Monday, May 22, 2023

ನಗರಸಭೆ ವ್ಯಾಪ್ತಿಯಲ್ಲಿ ಮೂಲ ಸೌಕರ್ಯಗಳ ಉಲ್ಬಣ : ತುರ್ತಾಗಿ ಸಾಮಾನ್ಯ ಸಭೆ ನಡೆಯಲಿ

ಭದ್ರಾವತಿ ನಗರಸಭೆ 
    ಭದ್ರಾವತಿ, ಮೇ. ೨೨ : ವಿಧಾನಸಭಾ ಚುನಾವಣೆ ಘೋಷಣೆಯಾದ ಹಿನ್ನಲೆಯಲ್ಲಿ ಕಳೆದ ೨ ತಿಂಗಳಿನಿಂದ ನಗರಸಭೆ ಸಾಮಾನ್ಯ ಸಭೆ ನಡೆದಿಲ್ಲ. ಇದರಿಂದಾಗಿ ವಾರ್ಡ್‌ಗಳಲ್ಲಿ ಸಮಸ್ಯೆಗಳು ಉಲ್ಬಣಗೊಂಡಿವೆ.
    ೩೫ ವಾರ್ಡ್‌ಗಳನ್ನು ಒಳಗೊಂಡಿರುವ ನಗರಸಭೆಯಲ್ಲಿ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸಿಕೊಡಲು ಸಾಧ್ಯವಾಗುತ್ತಿಲ್ಲ. ಪ್ರತಿ ಬಾರಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಕುಡಿಯುವ ನೀರು, ರಸ್ತೆ, ತ್ಯಾಜ್ಯ ವಿಲೇವಾರಿ ಸೇರಿದಂತೆ ಹಲವು ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಕೈಗೊಳ್ಳುವಂತೆ ಆಗ್ರಹಿಸಿಕೊಂಡು ಬರುತ್ತಿದ್ದಾರೆ.
    ಮಾ.೧೮ರಂದು ನಡೆದ ಸಾಮಾನ್ಯ ಸಭೆಯಲ್ಲಿ ಬಹುತೇಕ ಸದಸ್ಯರು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಒಕ್ಕೊರಲಿನಿಂದ ಆಗ್ರಹಿಸಿದ್ದರು. ಪ್ರಸ್ತುತ ೨ ತಿಂಗಳು ಮುಕ್ತಾಯಗೊಂಡಿದ್ದು, ಈ ನಡುವೆ ಇದೀಗ ಮತ್ತಷ್ಟು  ಸಮಸ್ಯೆಗಳು ಎದುರಾಗುತ್ತಿವೆ. ಬಹುತೇಕ ಚರಂಡಿ, ರಸ್ತೆಗಳು ಹಾಳಾಗಿದ್ದು,  ಬೇಸಿಗೆ ಮುಕ್ತಾಯಗೊಂಡು ಮಳೆಗಾಲ ಎದುರಾಗುತ್ತಿರುವ ಹಿನ್ನಲೆಯಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕಾಗಿದೆ. ವಿಧಾನಸಭಾ ಚುನಾವಣೆ ಎಲ್ಲಾ ಪ್ರಕ್ರಿಯೆಗಳು ಇದೀಗ ಮುಕ್ತಾಯಗೊಂಡಿದ್ದು, ವಿಳಂಬ ಮಾಡದೆ ತಕ್ಷಣ ಸಾಮಾನ್ಯಸಭೆ ನಡೆಸಬೇಕಾಗಿದೆ.
    ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳಿಗೆ ಮರು ಚಾಲನೆ ನೀಡಬೇಕಾಗಿದೆ. ಇದರ ಜೊತೆಗೆ ಹೊಸ ಕಾಮಗಾರಿಗಳಿಗೆ ಸಂಬಂಧಿಸಿದಂತೆ ರೂಪುರೇಷೆ ಸಿದ್ದಪಡಿಸಿಕೊಳ್ಳಬೇಕಾಗಿದೆ. ಈ ಹಿನ್ನಲೆಯಲ್ಲಿ ನಗರಸಭೆ ಆಡಳಿತ ಗಮನ ಹರಿಸಬೇಕಾಗಿದೆ.

ನೆಲಕ್ಕುರುಳುವ ಸ್ಥಿತಿಯಲ್ಲಿ ತೆಂಗಿನ ಮರ : ಅವಘಡ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಿ

ಭದ್ರಾವತಿ ಹಳೇನಗರದ ಬಸವೇಶ್ವರ ವೃತ್ತ ಮಾರುಕಟ್ಟೆ ಸಮೀಪದ ರಸ್ತೆಯೊಂದರಲ್ಲಿ ಬೃಹತ್ ಗಾತ್ರದ ತೆಂಗಿನ ಮರ ನೆಲಕ್ಕುರುಳುವ ಸ್ಥಿತಿಯಲ್ಲಿದ್ದು, ಅವಘಡ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಬೇಕಾಗಿದೆ.
    ಭದ್ರಾವತಿ, ಮೇ. ೨೨: ಹಳೇನಗರದ ಬಸವೇಶ್ವರ ವೃತ್ತ ಮಾರುಕಟ್ಟೆ ಸಮೀಪದ ರಸ್ತೆಯೊಂದರಲ್ಲಿ ಬೃಹತ್ ಗಾತ್ರದ ತೆಂಗಿನ ಮರ ನೆಲಕ್ಕುರುಳುವ ಸ್ಥಿತಿಯಲ್ಲಿದ್ದು, ಅವಘಡ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಬೇಕಾಗಿದೆ.
    ಮಾರುಕಟ್ಟೆಯಿಂದ ನ್ಯಾಯಾಲಯದ ಮುಂಭಾಗದ ರಸ್ತೆಗೆ ಸಂಪರ್ಕಗೊಂಡಿರುವ ಕಿರು ರಸ್ತೆ ಇದಾಗಿದ್ದು, ಈ ರಸ್ತೆಯಲ್ಲಿ ಪಾದಚಾರಿಗಳು ಹೆಚ್ಚಾಗಿ ಸಂಚರಿಸುತ್ತಾರೆ. ಈ ರಸ್ತೆಯಲ್ಲಿ ತೆಂಗಿನ ಮರ ಬಹುತೇಕ ಒಂದೆಡೆ ಬಾಗಿದ್ದು, ಮಳೆ ಬಿರುಗಾಳಿಗೆ ನೆಲಕ್ಕುರುಳುವ ಸಾಧ್ಯತೆ ಹೆಚ್ಚಾಗಿದೆ.
    ಒಂದು ವೇಳೆ ತೆಂಗಿನ ಮರ ನೆಲಕ್ಕುರುಳಿದ್ದಲ್ಲಿ ಕಟ್ಟಡಕ್ಕೆ ಹಾನಿ ಉಂಟಾಗಲಿದ್ದು, ಅಲ್ಲದೆ ಕೆಳ ಭಾಗದಲ್ಲಿರುವ ವಿದ್ಯುತ್ ಕಂಬ ಮುರಿದು ಬಿದ್ದು, ವಿದ್ಯುತ್ ತಂತಿ ಕತ್ತರಿಸಿ ಹೋಗಲಿದೆ. ಅಲ್ಲದೆ ಪ್ರಾಣಹಾನಿಯಂತಹ ದುರ್ಘಟನೆ ಸಹ ಸಂಭವಿಸುವ ಸಾಧ್ಯತೆ ಇದ್ದು, ಈ ಹಿನ್ನಲೆಯಲ್ಲಿ ಸಂಬಂಧಪಟ್ಟವರು ಗಮನ ಹರಿಸಬೇಕಾಗಿದೆ.

ವಿವಾಹ ಎಂಬುದು ಕೇವಲ ಎರಡು ದೇಹಗಳ ನಡುವಿನ ಸಂಬಂಧವಲ್ಲ

೩೯ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಡಾ.ಬಿ.ಜಿ.ಧನಂಜಯ

ವಿಶ್ವ ಹಿಂದು ಪರಿಷದ್, ವಿಶ್ವಭಾರತಿ ವಿಶ್ವಸ್ಥ ಮ೦ಡಳಿವತಿಯಿಂದ ಭದ್ರಾವತಿ ಸಿದ್ಧಾರೂಢ ನಗರದ ಧರ್ಮಶ್ರೀ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ೩೯ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ ಧನಂಜಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಮೇ. ೨೨ : ಭದ್ರಾವತಿ : ವಿಶ್ವದಲ್ಲಿಯೇ ತನ್ನದೇ ಆದ ವೈಶಿಷ್ಟ್ಯತೆಯಿಂದ ಜಗತ್ತಿನ ಗಮನ ಸೆಳೆದಿರುವ ಭಾರತ ದೇಶದಲ್ಲಿ ವಿವಾಹಕ್ಕೆ ಅತ್ಯಂತ ಮಹತ್ವದ ಸ್ಥಾನವಿದ್ದು, ಪರಿಣಾಮವಾಗಿ ಪಾಶ್ಚಿಮಾತ್ಯರು ಸಹ ಭಾರತೀಯರ ವಿವಾಹ ಪದ್ಧತಿ ಅನುಸರಿಸುತ್ತಿರುವುದು ಹೆಚ್ಚಾಗಿ ಕಂಡು ಬರುತ್ತಿದೆ ಎಂದು ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ ಧನಂಜಯ ಹೇಳಿದರು.
    ವಿಶ್ವ ಹಿಂದು ಪರಿಷದ್, ವಿಶ್ವಭಾರತಿ ವಿಶ್ವಸ್ಥ ಮ೦ಡಳಿವತಿಯಿಂದ ಸಿದ್ಧಾರೂಢ ನಗರದ ಧರ್ಮಶ್ರೀ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ೩೯ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಅವರು ಪಾಲ್ಗೊಂಡು ಪ್ರಾಸ್ತಾವಿಕವಾಗಿ ಮಾತನಾಡಿದರು.
    ಸದೃಢ ಕುಟುಂಬದಿಂದ ಮಾತ್ರ ಸಶಕ್ತರಾಷ್ಟ್ರ ನಿರ್ಮಾಣ ಸಾಧ್ಯ. ಈ ಹಿನ್ನೆಲೆಯಲ್ಲಿ ಬೆಳೆಯುವ ಹಂತದಲ್ಲಿಯೇ ಸಂಸ್ಕೃತಿ ಹಾಗೂ ಸಂಸ್ಕಾರ ಅತ್ಯಗತ್ಯ ಎಂದರು. ವಿವಾಹ ಎಂದರೆ ಕೇವಲ ಗಂಡು-ಹೆಣ್ಣಿನ ನಡುವಿನ ದೈಹಿಕ ಸಂಬಂಧ ಮಾತ್ರವಲ್ಲ ಎಂದ ಅವರು, ಈ ಕುರಿತಾಗಿ ವಿವರಣೆ ನೀಡಿದರು.
    ಮದುವೆ ಎಂಬುದು ಮಧ್ಯಮ ವರ್ಗಕ್ಕೆ ದುಸ್ತರವಾಗಿದ್ದ ಕಾಲದಲ್ಲಿ ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ೭೦ರ ದಶಕದಲ್ಲಿ ಆರಂಭಿಸಿದ ಉಚಿತ ಸಾಮೂಹಿಕ ವಿವಾಹದಿಂದ ಪ್ರೇರಣೆಗೊಂಡು ವಿಶ್ವ ಹಿಂದು ಪರಿಷದ್ ವತಿಯಿಂದ ನಗರದಲ್ಲಿ ಸುಮಾರು ೩೯ ವರ್ಷಗಳಿಂದ ಉಚಿತ ಸಾಮೂಹಿಕ ವಿವಾಹ ಸಮಾರಂಭ ಆಯೋಜಿಸಿಕೊಂಡು ಬರಲಾಗುತ್ತಿದೆ. ಸಾಮೂಹಿಕ ವಿವಾಹದಲ್ಲಿ ಇದುವರೆಗೂ ಒಟ್ಟು ೭೭೪ ಜೊತೆ ವಿವಾಹ ನಡೆಸಿರುವುದು ಹೆಮ್ಮಯ ಸಂಗತಿಯಾಗಿದೆ ಎಂದರು.
    ಸಮಾರಂಭದ ಸಾನಿಧ್ಯ ವಹಿಸಿದ್ದ ಅರಕೆರೆಯ ವಿರಕ್ತ ಮಠದ ಶ್ರೀ ಕರಿಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ವಿವಾಹ ಎಂಬುದು ಪವಿತ್ರ ವಾದ ಅನುಬಂಧವಾಗಿದ್ದು, ಸತಿ-ಪತಿಗಳು ಪರಸ್ಪರ ಅರಿತು ಸಮಾಜದಲ್ಲಿ ಸತ್ಪ್ರಜೆಗಳಾಗಿ ಬಾಳುವಂತೆ ಕರೆನೀಡಿದರು.
    ಬಜರಂಗದಳದ ಪ್ರಾಂತ ಸ೦ಯೋಜಕ ಕೆ.ಆರ್ ಸುನಿಲ್ ಮಾತನಾಡಿ, ಹಿಂದೂ ಸಮಾಜವನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ವಿಎಚ್‌ಪಿ ಹಾಗೂ ಸಂಘ ಪರಿವಾರ ನಿರಂತರವಾಗಿ ಕೆಲಸಮಾಡುತ್ತಿವೆ ಎಂದರು.
    ವಿಶ್ವ ಹಿಂದು ಪರಿಷದ್ ಅಧ್ಯಕ್ಷ ಪಿ.ವೆಂಕಟರಮಣಶೇಟ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷ ಅನುಸುಧಾ ಮೋಹನ್ ಪಳನಿ, ಸದಸ್ಯರಾದ ಬಿ.ಕೆ ಮೋಹನ್, ವಿ. ಕದಿರೇಶ್, ಜಾರ್ಜ್, ಮಾಜಿ ಅಧ್ಯಕ್ಷ ಆರ್.ಕರುಣಾಮೂರ್ತಿ, ವಿಐಎಸ್‌ಎಲ್ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕರಾದ ಬಿ.ಎಲ್ ಚಾಂದ್ವಾನಿ, ಡಾ.ಟಿ.ನರೇಂದ್ರ ಭಟ್, ಹಾ. ರಾಮಪ್ಪ, ನಾರಾಯಣ, ಜಿ.ವರ್ಣೇಕರ್, ಸುಧಾಕರ ಶೆಟ್ಟಿ, ಮುತ್ತು ರಾಮಲಿಂಗಮ್, ದಾನಿ ಶಾರದ ಟ್ರಾನ್ಸ್‌ಪೋರ್ಟ್ ಶಿವಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಸಾಮೂಹಿಕ ವಿವಾಹದಲ್ಲಿ ಸಂತೋಷ್ ಜಾಧವ್ ಮತ್ತು ಎನ್. ಶಿವಲೀಲಾ ಹಾಗೂ ವಿನಯ್ ಡಿ.ಎನ್ ಮತ್ತು ನೇತ್ರಾಬಾಯಿ ಡಿ. ನವಜೀವನಕ್ಕೆ ಕಾಲಿಟ್ಟರು. ಮಂಜುನಾಥ್‌ರಾವ್ ಪವಾರ್ ಸ್ವಾಗತಿಸಿದರು. ವೈ.ಎಸ್ ರಾಮಮೂರ್ತಿ ನಿರೂಪಿಸಿ, ಡಿ.ಆರ್ ಶಿವಕುಮಾರ್ ವಂದಿಸಿದರು.

Sunday, May 21, 2023

ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಸಚಿವ ಸ್ಥಾನಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಅಂದೋಲನ

ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಈ ಬಾರಿ ಸಚಿವ ಸ್ಥಾನ ನೀಡಬೇಕೆಂಬ ಕೂಗು ಕ್ಷೇತ್ರದಲ್ಲಿ ಹೆಚ್ಚಾಗುತ್ತಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಅಂದೋಲನವಾಗಿ ಮಾರ್ಪಟ್ಟಿದೆ.
    ಭದ್ರಾವತಿ, ಮೇ. ೨೧ : ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಈ ಬಾರಿ ಸಚಿವ ಸ್ಥಾನ ನೀಡಬೇಕೆಂಬ ಕೂಗು ಕ್ಷೇತ್ರದಲ್ಲಿ ಹೆಚ್ಚಾಗುತ್ತಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಅಂದೋಲನವಾಗಿ ಮಾರ್ಪಟ್ಟಿದೆ.
ಶ್ರೀ ಬಿ.ಕೆ ಸಂಗಮೇಶ್ವರ್‌ರವರು ಮಿನಿಸ್ಟರ್ ಪಟ್ಟ ಏರಲೇಬೇಕು... ಎಂಬ ಶೀರ್ಷಿಕೆಯೊಂದಿಗೆ ಅಂದೋಲನ ನಡೆಯುತ್ತಿದ್ದು, ಭದ್ರಾವತಿಯಲ್ಲಿ ೪ನೇ ಬಾರಿ ಗೆದ್ದು ಶಾಸಕರಾಗಿ ಆಯ್ಕೆಯಾದ ನಮ್ಮ ಶ್ರೀ ಬಿ.ಕೆ ಸಂಗಮೇಶ್ವರ್ ಅವರನ್ನು ಮಿನಿಸ್ಟರ್ ಮಾಡದೆ ಇನ್ಯಾರನ್ನ ಮಾಡುತ್ತೀರಾ..? ಎಂಬ ಅಂದೋಲನದಲ್ಲಿ ಆರಂಭಿಸಿದ್ದಾರೆ.
    ಈಗಾಗಲೇ ಪಕ್ಷದ ಸ್ಥಳೀಯ ಮುಖಂಡರು, ಅಭಿಮಾನಿಗಳು, ಕಾರ್ಯಕರ್ತರು ಮಾತ್ರವಲ್ಲದೆ ಪಕ್ಷಭೇದ ಮರೆತು ವಿವಿಧ ಸಮುದಾಯಗಳು, ಸಂಘ-ಸಂಸ್ಥೆಗಳು, ಗಣ್ಯರು ಸಹ ಸಂಗಮೇಶ್ವರ್‌ಗೆ ಸಚಿವ ಸ್ಥಾನ ನೀಡಬೇಕೆಂದು ಒಕ್ಕೂರಲಿನಿಂದ ಆಗ್ರಹಿಸಿದ್ದಾರೆ.
    ಒಂದು ವೇಳೆ ಸಚಿವ ಸ್ಥಾನ ನೀಡಲು ವಿಳಂಬ ಮಾಡಿದ್ದಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ಸಹ ಕೇಳಿ ಬರುತ್ತಿದೆ. ಈಗಾಗಲೇ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ಸರ್ಕಾರ ರಚನೆ ಆರಂಭದಲ್ಲಿಯೇ ಸಚಿವ ಸ್ಥಾನ ಸಿಗದಿರುವ ಕುರಿತು ಬಹಿರಂಗವಾಗಿ ಬೇಸರ ವ್ಯಕ್ತಪಡಿಸಿದ್ದಾರೆ.  

ವಿಜೃಂಭಣೆಯಿಂದ ಜರುಗಿದ ಮಾರಿಯಮ್ಮ ದೇವಿ ಕರಗ ಉತ್ಸವ

ಪ್ರತಿವರ್ಷದಂತೆ ಈ ಬಾರಿ ಸಹ ಭದ್ರಾವತಿ ನ್ಯೂಟೌನ್ ಕೂಲಿಬ್ಲಾಕ್ ಶೆಡ್, ಆಂಜನೇಯ ಅಗ್ರಹಾರದ ಶ್ರೀ ಮಾರಿಯಮ್ಮನವರ ದೇವಸ್ಥಾನದಲ್ಲಿ ಭಾನುವಾರ ಕರಗ ಉತ್ಸವ ವಿಜೃಂಭಣೆಯಿಂದ ಜರುಗಿತು.
    ಭದ್ರಾವತಿ, ಮೇ. ೨೧ : ಪ್ರತಿವರ್ಷದಂತೆ ಈ ಬಾರಿ ಸಹ ನ್ಯೂಟೌನ್ ಕೂಲಿಬ್ಲಾಕ್ ಶೆಡ್, ಆಂಜನೇಯ ಅಗ್ರಹಾರದ ಶ್ರೀ ಮಾರಿಯಮ್ಮನವರ ದೇವಸ್ಥಾನದಲ್ಲಿ ಭಾನುವಾರ ಕರಗ ಉತ್ಸವ ವಿಜೃಂಭಣೆಯಿಂದ ಜರುಗಿತು.
    ಮಿಲ್ಟ್ರಿಕ್ಯಾಂಪ್ ಶ್ರೀ ಶ್ರೀನಿವಾಸ ಸ್ವಾಮಿ ದೇವಸ್ಥಾನದಿಂದ ಅಲಂಕೃತಗೊಂಡ ಶಕ್ತಿ ಕರಗ ಮೆರವಣಿಗೆ ಮೂಲಕ ಕಲಾತಂಡಗಳೊಂದಿಗೆ ಮಧ್ಯಾಹ್ನ ಸುಮಾರು ೨ ಗಂಟೆಗೆ ಅಮ್ಮನವರ ದೇವಸ್ಥಾನಕ್ಕೆ ಆಗಮಿಸಿತು. ನಂತರ ಕರಗ ಪ್ರತಿಷ್ಠಾಪನೆ ನಡೆಯಿತು. ಇದಕ್ಕೂ ಮೊದಲು ಬೆಳಿಗ್ಗೆ ಅಮ್ಮನವರಿಗೆ ಎಳನೀರು ಅಭಿಷೇಕ ಮತ್ತು ೧೦೮ ಕಲಶ ಸಹಿತ ಬ್ರಹ್ಮಕಲಶ ಅಭಿಷೇಕ ಮತ್ತು ಪೂಜೆ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.


    ಬಹುತೇಕ ಭಕ್ತರು ಅಂಬಲಿ ಸೇವೆ ಹಾಗು ಪ್ರಸಾದ ನೈವೇದ್ಯ ಸಮರ್ಪಿಸಿದರು. ತೀರ್ಥಪ್ರಸಾದ ವಿನಿಯೋಗ, ನಂತರ ಅನ್ನದಾನ ನಡೆಯಿತು. ಸಂಜೆ  ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ರಥದಲ್ಲಿ ಅಮ್ಮನವರ ರಾಜಬೀದಿ ಉತ್ಸವ ಮತ್ತು ಮಂಗಳವಾದ್ಯದೊಂದಿಗೆ ಕರಗ ಆಟ ನಡೆಯಿತು. ಸುರಗಿತೋಪು, ಬಾಲಭಾರತಿ, ನ್ಯೂಟೌನ್, ವಿದ್ಯಾಮಂದಿರ, ಗಣೇಶ್‌ಕಾಲೋನಿ, ಜನ್ನಾಪುರ, ಹುಡ್ಕೋಕಾಲೋನಿ ಸೇರಿದಂತೆ ವಿವಿಧೆಡೆಗಳಿಂದ ಭಕ್ತರು ಆಗಮಿಸಿದ್ದರು.

Saturday, May 20, 2023

ಮೇ.೨೧ರಂದು ಮಾರಿಯಮ್ಮ ದೇವಿ ಕರಗ ಉತ್ಸವ

    ಭದ್ರಾವತಿ, ಮೇ. ೨೦ : ಪ್ರತಿವರ್ಷದಂತೆ ಈ ಬಾರಿ ಸಹ ನ್ಯೂಟೌನ್ ಶ್ರೀ ಮಾರಿಯಮ್ಮನವರ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಕರಗ ಮಹೋತ್ಸವ ನಡೆಯುತ್ತಿದ್ದು, ಮೇ.೨೧ರ ಭಾನುವಾರ ಕರಗ ಉತ್ಸವ ಜರುಗಲಿದೆ.
    ಬೆಳಿಗ್ಗೆ ೮ ಗಂಟೆಗೆ ಶ್ರೀ ದೇವಿಗೆ ಎಳನೀರು ಅಭಿಷೇಕ ಮತ್ತು ೧೦೮ ಕಲಶ ಸಹಿತ ಬ್ರಹ್ಮಕಲಶ ಅಭಿಷೇಕ ಮತ್ತು ಪೂಜೆ, ಮಧ್ಯಾಹ್ನ ೧ ಗಂಟೆಗೆ ಶಕ್ತಿ ಕರಗ ಸ್ಥಾಪನೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ನಂತರ ಅನ್ನದಾನ ನಡೆಯಲಿದೆ. ಸಂಜೆ ೬ ಗಂಟೆಗೆ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ರಥದಲ್ಲಿ ಶ್ರೀ ದೇವಿಯವರ ರಾಜಬೀದಿ ಉತ್ಸವ ಮತ್ತು ಮಂಗಳವಾದ್ಯದೊಂದಿಗೆ ಕರಗ ಆಟ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಕೋರಲಾಗಿದೆ.

ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ : ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ

 ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಶನಿವಾರ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಹಿನ್ನಲೆಯಲ್ಲಿ ಭದ್ರಾವತಿಯಲ್ಲಿ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ನಡೆಸಿದರು.
    ಭದ್ರಾವತಿ, ಮೇ. ೨೦ : ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಶನಿವಾರ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಹಿನ್ನಲೆಯಲ್ಲಿ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ನಡೆಸಿದರು.
    ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಹಾಗು ೮ ಮಂದಿ ಸಚಿವರಾಗಿ ಪದಗ್ರಹಣ ಸ್ವೀಕರಿಸುವ ಮೂಲಕ ನಾಡಿನ ಜನರ ಆಶಯದಂತೆ ನೂತನ ಜನಹಿತ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ರಾಜ್ಯದಲ್ಲಿ ಉತ್ತಮ ಆಡಳಿತ ನೀಡುವ ವಿಶ್ವಾಸವನ್ನು ಮುಖಂಡರು, ಕಾರ್ಯಕರ್ತರು ವ್ಯಕ್ತಪಡಿಸಿದರು.  
    ನಗರದ ಮಾಧವಚಾರ್ ವೃತ್ತ ಮತ್ತು ರಂಗಪ್ಪ ವೃತ್ತದಲ್ಲಿ ಸಂಭ್ರಮಾಚರಣೆ ನಡೆಸಲಾಯಿತು. ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಸದಸ್ಯರಾದ ಟಿಪ್ಪು ಸುಲ್ತಾನ್, ಬಷೀರ್ ಅಹಮದ್, ಜಾರ್ಜ್, ಮಾಜಿ ಅಧ್ಯಕ್ಷೆ ವೈ. ರೇಣುಕಮ್ಮ, ಮಾಜಿ ಉಪಾಧ್ಯಕ್ಷ ಚನ್ನಪ್ಪ, ಮಾಜಿ ಸದಸ್ಯ ಆಂಜನಪ್ಪ, ಪಕ್ಷದ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಮಂಜುಳಾ ರಾಮಚಂದ್ರ, ರೂಪಾನಾರಾಯಣ, ಮುಖಂಡರಾದ ರಮಾಕಾಂತ್, ಪ್ರಕಾಶ್‌ರಾವ್, ಕೇಶವ, ಅಯೂಬ್ ಖಾನ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.