Wednesday, January 19, 2022

ಟಿ.ಬಿ ಸೋಲಿಸಿ, ಕರ್ನಾಟಕ ಗೆಲ್ಲಿಸಿ ಅಭಿಯಾನದ ಅಂಗವಾಗಿ ರಸಪ್ರಶ್ನೆ ಕಾರ್ಯಕ್ರಮ

ಭದ್ರಾವತಿ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಆರೋಗ್ಯ ಇಲಾಖೆ ವತಿಯಿಂದ ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನಾ ಕಾರ್ಯಕ್ರಮದಡಿ ಟಿ.ಬಿ ಸೋಲಿಸಿ, ಕರ್ನಾಟಕ ಗೆಲ್ಲಿಸಿ ಅಭಿಯಾನದ ಅಂಗವಾಗಿ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಜ. ೧೯: ನಗರದ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಆರೋಗ್ಯ ಇಲಾಖೆ ವತಿಯಿಂದ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಹಳೇವಿದ್ಯಾರ್ಥಿಗಳ ಸಂಘ ಮತ್ತು ಜಿಲ್ಲಾ ಕ್ಷಯ ರೋಗ ನಿಯಂತ್ರಣ ಕೇಂದ್ರದ ಸಹಯೋಗದೊಂದಿಗೆ ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನಾ ಕಾರ್ಯಕ್ರಮದಡಿ ಟಿ.ಬಿ ಸೋಲಿಸಿ, ಕರ್ನಾಟಕ ಗೆಲ್ಲಿಸಿ ಅಭಿಯಾನದ ಅಂಗವಾಗಿ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಕಾರ್ಯಕ್ರಮದ ಅಧ್ಯಕ್ಷತೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ವಹಿಸಿದ್ದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಗೌಡ ಹಾಗು ಆರೋಗ್ಯ ಇಲಾಖೆ ಸಿಬ್ಬಂದಿಗಳು ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು.
    ಪ್ರಜ್ವಲ್ ನೇತೃತ್ವದ ತಂಡ ಪ್ರಥಮ ಬಹುಮಾನ ಪಡೆದುಕೊಂಡಿತು. ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.

ನಗರಸಭೆಗೆ ಎಂ. ಪ್ರಭಾಕರ್ ಸೇರಿ ೫ ಮಂದಿ ನಾಮನಿರ್ದೇಶನ

    ಭದ್ರಾವತಿ, ಜ. ೧೯: ರಾಜ್ಯ ಸರ್ಕಾರ ನಗರಸಭೆಗೆ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಒಕ್ಕಲಿಗ ಸಮಾಜದ ಹಿರಿಯ ಮುಖಂಡ ಎಚ್. ಕರಿಗೌಡ ಸೇರಿದಂತೆ ೫ ಮಂದಿಯನ್ನು ನಾಮನಿರ್ದೇಶನಗೊಳಿಸಿ ಆದೇಶ ಹೊರಡಿಸಿದೆ.
    ಈ ಕುರಿತು ನಗರಾಭಿವೃದ್ಧಿ ಇಲಾಖೆ ಸರ್ಕಾರದ ಕಾರ್ಯದರ್ಶಿಯವರು ಜಿಲ್ಲಾಧಿಕಾರಿಗಳಿಗೆ ಹಾಗು ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರಿಗೆ ಮಾಹಿತಿ ನೀಡಿದ್ದು, ಅದರಂತೆ ಯೋಜನಾ ನಿರ್ದೇಶಕರು ನಗರಸಭೆ ಪೌರಾಯುಕ್ತರಿಗೆ ಬುಧವಾರ ನೇಮಕಗೊಳಿಸಿರುವುದನ್ನು ಖಚಿತ ಪಡಿಸಿದ್ದಾರೆ.







    ಅಪ್ಪರ್ ಹುತ್ತಾ ನಿವಾಸಿ ಒಕ್ಕಲಿಗ ಸಮಾಜದ ಹಿರಿಯ ಮುಖಂಡ ಎಚ್. ಕರಿಗೌಡ, ಹೊಸಮನೆ ಎನ್‌ಎಂಸಿ ನಿವಾಸಿ, ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಹೊಸಸಿದ್ದಾಪುರ ನಿವಾಸಿ ಮಂಜುನಾಥ್, ಗಾಂಧಿನಗರದ ನಿವಾಸಿ ಎಚ್.ಎಂ ರವಿಕುಮಾರ್ ಮತ್ತು ಉಜ್ಜನಿಪುರ ನಿವಾಸಿ ಅನ್ನಪೂರ್ಣ ಅವರನ್ನು ನಾಮನಿರ್ದೇಶನಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಡಾ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ೭೭ನೇ ಜನ್ಮದಿನ

ಅನ್ನಸಂತರ್ಪಣೆ, ದೀಪ ಬೆಳಗುವ ಮೂಲಕ ಶ್ರೀಗಳಿಗೆ ಗೌರವ


ಡಾ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಹುಟ್ಟುಹಬ್ಬದ ಅಂಗವಾಗಿ ಭದ್ರಾವತಿಯಲ್ಲಿ ಸ್ನೇಹಜೀವಿ ಬಳಗದ ವತಿಯಿಂದ ಪೊಲೀಸ್ ಉಮೇಶ್ ನೇತೃತ್ವದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

     ಭದ್ರಾವತಿ, ಜ. ೧೯: ನಗರದ ಚುಂಚಾದ್ರಿ ಮಹಿಳಾ ವೇದಿಕೆ ವತಿಯಿಂದ ಶ್ರೀ ಕ್ಷೇತ್ರ ಆದಿಚುಂಚನಗಿರಿ ಜದ್ಗುರುಗಳಾದ ಡಾ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ೭೭ನೇ ಜನ್ಮ ಆಚರಿಸಲಾಯಿತು.
    ವೇದಿಕೆ ಗೌರವಾಧ್ಯಕ್ಷೆ ಡಾ. ಅನುರಾಧ ಪಟೇಲ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ದೀಪ ಬೆಳಗುವ ಮೂಲಕ ಗೌರವ ಸಲ್ಲಿಸಲಾಯಿತು. ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣೆ ಹಾಗು ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
    ಅನ್ನಸಂತರ್ಪಣೆ:
    ಡಾ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಹುಟ್ಟುಹಬ್ಬದ ಅಂಗವಾಗಿ ಸ್ನೇಹಜೀವಿ ಬಳಗದ ವತಿಯಿಂದ ಪೊಲೀಸ್ ಉಮೇಶ್ ನೇತೃತ್ವದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
    ಹಲವಾರು ಸಾಮಾಜಿಕ ಸೇವಾ ಕಾರ್ಯಗಳನ್ನು ಸ್ನೇಹಜೀವಿ ಬಳಗದ ವತಿಯಿಂದ ನಡೆಸಿಕೊಂಡು ಬರಲಾಗುತ್ತಿದ್ದು, ಸ್ವಾಮೀಜಿಯವರ ಹುಟ್ಟುಹಬ್ಬದ ಅಂಗವಾಗಿ ಹುತ್ತಾಕಾಲೋನಿ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ ಮುಂಭಾಗ ಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಜೊತೆಗೆ ಅನ್ನಸಂತರ್ಪಣೆ ನಡೆಸುವ ಮೂಲಕ ಗೌರವ ಸಲ್ಲಿಸಲಾಯಿತು. ಸ್ನೇಹಜೀವಿ ಬಳಗದ ಮುಳ್ಕೆರೆ ಲೋಕೇಶ್, ಸುಹಾಸ್, ಯಶವಂತ್, ಚೇತನ್, ಶಂಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಭದ್ರಾವತಿಯಲ್ಲಿ ಚುಂಚಾದ್ರಿ ಮಹಿಳಾ ವೇದಿಕೆ ವತಿಯಿಂದ ಶ್ರೀ ಕ್ಷೇತ್ರ ಆದಿಚುಂಚನಗಿರಿ ಜದ್ಗುರುಗಳಾದ ಡಾ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ೭೭ನೇ ಜನ್ಮ ಆಚರಿಸಲಾಯಿತು. ದೀಪ ಬೆಳಗುವ ಮೂಲಕ ಶ್ರೀಗಳಿಗೆ ಗೌರವ ಸಲ್ಲಿಸಲಾಯಿತು.

ಭದ್ರಾ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಹಕಾರ ಸಂಘದ ಅಧ್ಯಕ್ಷರಾಗಿ ಬಿ.ಎಚ್ ವಸಂತ್, ಉಪಾಧ್ಯಕ್ಷರಾಗಿ ಬಸವರಾಜ ಅವಿರೋಧ ಆಯ್ಕೆ

ಭದ್ರಾವತಿ ಹಳೇನಗರದ ಭೂತನಗುಡಿ ಭದ್ರಾ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಿ.ಎಚ್ ವಸಂತ್ ಮಜ್ಜಿಗೇನಹಳ್ಳಿ ಹಾಗು ಉಪಾಧ್ಯಕ್ಷರಾಗಿ ಬಸವರಾಜ ಬಿ. ಆನೇಕೊಪ್ಪ ಬುಧವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
    ಭದ್ರಾವತಿ, ಜ. ೧೯: ಹಳೇನಗರದ ಭೂತನಗುಡಿ ಭದ್ರಾ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಿ.ಎಚ್ ವಸಂತ್ ಮಜ್ಜಿಗೇನಹಳ್ಳಿ ಹಾಗು ಉಪಾಧ್ಯಕ್ಷರಾಗಿ ಬಸವರಾಜ ಬಿ. ಆನೇಕೊಪ್ಪ ಬುಧವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
    ಒಟ್ಟು ೧೫ ನಿರ್ದೇಶಕರ ಸ್ಥಾನಗಳಿಗೆ ಜ.೧೬ರಂದು ಚುನಾವಣೆ ನಡೆದು ದೂದನಾಯ್ಕ, ಬಿ.ಎಂ ಸಂತೋಷ್, ಎನ್. ಸತೀಶ್, ಎಂ.ಎಸ್ ಸುನಿತ ನಂಬಿಯಾರ್, ಜಿ. ಮೀನಾಕ್ಷಿ, ಎನ್. ನಾಗೇಶ್, ಕೆ.ಎಚ್ ಶಿವಲಿಂಗಪ್ಪ, ಹನುಮಂತನಾಯ್ಕ, ಜೆ. ಪ್ರಕಾಶ್, ಮೌನೇಶ್, ಅನಂತರಾವ್ ನಿಕ್ಕಂ, ಎಚ್. ತಿಪ್ಪೇಶ್, ಬಸವರಾಜ ಬಿ. ಆನೇಕೊಪ್ಪ ಮತ್ತು ಬಿ.ಎಚ್ ವಸಂತ ಮಜ್ಜಿಗೇನಹಳ್ಳಿ ಆಯ್ಕೆಯಾಗಿದ್ದರು.
    ಸಹಕಾರ ಸಂಘಗಳ ಹಿರಿಯ ನಿರೀಕ್ಷಕಿ ಎಸ್. ಸುಮಾ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.  ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ಬಿ.ಎಚ್. ವಸಂತ್ ಮತ್ತು ಉಪಾಧ್ಯಕ್ಷ ಬಸವರಾಜ, ಸಂಘದ ಮೂಲಕ ಸರ್ಕಾರದಿಂದ ಲಭ್ಯವಿರುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಲಾಗುವುದು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕ್ರಿಯಾಶೀಲವಾಗಿ ಸಂಘವನ್ನು ಮುನ್ನಡೆಸಿಕೊಂಡು ಹೋಗುವ ಜೊತೆಗೆ ಕುರಿ ಮತ್ತು ಮೇಕೆ ಸಾಕಾಣಿಕೆದಾರರಿಗೆ ಸಾಧ್ಯವಾದಷ್ಟು ನೆರವಾಗುವುದಾಗಿ ಭರವಸೆ ನೀಡಿದರು.
    ಸಂಘದ ಮಾಜಿ ಅಧ್ಯಕ್ಷ ಲಕ್ಷ್ಮಿ ನಾರಾಯಣ ನೂತನ ಅಧ್ಯಕ್ಷರು, ಉಪಾಧ್ಯಕ್ಷರನ್ನು ಅಭಿನಂದಿಸಿದರು. ಈ ಹಿಂದೆ ವಸಂತ್ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

Tuesday, January 18, 2022

೩-೪ ವರ್ಷಗಳಿಂದ ಒಂದೇ ಕಡೆ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿಗಳನ್ನು ವರ್ಗಾವಣೆಗೊಳಿಸಿ


ರಾಜ್ಯದಲ್ಲಿರುವ ಸರ್ಕಾರಿ ಕಛೇರಿಗಳಲ್ಲಿ ೩-೪ ವರ್ಷಗಳಿಂದ ಒಂದೇ ಕಡೆ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿಗಳನ್ನು ಬೇರೆಡೆಗೆ ವರ್ಗಾವಣೆಗೊಳಿಸುವಂತೆ ಹಾಗು ನ್ಯಾಯ ಕೇಳಲು ಸರ್ಕಾರಿ ಕಛೇರಿಗಳಿಗೆ ಬರುವ  ಸಾರ್ವಜನಿಕರ ಮೇಲೆ ಸುಳ್ಳು ದೂರು ದಾಖಲಿಸುವ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜನಾತದಳ (ಸಂಯುಕ್ತ) ಕರ್ನಾಟಕ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್. ಗೌಡ ನೇತೃತ್ವದಲ್ಲಿ ಮಂಗಳವಾರ ಭದ್ರಾವತಿಯಲ್ಲಿ ತಹಸೀಲ್ದಾರ್ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಜ. ೧೮: ರಾಜ್ಯದಲ್ಲಿರುವ ಸರ್ಕಾರಿ ಕಛೇರಿಗಳಲ್ಲಿ ೩-೪ ವರ್ಷಗಳಿಂದ ಒಂದೇ ಕಡೆ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿಗಳನ್ನು ಬೇರೆಡೆಗೆ ವರ್ಗಾವಣೆಗೊಳಿಸುವಂತೆ ಹಾಗು ನ್ಯಾಯ ಕೇಳಲು ಸರ್ಕಾರಿ ಕಛೇರಿಗಳಿಗೆ ಬರುವ  ಸಾರ್ವಜನಿಕರ ಮೇಲೆ ಸುಳ್ಳು ದೂರು ದಾಖಲಿಸುವ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜನಾತದಳ (ಸಂಯುಕ್ತ) ಕರ್ನಾಟಕ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್. ಗೌಡ ನೇತೃತ್ವದಲ್ಲಿ ಮಂಗಳವಾರ ತಹಸೀಲ್ದಾರ್ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಯಿತು.
    ರಾಜ್ಯದ ಬಹುತೇಕ ಸರ್ಕಾರಿ ಕಛೇರಿಗಳಲ್ಲಿ ೩-೪ ವರ್ಷಗಳಿಂದ ಒಂದೇ ಕಡೆ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿಗಳು ಕಂಡು ಬರುತ್ತಿದ್ದು, ತಕ್ಷಣ ಇವರನ್ನು ಬೇರೆಡೆಗೆ ವರ್ಗಾಹಿಸಬೇಕು. ಇಲ್ಲವಾದಲ್ಲಿ ಸರ್ಕಾರಿ ಸೇವೆಗಳಲ್ಲಿ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ. ಅಲ್ಲದೆ ಸಾರ್ವಜನಿಕರು ಸರ್ಕಾರಿ ಸೇವೆ ಮೇಲೆ ಹೊಂದಿರುವ ವಿಶ್ವಾಸ ಕಳೆದುಕೊಳ್ಳುವಂತಾಗಲಿದೆ. ಈ ಹಿನ್ನಲೆಯಲ್ಲಿ ತಕ್ಷಣ ಒಂದೇ ಕಡೆ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿಗಳನ್ನು ಬೇರೆಡೆಗೆ ವರ್ಗಾಹಿಸಬೇಕೆಂದು ಆಗ್ರಹಿಸಲಾಗಿದೆ.
    ನ್ಯಾಯ ಕೇಳುವುದು ಪ್ರತಿಯೊಬ್ಬರ ಸಂವಿಧಾನ ಬದ್ಧ ಹಕ್ಕು ಎಂಬುದನ್ನು ಯಾರು ಸಹ ಮರೆಯಬಾರದು. ಕೆಲವು ಸರ್ಕಾರಿ ಅಧಿಕಾರಿಗಳು ಸಂವಿಧಾನದ ಆಶಯವನ್ನು ಮರೆತು ಹೋರಾಟಗಾರರು ನ್ಯಾಯ ಕೇಳಲು ಸರ್ಕಾರಿ ಕಚೇರಿಗಳಿಗೆ ಬಂದರೆ ಅವರ ವಿರುದ್ಧ ಸುಳ್ಳು ದೂರುಗಳನ್ನು ದಾಖಲಿಸುತ್ತಿದ್ದಾರೆ. ಅಧಿಕಾರಿ ಈ ನಡೆ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ತಕ್ಷಣ ಇಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.
    ಮುಖಂಡ ಬಿ. ಗಂಗಾಧರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ತಹಸೀಲ್ದಾರ್ ಆರ್. ಪ್ರದೀಪ್ ನಿಕ್ಕಮ್ ಮನವಿ ಸ್ವೀಕರಿಸಿದರು.

ಸರಳವಾಗಿ ಜರುಗಿದ ವಿಐಎಸ್‌ಎಲ್ ೯೯ನೇ ಸಂಸ್ಥಾಪನೆ ದಿನ

ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ೯೯ನೇ ಸಂಸ್ಥಾಪನೆ ದಿನ ಮಂಗಳವಾರ ಸರಳವಾಗಿ ನಡೆಯಿತು. ಕಾರ್ಖಾನೆಯ ಮುಖ್ಯದ್ವಾರ ಹಾಗು ಶ್ರೀ ವಿನಾಯಕ ಸ್ವಾಮಿ ಮಂಟಪ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುವುದು.
    ಭದ್ರಾವತಿ, ಜ. ೧೮: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ೯೯ನೇ ಸಂಸ್ಥಾಪನೆ ದಿನ ಮಂಗಳವಾರ ಸರಳವಾಗಿ ನಡೆಯಿತು.
    ಕಾರ್ಖಾನೆ ಆಡಳಿತ ಮಂಡಳಿ ವತಿಯಿಂದ ಪ್ರತಿ ವರ್ಷ ವಿಐಎಸ್‌ಎಲ್ ಉತ್ಸವದೊಂದಿಗೆ ಕಾರ್ಖಾನೆಯ ಸಂಸ್ಥಾಪನೆ ದಿನ ಹಾಗು ಸೈಲ್ ಡೇ ಎರಡನ್ನು ಅದ್ದೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಕೋವಿಡ್-೧೯ರ ಹಿನ್ನಲೆಯಲ್ಲಿ ಕಳೆದ ೩ ವರ್ಷಗಳಿಂದ ವಿಐಎಸ್‌ಎಲ್ ಉತ್ಸವ ನಡೆಯದ ಕಾರಣ ಸಂಸ್ಥಾಪನೆ ದಿನ ಹಾಗೂ ಸೈಲ್ ಡೇ ಸರಳವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
    ಕಾರ್ಖಾನೆಯ ಆಡಳಿತ ಕಛೇರಿ ಆವರಣದಲ್ಲಿರುವ ಕಾರ್ಖಾನೆಯ ಸಂಸ್ಥಾಪಕರು, ಶ್ರೇಷ್ಠ ತಂತ್ರಜ್ಞಾನಿ, ಭಾರತರತ್ನ ಸರ್.ಎಂ. ವಿಶ್ವೇಶ್ವರಾಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
ವಿಐಎಸ್‌ಎಲ್ ಅತಿಥಿ ಗೃಹದಲ್ಲಿ ಅಲ್ಲಿನ ಅಽಕಾರಿಗಳು ಹಾಗು ಸಿಬ್ಬಂದಿಗಳಿಂದ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಂಸ್ಥಾಪನೆ ದಿನ ಆಚರಿಸಲಾಯಿತು.
    ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಸುರಜಿತ್ ಮಿಶ್ರಾ, ಅಪರೇಷನ್ ವಿಭಾಗದ ಮುಖ್ಯ ವ್ಯವಸ್ಥಾಪಕ ಕೆ.ಎಸ್ ಸುರೇಶ್, ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್. ಪ್ರವೀಣ್‌ಕುಮಾರ್, ಕಾರ್ಮಿಕರ ಸಂಘದ ಅಧ್ಯಕ್ಷ ಜೆ. ಜಗದೀಶ್ ಮತ್ತು ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಅಜಯ್ ಸೇರಿದಂತೆ ಕಾರ್ಖಾನೆಯ ವಿವಿಧ ವಿಭಾಗಗಳ ಅಧಿಕಾರಿಗಳು, ಕಾರ್ಮಿಕರು, ಗುತ್ತಿಗೆ ಕಾರ್ಮಿಕರು, ಭದ್ರತಾ ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
    ಅತಿಥಿ ಗೃಹದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿ ಗೃಹದ ಅಧಿಕಾರಿಗಳಾದ ವೀರಣ್ಣ, ಚಂದ್ರಕಾಂತ್, ಸಿಬ್ಬಂದಿಗಳಾದ ಮೋಹನ್, ಪ್ರತಾಪ್, ಪ್ರಭಾಕರ್, ವಿಲ್ಸನ್, ಆದಿನಾರಾಯಣ, ಆಸ್ಲಾಂ, ಸುರೇಶ್, ಸುಜಾತ, ಸಾವಿತ್ರಮ್ಮ, ತುಳಸಿ, ಲಕ್ಷ್ಮಿಬಾಯಿ, ರೂಪ, ಪದ್ಮಮ್ಮ ಮತ್ತು ಪಾರ್ವತಮ್ಮ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ವಿದ್ಯುತ್ ದೀಪಗಳಿಂದ ಅಲಂಕಾರ:
ಕಳೆದ ಕೆಲವು ದಿನಗಳಿಂದ ಕಾರ್ಖಾನೆಯ ಮುಖ್ಯ ದ್ವಾರಕ್ಕೆ  ಹಾಗು ಮುಂಭಾಗದಲ್ಲಿರುವ ವಿಘ್ನ ನಿವಾರಕ ಶ್ರೀ ವಿನಾಯಕ ಸ್ವಾಮಿ ಮಂಟಪಕ್ಕೆ ಸಂಸ್ಥಾಪನೆ ದಿನದ ಅಂಗವಾಗಿ ಬಣ್ಣ ಬಳಿಯುವ ಕಾರ್ಯ ಕೈಗೊಳ್ಳಲಾಗಿತ್ತು. ಪೂರ್ಣಗೊಂಡಿರುವ ಹಿನ್ನಲೆಯಲ್ಲಿ ಮುಖ್ಯದ್ವಾರ ಹಾಗು ಮಂಟಪವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು, ರಾತ್ರಿ ಆಕರ್ಷಕವಾಗಿ ಕಂಗೊಳಿಸುತ್ತಿದೆ.


ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ೯೯ನೇ ಸಂಸ್ಥಾಪನೆ ದಿನ ಮಂಗಳವಾರ ಸರಳವಾಗಿ ನಡೆಯಿತು. ಕಾರ್ಖಾನೆಯ ಸಂಸ್ಥಾಪಕರಾದ, ಶ್ರೇಷ್ಠ ತಂತ್ರಜ್ಞಾನಿ, ಭಾರತರತ್ನ ಸರ್.ಎಂ ವಿಶ್ವೇಶ್ವರಾಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.

ವಸತಿ ರಹಿತ ಅರ್ಹ ಬಡವರಿಗೆ ಮನೆ ನೀಡಿ : ಮನವಿ

ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಸತಿ ರಹಿತ ಅರ್ಹ ಬಡವರಿಗೆ ಮನೆ ನೀಡಬೇಕೆಂದು ಆಗ್ರಹಿಸಿ ಉಕ್ಕುಂದ ಗ್ರಾಮದ ಸಾಮಾಜಿಕ ಹೋರಾಟಗಾರ ಶಿವಕುಮಾರ್ ಗ್ರಾಮ ಪಂಚಾಯಿತಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
    ಭದ್ರಾವತಿ, ಜ. ೧೮: ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಸತಿ ರಹಿತ ಅರ್ಹ ಬಡವರಿಗೆ ಮನೆ ನೀಡಬೇಕೆಂದು ಆಗ್ರಹಿಸಿ ಉಕ್ಕುಂದ ಗ್ರಾಮದ ಸಾಮಾಜಿಕ ಹೋರಾಟಗಾರ ಶಿವಕುಮಾರ್ ಗ್ರಾಮ ಪಂಚಾಯಿತಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
    ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಸತಿ ರಹಿತ ಬಡವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅರ್ಹ ಬಡವರಿಗೆ ಲಭಿಸಬೇಕಾದ ಸರ್ಕಾರಿ ಸೌಲಭ್ಯಗಳು ಶ್ರೀಮಂತರ ಪಾಲಾಗುತ್ತಿವೆ. ಸರ್ಕಾರದ ಸೌಲಭ್ಯಗಳನ್ನು ದುರ್ಬಳಕೆ ಮಾಡಿಕೊಂಡಿರುವ ಶ್ರೀಮಂತರನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ ಅರ್ಹ ಫಲಾನುಭವಿಗಳನ್ನು ಗುರುತಿಸಿ ವಸತಿ ನೀಡಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ನಗರಸಭೆ ಹಿರಿಯ ಸದಸ್ಯ
    ಬಿ.ಕೆ ಮೋಹನ್ ಹಾಗು ಗ್ರಾಮದ ವಸತಿ ರಹಿತ ಅರ್ಹ ಬಡವರು ಉಪಸ್ಥಿತರಿದ್ದರು. ಅಂತರಗಂಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.