ಭದ್ರಾವತಿಯಲ್ಲಿ ೧೬ ದಿನಗಳಿಂದ ವಿಐಎಸ್ಎಲ್ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಕಾರ್ಖಾನೆ ಮುಂಭಾಗದಲ್ಲಿ ಅನಿರ್ಧಿಷ್ಟಾವಧಿ ಹೋರಾಟ ನಡೆಸುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ಶುಕ್ರವಾರ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಬೆಂಬಲ ಸೂಚಿಸಿ ಮಾತನಾಡಿದರು.
ಭದ್ರಾವತಿ, ಫೆ. ೩ : ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸರ್.ಎಂ ವಿಶ್ವೇಶ್ವರಾಯ ಹಾಗು ಮೈಸೂರು ಮಹಾರಾಜರ ಪರಿಶ್ರಮದ ಫಲವಾಗಿ ಸ್ಥಾಪನೆಗೊಂಡಿರುವ ಸರ್.ಎಂ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ರಾಜ್ಯದ ಜನತೆಗೆ ಉಳಿಸಿಕೊಡುವ ಮೂಲಕ ಶಿವಮೊಗ್ಗ ಜಿಲ್ಲೆಯ ಜನರ ಋಣ ತೀರಿಸಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಆಗ್ರಹಿಸಿದರು.
ಕಳೆದ ೧೬ ದಿನಗಳಿಂದ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಕಾರ್ಖಾನೆ ಮುಂಭಾಗದಲ್ಲಿ ಅನಿರ್ಧಿಷ್ಟಾವಧಿ ಹೋರಾಟ ನಡೆಸುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ಅವರು ಶುಕ್ರವಾರ ಬೆಂಬಲ ಸೂಚಿಸಿ ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗದಂತೆ ಧೈರ್ಯ ತುಂಬುವ ಮೂಲಕ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ಮಾಜಿ ಪ್ರಧಾನಿ ದೇವೇಗೌಡರು ಈ ಕಾರ್ಖಾನೆಯನ್ನು ಉಕ್ಕು ಪ್ರಾಧಿಕಾರಕ್ಕೆ ವಹಿಸಿಕೊಡುವ ಸಂದರ್ಭದಲ್ಲಿ ಸುಮಾರು ೬೫೦ ಕೋ.ರು. ವೆಚ್ಚದಲ್ಲಿ ಅಭಿವೃದ್ಧಿಗೆ ಸಂಬಂಧ ರೂಪುರೇಷೆ ಸಿದ್ದಪಡಿಸಿದ್ದರು. ಆದರೆ ಈ ರೂಪುರೇಷೆಯನ್ನು ಉಕ್ಕು ಪ್ರಾಧಿಕಾರ ಅನುಷ್ಠಾನಕ್ಕೆ ತರಲಿಲ್ಲ. ಅಷ್ಟರಲ್ಲಿ ದೇವೇಗೌಡರು ಅನಿವಾರ್ಯ ಕಾರಣಗಳಿಂದ ಪ್ರಧಾನಿ ಹುದ್ದೆಯಿಂದ ನಿರ್ಗಮಿಸಿದರು. ಆ ನಂತರದ ಬೆಳವಣಿಗೆಯಲ್ಲಿ ಕಾರ್ಖಾನೆಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಲಾಗಿದೆ ಎಂದು ಆರೋಪಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಈ ಕಾರ್ಖಾನೆಯನ್ನು ಉಳಿಸಿಕೊಳ್ಳಲು ಇಚ್ಛಾಶಕ್ತಿ ಪ್ರದರ್ಶಿಸಿ ಜಿಲ್ಲೆಯ ಜನರ ಋಣ ತೀರಿಸಬೇಕು. ಕನಿಷ್ಠ ಪಕ್ಷ ಮುಂದಿನ ೩ ತಿಂಗಳವರೆಗೆ ಯಾವುದೇ ಬೆಳವಣಿಗೆಗಳು ನಡೆಯದಂತೆ ನೋಡಿಕೊಂಡರೇ ಸಾಕು. ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತವಾಗಿದೆ. ಈ ಕಾರ್ಖಾನೆಯನ್ನು ನಮ್ಮ ಸರ್ಕಾರ ಶೇ.೪೦ ಕಮಿಷನ್ ದಂಧೆಗೆ ಕಡಿವಾಣ ಹಾಕಿ ಜನರ ತೆರಿಗೆ ಹಣದಲ್ಲಿ ಈ ಕಾರ್ಖಾನೆಯನ್ನು ಮುನ್ನಡೆಸಿಕೊಂಡು ಹೋಗಲಿದೆ. ಉಕ್ಕು ಪ್ರಾಧಿಕಾರ ಯಾವುದೇ ಬಂಡವಾಳ ಹೂಡುವ ಅಗತ್ಯವಿಲ್ಲ. ಕೇಂದ್ರ ಸರ್ಕಾರದ ಬಳಿ ನಾವು ಭಿಕ್ಷೆ ಬೇಡುವುದು ತಪ್ಪುತ್ತದೆ ಎಂದರು.
ಕಾರ್ಖಾನೆ ಉಳಿಸಿ ಬೊಮ್ಮಾಯಿಯವರಿಗೆ ಗೌರವ ನೀಡಿ:
ಇಂದಿನ ಡಬ್ಬಲ್ ಇಂಜಿನ್ ಸರ್ಕಾರ ಶ್ರಮ ಜೀವಿಗಳಾದ ಕಾರ್ಮಿಕರನ್ನು ಬೀದಿಗೆ ತಳ್ಳುವುದು ಸರಿಯಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಆತ್ಮ ಸಾಕ್ಷಿ ಇದ್ದಲ್ಲಿ ಈ ಕಾರ್ಖಾನೆಯನ್ನು ಉಳಿಸುವ ಮೂಲಕ ಅಂದು ರಾಜ್ಯದ ಮಂತ್ರಿಯಾಗಿದ್ದ ಅವರ ತಂದೆ ಬೊಮ್ಮಾಯಿಯವರಿಗೆ ಗೌರವ ಸಲ್ಲಿಸುವಂತಹ ಕೆಲಸ ಮಾಡಲಿ ಎಂದರು.
ಹೋರಾಟದ ಮುಂಚೂಣಿಗೆ ಬರಲು ಸಿದ್ದ :
ನೂತನ ವಿಮಾನ ನಿಲ್ದಾಣ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸುತ್ತಿರುವುದು ತಿಳಿದು ಬಂದಿದೆ. ಈ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವ ಮೂಲಕ ಹೋರಾಟವನ್ನು ತೀವ್ರಗೊಳಿಸಬೇಕು. ಅನಿವಾರ್ಯವಾದಲ್ಲಿ ಈ ಹೋರಾಟದ ಮುಂಚೂಣಿಗೆ ಬಂದು ಪ್ರಧಾನಿಯವರನ್ನು ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸಿ ಅಭಿವೃದ್ಧಿಗೊಳಿಸುವಂತೆ ಆಗ್ರಹಿಸಲಾಗುವುದು ಎಂದರು.
ವಿಐಎಸ್ಎಲ್-ಎಂಪಿಎಂ ಉಳಿಸಿಕೊಳ್ಳುವುದು ನನ್ನ ಜವಾಬ್ದಾರಿ :
ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಆರೋಗ್ಯ ಸರಿ ಇಲ್ಲದ ಕಾರಣ ಅವರು ಹೋರಾಟದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಅವರ ಪರವಾಗಿ ನಾನು ಹೋರಾಟಕ್ಕೆ ಸಿದ್ದವಾಗಿದ್ದೇನೆ. ವಿಐಎಸ್ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳನ್ನು ಉಳಿಸಿಕೊಳ್ಳುವುದು ನನ್ನ ಜವಾಬ್ದಾರಿಯಾಗಿದೆ. ಈ ಹಿನ್ನಲೆಯಲ್ಲಿ ಕಾರ್ಮಿಕರು, ಕ್ಷೇತ್ರದ ಜನರು ಭಯಪಡುವ ಅಗತ್ಯವಿಲ್ಲ ಎಂದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಮಾತನಾಡಿ, ರಾಜ್ಯಾಧ್ಯಕ್ಷನಾದ ನಂತರ ನಾನು ಮೊದಲ ಬಾರಿಗೆ ನನ್ನ ತವರು ಮನೆಗೆ ಬಂದಿದ್ದೇನೆ. ಇತ್ತೀಚೆಗೆ ತಾಯಿ ಕಳೆದುಕೊಂಡಿರುವ ನನಗೆ ನನ್ನ ತಾಯಿಯನ್ನು ನೋಡಿದಷ್ಟು ಸಂಭ್ರಮ ಉಂಟಾಗುತ್ತಿದೆ ಎಂದರು. ಈ ಕಾರ್ಖಾನೆಯಲ್ಲಿ ನಾನು ಸಹ ಒಬ್ಬ ಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡಿದ್ದು, ಈ ಕಾರ್ಖಾನೆಯ ಋಣ ನನ್ನ ಮೇಲಿದೆ. ಯಾರು ಸಹ ದೆಹಲಿ ಹೋಗಿ ಯಾರ ಕಾಲು ಸಹ ಹಿಡಿಯುವುದು ಬೇಡ. ಇನ್ನೇನು ಚುನಾವಣೆ ಬರಲಿದ್ದು, ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗುವುದು ಖಚಿತ. ನಮ್ಮ ಸರ್ಕಾರ ಈ ಕಾರ್ಖಾನೆಯನ್ನು ಉಳಿಸಿಕೊಳ್ಳುವುದು ಖಚಿತ ಎಂದು ಭರವಸೆ ನೀಡಿದರು.
ಅಧ್ಯಕ್ಷತೆವಹಿಸಿದ್ದ ಶಾರದ ಅಪ್ಪಾಜಿ ಮಾತನಾಡಿ, ನಾನು ಓರ್ವ ಕಾರ್ಮಿಕನ ಪತ್ನಿಯಾಗಿ ಅವರ ಸಂಕಷ್ಟಗಳನ್ನು ಅರಿತುಕೊಂಡಿದ್ದೇನೆ. ಕುಮಾರಸ್ವಾಮಿಯವರು ಈ ಕಾರ್ಖಾನೆಯನ್ನು ಉಳಿಸಿಕೊಡಲಿದ್ದಾರೆಂಬ ಸಂಪೂರ್ಣ ವಿಶ್ವಾಸವಿದೆ ಎಂದರು.
ವಿಧಾನಪರಿಷತ್ ಸದಸ್ಯ ಭೋಜೇಗೌಡ, ಮಾಜಿ ಶಾಸಕಿ ಶಾರದ ಪೂರ್ಯನಾಯ್ಕ, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್, ಪ್ರಮುಖರಾದ ಜೆ.ಪಿ ಯೋಗೇಶ್, ಹಿರಿಯ ಕಾರ್ಮಿಕ ಮುಖಂಡ ಡಿ.ಸಿ ಮಾಯಣ್ಣ, ಆರ್. ಕರುಣಾಮೂರ್ತಿ, ಮಧುಕುಮಾರ್, ಗೀತಾ ಪವಾರ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಮಹಿಳಾ ಕಾರ್ಮಿಕರು ತಮ್ಮ ಅಳಲುಗಳನ್ನು ತೋರ್ಪಡಿಸಿಕೊಂಡರು.