವಕರ ಸಂಘ ಹಾಗೂ ಅರಳಿಕೊಪ್ಪ ಗ್ರಾಮ ಪಂಚಾಯತಿ ವತಿಯಿಂದ ಇತ್ತೀಚೆಗೆ ಗ್ರಾಮದ ಶ್ರೀ ಕೆಂಚಮಾರಿಯಮ್ಮ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಉತ್ತರೇಶ್ ಚಾಲನೆ ನೀಡಿದರು.
    ಭದ್ರಾವತಿ, ಜ. ೧೬: ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಯಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಗ್ರಾಮೀಣ ಕ್ರೀಡಾಕೂಟಗಳು ಹೆಚ್ಚು ಸಹಕಾರಿಯಾಗಿವೆ ಎಂದು ನೆಹರು ಯುವ ಕೇಂದ್ರದ ಯುವ ಅಧಿಕಾರಿ ಕೆ.ಟಿ.ಕೆ ಉಲ್ಲಾಸ್ ಹೇಳಿದರು.
ಶಿವಮೊಗ್ಗ ನೆಹರು ಯುವ ಕೇಂದ್ರ ಹಾಗೂ ಅರಳಿಕೊಪ್ಪ ಡಾ. ಬಿ.ಆರ್ ಅಂಬೇಡ್ಕರ್ ಗ್ರಾಮಾಭಿವೃದ್ಧಿ ಯುವಕರ ಸಂಘ ಮತ್ತು ಛಾಯಾ ಯುವಕರ ಸಂಘ ಹಾಗೂ ಅರಳಿಕೊಪ್ಪ ಗ್ರಾಮ ಪಂಚಾಯತಿ ವತಿಯಿಂದ ಇತ್ತೀಚೆಗೆ ಗ್ರಾಮದ ಶ್ರೀ ಕೆಂಚಮಾರಿಯಮ್ಮ ಜಾತ್ರಾ ಮಹೋತ್ಸವದ
    ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
    ಗ್ರಾಮದಲ್ಲಿನ ಪ್ರತಿಭಾವಂತರು ಕ್ರೀಡಾಕೂಟದ ಸದುಪಯೋಗ ಪಡೆದುಕೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕೆಂದರು.
    ಗ್ರಾಮ ಪಂಚಾಯಿತಿ ಅಧ್ಯಕ್ಷ ಉತ್ತರೇಶ್ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಉಪಾಧ್ಯಕ್ಷೆ ಲಕ್ಷ್ಮೀಬಾಯಿ ಅಧ್ಯಕ್ಷತೆ ವಹಿಸಿದ್ದರು.  ಗ್ರಾ.ಪಂ. ಸದಸ್ಯರು, ಗ್ರಾಮದ ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಗ್ರಾಮೀಣ ಕ್ರೀಡೆಗಳಾದ ಕೆಸರು ಗದ್ದೆ ಓಟ, ಹಗ್ಗ-ಜಗ್ಗಾಟ, ಕಬಡ್ಡಿ, ಮ್ಯೂಸಿಕಲ್ ಛೇರ್, ಲೆಮನ್ & ಸ್ಪೂನ್ ಸೇರಿದಂತೆ ವಿವಿಧ ಸ್ಪರ್ಧೆಗಳು ಜರುಗಿದವು. ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.

Saturday, January 15, 2022

ಉಕ್ಕಿನ ನಗರದಲ್ಲಿ ಕೊರೋನಾ ಶತಕ ದಾಟಲು ೨ ಬಾಕಿ

ಕೇವಲ ೬ದಿನದಲ್ಲಿ ೩೦೦ರ ಗಡಿ ದಾಟಿದ ಸೋಂಕು


    ಭದ್ರಾವತಿ, ಜ. ೧೫: ತಾಲೂಕಿನಲ್ಲಿ ಕೋವಿಡ್ ೩ನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಕೇವಲ ೬ ದಿನದಲ್ಲಿ ೩೦೦ರ ಗಡಿ ದಾಟಿದೆ. ಶನಿವಾರ ಒಂದೇ ದಿನ ೯೮ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಇದರಿಂದಾಗಿ ಮತ್ತಷ್ಟು ಆತಂಕ ಹೆಚ್ಚಾಗಿದೆ.
    ೩ನೇ ಅಲೆಯಲ್ಲಿ ಯಾವುದೇ ರೀತಿಯ ಗಂಭೀರ ಸಮಸ್ಯೆಗಳು ಕಂಡು ಬಾರದಿದ್ದರೂ ಸಹ ಸೋಂಕಿತರ ಪ್ರಮಾಣದಲ್ಲಿ ದಿನ ದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದುವರೆಗೂ ಸಾವಿನ ಪ್ರಕರಣಗಳು ದಾಖಲಾಗಿಲ್ಲ. ಬಹುತೇಕ ಮಂದಿ ಈಗಾಗಲೇ ೨ ಹಂತದ ಕೋವಿಡ್ ಲಸಿಕೆಗಳನ್ನು ಪಡೆದುಕೊಂಡಿದ್ದು, ಈ ಹಿನ್ನಲೆಯಲ್ಲಿ ಯಾವುದೇ ಗಂಭೀರ ಸಮಸ್ಯೆಗಳು ಕಂಡು ಬರುತ್ತಿಲ್ಲ ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಹೆಚ್ಚಾಗಿದ್ದು, ಈ ನಡುವೆ ಜನರು ಸ್ಯಾನಿಟೈಜರ್, ಮಾಸ್ಕ್ ಬಳಕೆ ಹಾಗು ಸಾಮಾಜಿಕ ಅಂತರ ಸೇರಿದಂತೆ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸದೆ ನಿರ್ಲಕ್ಷ್ಯ ವಹಿಸುತ್ತಿರುವುದು ಕಂಡು ಬರುತ್ತಿದೆ.

ತಾಲೂಕು ಕುರುಬರ ಸಂಘಕ್ಕೆ ಆಡಳಿತಾಧಿಕಾರಿ ನೇಮಕ

ಭದ್ರಾವತಿ ತಾಲೂಕು ಕುರುಬರ ಸಂಘ.
    ಭದ್ರಾವತಿ, ಜ. ೧೫: ತಾಲೂಕು ಕುರುಬರ ಸಂಘಕ್ಕೆ ನಿಗದಿತ ಸಮಯದಲ್ಲಿ ಚುನಾವಣೆ ನಡೆಯದ ಹಿನ್ನಲೆಯಲ್ಲಿ ಸರ್ಕಾರ ಆಡಳಿತಾಧಿಕಾರಿಯನ್ನು ನೇಮಕಗೊಳಿಸಿ ಆದೇಶ ಹೊರಡಿಸಿದೆ.
    ಈ ಹಿಂದೆ ತಾಲೂಕು ಕುರುಬರ ಸಂಘಕ್ಕೆ ೨೦೧೭ರಲ್ಲಿ ಅಂದಿನ ಆಡಳಿತಾಧಿಕಾರಿಗಳ ನೇತೃತ್ವದಲ್ಲಿ ಚುನಾವಣೆ ನಡೆದು ಹೊಸದಾಗಿ ಪದಾಧಿಕಾರಿಗಳು ಚುನಾಯಿತರಾಗಿದ್ದರು. ಬೈಲಾ ಪ್ರಕಾರ ಇವರ ಅಧಿಕಾರ ಅವಧಿ ೩ ವರ್ಷಗಳಿಗೆ ಸೀಮಿತವಾಗಿದ್ದು, ನವೆಂಬರ್ ೨೦೨೦ರಲ್ಲಿ ಮುಕ್ತಾಯಗೊಂಡಿದೆ. ಆದರೂ ಸಹ ಇದುವರೆಗೂ ಚುನಾವಣೆ ನಡೆಸಿಲ್ಲ. ಕೋವಿಡ್-೧೯ರ ಹಿನ್ನಲೆಯಲ್ಲಿ ಚುನಾವಣೆ ನಡೆಸಲು ಸಾಧ್ಯವಾಗಿಲ್ಲ ಎಂದು ಸಂಘದ ಪದಾಧಿಕಾರಿಗಳು ಸಹಕಾರ ಸಂಘಗಳ ನಿಬಂಧಕರು ಮತ್ತು ಉಪ ನಿಬಂಧಕರಿಗೆ ಸಲ್ಲಿಸಿರುವ ಸಮಜಾಯಿಷಿಯಲ್ಲಿ ಒಪ್ಪಿಕೊಂಡಿದ್ದು, ಈ ಹಿನ್ನಲೆಯಲ್ಲಿ ಸಂಘದ ಕಾರ್ಯ ಚಟುವಟಿಕೆಗಳು ಯಾವುದೇ ಅಡೆತಡೆ ಇಲ್ಲದೆ ಸುಗಮವಾಗಿ ನಡೆಯಲು ಅನುಕೂಲವಾಗುವಂತೆ ಜ.೬ರಂದು ಸರ್ಕಾರ ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿಯನ್ನು ಆಡಳಿತಾಧಿಕಾರಿಯಾಗಿ ನೇಮಕಗೊಳಿಸಿದೆ.
    ಆಡಳಿತಾಧಿಕಾರಿಗಳು ಸಂಘದ ಬೈಲಾ ಪ್ರಕಾರ ಚುನಾವಣೆ ನಡೆಸಿ ನೂತನ ಪದಾಧಿಕಾರಿಗಳು ಆಯ್ಕೆಯಾಗುವವರೆಗೂ ಮುಂದುವರೆಯಲಿದ್ದು, ಮುಂದಿನ ೬ ತಿಂಗಳ ಒಳಗೆ ಸಂಘಕ್ಕೆ ಚುನಾವಣೆ ನಡೆಸುವುದು ಅನಿವಾರ್ಯವಾಗಿದೆ. ಈ ಕುರಿತು ಸಹಕಾರ ಇಲಾಖೆ ಅಧೀನ ಕಾರ್ಯದರ್ಶಿ ಎಚ್.ಸಿ ರಾಧ ರಾಜ್ಯಪಾಲರ ಆದೇಶಾನುಸಾರ ಸುತ್ತೋಲೆ ಹೊರಡಿಸಿದ್ದಾರೆ.

ವಾರಾಂತ್ಯ ಕರ್ಪ್ಯೂ ನಡುವೆ ಶ್ರೀ ಗುರುಸಿದ್ದರಾಮೇಶ್ವರ ಜಯಂತಿ

ವಾರಾಂತ್ಯ ಕರ್ಪ್ಯೂ ನಡುವೆ ಭದ್ರಾವತಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗು ಭೋವಿ ಅಭಿವೃದ್ಧಿ ಸಂಘದ ವತಿಯಿಂದ ಶನಿವಾರ ತಾಲೂಕು ಕಛೇರಿ ಸಭಾಂಗಣದಲ್ಲಿ ಶಿವಯೋಗಿ ಶ್ರೀ ಗುರುಸಿದ್ದರಾಮೇಶ್ವರರ ೮೪೯ನೇ ಜಯಂತಿ ಸರಳವಾಗಿ ನಡೆಯಿತು
    ಭದ್ರಾವತಿ, ಜ. ೧೫: ವಾರಾಂತ್ಯ ಕರ್ಪ್ಯೂ ನಡುವೆ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗು ಭೋವಿ ಅಭಿವೃದ್ಧಿ ಸಂಘದ ವತಿಯಿಂದ ಶನಿವಾರ ತಾಲೂಕು ಕಛೇರಿ ಸಭಾಂಗಣದಲ್ಲಿ ಶಿವಯೋಗಿ ಶ್ರೀ ಗುರುಸಿದ್ದರಾಮೇಶ್ವರರ ೮೪೯ನೇ ಜಯಂತಿ ಸರಳವಾಗಿ ನಡೆಯಿತು.
    ಶ್ರೀ ಗುರುಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ತಹಸೀಲ್ದಾರ್ ಆರ್. ಪ್ರದೀಪ್ ನಿಕ್ಕಮ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾಜ ಸುಧಾರಣೆಯಲ್ಲಿ ಶ್ರೀ ಗುರುಸಿದ್ದರಾಮೇಶ್ವರರ ಪಾತ್ರ ಕುರಿತು ಸ್ಮರಿಸಲಾಯಿತು.
    ಭೋವಿ ಅಭಿವೃದ್ಧಿ ಸಂಘದ ಅಧ್ಯಕ್ಷ, ನಗರಸಭೆ ಹಿರಿಯ ಸದಸ್ಯ ಬಿ.ಟಿ ನಾಗರಾಜ್, ಗೌರವಾಧ್ಯಕ್ಷ ಎಂ. ರಾಮು, ಪ್ರಮುಖರಾದ ಚೌಡಪ್ಪ, ಅಣ್ಣಮಲೈ, ಉಪಾಧ್ಯಕ್ಷರಾದ ಆನಂದ್, ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ, ನಿರ್ದೇಶಕ ತಮ್ಮಯ್ಯ, ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ಸೇರಿದಂತೆ ಭೋವಿ ಸಮಾಜದ ಪ್ರಮುಖರು, ತಹಸೀಲ್ದಾರ್ ಗ್ರೇಡ್-೨ ರಂಗಮ್ಮ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಗೋಪಿನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

Friday, January 14, 2022

ಶಾಲಾಮಟ್ಟದ ಪ್ರತಿಭಾ ಕಾರಂಜಿ : ಬಹುಮಾನ ವಿತರಣೆ


ಭದ್ರಾವತಿ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಶಾಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿಜೇತರಾದ ಮಕ್ಕಳಿಗೆ ಶುಕ್ರವಾರ ಬಹುಮಾನಗಳನ್ನು ವಿತರಿಸಲಾಯಿತು.
    ಭದ್ರಾವತಿ, ಜ. ೧೪: ನಗರದ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಶಾಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿಜೇತರಾದ ಮಕ್ಕಳಿಗೆ ಶುಕ್ರವಾರ ಬಹುಮಾನಗಳನ್ನು ವಿತರಿಸಲಾಯಿತು.
    ಶಿವಸಾಯಿಕೃಪ ಧಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಪ್ರತಿಭಾ ಕಾರಂಜಿಯಲ್ಲಿ ವಿಜೇತರಾದ ೧ ರಿಂದ ೫ನೇ ತರಗತಿವರೆಗಿನ ಶಾಲಾ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಿ ಅಭಿನಂದಿಸಲಾಯಿತು. ಶಾಲೆಯ ಪ್ರಾಂಶುಪಾಲ ಶ್ಯಾಮರಾಯ ಆಚಾರ್ ಹಾಗು ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಕೋವಿಡ್ ೩ನೇ ಅಲೆ ಭೀತಿ ನಡೆವೆಯೂ ಮಕಾರ ಸಂಕ್ರಾಂತಿ ಹಬ್ಬಕ್ಕೆ ಭರದ ಸಿದ್ದತೆ

 ವಾರಾಂತ್ಯ ಕರ್ಪ್ಯೂ ನಡುವೆಯೂ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಆಚರಣೆಗೆ ಭರದ ಸಿದ್ದತೆಗಳು ಕಂಡು ಬರುತ್ತಿದ್ದು, ಶುಕ್ರವಾರ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಜನಜಂಗುಳಿ ಕಂಡು ಬಂದಿತು.
ಭದ್ರಾವತಿ, ಜ. ೧೪: ವಾರಾಂತ್ಯ ಕರ್ಪ್ಯೂ ನಡುವೆಯೂ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಆಚರಣೆಗೆ ಭರದ ಸಿದ್ದತೆಗಳು ಕಂಡು ಬರುತ್ತಿದ್ದು, ಶುಕ್ರವಾರ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಜನಜಂಗುಳಿ ಕಂಡು ಬಂದಿತು.
    ಕೋವಿಡ್ ೩ನೇ ಅಲೆ ಭೀತಿ ನಡುವೆಯೂ ನಗರದೆಲ್ಲೆಡೆ ಮಕಾರ ಸಂಕ್ರಾಂತಿ ವಿಜೃಂಭಣೆಯಿಂದ ಆಚರಿಸಲು ಮುಂದಾಗಿರುವುದು  ಕಂಡು ಬರುತ್ತಿದ್ದು, ಹೂ, ಹಣ್ಣು, ಕಬ್ಬಿನ ಜೊಲ್ಲೆ ಸೇರಿದಂತೆ ಹಬ್ಬಕ್ಕೆ ಅಗತ್ಯವಿರುವ ವಸ್ತುಗಳನ್ನು ಜನರು ಶುಕ್ರವಾರವೇ ಖರೀದಿಸಿಟ್ಟುಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಶುಕ್ರವಾರ ಬೆಳಿಗ್ಗೆಯಿಂದ ರಾತ್ರಿವರೆಗೂ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಜನಜಂಗುಳಿ ಕಂಡು ಬಂದಿತು.
     ಸರ್ಕಾರ ಕೋವಿಡ್ ಭೀತಿ ಹಿನ್ನಲೆಯಲ್ಲಿ ವಾರಾಂತ್ಯದ ಕರ್ಪ್ಯೂ ಘೋಷಿಸಿದೆ. ಅಲ್ಲದೆ ಮಕರ ಸಂಕ್ರಾಂತಿ ಸಂಭ್ರಮದ ಆಚರಣೆಗೆ ಕಡಿವಾಣ ಸಹ ಹಾಕಿದೆ. ಆದರೂ ಸಹ ಜನರು ಸಂಕ್ರಾಂತಿ ಸಂಭ್ರಮದ ಆಚರಣೆಗೆ ಮುಂದಾಗಿರುವುದು ತಲೆ ನೋವಾಗಿ ಪರಿಣಮಿಸಿದೆ.
    ೫ ದಿನಗಳಲ್ಲಿ ೨೦೦ರ ಗಡಿ ದಾಟಿದ ಸೋಂಕು:
ನಗರದಲ್ಲಿ ಕೋವಿಡ್ ಸೋಂಕಿನ ಪ್ರಮಾಣದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಶುಕ್ರವಾರ ಒಂದೇ ದಿನ ೬೪ ಮಂದಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಕಳೆದ ೫ ದಿನಗಳಲ್ಲಿ ಒಟ್ಟಾರೆ ೨೦೦ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಸರ್ಕಾರಿ ಕಛೇರಿಗಳು, ಶಾಲಾ-ಕಾಲೇಜುಗಳಲ್ಲೂ ವ್ಯಾಪಕವಾಗಿ ಸೋಂಕು ಕಾಣಿಸಿಕೊಳ್ಳುತ್ತಿದ್ದು,  ಇದರಿಂದಾಗಿ ಆತಂಕ ಎದುರಾಗಿದೆ.  
    ಮಾಂಸ ಮಾರಾಟ ನಿಷೇಧ:
    ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಜ.೧೫ರ ಶನಿವಾರ ಮತ್ತು ಸರ್ವೋದಯ ದಿನದ ಅಂಗವಾಗಿ ಜ.೩೦ರಂದು ನಗರಸಭೆ ವ್ಯಾಪ್ತಿಯಲ್ಲಿ ಪ್ರಾಣಿವಧೆ, ಮಾಂಸ ಮಾರಾಟ ಮಾಡುವುದನ್ನು ಹಾಗು ಬಾರ್ & ರೆಸ್ಟೋರೆಂಟ್, ಮಾಂಸಹಾರಿ ಹೋಟೆಲ್‌ಗಳಲ್ಲಿ ಮಾಂಸಾಹಾರ ತಯಾರಿಸುವುದನ್ನು ಸಹ ನಿಷೇಧಿಸಲಾಗಿದೆ.
    ಒಂದು ವೇಳೆ ಆದೇಶ ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ನಗರಸಭೆ ಪೌರಾಯುಕ್ತರು ಕೆ. ಪರಮೇಶ್ ಎಚ್ಚರಿಸಿದ್ದಾರೆ.