Tuesday, December 20, 2022

ವೀರಶೈವ ಲಿಂಗಾಯತ ಸಮಾಜದಲ್ಲಿನ ಸಾಮಾಜಿಕ ಅಸ್ಪೃಶ್ಯತೆ ತೊಡೆದು ಹಾಕಿದ ಮಹಾನ್ ಚೇತನ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು

ವಿರಾಗಿ ಶ್ರೀ ಕುಮಾರೇಶ್ವರ ರಥಯಾತ್ರೆ ಉದ್ಘಾಟನಾ ಸಮಾರಂಭದಲ್ಲಿ ಆನಂದಪುರ ಬೆಕ್ಕಿನ ಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ

ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಜೀವನ ಚರಿತ್ರೆ ಆಧಾರಿತ ವಿರಾಟಪುರ ವಿರಾಗಿ ಅಂಗವಾಗಿ ಹಳೇನಗರದ ತಾಲೂಕು ಕಛೇರಿ ರಸ್ತೆಯಲ್ಲಿರುವ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿರಾಗಿ ಶ್ರೀ ಕುಮಾರೇಶ್ವರ ರಥಯಾತ್ರೆ ಉದ್ಘಾಟನಾ ಸಮಾರಂಭವನ್ನು ಆನಂದಪುರ ಬೆಕ್ಕಿನ ಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಉದ್ಘಾಟಿಸಿದರು.
ಭದ್ರಾವತಿ, ಡಿ. ೧೭: ವೀರಶೈವ ಲಿಂಗಾಯತ ಸಮಾಜದಲ್ಲಿನ ಸಾಮಾಜಿಕ ಅಸ್ಪೃಶ್ಯತೆಯನ್ನು ತೊಡೆದು ಹಾಕಿ ಎಲ್ಲರೂ ಒಂದೇ ಎಂಬುದನ್ನು ತೋರಿಸಿಕೊಟ್ಟ ಮಹಾನ್ ಚೇತನ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಎಂದು ಶಿವಮೊಗ್ಗ ಜಿಲ್ಲೆ ವೀರಶೈವ ಲಿಂಗಾಯತ ಮಠಾಧೀಶರ ಮಹಾಸಭಾ ಅಧ್ಯಕ್ಷರಾದ ಆನಂದಪುರ ಬೆಕ್ಕಿನ ಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಜೀವನ ಚರಿತ್ರೆ ಆಧಾರಿತ ವಿರಾಟಪುರ ವಿರಾಗಿ ಅಂಗವಾಗಿ ಹಳೇನಗರದ ತಾಲೂಕು ಕಛೇರಿ ರಸ್ತೆಯಲ್ಲಿರುವ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿರಾಗಿ ಶ್ರೀ ಕುಮಾರೇಶ್ವರ ರಥಯಾತ್ರೆ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.
ವೀರಶೈವ ಲಿಂಗಾಯತ ಸಮಾಜ ಒಗ್ಗೂಡಿಸುವಲ್ಲಿ ಶಿವಯೋಗಿಗಳ ಪಾತ್ರ ಪ್ರಮುಖವಾಗಿದ್ದು, ಈ ನಿಟ್ಟಿನಲ್ಲಿ ಇಂದಿಗೂ ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ. ಅಲ್ಲದೆ ವೀರಶೈವ ಲಿಂಗಾಯತ ಸಮಾಜ ತನ್ನದೇ ಆದ ಪರಂಪರೆ, ವಿಶಿಷ್ಟತೆ ಹೊಂದಿದೆ ಎಂಬುದನ್ನು ಸಹ ತೋರಿಸಿಕೊಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ಪ್ರಸ್ತುತ ಶಿವಯೋಗಿಗಳನ್ನು ನೆನಪು ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಇಂದು ಕಾಯಕ ಮರೆಯಾಗುತ್ತಿದ್ದು, ಕಾಯಕ ಮನೋಭಾವ ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು. ದುಡಿಮೆಯಿಂದಲೇ ಬದುಕು ಕಟ್ಟಿಕೊಳ್ಳಬೇಕು. ಸದೃಢ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕೆಂದರು.  
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಗೌರವಧ್ಯಕ್ಷರಾದ ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಜಿ ಪ್ರಾಸ್ತಾವಿಕವಾಗಿ ಮಾತನಾಡಿ, ಲಿಂಗಾಯತ ಸಮಾಜ ಹಲವಾರು ಒಳಪಂಗಡ, ಜಾತಿಗಳಿಂದ ಕೂಡಿದೆ. ಎಲ್ಲಾ ಒಳಪಂಗಡ, ಜಾತಿಗಳನ್ನು ಒಗ್ಗೂಡಿಸಿದ ಮಹಾನ್ ಚೇತನ, ನೂರಾರು ವರ್ಷಗಳ ಹಿಂದೆಯೇ ವೀರಶೈವ ಲಿಂಗಾಯತ ಎಲ್ಲರೂ ಒಂದೇ ಎಂಬುದನ್ನು ತೋರಿಸಿಕೊಟ್ಟ ಪ್ರಪಂಚದ ಏಕೈಕ ವ್ಯಕ್ತಿ  ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು.  ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸ್ಥಾಪನೆಯೊಂದಿಗೆ ೧೯ನೇ ಶತಮಾನದ ಆರಂಭದಲ್ಲಿಯೇ ಶಿವಯೋಗಿಗಳು ಹೊಸ ಮನ್ವಂತರಕ್ಕೆ ಭದ್ರಾ ಬುನಾದಿ ಹಾಕಿದರು. ಕೇವಲ ವೀರಶೈವ ಲಿಂಗಾಯತ ಸಮಾಜಕ್ಕೆ ಶಿವಯೋಗಿಗಳು ಸೀಮಿತವಾಗಿಲ್ಲ. ಅವರು ಎಲ್ಲಾ ಸಮಾಜದವರಿಗೂ ಬೇಕಾದ  ಮಹಾನ್ ವ್ಯಕ್ತಿಯಾಗಿದ್ದಾರೆ.  ಸಮ ಸಮಾಜ ನಿರ್ಮಾಣದ ರೂವಾರಿಗಳು,  ಸರ್ವರಿಗೂ ಶಿಕ್ಷಣ, ಅಂಧರ  ಬಾಳಿಗೆ ಸಂಗೀತ ಶಿಕ್ಷಣ, ಮಹಿಳಾ ಶಿಕ್ಷಣ ಮತ್ತು ಸ್ತ್ರೀ ಸಬಲೀಕರಣ, ಶಿವಯೋಗ ಮಂದಿರ ಸ್ಥಾಪನೆ, ವಚನ ತಾಡೋಲೆಗಳ ಸಂಗ್ರಹ ಮತ್ತು ಗೋಶಾಲೆ ಸ್ಥಾಪನೆ, ಹತ್ತಿ ಕಾರ್ಖಾನೆ ಸ್ಥಾಪನೆ, ಆಯುರ್ವೇದ ಚಿಕಿತ್ಸಾಲಯ ಸ್ಥಾಪನೆ, ಚಿತ್ರಮಂದಿರ ಪ್ರಾರಂಭ, ಪ್ರಾಣಿ ಬಲಿ ನಿಷೇಧ ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುವ ಮಾದರಿ ಸಮಾಜ ನಿರ್ಮಾಣಕ್ಕೆ ಕಾರಣಕರ್ತರಾಗಿದ್ದಾರೆ. ಇವರ ಜೀವನ ಚರಿತ್ರೆ ಆಧಾರಿತ ವಿರಾಟಪುರ ವಿರಾಗಿ ಇಂದಿನ ಸಮಾಜಕ್ಕೆ ಅವಶ್ಯಕವಾಗಿದೆ. ಈ ಹಿನ್ನಲೆಯಲ್ಲಿ ನಾಡಿನಾದ್ಯಂತ ಶ್ರೀ ಕುಮಾರೇಶ್ವರ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ. ವಿಶೇಷ ಎಂದರೆ ರಥಯಾತ್ರೆ ಇಲ್ಲಿಂದ ಆರಂಭಗೊಳ್ಳುತ್ತಿರುವುದು ತುಂಬಾ ಹೆಮ್ಮೆಯ ವಿಚಾರವಾಗಿದೆ ಎಂದರು.  


ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಜೀವನ ಚರಿತ್ರೆ ಆಧಾರಿತ ವಿರಾಟಪುರ ವಿರಾಗಿ ಅಂಗವಾಗಿ ರೂಪುಗೊಂಡಿರುವ ಶ್ರೀ ಕುಮಾರೇಶ್ವರ ರಥ.
    ಶಿವಮೊಗ್ಗ ಬಸವಕೇಂದ್ರದ ಬಸವ ಮರುಳಸಿದ್ದ ಸ್ವಾಮೀಜಿ ಸೇರಿದಂತೆ ಜಿಲ್ಲೆಯ ವೀರಶೈವ ಲಿಂಗಾಯತ ಮಠಗಳ ಸ್ವಾಮೀಜಿಗಳು,  ಪ್ರಮುಖರಾದ ಉದ್ಯಮಿ ಬಿ.ಕೆ ಜಗನ್ನಾಥ, ಬಿಜೆಪಿ ಮುಖಂಡ ಮಂಗೋಟೆ ರುದ್ರೇಶ್, ನಗರಸಭಾ ಸದಸ್ಯರಾದ ಬಿ.ಕೆ ಮೋಹನ್, ಅನುಪಮ ಚನ್ನೇಶ್, ಕಂದಾಯಾಧಿಕಾರಿ ರಾಜ್‌ಕುಮಾರ್, ವಿಜಯಕುಮಾರ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಜಿ. ಸುರೇಶಯ್ಯ, ಮಹಿಳಾ ಘಟಕದ ಅಧ್ಯಕ್ಷೆ ರೂಪನಾಗರಾಜ್, ಯುವ ಘಟಕದ ಅಧ್ಯಕ್ಷ ಮಂಜುನಾಥ್, ಪ್ರಮುಖರಾದ  ವಾಗೀಶ್, ರೇವಪ್ಪ, ಬಾರಂದೂರು ಮಂಜುನಾಥ್, ಕವಿತಾಸುರೇಶ್, ಕೂಡ್ಲಿಗೆರೆ ರುದ್ರೇಶ್, ಶೋಭಾ ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನ್ಯಾಯಾಲಯದ ಆದೇಶದ ನೆಪದಲ್ಲಿ ಮನೆಗಳ ನೆಲಸಮ : ದೂರು ದಾಖಲು

ಭದ್ರಾವತಿ ಹೊಸಮನೆ ಅಶ್ವಥ್‌ನಗರದ ಭೂತಪ್ಪ ದೇವಸ್ಥಾನ ಸಮೀಪ ಸುಮಾರು ೪೦-೫೦ ವರ್ಷಗಳಿಂದ  ವಾಸಿಸುತ್ತಿದ್ದ ನಿವಾಸಿಗಳ ಮನೆಗಳನ್ನು ವ್ಯಕ್ತಿಯೊಬ್ಬರು ಏಕಾಏಕಿ ನೆಲಸಮಗೊಳಿಸಿರುವ ಘಟನೆ ನಡೆದಿದ್ದು, ಸ್ಥಳಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಪುತ್ರ ಬಿ.ಎಸ್ ಗಣೇಶ್ ಭೇಟಿ ನೀಡಿ ನಿವಾಸಿಗಳಿಗೆ ಧೈರ್ಯ ತುಂಬುವ ಮೂಲಕ ಮನೆಗಳನ್ನು ನೆಲಸಮಗೊಳಿಸಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
    ಭದ್ರಾವತಿ, ಡಿ. ೨೦: ಹೊಸಮನೆ ಅಶ್ವಥ್‌ನಗರದ ಭೂತಪ್ಪ ದೇವಸ್ಥಾನ ಸಮೀಪ ಸುಮಾರು ೪೦-೫೦ ವರ್ಷಗಳಿಂದ  ವಾಸಿಸುತ್ತಿದ್ದ ನಿವಾಸಿಗಳ ಮನೆಗಳನ್ನು ವ್ಯಕ್ತಿಯೊಬ್ಬರು ಏಕಾಏಕಿ ನೆಲಸಮಗೊಳಿಸಿರುವ ಘಟನೆ ನಡೆದಿದ್ದು, ಈ ಸಂಬಂಧ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ಸುಮಾರು ೬ ಕುಟುಂಬಗಳು ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದು, ಯುವರಾಜ್ ಎಂಬಾತ ಜಾಗ ಖಾಸಗಿ ವ್ಯಕ್ತಿಗಳು ಸೇರಿದ್ದಾಗಿದೆ. ಈ ಸಂಬಂಧ ನ್ಯಾಯಾಲಯದಿಂದ ಆದೇಶವಾಗಿದೆ ಎಂದು ೬ ಮನೆಗಳ ಪೈಕಿ ೩ ಮನೆಗಳನ್ನು ನೆಲಸಮಗೊಳಿಸಿದ್ದು, ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ತಾಲೂಕು ಕಛೇರಿ, ನಗರಸಭೆ ಅಧಿಕಾರಿಗಳು ವಿಚಾರಣೆ ನಡೆಸಿದ್ದು, ಈ ಸಂದರ್ಭದಲ್ಲಿ ನ್ಯಾಯಾಲಯ ಯಥಸ್ಥಿತಿ ಕಾಪಾಡಿಕೊಳ್ಳುವಂತೆ ಆದೇಶಿಸಿರುವುದು ಕಂಡು ಬಂದಿದೆ ಎನ್ನಲಾಗಿದೆ. ಆದರೆ ಏಕಾಏಕಿ ಮನೆಗಳನ್ನು ನೆಲಸಮಗೊಳಿಸುವ ಮೂಲಕ ವಿವಾದಕ್ಕೆ ಕಾರಣವಾಗಿದೆ ಎನ್ನಲಾಗಿದೆ.
    ಈ ಸಂಬಂಧ ಯುವರಾಜ್ ವಿರುದ್ಧ ಹೊಸಮನೆ ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದೆ ಎನ್ನಲಾಗಿದೆ.  ನಿವಾಸಿಗಳಿಗೆ ಈಗಾಗಲೆ ೯೪ಸಿಸಿ ಅಡಿಯಲ್ಲಿ ತಾಲೂಕು ಆಡಳಿತದಿಂದ ಹಕ್ಕುಪತ್ರಗಳನ್ನು ನೀಡಲಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ.
    ಶಾಸಕ ಬಿ.ಕೆ ಸಂಗಮೇಶ್ವರ್ ಪುತ್ರ ಬಿ.ಎಸ್ ಗಣೇಶ್ ಸ್ಥಳಕ್ಕೆ ಭೇಟಿ ನೀಡಿ ನಿವಾಸಿಗಳಿಗೆ ಧೈರ್ಯ ತುಂಬುವ ಮೂಲಕ ಮನೆಗಳನ್ನು ನೆಲಸಮಗೊಳಿಸಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.


ಭದ್ರಾವತಿ ಹೊಸಮನೆ ಅಶ್ವಥ್‌ನಗರದ ಭೂತಪ್ಪ ದೇವಸ್ಥಾನ ಸಮೀಪ ಸುಮಾರು ೪೦-೫೦ ವರ್ಷಗಳಿಂದ  ವಾಸಿಸುತ್ತಿದ್ದ ನಿವಾಸಿಗಳ ಮನೆಗಳನ್ನು ವ್ಯಕ್ತಿಯೊಬ್ಬರು ಏಕಾಏಕಿ ನೆಲಸಮಗೊಳಿಸಿರುವ ಘಟನೆ ನಡೆದಿದೆ.
ಚಿತ್ರ: ಡಿ-ಬಿಡಿವಿಟಿ(ಎ)




Monday, December 19, 2022

ಧನಾತ್ಮಕ ಆಲೋಚನೆಯಿಂದ ಉತ್ತಮ ಕಾರ್ಯ : ಟಿ. ಮಲ್ಲಿಕಾರ್ಜುನ್

ಭದ್ರಾವತಿ ತಾಲೂಕಿನ ಹಿರಿಯೂರು ಗ್ರಾಮ ಪಂಚಾಯತಿ  ಸರ್ಕಾರಿ ಕಿರಿಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಪ್ರೇಮ ತಂಡದಿಂದ ೪೩ನೇ ಶ್ರಮದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಡಿ. ೧೯ : ನಮ್ಮಲ್ಲಿ ಧನಾತ್ಮಕ ಆಲೋಚನೆಯಿಂದ ಉತ್ತಮ ಅನುಷ್ಠಾನ ಮಾಡಲು ಸಾಧ್ಯವಿದ್ದು, ಒಬ್ಬನಿಂದ ಏನು ಮಾಡಲು ಸಾಧ್ಯವಿಲ್ಲ ಎಂದು ಸುಮ್ಮನಿರಬಾರದು ಬದಲಾಗಿ ಉತ್ತಮ ಕೆಲಸ ಮಾಡುವವರ ಜೊತೆಯಲ್ಲಿ ಕೈ ಜೊಡಿಸಿದರೆ ಯಶಸ್ಸು ಇಬ್ಬರಿಗೂ ದೊರೆಯುತ್ತದೆ ಎಂದು ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ, ಕರ್ನಾಟಕ ಪರಿಸರರತ್ನ ಪ್ರಶಸ್ತಿ ಪುರಸ್ಕೃತ ಟಿ. ಮಲ್ಲಿಕಾರ್ಜುನ್ ಹೇಳಿದರು.
    ಅವರು ತಾಲೂಕಿನ ಹಿರಿಯೂರು ಗ್ರಾಮ ಪಂಚಾಯತಿ  ಸರ್ಕಾರಿ ಕಿರಿಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಹಮ್ಮಿಕೊಳ್ಳಲಾಗಿದ್ದ ೪೩ನೇ ಶ್ರಮದಾನ ಕಾರ್ಯಕ್ರಮಕ್ಕೆ ಗೋಡೆಗೆ ಬಣ್ಣಹಚ್ಚುವ ಮೂಲಕ ಚಾಲನೆ ನೀಡಿ ಮಾತನಾಡಿದರು.  
    ತಮ್ಮ ಸ್ವಂತ ಹಣದಿಂದ ಪರಿಸರ ಪ್ರೇಮ ತಂಡ ರೂಪಿಸಿಕೊಂಡು ಇದುವರೆಗೂ ೪೨ ಶ್ರಮದಾನ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಕೈಗೊಳ್ಳಲಾಗಿದೆ. ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು. ನಾವು ಕೈಗೊಳ್ಳುವ ಕಾರ್ಯಗಳು ಸಾರ್ಥಕಗೊಳ್ಳಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಚಿಂತಿಸಬೇಕೆಂದರು.
    ೭ ಶಾಲಾ ಕೊಠಡಿಗಳಿಗೆ ಬಣ್ಣ ಹಚ್ಚಲಾಯಿತು. ಅಲ್ಲದೆ ಅರೋಗ್ಯ ತಪಾಸಣೆ, ಶಾಲಾ ಸ್ವಚ್ಛತೆ ಕೈಗೊಳ್ಳಲಾಯಿತು. ಮಕ್ಕಳು ಮತ್ತು ಮಹಿಳೆಯರಿಗೆ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಗ್ರಾಮ ಪಂಚಾಯತಿ ಸದಸ್ಯರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಮತ್ತು ಪೋಷಕರು, ಕರ್ನಾಟಕ ಜಾನಪದ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಕೋಡ್ಲು ಯಜ್ಞ ಯ್ಯ, ಸಿ.ಅರ್.ಪಿ ಜೆ.ಎಚ್ ವೇಣುಗೋಪಾಲ್, ಪರಿಸರ ಪ್ರೇಮ ತಂಡದ ಅಧ್ಯಕ್ಷ ಶಿವಾನಾಯ್ಕ, ಜಿಲ್ಲಾ ಕಾರ್ಯದರ್ಶಿ ಪಿ.ಕೆ ಸತೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸಹಕಾರಿ ಧುರೀಣ ಎನ್. ಕೃಷ್ಣಮೂರ್ತಿಗೆ ಸಾಧನ ಶ್ರೀ ಪ್ರಶಸ್ತಿ


ಮಂಗಳೂರಿನ ಕಥಾಬಿಂದು ಕನ್ನಡ ಕಂಪು ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗು ಬೆಂಗಳೂರಿನ ಸಮೃದ್ಧಿ ಫೌಂಡೇಶನ್ ಮತ್ತು ನಗರದ ಶ್ರೀ ಮರುಳಸಿದ್ದೇಶ್ವರ ಜನಕಲ್ಯಾಣ ಟ್ರಸ್ಟ್ ವತಿಯಿಂದ ಉತ್ತರ ಪ್ರದೇಶದ ವಾರಣಾಸಿ ಕಾಶಿ ಜಂಗಮವಾಡಿ ಮಠದಲ್ಲಿ ’ಕನ್ನಡ ಕಂಪು ಸರಣಿ ೫ ಸಾಧನ ಶ್ರೀ ರಾಷ್ಟ್ರ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಸಮಾಜ ಸೇವಾ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಗಾಗಿ ಭದ್ರಾವತಿಯ ಹಿರಿಯ ಸಹಕಾರಿ ಧುರೀಣ ಎನ್. ಕೃಷ್ಣಮೂರ್ತಿ ಅವರಿಗೆ ಸಾಧನ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
     ಭದ್ರಾವತಿ, ಡಿ.೧೯: ಮಂಗಳೂರಿನ ಕಥಾಬಿಂದು ಕನ್ನಡ ಕಂಪು ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗು ಬೆಂಗಳೂರಿನ ಸಮೃದ್ಧಿ ಫೌಂಡೇಶನ್ ಮತ್ತು ನಗರದ ಶ್ರೀ ಮರುಳಸಿದ್ದೇಶ್ವರ ಜನಕಲ್ಯಾಣ ಟ್ರಸ್ಟ್ ವತಿಯಿಂದ ಉತ್ತರ ಪ್ರದೇಶದ ವಾರಣಾಸಿ ಕಾಶಿ ಜಂಗಮವಾಡಿ ಮಠದಲ್ಲಿ ’ಕನ್ನಡ ಕಂಪು ಸರಣಿ ೫ ಸಾಧನ ಶ್ರೀ ರಾಷ್ಟ್ರ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಸಮಾಜ ಸೇವಾ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಗಾಗಿ ನಗರದ ಹಿರಿಯ ಸಹಕಾರಿ ಧುರೀಣ ಎನ್. ಕೃಷ್ಣಮೂರ್ತಿ ಅವರಿಗೆ ಸಾಧನ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
    ಕೃಷ್ಣಮೂರ್ತಿಯವರು ಹಲವಾರು ವರ್ಷಗಳಿಂದ ಹಳೆನಗರದ ಮಾಡಲ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಅಲ್ಲದೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇವರ ಸಮಾಜ ಸೇವೆಯನ್ನು ಗುರುತಿಸಿ ಪ್ರಶಸ್ತಿಯನ್ನು  ನೀಡಿ ಗೌರವಿಸಲಾಗಿದೆ.  
ಕಥಾಬಿಂದು ಕನ್ನಡ ಕಂಪು ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಪಿ.ವಿ ಪ್ರದೀಪ್‌ಕುಮಾರ್, ಸಮೃದ್ಧಿ ಫೌಂಡೇಶನ್ ಅಧ್ಯಕ್ಷ ರುದ್ರಾರಾಧ್ಯ ಮತ್ತು ಮರುಳಸಿದ್ದೇಶ್ವರ ಜನಕಲ್ಯಾಣ ಟ್ರಸ್ಟ್ ಸಿದ್ದಲಿಂಗಯ್ಯ, ನಗರಸಭೆ ಮಾಜಿ ಅಧ್ಯಕ್ಷೆ ಎಂ.ಎಸ್ ಸುಧಾಮಣಿ, ನಿವೃತ್ತ ಅಧೀಕ್ಷಕ ಅಭಿಯಂತರ ರವೀಂದ್ರ ಕಿಣಿ, ಡಿಎಸ್‌ಎಸ್ ಮುಖಂಡ ಕೆ. ನಾಗರಾಜ, ಆಯುರ್ವೇದ ಸಂಕಾಯ ಕಾಶಿ ಹಿಂದೂ ವಿಶ್ವವಿದ್ಯಾಲಯ ವಾರಣಾಸಿ ಪ್ರೊಫೆಸರ್ ಡಾ. ಪರಮೇಶ್ವರಪ್ಪ ಎಸ್. ಬ್ಯಾಡಗಿ, ವಿಜ್ಞಾನ ಸಂಸ್ಥಾನ ಕಾಶಿ ವಿಶ್ವವಿದ್ಯಾಲಯ ವಾರಣಾಸಿ ಪ್ರೊಫೆಸರ್ ಡಾ. ಬಸವಪ್ರಭು ಚಿರಲಿ, ಜಂಗಮವಾಡಿ ಮಠ ವ್ಯವಸ್ಥಾಪಕಿ ನಳಿನಿ ಗಂಗಾಧರ ಚಿಲುಮೆ ಮತ್ತು ಶಿವಾನಂದ ಹಿರೇಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ : ಎನ್‌ಎಸ್‌ಯುಐ ಪ್ರತಿಭಟನೆ

ನೂತನ ರಾಷ್ಟೀಯ ಶಿಕ್ಷಣ ನೀತಿ ವಿರೋಧಿಸಿ ಹಾಗು ವಿದ್ಯಾರ್ಥಿಗಳ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಭದ್ರಾವತಿಯಲ್ಲಿ ನ್ಯಾಷನಲ್ ಸ್ಟುಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ(ಎನ್‌ಎಸ್‌ಯುಐ) ತಾಲೂಕು ಶಾಖೆವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ರಾಜ್ಯ ಹಾಗು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.  
    ಭದ್ರಾವತಿ, ಡಿ. ೧೯: ನೂತನ ರಾಷ್ಟೀಯ ಶಿಕ್ಷಣ ನೀತಿ ವಿರೋಧಿಸಿ ಹಾಗು ವಿದ್ಯಾರ್ಥಿಗಳ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ನ್ಯಾಷನಲ್ ಸ್ಟುಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ(ಎನ್‌ಎಸ್‌ಯುಐ) ತಾಲೂಕು ಶಾಖೆವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ರಾಜ್ಯ ಹಾಗು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.  
    ವಿಶ್ವ ವಿದ್ಯಾನಿಲಯ ಹಾಗು ಸಂಯುಕ್ತ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿ ಬಿ.ಎಚ್ ರಸ್ತೆ ಅಂಡರ್ ಬ್ರಿಡ್ಜ್ ಬಳಿ ಪ್ರತಿಭಟನೆ ಮೂಲಕ ರಾಜ್ಯ ಹಾಗು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
    ಎನ್‌ಎಸ್‌ಯುಐ ತಾಲೂಕು ಅಧ್ಯಕ್ಷ ಮುಸ್ವಿರ್ ಬಾಷ ನೇತೃತ್ವ ವಹಿಸಿದ್ದರು. ಉಪಾಧ್ಯಕ್ಷ ಗಂಗಾಧರ್, ಕಾರ್ಯದರ್ಶಿ ಶರಣ್, ಸಲಹೆಗಾರ ಮುರುಗೇಶ್, ಇಮ್ರಾನ್, ಸಿಡಿಸಿ ಸದಸ್ಯರಾದ ಚಂದ್ರಣ್ಣ,  ಪ್ರಮೋದ್ ನಗರಸಭೆ ಸದಸ್ಯ ಜಾರ್ಜ್, ಯುವ ಮುಖಂಡ ಅಭಿಲಾಷ್, ನಾಗರಾಜ್, ಅಭಿ, ಶ್ಯಾಮ್, ಹರ್ಷ, ಮನು, ದೀಕ್ಷಿ, ಸಂಗೀತ, ಬಿಂದು, ಸಿಂಧು, ರಂಜಿತಾ ಮತ್ತು ಭಾವನ  ಪಾಲ್ಗೊಂಡಿದ್ದರು.

Sunday, December 18, 2022

ದೇವಸ್ಥಾನ ಆವರಣದಲ್ಲಿ ವೃದ್ಧೆ ಭಿಕ್ಷಿಕಿ ಕೊಲೆ ಪ್ರಕರಣ : ಓರ್ವನ ಸೆರೆ

ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾದ ಪೇಪರ್‌ಟೌನ್ ಪೊಲೀಸರು

ಭದ್ರಾವತಿ ತಾಲೂಕಿನ ಇತಿಹಾಸ ಪ್ರಸಿದ್ದ ಸುಣ್ಣದಹಳ್ಳಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಭಕ್ತರಿಂದ ಭಿಕ್ಷೆ ಬೇಡಿ ಬದುಕು ಸಾಗಿಸುತ್ತಿದ್ದ ವೃದ್ಧೆಯೊಬ್ಬರ ಕೊಲೆ ಪ್ರಕರಣ ಬೇಧಿಸುವಲ್ಲಿ ಪೇಪರ್‌ಟೌನ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
    ಭದ್ರಾವತಿ, ಡಿ. ೧೮: ತಾಲೂಕಿನ ಇತಿಹಾಸ ಪ್ರಸಿದ್ದ ಸುಣ್ಣದಹಳ್ಳಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಭಕ್ತರಿಂದ ಭಿಕ್ಷೆ ಬೇಡಿ ಬದುಕು ಸಾಗಿಸುತ್ತಿದ್ದ ವೃದ್ಧೆಯೊಬ್ಬರ ಕೊಲೆ ಪ್ರಕರಣ ಬೇಧಿಸುವಲ್ಲಿ ಪೇಪರ್‌ಟೌನ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
    ಸುಣ್ಣದಹಳ್ಳಿ ಗ್ರಾಮದ ನಿವಾಸಿ ಸುಮಾರು ೭೦ ವರ್ಷ ವಯಸ್ಸಿನ ವೃದ್ಧೆ ಶಂಕ್ರಮ್ಮ ಕೊಲೆಯಾಗಿದ್ದು, ಈ ಸಂಬಂಧ ಓರ್ವನನ್ನು ಬಂಧಿಸಿದ್ದಾರೆ. ಶಂಕ್ರಮ್ಮ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಭಕ್ತರಿಂದ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದರು. ರಾತ್ರಿ ವೇಳೆ ದೇವಸ್ಥಾನ ಎದುರಿನ ಅಂತರಘಟ್ಟಮ್ಮ ದೇವರ ಗುಡಿಯ ಕಾಂಪೌಂಡ್ ಒಳಭಾಗದಲ್ಲಿ ಮಲಗುತ್ತಿದ್ದರು. ಡಿ.೩ ರಂದು ಬೆಳಿಗ್ಗೆ ಇವರು ಮೃತಪಟ್ಟಿರುವುದಾಗಿ ಪೊಲೀಸರಿಗೆ ದೇವಸ್ಥಾನದ ಅರ್ಚಕರು ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಎರಡೂ ಕಿವಿಯಲ್ಲಿದ್ದ ಚಿನ್ನದ ಓಲೆಗಳು ಮತ್ತು ಮೂಗು ಬಟ್ಟನ್ನು ಕಿತ್ತುಕೊಂಡು ಕೊಲೆ ಮಾಡಿ ಹೋಗಿರುತ್ತಾರೆಂದು ಈ ನಡುವೆ ಶಂಕ್ರಮ್ಮರವರ ಮೊಮ್ಮಗಳು ದೂರು ನೀಡಿದ್ದರು.  ಈ  ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಪ್ರಕರಣ ಬೇಧಿಸಲು ಪೊಲೀಸ್ ಉಪಾಧೀಕ್ಷಕ ಜಿತೇಂದ್ರಕುಮಾರ ದಯಾಮ ಮಾರ್ಗದರ್ಶನದಲ್ಲಿ ಠಾಣೆಯ ಪೊಲೀಸ್  ನಿರೀಕ್ಷಕ ಈ.ಓ ಮಂಜುನಾಥ್‌ರವರ ನೇತೃತ್ವದಲ್ಲಿ ಠಾಣಾಧಿಕಾರಿ ಶಿಲ್ಪಾ ನಾಯನೇಗಲಿ ಮತ್ತು ಸಿಬ್ಬಂದಿಗಳಾದ ರತ್ನಾಕರ, ವಾಸುದೇವ, ಚಿನ್ನನಾಯ್ಕ, ಹನಮಂತ ಅವಟಿ, ಆದರ್ಶ ಶೆಟ್ಟಿ, ಮೌನೇಶ ಶೀಖಲ್, ಆರ್. ಅರುಣ್ ಮತ್ತು ವಿಕ್ರಮ್ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು.
    ಡಿ.೧೭ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಿ ಕೊಲೆಯಾದ ಶಂಕ್ರಮ್ಮರವರ ಮೈಮೇಲಿಂದ ಕಿತ್ತುಕೊಂಡಿದ್ದ ಅಂದಾಜು ೧೪,೦೦೦ ರು. ಮೌಲ್ಯದ ಒಂದು ಜೊತೆ ಬಂಗಾರದ ಕಿವಿ ಓಲೆ ಮತ್ತು ಮೂಗುತಿಯನ್ನು ವಶಪಡಿಸಿಕೊಳ್ಳಲಾಗಿದೆ. ಡಿ.೨ ರಂದು ರಾತ್ರಿ ಶಂಕ್ರಮ್ಮ ರವರ ಕಿವಿಯಲ್ಲಿದ್ದ ಬಂಗಾರದ ಓಲೆ ಮತ್ತು ಮೂಗಿನಲ್ಲಿದ್ದ ಮೂಗು ಬಟ್ಟನ್ನು ಕಿತ್ತುಕೊಳ್ಳುವ ಸಂಬಂಧ ಆಕೆಯ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂಬುದು ಪೊಲೀಸರ ವಿಚಾರಣೆಯಲ್ಲಿ ತಿಳಿದು ಬಂದಿದೆ. ಯಾವುದೇ ಸುಳಿವು ಇಲ್ಲದ ಜಟಿಲವಾದ ಕೊಲೆ ಪ್ರಕರಣವನ್ನು ಪತ್ತೆ ಮಾಡಿದ ತನಿಖಾ ತಂಡದ ಉತ್ತಮ ಕಾರ್ಯಕ್ಕೆ ಜಿಲ್ಲಾ ರಕ್ಷಣಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಓಂ ಕ್ರಿಕೆಟರ್ಸ್ ತಂಡಕ್ಕೆ ದ್ವಿತೀಯ ಬಹುಮಾನ

ಭದ್ರಾವತಿ ಓಂ ಕ್ರಿಕೆಟರ್ಸ್ ತಂಡ ಶಿವಮೊಗ್ಗ ಸೂಳೆಬೈಲು ಮಲೆನಾಡು ಟ್ರೋಫಿ-೨೦೨೨ರ ಕ್ರಿಕೆಟ್ ಪಂದ್ಯಾವಳಿಯಲ್ಲಿ ದ್ವಿತೀಯ ಬಹುಮಾನ ಪಡೆದುಕೊಂಡಿದೆ.
    ಭದ್ರಾವತಿ, ಡಿ. ೧೮: ನಗರದ ಓಂ ಕ್ರಿಕೆಟರ್ಸ್ ತಂಡ ಶಿವಮೊಗ್ಗ ಸೂಳೆಬೈಲು ಮಲೆನಾಡು ಟ್ರೋಫಿ-೨೦೨೨ರ ಕ್ರಿಕೆಟ್ ಪಂದ್ಯಾವಳಿಯಲ್ಲಿ ದ್ವಿತೀಯ ಬಹುಮಾನ ಪಡೆದುಕೊಂಡಿದೆ.
    ಓಂ ಕ್ರಿಕೆಟರ್ಸ್ ತಂಡದ ಆಟಗಾರರು ಉತ್ತಮ ಪ್ರದರ್ಶನ ನೀಡುವ ಮೂಲಕ ದ್ವಿತೀಯ ಬಹುಮಾನ ೫೦,೦೦೦ ನಗದು ಹಾಗೂ ಟ್ರೋಫಿ ತಮ್ಮದಾಗಿಸಿಕೊಂಡರು. ಹಲವಾರು ವರ್ಷಗಳಿಂದ ಓಂ ಕ್ರಿಕೆಟರ್ಸ್ ತಂಡ ಅನೇಕ ಪಂದ್ಯಾವಳಿಗಳಲ್ಲಿ ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡುವ ಮೂಲಕ ನಗರದ ಪ್ರತಿಷ್ಠಿತ ಕ್ರಿಕೆಟ್ ತಂಡಗಳಲ್ಲಿ ಒಂದಾಗಿ ಗುರುತಿಸಿಕೊಂಡು ಗಮನ ಸೆಳೆದಿದೆ. ಕೇಸರಿ ಪಡೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಕ್ರಿಕೆಟ್ ಅಭಿಮಾನಿಗಳು ವಿಜೇತ ತಂಡವನ್ನು ಅಭಿನಂದಿಸಿದ್ದಾರೆ.