Friday, May 6, 2022

ಮೇ.೭ರಂದು ಭದ್ರಾವತಿ ರಾಮಾಚಾರಿ ಸಂಪಾದಕತ್ವದ ‘ಅಪ್ಪು ಅಮರ’ ಒಂದು ಅವಲೋಕನ ಪುಸ್ತಕ ಬಿಡುಗಡೆ

'ಅಪ್ಪು ಅಮರ' ಒಂದು ಅವಲೋಕನ ಪುಸ್ತಕ
    ಭದ್ರಾವತಿ, ಮೇ. ೬: ಮೂಲತಃ ನಗರದ ಬೊಮ್ಮನಕಟ್ಟೆ ನಿವಾಸಿಯಾಗಿರುವ ವಿಭಿನ್ನ ಬಗೆಯ ಸಾಹಿತ್ಯ ಪ್ರಕಾರಗಳಲ್ಲಿ ತೊಡಗಿಸಿಕೊಂಡಿರುವ ಭದ್ರಾವತಿ ರಾಮಚಾರಿ ಇದೀಗ ಕಾವ್ಯ ಸ್ಪಂದನ ಪಬ್ಲಿಕೇಷನ್ ಮೂಲಕ ಗುರುತಿಸಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
    ಸಿನಿಮಾ ಕ್ಷೇತ್ರದಲ್ಲೂ ಗುರುತಿಸಿಕೊಂಡು ಸಾಹಿತ್ಯ ಸೇವೆಯಲ್ಲಿ ತೊಡಗಿರುವ ರಾಮಚಾರಿಯವರು ತಮ್ಮದೇ ಸಂಪಾದಕತ್ವದಲ್ಲಿ ನಟ, ಸಮಾಜ ಸೇವಕ, ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್‌ರವರ ಸವಿನೆನಪಿನಲ್ಲಿ 'ಅಪ್ಪು ಅಮರ' ಒಂದು ಅವಲೋಕನ ಎಂಬ ಬೃಹತ್ ಪುಸ್ತಕವನ್ನು ಹೊರತಂದಿದ್ದಾರೆ. ಮೇ.೭ರಂದು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಛೇರಿ ಸಮೀಪದಲ್ಲಿರುವ ನಯನ ಸಭಾಂಗಣದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಪುಸ್ತಕ ಬಿಡುಗಡೆಗೊಳ್ಳಲಿದೆ.
    ವಿಶೇಷ ಎಂದರೆ ರಾಮಚಾರಿಯವರು ಪುಸ್ತಕ ಹೊರತರುವಲ್ಲಿ ಹುಟ್ಟೂರಿನ ಪ್ರಮುಖರ ಸಹಕಾರ ಪಡೆದುಕೊಂಡಿದ್ದಾರೆ.  ಪರಿಸರವಾದಿ, ನಟ ಶಿವರಾಮ್, ಗ್ರಂಥಾಲಯ ಇಲಾಖೆಯ ಕುಮಾರ್ ಭದ್ರಾವತಿ  ಹಾಗು ಎಸ್. ತಾರಾನಾಥ್ ಅವರಿಗೂ  ಸಂಪಾದಕೀಯ ಮಂಡಳಿಯಲ್ಲಿ ಸ್ಥಾನ ನೀಡಿದ್ದಾರೆ. ಇವರೊಂದಿಗೆ ಲೇಖಕ, ಪ್ರಕಾಶಕ ರಮೇಶ್ ಸುರ್ವೆ, ಸುಮಾಲಿನಿ ಹಾಗು ಅಪ್ಪು ವೆಂಕಟೇಶ್ ಸಹ ಕೈಜೋಡಿಸಿದ್ದಾರೆ.
    ಈ ಪುಸ್ತಕ  ಸುಮಾರು ೩೫೦ ಬಹುವರ್ಣದ ಪುಟಗಳನ್ನು ಒಳಗೊಂಡಿದೆ. ಹಿರಿಯ ನಟ ರಾಮಕೃಷ್ಣರವರು ಪುಸ್ತುಕ ಬಿಡುಗಡೆ ಮಾಡಲಿದ್ದಾರೆ. ಚಿತ್ರ ನಿರ್ದೇಶಕ ಓಂ ಸಾಯಿ ಪ್ರಕಾಶ್, ನಿರ್ಮಾಪಕ ಎಸ್.ಎ ಗೋವಿಂದರಾಜ್, ಸಂಗೀತ ನಿರ್ದೇಶಕರಾದ ಗುರುಕಿರಣ್, ವಿ. ಮನೋಹರ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕವಿ ಡಾ. ದೊಡ್ಡರಂಗೇಗೌಡ, ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ.ಸತೀಶ ಕುಮಾರ ಹೊಸಮನಿ, ಡಾ.ಸಿ.ಸೋಮಶೇಖರ್, ಧೀರೆನ್ ರಾಮ್‌ಕುಮಾರ್, ಭಾ.ಮ.ಹರೀಶ್, ನಟಿ ಪ್ರೇಮಾ, ಕಿರುತೆರೆ ನಟಿ ಅಪೂರ್ವ ಡಿ. ಸಾಗರ್, ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾ ಮಂಡಲದ ರಾಜ್ಯಾಧ್ಯಕ್ಷ ಎಲ್.ನಾಗರಾಜಚಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
    ಸಮಾರಂಭದಲ್ಲಿ ಅಖಿಲ ಕರ್ನಾಟಕ ಡಾ.ರಾಜ್ ಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಎನ್.ಆರ್ ರಮೇಶ್‌ರವರಿಗೆ 'ಡಾ.ಪುನೀತ್ ರಾಜ್ ಕುಮಾರ್ ಪ್ರಶಸ್ತಿ' ಹಾಗು ಭದ್ರಾವತಿಯ ಡಾ. ವಿಜಯದೇವಿಯವರ 'ಅಲ್ಲಮ ಪ್ರಭು ದೇವರು', ಕಾವ್ಯ ಕಲ್ಪವಲ್ಲಿಯವರ 'ಮೇರುಗುರು ಕೈವಾರ ತಾತಯ್ಯ', ಗಣೇಶ ವಿ. ಸಾಗರ ಅವರ  'ರಾಮಕಥಾ ಮಿತ್ರ' ಹಾಗು ವಿ.ಟಿ ರಾಮಕೃಷ್ಣಯ್ಯನವರ 'ಊರುಗೋಲಿನ ಸುತ್ತ ಮುತ್ತ' ಕೃತಿಗಳಿಗೆ 'ಸಾಹಿತ್ಯ ಸುಮ ಪ್ರಶಸ್ತಿ' ಪ್ರದಾನ ನಡೆಯಲಿದೆ.
ಬದುಕು ಕಟ್ಟಿಕೊಳ್ಳಬೇಕೆಂಬ ಆಶಯದೊಂದಿಗೆ ಸುಮಾರು ೨ ದಶಕಗಳ ಹಿಂದೆ ಭದ್ರಾವತಿಯಿಂದ ಬೆಂಗಳೂರಿಗೆ ತೆರಳಿದ  ರಾಮಚಾರಿಯವರು ಕಾವ್ಯಸ್ಪಂದನ ಪಬ್ಲಿಕೇಷನ್ ಹುಟ್ಟು ಹಾಕುವ ಮೂಲಕ ಹಲವಾರು ಕವಿಗಳಿಗೆ, ಸಾಹಿತಿಗಳಿಗೆ, ಲೇಖಕರಿಗೆ ನೆರವಾಗಿ ನೂರಾರು ಪುಸ್ತಕಗಳ ಪ್ರಕಾಶಕರಾಗಿ ಹೊರಹೊಮ್ಮಿದ್ದಾರೆ.
    ಪುನೀತ್‌ರಾಜ್‌ಕುಮಾರ್‌ರವರ ಪುಸ್ತಕ ಬಿಡುಗಡೆ ಸಮಾರಂಭ ಯಶಸ್ವಿಗೊಳ್ಳಲು ಎಲ್ಲರೂ ಸಹಕಾರ ನೀಡಬೇಕೆಂದು ರಾಮಾಚಾರಿ ಕೋರಿದ್ದಾರೆ.  

Thursday, May 5, 2022

ಕನ್ನಡ ಭಾಷೆ ಕಲಿಕೆಗೆ ಮಕ್ಕಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ : ಬಿ.ಕೆ ಸಂಗಮೇಶ್ವರ್

ಭದ್ರಾವತಿ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡಿಗರ ಹೆಮ್ಮೆಯ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ ೧೦೮ನೇ ಸಂಸ್ಥಾಪನಾ ದಿನಾಚರಣೆ ಹಾಗು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ದತ್ತಿ ಕಾರ್ಯಕ್ರಮಗಳನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
    ಭದ್ರಾವತಿ, ಮೇ. ೫: ಕನ್ನಡ ಸಾಹಿತ್ಯ ಪರಿಷತ್ ನಾಡು-ನುಡಿಗಾಗಿ ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯವಾಗಿದ್ದು, ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಕನ್ನಡ ಭಾಷೆ ಕಲಿಸುವ ಮೂಲಕ ಭಾಷೆಯ ಬೆಳವಣಿಗೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
    ಅವರು ಗುರುವಾರ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡಿಗರ ಹೆಮ್ಮೆಯ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ ೧೦೮ನೇ ಸಂಸ್ಥಾಪನಾ ದಿನಾಚರಣೆ ಹಾಗು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ದತ್ತಿ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.
    ಕನ್ನಡ ನಾಡಿನ ನೆಲ, ಜಲ ಮತ್ತು ಭಾಷೆಯ ಮೇಲಿನ ಅಭಿಮಾನ ಹೆಚ್ಚಿಸಿಕೊಳ್ಳುವ ಜೊತೆಗೆ ಮಕ್ಕಳಿಗೆ ಕನ್ನಡ ಭಾಷೆ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಬೇಕು. ಆಗ ಮಾತ್ರ ನಮ್ಮ ಭಾಷೆ ಬೆಳವಣಿಗೆ ಹೊಂದಲು ಸಾಧ್ಯ ಎಂದರು.
ಪರಿಷತ್ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಪರಿಷತ್ ಬೆಳೆದು ಬಂದ ದಾರಿ ಹಾಗು ಧ್ಯೇಯೋದ್ದೇಶಗಳನ್ನು ವಿವರಿಸಿದರು.
    ದತ್ತಿದಾನಿಗಳಾದ ಡಾ. ವಿಜಯದೇವಿ, ಡಾ. ಜಿ.ಎಂ ನಟರಾಜ್, ಕರೀಗೌಡ್ರ ನಾಗರಾಜಪ್ಪ ಆರುಂಡಿ ಮತ್ತು ವಾಗೀಶ್ ಕೋಠಿ ಅವರಿಗೆ ಗೌರವ ಸಮರ್ಪಣೆ ನಡೆಯಿತು.
    ನಗರಸಭೆ ಅಧ್ಯಕ್ಷೆ ಗೀತಾರಾಜ್‌ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ, ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಕೋಡ್ಲು ಯಜ್ಞಯ್ಯ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಪರಿಷತ್ ಕಾರ್ಯದರ್ಶಿ ಜಗದೀಶ್ ಸ್ವಾಗತಿಸಿದರು. ಶ್ರೀಧರೇಶ್ ಭಾರದ್ವಾಜ್ ನಿರೂಪಿಸಿದರು. ಎಚ್. ತಿಮ್ಮಪ್ಪ ಸೇರಿದಂತೆಪರಿಷತ್ ಪದಾಧಿಕಾರಿಗಳು, ಮಾಜಿ ಕಾರ್ಯದರ್ಶಿಗಳಾದ ಸಿ. ಚನ್ನಪ್ಪ, ವೈ.ಕೆ ಹನುಮಂತಯ್ಯ, ಶಿಕ್ಷಕಿ ಮಾಯಮ್ಮ, ಹಳೇನಗರ ಮಹಿಳಾ ಸಮಾಜದ ಉಪಾಧ್ಯಕ್ಷೆ ಕಮಲಾಕುಮಾರಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು


ಭದ್ರಾವತಿ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡಿಗರ ಹೆಮ್ಮೆಯ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ ೧೦೮ನೇ ಸಂಸ್ಥಾಪನಾ ದಿನಾಚರಣೆ ಹಾಗು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ದತ್ತಿ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ದತ್ತಿ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ನಗರಸಭೆ ವ್ಯಾಪ್ತಿಯಲ್ಲಿ ಪುನಃ ಪ್ಲಾಸ್ಟಿಕ್ ವಿರುದ್ಧ ಕಾರ್ಯಾಚರಣೆ : ನಿಷೇಧಿತ ಪ್ಲಾಸ್ಟಿಕ್ ವಶ, ದಂಡ

ಭದ್ರಾವತಿ ನಗರಸಭೆ ವ್ಯಾಪ್ತಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆ ಪುನಃ ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ನಗರಸಭೆ ಆಡಳಿತ ಗುರುವಾರ ಅಂಗಡಿ-ಮುಂಗಟ್ಟುಗಳ ಮೇಲೆ ಕಾರ್ಯಾಚರಣೆ ನಡೆಸಿತು.
    ಭದ್ರಾವತಿ, ಮೇ. ೫: ನಗರಸಭೆ ವ್ಯಾಪ್ತಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆ ಪುನಃ ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ನಗರಸಭೆ ಆಡಳಿತ ಗುರುವಾರ ಅಂಗಡಿ-ಮುಂಗಟ್ಟುಗಳ ಮೇಲೆ ಕಾರ್ಯಾಚರಣೆ ಆರಂಭಿಸಿದೆ.
    ಈಗಾಗಲೇ ನಗರಸಭೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧಿಸಲಾಗಿದ್ದು, ಈ ನಡುವೆಯೂ ನಿಷೇಧಿಸಲಾಗಿರುವ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿ ಕಂಡು ಬರುತ್ತಿದೆ. ಈ ಹಿನ್ನಲೆಯಲ್ಲಿ ಪುನಃ ಜಾಗೃತಗೊಂಡಿರುವ ನಗರಸಭೆ ಆಡಳಿತ ಪೌರಾಯುಕ್ತ ಕೆ. ಪರಮೇಶ್ ನೇತೃತ್ವದಲ್ಲಿ ಕಾರ್ಯಾಚರಣೆಗೆ ಮುಂದಾಗಿದೆ.
    ಹಳೇನಗರದ ಬಸವೇಶ್ವರ ವೃತ್ತದಲ್ಲಿರುವ ತರಕಾರಿ ಮಾರುಕಟ್ಟೆ ಸುತ್ತಮುತ್ತ ಹಾಗು ಮಾಧವಚಾರ್ ವೃತ್ತ, ಸಿ.ಎನ್ ರಸ್ತೆ  ಸೇರಿದಂತೆ ಕೆಲವೆಡೆ ಕಾರ್ಯಾಚರಣೆ ನಡೆಸಲಾಗಿದ್ದು, ನಿಷೇಧಿತ ಪಾಸ್ಟಿಕ್ ಮಾರಾಟದಲ್ಲಿ ತೊಡಗಿದ್ದ ಅಂಗಡಿ-ಮುಂಗಟ್ಟುಗಳಿಗೆ ದಂಡ ವಿಧಿಸಲಾಗಿದೆ. ಮೊದಲ ದಿನ ಸುಮಾರು ೬ ಸಾವಿರ ರು. ದಂಡ ವಸೂಲಾತಿ ಮಾಡಲಾಗಿದ್ದು, ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಗಿದೆ.
    ಪೌರಾಯುಕ್ತ ಕೆ. ಪರಮೇಶ್ ಪತ್ರಿಕೆಯೊಂದಿಗೆ ಮಾತನಾಡಿ, ನಿಷೇಧಿಸಲಾಗಿರುವ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ಮೊದಲ ಹಂತದಲ್ಲಿ ಕಾರ್ಯಾಚರಣೆ ನಡೆಸಿ ದಂಡ ವಿಧಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.
    ಕಾರ್ಯಾಚರಣೆಯಲ್ಲಿ ಹಿರಿಯ ಆರೋಗ್ಯ ನಿರೀಕ್ಷಕರಾದ ಆರ್.ಬಿ ಸತೀಶ್, ಆಶಾಲತಾ, ಕಿರಿಯ ಆರೋಗ್ಯ ನಿರೀಕ್ಷಕಿ ಶೃತಿ, ಹೊಸಮನೆ ಪೊಲೀಸ್ ಠಾಣಾಧಿಕಾರಿ ಸುನೀತ, ನಗರಸಭೆ ಮೇಸ್ತ್ರಿ ಎನ್. ಗೋವಿಂದ, ದಾನಂ, ವೆಂಕಟೇಶ್, ಎನ್. ಮಂಜುನಾಥ್, ಅಭಯ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಭಕ್ತರ ಗಮನ ಸೆಳೆದ ಆಕರ್ಷಕ ಸಿಡಿ ಉತ್ಸವ

ಭದ್ರಾವತಿ ಹಳೆನಗರದ ಶ್ರೀ ಹಳದಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಜಾತ್ರಾ ಮಹೋತ್ಸವ ಊರ ಹಬ್ಬದ ಅಂಗವಾಗಿ ಗುರುವಾರ ಬೆಳಗ್ಗೆ ಮಹಾ ಸಿಡಿ ಉತ್ಸವ ಅದ್ಧೂರಿಯಾಗಿ ಜರುಗಿತು.
    ಭದ್ರಾವತಿ, ಮೇ. ೫ : ಹಳೆನಗರದ ಶ್ರೀ ಹಳದಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಜಾತ್ರಾ ಮಹೋತ್ಸವ ಊರ ಹಬ್ಬದ ಅಂಗವಾಗಿ ಗುರುವಾರ ಬೆಳಗ್ಗೆ ಮಹಾ ಸಿಡಿ ಉತ್ಸವ ಅದ್ಧೂರಿಯಾಗಿ ಜರುಗಿತು.
    ಜೆಡಿಎಸ್ ಮುಖಂಡರಾದ ಶಾರದಾ ಅಪ್ಪಾಜಿ ಉತ್ಸವ ಮೆರವಣಿಗೆಯೊಂದಿಗೆ ಆಗಮಿಸಿದ ಶ್ರೀ ಹಳದಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮಹಾ ಸಿಡಿ ಉತ್ಸವಕ್ಕೆ ಚಾಲನೆ ನೀಡಿದರು.
    ಅಂಬೇಡ್ಕರ್ ನಗರದ ನಿವಾಸಿ ಲಿಂಗಪ್ಪ ಸಿಡಿ ಆಡುವ ಮೂಲಕ ಈ ಬಾರಿ ಗಮನ ಸೆಳೆದರು. ಪ್ರತಿ ೨ ವರ್ಷಕ್ಕೊಮ್ಮೆ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಸಿಡಿ ಉತ್ಸವ ಆಕರ್ಷಕ ಸಾಂಪ್ರದಾಯಕ ಆಚರಣೆಯಾಗಿದೆ. ಮಕ್ಕಳ ತೊಟ್ಟಿಲು ಸೇವೆ ಸಿಡಿ ಉತ್ಸವದಲ್ಲಿ ಮತ್ತೊಂದು ಆಕರ್ಷಣೆಯಾಗಿದೆ.
    ಸಿಡಿ ಉತ್ಸವ ವೀಕ್ಷಣೆಗೆ ನಗರದ ವಿವಿಧೆಡೆಗಳಿಂದ ಭಕ್ತಾಧಿಗಳು ಆಗಮಿಸಿದ್ದರು. ಗಣ್ಯರು, ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಸೇವಾಕರ್ತರು  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಶ್ರೀ ಪಿಳ್ಳಂಗಿ ಮಾರಿಯಮ್ಮ ಸೇವಾ ಸಮಿತಿ ವತಿಯಿಂದ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.

Wednesday, May 4, 2022

ಮೇ.೫ರಂದು ಕಸಾಪ ೧೦೮ನೇ ಸಂಸ್ಥಾಪನಾ ದಿನಾಚರಣೆ : ದತ್ತಿ ಕಾರ್ಯಕ್ರಮ

    ಭದ್ರಾವತಿ, ಮೇ. ೪: ಕನ್ನಡಿಗರ ಹೆಮ್ಮೆಯ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ ೧೦೮ನೇ ಸಂಸ್ಥಾಪನಾ ದಿನಾಚರಣೆ ಹಾಗು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ದತ್ತಿ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ಮೇ.೫ರಂದು ಸಂಜೆ ೫ ಗಂಟೆಗೆ ನ್ಯೂಟೌನ್ ಲಯನ್ಸ್ ಕ್ಲಬ್‌ನಲ್ಲಿ ನಡೆಯಲಿದೆ.
    ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಎಸ್‌ಎವಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್. ಹರಿಣಾಕ್ಷಿ ಉಪನ್ಯಾಸ ನೀಡಲಿದ್ದಾರೆ.
    ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಲಿದ್ದು, ನಗರಸಭೆ ಅಧ್ಯಕ್ಷೆ ಗೀತಾರಾಜ್‌ಕುಮಾರ್, ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ, ಕಸಾಪ ಹೊಳೆಹೊನ್ನೂರು ಹೋಬಳಿ ಘಟಕದ ಅಧ್ಯಕ್ಷ ಎಸ್.ಬಿ ಸಿದ್ದಪ್ಪ, ಹಿರಿಯೂರು ಹೋಬಳಿ ಘಟಕದ ಅಧ್ಯಕ್ಷ ಎಚ್.ಬಿ ಸಿದ್ದೋಜಿರಾವ್, ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಕೋಡ್ಲು ಯಜ್ಞಯ್ಯ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
    ದತ್ತಿದಾನಿಗಳಾದ ಡಾ. ವಿಜಯದೇವಿ, ಎನ್. ಶ್ರೀನಿವಾಸ್, ಡಾ. ಜಿ.ಎಂ ನಟರಾಜ್, ಜೀವಂದರ್ ಕುಮಾರ್ ಹೋತಪೇಟಿ, ಪ್ರಭಾಕರ ಬೀರಯ್ಯ, ಕರೀಗೌಡ್ರ ನಾಗರಾಜಪ್ಪ ಆರುಂಡಿ ಮತ್ತು ವಾಗೀಶ್ ಕೋಠಿ ಅವರಿಗೆ ಗೌರವ ಸಮರ್ಪಣೆ ನಡೆಯಲಿದೆ.
    ದತ್ತಿ ನಿಧಿ ಕಾರ್ಯಕ್ರಮ:
    ಸಂಜೆ ೫.೩೦ಕ್ಕೆ ನಡೆಯಲಿರುವ ದಿವಂಗತ ಶಿವಲಿಂಗಮ್ಮ ಮತ್ತು ಡಾ. ಜಿ.ಎಂ ಮುರುಗೇಂದ್ರಯ್ಯ ದತ್ತಿ ಕಾರ್ಯಕ್ರಮದಲ್ಲಿ ಸಾಹಿತ್ಯ ಮತ್ತು ಸಾಮಾಜಿಕ ನ್ಯಾಯ ಕುರಿತು ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ ಉಪನ್ಯಾಸ ನೀಡಲಿದ್ದಾರೆ. ಅಂಧರ ಕೇಂದ್ರದ ಕಲಾವಿದರಿಂದ ಸುಗಮ ಸಂಗೀತ ನಡೆಯಲಿದ್ದು, ನಂತರ ಎಸ್. ಮನೋಜ್ ದತ್ತಿ ಕಾರ್ಯಕ್ರಮ ನಡೆಯಲಿದೆ. ಕಸಾಪ ತಾಲೂಕು ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ದತ್ತಿ ದಾನಿಗಳಾದ ಡಾ. ಜಿ.ಎಂ ನಟರಾಜ್, ಎನ್. ಶ್ರೀನಿವಾಸ್ ಉಪಸ್ಥಿತರಿರುವರು.

ಕಲಿಕಾ ಚೇತರಿಕೆ ಉಪಕ್ರಮದ ತರಬೇತಿ ಸಾರ್ಥಕಗೊಳಿಸಿ : ಮಂಜುನಾಥ್

ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಭದ್ರಾವತಿ ನ್ಯೂಟೌನ್ ಸೆಂಟ್ ಚಾರ್ಲ್ಸ್ ಶಾಲೆಯಲ್ಲಿ ಅಯೋಜಿಸಲಾಗಿದ್ದ ಕಲಿಕಾ ಚೇತರಿಕೆ ತರಬೇತಿ ಕಾರ್ಯಾಗಾರ ಸಾರ್ವಜನಿಕ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ(ಚಿತ್ರದುರ್ಗ) ಮಂಜುನಾಥ್ ಉದ್ಘಾಟಿಸಿ ಮಾತನಾಡಿದರು.
    ಭದ್ರಾವತಿ, ಮೇ. ೪: ಕೋವಿಡ್-೧೯ ಕರಾಳತೆಯಲ್ಲಿ ಮಕ್ಕಳು ಕಲಿಕೆಯಿಂದ ವಂಚಿತರಾಗಿದ್ದು, ಇದನ್ನು ಸರಿದೊಗಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ  ಕಲಿಕಾಚೇತರಿಕೆ ಉಪಕ್ರಮಗಳನ್ನು ಜಾರಿಗೆ ತಂದಿದೆ. ಶಿಕ್ಷಕರು ತರಬೇತಿ ಮೂಲಕ ಪ್ರತಿ ಮಗುವಿಗೆ ಈ ಉಪಕ್ರಮಗಳನ್ನು ಸಮರ್ಪಕವಾಗಿ ತಲುಪಿಸುವ ಕಾರ್ಯ ಕೈಗೊಳ್ಳಬೇಕಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ(ಚಿತ್ರದುರ್ಗ) ಮಂಜುನಾಥ್ ಹೇಳಿದರು.
    ಅವರು ಬುಧವಾರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನಗರದ ನ್ಯೂಟೌನ್ ಸೆಂಟ್ ಚಾರ್ಲ್ಸ್ ಶಾಲೆಯಲ್ಲಿ ಅಯೋಜಿಸಲಾಗಿದ್ದ ಕಲಿಕಾ ಚೇತರಿಕೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು
    ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ಕಾರ್ಯಾಗಾರದಲ್ಲಿ ತಾಲೂಕಿನ ಶಾಲಾ ಶಿಕ್ಷಕರಿಗೆ ಎಲ್ಲಾ ವಿಷಯಗಳ ಕುರಿತು ಒಟ್ಟು ೧೬ ಘಟಕಗಳಲ್ಲಿ ತರಬೇತಿ ನೀಡಲಾಗುತ್ತದೆ. ಶಿಕ್ಷಕರು ಇದರ ಸದುಪಯೋಗಪಡೆದುಕೊಂಡು ಸಾರ್ಥಕಗೊಳಿಸಬೇಕೆಂದರು.
    ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ  ಮಾತನಾಡಿ, ಶಿಕ್ಷಕರು ತರಬೇತಿ ಸದ್ಬಳಕೆ ಮಾಡಿಕೊಂಡು ತಾಲೂಕಿನ ಎಲ್ಲಾ ಶಾಲೆಯ ಪ್ರತಿ ಮಗುವಿನ ಕಲಿಕೆಯ ನಷ್ಟವನ್ನು ಈ ಮೂಲಕ ಸರಿದೊಗಿಸಿ ಎಂದರು.
    ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಗಣೇಶ್, ಟಿಪಿಇಓ ಪ್ರಭು, ಶಿಕ್ಷಣ ಸಂಯೋಜಕರುಗಳಾದ ರವಿಕುಮಾರ್, ಜ್ಯೋತಿ,  ಶ್ಯಾಮಲಾ  ಮತ್ತು ಬಿಆರ್‌ಪಿ ನವೀದ್ ಅಹಮದ್, ಎಂಅರ್‌ಪಿಗಳಾದ ಪಿ.ಕೆ ಸತೀಶ್, ಮಾಯಮ್ಮ, ಮಂಜುನಾಥ್ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪೃಥ್ವಿ ರಾಜ್ ಹಾಗು ಸಂಪನ್ಮೂಲ ವ್ಯಕ್ತಿಗಳು ಸೇರಿದಂತೆ  ಇನ್ನಿತರರು ಉಪಸ್ಥಿತರಿದ್ದರು.  ತಾಲೂಕಿನ ವಿವಿಧ ಶಾಲೆಗಳ ಶಿಕ್ಷಕರು  ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದರು.

ಉದ್ಯೋಗ ಖಾತ್ರಿ ಯೋಜನೆ : ವಿಕಲಚೇತನರ ನೋಂದಾಣಿ


ಭದ್ರಾವತಿ :  ತಾಲೂಕಿನ ಅರಕೆರೆ ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ದುಡಿಯೋಣ ಬಾ ಅಭಿಯಾನದಲ್ಲಿ ಬುಧವಾರ ವಿಶೇಷವಾಗಿ ವಿಲಚೇತನರ  ನೋಂದಾಣಿ ನಡೆಸಲಾಯಿತು.
 ಉದ್ಯೋಗ ಚೀಟಿ ವಿತರಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಡಿ ಶೇಖರಪ್ಪ, ಖಾತ್ರಿ ಯೋಜನೆಯಲ್ಲಿ ವಿಕಲಚೇತನರಿಗೆ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ. ಕೆಲಸದಲ್ಲಿ ಶೇ. 50ರಷ್ಟು ರಿಯಾಯಿತಿ ನೀಡಲಾಗಿದೆ.  ದಿನದ ಕೂಲಿ 309 ರು. ಜೊತೆಗೆ 10 ರು. ಹೆಚ್ಚುವರಿಯಾಗಿ ಸಲಕರಣೆ ವೆಚ್ಚವಾಗಿ ನೀಡಲಾಗುವುದು. ಇದರ ಸದುಪಯೋಗ ಪಡೆದುಕೊಂಡು ವಿಕಲಚೇತನರು ಸಹ ಆರ್ಥಿಕವಾಗಿ ಸದೃಢ ಹೊಂದುವಂತೆ ಮನವಿ ಮಾಡಿದರು.
          ಗ್ರಾಮ ಪಂಚಾಯಿತಿ ಸದಸ್ಯ  ಎಸ್.ಎಲ್ ರವಿಕುಮಾರ್ , ಪಿಡಿಓ ಸುರೇಶ್ ಕುಮಾರ್ , ಎಸ್ ಡಿಎ ಭಾಸ್ಕರ್, ವಿ ಆರ್ ಡಬ್ಲ್ಯೂ ಪರಮೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು .