ಶನಿವಾರ, ಏಪ್ರಿಲ್ 29, 2023

ಶಾರದ ಅಪ್ಪಾಜಿ ಪರ ಏ.೩೦ರಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಮತಯಾಚನೆ

ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ 
    ಭದ್ರಾವತಿ, ಏ. ೨೯: ಕ್ಷೇತ್ರದ ಜಾತ್ಯತೀತ ಜನತಾದಳ ಅಭ್ಯರ್ಥಿ ಶಾರದ ಅಪ್ಪಾಜಿ ಪರವಾಗಿ ಮತಯಾಚನೆ ನಡೆಸಲು ಪಕ್ಷದ ರಾಜ್ಯಾಧ್ಯಕ್ಷ, ಮಾಜಿ ಕೇಂದ್ರ ಸಚಿವ ಸಿ.ಎಂ ಇಬ್ರಾಹಿಂ ಏ.೩೦ರ ಭಾನುವಾರ ನಗರಕ್ಕೆ ಆಗಮಿಸುತ್ತಿದ್ದಾರೆ.
    ಮಧ್ಯಾಹ್ನ ೧೨ ಗಂಟೆಗೆ ಹೆಲಿಕಾಪ್ಟರ್ ಮೂಲಕ ಹುಡ್ಕೋಕಾಲೋನಿ ಹೆಲಿಪ್ಯಾಡ್‌ಗೆ ಆಗಮಿಸಲಿದ್ದು, ನಂತರ ಬೊಮ್ಮನಕಟ್ಟೆಗೆ ತೆರಳಿಲಿದ್ದಾರೆ. ಉಂಬ್ಳೆಬೈಲು ರಸ್ತೆ ಮಾರ್ಗವಾಗಿ ಕೃಷ್ಣಪ್ಪ ವೃತ್ತ, ಜಯಶ್ರೀ ವೃತ್ತ, ಅಂಬೇಡ್ಕರ್ ವೃತ್ತ, ಹಾಲಪ್ಪ ವೃತ್ತ, ಮಾಧವಚಾರ್ ವೃತ್ತ, ರಂಗಪ್ಪ ವೃತ್ತ, ಸೀಗೆಬಾಗಿ, ಅನ್ವರ್‌ಕಾಲೋನಿ, ತಾಲೂಕು ಕಛೇರಿ ರಸ್ತೆ, ಕಂಚಿನ ಬಾಗಿಲು, ಖಾಜಿಮೊಹಲ್ಲಾ, ಹೊಸಸೇತುವೆ ರಸ್ತೆ, ಬಿ.ಎಚ್ ರಸ್ತೆ ತಲುಪಿ ನಂತರ ಹುತ್ತಾ ಮಾರ್ಗವಾಗಿ ದೊಣಬಘಟ್ಟಕ್ಕೆ ತೆರಳಲಿದ್ದಾರೆ. ಕೊನೆಯಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.  
    ಪಕ್ಷದ ಮುಖಂಡರು, ಕಾರ್ಯಕರ್ತರು, ಅಲ್ಪಸಂಖ್ಯಾತರು ಸೇರಿದಂತೆ ಸಮಸ್ತ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸುವಂತೆ ಪಕ್ಷದ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮುರ್ತುಜಾಖಾನ್ ಮನವಿ ಮಾಡಿದ್ದಾರೆ.

ಜೆಡಿಎಸ್ ಅಭ್ಯರ್ಥಿಪರ ವಾರ್ಡ್ ೨೬ರಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ

ಭದ್ರಾವತಿ ಕ್ಷೇತ್ರದಾದ್ಯಂತ ಜಾತ್ಯತೀತ ಜನತಾದಳ ಅಭ್ಯರ್ಥಿ ಶಾರದ ಅಪ್ಪಾಜಿ ಪರವಾಗಿ ವ್ಯಾಪಕ ಪ್ರಚಾರ ನಡೆಯುತ್ತಿದ್ದು, ಶನಿವಾರ ನಗರಸಭೆ ವಾರ್ಡ್ ನಂ.೨೬ರಲ್ಲಿ ಪಕ್ಷದ ಸ್ಥಳೀಯ ಪ್ರಮುಖರು ಪ್ರಚಾರ ನಡೆಸಿದರು.
    ಭದ್ರಾವತಿ, ಏ. ೨೯: ಕ್ಷೇತ್ರದಾದ್ಯಂತ ಜಾತ್ಯತೀತ ಜನತಾದಳ ಅಭ್ಯರ್ಥಿ ಶಾರದ ಅಪ್ಪಾಜಿ ಪರವಾಗಿ ವ್ಯಾಪಕ ಪ್ರಚಾರ ನಡೆಯುತ್ತಿದ್ದು, ಶನಿವಾರ ನಗರಸಭೆ ವಾರ್ಡ್ ನಂ.೨೬ರಲ್ಲಿ ಪಕ್ಷದ ಸ್ಥಳೀಯ ಪ್ರಮುಖರು ಪ್ರಚಾರ ನಡೆಸಿದರು.
    ಬಾಲಭಾರತಿ, ನ್ಯೂಕಾಲೋನಿ ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ಈ ಬಾರಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಶಾರದ ಅಪ್ಪಾಜಿ ಬೆಂಬಲಿಸುವಂತೆ ಮತಯಾಚಿಸಿದರು.
    ಪ್ರಮುಖರಾದ ಪರಮೇಶ್ವರಿ, ಪುಷ್ಪಾವತಿ, ಕೆ.ವಿ ಚಂದ್ರಣ್ಣ, ಅಂತೋಣಿದಾಸ್, ಭಾಸ್ಕರ್, ವಿಷ್ಣು, ಗಂಗಾ, ಬಾಸ್ಕರ್(ಎನ್‌ಆರ್‌ಎಂ), ಈಶ್ವರ್, ಟೋನಿ ಸೇರಿದಂತೆ ಇನ್ನಿತರರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು.
    ನಗರಸಭೆ ೩೫ ವಾರ್ಡ್‌ಗಳಲ್ಲೂ ವ್ಯಾಪಕ ಪ್ರಚಾರ ನಡೆಯುತ್ತಿದ್ದು, ಆಯಾ ವಾರ್ಡ್ ವ್ಯಾಪ್ತಿಯಲ್ಲಿ ಆಯಾ ಭಾಗದ ಮುಖಂಡರುಗಳು ಒಂದೆಡೆ ಸಭೆ ನಡೆಸಿ ಮತಯಾಚಿಸುತ್ತಿದ್ದಾರೆ. ಈ ನಡುವೆ ಇತರೆ ಪಕ್ಷಗಳನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವವರ ಸಂಖ್ಯೆ ಸಹ ಹೆಚ್ಚಾಗುತ್ತಿದೆ.

ಏ.೩೦ರಂದು ‘ನಮ್ಮ ನಡೆ ಮತಗಟ್ಟೆಯ ಕಡೆ’ ಕಾಲ್ನಡಿಗೆ ಜಾಥಾ

    ಭದ್ರಾವತಿ, ಏ. ೨೯ : ಚುನಾವಣಾ ಆಯೋಗದ ಆದೇಶದ ಮೇರೆಗೆ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಹಾಗು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಸೂಚನೆ ಮೇರೆಗೆ ಏ.೩೦ರಂದು ಬೆಳಿಗ್ಗೆ ೮ ಗಂಟೆಗೆ ನಗರಸಭೆ ವತಿಯಿಂದ 'ನಮ್ಮ ನಡೆ ಮತಗಟ್ಟೆಯ ಕಡೆ' ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ.
    ಮತದಾರರಿಗೆ ಮತದಾನ ಹಾಗು ತಮ್ಮ ಮತಗಟ್ಟೆ ಕುರಿತು ಜಾಗೃತಿ ಮೂಡಿಸಲು ರಾಜ್ಯದ ಎಲ್ಲಾ ಮತಗಟ್ಟೆಗಳಲ್ಲಿ ಏಕಕಾಲಕ್ಕೆ ರಾಷ್ಟ್ರೀಯ ಹಬ್ಬದ ಮಾದರಿಯಲ್ಲಿ ಜಾಥಾ ಹಮ್ಮಿಕೊಳ್ಳಲಾಗಿದೆ. ನಗರದ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತದಿಂದ ಕಾಲ್ನಡಿಗೆ ಜಾಥಾ ಆರಂಭಗೊಂಡು ಹಳೇನಗರದ ಬಸವೇಶ್ವರ ವೃತ್ತದವರೆಗೆ ಸಾಗಲಿದೆ. ಜಾಥಾ ಯಶಸ್ವಿಗೊಳಿಸುವಂತೆ ನಗರಸಭೆ ಪೌರಾಯುಕ್ತ ಮನುಕುಮಾರ್ ಕೋರಿದ್ದಾರೆ.   

ಏ.೩೦ರಂದು ಶ್ರೀ ಶ್ರೀನಿವಾಸ ಸ್ವಾಮಿಯ ಕಲ್ಯಾಣೋತ್ಸವ


    ಭದ್ರಾವತಿ, ಏ. ೨೯: ಮಿಲ್ಟ್ರಿಕ್ಯಾಂಪ್ ಬೈಪಾಸ್ ರಸ್ತೆ ಶ್ರೀ ಶ್ರೀನಿವಾಸ ದೇವಸ್ಥಾನದಲ್ಲಿ ಏ.೩೦ರ ಭಾನುವಾರ ಬೆಳಿಗ್ಗೆ ೧೦ ಗಂಟೆಗೆ ಶ್ರೀ ಶ್ರೀನಿವಾಸ ಸ್ವಾಮಿಯ ಕಲ್ಯಾಣೋತ್ಸವ ಏರ್ಪಡಿಸಲಾಗಿದೆ.
    ಮಧ್ಯಾಹ್ನ ೧೨.೩೦ಕ್ಕೆ ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ಹಾಗು ಸ್ವಾಮಿಯ ಕಲ್ಯಾಣೋತ್ಸವದ ಕಂಕಣ ದೊರೆಯುತ್ತದೆ(ವಿವಾಹ ಪ್ರತಿಬಂಧಕರ ದೋಷದ ನಿವಾರಣೆಗೋಸ್ಕರ). ಹೆಚ್ಚಿನ ಮಾಹಿತಿಗೆ ಮೊ: ೯೮೪೫೫೪೬೨೧೧/೬೩೬೨೭೧೧೭೬೬  ಸಂಪರ್ಕಿಸಬಹುದಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಲ್ಯಾಣೋತ್ಸವ ಯಶಸ್ವಿಗೊಳಿಸಲು ಕೋರಲಾಗಿದೆ.

ರುದ್ರೇಶ್ ಪರವಾಗಿ ಮತದಾರರಿಗೆ ಹೆಚ್ಚಿನ ಒಲವು : ಹರಿಕೃಷ್ಣ

ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಂಗೋಟೆ ರುದ್ರೇಶ್ ಪರವಾಗಿ ಮತದಾರರು ಹೆಚ್ಚಿನ ಒಲವು ಹೊಂದಿದ್ದು, ಅವರ ಗೆಲುವು ಖಚಿತವಾಗಿದೆ ಎಂದು ಭಾರತೀಯ ಜನತಾ ಪಕ್ಷ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರಿಕೃಷ್ಣ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
    ಭದ್ರಾವತಿ, ಏ. ೨೯ : ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಂಗೋಟೆ ರುದ್ರೇಶ್ ಪರವಾಗಿ ಮತದಾರರು ಹೆಚ್ಚಿನ ಒಲವು ಹೊಂದಿದ್ದು, ಅವರ ಗೆಲುವು ಖಚಿತವಾಗಿದೆ ಎಂದು ಭಾರತೀಯ ಜನತಾ ಪಕ್ಷ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರಿಕೃಷ್ಣ ವಿಶ್ವಾಸ ವ್ಯಕ್ತಪಡಿಸಿದರು.
    ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗೆಲುವಿನೊಂದಿಗೆ ಈ ಬಾರಿ ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲೂ ವಿಜಯೋತ್ಸವ ಆಚರಿಸಲಿದ್ದೇವೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಮಾಜದ ಎಲ್ಲಾ ವರ್ಗದ ಜನರ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಕಾರ್ಮಿಕರು, ರೈತರು, ಮಹಿಳೆಯರು, ಯುವಕರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಅವರ ಜನಪರ ಕಾಳಜಿ ಹಾಗು ರಾಜ್ಯದಲ್ಲಿ ಬಿ.ಎಸ್ ಯಡಿಯೂರಪ್ಪನವರು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಅಭ್ಯರ್ಥಿ ಗೆಲುವಿಗೆ ಸಹಕಾರಿಯಾಗಿವೆ ಎಂದರು.
    ಪ್ರತಿಯೊಬ್ಬರ ಮನೆ ಮನೆಗೆ ತೆರಳಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಜನಪರ ಯೋಜನೆಗಳು, ಅಭಿವೃದ್ಧಿ ಕಾರ್ಯಗಳ ಕುರಿತು ಮನವರಿಕೆ ಮಾಡಿಕೊಡುವ ಮೂಲಕ ಮತಯಾಚನೆ ನಡೆಸಲಾಗುತ್ತಿದೆ. ಈಗಾಗಲೇ ಕ್ಷೇತ್ರದಾದ್ಯಂತ ವ್ಯಾಪಕ ಪ್ರಚಾರ ನಡೆಸಲಾಗಿದ್ದು, ಅಭ್ಯರ್ಥಿಪರವಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಹಿನ್ನಲೆಯಲ್ಲಿ ಅವರು ಗೆಲ್ಲುವ ವಿಶ್ವಾಸವಿದೆ ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ತಾಲೂಕು ಬಿಜೆಪಿ ಮಂಡಲ ಕಾರ್ಯದರ್ಶಿ ಚನ್ನೇಶ್, ಗೋಕುಲ್ ಕೃಷ್ಣ, ವಿನೋದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಶುಕ್ರವಾರ, ಏಪ್ರಿಲ್ 28, 2023

ಸಂಸದ ಬಿ.ವೈ ರಾಘವೇಂದ್ರ ನೇತೃತ್ವದಲ್ಲಿ ವಿವಿಧ ಸಮುದಾಯಗಳ ಸ್ನೇಹಮಿಲನ, ಪಕ್ಷ ಸೇರ್ಪಡೆ

ಬಿಜೆಪಿ ಅಭ್ಯರ್ಥಿ ಮಂಗೋಟೆ ರುದ್ರೇಶ್ ಪರವಾಗಿ ವ್ಯಾಪಕ ಪ್ರಚಾರ

ಭದ್ರಾವತಿಯಲ್ಲಿ ಕಾಂಗ್ರೆಸ್-ಜೆಡಿಎಸ್ ತೊರೆದು ಹಲವು ಮಂದಿ ಸಂಸದ ಬಿ.ವೈ ರಾಘವೇಂದ್ರ ಸಮ್ಮುಖದಲ್ಲಿ ಶುಕ್ರವಾರ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು
    ಭದ್ರಾವತಿ, ಏ. ೨೮: ಈ ಬಾರಿ ಕ್ಷೇತ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕೆಂಬ ಗುರಿಯೊಂದಿಗೆ ಭಾರತೀಯ ಜನತಾ ಪಕ್ಷ ವ್ಯಾಪಕ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಶುಕ್ರವಾರ ಸಂಸದ ಬಿ.ವೈ ರಾಘವೇಂದ್ರ ನೇತೃತ್ವದಲ್ಲಿ ವಿವಿಧ ಸಮಾಜಗಳ ಸ್ನೇಹ ಮಿಲನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮತ್ತೊಂದೆಡೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಪ್ರಮುಖರು ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.
    ವೀರಶೈವ ಲಿಂಗಾಯತ, ಒಕ್ಕಲಿಗ, ಮಡಿವಾಳ, ದೇವಾಂಗ, ಮರಾಠ ಮತ್ತು ಭಾವಸಾರ ಸೇರಿದಂತೆ ವಿವಿಧ ಸಮುದಾಯಗಳ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ ರಾಘವೇಂದ್ರ ಪಾಲ್ಗೊಂಡು ಆಯಾ ಸಮುದಾಯಗಳ ಮುಖಂಡರುಗಳ ಜೊತೆ ಚರ್ಚಿಸಿದರು. ಈ ಬಾರಿ ಚುನಾವಣೆಯಲ್ಲಿ ಅಭ್ಯರ್ಥಿ ಮಂಗೋಟೆ ರುದ್ರೇಶ್‌ರವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.
    ಕಾಂಗ್ರೆಸ್-ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆ :
    ಕಾಂಗ್ರೆಸ್-ಜೆಡಿಎಸ್ ತೊರೆದು ಹಲವು ಮಂದಿ ಬಿ.ವೈ ರಾಘವೇಂದ್ರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಯುವ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ವಿನೋದ್, ಉಪಾಧ್ಯಕ್ಷ ನವೀನ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್, ತಾಲೂಕು  ಪ್ರಧಾನ ಕಾರ್ಯದರ್ಶಿ ಗಣೇಶ್, ಅಖಿಲ ಕರ್ನಾಟಕ ಚಾರೋಡಿ ಮೇಸ್ತ ಸಮಾಜದ ಜಿಲ್ಲಾಧ್ಯಕ್ಷ ಕೆ. ಮೋಹನ್, ಮಂಜುನಾಥ ಸಾಮಿಲ್ ಬಾಬಣ್ಣ,    ವೆಂಕಟೇಶ್ವರ ಸಾಮಿಲ್, ಮರಾಠ ಸಮಾಜದ ಮುಖಂಡ ಗಣೇಶ್ ರಾವ್ ಹಾಗೂ ಜೆಡಿಎಸ್ ಪಕ್ಷ ತೊರೆದು ಹಿರಿಯೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಟಿ ಪ್ರಸನ್ನ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೋಡ್ಲುಯಜ್ಞಯ್ಯ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಾಲೇರ ಶೇಖರಪ್ಪ, ಬಿ. ರವಿ, ಮುರಳಿಧರ್, ಎಂಪಿಎಂ ಯೂನಿಯನ್ ಮಾಜಿ ಕಾರ್ಯದರ್ಶಿ ಬಿ. ಪ್ರಶಾಂತ್, ಅಶೋಕ್ ರಾವ್, ಬೀರಪ್ಪ, ಸಾರಿಕಾ, ಜ್ಯೋತಿ, ಸಂಗೀತ, ವೇದಮೂರ್ತಿ, ಎಚ್.ಬಿ ರಾಮಪ್ಪ, ಬಸವರಾಜ್ ತಾರಿಕಟ್ಟೆ, ಯದು, ಜಗದೀಶ್, ಜೈಶೀಲ, ಭೈರಪ್ಪ, ಸೇರಿದಂತೆ ಇನ್ನಿತರರು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ  ಹಾಗು ಪಕ್ಷದ ತತ್ವ-ಸಿದ್ಧಾಂತ ಮೆಚ್ಚಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
    ಅಭ್ಯರ್ಥಿ ಮಂಗೋಟೆ ರುದ್ರೇಶ್, ವಿಧಾನಪರಿಷತ್ ಸದಸ್ಯ ಎಸ್. ರುದ್ರೇಗೌಡ, ಪಕ್ಷದ ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಚುನಾವಣಾ ಪ್ರಭಾರಿ ಅಶೋಕ್ ಮೂರ್ತಿ, ಮುಖಂಡರಾದ ಉತ್ತರ ಕಾಂಡ್ ಜಿತೇಂದ್ರಸಿಂಗ್, ಸಿ. ಮಂಜುಳ, ಪವಿತ್ರ ರಾಮಯ್ಯ, ಜಿ. ಆನಂದಕುಮಾರ್, ವಾದಿರಾಜ್, ಚನ್ನೇಶ್, ಕೂಡ್ಲಿಗೆರೆ ಹಾಲೇಶ್, ತೀರ್ಥಯ್ಯ, ರಾಮಚಂದ್ರ, ಸಿದ್ದಲಿಂಗಯ್ಯ, ಮಂಜುನಾಥ್ ಕದಿರೇಶ್, ಕವಿತಾ ರಾವ್, ಬಿ.ಎಂ ಸಂತೋಷ್ ಮತ್ತು ಗೋಕುಲ ಕೃಷ್ಣ, ಬಿ.ಎಸ್ ಶ್ರೀನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಛಲವಾದಿ ಸಮಾಜ, ಮಹಾಸಭಾದಿಂದ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಬೆಂಬಲ

ಯಾವುದೇ ಒಬ್ಬ ವ್ಯಕ್ತಿ ನಿರ್ಧಾರಕ್ಕೆ ಸಮುದಾಯದವರು ಬದ್ಧರಾಗಿಲ್ಲ : ಮುಖಂಡರ ಸ್ಪಷ್ಟನೆ

ಭದ್ರಾವತಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಛಲವಾದಿ ಸಮಾಜ ಹಾಗು ತಾಲೂಕು ಛಲವಾದಿ ಮಹಾಸಭಾ ಪ್ರಮುಖರು ಮಾತನಾಡಿದರು.
      ಭದ್ರಾವತಿ, ಏ. ೨೮: ಛಲವಾದಿ ಸಮಾಜದವರು ಯಾವುದೇ ಒಬ್ಬ ವ್ಯಕ್ತಿ ನಿರ್ಧಾರಕ್ಕೆ ಬದ್ಧರಾಗಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿದ್ದು, ಮೊದಲಿನಿಂದಲೂ ರಾಜಕೀಯವಾಗಿ ಸೂಕ್ತ ನಿರ್ಧಾರ ಕೈಗೊಂಡು ಸಮಾಜದ ಹಿತಕಾಪಾಡುವವರನ್ನು ಬೆಂಬಿಸಿಕೊಂಡು ಬರಲಾಗುತ್ತಿದೆ ಎಂದು ತಾಲೂಕು ಛಲವಾದಿ ಸಮಾಜ ಹಾಗು ತಾಲೂಕು ಛಲವಾದಿ ಮಹಾಸಭಾ ಪ್ರಮುಖರು ಹೇಳಿದರು. 
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಮುಖರು, ರಾಜಕೀಯವಾಗಿ ಸಮಾಜದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ವೈಯಕ್ತಿಕವಾಗಿ ಯಾವುದೇ ಪಕ್ಷಕ್ಕೆ ಬೆಂಬಲ ನೀಡಲಿ. ಆದರೆ ಸಮಾಜದ ಹೆಸರಿನಲ್ಲಿ ಬೆಂಬಲ ನೀಡುವುದು ಬೇಡ ಎಂದರು. 
ಮೊದಲಿನಿಂದಲೂ ಸಮಾಜದ ಹಿತಕಾಪಾಡುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಬೆಂಬಲಿಸಿಕೊಂಡು ಬರಲಾಗುತ್ತಿದೆ. ಪ್ರಸ್ತುತ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ಛಲವಾದಿ ಸಮಾಜದ ಬೆಳವಣಿಗೆಗೆ ಹೆಚ್ಚಿನ ರೀತಿಯಲ್ಲಿ ಸಹಕರಿಸುತ್ತಿದ್ದು, ಈ ಹಿನ್ನಲೆಯಲ್ಲಿ ಅವರನ್ನು ಬೆಂಬಲಿಸಲು ಸಮಾಜ ನಿರ್ಧರಿಸಿದೆ. ಇದೆ ರೀತಿ ಛಲವಾದಿ ಮಹಾಸಭಾ ಸಹ ಸಂಗಮೇಶ್ವರ್‌ರವರನ್ನು ಬೆಂಬಲಿಸಲಿದೆ ಎಂದರು. 
ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಪ್ರಮುಖರಾದ ಚನ್ನಪ್ಪ, ಜಯರಾಜ್, ಎಸ್.ಎಸ್ ಭೈರಪ್ಪ, ಅರುಣ್, ಡಿ. ನರಸಿಂಹಮೂರ್ತಿ, ಸರ್ವಮಂಗಳ, ಮಹೇಶ್, ಸೀನಪ್ಪ ನಂಜಾಪುರ, ಪುಟ್ಟರಾಜ್, ರಾಜು, ಅದಿತ್ಯಶಾಮ್, ಲಕ್ಷ್ಮಣಪ್ಪ, ಗೋಪಾಲ್, ಲೋಕೇಶ್, ಕೆಂಪರಾಜ್, ಎಚ್.ಎಂ ಮಹಾದೇವಯ್ಯ, ಲೋಕೇಶ್(ಕೆಪಿಟಿಸಿಎಲ್) ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.