Friday, November 3, 2023

೨ ಪಂಪ್ ಸೆಟ್ ಮೋಟಾರ್ ಕಳವು : ದೂರು ದಾಖಲು

    ಭದ್ರಾವತಿ: ತೋಟದ ಹಳ್ಳದಲ್ಲಿ ಅಳವಡಿಸಲಾಗಿದ್ದ ಎರಡು ಪಂಪ್‌ಸೆಟ್ ಮೋಟಾರ್‌ಗಳನ್ನು ಕಳವು ಮಾಡಿರುವ ಘಟನೆ ತಾಲೂಕಿನ ಮಲ್ಲಿಗೇನಹಳ್ಳಿಯಲ್ಲಿ ನಡೆದಿದೆ.
    ಗ್ರಾಮದ ನಿವಾಸಿ ಮಂಜುನಾಥ್ ಎಂಬುವರು ತಮ್ಮ ತೋಟದಲ್ಲಿ ನೀರಿನ ವ್ಯವಸ್ಥೆಗಾಗಿ ೨ ಪಂಪ್ ಸೆಟ್ ಮೋಟಾರ್‌ಗಳನ್ನು ಹಳ್ಳಕ್ಕೆ ಅಳವಡಿಸಿದ್ದು, ಅ.೨೬ರಂದು ಈ ಮೋಟಾರ್‌ಗಳನ್ನು ಕಳವು ಮಾಡಲಾಗಿದೆ. ಇವುಗಳ ಒಟ್ಟು ಅಂದಾಜು ಮೌಲ್ಯ ಸುಮಾರು ೩೦ ಸಾವಿರ ರು.ಗಳಾಗಿದ್ದು, ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ವಿಐಎಸ್‌ಎಲ್ ಶತಮಾನೋತ್ಸವ ಯಶಸ್ವಿಗಾಗಿ ಭದ್ರಾ ಮಾತೆ ಆರಾಧನೆ

ವಿಶೇಷವಾಗಿ ಭದ್ರಾರತಿ ಮೂಲಕ ಪ್ರಾರ್ಥನೆ


ಭದ್ರಾವತಿ ನಗರದಲ್ಲಿ ೨ ದಿನಗಳ ಕಾಲ ಆಯೋಜಿಸಲಾಗಿರುವ ವಿಐಎಸ್‌ಎಲ್ ಶತಮಾನೋತ್ಸವ ಅಂಗವಾಗಿ ಶುಕ್ರವಾರ ಸಂಜೆ ಹಳೇಸೇತುವೆ ಬಳಿ ಭದ್ರಾ ನದಿಯಲ್ಲಿರುವ ಶ್ರೀ ಸಂಗಮೇಶ್ವರ ದೇವಸ್ಥಾನದಲ್ಲಿ ಭದ್ರಾರತಿ ನಡೆಯಿತು. ಇದಕ್ಕೂ ಮೊದಲು ಶಾಸಕ ಬಿ.ಕೆ ಸಂಗಮೇಶ್ವರ್ ಮತ್ತು ಹಿರಿಯ ಚಲನಚಿತ್ರ ನಟ ಎಸ್. ದೊಡ್ಡಣ್ಣ ಜ್ಯೋತಿಯನ್ನು ಕಾರ್ಮಿಕರಿಗೆ ಹಸ್ತಾಂತರಿಸಿದರು.
    ಭದ್ರಾವತಿ: ನಗರದಲ್ಲಿ ೨ ದಿನಗಳ ಕಾಲ ಆಯೋಜಿಸಲಾಗಿರುವ ವಿಐಎಸ್‌ಎಲ್ ಶತಮಾನೋತ್ಸವ ಅಂಗವಾಗಿ ಶುಕ್ರವಾರ ಸಂಜೆ ಹಳೇಸೇತುವೆ ಬಳಿ ಭದ್ರಾ ನದಿಯಲ್ಲಿರುವ ಶ್ರೀ ಸಂಗಮೇಶ್ವರ ದೇವಸ್ಥಾನದಲ್ಲಿ ಭದ್ರಾರತಿ ನಡೆಯಿತು.
    ಶತಮಾನೋತ್ಸವ ವಿಜೃಂಭಣೆಯಿಂದ ಯಶಸ್ವಿಯಾಗಿ ನಡೆಯಬೇಕೆಂಬ ಆಶಯದೊಂದಿಗೆ ವಿಶೇಷವಾಗಿ ಭದ್ರಾ ಮಾತೆಗೆ ಭದ್ರಾರತಿ ಮೂಲಕ ಪ್ರಾರ್ಥಿಸಲಾಯಿತು. ಇದಕ್ಕೂ ಮೊದಲು ಹಳೇನಗರದ ಪುರಾಣ ಪ್ರಸಿದ್ದ, ಕ್ಷೇತ್ರಪಾಲಕ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ ವಿಶೇಷ ಪೂಜೆ ಸಲ್ಲಿಸಿ ಶತಮಾನೋತ್ಸವ ಆಚರಣಾ ಸಮಿತಿ ಮಾರ್ಗದರ್ಶರಾದ ಶಾಸಕ ಬಿ.ಕೆ ಸಂಗಮೇಶ್ವರ್ ಮತ್ತು ಸಮಿತಿ ಅಧ್ಯಕ್ಷ, ಹಿರಿಯ ಚಲನಚಿತ್ರ ನಟ ದೊಡ್ಡಣ್ಣ ಜ್ಯೋತಿಯನ್ನು ತರುವ ಮೂಲಕ ದೇವಸ್ಥಾನದ ಮುಂಭಾಗದಲ್ಲಿ ಕಾರ್ಮಿಕರಿಗೆ ಹಸ್ತಾಂತರಿಸಿದರು.
    ನಂತರ ಜ್ಯೋತಿ ಪ್ರಮುಖ ರಸ್ತೆಗಳಲ್ಲಿ ಭದ್ರಾನದಿಯಲ್ಲಿರುವ ಸಂಗಮೇಶ್ವರ ದೇವಸ್ಥಾನ ತಲುಪಿತು. ಬುಟ್ಟಿ ದೀಪ ಹಾರಿ ಬಿಡುವ ಜೊತೆಗೆ ಆಕರ್ಷಕ ಸಿಡಿಮದ್ದುಗಳ ಪ್ರದರ್ಶನ ನಡೆಯಿತು.
    ನಗರಸಭೆ ಪೌರಾಯುಕ್ತ ಮನುಕುಮಾರ್, ವಿಐಎಸ್‌ಎಲ್ ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್, ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್ ಹಾಗು ಪದಾಧಿಕಾರಿಗಳು, ಕಾಯಂ ಹಾಗು ಗುತ್ತಿಗೆ ಕಾರ್ಮಿಕರು, ನಿವೃತ್ತ ಕಾರ್ಮಿಕರು, ವಿವಿಧ ಸಂಘ-ಸಂಸ್ಥೆಗಳ ಗಣ್ಯರು, ಶತಮಾನೋತ್ಸವ ಆಚರಣಾ ಸಮಿತಿ ಸದಸ್ಯರುಗಳು ಹಾಗು ಸ್ಥಳೀಯ ನಿವಾಸಿಗಳು ಪಾಲ್ಗೊಂಡಿದ್ದರು.

ವಿಐಎಸ್‌ಎಲ್ ಅಭಿವೃದ್ಧಿಗೊಳಿಸಲು ಕೇಂದ್ರ, ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿ

ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸಾರ್ವಜನಿಕ ಕ್ಷೇಮಾಭಿವೃದ್ಧಿ ಸಂಘ ಮನವಿ

ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಅಭಿವೃದ್ಧಿಪಡಿಸುವಂತೆ ಕೇಂದ್ರ ಹಾಗು ರಾಜ್ಯ ಸರ್ಕಾರಗಳಿಗೆ ಶಿಫಾರಸ್ಸು ಮಾಡಬೇಕೆಂದು ಒತ್ತಾಯಿಸಿ ತಾಲೂಕು ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸಾರ್ವಜನಿಕ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮೈಸೂರು ಸಂಸ್ಥಾನದ ಮಹಾರಾಜ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಬಹದ್ದೂರ್‌ರವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
    ಭದ್ರಾವತಿ: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಅಭಿವೃದ್ಧಿಪಡಿಸುವಂತೆ ಕೇಂದ್ರ ಹಾಗು ರಾಜ್ಯ ಸರ್ಕಾರಗಳಿಗೆ ಶಿಫಾರಸ್ಸು ಮಾಡಬೇಕೆಂದು ಒತ್ತಾಯಿಸಿ ತಾಲೂಕು ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸಾರ್ವಜನಿಕ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮೈಸೂರು ಸಂಸ್ಥಾನದ ಮಹಾರಾಜ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಬಹದ್ದೂರ್‌ರವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
    ನಗರದಲ್ಲಿ ನ.೪ ಮತ್ತು ೫ರಂದು ನಡೆಯಲಿರುವ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಶತಮಾನೋತ್ಸವದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿರುವ ಬಹದ್ದೂರ್‌ರವರನ್ನು ನಗರದ ಹೊರವಲಯ ಭದ್ರಾ ಅಭಯಾರಣ್ಯ ವ್ಯಾಪ್ತಿಯ ಭದ್ರಾ ಜಲಾಶಯ ಸಮೀಪದ ಜಂಗಲ್ ರೆಸಾರ್ಟ್‌ನಲ್ಲಿ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಭೇಟಿ ಮಾಡಿ ಮನವಿ ಸಲ್ಲಿಸಿದರು.
    ಅಂದಿನ ಮಹಾರಾಜರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಬಹದ್ದೂರ್‌ರವರ ದೂರದೃಷ್ಟಿ ಹಾಗು ಪರಿಶ್ರಮದ ಫಲವಾಗಿ ನಿರ್ಮಾಣಗೊಂಡಿರುವ ವಿಐಎಸ್‌ಎಲ್ ಕಾರ್ಖಾನೆ ಅಭಿವೃದ್ಧಿಗೊಳಿಸಬೇಕೆಂಬುದು ಕ್ಷೇತ್ರದ ನಾಗರೀಕರ ಆಶಯವಾಗಿದೆ. ಕಾರ್ಖಾನೆಯ ಶತಮಾನೋತ್ಸವ ಉದ್ಘಾಟಿಸುತ್ತಿರುವುದು ಸಂತಸ ತಂದಿದ್ದು, ಈ ಸಂದರ್ಭದಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳಿಗೆ ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ಶಿಫಾರಸ್ಸು ಮಾಡಬೇಕೆಂದು ಕೋರಿದರು.
    ಸಂಘದ ಗೌರವಾಧ್ಯಕ್ಷ, ನಗರಸಭೆ ಮಾಜಿ ಸದಸ್ಯ ಬಾಲಕೃಷ್ಣ, ಅಧ್ಯಕ್ಷ ಆರ್. ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಬಿ. ಜಗದೀಶ್, ಖಜಾಂಚಿ ಬಿ. ಶಂಕರನಾಯ್ಕ, ಸಹಕಾರ್ಯದರ್ಶಿ ಮಂಜು, ಸಲಹೆಗಾರ ಸತ್ಯ ಭದ್ರಾವತಿ, ವಿಲ್ಸನ್ ಬಾಬು, ಭಾಸ್ಕರ್ ಬಾಬು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಿಐಎಸ್‌ಎಲ್ ಶತಮಾನೋತ್ಸವ ಉದ್ಘಾಟನೆಗಾಗಿ ನಗರಕ್ಕೆ ಆಗಮಿಸಿದ ಮೈಸೂರು ಸಂಸ್ಥಾನದ ದೊರೆ

ಭದ್ರಾವತಿ: ನಗರದಲ್ಲಿ ನ.೪ ಮತ್ತು ೫ರಂದು ನಡೆಯಲಿರುವ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಶತಮಾನೋತ್ಸವದಲ್ಲಿ ಪಾಲ್ಗೊಳ್ಳಲು ಮೈಸೂರು ಸಂಸ್ಥಾನದ ಮಹಾರಾಜ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಬಹದ್ದೂರ್‌ರವರು ಶುಕ್ರವಾರ ನಗರಕ್ಕೆ ಆಗಮಿಸಿದ್ದಾರೆ.  
    ಭದ್ರಾವತಿ: ನಗರದಲ್ಲಿ ನ.೪ ಮತ್ತು ೫ರಂದು ನಡೆಯಲಿರುವ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಶತಮಾನೋತ್ಸವದಲ್ಲಿ ಪಾಲ್ಗೊಳ್ಳಲು ಮೈಸೂರು ಸಂಸ್ಥಾನದ ಮಹಾರಾಜ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಬಹದ್ದೂರ್‌ರವರು ಶುಕ್ರವಾರ ನಗರಕ್ಕೆ ಆಗಮಿಸಿದ್ದಾರೆ.
    ನಗರದ ಹೊರವಲಯ ಭದ್ರಾ ಅಭಯಾರಣ್ಯ ವ್ಯಾಪ್ತಿಯ ಭದ್ರಾ ಜಲಾಶಯ ಸಮೀಪದ ಜಂಗಲ್ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದು, ಬೆಳಿಗ್ಗೆ ಶಾಸಕ ಬಿ.ಕೆ ಸಂಗಮೇಶ್ವರ್ ಕುಟುಂಬಸ್ಥರು ಹಾಗು ಅಭಿಮಾನಿಗಳು ಬಹದ್ದೂರ್‌ರವರನ್ನು ಸ್ವಾಗತಿಸಿದರು.
    ನ.೪ರ ಬೆಳಿಗ್ಗೆ ೧೦ ಗಂಟೆಗೆ ವಿಐಎಸ್‌ಎಲ್ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ಆಯೋಜಿಸಲಾಗಿರುವ ಶತಮಾನೋತ್ಸವ ಬಹದ್ದೂರ್‌ರವರು ಉದ್ಘಾಟಿಸಲಿದ್ದು, ಕೇಂದ್ರ ಹಾಗು ರಾಜ್ಯ ಸಚಿವರು, ಸಂಸದರು, ಜಿಲ್ಲೆಯ ಎಲ್ಲಾ ಶಾಸಕರು, ವಿವಿಧ ಕ್ಷೇತ್ರಗಳ ಸಾಧಕರು ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ.

Thursday, November 2, 2023

ಜಾತ್ರೆ ರೂಪ ಪಡೆದುಕೊಳ್ಳುತ್ತಿದೆ ವಿಐಎಸ್‌ಎಲ್ ಶತಮಾನೋತ್ಸವ : ಇಂದು ಸಂಜೆ ಭದ್ರಾರತಿಗೆ ಚಾಲನೆ

ಬೃಹತ್ ವೇದಿಕೆ, ಮಹಾದ್ವಾರ, ಆಕರ್ಷಕ ವಿದ್ಯುತ್ ದೀಪಗಳ ಅಲಂಕಾರ, ಪ್ರಮುಖ ರಸ್ತೆಗಳ ಮೆರಗು

ಭದ್ರಾವತಿ ಪ್ರಮುಖ ವೃತ್ತಗಳಲ್ಲಿ ವಿಐಎಸ್‌ಎಲ್ ಶತಮಾನೋತ್ಸವ ಅಂಗವಾಗಿ ನಿರ್ಮಿಸಲಾಗಿರುವ ಮಹಾದ್ವಾರ.
    ಭದ್ರಾವತಿ: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸ್ಥಾಪನೆಗೊಂಡು ೧೦೦ ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ಹಿರಿಯ ಚಲನಚಿತ್ರ ನಟ ಎಸ್. ದೊಡ್ಡಣ್ಣ ನೇತೃತ್ವದಲ್ಲಿ ನ.೩ ರಿಂದ ೫ರವರೆಗೆ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಶತಮಾನೋತ್ಸವ ಜಾತ್ರೆಯ ರೂಪ ಪಡೆದುಕೊಳ್ಳುತ್ತಿದ್ದು, ಕಳೆದ ೫ ದಿನಗಳಿಂದ ಬೃಹತ್ ವೇದಿಕೆ ನಿರ್ಮಾಣ ಸೇರಿದಂತೆ ಭರದ ಸಿದ್ದತೆಗಳು ನಡೆದಿವೆ.  
    ವಿಐಎಸ್‌ಎಲ್ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ಬೃಹತ್ ವಾಟರ್ ಪ್ರೂಪ್ ವೇದಿಕೆ ನಿರ್ಮಾಣಗೊಂಡಿದ್ದು, ಸಾವಿರಾರು ಮಂದಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ ಎರಡು ದಿನ ಊಟದ ವ್ಯವಸ್ಥೆ ಸಹ ಕೈಗೊಳ್ಳಲಾಗಿದೆ. ಕಾರ್ಯಕ್ರಮ ವೀಕ್ಷಣೆಗೆ ಅನುಕೂಲವಂತೆ ಬೃಹತ್ ಡಿಜಿಟಲ್ ಪ್ರದರ್ಶಕಗಳನ್ನು(ಡಿಸ್ ಪ್ಲೇ) ಹಾಗು ಧ್ವನಿವರ್ಧಕಗಳನ್ನು ಅಳವಡಿಸಲಾಗಿದೆ.


ಭದ್ರಾವತಿ ವಿಐಎಸ್‌ಎಲ್ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ವಿಐಎಸ್‌ಎಲ್ ಶತಮಾನೋತ್ಸವ ಅಂಗವಾಗಿ ನಿರ್ಮಿಸಿರುವ ವಾಟರ್ ಪ್ರೂಪ್ ಬೃಹತ್ ವೇದಿಕೆ.
    ನಗರದ ಪ್ರಮುಖ ವೃತ್ತಗಳಲ್ಲಿ ಶತಮಾನೋತ್ಸವ ಮಹಾದ್ವಾರಗಳನ್ನು ನಿರ್ಮಿಸಲಾಗಿದ್ದು, ಪ್ರಮುಖ ರಸ್ತೆಗಳು ಅಲಂಕೃತಗೊಂಡು ಮೆರಗು ನೀಡುತ್ತಿವೆ. ರಾತ್ರಿ ವೇಳೆ ಆಕರ್ಷಕವಾಗಿ ಕಂಗೊಳಿಸುವ ವಿದ್ಯುತ್ ದೀಪಗಳ ಅಲಂಕಾರ ಕೈಗೊಳ್ಳಲಾಗಿದೆ. ಕಾಯಂ, ಗುತ್ತಿಗೆ ಹಾಗು ನಿವೃತ್ತ ಕಾರ್ಮಿಕರು, ಅಧಿಕಾರಿಗಳು, ವಿವಿಧ ಸಂಘಟನೆಗಳು ಶತಮಾನೋತ್ಸವ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಹೆಚ್ಚಿನ ಶ್ರಮವಹಿಸಿವೆ.
    ನ.೩ರಂದು ಶುಕ್ರವಾರ ಸಂಜೆ ೪.೩೦ಕ್ಕೆ ಹಳೆನಗರದ ಶ್ರೀಲಕ್ಷ್ಮೀನರಸಿಂಹ ದೇವಾಲಯದಲ್ಲಿ ವಿಐಎಸ್‌ಎಲ್ ಮಾಜಿ ಉದ್ಯೋಗಿ ಹಾಗು ಚಲನಚಿತ್ರನಟ ಭದ್ರಾರತಿಗೆ ಚಾಲನೆ ನೀಡಲಿದ್ದಾರೆ.
    ಈ ಸಂಬಂಧ ಜ್ಯೋತಿಯನ್ನು ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಿಂದ ಹಳದಮ್ಮ ಕೇರಿ, ರಂಗಪ್ಪ ವೃತ್ತ, ಬಿ.ಹೆಚ್.ರಸ್ತೆ, ಮಾಧವಚಾರ್ ವೃತ್ತದ ಮಾರ್ಗದ ಮೂಲಕ ಭದ್ರಾ ಹಳೇ ಸೇತುವೆ ಬಳಿಯ ಶ್ರೀ ಸಂಗಮೇಶ್ವರ ದೇವಾಲಯಕ್ಕೆ ಮೆರವಣಿಗೆ ಮೂಲಕ ತಂದು ಭದ್ರಾರತಿ ಪೂಜೆ ನೆರವೇರಿಸಲಾಗುವುದು.
    ನ.೪ ಮತ್ತು ೫ ಎರಡು ದಿನ ಕೇಂದ್ರ ಹಾಗು ರಾಜ್ಯ ಸಚಿವರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಂಸದರು, ಜಿಲ್ಲೆಯ ಎಲ್ಲಾ ಶಾಸಕರು, ಗಣ್ಯರು, ಕಲಾವಿದರು, ಸಾಧಕರು ಪಾಲ್ಗೊಳ್ಳಲಿದ್ದಾರೆ. ನಿರೀಕ್ಷೆಗೂ ಮೀರಿ ಹೆಚ್ಚಿನ ಜನರು ಪಾಲ್ಗೊಳ್ಳುವ ವಿಶ್ವಾಸವಿದ್ದು, ೩ ದಿನಗಳ ಕಾಲ ನಗರದಲ್ಲಿ ಜಾತ್ರೆಯ ಸಂಭ್ರಮ ಕಂಡು ಬರಲಿದೆ.


ಭದ್ರಾವತಿ ವಿಐಎಸ್‌ಎಲ್ ಕ್ರೀಡಾಂಗಣದ ಶತಮಾನೋತ್ಸವ ಹಿನ್ನಲೆಯಲ್ಲಿ ಅಲಂಕೃತಗೊಂಡು ಕಂಗೊಳಿಸುತ್ತಿರುವುದು.

ವಾಹನ ತಪಾಸಣೆ ವೇಳೆ ವ್ಯಕ್ತಿ ಸೆರೆ : ೪ ದ್ವಿಚಕ್ರ ವಾಹನ ವಶ

ಭದ್ರಾವತಿ ತಾಲೂಕಿನ ಹುಣಸೇಕಟ್ಟೆ ಜಂಕ್ಷನ್ (ಎಚ್.ಕೆ ಜಂಕ್ಷನ್) ಬಳಿ ವಾಹನ ತಪಾಸಣೆ ವೇಳೆ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿರುವ ವ್ಯಕ್ತಿಯೋರ್ವನನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಗ್ರಾಮಾಂತರ ಠಾಣೆ ಪೊಲೀಸರ ತಂಡ ಯಶಸ್ವಿಯಾಗಿರುವ ಘಟನೆ ನಡೆದಿದೆ.
    ಭದ್ರಾವತಿ: ತಾಲೂಕಿನ ಹುಣಸೇಕಟ್ಟೆ ಜಂಕ್ಷನ್ (ಎಚ್.ಕೆ ಜಂಕ್ಷನ್) ಬಳಿ ವಾಹನ ತಪಾಸಣೆ ವೇಳೆ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿರುವ ವ್ಯಕ್ತಿಯೋರ್ವನನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಗ್ರಾಮಾಂತರ ಠಾಣೆ ಪೊಲೀಸರ ತಂಡ ಯಶಸ್ವಿಯಾಗಿರುವ ಘಟನೆ ನಡೆದಿದೆ.
    ಬಂಧಿತ ವ್ಯಕ್ತಿ ಉಮೇಶ ಅಲಿಯಾಸ್ ಮುದ್ದ ಬಿನ್ ಹರಿಹರಪ್ಪ ಎಂದು ಗುರುತಿಸಲಾಗಿದೆ. ಈತನಿಂದ ಕಳ್ಳತನ ಮಾಡಲಾಗಿರುವ ೪ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದು, ಇವುಗಳ ಅಂದಾಜು ಮೌಲ್ಯ ಒಟ್ಟು ೮೦ ಸಾವಿರ ರುಪಾಯಿಗಳಾಗಿರುತ್ತದೆ.
     ಕಾರ್ಯಾಚರಣೆ ತಂಡದಲ್ಲಿ ಪಾಲ್ಗೊಂಡಿದ್ದ ಠಾಣಾ ಪೊಲೀಸ್ ನಿರೀಕ್ಷಕ ಜಗದೀಶ್ ಹಂಚಿನಾಲ್, ಠಾಣಾಧಿಕಾರಿಗಳಾದ ಶ್ರೀಶೈಲ ಕೆಂಚಣ್ಣವರ, ಜಯಪ್ಪ, ಶಿಲ್ಪ ನಾಯನೇಗಲಿ, ಮಹೇಶ್, ಸಹಾಯಕ ಠಾಣಾಧಿಕಾರಿ ಚಂದ್ರಶೇಖರ್, ಸಿಬ್ಬಂದಿಗಳಾದ ಮಂಜುನಾಥ್, ಈರಯ್ಯ ಮತ್ತು ಶಿವಪ್ಪರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗು ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಅಭಿನಂದಿಸಿದ್ಧಾರೆ.

ಮದ್ಯವರ್ಜನ ಶಿಬಿರ ಉತ್ತಮ ಸಮಾಜ ನಿರ್ಮಾಣಕ್ಕೆ ಮಹತ್ವದ ಕೊಡುಗೆ : ಎಂ. ಪಾಲಾಕ್ಷಪ್ಪ

ಭದ್ರಾವತಿ ಶ್ರೀರಾಮನಗರದ ಶ್ರೀ ರಾಮೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ೧೭೫೨ನೇ ಮದ್ಯವರ್ಜನ ಶಿಬಿರಕ್ಕೆ ಗುರುವಾರ ಚಾಲನೆ ನೀಡಲಾಯಿತು.  
    ಭದ್ರಾವತಿ: ಮದ್ಯವರ್ಜನ ಶಿಬಿರ ರಾಜ್ಯಕ್ಕೆ ಶ್ರೀ ಧರ್ಮಸ್ಥಳ ಧರ್ಮಾಧಿಕಾರಿ, ಪದ್ಮ ವಿಭೂಷಣ ಡಾ. ವೀರೇಂದ್ರ ಹೆಗ್ಗಡೆ ದಂಪತಿ ಉತ್ತಮ ಸಮಾಜ ನಿರ್ಮಾಣಕ್ಕಾಗಿ ನೀಡಿದ ಮಹತ್ವದ ಕೊಡುಗೆಯಾಗಿದೆ  ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಎಂ.ಪಾಲಾಕ್ಷಪ್ಪ ಹೇಳಿದರು.
    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಱವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್-೨, ಬೆಳ್ತಂಗಡಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್, ಬೆಂಗಳೂರು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ,  ಶಿವಮೊಗ್ಗ ಜಿಲ್ಲಾ ಜನಜಾಗೃತಿ ವೇದಿಕೆ ಹಾಗು ನಾಗತಿಬೆಳಗಲು ವಲಯ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ವಿವಿಧ ಸಂಘ- ಸಂಸ್ಥೆಗಳ ಸಹಯೋಗದೊಂದಿಗೆ ಶ್ರೀರಾಮನಗರದ ಶ್ರೀ ರಾಮೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ೧೭೫೨ನೇ ಮದ್ಯವರ್ಜನ ಶಿಬಿರಕ್ಕೆ ಗುರುವಾರ ಅವರು ಚಾಲನೆ ನೀಡಿ ಮಾತನಾಡಿದರು.
    ಸಂಕಷ್ಟದ ಸ್ಥಿತಿಗೆ ಸಿಲುಕಿದ ಅನೇಕ ಕುಟುಂಬಗಳು ಮದ್ಯವರ್ಜನ ಶಿಬಿರದಿಂದಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ನೆಮ್ಮದಿಯ ಬದುಕು ಕಂಡುಕೊಂಡಿವೆ. ತಂದೆ-ತಾಯಿ, ಗಂಡ-ಹೆಂಡತಿ, ಮಕ್ಕಳು  ಸಾಮರಸ್ಯದಿಂದ ಬದುಕುವ ವಾತಾವರಣ ನಿರ್ಮಾಣಗೊಂಡಿದೆ ಎಂದರು.
    ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಆರ್.ಕರುಣಾಮೂರ್ತಿ ಮಾತನಾಡಿ, ಅನೇಕರ ಮನಪರಿವರ್ತನೆಗೆ ಮದ್ಯವರ್ಜನ ಶಿಬಿರ ಸಹಕಾರಿಯಾಗಿದೆ. ಇದರಿಂದ ಬಹಳಷ್ಟು ಕುಟುಂಬಗಳು ಸುಧಾರಣೆಗೆ ಬಂದಿವೆ ಎಂದರು.
    ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ಎಲ್ ಯಶೋಧರಯ್ಯ, ತಾಲೂಕು ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಎಸ್.ಎಂ ರಮೇಶ್, ಪೊಲೀಸ್ ನಗರ ವೃತ್ತ ನಿರೀಕ್ಷಕ ಜೆ. ಶ್ರೀಶೈಲ ಕುಮಾರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಱವೃದ್ಧಿ ಯೋಜನೆ .ಬಿ.ಸಿ. ಟ್ರಸ್ಟ್ ಜಿಲ್ಲಾ ನಿರ್ದೇಶಕ ಜೆ. ಚಂದ್ರಶೇಖರ್, ವೀರಾಪುರ ಗ್ರಾಪಂ ಅಧ್ಯಕ್ಷ ಪಿ. ರಂಗಸ್ವಾಮಿ, ಜಿಲ್ಲಾ ಜನಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ಜಿ. ಆನಂದ್, ಸದಸ್ಯರಾದ ಜಯರಾಮ್ ಗೊಂದಿ, ಪಿ. ಪಾರ್ವತಮ್ಮ, ಕ್ಷೇತ್ರ ಯೋಜನಾಧಿಕಾರಿ-೨ ಮಾಧವ, ಮೇಲ್ವಿಚಾರಕ ಪಿ. ಶ್ರೀನಿವಾಸ್, ಜಿ.ಎಂ ನಿಂಗಪ್ಪ, ಎಚ್.ಆರ್ ಮಹೇಶ್ ಕುಮಾರ್, ರಾಜು ರೇವಣಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.