Saturday, January 29, 2022

ರೈಲು ಹತ್ತಲು ಹೋಗಿ ಕಾಲು ಜಾರಿ ಬಿದ್ದು ಪ್ರಯಾಣಿಕ ಸಾವು

    ಭದ್ರಾವತಿ, ಜ. ೨೯: ಆಕಸ್ಮಿಕವಾಗಿ ರೈಲಿಗೆ ಕಾಲು ಸಿಲುಕಿಕೊಂಡು ಪ್ರಯಾಣಿಕನೋರ್ವ ಮೃತಪಟ್ಟಿರುವ ಘಟನೆ ಶುಕ್ರವಾರ ರಾತ್ರಿ ನಗರದ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
    ರಾತ್ರಿ ಬೆಂಗಳೂರಿನಿಂದ ಆಗಮಿಸಿದ ಇಂಟರ್‌ಸಿಟಿ ರೈಲು ನಗರದ ರೈಲ್ವೆ ನಿಲ್ದಾಣದಲ್ಲಿನಿಲುಗಡೆಗೊಂಡಾಗ ಪ್ರಯಾಣಿಕ, ಶಿರಸಿ ಸಿದ್ದಾಪುರದ ನಿವಾಸಿ ಪ್ರಕಾಶ್ ಪುಂಡಲೀಕ ಶಾನುಬೋಗ್(೫೫) ರೈಲಿನಿಂದ ಕೆಳಗೆ ಇಳಿದಿದ್ದು, ರೈಲು ಹೊರಡುವಾಗ ಪುನಃ ಹತ್ತಲು ಹೋಗಿ ಕಾಲು ಜಾರಿ ಬಿದ್ದಿದ್ದಾರೆ.
    ಈ ಸಂದರ್ಭದಲ್ಲಿ ರೈಲಿಗೆ ಸಿಲುಕಿಕೊಂಡು ಮೃತಪಟ್ಟಿದ್ದಾರೆ. ರೈಲ್ವೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Friday, January 28, 2022

ಭಾವಸಾರ್ ಕ್ಷತ್ರಿಯಾ ಸಮಾಜದ ಹಿನ್ನಲೆ ಅರಿತುಕೊಂಡು ಸಂಘಟಿತರಾಗಿ : ಸತೀಶ್ ಎಂ. ಜಾಧವ್

ಭಾವಸಾರ್ ವಿಷನ್ ಇಂಡಿಯಾ ಏರಿಯಾ-೧೦೩ರ ಅಧ್ಯಕ್ಷರಾಗಿ ಆಶಾ ದುಗ್ಗೇಶ್ ತೇಲ್ಕರ್


ಭದ್ರಾವತಿ ರೋಟರಿ ಕ್ಲಬ್ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಭಾವಸಾರ್ ವಿಷನ್ ಇಂಡಿಯಾ ಏರಿಯಾ-೧೦೩ ತಾಲೂಕು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ  ನೂತನ ಅಧ್ಯಕ್ಷರಾಗಿ ಆಶಾ ದುಗ್ಗೇಶ್ ತೇಲ್ಕರ್ ಪ್ರಮಾಣ ವಚನ ಸ್ವೀಕರಿಸಿದರು.
    ಭದ್ರಾವತಿ, ಜ. ೨೮: ಭಾವಸಾರ್ ಕ್ಷತ್ರಿಯಾ ಸಮಾಜದವರು ತಮ್ಮ ಸಮಾಜದ ಹಿನ್ನಲೆಯನ್ನು ಅರಿತುಕೊಂಡಾಗ ಮಾತ್ರ ಅದರ ವೈಭವವನ್ನು ಮುಖ್ಯವಾಹಿನಿಗೆ ತರಲು ಸಾಧ್ಯ ಎಂದು ಭಾವಸಾರ್ ವಿಷನ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ಸತೀಶ್ ಎಂ ಜಾಧವ್ ಹೇಳಿದರು.
    ಅವರು ಶುಕ್ರವಾರ ರೋಟರಿ ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಾವಸಾರ್ ವಿಷನ್ ಇಂಡಿಯಾ ಏರಿಯಾ-೧೦೩ ತಾಲೂಕು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
    ಭಾವಸಾರ್ ಕ್ಷತ್ರಿಯಾ ಸಮಾಜದವರು ಪ್ರಸ್ತುತ ವಿವಿಧ ವೃತ್ತಿ ಕ್ಷೇತ್ರಗಳಲ್ಲಿ ಹರಿದು ಹಂಚಿಹೋಗಿದ್ದು, ಇದರಿಂದಾಗಿ ಬಹಳಷ್ಟು ಮಂದಿ ಸಮಾಜದ ಸಂಘಟನೆಯಿಂದ ದೂರ ಉಳಿದುಕೊಂಡಿದ್ದಾರೆ. ಇದೀಗ ಎಲ್ಲರನ್ನು ಒಗ್ಗೂಡಿಸಿ ಸಮಾಜವನ್ನು ಮುನ್ನಡೆಸಿಕೊಂಡು ಹೋಗುವ ಅನಿವಾರ್ಯತೆ ಎದುರಾಗಿದೆ. ಎಲ್ಲರೂ ಸೇವಾ ಮನೋಭಾವನೆ ರೂಢಿಸಿಕೊಳ್ಳುವ ಜೊತೆಗೆ ಸಮಾಜಕ್ಕೆ ತಮದೇ ಆದ ಕೊಡುಗೆಗಳನ್ನು ನೀಡುವಂತಾಗಬೇಕೆಂದರು.
    ನೂತನ ಅಧ್ಯಕ್ಷರಾಗಿ ಆಶಾ ದುಗ್ಗೇಶ್ ತೇಲ್ಕರ್:
    ಭಾವಸಾರ್ ವಿಷನ್ ಇಂಡಿಯಾ ಏರಿಯಾ-೧೦೩ರ ತಾಲೂಕು ನೂತನ ಅಧ್ಯಕ್ಷರಾಗಿ ಆಶಾ ದುಗ್ಗೇಶ್ ತೇಲ್ಕರ್ ಮತ್ತು ಕಾರ್ಯದರ್ಶಿಯಾಗಿ ಮಮತ ವಿಠಲ್‌ನಾಥ್ ಹಾಗು ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ಗೌರ್‍ನರ್ ಕೆ.ಎನ್ ಮಂಜುನಾಥರಾವ್ ಬಂಗ್ರೆ ಅಧಿಕಾರ ಪ್ರಮಾಣ ವಚನ ಬೋಧಿಸಿದರು.
    ಉಪಗೌರ್‍ನರ್ ಡಿ.ಬಿ ವಿನಯ್‌ಕುಮಾರ್, ಸ್ಮಾರ್ಟ್ ವಿಷನ್ ಛೇರ್‍ಮನ್ ಗಜೇಂದ್ರನಾಥ್ ಮಾಲೋಡೆ, ಭಾವಸಾರ್ ಕ್ಷತ್ರಿಯಾ ಸಮಾಜ ಅಧ್ಯಕ್ಷ ಡಿ.ಎಚ್ ರಾಘವೇಂದ್ರರಾವ್, ಡಿ.ಟಿ ಶ್ರೀಧರ್, ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ದುಗ್ಗೇಶ್ ತೇಲ್ಕರ್, ಲಕ್ಷ್ಮಿಕಾಂತ್ ಗುಜ್ಜರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ನಿಕಟಪೂರ್ವ ಅಧ್ಯಕ್ಷ ಶಂಕರ್ ಜಿಂಗಾಡೆ ಸ್ವಾಗತಿಸಿದರು. ಸಮಾರಂಭದಲ್ಲಿ ಭಾವಸಾರ್ ವಿಷನ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ಸತೀಶ್ ಎಂ. ಜಾಧವ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.



ಭದ್ರಾವತಿ ರೋಟರಿ ಕ್ಲಬ್ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಭಾವಸಾರ್ ವಿಷನ್ ಇಂಡಿಯಾ ಏರಿಯಾ-೧೦೩ ತಾಲೂಕು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ  ಭಾವಸಾರ್ ವಿಷನ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ಸತೀಶ್ ಎಂ ಜಾಧವ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮಾಜಿ ಮುಖ್ಯಮಂತ್ರಿ ಮಾಯಾವತಿ ೬೬ನೇ ವರ್ಷದ ಹುಟ್ಟುಹಬ್ಬ ಆಚರಣೆ



ಬಹುಜನ ಸಮಾಜ ಪಾರ್ಟಿ(ಬಿಎಸ್‌ಪಿ) ಪಕ್ಷದ ವತಿಯಿಂದ ಭದ್ರಾವತಿ ಬಿ.ಎಚ್ ರಸ್ತೆ, ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಪಕ್ಷದ ರಾಷ್ಟ್ರೀಯ ಮುಖ್ಯಸ್ಥರಾದ ಮಾಜಿ ಮುಖ್ಯಮಂತ್ರಿ ಮಾಯವತಿ ಅವರ ೬೬ನೇ ವರ್ಷದ ಹುಟ್ಟುಹಬ್ಬ ಆಚರಿಸಲಾಯಿತು.
    ಭದ್ರಾವತಿ, ಜ. ೨೮: ಬಹುಜನ ಸಮಾಜ ಪಾರ್ಟಿ(ಬಿಎಸ್‌ಪಿ) ಪಕ್ಷದ ವತಿಯಿಂದ ನಗರದ ಬಿ.ಎಚ್ ರಸ್ತೆ, ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಪಕ್ಷದ ರಾಷ್ಟ್ರೀಯ ಮುಖ್ಯಸ್ಥರಾದ ಮಾಜಿ ಮುಖ್ಯಮಂತ್ರಿ ಮಾಯವತಿ ಅವರ ೬೬ನೇ ವರ್ಷದ ಹುಟ್ಟುಹಬ್ಬ ಆಚರಿಸಲಾಯಿತು.
    ಪಕ್ಷದ ತಾಲೂಕು ಅಧ್ಯಕ್ಷ ರಹಮತ್ ಉಲ್ಲಾಖಾನ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದ ಆರಂಭದಲ್ಲಿ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ನಂತರ ಸಾರ್ವಜನಿಕರಿಗೆ ಸಿಹಿ ಹಂಚಲಾಯಿತು. ಪ್ರಗತಿಪರ ಸಂಘಟನೆಗಳ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹುಟ್ಟುಹಬ್ಬದ ಸಂಭ್ರಮ ಹಂಚಿಕೊಂಡರು.
    ಪಕ್ಷದ ತಾಲೂಕು ಸಂಚಾಲಕ ಎಂ. ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ಬಿ.ಎ ನರಸಯ್ಯ, ಉಪಾಧ್ಯಕ್ಷ ವಿ. ಚಂದ್ರು, ಪೈಂಟರ್ ಸುಬ್ಬು ಹಾಗು ಕಾರ್ಯಕರ್ತರು ಉಪಸ್ಥಿತರಿದ್ದರು.

ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಖಂಡಿಸಿ ಪ್ರಗತಿಪರ ಸಂಘಟನೆಗಳಿಂದ ಬೃಹತ್ ರಸ್ತೆ ತಡೆ ಚಳುವಳಿ

ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಪಾಟೀಲ್ ವಜಾಗೊಳಿಸಲು ಆಗ್ರಹಿಸಿ ಮನವಿ


ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಅವಮಾನಗೊಳಿಸಿರುವ ರಾಯಚೂರು ಜಿಲ್ಲಾ ನ್ಯಾಯಧೀಶ ಮಲ್ಲಿಕಾರ್ಜುನ ಗೌಡ ಪಾಟೀಲ್‌ರವರನ್ನು ಹುದ್ದೆಯಿಂದ ತಕ್ಷಣ ವಜಾಗೊಳಿಸುವ ಮೂಲಕ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಶುಕ್ರವಾರ ಭದ್ರಾವತಿಯಲ್ಲಿ ರಸ್ತೆ ತಡೆ ಚಳುವಳಿ ನಡೆಸಲಾಯಿತು.
    ಭದ್ರಾವತಿ, ಜ. ೨೮:  ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಅವಮಾನಗೊಳಿಸಿರುವ ರಾಯಚೂರು ಜಿಲ್ಲಾ ನ್ಯಾಯಧೀಶ ಮಲ್ಲಿಕಾರ್ಜುನ ಗೌಡ ಪಾಟೀಲ್‌ರವರನ್ನು ಹುದ್ದೆಯಿಂದ ತಕ್ಷಣ ವಜಾಗೊಳಿಸುವ ಮೂಲಕ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪ್ರಮುಖರು ಆಗ್ರಹಿಸಿದರು.
    ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಅವಮಾನಿಸಿರುವ ಘಟನೆಯನ್ನು ಖಂಡಿಸಿ ಶುಕ್ರವಾರ ನಗರದ ಅಂಡರ್ ಬ್ರಿಡ್ಜ್ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ ರಸ್ತೆ ತಡೆ ಚಳುವಳಿ ನೇತೃತ್ವ ವಹಿಸಿ ಮಾತನಾಡಿದ ಪ್ರಮುಖರು, ದೇಶದ ಸಂವಿಧಾನ ದಿನದಂದು ಈ ದೇಶಕ್ಕೆ ಸಂವಿಧಾನ ನೀಡಿದ ವಿಶ್ವಜ್ಞಾನಿ, ಮಹಾಮಾನವತಾವಾದಿ ಡಾ. ಬಿ.ಆರ್ ಅಂಬೇಡ್ಕರ್‌ರವರಿಗೆ ಅಗೌರವ ಉಂಟು ಮಾಡಿರುವುದು ಪ್ರಜಾಪ್ರಭುತ್ವ ಸಮಾಜ ತಲೆ ತಗ್ಗಿಸುವಂತಾಗಿದೆ. ಸಂವಿಧಾನವಿಲ್ಲದೆ ಈ ದೇಶದಲ್ಲಿ ಏನನ್ನು ಸಹ ಮಾಡಲು ಸಾಧ್ಯವಿಲ್ಲ.  ದೇಶದ ಸಂವಿಧಾನ ನೀಡಿರುವ ಹುದ್ದೆಯಲ್ಲಿರುವ ನ್ಯಾಯಾಧೀಶ ಈ ರೀತಿ ನಡೆದುಕೊಂಡಿರುವುದು ಪುನಃ ಈ ದೇಶದಲ್ಲಿ ಮನುವಾದಿ ಸಂಸ್ಕೃತಿ ತಲೆ ಎತ್ತುವ ಲಕ್ಷಣಗಳು ಕಂಡು ಬರುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
    ಜಾತಿ ಆಧಾರದ ಮೇಲೆ ಅಂಬೇಡ್ಕರ್‌ರವರನ್ನು ಅವಮಾನಿಸಿರುವ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಪಾಟೀಲ್‌ರಿಗೆ ಅಂಬೇಡ್ಕರ್‌ರವರ ಬಗ್ಗೆ ಇರಲಿ ಜಗಜ್ಯೋತಿ ಬಸವಣ್ಣನವರ ಬಗ್ಗೆ ಸಹ ಸರಿಯಾದ ಮಾಹಿತಿ ಗೊತ್ತಿಲ್ಲ ಎಂಬುದು ಈ ಘಟನೆಯಿಂದ ತಿಳಿದು ಬರುತ್ತದೆ. ಇಂತಹ ಅಜ್ಞಾನ ತುಂಬಿದ ವ್ಯಕ್ತಿ ನ್ಯಾಯಾಧೀಶ ಹುದ್ದೆ ಅಲಂಕರಿಸಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿಯಾಗಿದೆ. ತಕ್ಷಣ ಮಲ್ಲಿಕಾರ್ಜುನ ಗೌಡ ಪಾಟೀಲ್‌ರನ್ನು ಹುದ್ದೆಯಿಂದ ವಜಾಗೊಳಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
    ಪ್ರಗತಿಪರ ಸಂಘಟನೆಗಳ ಪ್ರಮುಖರಾದ ಸತ್ಯ ಭದ್ರಾವತಿ, ಸುರೇಶ್(ಪ್ರಜಾಪ್ರತಿನಿಧಿ), ಚಿನ್ನಯ್ಯ, ಶಿವಬಸಪ್ಪ, ಜಿ. ರಾಜು(ಉಜ್ಜನಿಪುರ), ಕೆ. ರಂಗನಾಥ್, ಮುರ್ತುಜಾಖಾನ್, ಕೆ. ಮಂಜುನಾಥ್, ಕಾಣಿಕ್‌ರಾಜ್, ಜಿಂಕ್‌ಲೈನ್‌ಮಣಿ, ವಿ. ವಿನೋದ್, ಇ.ಪಿ ಬಸವರಾಜ್, ಜಯರಾಜ್, ಗೋಪಾಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಎಸ್‌ಪಿ ಪಕ್ಷಗಳು ಚಳುವಳಿಗೆ ಬೆಂಬಲ ವ್ಯಕ್ತಪಡಿಸಿದ್ದವು. ಜೆಡಿಎಸ್ ಪ್ರಮುಖರಾದ ಶಾರದ ಅಪ್ಪಾಜಿ, ಆರ್. ಕರುಣಾಮೂರ್ತಿ, ನಗರಸಭಾ ಸದಸ್ಯರಾದ ಬಸವರಾಜ ಬಿ. ಆನೇಕೊಪ್ಪ, ಮಂಜುಳ ಸುಬ್ಬಣ್ಣ, ಉದಯಕುಮಾರ್, ರೇಖಾಪ್ರಕಾಶ್, ರೂಪಾವತಿ, ಪ್ರೇಮಾ ಬದರಿನಾರಾಯಣ, ಡಿ.ಟಿ ಶ್ರೀಧರ್, ಸುಕನ್ಯ, ಭಾಗ್ಯಮ್ಮ, ಎಚ್.ಬಿ ರವಿಕುಮಾರ್, ಎಂ. ರಾಜು, ವೆಂಕಟೇಶ್ ಉಜ್ಜನಿಪುರ, ಕಾಂಗ್ರೆಸ್ ಮುಖಂಡರಾದ ಬಾಲಕೃಷ್ಣ, ಬಿ.ಎಸ್ ಗಣೇಶ್, ಪ್ರವೀಣ್‌ನಾಯ್ಕ, ರವಿಕುಮಾರ್‌(ಬಿಪಿಎಲ್‌), ಬಿಎಸ್‌ಪಿ ಪಕ್ಷದ ರಹಮದುಲ್ಲಾ ಖಾನ್(ಸರ್ದಾರ್), ರಾಜೇಂದ್ರ, ತಮಿಳು ಆದಿದ್ರಾವಿಡ ಸಮಾಜದ ನಿತ್ಯಾನಂದ, ಮುಕುಂದ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
    ತಹಸೀಲ್ದಾರ್ ಆರ್. ಪ್ರದೀಪ್ ನಿಕ್ಕಮ್‌ರವರಿಗೆ ಮನವಿ ಸಲ್ಲಿಸಲಾಯಿತು. ಸುಮಾರು ಒಂದೂವರೆ ತಾಸು ರಸ್ತೆ ತಡೆ ಚಳುವಳಿ ನಡೆಸಿದ ಹಿನ್ನಲೆಯಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತು.  ಇದಕ್ಕೂ ಮೊದಲು ಬಾಬಾ ಅಂಬೇಡ್ಕರ್‌ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. 

Thursday, January 27, 2022

ಇ-ಶ್ರಮ್ ಕಾರ್ಡ್ ಸದುಪಯೋಗ ಪಡೆದುಕೊಳ್ಳಿ : ಕೆ. ಮಂಜುನಾಥ್

ಭದ್ರಾವತಿ ಹಳೇನಗರದ ಶ್ರೀ ಕಾಳಿಕಾಂಬ ದೇವಿ ಸಮುದಾಯ ಭವನದಲ್ಲಿ ಗುರುವಾರ ಕಾರ್ಮಿಕ ಇಲಾಖೆ ಸಹಯೋಗದೊಂದಿಗೆ ಕರ್ನಾಟಕ ಸ್ಟೇಟ್ ಕನ್ಸ್‌ಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ ವತಿಯಿಂದ ಮಡಿವಾಳ ಹಾಗು ಸವಿತಾ ಸಮಾಜದ ವೃತ್ತಿ ಬಾಂಧವರಿಗೆ, ಚಿನ್ನಬೆಳ್ಳಿ (ಅಕ್ಕಸಾಲಿಗರು) ಕೆಲಸಗಾರರಿಗೆ ಮತ್ತು ಟೈಲರ್‌ಗಳಿಗೆ ಇ-ಶ್ರಮ್ ಕಾರ್ಡ್ ನೋಂದಾಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
    ಭದ್ರಾವತಿ, ಜ. ೨೭: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶದಲ್ಲಿರುವ ಎಲ್ಲಾ ರೀತಿಯ ಅಸಂಘಟಿತ ಕಾರ್ಮಿಕರ ಸಂಕಷ್ಟಗಳಿಗೆ ನೆರವಾಗಬೇಕೆಂಬ ಉದ್ದೇಶದಿಂದ ಇ-ಶ್ರಮ್ ಕಾರ್ಡ್ ಯೋಜನೆ ಜಾರಿಗೆ ತಂದಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ. ಮಂಜುನಾಥ್ ಹೇಳಿದರು.
    ಅವರು ಗುರುವಾರ ಹಳೇನಗರದ ಶ್ರೀ ಕಾಳಿಕಾಂಬ ದೇವಿ ಸಮುದಾಯ ಭವನದಲ್ಲಿ ಕಾರ್ಮಿಕ ಇಲಾಖೆ ಸಹಯೋಗದೊಂದಿಗೆ ಕರ್ನಾಟಕ ಸ್ಟೇಟ್ ಕನ್ಸ್‌ಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ ವತಿಯಿಂದ ಮಡಿವಾಳ ಹಾಗು ಸವಿತಾ ಸಮಾಜದ ವೃತ್ತಿ ಬಾಂಧವರಿಗೆ, ಚಿನ್ನಬೆಳ್ಳಿ (ಅಕ್ಕಸಾಲಿಗರು) ಕೆಲಸಗಾರರಿಗೆ ಮತ್ತು ಟೈಲರ್‌ಗಳಿಗೆ ಇ-ಶ್ರಮ್ ಕಾರ್ಡ್ ನೋಂದಾಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.  
    ದೇಶದಲ್ಲಿ ಅಸಂಘಟಿತ ಕಾರ್ಮಿಕರ ಹಿತರಕ್ಷಣೆಗೆ ಮುಂದಾಗಿರುವ ಕೇಂದ್ರ ಸರ್ಕಾರ ಇ-ಶ್ರಮ್ ಕಾರ್ಡ್ ಮೂಲಕ ಹಲವಾರು ಸೌಲಭ್ಯಗಳನ್ನು ಕಲ್ಪಿಸಿಕೊಡಲು ಮುಂದಾಗಿದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳುವ ಜೊತೆಗೆ ಇತರರಿಗೂ ಈ ಯೋಜನೆ ಬಗ್ಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು.
    ಯೋಜನೆ ಕುರಿತು ಕಾರ್ಮಿಕ ನಿರೀಕ್ಷಕಿ ಮುಮ್ತಾಜ್ ಬೇಗಂ ಮತ್ತು ಕರ್ನಾಟಕ ಸ್ಟೇಟ್ ಕನ್ಸ್‌ಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್ ಬಾಬು ಮಾಹಿತಿ ನೀಡಿದರು.
    ಯೂನಿಯನ್ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ತಾಂತ್ರಿಕ ಸಲಹೆಗಾರ ಮನೋಹರ್, ಪ್ರಮುಖರಾದ ಶಿವಕುಮಾರ್, ಕೃಷ್ಣಾನಂದ ರಾಯ್ಕರ್, ರವಿ, ಸಚಿನ್ ವರ್ಣಿಕರ್, ವಿಜಯ್, ದಿವ್ಯರಾಜ್, ನಿರ್ಮಲ ಸೇವಾ ಕೇಂದ್ರ ಹಾಗು ಸವಿತಾ ಸಮಾಜ ಮತ್ತು ಮಡಿವಾಳ ಸಮಾಜದ ಪ್ರಮುಖರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಯೂನಿಯನ್ ಕಾರ್ಯಾಧ್ಯಕ್ಷ ಅಭಿಲಾಷ್ ಕಾರ್ಯಕ್ರಮ ನಿರೂಪಿಸಿದರು. ಇ-ಶ್ರಮ್ ಕಾರ್ಡ್ ನೋಂಧಾಣಿ ಮಾಡಿಸಿಕೊಂಡವರಿಗೆ ಜ.೩೦ರ ಭಾನುವಾರ ನಗರದ ಪಾಂಡುರಂಗ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕಾರ್ಡ್ ವಿತರಣೆ ನಡೆಯಲಿದೆ.

Wednesday, January 26, 2022

ಕಾರು- ಲಾರಿ ನಡುವೆ ಮುಖಾಮುಖಿ ಡಿಕ್ಕಿ ಇಬ್ಬರು ಸ್ಥಳದಲ್ಲೇ ಸಾವು

 

ಭದ್ರಾವತಿ: ನಗರದ ಜೇಡಿಕಟ್ಟೆ ಸಮೀಪ  ಗುರುವಾರ ಬೆಳಗ್ಗೆ ಕಾರು ಮತ್ತು ಲಾರಿ  ನಡುವೆ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.

    ಕಾಗದ ನಗರದ ನಿವಾಸಿ ಬಿಜೆಪಿ ಮುಖಂಡ ಷಣ್ಮುಖ ಮತ್ತು ಬೀಡಾ ಸ್ಟಾಲ್ ಮಾಲೀಕ ರಾಮಚಂದ್ರ ಮತಪಟ್ಟಿದ್ದಾರೆ. 

      ಅಪಘಾತ ಬೆಳಗ್ಗೆ ಸುಮಾರು 6.30 ರ ಸಮಯದಲ್ಲಿ ನಡೆದಿದ್ದು  ಶಿವಮೊಗ್ಗ ಕಡೆಯಿಂದ ಭದ್ರಾವತಿ ಮಾರ್ಗವಾಗಿ ಬರುತ್ತಿದ್ದ ಲಾರಿ ಹಾಗೂ ಭದ್ರಾವತಿಯಿಂದ ಶಿವಮೊಗ್ಗ ಮಾರ್ಗವಾಗಿ ಚಲಿಸುತ್ತಿದ್ದ ಕಾರು ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

     ಅಪಘಾತಕ್ಕೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.



ಷಣ್ಮುಖ


ರಾಮಚಂದ್ರ

      ಷಣ್ಮುಖ ರವರು ಕಾಗದ ನಗರ ಎಂಪಿಎಂ ಇಎಸ್ ಕಾಲೇಜಿನ ಉಪನ್ಯಾಸಕಿ ಪರಿಮಳ ಅವರ ಪತ್ನಿಯಾಗಿದ್ದು, ಹಲವಾರು ವರ್ಷಗಳಿಂದ ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರು. 

   ರಾಮಚಂದ್ರ ಅವರು ಕಾಗದ ನಗರದಲ್ಲಿ ಹಲವಾರು ವರ್ಷಗಳಿಂದ ಸಣ್ಣ ಪ್ರಮಾಣದಲ್ಲಿ ಬೀಡಾ ಸ್ಟಾಲ್ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು.

     ಮೃತರ ನಿಧನಕ್ಕೆ ಬಿಜೆಪಿ ಪಕ್ಷದ ಮುಖಂಡರು,  ಕಾರ್ಯಕರ್ತರು, ಸ್ಥಳೀಯರು ಸಂತಾಪ ಸೂಚಿಸಿದ್ದಾರೆ. 


      


ವಿಐಎಸ್‌ಎಲ್ ರೈಲ್ವೆ ಉತ್ಪಾದನಾ ಸರಪಳಿಯ ಭಾಗವಾಗಿ ಗುರುತಿಸಿಕೊಂಡಿದೆ : ಸುರಜಿತ್ ಮಿಶ್ರ


ಭದ್ರಾವತಿ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ೭೩ನೇ ಗಣರಾಜ್ಯೋತ್ಸವದಲ್ಲಿ ವಿಐಎಸ್‌ಎಲ್ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಸುರಜಿತ್ ಮಿಶ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
    ಭದ್ರಾವತಿ, ಜ. ೨೬: ಭಾರತೀಯ ರೈಲ್ವೆಗೆ ಸರಬರಾಜು ಮಾಡುವ ಉತ್ಪಾದನಾ ಸರಪಳಿಯ ಭಾಗವಾಗಿ ಪ್ರಸ್ತುತ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಗುರುತಿಸಿಕೊಂಡಿದೆ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಸುರಜಿತ್ ಮಿಶ್ರ ಹೇಳಿದರು.
    ಅವರು ಬುಧವಾರ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ೭೩ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ವಿಶೇಷ ಸಾಧನೆ ಮಾಡಿರುವವರಿಗೆ ಬಹುಮಾನ ವಿತರಿಸಿ ಮಾತನಾಡಿದರು.
    ಕಾರ್ಖಾನೆಯಲ್ಲಿ ಎಲ್‌ಎಚ್‌ಬಿ ಆಕ್ಸಲ್‌ಗಳ ಫೋರ್ಜಿಂಗ್ ಉತ್ಪಾದಿಸಲಾಗುತ್ತಿದ್ದು, ಇದೀಗ ಕಾರ್ಖಾನೆ ಭಾರತೀಯ ರೈಲ್ವೆಗೆ ಸರಬರಾಜು ಮಾಡುವ ಉತ್ಪಾದನಾ ಸರಪಳಿಯ ಭಾಗವಾಗಿದೆ. ಉಕ್ಕು ಪ್ರಾಧಿಕಾರ ರೈಲ್ವೆಯಿಂದ ೧೨,೦೦೦ ಎಲ್‌ಎಚ್‌ಬಿ ಆಕ್ಸಲ್‌ಗಳ ಫೋರ್ಜಿಂಗ್ ಸರಬರಾಜು ಮಾಡಲು ಬೇಡಿಕೆ ಪಡೆದುಕೊಂಡಿದೆ. ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಆಕ್ಸಲ್‌ಗಳನ್ನು ಫೋರ್ಜ್ ಮಾಡಿ ಡಿಎಸ್‌ಪಿ, ದುರ್ಗಾಪುರಕ್ಕೆ ಸರಬರಾಜು ಮಾಡಲಾಗುತ್ತಿದೆ. ದೇಶದಲ್ಲಿ ಎಲ್ಲಿಯೂ ಉತ್ಪಾದಿಸಲಾಗದ ಉತ್ಪನ್ನಗಳನ್ನು ಕಾರ್ಖಾನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತಿದೆ ಎಂದರು.
    ಕಾರ್ಖಾನೆಯ ವಿವಿಧ ಇಲಾಖೆಗಳ ಅಧಿಕಾರಿಗಳು, ಕಾರ್ಮಿಕ ಹಾಗು ಅಧಿಕಾರಿಗಳ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಕಾಯಂ ಹಾಗು ಗುತ್ತಿಗೆ ಕಾರ್ಮಿಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಸಹಾಯಕ ಮಹಾಪ್ರಬಂಧಕರಾದ ಎಲ್. ಕುತಲನಾಥನ್ ಮತ್ತು ಕೆ.ಎಸ್ ಶೋಭಾ ಕಾರ್ಯಕ್ರಮ ನಿರೂಪಿಸಿದರು. ಸಾರ್ವಜನಿಕ ಸಂಪರ್ಕ ಹಾಗುನಗರಾಡಳಿತ ಮತ್ತು ಭದ್ರತಾ ಇಲಾಖೆಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.