Monday, April 10, 2023

ಜಯಕುಮಾರ್ ನಿಧನ

ಜಯಕುಮಾರ್ 
    ಭದ್ರಾವತಿ, ಏ. ೧೦ : ನಗರಸಭೆ ವಾರ್ಡ್ ನಂ.೧೨ರ ಹೊಸಮನೆ ಎನ್‌ಎಂಸಿ ನಿವಾಸಿ, ದಿನ ಪತ್ರಿಕೆ ವಿತರಕ, ಚಿತ್ರಮಂದಿರ ಸಿಬ್ಬಂದಿ ಜಯಕುಮಾರ್(೫೩) ನಿಧನ ಹೊಂದಿದರು.
    ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಇದ್ದರು. ಸುಮಾರು ೩೫ ವರ್ಷಗಳಿಂದ ದಿನ ಪತ್ರಿಕೆ ವಿತರಕರಾಗಿದ್ದರು. ಅಲ್ಲದೆ ಚನ್ನಗಿರಿ ರಸ್ತೆಯ ಸತ್ಯ ಚಿತ್ರ ಮಂದಿರದಲ್ಲಿ ಸಿಬ್ಬಂದಿಯಾಗಿದ್ದರು.  ಇವರ ನಿಧನಕ್ಕೆ ನಗರದ ಪತ್ರಿಕಾ ವಿತರಕರು ಸಂತಾಪ ಸೂಚಿಸಿದ್ದಾರೆ.

ಪ್ರಗತಿಪರ ಸಂಘಟನೆಗಳಿಂದ ಏ.೧೪ರಂದು ಅಂಬೇಡ್ಕರ್ ಜಯಂತಿ

ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಜನ್ಮದಿನ ಏ.೧೪ರಂದು ನಗರದಲ್ಲಿ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಸುರೇಶ್ ಹೇಳಿದರು.
    ಭದ್ರಾವತಿ, ಏ. ೧೦ : ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಜನ್ಮದಿನ ಏ.೧೪ರಂದು ನಗರದಲ್ಲಿ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಸುರೇಶ್ ಹೇಳಿದರು.
    ಅಂಬೇಡ್ಕರ್‌ರವರು ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತರಾದ ವ್ಯಕ್ತಿಯಾಗಿಲ್ಲ. ಸಂವಿಧಾನ ರಚಿಸುವ ಮೂಲಕ ಈ ದೇಶಕ್ಕೆ ಸದೃಢವಾದ ಪ್ರಜಾಪ್ರಭುತ್ವ ವ್ಯವಸ್ಥೆ ರೂಪಿಸಿ ಕೊಟ್ಟಿದ್ದಾರೆ. ಚುನಾವಣೆ ನೀತಿ ಸಂಹಿತೆ ನೆಪದಲ್ಲಿ ಇವರ ಜನ್ಮದಿನ ಆಚರಣೆ ಮೊಟಕುಗೊಳಿಸುವುದು ಸರಿಯಲ್ಲ ಎಂದರು.
    ರಾಜಕೀಯ ಹೊರಗಿಟ್ಟು ನಗರದ ಎಲ್ಲಾ ಪ್ರಗತಿಪರ ಸಂಘಟನೆಗಳು ಒಗ್ಗಟ್ಟಾಗಿ ಅಂಬೇಡ್ಕರ್‌ರವರ ಜನ್ಮದಿನ ಆಚರಿಸುತ್ತಿದ್ದು, ಅಂದು ಬೆಳಿಗ್ಗೆ ೧೦.೩೦ಕ್ಕೆ ನಗರದ ಬಿ.ಎಚ್ ರಸ್ತೆ, ಅಂಡರ್ ಬ್ರಿಡ್ಜ್ ಬಳಿ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬೈಕ್ ರ‍್ಯಾಲಿ ನಡೆಸಲಾಗುವುದು. ನಂತರ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ಅಧ್ಯಕ್ಷ ಮಂಜುನಾಥ್, ನಾಲ್ವಡಿ ಕೃಷ್ಣರಾಜ ಒಡೆಯರ್ ಸಾರ್ವಜನಿಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆರ್. ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಜಗದೀಶ್, ತೆಲುಗು ಕ್ರಿಶ್ಚಿಯನ್ ಅಸೋಸಿಯೇಷನ್ ಅಧ್ಯಕ್ಷ ಭಾಸ್ಕರ್ ಬಾಬು, ಮೋಚಿ ಮಹಿಳಾ ಸಮಾಜದ ಅಧ್ಯಕ್ಷೆ ರೇಖಾ, ಕನ್ನಡ ರಕ್ಷಣಾ ವೇದಿಕೆ ಮುರುಳಿ, ಪ್ರಮುಖರಾದ ಚಂದ್ರಶೇಖರ್, ರಾಜೇಂದ್ರ, ಬಿ. ರಮೇಶ್, ಸಿ. ಜಯಪ್ಪ, ಈ.ಪಿ ಬಸವರಾಜ್, ದೇವದಾನಂ, ಐಸಾಕ್ ಲಿಂಕನ್, ಜಗದೀಶ್, ಟಿ. ರಮೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.    

Sunday, April 9, 2023

ಡಾ. ವಿಜಯದೇವಿ ಅಕ್ಕಮಹಾದೇವಿ ಪ್ರಶಸ್ತಿಗೆ ಆಯ್ಕೆ

ಡಾ. ವಿಜಯದೇವಿ
    ಭದ್ರಾವತಿ, ಏ. ೯ : ನಗರದ ನಿವಾಸಿ, ವಿಜಯಪುರ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವ ವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕಿ, ಎಮೆರಿಟಸ್ ಪ್ರೊಫೆಸರ್ ಡಾ. ವಿಜಯದೇವಿಯವರು 'ಅಕ್ಕಮಹಾದೇವಿ ಪ್ರಶಸ್ತಿ'ಗೆ ಆಯ್ಕೆಯಾಗಿದ್ದಾರೆ.
    ಬೆಂಗಳೂರಿನ ಜೋಳನಾಯಕನಹಳ್ಳಿಯ ಸುಮಂಗಲಿ ಸೇವಾ ಆಶ್ರಮ ಮೊದಲ ಬಾರಿಗೆ ಪ್ರಸಕ್ತ ಸಾಲಿನಿಂದ ಸಮಾಜ ಸೇವೆ, ಸಾಹಿತ್ಯ ಹಾಗು ನಾಡು-ನುಡಿಗಾಗಿ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿ ವಿವಿಧ ಪ್ರಶಸ್ತಿಗಳನ್ನು ನೀಡಲು ತೀರ್ಮಾನಿಸಿದೆ.
    ಡಾ. ವಿಜಯದೇವಿಯವರಿಗೆ ಸಾಹಿತ್ಯ ಹಾಗು ಸಮಾಜ ಸೇವೆಯನ್ನು ಗುರುತಿಸಿ ಅಕ್ಕಮಹಾದೇವಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಏ.೨೩ರಂದು ಆಯೋಜಿಸಲಾಗಿರುವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದೆ.

ಮಕ್ಕಳಲ್ಲಿ ವ್ಯವಹಾರ ಜ್ಞಾನ ಹೆಚ್ಚಿಸಲು ಸೂಪರ್ ಸಂಡೆ ತರಕಾರಿ ಮಾರ್ಕೇಟ್

ಭದ್ರಾವತಿ ಅಪ್ಪರ್ ಹುತ್ತಾದಲ್ಲಿರುವ ಅನನ್ಯ ಶಿಕ್ಷಣ ಸಂಸ್ಥೆಯಲ್ಲಿ  ಬೇಸಿಗೆ ಶಿಬಿರದ ಅಂಗವಾಗಿ ಭಾನುವಾರ ವಿಶೇಷವಾಗಿ ಮಕ್ಕಳಿಗೆ ವ್ಯವಹಾರ ಜ್ಞಾನ ಹೆಚ್ಚಿಸುವ ಉದ್ದೇಶದಿಂದ ಅನನ್ಯ ಸೂಪರ್ ಸಂಡೆ ತರಕಾರಿ ಮಾರ್ಕೇಟ್ ರೂಪಿಸಲಾಗಿತ್ತು.
    ಭದ್ರಾವತಿ, ಏ. ೯ : ನಗರದ ಅಪ್ಪರ್ ಹುತ್ತಾದಲ್ಲಿರುವ ಅನನ್ಯ ಶಿಕ್ಷಣ ಸಂಸ್ಥೆಯಲ್ಲಿ  ಬೇಸಿಗೆ ಶಿಬಿರದ ಅಂಗವಾಗಿ ಭಾನುವಾರ ವಿಶೇಷವಾಗಿ ಮಕ್ಕಳಿಗೆ ವ್ಯವಹಾರ ಜ್ಞಾನ ಹೆಚ್ಚಿಸುವ ಉದ್ದೇಶದಿಂದ ಅನನ್ಯ ಸೂಪರ್ ಸಂಡೆ ತರಕಾರಿ ಮಾರ್ಕೇಟ್ ರೂಪಿಸಲಾಗಿತ್ತು.
    ಶಾಲಾ ಆವರಣದಲ್ಲಿ ರೂಪಿಸಲಾಗಿದ್ದ ಮಾರ್ಕೇಟ್‌ನಲ್ಲಿ ಮಕ್ಕಳು ಬಗೆ ಬಗೆಯ ಸೊಪ್ಪು, ತರಕಾರಿ ಮಾರಾಟದಲ್ಲಿ ತೊಡಗಿದರು. ಎಲೆಕ್ಟ್ರಾನಿಕ್  ಯಂತ್ರ, ತಕ್ಕಡಿ ಬಳಸಿ ತೂಕ ಅಳತೆ ಮಾಡಲಾಯಿತು. ಇದಕ್ಕೂ ಮೊದಲು ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೆ. ನಾಗರಾಜ್ ಮಾರ್ಕೇಟ್ ಉದ್ಘಾಟಿಸಿದರು.
    ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ವೇಣುಗೋಪಾಲ್, ಪ್ರಾಂಶುಪಾಲ ಕಲ್ಲೇಶ್ ಹಾಗು ಶಿಕ್ಷಕ ಮತ್ತು ಶಿಕ್ಷಕಿಯರು, ಸಿಬ್ಬಂದಿ ವರ್ಗದವರು, ಪೋಷಕರು ಉಪಸ್ಥಿತರಿದ್ದರು.

ಮುಖಂಡ ಅಯೂಬ್ ಖಾನ್, ದೇಹದಾರ್ಢ್ಯಪಟು ಶೌಕತ್ ಆಲಿ ಕಾಂಗ್ರೆಸ್ ಸೇರ್ಪಡೆ


ಭದ್ರಾವತಿ ಅಲ್ಪಸಂಖ್ಯಾತ ಸಮುದಾಯದ ಮುಖಂಡ ಅಯೂಬ್ ಖಾನ್ ಶಾಸಕ ಬಿ.ಕೆ ಸಂಗಮೇಶ್ವರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.
    ಭದ್ರಾವತಿ, ಏ. ೯ : ನಗರದ ಅಲ್ಪಸಂಖ್ಯಾತ ಸಮುದಾಯದ ಮುಖಂಡ ಅಯೂಬ್ ಖಾನ್ ಶಾಸಕ ಬಿ.ಕೆ ಸಂಗಮೇಶ್ವರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.
    ಹಲವಾರು ವರ್ಷಗಳಿಂದ ವಿವಿಧ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಗುರುತಿಸಿಕೊಂಡಿರುವ ಅಯೂಬ್ ಖಾನ್‌ರವರು ಪಕ್ಷಕ್ಕೆ ಸೇರ್ಪಡೆಗೊಂಡು ಮಾತನಾಡಿ, ಪ್ರಸ್ತುತ ಕ್ಷೇತ್ರದಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಬೆಂಬಲಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದೇನೆ.  ಶಾಸಕ ಬಿ.ಕೆ ಸಂಗಮೇಶ್ವರ್ ರಾಜಕೀಯ ಭವಿಷ್ಯ ಮತ್ತಷ್ಟು ಉಜ್ವಲಗೊಳ್ಳುವ ಮೂಲಕ ಕ್ಷೇತ್ರ ಸರ್ವತೋಮುಖವಾಗಿ ಮತ್ತಷ್ಟು ಅಭಿವೃದ್ಧಿಗೊಳ್ಳುವ ವಿಶ್ವಾಸವಿದೆ ಎಂದರು.  


ಭದ್ರಾವತಿ ಅಲ್ಪಸಂಖ್ಯಾತ ಸಮುದಾಯದ ಮುಖಂಡ, ದೇಹದಾರ್ಢ್ಯ ಪಟು ಶೌಕತ್ ಆಲಿ ಶಾಸಕ ಬಿ.ಕೆ ಸಂಗಮೇಶ್ವರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.
    ದೇಹದಾರ್ಢ್ಯ ಪಟು ಶೌಕತ್ ಆಲಿ ಸಹ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು. ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ಮುಖಂಡರಾದ ಬಾಬಳ್ಳಿ ರಾಜಶೇಖರ್, ಅಬ್ದುಲ್ ಖದೀರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ವೀರಭದ್ರ ಲಯನ್ಸ್ ಜಿಲ್ಲಾ ಕ್ರೀಡಾಕೂಟಕ್ಕೆ ಚಾಲನೆ : ಕ್ರೀಡಾಪಟು ಮುನಿರ್ ಬಾಷಾಗೆ ಸನ್ಮಾನ

ಲಯನ್ಸ್ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಟ್ ೩೧೭ಸಿ ವತಿಯಿಂದ ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಹಾಕಿ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ವೀರಭದ್ರ ಲಯನ್ಸ್ ಜಿಲ್ಲಾ ಕ್ರೀಡಾಕೂಟಕ್ಕೆ ವಿಐಎಸ್‌ಎಲ್ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ ಚಾಲನೆ ನೀಡಿದರು.
    ಭದ್ರಾವತಿ, ಏ. ೯: ಲಯನ್ಸ್ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಟ್ ೩೧೭ಸಿ ವತಿಯಿಂದ ನ್ಯೂಟೌನ್ ವಿಐಎಸ್‌ಎಲ್ ಹಾಕಿ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ವೀರಭದ್ರ ಲಯನ್ಸ್ ಜಿಲ್ಲಾ ಕ್ರೀಡಾಕೂಟಕ್ಕೆ ವಿಐಎಸ್‌ಎಲ್ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ ಚಾಲನೆ ನೀಡಿದರು.
    ದಿವಂಗತ ಲಯನ್ಸ್ ಕೆ.ಸಿ ವೀರಭದ್ರಪ್ಪ ಸ್ಮರಣಾರ್ಥ ಜಿಲ್ಲಾ ಗವರ್ನರ್ ಲಯನ್ಸ್ ಡಾ. ಎಂ.ಕೆ ಭಟ್ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಕ್ರೀಡಾಕೂಟದಲ್ಲಿ ಜಿಲ್ಲೆಯ ಲಯನ್ಸ್ ಹಾಗು ಲಿಯೋ ಕ್ಲಬ್ ಸದಸ್ಯರು ಭಾಗವಹಿಸಿದ್ದರು.
    ನ್ಯೂಟೌನ್ ಶಿವಭದ್ರ ಟ್ರಸ್ಟ್ ತರಂಗ ಕಿವುಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಅಧ್ಯಕ್ಷ, ವೈದ್ಯ ಡಾ. ಟಿ. ನರೇಂದ್ರ ಭಟ್, ಲಯನ್ಸ್ ಕ್ಲಬ್ ಅಧ್ಯಕ್ಷ ಎ.ಎನ್ ಕಾರ್ತಿಕ್, ಕಾರ್ಯದರ್ಶಿ ಎಂ. ನಾಗರಾಜ್ ಶೇಟ್, ಖಜಾಂಚಿ ಜಿ.ಪಿ ದರ್ಶನ್, ಶ್ರೀಮತಿ ಕೆ.ಸಿ ವೀರಭದ್ರಪ್ಪ, ಕ್ರೀಡಾ ಸಂಯೋಜಕರಾಗಿ ಎಲ್. ದೇವರಾಜ್, ಗಿರೀಶ್ ಬಂಡಿಗಡಿ ಮತ್ತು ಎಂ.ಜಿ ರಾಜೀವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಖೋ ಖೋ ಕ್ರೀಡಾಪಟು, ಏಕಲವ್ಯ ಪ್ರಶಸ್ತಿ ವಿಜೇತ ಮುನಿರ್‌ಬಾಷಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ದೊಡ್ಡೇರಿ ಸರ್ಕಾರಿ ಶಾಲೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗೆ ಸೌಲಭ್ಯ ವಿತರಿಸಲಾಯಿತು.


ಲಯನ್ಸ್ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಟ್ ೩೧೭ಸಿ ವತಿಯಿಂದ ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಹಾಕಿ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ವೀರಭದ್ರ ಲಯನ್ಸ್ ಜಿಲ್ಲಾ ಕ್ರೀಡಾಕೂಟದಲ್ಲಿ ಏಕಲವ್ಯ ಪ್ರಶಸ್ತಿ ವಿಜೇತ ಮುನಿರ್‌ಬಾಷಾರನ್ನು ಸನ್ಮಾನಿಸಿ ಗೌರವಿಸಲಾಯಿತು.

Saturday, April 8, 2023

ಕೆಆರ್‌ಎಸ್ ಪಕ್ಷದ ಅಭ್ಯರ್ಥಿಯಾಗಿ ಸಮಾಜ ಸೇವಕಿ ಸುಮಿತ್ರ ಬಾಯಿ

ಸುಮಿತ್ರ ಬಾಯಿ
    ಭದ್ರಾವತಿ, ಏ. ೮ : ರಾಜ್ಯ ವಿಧಾನಸಭಾ ಚುನಾವಣೆಗೆ ರವಿ ಕೃಷ್ಣಾ ರೆಡ್ಡಿ ನೇತೃತ್ವದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಕ್ಷೇತ್ರದಿಂದ ಸ್ಪರ್ಧಿಸಲು ಸುಮಿತ್ರ ಬಾಯಿಯವರಿಗೆ ಅವಕಾಶ ಲಭಿಸಿದೆ.
    ಉಜ್ಜನಿಪುರ ಶಂಕ್ರಪ್ಪ ಕಟ್ಟೆ ಕೆರೆ ಸಮೀಪ ತೋಟದ ಮನೆ ನಿವಾಸಿ ಸುಮಿತ್ರ ಬಾಯಿ ಸಾಮಾನ್ಯ ಕುಟುಂಬಕ್ಕೆ ಸೇರಿದ್ದು, ಇವರು ಹಲವಾರು ವರ್ಷಗಳಿಂದ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯ ಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
    ಇವರ ಪತಿ ನಾಗರಾಜ್‌ರಾವ್ ಸಿಂಧೆ ಎಂಪಿಎಂ ನಿವೃತ್ತ ಕಾರ್ಮಿಕರಾಗಿದ್ದು, ಪ್ರಸ್ತುತ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ತಾಲೂಕು ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಸಹ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಗುರುತಿಸಿಕೊಂಡಿದ್ದಾರೆ.
    ಈ ಬಾರಿ ಚುನಾವಣೆಗೆ ಪಕ್ಷದಿಂದ ಸ್ಪರ್ಧಿಸಲು ೩-೪ ಆಕಾಂಕ್ಷಿಗಳು ಪೈಪೋಟಿಗೆ ಮುಂದಾಗಿದ್ದರು. ಪಕ್ಷದ ರಾಜ್ಯ ಚುನಾವಣಾ ಸಮಿತಿ ಸುಮಿತ್ರ ಬಾಯಿಯವರನ್ನು ಆಯ್ಕೆ ಮಾಡಿದೆ.
    ಪಕ್ಷದ ವತಿಯಿಂದ ಈಗಾಗಲೇ ಕಳೆದ ಸುಮಾರು ೬ ತಿಂಗಳಿನಿಂದ ಕ್ಷೇತ್ರದಾದ್ಯಂತ ಪ್ರಚಾರ ಕಾರ್ಯ ಕೈಗೊಳ್ಳಲಾಗಿದ್ದು,  ಅಲ್ಲದೆ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾ ರೆಡ್ಡಿ ಸಹ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದಾರೆ. ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶ ನೀಡುವುದಾಗಿ ಪಕ್ಷದ ವರಿಷ್ಠರು ಈ ಹಿಂದೆ ಭರವಸೆ ನೀಡಿದ್ದರು. ಇದಕ್ಕೆ ಪೂರಕವೆಂಬಂತೆ ಕ್ಷೇತ್ರದಲ್ಲಿ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದು ವಿಶೇಷವಾಗಿದೆ.