Thursday, August 18, 2022

ಮನೆಗಳ್ಳತನ ಓರ್ವನ ಸೆರೆ : ನಗದು, ಚಿನ್ನಾಭರಣ ವಶ

ಮನೆಯ ಬೀಗ ತೆಗೆದು ನಗದು, ಚಿನ್ನಾಭರಣ ಕಳ್ಳತನ ಮಾಡಿದ್ದ ಓರ್ವ ಮನೆಗಳ್ಳನನ್ನು ಭದ್ರಾವತಿ ಪೊಲೀಸರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿರುವ ಘಟನೆ ಗುರುವಾರ ನಡೆದಿದೆ.
    ಭದ್ರಾವತಿ, ಆ.೧೮: ಮನೆಯ ಬೀಗ ತೆಗೆದು ನಗದು, ಚಿನ್ನಾಭರಣ ಕಳ್ಳತನ ಮಾಡಿದ್ದ ಓರ್ವ ಮನೆಗಳ್ಳನನ್ನು ಪೊಲೀಸರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿರುವ ಘಟನೆ ಗುರುವಾರ ನಡೆದಿದೆ.
    ಹೊಸಮನೆ ೩ನೇ ತಿರುವಿನ ನಿವಾಸಿ ವಸಂತರಾಜು(೩೭) ಬಂಧಿತನಾಗಿದ್ದು, ಈತನಿಂದ ಒಟ್ಟು ೫,೮೯,೫೦೦ ರು. ಮೌಲ್ಯದ ಒಟ್ಟು ೧೩೧ ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
    ಈತ ಜ.೧೧, ೨೦೨೧ರಂದು ಹಳೇನಗರದ ಭೂತನಗುಡಿಯಲ್ಲಿ ಮನೆಯೊಂದರಲ್ಲಿ ಮನೆಯವರು ಮನೆಗೆ ಬೀಗ ಹಾಕಿ ತುಳಿಸಿ ಕಟ್ಟೆ ಹತ್ತಿರ ಬೀಗದ ಕೈ ಇಟ್ಟು ಹೊರ ಹೋಗಿದ್ದು, ಈ ಸಂದರ್ಭದಲ್ಲಿ ಮನೆಯ ಬೀಗ ತೆಗೆದು ಬೀರುವಿನಲ್ಲಿದ್ದ ನಗದು ಹಾಗು ಚಿನ್ನಾಭರಣ ಮತ್ತು ಮೊಬೈಲ್ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ ಈ ಸಂಬಂಧ ಪ್ರಕರಣ ದಾಖಲಾಗಿತ್ತು.
    ನಗರ ಪೊಲೀಸ್ ವೃತ್ತ ನಿರೀಕ್ಷಕರು, ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣಾಧಿಕಾರಿ ಹಾಗು ಸಿಬ್ಬಂದಿಗಳನ್ನೊಳಗೊಂಡ ತಂಡ ರಚಿಸಲಾಗಿತ್ತು. ತಂಡ ಈತನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಈತನ ವಿರುದ್ಧ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆ ಮತ್ತು ಹಳೇನಗರ ಪೊಲೀಸ್ ಠಾಣೆಯಲ್ಲಿ ತಲಾ ಒಂದೊಂದು ಮನೆಗಳ್ಳತನ ಪ್ರಕರಣಗಳು ದಾಖಲಾಗಿವೆ .

ಪರಿಶಿಷ್ಟ ಜಾತಿ/ಪಂಗಡದ ವಿದ್ಯಾರ್ಥಿಗಳಿಗೆ ಹಿಂದಿನ ಶುಲ್ಕ ವಿಧಿಸಿ


ಭದ್ರಾವತಿ ತಾಲೂಕಿನ ಕುವೆಂಪು ವಿಶ್ವವಿದ್ಯಾಲಯ ಬಿಇಡಿ ಪರಿಶಿಷ್ಟ ಜಾತಿ/ಪಂಗಡದ ವಿದ್ಯಾರ್ಥಿಗಳಿಗೆ ಪ್ರಸ್ತುತ ಹೆಚ್ಚಿನ ಪರೀಕ್ಷಾ ಶುಲ್ಕ ನಿಗದಿಪಡಿಸಿರುವುದನ್ನು ವಿರೋಧಿಸಿ ಗುರುವಾರ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಮತ್ತು ದಲಿತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಬಿ.ಇಡಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.  
    ಭದ್ರಾವತಿ, ಆ. ೧೮: ತಾಲೂಕಿನ ಕುವೆಂಪು ವಿಶ್ವವಿದ್ಯಾಲಯ ಬಿಇಡಿ ಪರಿಶಿಷ್ಟ ಜಾತಿ/ಪಂಗಡದ ವಿದ್ಯಾರ್ಥಿಗಳಿಗೆ ಪ್ರಸ್ತುತ ಹೆಚ್ಚಿನ ಪರೀಕ್ಷಾ ಶುಲ್ಕ ನಿಗದಿಪಡಿಸಿದ್ದು, ಇದರಿಂದ ವಿದ್ಯಾರ್ಥಿಗಳು ಸಂಕಷ್ಟ ಎದುರಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಈ ಹಿಂದಿನ ಶುಲ್ಕ ನಿಗದಿಪಡಿಸಬೇಕೆಂದು ಆಗ್ರಹಿಸಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
    ವಿಶ್ವವಿದ್ಯಾಲಯ ವ್ಯಾಪ್ತಿಯ ಪರಿಶಿಷ್ಟ ಜಾತಿ ಪಂಗಡದ ವಿದ್ಯಾರ್ಥಿಗಳಿಗೆ ಏಕಾಏಕಿ ಪರೀಕ್ಷಾ ಶುಲ್ಕ ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ. ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ಸರ್ಕಾರದ ಆದೇಶದಂತೆ ರು. ೨೨೦ ನಿಗದಿಪಡಿಸಲಾಗಿದೆ. ಆದರೆ ಕುವೆಂಪು ವಿಶ್ವ ವಿದ್ಯಾಲಯದಲ್ಲಿ ಮಾತ್ರ ಹೆಚ್ಚುವರಿ ಶುಲ್ಕ ಭರಿಸಲು ಕುಲಸಚಿವರು(ಮೌಲ್ಯಮಾಪನ) ವಿಶೇಷ ಸೂಚನೆ ಮೂಲಕ ಆದೇಶ ಹೊರಡಿಸಿದ್ದಾರೆ. ಇದರಿಂದಾಗಿ ಬಡ ವಿದ್ಯಾರ್ಥಿಗಳು ತೊಂದರೆ ಎದುರಿಸುವಂತಾಗಿದೆ. ಈಗಾಗಲೇ ಹಲವಾರು ಬಾರಿ ಈ ಸಂಬಂಧ ಮನವಿ ಮಾಡಲಾಗಿದೆ. ಆದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಈಗಾಗಲೇ ಪರೀಕ್ಷಾ ದಿನಾಂಕ ಸಹ ನಿಗದಿಪಡಿಸಲಾಗಿದೆ. ಈ ಹಿನ್ನಲೆಯಲ್ಲಿ ತಕ್ಷಣ ಈ ಹಿಂದಿನ ಪರೀಕ್ಷಾ ಶುಲ್ಕವನ್ನು ಪಾವತಿಸಲು ಆದೇಶ ಹೊರಡಿಸಬೇಕು. ಇಲ್ಲವಾದಲ್ಲಿ ಉಪವಾಸ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಮತ್ತು ದಲಿತ ವಿದ್ಯಾರ್ಥಿ ಪರಿಷತ್ ಪ್ರಮುಖರು ಎಚ್ಚರಿಸಿದರು.

ಕಲಾವಿದ ವೈ.ಕೆ ಹನುಮಂತಯ್ಯರಿಗೆ ರಂಗಭೂಮಿ ದತ್ತಿ ಪ್ರಶಸ್ತಿ


ಭದ್ರಾವತಿ ತಾಲೂಕಿನ ಬಿ.ಆರ್ ಪ್ರಾಜೆಕ್ಟ್ ಪತ್ರ ಸಂಸ್ಕೃತಿ ಸಂಘಟನೆ ಮತ್ತು ರಾಮನಗರ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಬಿಆರ್‌ಪಿ  ಕೆಪಿಟಿಸಿಎಲ್.ಸಾಂಸ್ಕೃತಿಕ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಹಿರಿಯ ರಂಗಭೂಮಿ ಕಲಾವಿದ ವೈ.ಕೆ ಹನುಮಂತಯ್ಯ ಅವರಿಗೆ ದಿವಂಗತ ದೇಶೀಗೌಡ ಮತ್ತು ನಿಂಗಮ್ಮನವರ ರಂಗಭೂಮಿ ದತ್ತಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು
    ಭದ್ರಾವತಿ, ಆ. ೧೮: ತಾಲೂಕಿನ ಬಿ.ಆರ್ ಪ್ರಾಜೆಕ್ಟ್ ಪತ್ರ ಸಂಸ್ಕೃತಿ ಸಂಘಟನೆ ಮತ್ತು ರಾಮನಗರ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಬಿಆರ್‌ಪಿ  ಕೆಪಿಟಿಸಿಎಲ್.ಸಾಂಸ್ಕೃತಿಕ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ನಿವೃತ್ತ ಇಂಜಿನಿಯರ್, ಸಾಹಿತಿ ಹೊಸಹಳ್ಳಿ ದಾಳೇಗೌಡ ಅವರು ರಚಿಸಿದ ಬಾರಿಸು ಕನ್ನಡ ಡಿಂಡಿಮವ ಮತ್ತು ಇತರೆ ನಾಟಕಗಳು ಕೃತಿ ಲೋಕಾರ್ಪಣೆ, ಪಿಸುಮಾತು ಪುರುಷ ಸಂಚಿಕೆ ಬಿಡುಗಡೆ, ರಂಗಭೂಮಿ ದತ್ತಿ ಪ್ರಶಸ್ತಿ ಪ್ರದಾನ ಹಾಗು ಕಲಾವಿದರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಹಿರಿಯ ರಂಗಭೂಮಿ ಕಲಾವಿದ ವೈ.ಕೆ ಹನುಮಂತಯ್ಯ ಅವರಿಗೆ ದಿವಂಗತ ದೇಶೀಗೌಡ ಮತ್ತು ನಿಂಗಮ್ಮನವರ ರಂಗಭೂಮಿ ದತ್ತಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
    ವೈ.ಕೆ ಹನುಮಂತಯ್ಯ ಅವರು ಹಿರಿಯ ರಂಗಭೂಮಿ ಕಲಾವಿದರಾಗಿದ್ದು, ನಗರದ ಹಲವಾರು ರಂಗತಂಡಗಳಲ್ಲಿ ಸೇವೆ ಸಲ್ಲಿಸಿದ್ದು, ಅಲ್ಲದೆ ವಿವಿಧ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇವರ ಕಲಾ ಸೇವೆಗೆ ಹಲವಾರು ಪ್ರಶಸ್ತಿಗಳು ಲಭಿಸಿದ್ದು, ವಿವಿಧ ಸಂಘ-ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ. ಇದೀಗ ದಿವಂಗತ ದೇಶೀಗೌಡ ಮತ್ತು ನಿಂಗಮ್ಮನವರ ರಂಗಭೂಮಿ ದತ್ತಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.  
    ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಆಧ್ಯಕ್ಷ ಡಿ. ಮಂಜುನಾಥ ಕಾರ್ಯಕ್ರಮ ಉದ್ಘಾಟಿಸಿದರು. ಹೊಸಹಳ್ಳಿ ದಾಳೇಗೌಡ ಅಧ್ಯಕ್ಷತೆ ವಹಿಸಿದ್ದರು. ವಿಶ್ರಾಂತ ಪ್ರಾಂಶುಪಾಲರಾದ ಡಾ. ಕೂಡ್ಲೂರು ವೆಂಕಟಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು.  ನಾಟಕ ಕೃತಿ ಹಿರಿಯ ಸಾಹಿತಿ ಅಂಬ್ರಯ್ಯಮಠ ಮಾತನಾಡಿದರು.
    ರಾಮನಗರ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಹಾಗು ಬುದ್ಧ ಬಸವ ಗಾಂಧಿ ಟ್ರಸ್ಟ್ ಅಧ್ಯಕ್ಷ ಡಾ. ರಾಮಲಿಂಗೇಶ್ವರ (ಸಿಸಿರಾ), ವಿಜಯ ಕಾಲೇಜು ಉಪ ಪ್ರಾಂಶುಪಾಲರಾದ ಡಾ. ಶಾಂತರಾಜು,  ತಾಲೂಕು ಕಸಾಪ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಭದ್ರಾವತಿ ಘಟನೆಯನ್ನು ಸಮರ್ಥವಾಗಿ ನಿಭಾಯಿಸಿದ ಶಾಸಕ ಬಿ.ಕೆ ಸಂಗಮೇಶ್

ಎಂ.ರಮೇಶ್ ಶಂಕರಘಟ್ಟ ಅಭಿಮತ


    ಭದ್ರಾವತಿ ಆ.18: ಇತ್ತೀಚೆಗೆ  ಕ್ಷುಲ್ಲಕ ಕಾರಣಕ್ಕಾಗಿ ನಡೆದ ವೈಯಕ್ತಿಕ ವಿಚಾರವನ್ನು ಇಟ್ಟುಕೊಂಡು ತಾಲ್ಲೂಕಿನಲ್ಲಿ ಶಾಂತಿ ಕದಡಲು ಯತ್ನಿಸಿದವರ ಬಣ್ಣ ಬಯಲು ಮಾಡುವುದರ ಮೂಲಕ  ಘಟನೆಯನ್ನು ಅತ್ಯಂತ ಸಮರ್ಥವಾಗಿ ಶಾಸಕ ಬಿ.ಕೆ ಸಂಗಮೇಶ್  ನಿಭಾಗಯಿಸಿದರು ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ವಕ್ತಾರ ಹಾಗೂ ಭದ್ರಾವತಿ ಗ್ರಾಮಾಂತರ ಹಿಂದುಳಿದ ವರ್ಗಗಳ ವಿಭಾಗ ಅಧ್ಯಕ್ಷ ಎಂ.ರಮೇಶ್ ಶಂಕರಘಟ್ಟ ಅಭಿಪ್ರಾಯಪಟ್ಟಿದ್ದಾರೆ.
    ಅವರು  ಈ ಕುರಿತು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿ, ಶಾಸಕರು ಘಟನೆ ನಡೆದ ಆರಂಭದಿಂದಲೂ ಇದೊಂದು ಪರಸ್ಪರ ವೈಯಕ್ತಿಕ ಜಗಳವಾಗಿದ್ದು, ಇದಕ್ಕೂ ಶಿವಮೊಗ್ಗದಲ್ಲಿ ನಡೆದಿರುವ ಘಟನೆಗೂ ಯವುದೇ ಸಂಬಂಧವಿಲ್ಲವೆಂದು ಸಾಕಷ್ಟು ಸಾಕ್ಷಿಗಳೊಂದಿಗೆ ಪ್ರತಿಪಾಧಿಸುತ್ತಲೇ ಬಂದಿದ್ದರೂ, ಕೆಲವು ಕಾಣದ ಕೈಗಳು ಈ ಪ್ರಕರಣದ ದುರ್ಲಾಭ ಪಡೆಯಲು ಘಟನೆಯ ದಿಕ್ಕು ಬದಲಾಯಿಸಲು ಪ್ರಯತ್ನಿಸಿದ್ದವು. ಆದರೂ ಸಹಾ ಕೆಲವು ಮುಖಂಡರುಗಳು ಭದ್ರಾವತಿಗೆ ಪದೇ ಪದೇ ಭೇಟಿ ನೀಡಿ ಶಾಂತಿ ಕದಡಲು ಯತ್ನಿಸಿದ್ದವರ ಕಾರ್ಯವೈಖರಿಯನ್ನು ಉಗ್ರವಾದ ಮಾತುಗಳಲ್ಲಿ ಖಂಡಿಸಿದ್ದರು. .
    ಯಾವಾಗ ಎಡಿಜಿಪಿ ಆಲೋಕ್ ಕುಮಾರ್ ಇವರು ಭದ್ರಾವತಿಯಲ್ಲಿ ನಡೆದ ಘಟನೆಗೂ, ಶಿವಮೊಗ್ಗದ ಘಟನೆಗೂ ಸಂಬಂಧವಿಲ್ಲ. ಕೆಲವರಿಂದ ಆಗಬಹುದಾಗಿದ್ದ ಪಿತೂರಿಗೆ ಪೊಲೀಸರಿಂದ ಕಡಿವಾಣ ಹಾಕಲಾಗಿದೆ ಎಂದು ಹೇಳಿಕೆ ನೀಡಿದರೂ ಆಗ ಶಾಂತಿ ಕದಡಲು ಯತ್ನಿಸಿದವರು ತೆಪ್ಪಗಾದರು ಎಂದು ತಿಳಿಸಿದರು.
    ಶಾಸಕ ಸಂಗಮೇಶ್ವರ ಜನಪ್ರಿಯ ಸಹಿಸಿದ ಕೆಲವು ಪಕ್ಷಗಳು ಇಂತಹ ಘಟನೆಗಳನ್ನು ಬಳಸಿಕೊಂಡು ಅವರ ಹೆಸರಿಗೆ ಕಳಂಕ ತರುವ ಯತ್ನ ಹಲವು ವರ್ಷಗಳಿಂದ ನಡೆಸುತ್ತಲೇ ಬಂದಿದ್ದರೂ ಆ ಪ್ರಯತ್ನದಲ್ಲಿ ವಿಫಲರಾಗುತ್ತಿದ್ದಾರೆ. ಇನ್ನು ಮುಂದಾದರೂ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ರಾಜಕಾರಣಿಗಳು ಇಂತಹ ಹೀನಕೃತ್ಯಕ್ಕೆ ಕೈ ಹಾಕಿ ಕ್ಷೇತ್ರದಲ್ಲಿ ಆಶಾಂತಿಯನ್ನು ಉಂಟುಮಾಡುವುದನ್ನು ಕೈ ಬಿಡಬೇಕೆಂದು ರಮೇಶ್ ಆಗ್ರಹಿಸಿದ್ದಾರೆ.

Wednesday, August 17, 2022

ಶಿವಮೊಗ್ಗದ ಈ ನಾಲ್ಕು ಅದ್ಭುತಗಳಿಗೆ ವೋಟ್ ಮಾಡಿ ಭರದಿಂದ ಸಾಗಿದೆ ಕರ್ನಾಟಕದ ಏಳು ಅದ್ಭುತ ಅಭಿಯಾನ

ಇದರಲ್ಲಿ ನೀವು ಪಾಲ್ಗೊಳ್ಳಿ

ಶಿವಮೊಗ್ಗ:  ವಿಶ್ವದ ಏಳು ಅದ್ಭುತಗಳ ಮಾದರಿಯಲ್ಲಿ ಕರ್ನಾಟಕದ ಏಳು ಅದ್ಭುತಗಳನ್ನು ಗುರುತಿಸಲು ಈಗ ರಾಜ್ಯವ್ಯಾಪಿ ಅಭಿಯಾನ ನಡೆಯುತ್ತಿದೆ. ಈ ವಿಶೇಷ ಅಭಿಯಾನದಲ್ಲಿ ನೀವು ಪಾಲ್ಗೊಂಡು ಶಿವಮೊಗ್ಗದ ಅದ್ಭುತಗಳನ್ನು ಕರುನಾಡಿನ ಏಳು ಅದ್ಭುತಗಳ ಸಾಲಿನಲ್ಲಿ ನಿಲ್ಲಿಸುವ ಸುವರ್ಣಾವಕಾಶವಿದೆ.
ಶಿವಮೊಗ್ಗ ಜಿಲ್ಲೆಯ ನಾಲ್ಕು ಸ್ಥಳಗಳು ಈಗಾಗಲೇ ಕರ್ನಾಟಕದ ನೂರು ಅದ್ಭುತಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಈ ನಾಲ್ಕು ಸ್ಥಳಗಳಿಗೆ ವೋಟ್ ಮಾಡುವ ಮೂಲಕ ನೀವು ಇವುಗಳನ್ನು ರಾಜ್ಯದ ಅದ್ಭುತವನ್ನಾಗಿ ಮಾಡಬಹುದು.
ಶಿವಮೊಗ್ಗದ ನಾಮ ನಿರ್ದೇಶನಗಳು :
ರಾಜ, ರಾಕೆಟ್‌, ರೋರರ್‌, ಲೇಡಿ ಎಂಬ ಶರಾವತಿಯ ನಾಲ್ಕು ಧಾರೆಗಳು ಅಬ್ಬರಿಸಿ ಭೋರ್ಗರೆಯುವ ಜಗತ್ಪ್ರಸಿದ್ಧ ಜೋಗ ಜಲಪಾತ. ಸಹ್ಯಾದ್ರಿ ಶ್ರೇಣಿಯ ಮಳೆಕಾಡಿನಲ್ಲಿರುವ ಸಮುದ್ರಮಟ್ಟದಿಂದ ೧೩೫೪ ಮೀಟರ್‌ ಎತ್ತರದಲ್ಲಿರುವ ಚಾರಣಿಗರ ನೆಚ್ಚಿನ ತಾಣ ಕೊಡಚಾದ್ರಿ ಬೆಟ್ಟ. ದಕ್ಷಿಣದ ಚಿರಾಪುಂಜಿ ಎಂಬ ಹಿರಿಮೆ ಹೊಂದಿದ್ದ ಅದ್ಭುತ ಪ್ರಕೃತಿ ಸೌಂದರ್ಯದ, ಸೂರ್ಯಾಸ್ತ ವೀಕ್ಷಣೆಗೂ ಪ್ರಸಿದ್ಧವಾದ ತಾಣ ಆಗುಂಬೆ ಘಾಟಿ. ೧೫೦೦ ವರ್ಷ ಹಳೆಯ, ಹಲ್ಮಿಡಿಗಿಂತಲೂ ಪುರಾತನವಾದ ಶಾಸನ ತಾಳಗುಂದ ಶಿಲಾ ಶಾಸನ.
ಈಗಾಗಲೇ https://www.7wondersofkarnataka.com ನಲ್ಲಿ ನಾಮನಿರ್ದೇಶನಗೊಂಡಿರುವ ನೂರು ಅದ್ಭುತಗಳ ಸಾಲಿನಲ್ಲಿ ನಿಂತಿರುವ ಶಿವಮೊಗ್ಗದ ಈ ನಾಲ್ಕು ಸ್ಥಳಗಳ ಪೈಕಿ ನಿಮ್ಮ ಆಯ್ಕೆಯ ಸ್ಥಳಕ್ಕೆ ತಲಾ 10 ವೋಟ್ ಮಾಡಿ ಇವನ್ನು ರಾಜ್ಯದ ಏಳು ಅದ್ಭುತಗಳನ್ನಾಗಿಸಬಹುದು.
ಪ್ರಸ್ತುತ 100 ಅದ್ಭುತಗಳ ಪಟ್ಟಿಯಲ್ಲಿರುವ ಸ್ಥಳಗಳಲ್ಲಿ ಅತಿ ಹೆಚ್ಚು ವೋಟ್ ಪಡೆದ ಸ್ಥಳಗಳು ಮುಂದಿನ ಹಂತದಲ್ಲಿ ಅಂತಿಮ 49ರ ಪಟ್ಟಿಗೆ ಬರಲಿವೆ. ತದನಂತರ ಅಂತಿಮ 21ರ ಪಟ್ಟಿಯಲ್ಲಿ ಉಳಿದು ಬಳಿಕ ಪ್ರವಾಸೋದ್ಯಮ ಇಲಾಖೆ ತಜ್ಞರ ಸಮಿತಿಯ ಆಯ್ಕೆಯಂತೆ ಕರ್ನಾಟಕದ ಏಳು ಅದ್ಭುತಗಳ ಸಾಲಿನಲ್ಲಿ ನಿಲ್ಲಬಹುದು. ಹೀಗಾಗಿ ಶಿವಮೊಗ್ಗ ಜಿಲ್ಲೆಯ ಪ್ರತಿಯೊಬ್ಬರೂ ತಮ್ಮ ಪಾಲಿನ ಹತ್ತು ವೋಟ್‌ಗಳನ್ನು ತಮ್ಮ ನೆಚ್ಚಿನ ಸ್ಥಳಕ್ಕೆ ನೀಡಬಹುದು. ಜತೆಗೆ ಸ್ನೇಹಿತರು, ಕುಟುಂಬ ಸದಸ್ಯರೂ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಬಹುದು.
ಏನಿದು ಅಭಿಯಾನ?:
ಪ್ರಪಂಚದ ಏಳು ಅದ್ಭುತಗಳನ್ನು ಎಂದೋ ಹುಡುಕಿಯಾಗಿದೆ. ಅದೇ ಮಾದರಿಯಲ್ಲಿ ಕರ್ನಾಟಕದ ಏಳು ಅದ್ಭುತಗಳನ್ನು ಗುರುತಿಸಲು 'ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್' ಸಂಸ್ಥೆಯು ಪ್ರವಾಸೋದ್ಯಮ ಇಲಾಖೆಯ ಸಹಭಾಗಿತ್ವದಲ್ಲಿ ಈ ವಿಶಿಷ್ಟ ಅಭಿಯಾನ ಹಮ್ಮಿಕೊಂಡಿದೆ.
'ಕರ್ನಾಟಕ ಒಂದು ರಾಜ್ಯ ಹಲವು ಜಗತ್ತು' ಎಂದೇ ಪ್ರಸಿದ್ಧಿ. ಇಂತಹ ಕರ್ನಾಟಕದ ಸುಂದರ ಕರಾವಳಿತೀರ, ದುರ್ಗಮ ಕಾನನಗಳು, ರಮಣೀಯ ಜಲಪಾತಗಳು, ಸಮುದ್ರ ತೀರಗಳು, ಐತಿಹಾಸಿಕ ಸ್ಥಳಗಳನ್ನು ಇಂತಹ ಹಲವು ಜಗತ್ತುಗಳನ್ನು ಒಳಗೊಂಡಿದೆ. ಈ ಪೈಕಿ ಏಳು ಅದ್ಭುತಗಳನ್ನು ಸಾರ್ವಜನಿಕರೇ ಗುರುತಿಸಲು ರೂಪಿಸಿರುವ ವೇದಿಕೆಯೇ 'ಬನ್ನಿ ಹುಡುಕೋಣ ಕರ್ನಾಟಕದ ಏಳು ಅದ್ಭುತಗಳನ್ನು' ಎಂಬ ಈ ಅಭಿಯಾನ.



ಯಾವ ಹಂತದಲ್ಲಿದೆ ಅಭಿಯಾನ?:
ಮೇ ತಿಂಗಳಲ್ಲಿ ಚಾಲನೆ ದೊರೆತಿರುವ ಆರು ಹಂತದ ಈ ಅಭಿಯಾನ ಎರಡನೇ ಹಂತಕ್ಕೆ ತಲುಪಿದೆ. ಮೊದಲ ಹಂತದಲ್ಲಿ ಸಾರ್ವಜನಿಕರು ವೆಬ್‌ಸೈಟ್ ಮೂಲಕ ತಮ್ಮ ನೆಚ್ಚಿನ ಊರು, ಜಿಲ್ಲೆ, ತಾಲೂಕು ಸೇರಿ ರಾಜ್ಯದ ಯಾವುದೇ ಜಾಗದಲ್ಲಿ ತಾವು ನೋಡಿದ ಅದ್ಭುತ ಪ್ರವಾಸೀ ಸ್ಥಳ, ಪಾರಂಪರಿಕ ತಾಣ, ಅತ್ಯಾಧುನಿಕ ಕಟ್ಟಡ, ರಸ್ತೆ ಹೀಗೆ ಅದ್ಭುತ ಎನಿಸುವ ಸ್ಥಳದ ಫೋಟೊ ಅಪ್‌ಲೋಡ್ ಮಾಡಿ ಆ ಸ್ಥಳದ ವೈಶಿಷ್ಟ್ಯವನ್ನು ದಾಖಲು ಮಾಡಿ ನಾಮನಿರ್ದೇಶನ ಮಾಡಿದ್ದಾರೆ.
ಇದೀಗ, ಎರಡನೇ ಹಂತದಲ್ಲಿ ಸಾರ್ವಜನಿಕರಿಂದ ನಾಮನಿರ್ದೇಶನಗೊಂಡ ಅದ್ಭುತಗಳಲ್ಲಿ 100 ಸ್ಥಳಗಳನ್ನು ಆಯ್ಕೆ ಮಾಡಿ, ಅತ್ಯದ್ಭುತ ತಾಣಗಳು ಯಾವುವು ಎಂಬ ಬಗ್ಗೆ ವೋಟಿಂಗ್‌ ನಡೆಯುತ್ತಿದೆ.
ವೋಟಿಂಗ್ ನಿಯಮ:
- ಆಯ್ಕೆಯಾಗಿರುವ ನೂರು ಅದ್ಭುತಗಳಿಗೂ ವೋಟ್ ಹಾಕಬಹುದು.
- ಪ್ರತಿಯೊಂದು ಅದ್ಭುತಕ್ಕೂ ಹತ್ತು ವೋಟ್ ಮಾಡಲು ಅವಕಾಶವಿರುತ್ತದೆ.
- ಈ ಮೆಗಾ ಅಭಿಯಾನದ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರಿಗೂ ತಿಳಿಸಿ.
-ತನ್ಮೂಲಕ ನಿಮ್ಮ ಜಿಲ್ಲೆಯ ಸ್ಥಳವನ್ನು ಅದ್ಭುತವನ್ನಾಗಿಸಿ.

ಭಾರತೀಯ ಜನತಾ ಪಕ್ಷ ಪ್ರತಿಯೊಬ್ಬರ ಸಂಕಷ್ಟಗಳಿಗೆ ಸ್ಪಂದಿಸುವ ಪಕ್ಷ : ಜಿ. ಧರ್ಮಪ್ರಸಾದ್

ಭದ್ರಾವತಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಮಾತನಾಡಿದರು.
    ಭದ್ರಾವತಿ, ಆ. ೧೭: ಭಾರತೀಯ ಜನತಾ ಪಕ್ಷ ಪ್ರತಿಯೊಬ್ಬರ ಸಂಕಷ್ಟಕ್ಕೆ ಸ್ಪಂದಿಸುವ ಪಕ್ಷವಾಗಿದ್ದು, ಸಂದರ್ಭಗಳನ್ನು ದುರ್ಬಳಕೆ ಮಾಡಿಕೊಂಡು ರಾಜಕೀಯ ನಡೆಸುವುದಿಲ್ಲ. ಇದನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಅರ್ಥ ಮಾಡಿಕೊಳ್ಳಬೇಕೆಂದು ಪಕ್ಷದ ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಹೇಳಿದರು.
    ಅವರು ಬುಧವಾರ ಪಕ್ಷದ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಾಸಕರು ಕ್ಷೇತ್ರದಲ್ಲಿ ಕಳೆದ ೨ ದಿನಗಳ ಹಿಂದೆ ಹಿಂದೂ ಸಮಾಜದ ಯುವಕನೋರ್ವನ ಮೇಲೆ ನಡೆದಿರುವ ಹಲ್ಲೆಗೆ ಸಂಬಂಧಿಸಿದಂತೆ ಅಲ್ಪಸಂಖ್ಯಾತರನ್ನು ಓಲೈಸಿಕೊಳ್ಳುವ ನಿಟ್ಟಿನಲ್ಲಿ ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರು ಬಿಜೆಪಿ ಪಕ್ಷ ಹಾಗು ನಾಯಕರ ವಿರುದ್ಧ ವಿನಾಕಾರಣ ಮಾತನಾಡುವುದು ಸರಿಯಲ್ಲ ಎಂದರು.
    ಬಿಜೆಪಿ ಪಕ್ಷ ಎಂದಿಗೂ ಸಂದರ್ಭಗಳನ್ನು ದುರುಪಯೋಗಪಡಿಸಿಕೊಳ್ಳುವುದಿಲ್ಲ. ಆದರೆ ಪಕ್ಷ ಹಾಗು ನಾಯಕರು ಎಂದಿಗೂ ಹಿಂದೂ ಸಮಾಜದ ಪರವಾಗಿ ಹಾಗು ಏಳಿಗಾಗಿ ಶ್ರಮಿಸುತ್ತಾರೆ. ಹಿಂದೂ ಸಮಾಜದಲ್ಲಿ ಯಾರೇ ಸಂಕಷ್ಟಕ್ಕೆ ಒಳಗಾದರೂ ಸಹ ಅವರ ಪರವಾಗಿ ಇರುತ್ತಾರೆ. ಪಕ್ಷದ ತತ್ವ ಸಿದ್ದಾಂತಗಳು  ಪಕ್ಷದ ಪ್ರತಿಯೊಬ್ಬರಲ್ಲೂ ಯಾರೇ ಸಂಕಷ್ಟಕ್ಕೆ ಒಳಗಾದರೂ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳುವಂತೆ ಮಾಡಿವೆ. ಮಾಜಿ ಉಪಮುಖ್ಯಮಂತ್ರಿಗಳಾದ ಕೆ.ಎಸ್ ಈಶ್ವರಪ್ಪ ಅವರು ಹಿಂದೂ ಸಮಾಜದ ಏಳಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಇಂತಹ ನಾಯಕರು ಮಂಗಳವಾರ ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಸುನಿಲ್ ಆರೋಗ್ಯ ವಿಚಾರಿಸಿ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಇಲ್ಲಿ ಯಾವುದೇ ರಾಜಕೀಯ ದುರುದ್ದೇಶವಿಲ್ಲ ಎಂದರು.
    ಶಾಸಕರು ಈಶ್ವರಪ್ಪನವರ ಭೇಟಿಯನ್ನು ರಾಜಕೀಯ ದುರುದ್ದೇಶಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ವಿನಾಕಾರಣ ಪಕ್ಷ ಹಾಗು ನಾಯಕರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಇಂತಹ ಆರೋಪಗಳಿಗೆ ಕ್ಷೇತ್ರದ ನಾಗರೀಕರು ಕಿವಿ ಕೊಡಬಾರದು. ಕ್ಷೇತ್ರದಲ್ಲಿ ಈ ರೀತಿಯ ಘಟನೆ ನಡೆದಿರುವುದು ನಮ್ಮ ಮನಸ್ಸಿಗೂ ನೋವಾಗಿದೆ. ಎಲ್ಲೆಡೆ ಶಾಂತಿ ನೆಲೆಸಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು.
    ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರು ಹಲ್ಲೆಗೊಳಗಾದವರು ಯಾರೇ ಇರಲಿ ಅವರು ಮೊದಲು ಆಸ್ಪತ್ರೆಗೆ ತೆರಳಿ ಸಾಂತ್ವನ ಹೇಳಬೇಕು. ಅದು ಬಿಟ್ಟು ಇಲ್ಲ ಸಲ್ಲದ ಆರೋಪ ಮಾಡುವುದು ಸರಿಯಲ್ಲ.
    ಪತ್ರಿಕಾಗೋಷ್ಠಿಯಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿ ಚನ್ನೇಶ್, ಜಿಲ್ಲಾ ಮುಖಂಡ ಎಂ. ಮಂಜುನಾಥ್, ಚಂದ್ರು ದೇವರನರಸೀಪುರ, ಅನ್ನಪೂರ್ಣ ಸಾವಂತ್, ಆನಂದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕ್ಷೇತ್ರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರ ಸಹಕಾರ ಅಗತ್ಯ : ಅಲೋಕ್ ಕುಮಾರ್


ಪೊಲೀಸ್ ಇಲಾಖೆ ವತಿಯಿಂದ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸುವ ಉದ್ದೇಶದಿಂದ ಬುಧವಾರ ರಾಜ್ಯ ಪೊಲೀಸ್ ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚುವರಿ ಮಹಾನಿರ್ದೇಶಕ(ಎಡಿಜಿಪಿ) ಅಲೋಕ್ ಕುಮಾರ್ ನೇತೃತ್ವದಲ್ಲಿ ಭದ್ರಾವತಿಯಲ್ಲಿ ಪಥಸಂಚಲನ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಆ. ೧೭ : ಕ್ಷೇತ್ರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಹೆಚ್ಚಿನ ಸಹಕಾರ ನೀಡಬೇಕೆಂದು ರಾಜ್ಯ ಪೊಲೀಸ್ ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚುವರಿ ಮಹಾನಿರ್ದೇಶಕ(ಎಡಿಜಿಪಿ) ಅಲೋಕ್ ಕುಮಾರ್ ಮನವಿ ಮಾಡಿದರು.
ಅವರು ನಗರದಲ್ಲಿ ಬುಧವಾರ ಪೊಲೀಸ್ ಇಲಾಖೆ ವತಿಯಿಂದ ಸಾರ್ವಜನಿಕರಲ್ಲಿ  ವಿಶ್ವಾಸ ಮೂಡಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದ್ದ ಪಥಸಂಚಲನದಲ್ಲಿ ಪಾಲ್ಗೊಂಡು ಮಾತನಾಡಿದರು.
    ಪೊಲೀಸ್ ಇಲಾಖೆ ಸದಾ ಕಾಲ ನಿಮ್ಮ ರಕ್ಷಣೆಗೆ ಇದೆ ಎಂಬ ಭಾವನೆಯನ್ನು ಸಾರ್ವಜನಿಕರಲ್ಲಿ ಮೂಡಿಸುವ ಉದ್ದೇಶದಿಂದ ಶಿವಮೊಗ್ಗ ಮತ್ತು ಭದ್ರಾವತಿ ನಗರಗಳಲ್ಲಿ ಪಥಸಂಚಲನ ನಡೆಸಲಾಗುತ್ತಿದೆ. ಇದು ೩ನೇ ಪಥಸಂಚಲನವಾಗಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ವ್ಯಾಪಾರಸ್ಥರಿಗೆ, ಎಲ್ಲಾ ವರ್ಗದ ನೌಕರರಿಗೆ ಹಾಗು ಸಮಸ್ತ ನಾಗರೀಕರಿಗೆ ಯಾವುದೇ ರೀತಿ ತೊಂದರೆಯಾಗಬಾರದು. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಎಚ್ಚರವಹಿಸಿದ್ದು, ಅಗತ್ಯವಿರುವ ಸಿಬ್ಬಂದಿಗಳನ್ನು ಸಹ ನಿಯೋಜನೆಗೊಳಿಸಿದೆ. ಇದಕ್ಕೆ ಪೂರಕವೆಂಬಂತೆ ಸಾರ್ವಜನಿಕರು ಹೆಚ್ಚಿನ ಸಹಕಾರ ನೀಡಬೇಕೆಂದರು.  


    ತಪ್ಪು ಮಾಡಿದವರು ಯಾರೇ ಇರಲಿ ಅವರನ್ನು ಬಿಡುವುದಿಲ್ಲ :
    ನಗರದಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗ ಉಂಟುಮಾಡಿರುವ ಯಾರೇ ಇರಲಿ, ಯಾವುದೇ ಸಂಘಟನೆಗೆ ಸೇರಿದವರಾಗಿರಲಿ ಅವರನ್ನು ಪೊಲೀಸರು ಬಿಡುವುದಿಲ್ಲ. ಅಲ್ಲದೆ ತಪ್ಪು ಮಾಡದವರಿಗೆ ವಿನಾಕಾರಣ ತೊಂದರೆ ನೀಡುವುದಿಲ್ಲ. ನಗರದಲ್ಲಿ ನಡೆದಿರುವ ಘಟನೆಗೆ ಸಂಬಂಧಿಸಿದಂತೆ ಇನ್ನೂ ವಿಚಾರಣೆ ಬಾಕಿ ಇದ್ದು, ಅಧಿಕೃತವಾಗಿ ಏನನ್ನು ಹೇಳಲು ಸಾಧ್ಯವಿಲ್ಲ. ಪ್ರಸ್ತುತ ೧೪೪ ಕಲಂರನ್ವಯ ವಿಧಿಸಲಾಗಿರುವ ನಿಷೇಧಾಜ್ಞೆ ಗುರುವಾರದವರೆಗೂ ಮುಂದುವರೆಯಲಿದ್ದು, ಆ ನಂತರ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
    ರಂಗಪ್ಪ ವೃತ್ತದಿಂದ ಆರಂಭಗೊಂಡ ಪಥಸಂಚಲನ ಮಾಧವಚಾರ್ ವೃತ್ತದ ಮೂಲಕ ಭೂತನಗುಡಿ ಪ್ರವೇಶಿಸಿ ನಂತರ ಹೊಳೆಹೊನ್ನೂರು ವೃತ್ತ ತಲುಪಿ ರಂಗಪ್ಪ ವೃತ್ತದಲ್ಲಿ ಅಂತ್ಯಗೊಂಡಿತು.
    ಪಥ ಸಂಚಲನದಲ್ಲಿ ೩ ಕೆಎಸ್‌ಆರ್‌ಪಿ ವಾಹನ, ೩ ರ್‍ಯಾಪಿಡ್ ಆಕ್ಷನ್ ಪೊಲೀಸ್ ಹಾಗು ನಾಗರೀಕ ಪೊಲೀಸ್ ಪಡೆ ಸೇರಿದಂತೆ ಒಟ್ಟು ಸುಮಾರು ೨೦೦ ಮಂದಿಯೊಂದಿಗೆ ಪೂರ್ವವಲಯ ಪೊಲೀಸ್ ಮಹಾನಿರ್ದೇಶಕ ತ್ಯಾಗರಾಜನ್, ಜಿಲ್ಲಾ ರಕ್ಷಣಾಧಿಕಾರಿ ಡಾ. ಲಕ್ಷ್ಮೀಪ್ರಸಾದ್, ಹೆಚ್ಚುವರಿ ರಕ್ಷಣಾಧಿಕಾರಿ ವಿಕ್ರಮ್ ಅಮತೆ, ವೈರ್‌ಲೆಸ್ ವಿಭಾಗದ ರಕ್ಷಣಾಧಿಕಾರಿ ಕಾರ್ತಿಕ್‌ರೆಡ್ಡಿ, ತಹಸೀಲ್ದಾರ್ ಆರ್. ಪ್ರದೀಪ್, ನಗರಸಭೆ ಪೌರಾಯುಕ್ತ ಮನುಕುಮಾರ್, ಪೊಲೀಸ್ ಉಪಾಧೀಕ್ಷಕ ಜಿತೇಂದ್ರಕುಮಾರ್ ದಯಾಮ, ನಗರ ವೃತ್ತ ನಿರೀಕ್ಷಕರಾದ ರಾಘವೇಂದ್ರ ಕಾಂಡಿಕೆ, ಗ್ರಾಮಾಂತರ ವೃತ್ತ ನಿರೀಕ್ಷಕ ಗುರುರಾಜ್, ಆರ್‌ಎಎಫ್ ಅಧಿಕಾರಿಗಳು, ಸೇರಿದಂತೆ ನಗರದ ವಿವಿಧ ಪೊಲೀಸ್ ಠಾಣಾಧಿಕಾರಿಗಳು ಹೆಜ್ಜೆ ಹಾಕಿದರು.