Friday, April 29, 2022

ವಿಐಎಸ್‌ಎಲ್ ಅಧಿಕಾರಿ ನಿತಿನ್ ಜೋಸ್‌ಗೆ ಸೈಲ್ ರೋಲ್ ಮಾಡೆಲ್ ಅವಾರ್ಡ್

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಕಂಪ್ಯೂಟರ್ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ಹಿರಿಯ ವ್ಯವಸ್ಥಾಪಕ ನಿತಿನ್ ಜೋಸ್ ಕುಟುಂಬ ಸದಸ್ಯರೊಂದಿಗೆ ೨೦೨೦-೨೧ನೇ ಸಾಲಿನ ಪ್ರತಿಷ್ಠಿತ ಸೈಲ್ ಕಾರ್ಪೊರೇಟ್ ಅವಾರ್ಡ್ ಫಾರ್ ಎಕ್ಸಲೆನ್ಸ್-ರೋಲ್ ಮಾಡೆಲ್ ಅವಾರ್ಡ್ ಪ್ರಶಸ್ತಿ ಸ್ವೀಕರಿಸಿದರು.    
    ಭದ್ರಾವತಿ, ಏ. ೩೦: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಕಂಪ್ಯೂಟರ್ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ಹಿರಿಯ ವ್ಯವಸ್ಥಾಪಕ ನಿತಿನ್ ಜೋಸ್ ಅವರಿಗೆ ೨೦೨೦-೨೧ನೇ ಸಾಲಿನ ಪ್ರತಿಷ್ಠಿತ ಸೈಲ್ ಕಾರ್ಪೊರೇಟ್ ಅವಾರ್ಡ್ ಫಾರ್ ಎಕ್ಸಲೆನ್ಸ್-ರೋಲ್ ಮಾಡೆಲ್ ಅವಾರ್ಡ್ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ.
     ನವದೆಹಲಿಯಲ್ಲಿ ಏ.೨೮ರಂದು ಆಯೋಜಿಸಲಾಗಿದ್ದ ಸಮಾರಂಭದಲ್ಲಿ . ಭಾರತೀಯ ಉಕ್ಕು ಪ್ರಾಧಿಕಾರದ ಅಧ್ಯಕ್ಷೆ ಸೋಮ ಮಂಡಲ್ ಪ್ರಶಸ್ತಿ ವಿತರಿಸಿದರು. ಪ್ರಶಸ್ತಿ ರು. ೫೦,೦೦೦ ನಗದು ಮತ್ತು ಪ್ರಮಾಣ ಪತ್ರ ಒಳಗೊಂಡಿದೆ.
    ಕಾರ್ಖಾನೆಯಲ್ಲಿ ನಿತಿನ್ ಜೋಸ್‌ರವರು ೨೦೦೮ರಲ್ಲಿ ಕರ್ತವ್ಯಕ್ಕೆ ಸೇರ್ಪಡೆಗೊಂಡಿದ್ದು, ಕಂಪ್ಯೂಟರ್ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಇವರು ಬ್ಯಾಡ್ಮಿಂಟನ್ ಆಟಗಾರರು ಸಹ ಆಗಿದ್ದು, ಕಾರ್ಖಾನೆ ಆಡಳಿತ ಮಂಡಳಿ, ಅಧಿಕಾರಿಗಳು, ಕಾರ್ಮಿಕರು ಇವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.




ಕಾರ್ಮಿಕ ಸಂತ ಜೋಸೆಫರ ದೇವಾಲಯದ ಸುವರ್ಣ ಮಹೋತ್ಸವಕ್ಕೆ ಚಾಲನೆ

ವಿವಿಧ ಕ್ಷೇತ್ರಗಳ ಗಣ್ಯರಿಗೆ, ದಾನಿಗಳಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳು

ಭದ್ರಾವತಿ ಕಾಗದನಗರದ ಕಾರ್ಮಿಕ ಸಂತ ಜೋಸೆಫರ ದೇವಾಲಯದ ಸುವರ್ಣ ಮಹೋತ್ಸವಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
    ಭದ್ರಾವತಿ, ಏ. ೨೯: ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆ ಆರಂಭಗೊಂಡ ನಂತರ ಕಾಗದನಗರ ವ್ಯಾಪ್ತಿಯ ನಗರಾಡಳಿತ ಪ್ರದೇಶದಲ್ಲಿ ಕ್ಯಾಥೋಲಿಕ್ ಕ್ರೈಸ್ತ ಸಮುದಾಯದವರು ನಿರ್ಮಿಸಿಕೊಂಡಿದ್ದ ಕಾರ್ಮಿಕ ಸಂತ ಜೋಸೆಫರ ದೇವಾಲಯ ಇದೀಗ ೫೦ ವರ್ಷಗಳನ್ನು ಪೂರೈಸಿದ್ದು, ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದೆ.
    ಕಾಗದನಗರ ವ್ಯಾಪ್ತಿಯ ಸುತ್ತಮುತ್ತಲಿನ ಹಾಗು ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕ್ಯಾಥೋಲಿಕ್ ಕ್ರೈಸ್ತ ಸಮುದಾಯದವರು ಈ ದೇವಾಲಯದಲ್ಲಿ ತಮ್ಮ ಧಾರ್ಮಿಕ ಆಚರಣೆಗಳನ್ನು ನೆರವೇರಿಸಿಕೊಂಡು ಬರುತ್ತಿದ್ದರು. ಕಳೆದ ಸುಮಾರು ೭ ವರ್ಷಗಳಿಂದ ಕಾರ್ಖಾನೆ ಸ್ಥಗಿತಗೊಂಡಿದ್ದು, ಕಾರ್ಮಿಕ ಕುಟುಂಬಗಳು ಬೇರೆಡೆಗೆ ಸ್ಥಳಾಂತರಗೊಂಡಿವೆ. ಈ ಹಿನ್ನಲೆಯಲ್ಲಿ ಈ ವ್ಯಾಪ್ತಿಯಲ್ಲಿ ಇದೀಗ ಕ್ಯಾಥೋಲಿಕ್ ಕ್ರೈಸ್ತ ಸಮುದಾಯದವರು ಅಲ್ಪ ಪ್ರಮಾಣದಲ್ಲಿದ್ದು, ಆದರೂ ಸಹ ದೇವಾಲಯದ ಸುವರ್ಣ ಮಹೋತ್ಸವ ಅದ್ದೂರಿಯಾಗಿ ಆಚರಿಸುವ ಮೂಲಕ ಗಮನ ಸೆಳೆದಿದ್ದಾರೆ.
    ಶುಕ್ರವಾರ ಮಹೋತ್ಸವಕ್ಕೆ ಚಾಲನೆ ನೀಡಲಾಗಿದ್ದು, ವಿವಿಧ ಕ್ಷೇತ್ರಗಳ ಗಣ್ಯರಿಗೆ, ದಾನಿಗಳಿಗೆ ಸನ್ಮಾನ ಹಾಗು ನೃತ್ಯ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಮಹೋತ್ಸವ ೩ ದಿನಗಳ ಕಾಲ ಜರುಗಲಿದೆ. ಮೇ.೧ರಂದು ಕಾರ್ಮಿಕ ಸಂತ ಜೋಸೆಫರ ಉತ್ಸವ ಮೆರವಣಿಗೆಯೊಂದಿಗೆ ಮಹೋತ್ಸವ ಅಂತ್ಯಗೊಳ್ಳಲಿದೆ.
    ದೇವಾಲಯದ ಧರ್ಮ ಗುರು ಫಾದರ್ ಡಾಮಿನಿಕ್ ಕ್ರಿಸ್ತುರಾಜ್ ಅಧ್ಯಕ್ಷತೆ ವಹಿಸಿದ್ದರು. ಕಾರೇಹಳ್ಳಿ ಸಂತ ಅಂತೋಣಿಯವರ ದೇವಾಲಯದ ಧರ್ಮ ಗುರು ಫಾದರ್ ರಿಚರ್ಡ್ ಅನಿಲ್ ಡಿಸೋಜಾ, ಉಜ್ಜನಿಪುರ ಡಾನ್ ಬೋಸ್ಕೋ ಸಂಸ್ಥೆ ನಿರ್ದೇಶಕ ಫಾದರ್ ಆರೋಗ್ಯ ರಾಜ್ ಹಾಗು ಪ್ರಾಂಶುಪಾಲ ಫಾದರ್ ಜೋಮಿ, ಕ್ರೈಸ್ತ ಸಮುದಾಯದ ಮುಖಂಡ ಸೆಲ್ವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಚಿತ್ರ: ಡಿ೨೯-ಬಿಡಿವಿಟಿ೨


ಭದ್ರಾವತಿ ಕಾಗದನಗರದ ಕಾರ್ಮಿಕ ಸಂತ ಜೋಸೆಫರ ದೇವಾಲಯದ ಸುವರ್ಣ ಮಹೋತ್ಸವದ ಹಿನ್ನಲೆಯಲ್ಲಿ ಶುಕ್ರವಾರ ನೃತ್ಯ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಟಿ.ವಿ ಕೇಬಲ್‌ನಲ್ಲಿ ವಿದ್ಯುತ್ ಹರಿದು ೪ ವರ್ಷದ ಬಾಲಕಿ ಸಾವು


    ಭದ್ರಾವತಿ, ಏ. ೨೯: ಟಿ.ವಿ ಕೇಬಲ್‌ನಲ್ಲಿ ವಿದ್ಯುತ್ ಹರಿದ ಪರಿಣಾಮ ೪ ವರ್ಷದ ಹೆಣ್ಣು ಮಗು ಮೃತಪಟ್ಟಿರುವ ಘಟನೆ ತಾಲೂಕಿನ ಹಿರಿಯೂರು ಗ್ರಾಮದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.
    ಇಂಚರ(೪) ಮೃತಪಟ್ಟ ಬಾಲಕಿ ಎಂದು ಗುರುತಿಸಲಾಗಿದೆ. ಈಕೆ ಗ್ರಾಮದ ನಿವಾಸಿ ಸಂತೋಷ್ ಮತ್ತು ಪೂಜಾ ದಂಪತಿ ಪುತ್ರಿಯಾಗಿದ್ದು, ವಿದ್ಯುತ್ ತಂತಿಗೆ ಸಂಪರ್ಕಗೊಂಡಿದ್ದ ಟಿವಿ ಕೇಬಲ್ ಕತ್ತರಿಸಿಕೊಂಡು ಕೆಳಗೆ ತಂತಿ ಬೇಲಿ ಮೇಲೆ ಬಿದ್ದಿದೆ. ಈ ಕೇಬಲನ್ನು ಆಟವಾಡುವಾಗ ಬಾಲಕಿ ಮುಟ್ಟಿದ್ದು, ಇದರಿಂದಾಗಿ ವಿದ್ಯುತ್ ತಗುಲಿ ಮೃತಪಟ್ಟಿದೆ ಎನ್ನಲಾಗಿದೆ.
    ಘಟನೆ ಬೆಳಿಗ್ಗೆ ಸುಮಾರು ೯.೩೦ರ ಸಮಯದಲ್ಲಿ ನಡೆದಿದ್ದು, ವಿದ್ಯುತ್ ತಗುಲಿ ತೀವ್ರ ಅಸ್ವಸ್ಥಗೊಂಡಿದ್ದ ಬಾಲಕಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಬಾಲಕಿ ಮೃತಪಟ್ಟಿದ್ದು, ಈ ಸಂಬಂಧ ಪೇಪರ್‌ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೋವಿಡ್ ೪ನೇ ಅಲೆ : ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರು ಆರೋಗ್ಯದ ಬಗ್ಗೆ ಮುನ್ನಚ್ಚರಿಕೆ ವಹಿಸಿ

ಭದ್ರಾವತಿ ತಾಲೂಕಿನ ಅರಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾನವಾಡಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಸ್ಥಳಕ್ಕೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್ ಭೇಟಿ ನೀಡಿ ಕೂಲಿ ಕಾರ್ಮಿಕರೊಂದಿಗೆ  ದುಡಿಯೋಣ ಬಾ...! ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
    ಭದ್ರಾವತಿ, ಏ. ೨೯: ಕೋವಿಡ್ ೪ನೇ ಅಲೆ ಹಿನ್ನಲೆಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿವಹಿಸುವಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್ ಸಲಹೆ ನೀಡಿದರು.
    ಅವರು ತಾಲೂಕಿನ ಅರಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾನವಾಡಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಸ್ಥಳಕ್ಕೆ ಭೇಟಿ ನೀಡಿ ಕೂಲಿ ಕಾರ್ಮಿಕರೊಂದಿಗೆ  ದುಡಿಯೋಣ ಬಾ...! ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕೂಲಿ ಕಾರ್ಮಿಕರು ಕೋವಿಡ್ ೪ನೇ ಅಲೆ ಹಿನ್ನಲೆಯಲ್ಲಿ ಮಾಸ್ಕ್ ಬಳಕೆಯೊಂದಿಗೆ ಸಾಮಾಜಿಕ ಅಂತರ ಸೇರಿದಂತೆ ಇನ್ನಿತರ ಮುನ್ನಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದರು.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮತ್ತು ಪಿ.ಎಂ ಕಿಸಾನ್ ಯೋಜನಾ ಕ್ರೆಡಿಟ್ ಕಾರ್ಡ್ ಕುರಿತು ಮಾಹಿತಿ ನೀಡಿ ಸ್ಥಳದಲ್ಲಿಯೇ ಪರಿಶಿಷ್ಟ ಜಾತಿ/ಪಂಗಡದ ಫಲಾನುಭವಿಗಳಿಗೆ ಉದ್ಯೋಗ ಖಾತ್ರಿ ಚೀಟಿಯನ್ನು ವಿತರಿಸಿದರು.
    ದನದ ಕೊಟ್ಟಿಗೆ,  ಕುರಿ ಶೆಡ್, ಅಡಕೆ ಸಸಿ ನೆಡುವುದು, ಬಚ್ಚಲು ಗುಂಡಿ ನಿರ್ಮಾಣ ಸೇರಿದಂತೆ ಇತರೆ ವೈಯಕ್ತಿಕ ಕಾಮಗಾರಿ ಪಡೆದುಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದುವಂತೆ ಸಲಹೆ ವ್ಯಕ್ತಪಡಿಸಿದರು.
  ತಾಲೂಕು ಪಂಚಾಯಿತಿ ತಾಂತ್ರಿಕ ಸಹಾಯಕಿ ಆಶಾ, ಗ್ರಾಮ ಪಂಚಾಯಿತಿ ಗಣಕಯಂತ್ರ ನಿರ್ವಾಹಕ  ಆಲಿ, ಎಸ್‌ಡಿಎ ಬಾಸ್ಕರ್, ಡಿಇಓ ಬೈರೇಶ್ ಕುಮಾರ್ ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Thursday, April 28, 2022

ಇಫ್ತಾರ್ ಕೂಟದಲ್ಲಿ ಭಾಗಿಯಾದ ಜೆಡಿಎಸ್ ಮುಖಡರು

ಭದ್ರಾವತಿಯಲ್ಲಿ ಜೆಡಿಎಸ್ ಮುಖಂಡ, ನಗರಸಭೆ ಮಾಜಿ ಸದಸ್ಯ ಮುತುರ್ಜಾಖಾನ್‌ರವರು ಗುರುವಾರ ಏರ್ಪಡಿಸಿದ್ದ ಇಫ್ತಾರ್ ಕೂಟದಲ್ಲಿ ಜೆಡಿಎಸ್ ಮುಖಂಡರು ಪಾಲ್ಗೊಂಡು ಮುಸ್ಲಿಂ ಸಮುದಾಯದವರಿಗೆ ಹಬ್ಬದ ಶುಭಾಶಯ ಕೋರಿದರು.
    ಭದ್ರಾವತಿ: ಜೆಡಿಎಸ್ ಮುಖಂಡ, ನಗರಸಭೆ ಮಾಜಿ ಸದಸ್ಯ ಮುತುರ್ಜಾಖಾನ್‌ರವರು ಗುರುವಾರ ಏರ್ಪಡಿಸಿದ್ದ ಇಫ್ತಾರ್ ಕೂಟದಲ್ಲಿ ಜೆಡಿಎಸ್ ಮುಖಂಡರು ಪಾಲ್ಗೊಂಡು ಮುಸ್ಲಿಂ ಸಮುದಾಯದವರಿಗೆ ಹಬ್ಬದ ಶುಭಾಶಯ ಕೋರಿದರು.
    ಪವಿತ್ರ ರಂಜಾನ್ ಹಬ್ಬದ ಹಿನ್ನಲೆಯಲ್ಲಿ ಸುಮಾರು ೩೦ ದಿನಗಳವರೆಗೆ ಉಪವಾಸ ಆಚರಣೆಯಲ್ಲಿ ತೊಡಗುವ ಮುಸ್ಲಿಂ ಸಮುದಾಯದವರು ಕೊನೆಯಲ್ಲಿ ಇಫ್ತಾರ್ ಕೂಟ ಆಯೋಜಿಸುವುದು ವಾಡಿಕೆಯಾಗಿದೆ.
    ಅಂಜುಮಾನ್ ಇಸ್ಲಾವುಲ್ ಮುಸ್ಲಿಮೀನ್ ಅಧ್ಯಕ್ಷರೂ ಸಹ ಆಗಿರುವ ಮುತುರ್ಜಾಖಾನ್‌ರವರು ಇಫ್ತಾರ್ ಕೂಟ ಆಯೋಜಿಸುವ ಮೂಲಕ ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರನ್ನು ಆಹ್ವಾನಿಸಿದ್ದರು.
    ಪಕ್ಷದ ಮುಖಂಡರಾದ ಶಾರದ ಅಪ್ಪಾಜಿ, ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಮಧುಕುಮಾರ್, ನಗರಸಭಾ ಸದಸ್ಯ ಬಸವರಾಜ ಬಿ. ಆನೇಕೊಪ್ಪ, ಮಾಜಿ ಸದಸ್ಯರಾದ ವಿಶಾಲಾಕ್ಷಿ, ಆನಂದ್, ಮೈಲಾರಪ್ಪ, ಲೋಕೇಶ್ವರ್ ರಾವ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


ಒಂದೆಡೆ ಆಕರ್ಷಕ ಸರ್ಕಾರಿ ಕಟ್ಟಡಗಳು, ಮತ್ತೊಂದೆಡೆ ಉಚಿತ ಪ್ರಚಾರದ ಕಟ್ಟಡಗಳು

ಎಲ್ಲಿಬೇಕೆಂದರಲ್ಲಿ ಕರಪತ್ರ, ಪೋಸ್ಟ್‌ಗಳಿಂದ ಆಕರ್ಷಣೆ ಕಳೆದು ಕೊಳ್ಳುತ್ತಿವೆ ಸರ್ಕಾರಿ ಕಟ್ಟಡಗಳು

ಭದ್ರಾವತಿ ತಾಲೂಕು ಕಛೇರಿ ಮಿನಿವಿಧಾನಸೌಧ ಕಟ್ಟಡದಲ್ಲಿ ಎಲ್ಲಿಬೇಕೆಂದರಲ್ಲಿ ಕರಪತ್ರ, ಪೋಸ್ಟರ್‌ಗಳನ್ನು ಅಂಟಿಸಿರುವುದು.
    * ಅನಂತಕುಮಾರ್
    ಭದ್ರಾವತಿ, ಏ. ೨೮: ಸರ್ಕಾರಿ ಕಟ್ಟಡಗಳಲ್ಲಿ ಸ್ವಚ್ಛತೆಯೊಂದಿಗೆ ಸೌಂದರ್ಯ ಕಾಪಾಡುವ ನಿಟ್ಟಿನಲ್ಲೂ ಹೆಚ್ಚಿನ ಗಮನ ಹರಿಸಬೇಕಾಗಿದೆ. ಸ್ವಚ್ಛ ಭಾರತ್ ಅಭಿಯಾನದ ಪರಿಕಲ್ಪನೆ ಯಶಸ್ವಿಗೊಳಿಸಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.  
ತಾಲೂಕಿನ ಶಕ್ತಿ ಕೇಂದ್ರ ಮಿನಿವಿಧಾನಸೌಧ ಇದೀಗ ಉಚಿತ ಪ್ರಚಾರ ಕೇಂದ್ರವಾಗಿ ಕಂಡು ಬರುತ್ತಿದೆ. ಸಭೆ, ಸಮಾರಂಭ, ಹೋರಾಟದ ಕರಪತ್ರಗಳು, ಜಾತ್ರೆ, ಹಬ್ಬ, ಹರಿದಿನಗಳ ಪೋಸ್ಟರ್‌ಗಳು ಕಟ್ಟಡದಲ್ಲಿ ರಾರಾಜಿಸುತ್ತಿವೆ. ಇದರಿಂದಾಗಿ ಕಟ್ಟಡದ ಸೌಂದರ್ಯ ಹಾಳಾಗಿದ್ದು, ಕಟ್ಟಡದ ಮೇಲೆ ಕರಪತ್ರ, ಪೋಸ್ಟರ್‌ಗಳನ್ನು ಅಂಟಿಸುತ್ತಿರುವುದರಿಂದ ಬಣ್ಣ ಸಹ ಮಾಸುವ ಸ್ಥಿತಿಗೆ ಬಂದು ತಲುಪಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

ಸಾರ್ವಜನಿಕರು ಸರ್ಕಾರಿ ಕಛೇರಿಗಳನ್ನು ತಮ್ಮ ಮನೆಗಳಂತೆ, ಸ್ವತ್ತುಗಳಂತೆ ಭಾವಿಸಬೇಕು. ಸ್ವಯಂ ಜಾಗೃತರಾಗಿ ಸರ್ಕಾರಿ ಕಟ್ಟಡಗಳ ಸೌಂದರ್ಯ ಹೆಚ್ಚಿಸಲು ಸಹಕರಿಸಬೇಕು. ಮಿನಿವಿಧಾನಸೌಧದ ಕಟ್ಟಡದ ಮುಂಭಾಗದಲ್ಲಿ ಎಲ್ಲಿಬೇಕೆಂದರಲ್ಲಿ  ಕರಪತ್ರ, ಪೋಸ್ಟರ್‌ಗಳನ್ನು ಅಂಟಿಸುತ್ತಿರುವುದನ್ನು ಬಹಳ ದಿನಗಳಿಂದ ಗಮನಿಸುತ್ತಿದ್ದೇನೆ. ಸಾರ್ವಜನಿಕರು ಎಚ್ಚತ್ತುಕೊಳ್ಳಬೇಕು. ಇಲ್ಲವಾದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು.
                                                                                       - ಆರ್. ಪ್ರದೀಪ್, ತಹಸೀಲ್ದಾರ್, ಭದ್ರಾವತಿ.


ಆಕರ್ಷಕವಾಗಿ ಕಂಗೊಳಿಸುತ್ತಿರುವ ಭದ್ರಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ.
    ಆಕರ್ಷಿಸುತ್ತಿವೆ ಕ್ಷೇತ್ರ ಶಿಕ್ಷಣಾಧಿಕಾರಿ-ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಛೇರಿ:
    ತಾಲೂಕು ಕಛೇರಿ ರಸ್ತೆಯಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿ-ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಛೇರಿಗಳು ಸಹ ಕೆಲವು ವರ್ಷಗಳ ಹಿಂದೆ ಉಚಿತ ಪ್ರಚಾರ ಕೇಂದ್ರಗಳಂತೆ ಕಂಡು ಬರುತ್ತಿದ್ದವು. ಕಟ್ಟಡದಲ್ಲಿ ಎಲ್ಲಿಬೇಕೆಂದರಲ್ಲಿ ಕರಪತ್ರಗಳು, ಪೋಸ್ಟರ್‌ಗಳು ರಾರಾಜುಸುತ್ತಿದ್ದವು. ನಂತರ ಇಲಾಖೆ ಎಚ್ಚೆತ್ತುಕೊಂಡು ಕಟ್ಟಡದ ಸೌಂದರ್ಯಕ್ಕೆ ಹೆಚ್ಚಿನ ಗಮನ ಹರಿಸಿದೆ. ಈ ನಡುವೆ ಕಳೆದ ಸುಮಾರು ೧ ವರ್ಷದ ಹಿಂದೆ ಹೊಸ ಶಿಕ್ಷಣ ನೀತಿ ಪಠ್ಯಕ್ರಮ ಹಿನ್ನಲೆಯಲ್ಲಿ ಕಟ್ಟಡಕ್ಕೆ ಮತ್ತುಷ್ಟು ಸೌಂದರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಕುಂಚ ಕಲಾವಿದರ ಸಹಕಾರದೊಂದಿಗೆ ಆಕರ್ಷಕ ಕೇಂದ್ರವನ್ನಾಗಿಸಿದೆ. ಹೊಸ ಶಿಕ್ಷಣ ನೀತಿಯ ಧ್ಯೇಯ, ಬದಲಾದ ಪಠ್ಯಕ್ರಮ ಹಾಗು ಸ್ವರೂಪಗಳೊಂದಿಗೆ, ಆದರ್ಶ ಮಹಾನ್ ವ್ಯಕ್ತಿಗಳು, ಸ್ಥಳೀಯ ಐತಿಹಾಸಿಕ ಪಾರಂಪರಿಕ ಕಟ್ಟಡಗಳು, ಸ್ಥಳಗಳು ಕುಂಚ ಕಲೆಯಲ್ಲಿ ಅರಳುವ ಮೂಲಕ ಕಟ್ಟಡದಲ್ಲಿ ರಾರಾಜುಸುತ್ತಿವೆ.  
    ಪರಿಸರ, ಸ್ವಚ್ಛತೆ ಕುರಿತು ಜಾಗೃತಿ:
    ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಕಾಂಪೌಂಡ್ ಕಟ್ಟಡ ಇದೀಗ ಪರಿಸರ ರಕ್ಷಣೆ, ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ಮೂಲಕ ಆಕರ್ಷಕವಾಗಿ ಕಂಡು ಬರುತ್ತಿದೆ.
    ಎಲ್ಲೆಬೇಕೆಂದರಲ್ಲಿ ಕಸ ಎಸೆಯದಿರುವುದು, ತ್ಯಾಜ್ಯ ಬೇರ್ಪಡಿಸುವಿಕೆ, ವಿಲೇವಾರಿಗೆ ಅನುಸರಿಸಬೇಕಾದ ಕ್ರಮ, ಪ್ಲಾಸಿಕ್ ನಿಷೇಧ, ಗಿಡ, ಮರಗಳ ಸಂರಕ್ಷಣೆ, ಜಲ ಸಂರಕ್ಷಣೆ ಸೇರಿದಂತೆ ಒಟ್ಟಾರೆ ಪರಿಸರ, ಸ್ವಚ್ಛತೆ ಕುರಿತು ನಗರಸಭೆ ವತಿಯಿಂದ ಆಕರ್ಷಕ ಚಿತ್ತಾರಗಳ ಮೂಲಕ ಜಾಗೃತಿ ಮೂಡಿಸಲಾಗಿದೆ.
ನಗರಸಭೆ ವತಿಯಿಂದ ಸರ್ಕಾರಿ ಕಟ್ಟಡಗಳ ಸೌಂದರ್ಯ ಹೆಚ್ಚಿಸುವ ಜೊತೆಗೆ ಪರಿಸರ, ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ನಗರಸಭೆ ಅನುದಾನ ಲಭ್ಯತೆಯನ್ನು ಗಮನಿಸಿ ಹಂತ ಹಂತವಾಗಿ ಎಲ್ಲಾ ಸರ್ಕಾರಿ ಕಟ್ಟಡಗಳ ಸೌಂದರ್ಯ ಹೆಚ್ಚಿಸಲಾಗುವುದು. ಸರ್ಕಾರಿ ಕಟ್ಟಡಗಳ ಸೌಂದರ್ಯಕ್ಕೆ ಧಕ್ಕೆ ಉಂಟು ಮಾಡುವವರ ವಿರುದ್ಧ ದಂಡ ವಿಧಿಸಲಾಗುವುದು.
 - ಕೆ. ಪರಮೇಶ್, ಪೌರಾಯುಕ್ತರು, ನಗರಸಭೆ, ಭದ್ರಾವತಿ.
    ಎಲ್ಲಾ ಸರ್ಕಾರಿ ಕಟ್ಟಡಗಳು ಸಹ ಸ್ವಚ್ಛತೆಯೊಂದಿಗೆ ಆಕರ್ಷಕವಾಗಿ ಕಾಣುವಂತಾಗಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಹೆಚ್ಚಿನದ್ದಾಗಿದೆ.  ಜೊತೆಗೆ ಸಂಬಂಧಪಟ್ಟ ಸರ್ಕಾರಿ ಇಲಾಖೆಗಳು ಸಹ ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ. ಇಲಾಖೆಗಳು ಸಹ ಸಾರ್ವಜನಿಕ ಪ್ರಕಟಣೆ, ಸುತ್ತೋಲೆ, ಸೂಚನೆಗಳಿಗೆ ನಿಗದಿಪಡಿಸಲಾದ ಫಲಕಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಎಲ್ಲಿಬೇಕೆಂದರಲ್ಲಿ ಅಂಟಿಸುವ ಪರಿಪಾಠ ಕೈಬಿಡಬೇಕು. ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸುವ ಜೊತೆಗೆ ಸ್ವಚ್ಛತೆ ಕುರಿತು ನಿರ್ಲಕ್ಷ್ಯ ವಹಿಸುವವರ ಹಾಗು ಕರಪತ್ರ, ಪೋಸ್ಟರ್‌ಗಳನ್ನು ಎಲ್ಲಿಬೇಕೆಂದರಲ್ಲಿ ಅಂಟಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ.


ಭದ್ರಾವತಿ ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಕಾಂಪೌಂಡ್ ಕಟ್ಟಡ ಇದೀಗ ಪರಿಸರ ರಕ್ಷಣೆ, ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ಮೂಲಕ ಆಕರ್ಷಕವಾಗಿ ಕಂಡು ಬರುತ್ತಿದೆ.
     ಆಕರ್ಷಣೆಯೊಂದಿಗೆ, ಸ್ವಚ್ಛತೆ, ಸುಂದರ ಪರಿಸರ ಹೊಂದಿರುವ ಸರ್ಕಾರಿ ಕಛೇರಿ, ಕಟ್ಟಡಗಳನ್ನು ಸಹ ಸರ್ಕಾರ ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಸರ್ಕಾರ ಹೊಂದಿರುವ ಕಾಳಜಿಯನ್ನು ನಾವುಗಳು ಅರಿತುಕೊಳ್ಳಬೇಕು. ತಕ್ಷಣಕ್ಕೆ ಸರ್ಕಾರದ ಕಾಳಜಿಯನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಮುಂದಾಗಬೇಕಾಗಿದೆ.

Wednesday, April 27, 2022

ಡಾ. ಶ್ವೇತಾ ಅಮಿತ್‌ಗೆ ರಕ್ಷಣಾ ಇಲಾಖೆಯ ಡಿಫೆನ್ಸ್ ಅವಾರ್ಡ್

ಭದ್ರಾವತಿ ತರೀಕೆರೆ ರಸ್ತೆಯ ಎನ್‌ಟಿಸಿ ರೈಸ್ ಮಿಲ್ ಮಾಲೀಕ, ಉದ್ಯಮಿ ಡಾ. ಎನ್‌ಟಿಸಿ ನಾಗೇಶ್‌ರವರ ಪುತ್ರಿ, ಬೆಂಗಳೂರಿನ ಮೀಂಡರ್ ಸ್ಪೆಕ್ಟ್ರಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಹ ಸಂಸ್ಥಾಪಕಿ ಮತ್ತು ಸಿಇಓ ಡಾ. ಶ್ವೇತಾ ಅಮಿತ್ ರಕ್ಷಣಾ ಇಲಾಖೆಯ ಡಿಫೆನ್ಸ್ ಅವಾರ್ಡ್ ಪಡೆದುಕೊಂಡಿದ್ದಾರೆ.
    ಭದ್ರಾವತಿ, ಏ.೨೭: ನಗರದ ತರೀಕೆರೆ ರಸ್ತೆಯ ಎನ್‌ಟಿಸಿ ರೈಸ್ ಮಿಲ್ ಮಾಲೀಕ, ಉದ್ಯಮಿ ಡಾ. ಎನ್‌ಟಿಸಿ ನಾಗೇಶ್‌ರವರ ಪುತ್ರಿ, ಬೆಂಗಳೂರಿನ ಮೀಂಡರ್ ಸ್ಪೆಕ್ಟ್ರಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಹ ಸಂಸ್ಥಾಪಕಿ ಮತ್ತು ಸಿಇಓ ಡಾ. ಶ್ವೇತಾ ಅಮಿತ್ ರಕ್ಷಣಾ ಇಲಾಖೆಯ ಡಿಫೆನ್ಸ್ ಅವಾರ್ಡ್ ಪಡೆದುಕೊಂಡಿದ್ದಾರೆ.
    ನವದೆಹಲಿಯ ಉದ್ಯೋಗ್ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಡಾ. ಶ್ವೇತಾ ಅಮಿತ್‌ರವರಿಗೆ ಪ್ರಶಸ್ತಿಯನ್ನು ವಿತರಿಸಿದರು.  ಡಿಫೆನ್ಸ್ ಇಂಡಿಯಾ ಸ್ಟಾರ್ಟ್ ಆಫ್ ಚಾಲೆಂಜ್-೫ರಲ್ಲಿ ಹೆಲ್ಮೆಟ್ ಮೌಂಟ್ ಕನ್‌ಫರ್ಮಬಲ್ ಆಂಟೈನಾ ಎಂಬ ವಿಷಯದಲ್ಲಿ ಸಾಧಿಸಿದ ಸಾಧನೆಯ ಫಲವಾಗಿ ಬೆಂಗಳೂರಿನ ಮೀಂಡರ್ ಸ್ಪೆಕ್ಟ್ರಾ ಪ್ರೈವೇಟ್ ಲಿಮಿಟೆಡ್ ಕಂಪನಿಯನ್ನು ಆಯ್ಕೆ ಮಾಡಿಕೊಂಡು ಡಾ.ಶ್ವೇತಾ ಅವರನ್ನು ಗೌರವಿಸಲಾಗಿದೆ.
    ಇನ್ನೋವೇಷನ್ಸ್ ಫಾರ್ ಡಿಫೆನ್ಸ್ ಎಕ್ಷಲೆನ್ಸಿ ಆಯ್ಕೆಯ ಜವಾಬ್ದಾರಿಯನ್ನು ನಿರ್ವಹಿಸಿ ಮೀಂಡರ್ ಸ್ಪೆಕ್ಟ್ರಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ಹೆಸರನ್ನು ಶಿಫಾರಸ್ಸು ಮಾಡಿತ್ತು.  ಡಾ.ಶ್ವೇತಾ ಅಮಿತ್‌ರವರಿಗೆ ನಗರದ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.