Monday, November 13, 2023

ಮನುಷ್ಯರಿಗೆ ಆಸ್ತಿ, ಹಣಕ್ಕಿಂತ ಆರೋಗ್ಯವೇ ಮುಖ್ಯ : ಪಾದರ್ ಕ್ಲಿಪರ್ಡ್ ರೋಷನ್ ಪಿಂಟೊ

ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಷಿಯಲ್ ಸರ್ವೀಸ್ ಸೊಸೈಟಿ ೩೫ನೇ ವಾರ್ಷಿಕೋತ್ಸವ ಹಾಗೂ ಸ್ತ್ರೀ ಬಂಧು ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ದಶಮಾನೋತ್ಸವದ ಅಂಗವಾಗಿ ಭದ್ರಾವತಿ ತಾಲೂಕಿನ ಕಾರೇಹಳ್ಳಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ಜಾಗೃತಿ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ ಪಾದರ್ ಕ್ಲಿಫರ್ಡ್ ರೋಷನ್ ಪಿಂಟೊ ಉದ್ಘಾಟಿಸಿದರು.
    ಭದ್ರಾವತಿ: ಮನುಷ್ಯರಿಗೆ ಆಸ್ತಿ, ಹಣಕ್ಕಿಂತ ಆರೋಗ್ಯವೇ ಮುಖ್ಯ. ಈ ಹಿನ್ನಲೆಯಲ್ಲಿ ಆರೋಗ್ಯಕ್ಕೆ ಹೆಚ್ಚಿನ ಗಮನ ನೀಡಬೇಕೆಂದು ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಷಿಯಲ್ ಸರ್ವೀಸ್ ಸೊಸೈಟಿ ನಿರ್ದೇಶಕರಾದ ವಂದನಿಯ ಪಾದರ್ ಕ್ಲಿಫರ್ಡ್ ರೋಷನ್ ಪಿಂಟೊ ಹೇಳಿದರು.
    ಅವರು ಸೊಸೈಟಿ ೩೫ನೇ ವಾರ್ಷಿಕೋತ್ಸವ ಹಾಗೂ ಸ್ತ್ರೀ ಬಂಧು ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ದಶಮಾನೋತ್ಸವದ ಅಂಗವಾಗಿ ತಾಲೂಕಿನ ಕಾರೇಹಳ್ಳಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ಜಾಗೃತಿ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.  
    ಮನುಷ್ಯರ ಬಳಿ ಎಷ್ಟೇ ಹಣ, ಚಿನ್ನ, ಆಸ್ತಿ ಇದ್ದರೂ, ಆಗರ್ಭ ಶ್ರೀಮಂತರಾಗಿದ್ದರೂ ಯಾವುದೂ ಲೆಕ್ಕಕ್ಕೆ ಬರುವುದಿಲ್ಲ. ಆರೋಗ್ಯವಂತನಾಗಿದ್ದರೇ ಮಾತ್ರ ಎಲ್ಲಾ ಶ್ರೀಮಂತಿಕೆ ಅಳಿಸಿಹಾಕಬಹುದು ಎಂದರು.
     ಕಾರೇಹಳ್ಳಿ ಧರ್ಮಕೇಂದ್ರದ ವಂದನಿಯ ಪಾದರ್ ಸಂತೋಷ್ ಮಾತನಾಡಿ, ನಗುವಿನಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.
    ಶಿವಮೊಗ್ಗ ನಂಜಪ್ಪ ಆಸ್ಪತ್ರೆ ಸ್ತ್ರೀ ರೋಗ ತಜ್ಞೆ ನಮ್ರತಾ ಉಡುಪ, ಸ್ತನ ಕ್ಯಾನ್ಸರ್, ಗರ್ಭಕೋಶ ಮತ್ತು ಕರುಳು ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಿದರು.
    ಶಿಬಿರದಲ್ಲಿ ಶಿವಮೊಗ್ಗ ನಂಜಪ್ಪ ಆಸ್ಪತ್ರೆ ಜನರಲ್ ಪಿಜಿಷಿಯನ್ ಹಾಗು ಮೂಳೆ, ಕೀಳು ಮತ್ತು ಮಕ್ಕಳ ತಜ್ಞರು ಉಚಿತ ತಪಾಸಣೆ ಮತ್ತು ಚಿಕಿತ್ಸೆ ನೀಡಿದರು. ಶಿವಮೊಗ್ಗ ಐದೃಷ್ಟಿ ಆಸ್ಪತ್ರೆಯಿಂದ ಉಚಿತ ತಪಾಸಣೆ ನಡೆಸಲಾಯಿತು. ಕಾರೇಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸುಮಾರು ೧೪೨ ಗ್ರಾಮಸ್ಥರು ಶಿಬಿರದ ಸದುಪಯೋಗ ಪಡೆದುಕೊಂಡರು.

ಎಸ್‌ಎಂಎಫ್‌ಜಿ ಇಂಡಿಯಾ ಕ್ರೆಡಿಟ್ ಕಂಪನಿ ಲಿಮಿಟೆಡ್‌ನಿಂದ ವೃದ್ಧಾಶ್ರಮ, ಅನಾಥಾಶ್ರಮಕ್ಕೆ ನೆರವು

ಭದ್ರಾವತಿ ಹುತ್ತಾ ಕಾಲೋನಿ ಎಸ್‌ಎಂಎಫ್‌ಜಿ ಇಂಡಿಯಾ ಕ್ರೆಡಿಟ್ ಕಂಪನಿ ಲಿಮಿಟೆಡ್ ಹೊಸ ಸಿದ್ದಾಪುರ ಸುರಕ್ಷಾ ಜೀವನ ಸೇವಾ ಟ್ರಸ್ಟ್, ಸುರಕ್ಷಾ ಜೀವನ ವೃದ್ಧಾಶ್ರಮ ಮತ್ತು ಅನಾಥಾಶ್ರಮಕ್ಕೆ ಅಗತ್ಯವಿರುವ ದಿನಸಿ ಸಾಮಾಗ್ರಿಗಳನ್ನು ನೀಡುವ ಮೂಲಕ ನೆರವಿಗೆ ಮುಂದಾಗಿದೆ.
    ಭದ್ರಾವತಿ: ನಗರದ ಹುತ್ತಾ ಕಾಲೋನಿ ಎಸ್‌ಎಂಎಫ್‌ಜಿ ಇಂಡಿಯಾ ಕ್ರೆಡಿಟ್ ಕಂಪನಿ ಲಿಮಿಟೆಡ್ ಹೊಸ ಸಿದ್ದಾಪುರ ಸುರಕ್ಷಾ ಜೀವನ ಸೇವಾ ಟ್ರಸ್ಟ್, ಸುರಕ್ಷಾ ಜೀವನ ವೃದ್ಧಾಶ್ರಮ ಮತ್ತು ಅನಾಥಾಶ್ರಮಕ್ಕೆ ಅಗತ್ಯವಿರುವ ದಿನಸಿ ಸಾಮಾಗ್ರಿಗಳನ್ನು ನೀಡುವ ಮೂಲಕ ನೆರವಿಗೆ ಮುಂದಾಗಿದೆ.
   ಕಳೆದ ೨ ವರ್ಷಗಳಿಂದ ಎಸ್‌ಎಂಎಫ್‌ಜಿ ಇಂಡಿಯಾ ಕ್ರೆಡಿಟ್ ಕಂಪನಿ ಲಿಮಿಟೆಡ್ ವತಿಯಿಂದ ನೆರವು ನೀಡುತ್ತಿದ್ದು, ಈ ಬಾರಿ ಸಹ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದೆ. ಈ ಸೇವಾ ಕಾರ್ಯ ಇತರರಿಗೆ ಮಾದರಿಯಾಗಿದೆ.
ಸುರಕ್ಷಾ ಜೀವನ ಸೇವಾ ಟ್ರಸ್ಟ್, ಸುರಕ್ಷಾ ಜೀವನ ವೃದ್ಧಾಶ್ರಮ ಮತ್ತು ಅನಾಥಾಶ್ರಮದ ಅಧ್ಯಕ್ಷೆ ಜ್ಯೋತಿ ಸೋಮಶೇಖರ್ ಸೇವಾ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
    ಎಸ್‌ಎಂಎಫ್‌ಜಿ ಇಂಡಿಯಾ ಕ್ರೆಡಿಟ್ ಲಿಮಿಟೆಡ್ ಲೆಕ್ಕ ಪರಿಶೋಧನೆ ವಿಭಾಗದ ವ್ಯವಸ್ಥಾಪಕ ಶಾಬಾಸ್ ಖಾನ್, ಮಾರುಕಟ್ಟೆ ವ್ಯವಸ್ಥಾಪಕ ವಸಂತ ವಿಭಾಗೀಯ ವ್ಯವಸ್ಥಾಪಕ ಸುಂದರೇಶ್, ಸಿಬ್ಬಂದಿಗಳಾದ ಅಫ್ಜಲ್ ಬೇಗ್, ಅಕ್ಷಿತಾ, ಕಾವ್ಯ ಮತ್ತು ಭಾಗ್ಯಲಕ್ಷ್ಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Saturday, November 11, 2023

ಪ್ರತಿಯೊಂದು ಧರ್ಮದಲ್ಲಿಯೂ ಆದರ್ಶ-ಮೌಲ್ಯ, ಮಾನವರ ಪ್ರಗತಿಗೆ ಧರ್ಮವೇ ದಿಕ್ಸೂಚಿ : ರಂಭಾಪುರಿ ಶ್ರೀ

ಭದ್ರಾವತಿ ತಾಲೂಕಿನ ಬಿಳಿಕಿ ಹಿರೇಮಠದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಶ್ರೀಮದ್ ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ, ಶ್ರೀ ಗುರುಸಿದ್ಧಶಿವಾಚಾರ್ಯ ಸ್ವಾಮಿಗಳ ಹಾಗು ಶ್ರೀ ರಾಚೋಟಿ ಶಿವಾಚಾರ್ಯ ಸ್ವಾಮಿಗಳ ೫೬ನೇ ವರ್ಷದ ಪುಣ್ಯ ಸ್ಮರಣೋತ್ಸವ ಹಾಗು ಧರ್ಮ ಸಮಾರಂಭ ಸಂಸದ ಬಿ.ವೈ ರಾಘವೇಂದ್ರ ಉದ್ಘಾಟಿಸಿದರು.
    ಭದ್ರಾವತಿ: ಪ್ರತಿಯೊಂದು ಧರ್ಮದಲ್ಲಿಯೂ ಆದರ್ಶ, ಮೌಲ್ಯಗಳನ್ನು ಕಾಣುತ್ತೇವೆ. ಮಾನವರ ಪ್ರಗತಿಗೆ ಧರ್ಮವೇ ದಿಕ್ಸೂಚಿ ಹೊರತು, ಅನ್ಯಮಾರ್ಗವಲ್ಲ. ವೀರಶೈವ ಧರ್ಮ ಸಾಮರಸ್ಯದ ಸೇತುವೆ ನಿರ್ಮಿಸುವ ಕೆಲಸ ಮಾಡುತ್ತಿದೆ ಎಂದು ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ೧೦೦೮ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
    ತಾಲೂಕಿನ ಬಿಳಿಕಿ ಹಿರೇಮಠದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಶ್ರೀಮದ್ ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ, ಶ್ರೀ ಗುರು ಸಿದ್ಧಶಿವಾಚಾರ್ಯ ಸ್ವಾಮಿಗಳ ಹಾಗು ಶ್ರೀ ರಾಚೋಟಿ ಶಿವಾಚಾರ್ಯ ಸ್ವಾಮಿಗಳ ೫೬ನೇ ವರ್ಷದ ಪುಣ್ಯ ಸ್ಮರಣೋತ್ಸವ ಹಾಗು ಧರ್ಮ ಸಮಾರಂಭದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
    ಜನಮನ ಪರಿಶುದ್ಧಿಗೆ ವೀರಶೈವ ಧರ್ಮ ಸಹಕಾರಿ. ಅಂತರಂಗ-ಬಹಿರಂಗ ಶುಚಿಗೊಳಿಸುವ ಪ್ರಯತ್ನ ಮಾಡುತ್ತಿದೆ. ಎಲ್ಲಾ ಧರ್ಮಗಳ ಸಾರ ಈ ಧರ್ಮದಲ್ಲಿ ಅಡಕವಾಗಿದೆ ಎಂದರು.
    ಬಾಳೆಹೊನ್ನೂರಿನ ಶ್ರೀಮದ್ ರಂಭಾಪುರಿ ಪೀಠ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ವಿಶಾಲ ಅರ್ಥವನ್ನು ಅಳವಡಿಸಿಕೊಂಡಿದ್ದು, ಈ ನಿಟ್ಟಿನಲ್ಲಿಯೇ ಧರ್ಮ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಪೋಷಕರು ಮಕ್ಕಳಲ್ಲಿ ಧಾರ್ಮಿಕ ವಿಚಾರಗಳನ್ನು ಕಲಿಸುತ್ತಿಲ್ಲ. ಧಾರ್ಮಿಕ ವ್ಯವಸ್ಥೆಯ ಬಗ್ಗೆ ಸಂಸ್ಕಾರ ಮತ್ತು ಸದ್ವಿಚಾರಗಳ ಬಗ್ಗೆ ಜನರಲ್ಲಿ ಅರಿವಿನ ಕೊರತೆ ಇರುವುದರಿಂದ ಸಮಾಜ ಅಧಃಪತನದ ಕಡೆ ಸಾಗುತ್ತಿದೆ ಎಂದರು.
    ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಈ ಸಮಾರಂಭದಿಂದ ಅನೇಕ ಸ್ವಾಮೀಜಿಗಳನ್ನು ಒಂದೇ ಕಡೆ ನೋಡುವ ಸೌಭಾಗ್ಯ ಭಕ್ತರಿಗೆ ದೊರಕಿದೆ. ಜಾತಿಗಳು ಯಾವುದೇ ಆದರೂ ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಜಗದ್ಗುರುಗಳ ಮೂಲಮಂತ್ರ ಸರ್ವಜನಾಂಗ ಒಗ್ಗೂಡಿಸುವುದಾಗಿದೆ ಎಂದರು.
    ತಂದೆ-ತಾಯಿ ಗಳಿಸಿದ ಪುಣ್ಯದ ಫಲವಾಗಿ ಮಕ್ಕಳಾದ ನನಗೆ ಮತ್ತು ಸಹೋದರ ವಿಜಯೇಂದ್ರರಿಗೆ ಉತ್ತಮ ಸ್ಥಾನಮಾನಗಳು ದೊರೆತಿದೆ. ರಾಜ್ಯ ಸರ್ಕಾರದ ಗ್ಯಾರಂಟಿ- ಭಾಗ್ಯಗಳಿಗಿಂತ ನಮ್ಮ ಆರೋಗ್ಯ ಭಾಗ್ಯವನ್ನು ನಾವೇ ಕಾಪಾಡಿಕೊಳ್ಳುವುದು ಮುಖ್ಯ ಎಂದರು.
    ಬಿಳಿಕಿ ಹಿರೇಮಠದ ಪೀಠಾಧ್ಯಕ್ಷರಾದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿ, ಸದಾ ಕಾಲ ಪ್ರತಿಯೊಂದು ಕಾರ್ಯದಲ್ಲೂ ಶ್ರೀ ಮಠದ ಲಿಂಗೈಕ್ಯ ಶ್ರೀಗಳ ಹಾಗು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಭಗವತ್ಪಾದರ ಆಶೀರ್ವಾದವಿದೆ. ಈ ಹಿನ್ನಲೆಯಲ್ಲಿ ನಿರೀಕ್ಷೆಗೂ ಮೀರಿ ಶ್ರೀ ಮಠ ಭಕ್ತರ ಮನಸ್ಸಿನಲ್ಲಿ ಉಳಿದುಕೊಂಡು ಧಾರ್ಮಿಕ ಕಾರ್ಯಗಳನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದೆ ಎಂದರು.  
    ಶಿವಮೊಗ್ಗ ಸರ್ಜಿ ಆಸ್ಪತ್ರೆಗಳ ಸಮೂಹ ವ್ಯವಸ್ಥಾಪಕ ನಿರ್ದೇಶಕ, ವೈದ್ಯ ಡಾ. ಧನಂಜಯ ಸರ್ಜಿ ಆಹಾರ ಮತ್ತು ಆರೋಗ್ಯ ಕುರಿತು ಉಪನ್ಯಾಸ ನೀಡಿದರು. ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಿದ್ದರು.
    ಎಡೆಯೂರು ಬಾಳೆಹೊನ್ನೂರು ಖಾಸಾ ಶಾಖಾ ಮಠದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಹುಲಿಕೆರೆ ದೊಡ್ಡಮಠದ ಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿ, ಬಿಳಕಿ ಮಠದ ಗೌರವಾಧ್ಯಕ್ಷ ಟಿ.ವಿ ಈಶ್ವರಯ್ಯ, ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎನ್ ಚನ್ನಬಸಪ್ಪ, , ನಗರಸಭೆ ಸದಸ್ಯರಾದ ಬಿ.ಕೆ.ಮೋಹನ್, ಚೆನ್ನಪ್ಪ, ಮುಖಂಡರುಗಳಾದ ಸಿದ್ದಲಿಂಗಯ್ಯ, ಮಂಗೋಟೆ ರುದ್ರೇಶ್, ಜಿ. ಧರ್ಮಪ್ರಸಾದ್, ಎಸ್.ಕುಮಾರ್, ಆರ್.ಎಸ್.ಶೋಭಾ, ರೂಪ ನಾಗರಾಜ್, ಎಚ್. ಮಂಜುನಾಥ್, ಡಾ. ಜಿ.ಎಂ ನಟರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಉಪಾಧ್ಯಕ್ಷ ಎಸ್. ವಾಗೀಶ್ ಸ್ವಾಗತಿಸಿದರು. ತಾವರೆಕೆರೆ ಶಿಲಾಮಠದ ಶ್ರೀ ಡಾ. ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮ ನಿರೂಪಿಸಿದರು. ದಾನಿಗಳು, ವಿವಿಧ ಕ್ಷೇತ್ರಗಳ ಗಣ್ಯರಿಗೆ ಗುರುರಕ್ಷೆ ನೀಡಿ ಗೌರವಿಸಲಾಯಿತು.

Friday, November 10, 2023

ದೀಪಾವಳಿ ಹಬ್ಬದ ಅಂಗವಾಗಿ ಜೆಟಿಎಸ್ ಶಾಲೆ ಮಕ್ಕಳಿಗೆ ಜಾಗೃತಿ ಕಾರ್ಯಕ್ರಮ

ಭದ್ರಾವತಿ ನ್ಯೂಟೌನ್ ಕಿರಿಯ ತಾಂತ್ರಿಕ ಶಾಲೆ(ಜೆಟಿಎಸ್ ಸ್ಕೂಲ್) ಮಕ್ಕಳಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಶುಕ್ರವಾರ ಸಂಚಾರಿ ಪೊಲೀಸ್ ಠಾಣೆ ವತಿಯಿಂದ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ: ನಗರದ ನ್ಯೂಟೌನ್ ಕಿರಿಯ ತಾಂತ್ರಿಕ ಶಾಲೆ(ಜೆಟಿಎಸ್ ಸ್ಕೂಲ್) ಮಕ್ಕಳಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಶುಕ್ರವಾರ ಸಂಚಾರಿ ಪೊಲೀಸ್ ಠಾಣೆ ವತಿಯಿಂದ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಸಂಚಾರಿ ಪೊಲೀಸ್ ಠಾಣಾಧಿಕಾರಿ ಶಾಂತಲರವರು ಮಾತನಾಡಿ, ವಿದ್ಯಾರ್ಥಿಗಳು ರಸ್ತೆ ಸಂಚಾರಿ ನಿಯಮಗಳ ಬಗ್ಗೆ ಮಾಹಿತಿ ಹೊಂದಬೇಕು. ಪೋಕ್ಸೋ ಮತ್ತು ಸೈಬರ್ ಅಪರಾಧಗಳ ಕುರಿತು ತಿಳಿದುಕೊಳ್ಳಬೇಕು. ಹಸಿರು ಪಟಾಕಿ ಬಳಕೆ ಮಾಡುವ ಮೂಲಕ ಪರಿಸರ ಸಂರಕ್ಷಿಸಬೇಕೆಂದು ಜಾಗೃತಿ ಮೂಡಿಸಿದರು.
    ಶಾಲೆಯ ಶಿಕ್ಷಕರು ಹಾಗು ಸಂಚಾರಿ ಪೊಲೀಸ್ ಠಾಣೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸಂಚಾರಿ ಪೊಲೀಸ್ ಠಾಣೆ ವತಿಯಿಂದ ಕಳೆದ ಸುಮಾರು ೧ ವರ್ಷದಿಂದ ಶಾಲಾ ಮಕ್ಕಳಿಗೆ ಜಾಗೃತಿ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ.

ನೀರಿನ ಸದ್ಬಳಕೆಗೆ ಹೆಚ್ಚಿನ ಗಮನ ನೀಡಿ, ಇತರರಿಗೂ ಜಾಗೃತಿ ಮೂಡಿಸಿ : ಶೃತಿ ಸಿ. ವಸಂತಕುಮಾರ್ ಕೆ.ಸಿ

ಭದ್ರಾವತಿ ನಗರಸಭೆ ವತಿಯಿಂದ `ವುಮೆನ್ ಆಫ್ ವಾಟರ್, ವಾಟರ್ ಆಫ್ ವುಮೆನ್ ಕ್ಯಾಂಪೇನ್' ಜಲ್ ದಿವಾಳಿ ಅಭಿಯಾನದ ಅಂಗವಾಗಿ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರುಗಳಿಗೆ ಬೈಪಾಸ್ ರಸ್ತೆ, ಆನೇಕೊಪ್ಪದಲ್ಲಿರುವ ನಗರಸಭೆ ಜಲ ಶುದ್ಧೀಕರಣ ಘಟಕದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ : ಮಹಿಳೆಯರು ನೀರಿನ ಸದ್ಬಳಕೆಗೆ ಹೆಚ್ಚಿನ ಗಮನ ನೀಡುವ ಜೊತೆಗೆ ಇತರರಿಗೂ ಜಾಗೃತಿ ಮೂಡಿಸಬೇಕೆಂದು ನಗರಸಭೆ ಅಧ್ಯಕ್ಷೆ ಶೃತಿ ಸಿ. ವಸಂತಕುಮಾರ್ ಕೆ.ಸಿ ಕರೆ ನೀಡಿದರು.
    ಅವರು ನಗರಸಭೆ ವತಿಯಿಂದ `ವುಮೆನ್ ಆಫ್ ವಾಟರ್, ವಾಟರ್ ಆಫ್ ವುಮೆನ್ ಕ್ಯಾಂಪೇನ್' ಜಲ್ ದಿವಾಳಿ ಅಭಿಯಾನದ ಅಂಗವಾಗಿ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರುಗಳಿಗೆ ಬೈಪಾಸ್ ರಸ್ತೆ, ಆನೇಕೊಪ್ಪದಲ್ಲಿರುವ ನಗರಸಭೆ ಜಲ ಶುದ್ಧೀಕರಣ ಘಟಕದಲ್ಲಿ ಹಮ್ಮಿಕೊಳ್ಳಲಾಗಿದ್ದ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಕುಟುಂಬದಲ್ಲಿ ಪ್ರಮುಖ ಪಾತ್ರವಹಿಸುವ ಮಹಿಳೆಯರು ನೀರಿನ ಸದ್ಬಳಕೆ ಕುರಿತು ಅರಿವು ಹೊಂದಬೇಕು. ನೀರನ್ನು ಅವಶ್ಯಕತೆಗೆ ತಕ್ಕಂತೆ ಮಿತವಾಗಿ ಬಳಸಬೇಕು. ಶುದ್ಧ ಮತ್ತು ಸುರಕ್ಷಿತವಾದ ಕುಡಿಯುವ ನೀರು ಪೂರೈಕೆ ಮಾಡುವಲ್ಲಿ ಅನುಸರಿಸುವ ಕ್ರಮ ಮತ್ತು ಶ್ರಮ ಹಾಗು ನೀರಿನ ಮಹತ್ವ ಅರಿತುಕೊಂಡಾಗ ನೀರಿನ ಮಿತವ್ಯಯ ಸಾಧ್ಯ ಎಂಬ ಆಲೋಚನೆಯೊಂದಿಗೆ ಮಹಿಳೆಯರಿಗೆ ಅರಿವು ಮೂಡಿಸಲಾಗುತ್ತಿದೆ. ಮಹಿಳೆಯರು ತಮ್ಮ ಸುತ್ತಮುತ್ತಲಿನವರಿಗೂ ಈ ಕುರಿತು ಮಾಹಿತಿ ನೀಡುವ ಮೂಲಕ ಜಾಗೃತಿಗೊಳಿಸಬೇಕೆಂದರು.
    ನಗರಸಭೆ ಸದಸ್ಯ ಚನ್ನಪ್ಪ ಮಾತನಾಡಿ, ನೀರು ಪ್ರತಿಯೊಬ್ಬರಿಗೂ ಅವಶ್ಯಕವಾಗಿದೆ. ಎಲ್ಲರಿಗೂ ನೀರು ಲಭಿಸಬೇಕು. ಈ ನಿಟ್ಟಿನಲ್ಲಿ ಮಹಿಳೆಯರು ಚಿಂತಿಸಬೇಕು. ವ್ಯರ್ಥಮಾಡುವ ಬದಲು ಉಳಿಸಿಕೊಂಡಲ್ಲಿ ಇತರರಿಗೂ ಲಭ್ಯವಾಗಲಿದೆ. ಈ ನಿಟ್ಟಿನಲ್ಲಿ ಮೊದಲು ಮಹಿಳೆಯರಲ್ಲಿ ಜಾಗೃತಿ ಮೂಡಬೇಕಾಗಿದೆ ಎಂದರು.
    ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಎಚ್.ಎಂ ಸುರೇಶ್ ಮತ್ತು ನಗರಸಭೆ ಸಮುದಾಯ ಸಂಘಟನಾ ಅಧಿಕಾರಿ ಸುಹಾಸಿನಿ ಮಾತನಾಡಿದರು. ನಗರಸಭೆ ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸದಸ್ಯರಾದ ಲತಾ ಚಂದ್ರಶೇಖರ್, ಜಯಶೀಲ ಸುರೇಶ್, ಸವಿತಾ ಉಮೇಶ್, ನಾಗರತ್ನ ಅನಿಲ್‌ಕುಮಾರ್, ಅನಿತಾ ಮಲ್ಲೇಶ್, ಮಾಜಿ ಸದಸ್ಯೆ ಲಕ್ಷ್ಮೀದೇವಿ, ಜಿಲ್ಲಾ ಸಮನ್ವಯಾಧಿಕಾರಿ ಕಾಶಿ, ಇಂಜಿನಿಯರ್‌ಗಳಾದ ಎಸ್.ಆರ್ ಸತೀಶ್, ಸಂತೋಷ್ ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ನಗರಸಭೆ ವ್ಯಾಪ್ತಿಯ ೩೦ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರುಗಳಿಗೆ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರು ಪೂರೈಕೆಯ ಪ್ರಕ್ರಿಯೆ ಹಾಗು ಮಾಲೀಕತ್ವದ ಭಾವನೆ ಕುರಿತು ಅರಿವು ಮೂಡಿಸಲಾಯಿತು.  ಮಹಮದ್ ಗೌಸ್ ಕಾರ್ಯಕ್ರಮ ನಿರೂಪಿಸಿದರು.

ಇಎಸ್‌ಐ ಚಿಕಿತ್ಸಾಲಯ ಮುಂಭಾಗ ಕಾಂಕ್ರೀಟ್ ರಸ್ತೆ ನಿರ್ಮಿಸಿ : ಮನವಿ

ಭದ್ರಾವತಿ : ನಗರದ ಜನ್ನಾಪುರ ಬಂಟರ ಭವನ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರ ಇಎಸ್‌ಐ ಚಿಕಿತ್ಸಾಲಯ ಮುಂಭಾಗ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡುವಂತೆ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ : ನಗರದ ಜನ್ನಾಪುರ ಬಂಟರ ಭವನ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರ ಇಎಸ್‌ಐ ಚಿಕಿತ್ಸಾಲಯ ಮುಂಭಾಗ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡುವಂತೆ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.
    ಚಿಕಿತ್ಸಾಲಯದ ಮುಂಭಾಗ ಮಣ್ಣಿನ ರಸ್ತೆ ಇದ್ದು, ಮಲಗಾಲದಲ್ಲಿ ಮಣ್ಣಿನ ರಸ್ತೆಯಿಂದಾಗಿ ಚಿಕಿತ್ಸಾಲಯಕ್ಕೆ ಬರುವ ರೋಗಿಗಳಿಗೆ ಮತ್ತು ಕಾರ್ಮಿಕರಿಗೆ ಓಡಾಡಲು ಹಾಗು ವಾಹನಗಳನ್ನು ನಿಲುಗಡೆ ಮಾಡಲು ತೊಂದರೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಚಿಕಿತ್ಸಾಲಯ ಮುಂಭಾಗ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡುವಂತೆ ಕೋರಲಾಗಿದೆ.
    ಈ ನಡುವೆ ಶಾಸಕ ಬಿ.ಕೆ ಸಂಗಮೇಶ್ವರ್ ಸಹ ನಗರಸಭೆ ವತಿಯಿಂದ ಕಾಂಕ್ರೀಟ್ ರಸ್ತೆ ನಿರ್ಮಿಸಿಕೊಡುವಂತೆ ಪೌರಾಯುಕ್ತರಿಗೆ ಪತ್ರ ಬರೆದು ಸೂಚಿಸಿದ್ದಾರೆ.
    ಚಿಕಿತ್ಸಾಯದ ವೈದ್ಯರಾದ ಡಾ. ದಿವ್ಯ, ಡಾ. ಈಶ್ವರಪ್ಪ, ಡಾ. ಸುಹಾಸ್, ಎಂ.ಎಚ್ ವಿಶಾಲ್, ಕೀರ್ಯಾ ನಾಯ್ಕ, ಜಿ.ಎನ್ ಲವ ಹಾಗು ಮಂಜುನಾಥ್ ಮತ್ತು ಸಿಬ್ಬಂದಿ ವರ್ಗದವರು ಪೌರಾಯುಕ್ತ ಎಚ್.ಎಂ ಮನುಕುಮಾರ್‌ರವರಿಗೆ ಮನವಿ ಸಲ್ಲಿಸಿದರು.

ಬಿಳಿಕಿ ಹಿರೇಮಠದಲ್ಲಿ ನ.೧೧ ಇಷ್ಟಲಿಂಗ ಮಹಾಪೂಜೆ, ಧರ್ಮ ಸಮಾರಂಭ

    ಭದ್ರಾವತಿ : ತಾಲೂಕಿನ ಬಿಳಿಕಿ ಹಿರೇಮಠದಲ್ಲಿ ನ.೧೧ರಂದು ಶ್ರೀಮದ್ ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ, ಲಿಂಗೈಕ್ಯ ಶ್ರೀ ಗುರು ಸಿದ್ಧಶಿವಾಚಾರ್ಯ ಸ್ವಾಮಿಗಳ ಹಾಗು ಲಿಂಗೈಕ್ಯ ಶ್ರೀ ರಾಚೋಟಿ ಶಿವಾಚಾರ್ಯ ಸ್ವಾಮಿಗಳ ೫೬ನೇ ವರ್ಷದ ಪುಣ್ಯ ಸ್ಮರಣೋತ್ಸವ ಹಾಗು ಧರ್ಮ ಸಮಾರಂಭ ಹಮ್ಮಿಕೊಳ್ಳಲಾಗಿದೆ.
    ಬೆಳಿಗ್ಗೆ ೬ ಗಂಟೆಗೆ ಗಂಗೆ ಪೂಜೆಯೊಂದಿಗೆ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ, ಶ್ರೀ ವೀರಭದ್ರಸ್ವಾಮಿಗೆ ಮತ್ತು ಶ್ರೀ ಶಕ್ತಿ ಮಾತೆ ಚೌಡೇಶ್ವರಿ ದೇವಿಗೆ ರುದ್ರಾಭಿಷೇಕ, ಕುಂಕುಮಾರ್ಚನೆ, ಅಷ್ಟೋತ್ತರ ಪೂಜೆ ನೆರವೇರಲಿದೆ. ೮ ಗಂಟೆಗೆ ಶ್ರೀಮದ್ ರಂಭಾಪುರಿ ಜಗದ್ಗುರುಗಳವರ ಇಷ್ಟಲಿಂಗ ಮಹಾಪೂಜೆ, ೧೧.೩೦ಕ್ಕೆ ಧರ್ಮ ಸಮಾರಂಭ ನಡೆಯಲಿದೆ.
    ಬಾಳೆಹೊನ್ನೂರು ರಂಭಾಪುರಿ ಪೀಠದ ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ೧೦೦೮ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ದಿವ್ಯಸಾನಿಧ್ಯ ವಹಿಸಲಿದ್ದಾರೆ.
    ಎಡೆಯೂರು ಬಾಳೆಹೊನ್ನೂರು ಖಾಸಾ ಶಾಖಾ ಮಠದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಹುಲಿಕೆರೆ ದೊಡ್ಡಮಠದ ಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿರುವರು.  ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಮತ್ತು ಗೌರವಾಧ್ಯಕ್ಷ ಟಿ.ವಿ ಈಶ್ವರಯ್ಯ ನೇತೃತ್ವ ವಹಿಸಲಿದ್ದಾರೆ.
    ಸಂಸದ ಬಿ.ವೈ ರಾಘವೇಂದ್ರ ಉದ್ಘಾಟಿಸಲಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ, ಶಾಸಕರಾದ ಬಿ.ವೈ ವಿಜಯೇಂದ್ರ, ಎಸ್.ಎನ್ ಚನ್ನಬಸಪ್ಪ, ಶಾರದ ಪೂರ್‍ಯಾನಾಯ್ಕ, ಎಸ್. ರುದ್ರೇಗೌಡ, ಡಿ.ಎಸ್ ಅರುಣ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.