Friday, January 13, 2023

ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ಪೊಲೀಸ್ ಉಮೇಶ್ ಒಲವು

ರಾಜಕೀಯ ಪಕ್ಷಗಳ ಜೊತೆ ಗುರುತಿಸಿಕೊಳ್ಳದೆ ಏಕಾಂಗಿಯಾಗಿರಲು ಚಿಂತನೆ

ಪೊಲೀಸ್ ಉಮೇಶ್


    * ಅನಂತಕುಮಾರ್
    ಭದ್ರಾವತಿ : ನಗರದಲ್ಲಿ ಹಲವಾರು ವರ್ಷಗಳಿಂದ ಸಮಾಜ ಸೇವಕರಾಗಿ ಗುರುತಿಸಿಕೊಂಡಿರುವ ಪೊಲೀಸ್ ಉಮೇಶ್‌ರವರು ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ಎದುರು ನೋಡುತ್ತಿದ್ದು, ಕ್ಷೇತ್ರದ ರಾಜಕಾರಣದಲ್ಲಿ ಹೊಸ ದಿಕ್ಸೂಚಿಯಾಗುವ ಆಶಾಭಾವನೆ ಹೊಂದಿದ್ದಾರೆ. ಈ ನಡುವೆ ಇವರ ಅಭಿಮಾನಿಗಳು ಸಹ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಚುನಾವಣೆ ಘೋಷಣೆಯಾಗುವ ಮೊದಲು ಉಮೇಶ್ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆಂಬ ವಿಶ್ವಾಸ ಹೊಂದಿದ್ದಾರೆ.
    ಕ್ಷೇತ್ರದ ರಾಜಕಾರಣದಲ್ಲಿ ಚುನಾವಣೆ ಸಂದರ್ಭದಲ್ಲಿ ಹೊಸ ಮುಖಗಳು ಬಂದು ಹೋಗುವುದು ಸಹಜ. ಕಳೆದ ೪ ದಶಕಗಳಿಂದ ಹಾಲಿ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ನಡುವೆ ಪೈಪೋಟಿ ನಡೆಯುತ್ತಿತ್ತು. ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಹೊಸ ಮುಖಗಳು ಚುನಾವಣೆಗೆ ಸ್ಪರ್ಧಿಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಉಮೇಶ್‌ರವರ ರಾಜಕೀಯ ಪ್ರವೇಶ ಕ್ಷೇತ್ರದ ಮತದಾರರು ಎದುರು ನೋಡುವಂತೆ ಮಾಡಿದೆ.
    ಪೊಲೀಸ್ ಉಮೇಶ್ ಪರಿಚಯ :
    ಪೊಲೀಸ್ ಇಲಾಖೆ ನೌಕರರಾಗಿರುವ ಉಮೇಶ್ ನಗರದ ವಿಐಎಸ್‌ಎಲ್ ಕಾರ್ಖಾನೆ ನಿವೃತ್ತ ಕಾರ್ಮಿಕ ಶಾಂತಪ್ಪ ಗೌಡ-ದಿವಂಗತ ಸರಸ್ವತಮ್ಮ ದಂಪತಿ ಪುತ್ರರಾಗಿದ್ದು, ಇಲ್ಲಿಯೇ ಹುಟ್ಟಿ ಬೆಳೆದವರು. ಈ ಹಿನ್ನಲೆಯಲ್ಲಿ ಕ್ಷೇತ್ರದ ಸಂಪೂರ್ಣ ಮಾಹಿತಿ ಇವರಿಗಿದೆ. ಇವರ ತಾಯಿ ನಿಧನ ಹೊಂದಿದ ನಂತರ ಸ್ನೇಹ ಜೀವಿ ಬಳಗ ಸಂಘಟನೆಯನ್ನು ಆರಂಭಿಸಿ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ ಸೇವಾ ಕಾರ್ಯಗಳ ಜೊತೆಗೆ ಸಮರ್ಥ ನಾಯಕರಾಗಿ ಸಹ ಗುರುತಿಸಿಕೊಂಡಿದ್ದಾರೆ. ಎಲ್ಲಾ ವರ್ಗದ ಜನರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ರಾಜಕೀಯ ಪ್ರವೇಶಿಸುವ ಆಸಕ್ತಿ ತೋರ್ಪಡಿಸುತ್ತಿದ್ದು, ಈಗಾಗಲೇ ಹಲವು ಸಭೆ-ಸಮಾರಂಭಗಳಲ್ಲಿ ಈ ಕುರಿತು ಪ್ರಸ್ತಾಪಿಸಿದ್ದಾರೆ. ಕ್ಷೇತ್ರದಲ್ಲಿ ಹೊಸ ಮುಖಗಳು ಚುನಾವಣೆ ಎದುರಿಸುವುದು ಸುಲಭದ ಮಾತಲ್ಲ. ಎಲ್ಲಾ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯವಿರಬೇಕು. ಈ ನಿಟ್ಟಿನಲ್ಲಿ ಉಮೇಶ್ ಸೂಕ್ತ ವ್ಯಕ್ತಿ ಎಂಬ ಭಾವನೆ ಇವರ ಅಭಿಮಾನಿಗಳು ಹೊಂದಿದ್ದಾರೆ. 
ಉಮೇಶ್‌ರವರು ಇದುವರೆಗೂ ಯಾವುದೇ ರಾಜಕೀಯ ಪಕ್ಷದ ಮೇಲೆ ಅವಲಂಬಿತವಾಗಿರದೆ ಸ್ವತಂತ್ರವಾಗಿ ಉಳಿದುಕೊಂಡಿದ್ದು, ಕ್ಷೇತ್ರವನ್ನು ಎಲ್ಲಾ ರೀತಿಯಿಂದಲೂ ಅಭಿವೃದ್ಧಿಪಡಿಸುವುದು ಇವರ ಬಹುದೊಡ್ಡ ಆಶಯವಾಗಿದೆ. ಈ ಹಿನ್ನಲೆಯಲ್ಲಿ ಚುನಾವಣೆಗೆ ಸ್ಪರ್ಧಿಸುವುದು ಖಚಿತವಾಗಿದೆ. ಚುನಾವಣೆಯಿಂದ ಹಿಂದೆ ಸರಿಯುವುದಿಲ್ಲ ಎಂಬ ದೃಢವಿಶ್ವಾಸ ಹೊಂದಿದ್ದಾರೆ.
    ಈ ನಡುವೆ ಕೆಲವು ರಾಜಕೀಯಗಳ ಪಕ್ಷಗಳು ಸಹ ಇವರ ಸಂಪರ್ಕದಲ್ಲಿದ್ದು, ಕಾದು ನೋಡಬೇಕಾಗಿದೆ. ಈಗಾಗಲೇ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಘೋಷಣೆಯಾಗಿದ್ದು, ಈ ಹಿನ್ನಲೆಯಲ್ಲಿ ಈ ಪಕ್ಷದ ಚಟುವಟಿಕೆಗಳು ಚುರುಕುಗೊಂಡಿವೆ. ಉಳಿದಂತೆ ಆಮ್ ಆದ್ಮಿ ಪಾರ್ಟಿ ವತಿಯಿಂದ ಸುಮಾರು ೫-೬ ತಿಂಗಳಿನಿಂದ ಗ್ರಾಮ ಅಭಿಮಾನ ನಡೆಸಲಾಗುತ್ತಿದ್ದು, ಉದ್ಯಮಿ ಮಾರುತಿ ಮೆಡಿಕಲ್ ಆನಂದ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಆನಂದ್ ಸಹ ಈ ಬಾರಿ ಚುನಾವಣೆಗೆ ಹೊಸ ಮುಖವಾಗಿದ್ದಾರೆ.

``ನನಗೆ ಅಧಿಕಾರದ ಆಸೆಯಾಗಲಿ ಅಥವಾ ರಾಜಕಾರಣಕ್ಕೆ ಬಂದು ಹಣ ಮಾಡಬೇಕೆಂಬ ಉದ್ದೇಶವಾಗಲಿ ಇಲ್ಲ. ನನಗೆ ಈಗಾಗಲೇ ಉದ್ಯೋಗವಿದ್ದು, ನಾನು ನೆಮ್ಮದಿಯಾಗಿ ಬದುಕುಬಹುದು. ಆದರೆ ಕ್ಷೇತ್ರದಲ್ಲಿ ಎರಡು ಬೃಹತ್ ಕಾರ್ಖಾನೆಗಳು ಅವನತಿ ದಾರಿ ಹಿಡಿದಿದ್ದು, ಈಗಾಗಲೇ ಎಂಪಿಎಂ ಕಾರ್ಖಾನೆ ಮುಚ್ಚಿ ಹೋಗಿದೆ. ಇದೀಗ ವಿಐಎಸ್‌ಎಲ್ ಕಾರ್ಖಾನೆ ಸಹ ಮುಚ್ಚಿ ಹೋಗುತ್ತಿದ್ದು, ಇದರಿಂದಾಗಿ ಕ್ಷೇತ್ರದಲ್ಲಿ ಸಾವಿರಾರು ಕಾರ್ಮಿಕರು ಬೀದಿಪಾಲಾಗುವ ಸ್ಥಿತಿ ನಿರ್ಮಾಣವಾಗಿದೆ. ಕ್ಷೇತ್ರದಲ್ಲಿ ನಿರುದ್ಯೋಗ ಬಹುದೊಡ್ಡ ಸಮಸ್ಯೆಯಾಗಲಿದ್ದು, ಇದೀಗ ಕ್ಷೇತ್ರದ ಜನರನ್ನು ರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ರಾಜಕೀಯದಿಂದ ಇದಕ್ಕೆ ಪರಿಹಾರ ಸಿಗಬಹುದು ಎಂಬ ವಿಶ್ವಾಸದೊಂದಿಗೆ ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ಇಚ್ಛಿಸಿದ್ದೇನೆ.''
                                                                                                                               - ಪೊಲೀಸ್ ಉಮೇಶ್

Thursday, January 12, 2023

ಜ.೧೫ರಂದು ಗೆಳೆಯರ ಬಳಗ ಟ್ರಸ್ಟ್ ವತಿಯಿಂದ ಸಂಕ್ರಾಂತಿ ಸಂಭ್ರಮ

    ಭದ್ರಾವತಿ, ಜ. ೧೨ : ನಗರದ ಅಪ್ಪರ್ ಹುತ್ತಾ ಗೆಳೆಯರ ಬಳಗ ಟ್ರಸ್ಟ್ ವತಿಯಿಂದ ಈ ಬಾರಿ ವಿಶೇಷವಾಗಿ ಜ.೧೫ರಂದು ಸಂಕ್ರಾಂತಿ ಸಂಭ್ರಮ ಹಮ್ಮಿಕೊಳ್ಳಲಾಗಿದೆ. ಶ್ರೀ ನಂದಿ ದೇವಸ್ಥಾನದ ಮುಂಭಾಗ ಬೆಳಿಗ್ಗೆ ೬ಗಂಟೆಗೆ ವಿಶೇಷ ಆಕರ್ಷಣೆಯಾಗಿ ಹೋರಿಗಳ ಕಿಚ್ಚಾಯಿಸುವ ಕಾರ್ಯಕ್ರಮ ನಡೆಯಲಿದ್ದು, ೬.೩೦ಕ್ಕೆ ಪೊಂಗಲ್ ಪೂಜೆ, ೯ ಗಂಟೆಗೆ ಗೋವಿನ ಪೂಜೆ, ೧೦ಕ್ಕೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ.
    ನಂತರ ಹೊಳೆಹೊನ್ನೂರು ಸರ್ಕಾರಿ ಪ್ರೌಢಶಾಲೆಯ ರವಿಕಿರಣ್ ಅವರಿಂದ ದೈವ ನೃತ್ಯರೂಪಕ, ಚೌಡೇಶ್ವರಿ ಮಹಿಳಾ ಮಂಡಳಿಯಿಂದ ಕೋಲಾಟ, ದಿವಾಕರ ಮತ್ತು ತಂಡದಿಂದ ಹಾಗು ವೀರಾಂಜನೇಯ ಭಜನಾ ಮಂಡಳಿ ವತಿಯಿಂದ ಜಾನಪದ ಗೀತೆ, ಹೊಳೆಗಂಗೂರು ಸರ್ಕಾರಿ ಪ್ರೌಢ ಶಾಲೆ ವತಿಯಿಂದ ಕೋಲಾಟ ಹಾಗು ಸೋಂಪಾನಾಯ್ಕ ಮತ್ತು ತಂಡದವರಿಂದ ಬಣಜಾರ್ ಶೈಲಿಯ ಕೋಲಾಟ ಸೇರಿದಂತೆ ಜಾನಪದ ಕಾರ್ಯಕ್ರಮಗಳು ನಡೆಯಲಿವೆ.
    ಗ್ರಾಮೀಣ ಕ್ರೀಡಾಕೂಟ :
    ಸಂಕ್ರಾಂತಿ ಸಂಭಮದ ಅಂಗವಾಗಿ ಜ.೧೪ರಂದು ಬೆಳಿಗ್ಗೆ ೧೧ ಗಂಟೆಗೆ ಗೋಲ್ಡನ್ ಜ್ಯೂಬಿಲಿ ಫೀಲ್ಡ್‌ನಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಪುರುಷರ ವಿಭಾಗದಲ್ಲಿ ಹಗ್ಗ ಜಗ್ಗಾಟ, ಲಗೋರಿ ಹಾಗು ಮಹಿಳೆಯರ ವಿಭಾಗದಲ್ಲಿ ನೀರು ತುಂಬಿಸುವ ಆಟ ಮತ್ತು ಎಷ್ಟಪ್ಪ ಎಷ್ಟು ಸ್ಪರ್ಧೆಗಳು ಹಾಗು ಮಕ್ಕಳ ವಿಭಾಗದಲ್ಲಿ ಗೋಣಿ ಚೀಲದ ಆಟ, ಕುಂಟೆ ಬಿಲ್ಲೆ ಸ್ಪರ್ಧೆಗಳು ನಡೆಯಲಿವೆ. ವಿಶೇಷವಾಗಿ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದೆ. ಕ್ರೀಡಾ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಜ.೧೩ರ ಸಂಜೆ ೬ ಗಂಟೆಯೊಳಗಾಗಿ ಮೊ: ೯೭೩೧೩೧೬೪೦೦ ಸಂಖ್ಯೆಗೆ ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳತಕ್ಕದ್ದು.

ಇ-ಆಸ್ತಿ ತಂತ್ರಾಂಶ ಸರಳೀಕರಣಗೊಳಿಸಲು ಮಾಹಿತಿ ನೀಡಿ ಸಹಕರಿಸಿ

    ಭದ್ರಾವತಿ, ಜ. ೧೨: ನಗರಸಭೆ ವತಿಯಿಂದ ಇ-ಆಸ್ತಿ ತಂತ್ರಾಂಶ ಮತ್ತಷ್ಟು ಸರಳೀಕರಣಗೊಳಿಸಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದ್ದು, ಈ ಕಾರ್ಯವನ್ನು ಫೆಬ್ರವರಿ ಅಂತ್ಯದೊಳಗೆ ಮುಕ್ತಾಯಗೊಳಿಸಲಾಗುವುದು. ಈ ಹಿನ್ನಲೆಯಲ್ಲಿ ಅಗತ್ಯವಿರುವ ಮಾಹಿತಿ ನೀಡಿ ಸಹಕರಿಸುವಂತೆ ಪೌರಾಯುಕ್ತ ಎಚ್.ಎಂ ಮನುಕುಮಾರ್ ಮನವಿ ಮಾಡಿದ್ದಾರೆ.
    ಕೆ.ಎಂ.ಎಫ್-೨೪ ಗಣಕೀಕರಣ ಕಾರ್ಯ ಪೂರ್ಣಗೊಳಿಸಲು ನಗರಸಭೆ ಸಿಬ್ಬಂದಿಗಳು ಮನೆಗಳಿಗೆ ಭೇಟಿ ನೀಡಿ ಸರ್ವೇ ನಡೆಸಲಿದ್ದು, ಈ ಸಂದರ್ಭದಲ್ಲಿ ಮನೆ ಮಾಲೀಕರ ಮತ್ತು ಸ್ವತ್ತಿನ ಭಾವಚಿತ್ರ, ಗುರುತಿನ ದಾಖಲೆ, ಆಸ್ತಿ, ನೀರಿನ ತೆರಿಗೆ ಪಾವತಿಸಿರುವ ರಶೀದಿ, ಮಾಲೀಕತ್ವದ ದಾಖಲಾತಿ, ಕಟ್ಟಡ ಪರವಾನಿಗೆ ಪ್ರತಿ ಹಾಗು ಆಸ್ತಿ ಮಾಲೀಕರು ದಾಖಲೆಗಳ ನಕಲು ಪ್ರತಿಗಳನ್ನು ನೀಡಿ ಸಹಕರಿಸಲು ಕೋರಲಾಗಿದೆ.

ಕುವೆಂಪು ವಿ.ವಿ ವಿದ್ಯಾರ್ಥಿಗಳಿಂದ ಸ್ವಾಮಿ ವಿವೇಕಾನಂದರ ಜಯಂತಿ

ಭದ್ರಾವತಿ ತಾಲೂಕಿನ ಶಂಕರಘಟ್ಟ ಕುವೆಂಪು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಗುರುವಾರ ತತ್ತ್ವಜ್ಞಾನಿ, ಯುವ ಸಮುದಾಯ ಚೈತನ್ಯದ ಶಕ್ತಿ ಸ್ವಾಮಿ ವಿವೇಕಾನಂದರ ಜನ್ಮದಿನ ಆಚರಿಸಿದರು.
    ಭದ್ರಾವತಿ, ಜ. ೧೨: ತಾಲೂಕಿನ ಶಂಕರಘಟ್ಟ ಕುವೆಂಪು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಗುರುವಾರ ತತ್ತ್ವಜ್ಞಾನಿ, ಯುವ ಸಮುದಾಯ ಚೈತನ್ಯದ ಶಕ್ತಿ ಸ್ವಾಮಿ ವಿವೇಕಾನಂದರ ಜನ್ಮದಿನ ಆಚರಿಸಿದರು.
    ವಿಶ್ವವಿದ್ಯಾಲಯದ ಮುಂಭಾಗ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಘೋಷಣೆಗಳ ಮೂಲಕ ಸಂಭ್ರಮಿಸಿದರು. ಎನ್‌ಎಸ್‌ಯುಐ ತಾಲೂಕು ಅಧ್ಯಕ್ಷರಾದ ಮುಸ್ವೀರ್ ಬಾಷ ಮತ್ತು ಧವನ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
    ವಿದ್ಯಾರ್ಥಿ ಪ್ರಮುಖರಾದ ಮುರುಗೇಶ್, ಇಮ್ರಾನ್, ಕೀರ್ತಿ, ವೇಲು, ಹರೀಶ್, ನೂತನ್, ರಾಜೇಶ್, ನಾಗರಾಜ್, ಮದನ್, ಮೋಹನ್, ಶೈಲೂ, ಶ್ರೇಯಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Wednesday, January 11, 2023

‘ನಮ್ಮೂರು-ನಮ್ಮ ಕೆರೆ’ ೪೦೧ನೇ ದೇವರಹಳ್ಳಿ ಕೆರೆ ಪುನಶ್ಚೇತನಕ್ಕೆ ಚಾಲನೆ

ಭದ್ರಾವತಿ ತಾಲೂಕಿನ ಕೊಮಾರನಹಳ್ಳಿ ಗ್ರಾಮ ಪಂಚಾಯಿತಿ ಹಾಗು ದೇವರಹಳ್ಳಿ ಕೆರೆ ಅಭಿವೃದ್ಧಿ ಸಮಿತಿ ಸಹಕಾರದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಬುಧವಾರ 'ನಮ್ಮೂರು-ನಮ್ಮ ಕೆರೆ' ೪೦೧ನೇ ದೇವರಹಳ್ಳಿ ಕೆರೆ ಪುನಶ್ಚೇತನಕ್ಕೆ ಚಾಲನೆ ನೀಡಲಾಯಿತು.
    ಭದ್ರಾವತಿ, ಜ. ೧೧: ತಾಲೂಕಿನ ಕೊಮಾರನಹಳ್ಳಿ ಗ್ರಾಮ ಪಂಚಾಯಿತಿ ಹಾಗು ದೇವರಹಳ್ಳಿ ಕೆರೆ ಅಭಿವೃದ್ಧಿ ಸಮಿತಿ ಸಹಕಾರದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಬುಧವಾರ 'ನಮ್ಮೂರು-ನಮ್ಮ ಕೆರೆ' ೪೦೧ನೇ ದೇವರಹಳ್ಳಿ ಕೆರೆ ಪುನಶ್ಚೇತನಕ್ಕೆ ಚಾಲನೆ ನೀಡಲಾಯಿತು.
    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಚಂದ್ರಶೇಖರ್ ಕೆರೆ ಪುನಶ್ಚೇತನಕ್ಕೆ ಚಾಲನೆ ನೀಡಿ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಕೆರೆಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕೆಂದರು.
    ತಾಲೂಕು ಯೋಜನಾಧಿಕಾರಿ ಪ್ರಕಾಶ್‌ನಾಯ್ಕ, ಕೆರೆ ಸಮಿತಿ ಅಧ್ಯಕ್ಷ ಚಂದ್ರಶೇಖರ್‌ರಾವ್, ಅಭಿಯಂತರ ಗಣಪತಿ ಭಟ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೇವಮ್ಮ, ಅಭಿವೃದ್ಧಿ ಅಧಿಕಾರಿ ಕೇಶವಮೂರ್ತಿ, ಕೃಷಿ ಕ್ಷೇತ್ರ ಅಧಿಕಾರಿ ಗೋವಿಂದಪ್ಪ, ದೇವೇಂದ್ರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮಕ್ಕಳಿಗೆ ಕನ್ನಡ ಭಾಷೆ ಕಲಿಸುವಲ್ಲಿ ಪೋಷಕರು ಹೆಚ್ಚಿನ ಗಮನ ಹರಿಸಿ : ಶ್ರದ್ದಾ

ಭದ್ರಾವತಿಯಲ್ಲಿ ಬುಧವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೂತನ ವರ್ಷದ ದಿನದರ್ಶಿಕೆ ಬಿಡುಗಡೆಗೊಳಿಸಲಾಯಿತು.
    ಭದ್ರಾವತಿ, ಜ. ೧೧ : ಮಕ್ಕಳ ಕಲಿಕಾ ಮಾಧ್ಯಮ ಯಾವುದೇ ಇರಲಿ ಅವರಿಗೆ ಕನ್ನಡ ಭಾಷೆ ಕಲಿಸುವಲ್ಲಿ ಪೋಷಕರು ಹೆಚ್ಚಿನ ಗಮನ ಹರಿಸಬೇಕೆಂದು ತಾಂತ್ರಿಕ ಅಭಿಯಂತರರಾದ ಶ್ರದ್ದಾ ಹೇಳಿದರು.
    ಅವರು ಬುಧವಾರ ತಾಲೂಕು ಕನ್ನಡ ಸಾಹಿತ್ಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನೂತನ ದಿನದರ್ಶಿಕೆ ಕಾರ್ಯಕ್ರಮ ಎಳ್ಳುಬೆಲ್ಲ ಹಂಚುವ ಮೂಲಕ ಉದ್ಘಾಟಿಸಿ ಮಾತನಾಡಿದರು.
    ನಾವೆಲ್ಲರೂ ನೆಲ, ಜಲ, ಭಾಷೆ ಎಲ್ಲವನ್ನು ಉಳಿಸಿ ಬೆಳೆಸಬೇಕು. ಇಂದಿನ ಮಕ್ಕಳು ಮುಂದಿನ ಪ್ರಜೆಗಳಾಗಿದ್ದು, ಈ ಹಿನ್ನಲೆಯಲ್ಲಿ ಮಕ್ಕಳು ಆಂಗ್ಲ ಮಾಧ್ಯಮ ಸೇರಿದಂತೆ ಯಾವುದೇ ಮಾಧ್ಯಮದಲ್ಲಿ ಶಿಕ್ಷಣ ಪಡೆಯುತ್ತಿದ್ದರೂ ಸಹ ಅವರಿಗೆ ಕನ್ನಡ ಭಾಷೆ ಕಲಿಸುವುದು ಪೋಷಕರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಕನ್ನಡ ಭಾಷಾಭಿಮಾನ ಬೆಳೆಸಿಕೊಳ್ಳಬೇಕೆಂದರು.
    ದಿನದರ್ಶಿಕೆ ಬಿಡುಗಡೆಗೊಳಿಸಿದ ಉದ್ಯಮಿ ಬಿ.ಕೆ ಜಗನ್ನಾಥ ಮಾತನಾಡಿ, ಪರಿಷತ್ ವತಿಯಿಂದ ಕನ್ನಡ ನಾಡು, ತಾಯಿ ಭುವನೇಶ್ವರಿ ಹಾಗು ಜ್ಞಾನಪೀಠ ಪುರಸ್ಕೃತರ ಭಾವಚಿತ್ರಗಳನ್ನೊಳಗೊಂಡಿರುವ ಸಂಪೂರ್ಣವಾಗಿ ಕನ್ನಡದಲ್ಲಿ ಮುದ್ರಿತಗೊಂಡಿರುವ ದಿನದರ್ಶಿಕೆ ಆಕರ್ಷಕವಾಗಿದೆ. ಪ್ರತಿಯೊಬ್ಬರು ಕನ್ನಡ ಭಾಷೆ ಮೇಲೆ ಪ್ರೀತಿ ಹೊಂದಬೇಕು. ಈ ನಿಟ್ಟಿನಲ್ಲಿ ದಿನದರ್ಶಿಕೆ ಜನರ ಮನಸ್ಸಿನಲ್ಲಿ ಭಾವನೆಯುನ್ನುಂಟು ಮಾಡಲಿ. ಪರಿಷತ್ ಕಾರ್ಯ ಚಟುವಟಿಕೆಗಳು ನಿರಂತರವಾಗಿ ಮುಂದುವರೆಯಲಿ ಎಂದು ಹಾರೈಸಿದರು.
    ವೇದಿಕೆಯಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕೆ.ಎನ್ ಶ್ರೀಹರ್ಷ, ವೀರಭದ್ರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಪರಿಷತ್ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
    ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ, ಜಾನಪದ ಪರಿಷತ್ ಅಧ್ಯಕ್ಷ ಕೋಗಲೂರು ಯಜ್ಞಯ್ಯ, ಪರಿಷತ್ ಖಜಾಂಚಿ ಕೆ.ಟಿ ಪ್ರಸನ್ನ, ಸಂಘಟನಾ ಕಾರ್ಯದರ್ಶಿಗಳಾದ ನಾಗೋಜಿರಾವ್, ಕಮಲಕರ್, ಪರಿಷತ್ ಹೊಳೆಹೊನ್ನೂರು ಅಧ್ಯಕ್ಷ ಸಿದ್ದಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಸುಮತಿ ಕಾರಂತ್ ಪ್ರಾರ್ಥಿಸಿ, ಪರಿಷತ್ ಕಾರ್ಯದರ್ಶಿ ಎಂ.ಈ ಜಗದೀಶ್ ಸ್ವಾಗತಿಸಿದರು. ಎಚ್. ತಿಮ್ಮಪ್ಪ ನಿರೂಪಿಸಿದರು.

ಹೆಣ್ಣು ಮಕ್ಕಳು ರಾಜಕಾರಣ ಪ್ರವೇಶಿಸಲು ಕೆಆರ್‌ಎಸ್ ಪಕ್ಷದಿಂದ ಮುಕ್ತ ಅವಕಾಶ : ಜನನಿ ವತ್ಸಲಾ

ಭದ್ರಾವತಿಯಲ್ಲಿ ಕೆಆರ್‌ಎಸ್ ಪಕ್ಷದ ಬೆಂಗಳೂರು ನಗರ ಕಾರ್ಯದರ್ಶಿ ಜನನಿ ವತ್ಸಲ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಯಿತು. ಜಂಟಿ ಕಾರ್ಯದರ್ಶಿ ಪುಷ್ಪ, ರಾಮೇಶ್ವರಿ, ಅಂಬಿಕಾ ಸೆರಿದಂತೆ ಇನ್ನಿತರರಿದ್ದರು.
    ಭದ್ರಾವತಿ, ಜ. ೧೧: ಪ್ರಾಮಾಣಿಕ, ಜನಪರ ಕಾಳಜಿ ಹೊಂದಿರುವ ವಿದ್ಯಾವಂತ ಮಹಿಳೆಯರಿಗೆ ರಾಜಕೀಯ ರಂಗ ಪ್ರವೇಶಿಸಲು 'ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ' ಮುಕ್ತ ಅವಕಾಶ ನೀಡಲಿದ್ದು, ಆಸಕ್ತ ಸ್ವಾಭಿಮಾನಿ ಕನ್ನಡದ ಮಹಿಳೆಯರು ಪಕ್ಷ ಸೇರ್ಪಡೆಗೆ ಮುಂದಾಗುವಂತೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಬೆಂಗಳೂರು ನಗರ ಕಾರ್ಯದರ್ಶಿ, ಮಹಿಳಾ ಉಸ್ತುವಾರಿ ಜನನಿ ವತ್ಸಲಾ ಹೇಳಿದರು.
    ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುವ  ಮೂಲಕ ವಿಧಾನಸಭೆಯಲ್ಲಿ ಮಹಿಳಾ ಶಕ್ತಿ ವೃದ್ದಿಸಬೇಕಾಗಿದೆ. ಈ ಹಿನ್ನಲೆಯಲ್ಲಿ ಪಕ್ಷವು ಮಹಿಳೆಯರನ್ನು ರಾಜಕೀಯಕ್ಕೆ ಆಹ್ವಾನಿಸುತ್ತಿದೆ. ಪ್ರ್ರಾಮಾಣಿಕ ರಾಜಕಾರಣ ಮಾಡಬಯಸುವ ಅರ್ಹ ಮಹಿಳೆಯರು ಪಕ್ಷಕ್ಕೆ ಸೇರ್ಪಡೆಕೊಳ್ಳಬೇಕೆಂದು ಮನವಿ ಮಾಡಿದರು.
    ಇತ್ತೀಚೆಗೆ ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರು ಅಷ್ಟಾಗಿ ಕಂಡು ಬರುತ್ತಿಲ್ಲ. ಪ್ರಸ್ತುತ ಜೆಡಿಎಸ್, ಕಾಂಗ್ರೆಸ್, ಬಿಜೆಪಿಯಂತಹ ರಾಜಕೀಯ ಪಕ್ಷಗಳು ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುತ್ತಿಲ್ಲ. ಮಹಿಳೆಯರಿಗೆ ಲಭಿಸಬೇಕಾದ ರಾಜಕೀಯ ಸ್ಥಾನಮಾನಗಳನ್ನು ನೀಡುತ್ತಿಲ್ಲ. ಮಹಿಳಾ ಮೀಸಲಿರುವ ಕಡೆಯಲ್ಲಿಯೂ ಕೂಡ ಪುರುಷ ಪ್ರಾಬಲ್ಯವೇ ನಡೆಯುತ್ತಿದೆ. ಶಾಸನಸಭೆಯಲ್ಲಿ ಮಹಿಳೆಯರ ಬಗ್ಗೆ ಧ್ವನಿ ಎತ್ತುವಂತಹ ಮಹಿಳಾ ನಾಯಕಿಯರು ಬೇಕಾಗಿದ್ದಾರೆ. ಈ ನಿಟ್ಟಿನಲ್ಲಿ ರೈತಪರ, ಹೋರಾಟಪರ ಮಹಿಳೆಯರು ಕೆಆರ್‌ಎಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವುದು ಅವಶ್ಯಕವಾಗಿದೆ ಎಂದರು.  
    ಆರಂಭದಲ್ಲಿ ಕೇವಲ ೨೦ ಕಾರ್ಯಕರ್ತರಿಂದ ಆರಂಭವಾದ ಪಕ್ಷದಲ್ಲಿ ಈಗ ೩೦ ಸಾವಿರ ಕಾರ್ಯಕರ್ತರಿದ್ದಾರೆ. ಪಕ್ಷದ ನಿಲುವುಗಳಿಗೆ ಬದ್ಧರಾಗಿ ಸ್ವಚ್ಚ, ಜನಪರ ರಾಜಕಾರಣ ನಡೆಸಲು ನಿತ್ಯ ಸಾಕಷ್ಟು ಜನರು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಇದಕ್ಕೆ ಪೂರಕವಾಗಿ 'ಸ್ವಾಭಿಮಾನಿ ಕನ್ನಡದ ಹೆಣ್ಣೇ ಪವಿತ್ರ ರಾಜಕಾರಣಕ್ಕೆ ಮುಂದಾಗು' ಎನ್ನುವ ಅಭಿಯಾನ ಆರಂಭಿಸಿದ್ದು, ಈಗಾಗಲೇ ಎರಡು ಹಂತದಲ್ಲಿ ಅಭಿಯಾನ ಮುಕ್ತಾಯಗೊಳಿಸಲಾಗಿದೆ. ಇದೀಗ ೩ನೇ ಹಂತದಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚನ್ನಗಿರಿ, ಚಿತ್ರದುರ್ಗ ನಗರಗಳಲ್ಲಿ ಅಭಿಯಾನ ನಡೆಸಲಾಗುತ್ತಿದೆ ಎಂದರು.
    ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಮಹಿಳಾ ಘಟಕದ ಜಂಟಿ ಕಾರ್ಯದರ್ಶಿ ಪುಷ್ಪ, ರಾಮೇಶ್ವರಿ, ಅಂಬಿಕಾ, ಆನೇಕಲ್ ಜಯರಾಂ, ನಾಗರಾಜ್‌ರಾವ್ ಸಿಂಧೆ, ತ್ಯಾಗರಾಜ್, ಶಬರೀಶ್, ಸುಮಿತ್ರಾಬಾಯಿ, ಕಲಾವತಿ, ನಾಗರಾಜ್, ನಾಗರತ್ನಮ್ಮ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.