Wednesday, November 8, 2023

ಪಿ. ಈಶ್ವರ್‌ರಾವ್ ನಿಧನ

ಪಿ. ಈಶ್ವರ್‌ರಾವ್
    ಭದ್ರಾವತಿ : ಹಿಂದೂ ಮಹಾಸಭಾ ಹಾಗು ಬಿಜೆಪಿ ಮುಖಂಡ, ಹೊಸಮನೆ ನಿವಾಸಿ ಪಿ. ಈಶ್ವರರಾವ್(೬೦) ಬುಧವಾರ ನಿಧನ ಹೊಂದಿದರು.
    ಪತ್ನಿ, ಓರ್ವ ಪುತ್ರ ಹಾಗು ಇಬ್ಬರು ಪುತ್ರಿಯರು ಇದ್ದರು. ಈಶ್ವರರಾವ್ ಮೂಲತಃ ಹಿಂದೂ ಮಹಾಸಭಾ ಕಾರ್ಯಕರ್ತರಾಗಿದ್ದು, ಬಿಜೆಪಿ ಪಕ್ಷದಲ್ಲೂ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ಇವರ ನಿಧನಕ್ಕೆ ಹಿಂದೂ ಮಹಾಸಭಾ ಪ್ರಮುಖರು ಹಾಗು ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಸಹೋದರ ಪಿ. ಗಣೇಶ್‌ರಾವ್ ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.

ನ.೯ರಂದು ಶುದ್ಧ, ಸುರಕ್ಷಿತ ಕುಡಿಯುವ ನೀರು ಪೂರೈಕೆ ಕುರಿತು ಅರಿವು

    ಭದ್ರಾವತಿ: ನಗರಸಭೆ ವತಿಯಿಂದ `ವುಮೆನ್ ಆಫ್ ವಾಟರ್, ವಾಟರ್ ಆಫ್ ವುಮೆನ್ ಕ್ಯಾಂಪೇನ್' ಜಲ್ ದಿವಾಳಿ ಅಭಿಯಾನದ ಅಂಗವಾಗಿ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರುಗಳಿಗೆ ನ. ೯ರಂದು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ಬೈಪಾಸ್ ರಸ್ತೆ, ಆನೇಕೊಪ್ಪದಲ್ಲಿರುವ ನಗರಸಭೆ ಜಲ ಶುದ್ಧೀಕರಣ ಘಟಕದಲ್ಲಿ ಬೆಳಿಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೧ ಗಂಟೆವರೆಗೆ ಕಾರ್ಯಕ್ರಮ ನಡೆಯಲಿದ್ದು, ನಗರಸಭೆ ವ್ಯಾಪ್ತಿಯ ೩೦ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರುಗಳಿಗೆ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರು ಪೂರೈಕೆಯ ಪ್ರಕ್ರಿಯೆ ಹಾಗು ಮಾಲೀಕತ್ವದ ಭಾವನೆ ಕುರಿತು ಅರಿವು ಮೂಡಿಸಲಾಗುವುದು. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಪೌರಾಯುಕ್ತ ಎಚ್.ಎಂ ಮನುಕುಮಾರ್ ಕೋರಿದ್ದಾರೆ.

Tuesday, November 7, 2023

ಸಂಬಂಧಿಕನಿಂದಲೇ ಚಿನ್ನದ ಮಾಂಗಲ್ಯ ಸರ ಅಪಹರಣ

೨೪ ಗಂಟೆಯೊಳಗೆ ಪ್ರಕರಣ ಭೇದಿಸಿದ ನ್ಯೂಟೌನ್ ಪೊಲೀಸರು

ಘಟನೆ ನಡೆದ ೨೪ ಗಂಟೆಯೊಳಗೆ ಪ್ರಕರಣ ಭೇದಿಸಿ ವ್ಯಕ್ತಿಯೋರ್ವನನ್ನು ಬಂಧಿಸುವಲ್ಲಿ ಭದ್ರಾವತಿ ನ್ಯೂಟೌನ್ ಠಾಣೆ ಪೊಲೀಸರು ಯಶಸ್ವಿಯಾಗಿರುವ ಘಟನೆ ನಡೆದಿದೆ.
    ಭದ್ರಾವತಿ: ಘಟನೆ ನಡೆದ ೨೪ ಗಂಟೆಯೊಳಗೆ ಪ್ರಕರಣ ಭೇದಿಸಿ ವ್ಯಕ್ತಿಯೋರ್ವನನ್ನು ಬಂಧಿಸುವಲ್ಲಿ ನ್ಯೂಟೌನ್ ಠಾಣೆ ಪೊಲೀಸರು ಯಶಸ್ವಿಯಾಗಿರುವ ಘಟನೆ ನಡೆದಿದೆ.
    ಕಡದಕಟ್ಟೆಯ ಮಹಿಳೆಯೊಬ್ಬರ ಚಿನ್ನದ ಮಾಂಗಲ್ಯ ಸರ ಅಪಹರಿಸಿರುವ ಘಟನೆಗೆ ಸಂಬಂಧಿಸಿದ ಮಂಡ್ಯ ಮಳವಳ್ಳಿ ತಾಲೂಕಿನ ಕುರುಬನಪುರ ಗ್ರಾಮದ ನಿವಾಸಿ ಕೆ.ಎನ್ ನಾಗರಾಜ(೩೨) ಎಂಬಾತನನ್ನು ಬಂಧಿಸಿ ೮೮ ಗ್ರಾಂ. ತೂಕದ ಸುಮಾರು ೪.೫ ಲಕ್ಷ ರು. ಮೌಲ್ಯದ ಚಿನ್ನದ ಮಾಂಗಲ್ಯ ಸರ ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
    ಘಟನೆ ವಿವರ:  ನ.೬ ರಂದು ಬೆಳಗ್ಗೆ ಕಡದಕಟ್ಟೆಯ ಮಹಿಳೆಯೊಬ್ಬರ ಮನೆಗೆ ಆಕೆಯ ಗಂಡನ ಅಣ್ಣನ ಮಗ ಕೆ.ಎನ್ ನಾಗರಾಜ ಬಂದಿದ್ದು, ಆತನು ತನ್ನ ಹತ್ತಿರ ಇದ್ದ ಟವಲ್ ತೆಗೆದುಕೊಂಡು ಮಹಿಳೆಯ ಕುತ್ತಿಗೆಗೆ ಬಿಗಿದು ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆಂದು ದೂರು ದಾಖಲಾಗಿತ್ತು.
    ಈ ಸಂಬಂಧ ಮಹಿಳೆ ನೀಡಿದ ದೂರಿನ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು. ಪತ್ತೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ ಮಿಥುನ್ ಕುಮಾರ್,  ಹೆಚ್ಚುವರಿ ಅಧೀಕ್ಷಕ ಅನಿಲ್ ಕುಮಾರ್ ಭೂಮರಡ್ಡಿರವರ ಮಾರ್ಗದರ್ಶನದಲ್ಲಿ, ಪೊಲೀಸ್ ಉಪಾಧೀಕ್ಷಕ ಕೆ.ಆರ್ ನಾಗರಾಜ್‌ರವರ ಮೇಲ್ವಿಚಾರಣೆಯಲ್ಲಿ,  ನಗರ ಪೊಲೀಸ್ ವೃತ್ತ ನಿರೀಕ್ಷಕ ಜೆ. ಶ್ರೀಶೈಲ ಕುಮಾರ ನೇತೃತ್ವದಲ್ಲಿ  ಠಾಣಾಧಿಕಾರಿ ಟಿ. ರಮೇಶ್ ಮತ್ತು ಸಿಬ್ಬಂದಿಗಳಾದ  ನವೀನ್, ಮಲ್ಲಿಕಾರ್ಜುನ, ರಾಕೇಶ, ಗಿರೀಶ್ ಮತ್ತು ವಿನೋದ್‌ರವರುಗಳನ್ನೊಳಗೊಂಡ ತಂಡ ರಚಿಸಲಾಗಿತ್ತು.
    ತನಿಖಾ ತಂಡ ಪ್ರಕರಣ ದಾಖಲಾದ ೨೪ ಗಂಟೆಯೊಳಗಾಗಿ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದು, ತನಿಖಾ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ಪ್ರಶಂಸಿಸಿ ಅಭಿನಂದಿಸಿದೆ.  

ಸಮಾಜಮುಖಿ ಕಾರ್ಯಗಳಿಗೆ ಹೆಚ್ಚಿನ ಸಹಕಾರ : ಮನುಕುಮಾರ್

ರುದ್ರಭೂಮಿಯಲ್ಲಿ ಕಾಗೆಗೆ ಎಡೆ ಇಡುವ ಕಟ್ಟೆ, ಆಸನಗಳ ಉದ್ಘಾಟನೆ

ಭಾವಸಾರ ಕ್ಷತ್ರಿಯ ಸಮಾಜ ಹಾಗೂ ಭಾವಸಾರ ಕೋ ಆಪರೇಟಿವ್ ಸೊಸೈಟಿ ಅಂಗ ಸಂಸ್ಥೆಯಾದ ಭಾವಸಾರ ವಿಷನ್ ಇಂಡಿಯಾ ವತಿಯಿಂದ ಭದ್ರಾವತಿ ನಗರದ ಹುತ್ತಾ ಕಾಲೋನಿ ಹಾಗೂ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಕೈಗೊಂಡಿರುವ ಕಾಗೆಗೆ ಎಡೆ ಇಡುವ ಕಟ್ಟೆ ಹಾಗೂ ಕಾಂಕ್ರೀಟ್ ಆಸನಗಳ ಉದ್ಘಾಟನೆ ಕಾರ್ಯಕ್ರಮ ಮಂಗಳವಾರ ನಡೆಯಿತು.
    ಭದ್ರಾವತಿ : ಸಮಾಜಮುಖಿ ಕಾರ್ಯಗಳಿಗೆ ನಗರಸಭೆ ಆಡಳಿತ ಹೆಚ್ಚಿನ ಸಹಕಾರ ನೀಡಲಿದೆ ಎಂದು ಪೌರಾಯುಕ್ತ ಮನುಕುಮಾರ್ ಹೇಳಿದರು.
    ಅವರು ಮಂಗಳವಾರ ಭಾವಸಾರ ಕ್ಷತ್ರಿಯ ಸಮಾಜ ಹಾಗೂ ಭಾವಸಾರ ಕೋ ಆಪರೇಟಿವ್ ಸೊಸೈಟಿ ಅಂಗ ಸಂಸ್ಥೆಯಾದ ಭಾವಸಾರ ವಿಷನ್ ಇಂಡಿಯಾ ವತಿಯಿಂದ ನಗರದ ಹುತ್ತಾ ಕಾಲೋನಿ ಹಾಗೂ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಕೈಗೊಂಡಿರುವ ಕಾಗೆಗೆ ಎಡೆ ಇಡುವ ಕಟ್ಟೆ ಹಾಗೂ ಕಾಂಕ್ರೀಟ್ ಆಸನಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ವಿಶೇಷವಾಗಿ ರುದ್ರಭೂಮಿ ಅಭಿವೃದ್ಧಿಗೆ ಹೆಚ್ಚಿನ ಕಾಳಜಿ ವಹಿಸುತ್ತಿರುವುದು ಶ್ಲಾಘನೀಯವಾಗಿದ್ದು, ಸಮಾಜದಲ್ಲಿ ಮಾದರಿ ಕಾರ್ಯ ಇದಾಗಿದೆ. ಈ ರೀತಿಯ ಸಮಾಜಮುಖಿ ಕಾರ್ಯಗಳಿಗೆ ಸಂಪೂರ್ಣ ಸಹಕಾರವಿದೆ ಎಂದರು.
    ನಗರಸಭೆ ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್, ಬಿವಿಐ ಸಂಸ್ಥಾಪಕ ಸಂಯೋಜಕ ಗಜೇಂದ್ರನಾಥ ಮಾಳೋದೆ, ರಾಷ್ಟ್ರೀಯ ಕಾರ್ಯದರ್ಶಿ ಸಚಿನ್ ಸಾಕ್ರೆ,  ಏರಿಯಾ ೧೦೩ರ ಗೌರ್‍ನರ್ ಸುರೇಶ್ ಶೇರ್‌ಖರ್, ಹಿರಿಯ ಮುತ್ಸದಿಗಳಾದ ಅಶೋಕ್ ಡೋಯಿಜೋಡೆ, ದಿನಕರ್ ಡೋಯಿಜೋಡೆ, ಬದ್ರಿನಾಥ್ ಉತ್ತರಕರ್, ಸತೀಶ್ ಕುಮಾರ್ ಉತ್ತರ್‌ಕರ್,  ಮುರಳಿಧರ್ ಉತ್ತರ್‌ಕರ್, ನರೇಂದ್ರ ಡೋಯಿಜೋಡೆ, ರಾಮ್‌ರಾವ್ ಡೋಯಿಜೋಡೆ , ಹನುಮಂತ್‌ರಾವ್ ಗುಜ್ಜರ್,  ಅಂಬಾಜಿರಾವ್ ರಂಗದೊಳ್, ವಿಠಲನಾಥ್ ತೇಲ್ಕರ್, ರಾಘವೇಂದ್ರ ಚಿಕ್ಕೋಡೆ , ಹಿರಿಯ ಪರ್ತಕ ಕೆ.ಎನ್ ರವೀಂದ್ರನಾಥ್(ಬ್ರದರ್) ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು
    ಭಾವಸಾರ ವಿಜನ್ ಇಂಡಿಯಾ ಏರಿಯಾ ೧೦೩ರ ತಾಲೂಕು ಅಧ್ಯಕ್ಷ ರಾಕೇಶ್ ಡೋಯಿಜೋಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಿವಿಐ ಕಾರ್ಯದರ್ಶಿ ಆನಂದ್ ಉತ್ತರಕರ್ ಸ್ವಾಗತಿಸಿದರು. ಶಿಲ್ಪಾ ಜಗದೀಶ್ ನಿರೂಪಿಸಿದರು.

ಸವಿತಾ ಸಮಾಜಕ್ಕೆ ಮೀಸಲಾತಿ ನೀಡಿ, ಜಾತಿ ನಿಂದನೆ ಕಾಯ್ದೆ ಜಾರಿಗೊಳಿಸಿ

ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಸವಿತಾ ಸಮಾಜ ಮನವಿ

ರಾಜಕೀಯ, ಆರ್ಥಿಕ ಹಾಗು ಸಾಮಾಜಿಕವಾಗಿ ಹಿಂದುಳಿದಿರುವ ಸವಿತಾ ಸಮಾಜಕ್ಕೆ ಸರ್ಕಾರ ತಕ್ಷಣ ಮೀಸಲಾತಿ ನೀಡುವ ಜೊತೆಗೆ ಜಾತಿ ನಿಂದನೆ ಕಾಯ್ದೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಂಗಳವಾರ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ: ರಾಜಕೀಯ, ಆರ್ಥಿಕ ಹಾಗು ಸಾಮಾಜಿಕವಾಗಿ ಹಿಂದುಳಿದಿರುವ ಸವಿತಾ ಸಮಾಜಕ್ಕೆ ಸರ್ಕಾರ ತಕ್ಷಣ ಮೀಸಲಾತಿ ನೀಡುವ ಜೊತೆಗೆ ಜಾತಿ ನಿಂದನೆ ಕಾಯ್ದೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಂಗಳವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
    ಪ್ರಮುಖರು ಮಾತನಾಡಿ, ಸಮಾಜದಲ್ಲಿ ಕ್ಷೌರಿಕ ವೃತ್ತಿ ಹಾಗು ಮಂಗಳವಾದ್ಯ ಮತ್ತು ಪಾರಂಪರಿಕ ವೈದ್ಯ ಪದ್ದತಿ ನಂಬಿ ಬದುಕುತ್ತಿರುವ ಸವಿತಾ ಸಮಾಜದವರು ಶೋಷಣೆಗೆ ಒಳಗಾಗಿದ್ದಾರೆ. ರಾಜಕೀಯ, ಆರ್ಥಿಕ ಹಾಗು ಸಾಮಾಜಿಕವಾಗಿ ಹಿಂದುಳಿದಿದ್ದಾರೆ. ಈಗಾಗಲೇ ಪಾರಂಪರಿಕ ವೈದ್ಯ ಪದ್ದತಿ ಕಸಿದುಕೊಳ್ಳಲಾಗಿದ್ದು, ಪ್ರಸ್ತುತ ಕ್ಷೌರಿಕ ವೃತ್ತಿ ಸಹ ಅನ್ಯರ ಪಾಲಾಗುತ್ತಿದೆ. ಇದರಿಂದಾಗಿ ಬದುಕುವುದು ಕಷ್ಟಕರವಾಗಿದ್ದು, ಈ ನಡುವೆ ಜಾತಿ ನಿಂದನೆ ಕಾಯ್ದೆ ಜಾರಿಗೊಳಿಸದಿರುವುದು ನೋವುಂಟು ಮಾಡಿದೆ ಎಂದು ಅಳಲು ತೋರ್ಪಡಿಸಿಕೊಂಡರು.
    ಸರ್ಕಾರ ತಕ್ಷಣ ಮುಂದಿನ ವರ್ಷ ಜ.೧೫ರೊಳಗಾಗಿ ಸಮಾಜದ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಸಮಾಜದ ಶ್ರೀ ಸವಿತಾನಂದನಾಥ ಸ್ವಾಮೀಜಿಯವರು ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ವರೆಗೂ ಪಾದಯಾತ್ರೆ ನಡೆಸಿ ನಂತರ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದಾರೆ. ಸವಿತಾ ಸಮುದಾಯದವರು ಇದಕ್ಕೆ ಸಂಪೂರ್ಣ ಬೆಂಬಲ ನೀಡಲಿದ್ದಾರೆಂದು ಎಚ್ಚರಿಸಿದರು.
    ಸವಿತಾ ಸಹಕಾರ ಸಂಘದ ಅಧ್ಯಕ್ಷ ಎಂ. ಪರಮೇಶ್, ಸವಿತಾ ಸಮಾಜದ ಉಪಾಧ್ಯಕ್ಷರಾದ ಎನ್. ವೆಂಕಟೇಶ್, ಕೆ. ಓಬಳೇಶ್, ಜಿ. ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ರಾಜು ರೆಡ್‌ಸನ್, ಸಹಕಾರ್ಯದರ್ಶಿ ಬಿ.ಎನ್ ಮಹೇಶ್‌ಕುಮಾರ್, ಖಜಾಂಚಿ ಎಸ್.ವಿ ನರಸಿಂಹಮೂರ್ತಿ, ಸಹಕಾರ್ಯದರ್ಶಿಗಳಾದ ಎನ್. ರಮೇಶ್, ಪಿ.ವಿ ಸುರೇಶ್, ಸಲಹೆಗಾರ ಗಣೇಶಣ್ಣ, ನಿರ್ದೇಶಕರಾದ ಶಿವಶಂಕರ್, ವಾಸು, ಅನಿಲ್‌ಕುಮಾರ್, ಲೋಕೇಶ್, ಹರೀಶ್, ನಾಗರಾಜ್, ರವಿಚಂದ್ರ, ಕುಮಾರ್ ಹಾಗು ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಮಧುಮಾಲತಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Monday, November 6, 2023

ಡಿಎಸ್‌ಎಸ್ ವಿದ್ಯಾರ್ಥಿ ಒಕ್ಕೂಟ ಜಿಲ್ಲಾ ಸಂಚಾಲಕರಾಗಿ ಜಿ. ಮಂಜುನಾಥ್

ಜಿ. ಮಂಜುನಾಥ್
    ಭದ್ರಾವತಿ : ತಾಲೂಕಿನ ಸುಣ್ಣದಹಳ್ಳಿ ಗಾಂಧಿನಗರ ಗ್ರಾಮದ ನಿವಾಸಿ ಜಿ. ಮಂಜುನಾಥ್‌ರವರನ್ನು ಪ್ರೊ. ಬಿ. ಕೃಷ್ಣಪ್ಪನವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕರನ್ನಾಗಿ ನೇಮಕಗೊಳಿಸಿ ಸಮಿತಿ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಆದೇಶಿಸಿದ್ದಾರೆ.
    ವಿದ್ಯಾರ್ಥಿ ಒಕ್ಕೂಟದ ತತ್ವ ಮತ್ತು ಸಿದ್ದಾಂತಗಳಿಗೆ ಬದ್ಧರಾಗಿ ಹಾಗು ವಿಶ್ವ ಜ್ಞಾನಿ, ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗು ಸಮಿತಿ ಸಂಸ್ಥಾಪಕ ಪ್ರೊ. ಬಿ. ಕೃಷ್ಣಪ್ಪನವರ ಕನಸು ನನಸು ಮಾಡುವ ನಿಟ್ಟಿನಲ್ಲಿ ಸಮುದಾಯದ ಜಾಗೃತಿಗಾಗಿ ಹಾಗು ಸಂವಿಧಾನಾತ್ಮಕ ಹಕ್ಕೊತ್ತಾಯಕ್ಕಾಗಿ ಶ್ರಮಿಸುವಂತೆ ಆದೇಶ ಪತ್ರದಲ್ಲಿ ಸೂಚಿಸಲಾಗಿದೆ.
    ನೂತನ ಜಿಲ್ಲಾ ಸಂಚಾಲಕ ಜಿ. ಮಂಜುನಾಥ್‌ರವರನ್ನು ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ತಮ್ಮಣ್ಣ ಸೇರಿದಂತೆ ಸ್ಥಳೀಯ ಮುಖಂಡರು ಅಭಿನಂದಿಸಿದ್ದಾರೆ.

ಭದ್ರಾವತಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣ

ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆಯಲ್ಲಿ ತುರ್ತು ಸಭೆ

ಭದ್ರಾವತಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಯಿತು. 
    ಭದ್ರಾವತಿ : ತಾಲೂಕಿನ ಗ್ರಾಮಾಂತರ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ತಕ್ಷಣ ಅಗತ್ಯ ಕ್ರಮ ಕೈಗೊಳ್ಳುವಂತೆ ಸೋಮವಾರ ನಡೆದ ಸಭೆಯಲ್ಲಿ ಆಗ್ರಹಿಸಲಾಯಿತು.
    ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆಯಲ್ಲಿ ಕುಡಿಯುವ ನೀರು, ಸ್ಮಶಾನ ಭೂಮಿ, ನಿವೇಶನ ಹಂಚಿಕೆ ಸೇರಿದಂತೆ ಇನ್ನಿತರ ವಿಷಯಗಳಿಗೆ ಸಂಬಂಧಿಸಿದಂತೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತುರ್ತು ಸಭೆಯಲ್ಲಿ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿರುವುದನ್ನು ಸಭೆಯ ಗಮನಕ್ಕೆ ತರಲಾಯಿತು.
    ನೀರು ಸರಬರಾಜು ಇಲಾಖೆ ಇಂಜಿನಿಯರ್ ಶಿವಕುಮಾರ್ ಸಭೆಗೆ ಮಾಹಿತಿ ನೀಡಿ, ತಡಸ ಮತ್ತು ದೊಣಬಘಟ್ಟ ಗ್ರಾಮಗಳಲ್ಲಿ ಮಾತ್ರ ನೀರಿನ ಸಮಸ್ಯೆ ಇದ್ದು, ಈ ಗ್ರಾಮಗಳಲ್ಲಿ ಕುಡಿಯುವ ನೀರು ಸರಬರಾಜು ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಉಳಿದಂತೆ ಎಲ್ಲಾ ಗ್ರಾಮಗಳಲ್ಲೂ ಸಮರ್ಪಕವಾಗಿ ನೀರು ಪೂರೈಸಲಾಗುತ್ತಿದೆ. ಹಣದ ಸಮಸ್ಯೆ ಇಲ್ಲ. ನೀರಿಗಾಗಿ ಬಹುತೇಕ ಭದ್ರಾ ಜಲಾಶಯ ಅವಲಂಬಿಸಲಾಗಿದ್ದು, ಈ ಹಿನ್ನಲೆಯಲ್ಲಿ ಜಲಾಶಯದಲ್ಲಿ ನೀರಿನ ಕೊರತೆ ಎದುರಾದಲ್ಲಿ ಜನವರಿ ನಂತರ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆ ಇದೆ ಎಂದರು.
    ಆದರೂ ಈ ನಡುವೆ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿರುವುದನ್ನು ಸಭೆಯ ಗಮನಕ್ಕೆ ತರಲಾಯಿತು. ಶಾಸಕ ಸಂಗಮೇಶ್ವರ್ ತುರ್ತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
    ತಹಸೀಲ್ದಾರ್ ಕೆ.ಆರ್ ನಾಗರಾಜ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗಂಗಣ್ಣ, ನಗರಸಭೆ ಸದಸ್ಯರಾದ ಬಿ.ಕೆ ಮೋಹನ್, ಜಾರ್ಜ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್ ಉಪಸ್ಥಿತರಿದ್ದರು. ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.