Thursday, October 17, 2024

ನಿವೃತ್ತ ಉಪ ವ್ಯವಸ್ಥಾಪಕ ಪದ್ಮನಾಭ ಗೊಲ್ಲ ನಿಧನ

ಪದ್ಮನಾಭ ಗೊಲ್ಲ 
    ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿವೃತ್ತ ಉಪ ವ್ಯವಸ್ಥಾಪಕ ಪದ್ಮನಾಭ ಗೊಲ್ಲ(೮೨) ಬುಧವಾರ ನಿಧನ ಹೊಂದಿದರು.
    ಇವರಿಗೆ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದಾರೆ. ಪದ್ಮನಾಭರವರು ವಿಐಎಸ್‌ಎಲ್ ಕಾರ್ಖಾನೆಯ ಅನಿಲ ಮತ್ತು ಇಂಧನ ಇಲಾಖೆಯಲ್ಲಿ ಉಪ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು. ಇವರ ಅಂತ್ಯಕ್ರಿಯೆ ಗುರುವಾರ ಜೋಗದಲ್ಲಿ ನಡೆಯಿತು. ಇವರ ನಿಧನಕ್ಕೆ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರು ಸಂತಾಪ ಸೂಚಿಸಿದ್ದಾರೆ. 

ಮಹರ್ಷಿ ವಾಲ್ಮೀಕಿ ಎಂದಿಗೂ ಅವಿಸ್ಮರಣೀಯ : ಫೈಜ್ ನಟರಾಜ್

ಭದ್ರಾವತಿಯಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ನಗರಸಭೆ ಹಾಗು ಮಹರ್ಷಿ ವಾಲ್ಮೀಕಿ ನಾಯಕ ಸಮಾಜ ಮತ್ತು ವಿವಿಧ ಸಂಘಟನೆಗಳ ವತಿಯಿಂದ  ನಗರದ ತಾಲೂಕು ಕಛೇರಿ ರಸ್ತೆಯಲ್ಲಿರುವ ವೀರಶೈವ ಸಭಾಭವನದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ  ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಸೇರಿದಂತೆ ಇನ್ನಿತರರು ಕಾರ್ಯಕ್ರಮ ಉದ್ಘಾಟಿಸಿದರು. 
    ಭದ್ರಾವತಿ: ಮಾನವ ಸಮಾಜಕ್ಕೆ ಎಂದಿಗೂ ಅಗತ್ಯವಿರುವ ಶ್ರೀ ರಾಮಾಯಣ ಮಾಹಾಗ್ರಂಥ ನೀಡಿರುವ ಮಹರ್ಷಿ ವಾಲ್ಮೀಕಿ ಎಂದಿಗೂ ಅವಿಸ್ಮರಣೀಯ. ಅವರ ಆದರ್ಶ ಮೌಲ್ಯಗಳನ್ನು ನಾವುಗಳು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಚಳ್ಳಕೆರೆ, ತಳುಕು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಫೈಜ್ ನಟರಾಜ್ ಹೇಳಿದರು. 
    ಅವರು ಗುರುವಾರ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ನಗರಸಭೆ ಹಾಗು ಮಹರ್ಷಿ ವಾಲ್ಮೀಕಿ ನಾಯಕ ಸಮಾಜ ಮತ್ತು ವಿವಿಧ ಸಂಘಟನೆಗಳ ವತಿಯಿಂದ  ನಗರದ ತಾಲೂಕು ಕಛೇರಿ ರಸ್ತೆಯಲ್ಲಿರುವ ವೀರಶೈವ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ  ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿದರು. 
    ಈ ಮಾನವ ಸಮಾಜಕ್ಕೆ ಒಂದು ಉತ್ತಮ ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ನೀಡಿದ ಸಮಾಜ ವಾಲ್ಮೀಕಿ ಸಮಾಜವಾಗಿದ್ದು, ಪ್ರತಿಯೊಬ್ಬರ ನಡುವಿನ ಭಾವನೆಗಳು, ಮೌಲ್ಯಗಳು, ಸಂಘರ್ಷಗಳಿಗೆ ರಾಮಾಯಣ ಸೂಕ್ತ ಉತ್ತರವಾಗಿದೆ. ಈ ಹಿನ್ನಲೆಯಲ್ಲಿ ಭೂತ ಕಾಲ, ವರ್ತಮಾನ ಹಾಗು ಭವಿಷ್ಯಕ್ಕೂ ರಾಮಾಯಣ ಪ್ರಸ್ತುತವಾಗಿದೆ. ರಾಮಾಯಣ ಮತ್ತು ಶ್ರೀ ಮಹರ್ಷಿ ವಾಲ್ಮೀಕಿ ಬೇರೆ ಬೇರೆಯಾಗಿ ನೋಡಲು ಸಾಧ್ಯವಿಲ್ಲ ಎಂದರು. 
    ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಾಲ್ಮೀಕಿ ಸಮಾಜ ಇನ್ನೂ ಹೆಚ್ಚು ಸಂಘಟಿತಗೊಳ್ಳಬೇಕಾಗಿದೆ. ನಗರದಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ವಿಳಂಬವಾಗುತ್ತಿದ್ದು, ಶಾಸಕರು ನೆನೆಗುದಿಗೆ ಬಿದ್ದಿರುವ ಕಾಮಗಾರಿ ಶೀಘ್ರವಾಗಿ ಮುಕ್ತಾಯಗೊಳಿಸಿ ಸಮುದಾಯ ಭವನ ಉದ್ಘಾಟಿಸುವ ವಿಶ್ವಾಸವಿದೆ ಎಂದರು. 
    ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ನಗರಸಭೆ ಅಧ್ಯಕ್ಷ ಮಣಿ ಎಎನ್‌ಎಸ್,  ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ವಾಲ್ಮೀಕಿ ನಾಯಕ ಸಮಾಜದ ತಾಲೂಕು ಅಧ್ಯಕ್ಷ ಬಸವರಾಜ್ ಬಿ. ಆನೇಕೊಪ್ಪ, ತಹಸೀಲ್ದಾರ್ ಕೆ.ಆರ್ ನಾಗರಾಜು, ತಾಲೂಕು ಪಂಚಾಯಿತಿ  ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ,   ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಸವಿತ, ನಗರಸಭೆ ಸದಸ್ಯರಾದ ಲತಾ ಚಂದ್ರಶೇಖರ್, ಸರ್ವಮಂಗಳ ಭೈರಪ್ಪ, ಟಿಪ್ಪು ಸುಲ್ತಾನ್, ಮಂಜುಳ ಸುಬ್ಬಣ್ಣ, ಪರ್ವೇಜ್, ಸೂಡ ಸದಸ್ಯ  ಎಚ್. ರವಿಕುಮಾರ್, ವಾಲ್ಮೀಕಿ ಸಮಾಜದ ಗೌರವಾಧ್ಯಕ್ಷ ಬಸವರಾಜಪ್ಪ, ಪ್ರಧಾನ ಕಾರ್ಯದರ್ಶಿ ಶಿವಾನಂದ, ಪ್ರಮುಖರಾದ ರಾಜೇಂದ್ರ, ಈಶ್ವರಪ್ಪ, ವಿ. ವಿನೋದ್, ವೆಂಕಟೇಶ್  ಉಜ್ಜನಿಪುರ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆ ಶಶಿಕುಮಾರ್ ಕಾರ್ಯಕ್ರಮ ನಿರೂಪಿಸಿದರು.
    ಇದಕ್ಕೂ ಬಿ.ಎಚ್ ರಸ್ತೆ ಹುತ್ತಾ ಕಾಲೋನಿ ಬಸ್ ನಿಲ್ದಾಣದಿಂದ ಶ್ರೀ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರ ಹಾಗು ಡೊಳ್ಳು ಕುಣಿತ, ವೀರಗಾಸೆ ಕಲಾ ತಂಡಗಳೊಂದಿಗೆ ಉತ್ಸವ ಮೆರವಣಿಗೆ ನಡೆಸಲಾಯಿತು. ಕರ್ನಾಟಕ ಗ್ರಾಮೀಣಿ ಮೂಲಕ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಮೆರವಣಿಗೆಗೆ ಚಾಲನೆನೀಡಿದರು. ಅಂಬೇಡ್ಕರ್ ವೃತ್ತ, ಹಾಲಪ್ಪ ವೃತ್ತ, ಮಾಧವಚಾರ್ ವೃತ್ತ ಹಾಗು ರಂಗಪ್ಪ ವೃತ್ತ ಮೂಲಕ ತಾಲೂಕು ಕಛೇರಿ ರಸ್ತೆಯಲ್ಲಿ ಸಾಗಿ ಮೆರವಣಿಗೆ ಸಭಾ ಭವನ ತಲುಪಿತು. 

Wednesday, October 16, 2024

ಯೇಸು ಸ್ಪರ್ಶ ತಂಡದ ಬ್ರದರ್ ಟಿ.ಕೆ ಜಾರ್ಜ್ ನಿಧನ

ಬ್ರದರ್ ಟಿ.ಕೆ ಜಾರ್ಜ್
    ಭದ್ರಾವತಿ: ನಗರದ ನಿವಾಸಿ, ಹೆಸರಾಂತ ಪ್ರಚಾರಕ, ಯೇಸು ಸ್ಪರ್ಶ ತಂಡದ ಬ್ರದರ್ ಟಿ.ಕೆ ಜಾರ್ಜ್(೬೯) ಬೆಂಗಳೂರಿನ ಸೆಂಟ್ ಜಾನ್ ಆಸ್ಪತ್ರೆಯಲ್ಲಿ ಸೋಮವಾರ ನಿಧನ ಹೊಂದಿದರು. 
    ಪತ್ನಿ, ಓರ್ವ ಪುತ್ರಿ ಇದ್ದಾರೆ. ಇವರು ಉಸಿರಾಟ ಸಮಸ್ಯೆಯಿಂದ ಕಳೆದ ಸುಮಾರು ೭೭ ದಿನಗಳಿಂದ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರ ಅಂತ್ಯಕ್ರಿಯೆ ಅ.೧೭ರಂದು ನಡೆಯಲಿದೆ.
    ನ್ಯೂಟೌನ್ ಅಮಲೋದ್ಭವಿ ಮಾತೆ ದೇವಾಲಯದ ಆವರಣದಲ್ಲಿ ಬೆಳಿಗ್ಗೆ ೯ ಗಂಟೆಯಿಂದ ಮಧ್ಯಾಹ್ನ ೩ ಗಂಟೆವರೆಗೆ ಇವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಧರ್ಮಾಧ್ಯಕ್ಷರಾದ ಡುಮಿಂಗ್ ಡಯಾಸ್ ರವರಿಂದ ದಿವ್ಯಬಲಿಪೂಜೆ ನಡೆಯಲಿದ್ದು, ಶವಸಂಸ್ಕಾರ ವಿಧಿಗಳನ್ನು ಗುರುಗಳಾದ ಫ್ರಾಂಕ್ಲಿನ್ ಡಿಸೋಜ, ಸ್ಟೀಫನ್ ಕೋಟ್ಟಕ್ಕಲ್, ಡೈಸನ್ ತರಗನ್, ಲ್ಯಾನ್ಸಿ ಡಿಸೋಜ ಮತ್ತು ಸಜೀಶ್ ಮ್ಯಾಥ್ಯೂರವರು ನಡೆಸಿಕೊಡಲಿದ್ದಾರೆ. 
    ಜಾರ್ಜ್‌ರವರ ನಿಧನಕ್ಕೆ  ಅವರ ಸಹೋದರಾದ ಸೇವಿಯರ್ ಟಿ.ವಿ, ಡೇವಿಸ್ ಟಿ.ವಿ, ಜೋಸೆಫ್ ಟಿ.ವಿ ಹಾಗೂ ಸಹೋದರಿ ರೋಸಿ ಡಿಸೋಜ ಮತ್ತು  ಕುಟುಂಬ ವರ್ಗದವರು, ವಿವಿಧ ಕ್ರೈಸ್ತ ದೇವಾಲಯಗಳ ಧರ್ಮ ಗುರುಗಳು, ಗಣ್ಯರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. 
    ಬ್ರದರ್ ಟಿ.ಕೆ ಜಾರ್ಜ್ ಪರಿಚಯ: 
    ಜಾರ್ಜ್ ಅವರು ಸೆಪ್ಟೆಂಬರ್ ೮, ೧೯೫೫ ರಂದು ಹುಬ್ಬಳ್ಳಿಯಲ್ಲಿ ದಿವಂಗತ ಟಿ ಕೆ ವರ್ಗೀಸ್ ಮತ್ತು ದಿವಂಗತ ಬೇಬಿ ಮೇರಿ ಅವರ ಮಗನಾಗಿ ಜನಿಸಿದರು. ಅವರು ೩ ನೇ ವಯಸ್ಸಿನಲ್ಲಿ ತನ್ನ ತಾಯಿಯನ್ನು ಕಳೆದುಕೊಂಡರು ಅವರನ್ನು ಮಲ ತಾಯಿ ತ್ರೇಸಿಯಮ್ಮ ಅವರನ್ನು ಬೆಳೆಸಿದರು. ತಮ್ಮ ಪ್ರೌಢಶಾಲಾ ಶಿಕ್ಷಣವನ್ನು ಭದ್ರಾವತಿಯ ಕಾಗದ ನಗರ ಪ್ರೌಡಶಾಲೆಯಲ್ಲಿ ಮುಗಿಸಿ ನಂತರ ಹೆಚ್ಚಿನ ವ್ಯಾಸಂಗವನ್ನು ದಾವಣಗೆರೆಯಲ್ಲಿ ಮಾಡಿದರು ಹಾಗೂ ಅಲ್ಲಿನ ದಾವಣಗೆರೆ ಕಾಟನ್ ಮಿಲ್ಸ್ ನಲ್ಲಿ ಸೇವೆ ಸಲ್ಲಿಸಿದ್ದಾರೆ ಅವರು ತನ್ನ ಇಪ್ಪತ್ತೆರಡನೇ ವಯಸ್ಸಿನಲ್ಲಿ  ಅಲ್ಫೋನ್ಸಾರವರನ್ನು  ವಿವಾಹವಾದರು ಅವರಿಗೆ ಜಿನ್ನಿ ಎಂಬ ಮಗಳು ಇದ್ದಾಳೆ ನಂತರ ಅವರು ಕನ್ನಡದ ಹಲವಾರು ಚಲನಚಿತ್ರಗಳಲ್ಲಿ ನಟಿಸುವ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಮಿನುಗುವ ತಾರೆಯಾದರು. ಅಲ್ಲಿ ಅವರು ದಾವಣಗೆರೆ ಜಾರ್ಜ್ ಎಂದು ಚಿರಪರಿಚಿತರಾದರು ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಹಲವಾರು ನಕಾರಾತ್ಮಕ ತಿರುವುಗಳನ್ನು ಎದುರಿಸಬೇಕಾಗಿ ಬಂದ ಕಾರಣ, ಅವರು ಸ್ವಲ್ಪ ಸಮಯದವರೆಗೆ ಖಿನ್ನತೆಗೆ ಒಳಗಾಗಿದ್ದರು.
    ಜೀವನದಲ್ಲಿ ಆಸಕ್ತಿ ಕಳೆದುಕೊಂಡ ಬ್ರ ಜಾರ್ಜ್ ಮೇ ೮, ೧೯೯೦ ರಂದು ಕೇರಳದ ಪೊಟ್ಟಾದಲ್ಲಿರುವ ಡಿವೈನ್ ರಿಟ್ರೀಟ್ ಸೆಂಟರಿಗೆ ಧ್ಯಾನಕೂಟಕ್ಕಾಗಿ ತೆರಳಿದ ವೇಳೆ ಅವರ ಜೀವನದಲ್ಲಿ ಮಹತ್ವದ ತಿರುವು ದೊರಕಿತು. ಅದರ ಬಳಿಕ ದೇವರ ವಾಕ್ಯವನ್ನು ಸಾರಲು ವಂದನೀಯ ಗುರುಗಳಾದ ಮ್ಯಾಥ್ಯೂ ನಾಯ್ಕಪರಂಬಿಲ್ ರವರೊಂದಿಗೆ ತಮ್ಮ ಆಧ್ಯಾತ್ಮಿಕ ಯಾತ್ರೆ ಪ್ರಾರಂಭಿಸಿ ಅವರು ಜಾರ್ಜ್ ತರಗನ್ ಎಂದು ಕೇರಳದಲ್ಲಿ ಪ್ರಖ್ಯಾತರಾದರು.
    ನಂತರ ಅವರು ವಂದನೀಯ ಗುರುಗಳಾದ ಫ್ರಾಂಕ್ಲಿನ್ ಡಿಸೋಜ ರವರೊಂದಿಗೆ ಯೇಸು ಸ್ಪರ್ಷ ಎಂಬ ತಂಡ ರಚಿಸಿ ಗುರುಗಳ ಮಾರ್ಗದರ್ಶನದ ಮೂಲಕ ಕರ್ನಾಟಕದ ಮೂಲೆಮೂಲೆಗಳಲ್ಲಿ ಭೋಧಿಸುವ ಮೂಲಕ ಸಾವಿರಾರು ಧ್ಯಾನಕೂಟಗಳನ್ನು ನಡೆಸಿ ಸಾವಿರಾರು ಜನರನ್ನು ಯೇಸುವಿನ ಪ್ರೀತಿಯಲ್ಲಿ ಬೆಸೆದಿದ್ದಾರೆ ಹಾಗೆ ಅವರು ಕರ್ನಾಟಕದ ಬ್ರದರ್ ಟಿ ಕೆ ಜಾರ್ಜ್ ಎಂದು ಚಿರಪರಿಚಿತರಾದರು. 
    ಟಿ. ಕೆ. ಜಾರ್ಜ್ ಅವರು ಕನ್ನಡ, ಹಿಂದಿ, ತಮಿಳು ಮತ್ತು ಮಲಯಾಳಂ ಸೇರಿದಂತೆ ಬಹು ಭಾಷೆಗಳಲ್ಲಿ ವಿವಿಧ ಆಧ್ಯಾತ್ಮಿಕ ಅಆಗಳು ಹಾಗೂ ಆಧ್ಯಾತ್ಮಿಕ ಗೀತೆಗಳ ಒP೩ ಗಳನ್ನು ಬಿಡುಗಡೆ ಮಾಡಿದ್ದರು. ಅವರು ಆಧ್ಯಾತ್ಮಿಕ ಡಿವಿಡಿಗಳನ್ನು ತಯಾರಿಸಿದ್ದಾರೆ, ಎರಡು ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ ಅದರಲ್ಲಿ ಹರಿಹರದ ಆರೋಗ್ಯ ಮಾತೆ ಕರ್ನಾಟಕದ ಕ್ರೈಸ್ತರ ಬಹು ಪ್ರಖ್ಯಾತ ಚಲನಚಿತ್ರ ಮತ್ತು ಅನೇಕ ಭಾಷೆಗಳಲ್ಲಿ ಆಧ್ಯಾತ್ಮಿಕ ಪುಸ್ತಕಗಳನ್ನು ಬರೆದಿದ್ದಾರೆ.

ವಿಐಎಸ್‌ಎಲ್‌ನಲ್ಲಿ ಜಾಗೃತಾ ತಿಳುವಳಿಕೆ ಸಪ್ತಾಹ : ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಗಳು

    ಭದ್ರಾವತಿ: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ  ಅ.೨೮ ರಿಂದ ನ.೩ರ ವರೆಗೆ ಜಾಗೃತಾ ತಿಳುವಳಿಕೆ ಸಪ್ತಾಹ-2024ರ ಅಂಗವಾಗಿ `ರಾಷ್ಟ್ರದ ಏಳಿಗೆಗಾಗಿ ಪ್ರಾಮಾಣಿಕತೆಯ ಸಂಸ್ಕೃತಿ' ಎಂಬ ವಿಷಯದೊಂದಿಗೆ ತಾಲೂಕಿನ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ  ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
    `ರಾಷ್ಟ್ರದ ಏಳಿಗೆಗಾಗಿ ಪ್ರಾಮಾಣಿಕತೆಯ ಸಂಸ್ಕೃತಿ' ವಿಷಯ ಕುರಿತು ಪ್ರಬಂಧ, ಚಿತ್ರಕಲೆ ಮತ್ತು ಭಾಷಣ ಸ್ಪರ್ಧೆಗಳು ಜರುಗಲಿದ್ದು, 23 ರಂದು ಬೆಳಿಗ್ಗೆ 9.30 ರಿಂದ 11.30ರ ವರೆಗೆ ಶಾಲಾ ವಿದ್ಯಾರ್ಥಿಗಳಿಗೆ ಸ್ಥಳದಲ್ಲೇ ಚಿತ್ರ ಬರೆಯುವ ಸ್ಪರ್ಧೆ 2 ವಿಭಾಗಗಳಲ್ಲಿ 5 ರಿಂದ 7ನೇ ತರಗತಿ ಮತ್ತು 8 ರಿಂದ 10ನೇ ತರಗತಿವರೆಗೆ ಹಾಗು 11.30 ರಿಂದ 1 ಗಂಟೆವರೆಗೆ 8 ರಿಂದ 10ನೇ ತರಗತಿ  ಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಬರೆಯುವ ಸ್ಪರ್ಧೆ ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ನಡೆಯಲಿವೆ. 
    25ರಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12.30ರವರೆಗೆ 8 ರಿಂದ 10ನೇ ತರಗತಿಯ ಶಾಲಾ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಭಾಷಣ ಸ್ಪರ್ಧೆ ಮತ್ತು ಮಧ್ಯಾಹ್ನ 2ರಿಂದ ಸಂಜೆ 4.30ರವರೆಗೆ 8 ರಿಂದ 10ನೇ ತರಗತಿಯ ಶಾಲಾ ವಿದ್ಯಾರ್ಥಿಗಳಿಗೆ ಆಂಗ್ಲ ಮತ್ತು ಹಿಂದಿ ಭಾಷೆಯಲ್ಲಿ ಭಾಷಣ ಸ್ಪರ್ಧೆ ಹಾಗು 26ರಂದು ಬೆಳಿಗ್ಗೆ 9.45ಕ್ಕೆ  8 ರಿಂದ 10ನೇ ತರಗತಿಯ ಶಾಲಾ ವಿದ್ಯಾರ್ಥಿಗಳಿಗೆ  ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಷ್ಟಾಚಾರ ವಿರೋಧಿ ಚಳುವಳಿಗಳು. ಅಥವಾ  ಭಷ್ಟಾಚಾರ ವಿರೋಧಿ ಹೋರಾಟದ ಏಜೆನ್ಸಿಗಳು, ಕಾನೂನುಗಳು ಮತ್ತು ನಿಯಮಗಳು. ಅಥವಾ ಭಷ್ಟಾಚಾರ ವಿರೋಧಿ ಹೋರಾಟದ ತಂತ್ರಜ್ಞಾನಗಳು. ಅಥವಾ ನೈತಿಕ ಮೌಲ್ಯಗಳು, ಸಾಮಾನ್ಯ ಜಾಗೃತಿಗಳು, ಸಾಮಾನ್ಯ ಜ್ಞಾನ, ಪ್ರಚಲಿತ ವಿಧ್ಯಮಾನ ಮತ್ತು ಇತ್ಯಾದಿಗಳ ಕುರಿತು ರಸಪ್ರಶ್ನೆ ಸ್ಪರ್ಧೆ ವಿಐಎಸ್‌ಎಲ್ ಅತಿಥಿ ಗೃಹದಲ್ಲಿ ನಡೆಯಲಿವೆ. 
    ಚಿತ್ರಬರೆಯುವ ಮತ್ತು ಪ್ರಬಂಧ ಸ್ಪರ್ಧೆಗಳಿಗೆ ಪ್ರತಿ ಶಾಲೆಯಿಂದ ಭಾಗವಹಿಸುವ ವಿದ್ಯಾರ್ಥಿಗಳ ಸಂಖ್ಯೆಗೆ ಮಿತಿ ಇರುವುದಿಲ್ಲ. ಕನ್ನಡ, ಆಂಗ್ಲ ಮತ್ತು ಹಿಂದಿ ಭಾಷಣ ಸ್ಪರ್ಧೆಗೆ ಪ್ರತಿ ಶಾಲೆಯಿಂದ ಪ್ರತಿ ಭಾಷೆಯಲ್ಲಿ ಭಾಗವಹಿಸಲು ಗರಿಷ್ಠ 2 ಸ್ಪರ್ಧಿಗಳನ್ನು ಕಳುಹಿಸತಕ್ಕದ್ದು. ರಸಪ್ರಶ್ನೆ ಸ್ಪರ್ಧೆಗಳಿಗೆ ಪ್ರತಿ ಶಾಲೆಯಿಂದ ಗರಿಷ್ಠ ಒಂದು ತಂಡದಲ್ಲಿ 2 ಸ್ಪರ್ಧಿಗಳಿರುವ 2 ತಂಡಗಳಳನ್ನು ಕಳುಹಿಸತಕ್ಕದ್ದು. ಪ್ರತಿ ಸ್ಪರ್ಧೆಯಲ್ಲಿ ೩ ಬಹುಮಾನಗಳಿದ್ದು, ಬಹುಮಾನ ವಿತರಣಾ ಸಮಾರಂಭವು ನ. 4ರ ಮಧ್ಯಾಹ್ನ 2 ಗಂಟೆಗೆ ಶ್ರೀ ಶಾರದಾ ಮಂದಿರ, ನ್ಯೂಟೌನ್, ಭದ್ರಾವತಿಯಲ್ಲಿ ನಡೆಯಲಿರುವ ಜಾಗೃತ ತಿಳುವಳಿಕೆ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗೆ 9480829018/9480829211/9480829137  ಸಂಪರ್ಕಿಸಬಹುದಾಗಿದೆ. 

ಗ್ರೂಪ್ ಸೂಪರ್ ಅನ್ಯುಯೇಷನ್ ಆನ್ಯೂಟಿ ಹಣ ಹೆಚ್ಚಳಕ್ಕೆ ಆಗ್ರಹ

ಎಂಪಿಎಂ ನಿವೃತ್ತ ಕಾರ್ಮಿಕರಿಂದ ಎಲ್‌ಐಸಿ ಶಾಖಾ ಕಛೇರಿ ಮುಂಭಾಗ ಪ್ರತಿಭಟನೆ 

ಭದ್ರಾವತಿ ಮೈಸೂರು ಕಾಗದ ಕಾರ್ಖಾನೆಯ ಕಾರ್ಮಿಕರಿಗೆ ನೀಡುತ್ತಿರುವ ಗ್ರೂಪ್ ಸೂಪರ್ ಅನ್ಯುಯೇಷನ್ ಆನ್ಯೂಟಿ ಹಣ ತುಂಬಾ ಕಡಿಮೆ ಇದ್ದು, ಇದನ್ನು ಹೆಚ್ಚಿಸಬೇಕೆಂದು ಆಗ್ರಹಿಸಿ ಬುಧವಾರ ಮೈಸೂರು ಕಾಖಾದ ಕಾರ್ಖಾನೆ ನೊಂದ ನಿವೃತ್ತ ಕಾರ್ಮಿಕರ ಹೋರಾಟ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಶಾಖಾ ವ್ಯವಸ್ಥಾಪಕ ಮುರಳಿಧರರವರ ಮೂಲಕ ಎಲ್‌ಐಸಿ ಆಫ್ ಇಂಡಿಯಾ, ಪಿ & ಜಿ.ಎಸ್ ಯೂನಿಟ್, ಮಂಗಳೂರು ಕಚೇರಿಯ ವಿಭಾಗೀಯ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು. 
    ಭದ್ರಾವತಿ : ನಗರದ ಮೈಸೂರು ಕಾಗದ ಕಾರ್ಖಾನೆಯ ಕಾರ್ಮಿಕರಿಗೆ ನೀಡುತ್ತಿರುವ ಗ್ರೂಪ್ ಸೂಪರ್ ಅನ್ಯುಯೇಷನ್ ಆನ್ಯೂಟಿ ಹಣ ತುಂಬಾ ಕಡಿಮೆ ಇದ್ದು, ಇದನ್ನು ಹೆಚ್ಚಿಸಬೇಕೆಂದು ಆಗ್ರಹಿಸಿ ಬುಧವಾರ ಮೈಸೂರು ಕಾಖಾದ ಕಾರ್ಖಾನೆ ನೊಂದ ನಿವೃತ್ತ ಕಾರ್ಮಿಕರ ಹೋರಾಟ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಶಾಖಾ ವ್ಯವಸ್ಥಾಪಕ ಎಸ್.ಎನ್ ಮುರಳಿಧರರವರ ಮೂಲಕ ಎಲ್‌ಐಸಿ ಆಫ್ ಇಂಡಿಯಾ, ಪಿ & ಜಿ.ಎಸ್ ಯೂನಿಟ್, ಮಂಗಳೂರು ಕಚೇರಿಯ ವಿಭಾಗೀಯ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು. 
    ಮೈಸೂರು ಕಾಗದ ಕಾರ್ಖಾನೆಯ ನಿವೃತ್ತ ಕಾರ್ಮಿಕರಾದ ನಮಗೆ ಎಂಪಿಎಂ ಕಾರ್ಮಿಕರ ಗ್ರೂಪ್ ಸೂಪರ್ ಅನ್ಯುಯೇಷನ್ ಸ್ಟೀಂನ ಮಾಸ್ಟರ್ ಪಾಲಿಸಿ ಸಂ. ೫೦೮೨೧೧ ರ ಮೂಲಕ ನೀಡುತ್ತಿರುವ ಅನ್ಯುಟಿ ಹಣ ತುಂಬಾ ಕಡಿಮೆ ಇದ್ದು ಅದನ್ನು ಜಾಸ್ತಿ ಮಾಡಬೇಕೆಂದು ಅಥವಾ ನಮ್ಮ ಒಟ್ಟು ಹಣವನ್ನು ರಾಷ್ಟ್ರೀಕೃತ ಬ್ಯಾಂಕ್ ಅಥವಾ ಅಂಚೆ ಕಛೇರಿಯ ನಮ್ಮ ಖಾತೆಗಳಿಗೆ ವರ್ಗಾವಣೆ ಮಾಡುವಂತೆ ಕೋರಿ ಪತ್ರ ಬರೆದಿದ್ದೆವು. ನಮ್ಮ ಮನವಿಗೆ ಸ್ಪಂದಿಸದಿದ್ದುದರಿಂದ ಅನಿವಾರ್ಯವಾಗಿ ಹೋರಾಟ ಮಾಡಲಾಗುತ್ತಿದೆ ಎಂದರು. 
    ನಾವು ಈ ಹಿಂದೆ ಎರಡು ಬಾರಿ ಹೋರಾಟ ನಡೆಸಲು ಮುಂದಾದಾಗ ನಮ್ಮ ಬೇಡಿಕೆ ಬಗ್ಗೆ ಪರಿಶೀಲಿಸುತ್ತೇವೆಂದು ಸಮಯ ತೆಗೆದುಕೊಂಡು ಇಲ್ಲಿಯವರೆಗೂ ಪರಿಹರಿಸಿಲ್ಲ. ಇದೀಗ  ಅ.೧೦ರಂದು ತಾವುಗಳು ಪತ್ರವನ್ನು ನೀಡಿದ್ದು ಅದರಲ್ಲಿ ಪಾಲಿಸಿದಾರ ಬದುಕಿರುವವರೆಗೂ ಹಣ ವಾಪಸ್ ಕೊಡುವುದಕ್ಕಾಗಲೀ, ಬಡ್ಡಿ ಹೆಚ್ಚಳ ಮಾಡುವುದಕ್ಕಾಗಲೀ ಬರುವುದಿಲ್ಲವೆಂದು ಹಾಗು ಒಪ್ಪಂದ ಇದೆಯೆಂದು ಯಾವುದೋ ಭೋಗಸ್ ಪ್ರತಿಯನ್ನು ನೀಡಿದ್ದೀರಿ. ಈ ಪತ್ರಗಳಿಗೆ ಸಹಿಯೂ ಇಲ್ಲ ಮತ್ತು ಆ ತರಹ ಯಾವುದೇ ಒಪ್ಪಂದ ಇಲ್ಲವೆಂಬುದು ನಮ್ಮ ದೃಢವಾದ ನಂಬಿಕೆಯಾಗಿದೆ. ಈ ಬಗ್ಗೆ ಯಾವುದೇ ಟ್ರಸ್ಟ್ ರಚನೆಯನ್ನು ನೀವುಗಳು ಆಗಲೇ ಮಾಡಿದ್ದರೆ ನಮಗೆ ಆಡಳಿತವರ್ಗವು ಪ್ರತಿವಷ ಹಣ ಕಟ್ಟದಿದ್ದಾಗ ತಿಳಿಯುತ್ತಿತ್ತು ಎಂದರು. 
    ನೀವು ನಿಮ್ಮ ಯಾವುದೇ ಪಾಲಿಸಿಯನ್ನು ನಿಗದಿತ ಸಮಯದಲ್ಲಿ ಕಟ್ಟದಿದ್ದಾಗ ಆ ಕಂತನ್ನು ಕಟ್ಟಿಸಿಕೊಳ್ಳುವಾಗ ಅದಕ್ಕೆ ಬಡ್ಡಿಯನ್ನು ಸೇರಿಸಿ ಕಟ್ಟಿಸಿಕೊಳ್ಳುತ್ತೀರಿ. ಆದರೆ ಎಂಪಿಎಂ ಆಡಳಿತವರ್ಗ ನಿಗದಿತವಾಗಿ ಕಂತುಗಳನ್ನು ಕಟ್ಟದಿದ್ದಾಗ ಆ ಕಂತುಗಳಿಗೆ ಅವರಿಂದ ಬಡ್ಡಿಯನ್ನು ಕಟ್ಟಿಸಿಕೊಳ್ಳದೆ ನಮಗೆ ಅನ್ಯಾಯ ಮಾಡಿರುತ್ತೀರಿ. ಆದರೆ ಈಗ ನಮ್ಮ ಹಣಕ್ಕೆ ಬಹಳ ಕಡಿಮೆ ರೀತಿಯಲ್ಲಿ ಬಡ್ಡಿ ನೀಡುತ್ತಿದ್ದು, ಇದು ನಮಗೆ ಮಾಡಿರುವ ಮತ್ತೊಂದು
ಅನ್ಯಾಯವಾಗಿರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 
    ಈ ಕೂಡಲೇ ಇದನ್ನು ಸರಿಪಡಿಸಿಕೊಡಬೇಕು. ನಮ್ಮ ಬೇಡಿಕೆ ಪರಿಹಾರವಾಗದಿದ್ದಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಹೋರಾಟ ನಡೆಸಲಾಗುವುದು ಅಥವಾ ಕಾನೂನು ಮೊರೆ ಹೋಗಲೇಬೇಕಾಗುತ್ತದೆ ಎಂದು ಎಚ್ಚರಿಸಿದರು. 
    ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ವೇದಿಕೆ ಪ್ರಧಾನ ಸಂಚಾಲಕ ಟಿ.ಜಿ ಬಸವರಾಜಯ್ಯ, ಸಂಚಾಲಕರಾದ ವಿ.ಗೋವಿಂದಪ್ಪ, ಕೆ.ಜಿ ವೆಂಕಟೇಶ್ ಮೂರ್ತಿ, ಶಿವಲಿಂಗಯ್ಯ, ಆರ್.ಎ ಬಾಪು, ವಿ.ಎಸ್ ರಘುನಾಥ್, ನಿವೃತ್ತ ನೌಕರರಾದ ಚಿಕ್ಕರಾಜು, ಬಸವರಾಜ್, ಟಿ. ತಿಮ್ಮಪ್ಪ, ಟಿ.ಎಸ್ ಆನಂದಕುಮಾರ್, ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 

Tuesday, October 15, 2024

ಅ.೧೭ರಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ

    ಭದ್ರಾವತಿ: ತಾಲೂಕು ಆಡಳಿತ, ತಾಲೂಕು ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ನಗರಸಭೆ ಹಾಗು ಮಹರ್ಷಿ ವಾಲ್ಮೀಕಿ ನಾಯಕ ಸಮಾಜ ಮತ್ತು ವಿವಿಧ ಸಂಘಟನೆಗಳ ವತಿಯಿಂದ ಅ.೧೭ರಂದು ಬೆಳಿಗ್ಗೆ ೧೧ ಗಂಟೆಗೆ ನಗರದ ತಾಲೂಕು ಕಛೇರಿ ರಸ್ತೆಯಲ್ಲಿರುವ ವೀರಶೈವ ಸಭಾಭವನದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 
    ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆವಹಿಸಲಿದ್ದು, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಶಾರದಾ ಪೂರ್‍ಯಾನಾಯ್ಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಚಳ್ಳಕೆರೆ, ತಳುಕು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಫೈಜ್ ನಟರಾಜ್ ಉಪನ್ಯಾಸ ನೀಡಲಿದ್ದಾರೆ. 
    ವಿಧಾನಪರಿಷತ್ ಸದಸ್ಯೆ ಬಲ್ಕೀಶ್ ಬಾನು, ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ನಗರಸಭೆ ಅಧ್ಯಕ್ಷ ಮಣಿ ಎಎನ್‌ಎಸ್, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ವಾಲ್ಮೀಕಿ ನಾಯಕ ಸಮಾಜದ ತಾಲೂಕು ಅಧ್ಯಕ್ಷ ಬಸವರಾಜ್ ಬಿ. ಆನೇಕೊಪ್ಪ, ತಹಸೀಲ್ದಾರ್ ಕೆ.ಆರ್ ನಾಗರಾಜು, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ. ಗಂಗಣ್ಣ, ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್, ಪೊಲೀಸ್ ಉಪಾಧೀಕ್ಷಕ ಕೆ.ಆರ್ ನಾಗರಾಜು, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಸವಿತ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. 
 

ಭದ್ರಾ ಜಲಾಶಯ ಪುನಃ ಭರ್ತಿ : ರೈತರ ಸಂತಸ ಇಮ್ಮುಡಿ

ಭದ್ರಾವತಿ ತಾಲೂಕಿನ ಜೀವ ನದಿ ಭದ್ರಾ ಜಲಾಶಯ ವ್ಯಾಪ್ತಿಯ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಈ ಹಿನ್ನಲೆಯಲ್ಲಿ ಜಲಾಶಯ ಪುನಃ ಭರ್ತಿಯಾಗಿದೆ. 
    ಭದ್ರಾವತಿ: ತಾಲೂಕಿನ ಜೀವ ನದಿ ಭದ್ರಾ ಜಲಾಶಯ ವ್ಯಾಪ್ತಿಯ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಈ ಹಿನ್ನಲೆಯಲ್ಲಿ ಜಲಾಶಯ ಪುನಃ ಭರ್ತಿಯಾಗಿದೆ. 
    ಜಲಾಶಯದ ಗರಿಷ್ಠ ಮಟ್ಟ ೧೮೬ ಅಡಿಯಾಗಿದ್ದು, ಮಂಗಳವಾರ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿದೆ. ಒಳ ಹರಿವು ೭೮೬೯ ಕ್ಯೂಸೆಕ್ ಇದ್ದು, ಜಲಾಶಯದ ಸುರಕ್ಷತೆ ಹಿನ್ನಲೆಯಲ್ಲಿ ಇಷ್ಟೆ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದೆ.  ಭದ್ರಾ ಬಲದಂಡೆ ನಾಲೆ(ಆರ್.ಬಿ.ಸಿ)ಗೆ ೧,೪೦೦ ಕ್ಯೂಸೆಕ್ ಮತ್ತು ಭದ್ರಾ ಎಡದಂಡೆ ನಾಲೆ(ಎಲ್.ಬಿ.ಸಿ)ಗೆ ೧೮೦ ಕ್ಯೂಸೆಕ್ ಹಾಗು ಭದ್ರಾ ಮೇಲ್ದಂಡೆ ಯೋಜನೆ(ಯು.ಬಿ.ಪಿ)ಗೆ ೭೦೦ ಕ್ಯೂಸೆಕ್ ನೀರು ಮತ್ತು ನದಿಗೆ ೨೦೦೦ ಸಾವಿರ ಕ್ಯೂಸೆಕ್ ಹರಿದು ಬಿಡಲಾಗುತ್ತಿದೆ. 
    ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಶೃಂಗೇರಿ ಎನ್‌ಆರ್ ಪುರ ಪ್ರದೇಶಗಳಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಭದ್ರಾ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಕಳೆದ ಎರಡು ದಿನಗಳ ಹಿಂದೆ ನೀರಿನ ಮಟ್ಟ ೧೮೫.೧೧ ಅಡಿ ಇತ್ತು. ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದ ಕಾರಣ ಜಲಾಶಯ ಭರ್ತಿಯಾಗುವವರೆಗೂ  ಕಾದಿದ್ದು, ಈಗ ಜಲಾಶಯಕ್ಕೆ ಬರುತ್ತಿರುವ ಒಳಹರಿವಿನಷ್ಟೇ ಹೊರ ಹರಿವು ಹರಿಸಲಾಗುತ್ತಿದೆ. ೪ ಕ್ರಸ್ಟ್ ಗೇಟ್‌ಗಳ ಮೂಲಕ ನದಿಗೆ ಹರಿಸಲಾಗುತ್ತಿರುವ ನೀರು ಹಾಲಿನ ನೊರೆಯಂತೆ ರಭಸದಿಂದ ಚಿಮ್ಮುದಿದ್ದು, ಮನೋಹಕವಾಗಿ ಕಂಡು ಬರುತ್ತಿದೆ.
    ಈ ವರ್ಷ ಅತ್ಯಧಿಕ ಮಳೆಯಾಗಿದ್ದು, ಜುಲೈ ತಿಂಗಳಿನಿಂದ ಆರಂಭವಾದ ಮಳೆ ಆಗಸ್ಟ್, ಸೆಪ್ಟಂಬರ್, ಅಕ್ಟೋಬರ್‌ನಲ್ಲಿಯೂ  ಮುಂದುವರೆದಿದ್ದು, ಕಳೆದ ವರ್ಷ ಇದೇ ದಿನ ಜಲಾಶಯದ ನೀರಿನ ಮಟ್ಟ ೧೫೬.೮ ಅಡಿ ಇತ್ತು. ಬರಗಾಲವೂ ತಲೆದೋರಿತ್ತು. ಈ ಬಾರಿ ಉತ್ತಮ ಮಳೆಯಾಗಿದ್ದು, ಈಗಾಗಲೇ ಕೆರೆಕಟ್ಟೆಗಳು, ನದಿಗಳು ತುಂಬಿ ಹರಿದಿವೆ. ಭದ್ರಾ ಜಲಾಶಯ ಪುನಃ ಸಂಪೂರ್ಣವಾಗಿ ಭರ್ತಿಯಾಗಿರುವುದು ಭದ್ರಾ ಅಚ್ಚುಕಟ್ಟುದಾರ ಪ್ರದೇಶದ ರೈತರ ಸಂತಸ ಇಮ್ಮುಡಿಯಾಗುವಂತೆ ಮಾಡಿದೆ.