೩೫ ಕೋ. ರು. ವೆಚ್ಚ, ೬ ತಿಂಗಳು ಕಾಲಾವಕಾಶ
ಭದ್ರಾವತಿ ಕಡದಕಟ್ಟೆ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ನಂ.೩೪ರಲ್ಲಿ ರೈಲ್ವೆ ಮೇಲ್ಸೇತುವೆ(ಆರ್ಓಬಿ) ಕಾಮಗಾರಿ ಆರಂಭಗೊಂಡಿದ್ದು, ಹೈದರಬಾದಿನ ಮೆ|| ಎಸ್ಆರ್ಸಿ ಕಂಪನಿ ಇನ್ಫ್ರಾ ಪ್ರೈವೇಟ್ ಲಿಮಿಟೆಡ್ ಕಾಮಗಾರಿ ಗುತ್ತಿಗೆ ನಿರ್ವಹಿಸುತ್ತಿದೆ.
ಭದ್ರಾವತಿ, ಜ. ೧೭: ನಗರದ ಕಡದಕಟ್ಟೆ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ನಂ.೩೪ರಲ್ಲಿ ರೈಲ್ವೆ ಮೇಲ್ಸೇತುವೆ(ಆರ್ಓಬಿ) ಕಾಮಗಾರಿ ಆರಂಭಗೊಂಡಿದ್ದು, ಹೈದರಬಾದಿನ ಮೆ|| ಎಸ್ಆರ್ಸಿ ಕಂಪನಿ ಇನ್ಫ್ರಾ ಪ್ರೈವೇಟ್ ಲಿಮಿಟೆಡ್ ಕಾಮಗಾರಿ ಗುತ್ತಿಗೆ ನಿರ್ವಹಿಸುತ್ತಿದೆ.
ಈ ಹಿಂದೆ ತರೀಕೆರೆ ರಸ್ತೆಯಲ್ಲಿ ಮೇಲ್ಸೇತುವೆ ಕಾಮಗಾರಿ ನಿರ್ಮಾಣದ ಆರಂಭದಲ್ಲಿ ತ್ವರಿತಗತಿಯಲ್ಲಿ ಕಾಮಗಾರಿ ಆರಂಭಗೊಂಡರೂ ಸಹ ನಂತರ ದಿನಗಳಲ್ಲಿ ಮಂದಗತಿಯಲ್ಲಿ ಸಾಗುವ ಮೂಲಕ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೆ ಕಾಮಗಾರಿ ನಿರ್ವಹಣೆ ವಿಳಂಬದಿಂದಾಗಿ ನಿರ್ಮಾಣ ವೆಚ್ಚ ಸಹ ಅಧಿಕಗೊಂಡಿತ್ತು. ಜೊತೆಗೆ ಕಳಪೆ ಕಾಮಗಾರಿ ನಡೆಸಿರುವ ಬಗ್ಗೆ ಆರೋಪಗಳು ಕೇಳಿ ಬಂದಿದ್ದವು.
ಇದೀಗ ಕಡದಕಟ್ಟೆ ರೈಲ್ವೆ ಲೆವೆಲ್ ಕ್ರಾಸಿಂಗ್ ಗ್ರೇಟ್ ನಂ.೩೪ರಲ್ಲಿ ಸುಮಾರು ೩೫ ಕೋ. ರು. ವೆಚ್ಚದಲ್ಲಿ ಕಾಮಗಾರಿ ಆರಂಭಗೊಂಡಿದ್ದು, ೬ ತಿಂಗಳಲ್ಲಿ ಕಾಮಗಾರಿ ಮುಕ್ತಾಯಗೊಳಿಸಬೇಕಾಗಿದೆ. ಮುಂದಿನ ೩-೪ ತಿಂಗಳಲ್ಲಿ ಕಾಮಗಾರಿ ಶೇ.೭೦ರಷ್ಟು ಪ್ರಗತಿಸಾಧಿಸಬೇಕಾಗಿದೆ. ನಂತರ ಮಳೆಗಾಲ ಆರಂಭಗೊಳ್ಳುವುದರಿಂದ ಕಾಮಗಾರಿ ವಿಳಂಬವಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಗುತ್ತಿಗೆದಾರರು ಎಚ್ಚೆತ್ತುಕೊಳ್ಳುವುದು ಅನಿವಾರ್ಯವಾಗಿದೆ.
ಭದ್ರಾವತಿ ಕಡದಕಟ್ಟೆ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ನಂ.೩೪ರಲ್ಲಿ ರೈಲ್ವೆ ಮೇಲ್ಸೇತುವೆ(ಆರ್ಓಬಿ) ಕಾಮಗಾರಿ ಆರಂಭಗೊಂಡಿದ್ದು, ಸುಗಮ ಸಂಚಾರದ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಪರ್ಯಾಯ ಮಾರ್ಗಗಳಲ್ಲಿ ವಾಹನಗಳು ಸಂಚರಿಸಲು ಅಳವಡಿಸಲಾಗಿರುವ ಫಲಕ.
ನಗರದ ಹೃದಯ ಭಾಗಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ. ಈಗಾಗಲೇ ಬಿ.ಎಚ್ ರಸ್ತೆ ಅಗಲೀಕರಣ ಕಾರ್ಯ ಸಹ ನಡೆದಿದ್ದು, ರೈಲ್ವೆ ಮೇಲ್ಸೇತುವೆ ತ್ವರಿತಗತಿಯಲ್ಲಿ ಪೂರ್ಣಗೊಂಡಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಹೆಚ್ಚಿನ ಸಹಕಾರಿಯಾಗಲಿದೆ.
ತಾತ್ಕಾಲಿಕ ಪರ್ಯಾಯ ಮಾರ್ಗ:
ಸುಗಮ ಸಂಚಾರದ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಪರ್ಯಾಯ ಮಾರ್ಗಗಳಲ್ಲಿ ವಾಹನಗಳು ಸಂಚರಿಸಲು ಈಗಾಗಲೇ ಜಿಲ್ಲಾಧಿಕಾರಿ ಆರ್. ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ.
ಜಿಲ್ಲಾಧಿಕಾರಿಗಳ ಆದೇಶದಂತೆ ದ್ವಿಚಕ್ರ ವಾಹನಗಳು ಹೊರತುಪಡಿಸಿ ಶಿವಮೊಗ್ಗದಿಂದ ಭದ್ರಾವತಿ ಕಡೆಗೆ ಸಂಚರಿಸುವ ವಾಹನಗಳು ಬಿಳಕಿ ಕ್ರಾಸ್, ಕೃಷ್ಣಪ್ಪ ವೃತ್ತದ ಮೂಲಕ ಭದ್ರಾವತಿ ತಲುಪುವುದು. ಭದ್ರಾವತಿಯಿಂದ ಶಿವಮೊಗ್ಗ ಕಡೆಗೆ ಸಂಚರಿಸುವ ವಾಹನಗಳು ಅಂಡರ್ ಬ್ರಿಡ್ಜ್, ಉಂಬ್ಳೆಬೈಲ್ ರಸ್ತೆ, ಕೃಷ್ಣಪ್ಪ ವೃತ್ತ, ರಾಷ್ಟ್ರೀಯ ಹೆದ್ದಾರಿ ೬೯ರ ಮೂಲಕ ಶಿವಮೊಗ್ಗ ತಲುಪುವುದು.
ವೇಗ ಮಿತಿ ಕಡಿತಗೊಳಿಸಿ :
ಪ್ರಸ್ತುತ ಕೃಷ್ಣಪ್ಪ ವೃತ್ತದಿಂದ ಅಂಡರ್ಬ್ರಿಡ್ಜ್ವರೆಗೂ ಚತುಷ್ಪಥ ರಸ್ತೆ ನಿರ್ಮಾಣ ಮಾಡಲಾಗಿದ್ದು, ರೈಲ್ವೆ ಮೇಲ್ಸೇತುವೆ ಕಾಮಗಾರಿ ಮುಕ್ತಾಯಗೊಳ್ಳುವವರೆಗೂ ಈ ರಸ್ತೆಯಲ್ಲಿ ವಾಹನಗಳ ದಟ್ಟಣೆ ಅಧಿಕವಾಗಲಿದೆ. ಈ ರಸ್ತೆಯಲ್ಲಿ ಪೊಲೀಸ್ ಠಾಣೆ, ವಿದ್ಯಾರ್ಥಿ ನಿಲಯಗಳು, ಶಾಲಾ ಕಾಲೇಜುಗಳು, ಚರ್ಚ್ಗಳು, ಲಯನ್ಸ್, ರೋಟರಿ ಸೇರಿದಂತೆ ಸಂಘ-ಸಂಸ್ಥೆಗಳು, ಬ್ಯಾಂಕ್, ಮೆಸ್ಕಾಂ, ಎಲ್ಐಸಿ ಕಛೇರಿಗಳು ಇದ್ದು ಜನದಟ್ಟಣೆ ಸಹ ಅಧಿಕವಾಗಿದೆ. ಈ ಹಿನ್ನಲೆಯಲ್ಲಿ ಸಂಚಾರಿ ಪೊಲೀಸರು ಹೆಚ್ಚಿನ ಮುಂಜಾಗ್ರತೆ ವಹಿಸುವುದು ಅನಿವಾರ್ಯವಾಗಿದೆ. ಈ ರಸ್ತೆಯಲ್ಲಿ ಸಂಚರಿಸುವ ಎಲ್ಲಾ ವಾಹನಗಳ ವೇಗ ಮಿತಿಯನ್ನು ಕನಿಷ್ಠ ಮಟ್ಟಕ್ಕೆ ಇಳಿಸಬೇಕಾಗಿದೆ. ಜೊತೆಗೆ ರಸ್ತೆಯ ಪ್ರಮುಖ ವೃತ್ತಗಳಲ್ಲಿ ಸಂಚಾರಿ ಪೊಲೀಸರನ್ನು ಕಡ್ಡಾಯವಾಗಿ ನಿಯೋಜನೆಗೊಳಿಸುವ ಮೂಲಕ ವಾಹನ ದಟ್ಟಣೆ ನಿಯಂತ್ರಿಸಬೇಕಾಗಿದೆ. ಇಲ್ಲವಾದಲ್ಲಿ ಅಪಘಾತಗಳು ಹೆಚ್ಚಾಗುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುವುದು ಖಚಿತ.
ನಿವಾಸಿಗಳನ್ನು ತಕ್ಷಣ ಸ್ಥಳಾಂತರಿಸಿ:
ರೈಲ್ವೆ ಮೇಲ್ಸೇತುವೆ ಕಾಮಗಾರಿ ಆರಂಭಗೊಂಡಿರುವುದರಿಂದ ಸಮೀಪದಲ್ಲಿರುವ ನಿವಾಸಿಗಳನ್ನು ತಕ್ಷಣ ಸ್ಥಳಾಂತರಿಸುವುದು ಸೂಕ್ತವಾಗಿದೆ. ಈಗಾಗಲೇ ಸಮೀಪದಲ್ಲಿರುವ ನಿವಾಸಿಗಳಿಂದ ಭೂ ಸ್ವಾಧೀನ ಪಡೆದುಕೊಳ್ಳಲಾಗಿದ್ದು, ಭೂ ಪರಿಹಾರ ನೀಡಲಾಗಿದೆ. ಅಲ್ಲದೆ ನಿವಾಸಿಗಳಿಗೆ ಪರ್ಯಾಯವಾಗಿ ವಸತಿ ನಿರ್ಮಾಣಕ್ಕೆ ನಿವೇಶನ ಸಹ ಕಲ್ಪಿಸಿಕೊಡಲಾಗಿದೆ. ಆದರೂ ಸಹ ನಿವಾಸಿಗಳು ಇನ್ನೂ ತೆರವುಗೊಂಡಿಲ್ಲ. ಒಂದು ವೇಳೆ ಅವಘಡಗಳು ಸಂಭವಿಸಿದ್ದಲ್ಲಿ ಗುತ್ತಿಗೆದಾರರು ಹೊಣೆಗಾರರಾಗಬೇಕಾಗುತ್ತದೆ.