Thursday, October 31, 2024

ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಜನ್ಮದಿನ

ಭದ್ರಾವತಿಯಲ್ಲಿ ಕಾಂಗ್ರೆಸ್ ಭಾರತ್ ಸೇವಾದಳ ಹಾಗು ಭದ್ರಾವತಿ ಅಭಿವೃದ್ಧಿ ವೇದಿಕೆ ವತಿಯಿಂದ ಗುರುವಾರ ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಜನ್ಮದಿನ ವಿಶೇಷವಾಗಿ ಆಚರಿಸಲಾಯಿತು. 
    ಭದ್ರಾವತಿ : ಕಾಂಗ್ರೆಸ್ ಭಾರತ್ ಸೇವಾದಳ ಹಾಗು ಭದ್ರಾವತಿ ಅಭಿವೃದ್ಧಿ ವೇದಿಕೆ ವತಿಯಿಂದ ಗುರುವಾರ ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಜನ್ಮದಿನ ವಿಶೇಷವಾಗಿ ಆಚರಿಸಲಾಯಿತು. 
    ನ್ಯೂಟೌನ್ ಜಯಶ್ರೀ ವೃತ್ತದ ಸಮೀಪದಲ್ಲಿರುವ ತಾಲೂಕು ಛಲವಾದಿಗಳ(ಪ.ಜಾ)ಸಮಾಜದ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ವಿಶೇಷವಾಗಿ ಆಚರಿಸಿ ಅವರ ಆಡಳಿತ ಅವಧಿಯಲ್ಲಿನ ಜನಪರ ಯೋಜನೆಗಳು ಹಾಗು ಅವರ ಕಾರ್ಯವೈಖರಿಗಳನ್ನು ಸ್ಮರಿಸಲಾಯಿತು. 
    ಪ್ರಮುಖರಾದ ಡಿ. ನರಸಿಂಹಮೂರ್ತಿ, ಜಿ.ಟಿ ಬಸವರಾಜ್, ಹನುಮಂತಯ್ಯ, ಚಂದ್ರಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಬಸ್‌ನಲ್ಲಿ ಮರೆತು ಬಿಟ್ಟು ಹೋಗಿದ್ದ ಕಿಟ್ ಬ್ಯಾಗ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಕೆಎಸ್‌ಆರ್‌ಟಿಸಿ ಸಿಬ್ಬಂದಿ

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಭದ್ರಾವತಿ ನಿವಾಸಿ ಶಿವಾನಂದಪ್ಪರವರು ಮರೆತು ಬಿಟ್ಟು ಹೋಗಿದ್ದ ಕಿಟ್‌ಬ್ಯಾಗ್ ಪುನಃ ತಲುಪಿಸುವ ಮೂಲಕ ಪ್ರಾಮಾಣಿಕತೆ ಮೆರೆದಿರುವ ಬಸ್ಸಿನ ಸಿಬ್ಬಂದಿ ಬಾಬು ದೊಡ್ಮನೆಯವರಿಗೆ ಪುಷ್ಪಮಾಲೆ ಹಾಕುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ. 
    ಭದ್ರಾವತಿ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಮರೆತು ಬಿಟ್ಟು ಹೋಗಿದ್ದ ಕಿಟ್‌ಬ್ಯಾಗ್ ಪುನಃ ಆ ವ್ಯಕ್ತಿಗೆ ತಲುಪಿಸುವ ಮೂಲಕ ಬಸ್ಸಿನ ಸಿಬ್ಬಂದಿ ಪ್ರಾಮಾಣಿಕತೆ ಮೆರೆದಿರುವ ಘಟನೆ ಇತ್ತೀಚೆಗೆ ನಡೆದಿದೆ. 
    ನಗರಸಭೆ ವ್ಯಾಪ್ತಿಯ ಕಡದಕಟ್ಟೆ ನಿವಾಸಿ, ನಿವೃತ್ತ ಕೆಇಬಿ ನೌಕರ ಪಿ.ಎಲ್ ಶಿವಾನಂದಪ್ಪ ಚಿಕ್ಕೋಡಿಯಿಂದ ಶಿವಮೊಗ್ಗಕ್ಕೆ ಕೆಎಸ್‌ಆರ್‌ಟಿಸಿ  ಕೆಎ ೧೪ ಎಫ್೦೦೮೪ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಕಿಟ್ ಬ್ಯಾಗ್ ಮರೆತುಹೋಗಿದ್ದರು. ಶಿವಮೊಗ್ಗ ತಲುಪಿದ ನಂತರ ನೋಡಿದಾಗ ಕಿಟ್ ಬ್ಯಾಗ್ ಇರಲಿಲ್ಲ. ಇವರು ಪುನಃ ಹಿಂದಿರುಗಿ ಭದ್ರಾವತಿ ನಿಲ್ದಾಣದಲ್ಲಿ ಬಂದು ವಿಚಾರಿಸಿದ್ದು, ಬಸ್ ಸಿಬ್ಬಂದಿ ಬಾಬು ದೊಡ್ಮನೆಯವರು ಕಿಟ್‌ಬ್ಯಾಗ್ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. 
    ಶಿವಾನಂದಪ್ಪರವರು ಬಾಬು ದೊಡ್ಮನೆಯವರ ಪ್ರಾಮಾಣಿಕತೆ ಕಂಡು ಬೆರಗಾಗಿದ್ದು, ಅವರಿಗೆ ಪುಷ್ಪಮಾಲೆ ಹಾಕುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ. 

ಸರ್ದಾರ್ ವಲ್ಲಭ ಭಾಯ್ ಪಟೇಲ್ ಎಂದಿಗೂ ಅವಿಸ್ಮರಣೀಯ : ಪ್ರಕಾಶ್

ಅರಳಿಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಏಕತಾ ದಿವಸ್ 

ವಲ್ಲಭ ಭಾಯ್ ಪಟೇಲ್‌ರವರ ಜನ್ಮದಿನದ ಅಂಗವಾಗಿ ಭದ್ರಾವತಿ ಅರಳಿಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಏಕತಾ ದಿವಸ್ ಆಯೋಜಿಸಲಾಗಿತ್ತು. ಅರಳಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತ ಮತ್ತು ಉಪಾಧ್ಯಕ್ಷೆ ಅನಿತಾರವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. 
    ಭದ್ರಾವತಿ: ದೇಶದ ಏಕೀಕರಣಕ್ಕೆ ಶ್ರಮಿಸಿದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಭಾಯ್ ಪಟೇಲ್ ಎಂದಿಗೂ ಅವಿಸ್ಮರಣೀಯರು ಎಂದು ತಾಲೂಕಿನ ಅರಳಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಪ್ರಕಾಶ್ ಹೇಳಿದರು. 
    ಅವರು ಗುರುವಾರ ಸರ್ದಾರ್ ವಲ್ಲಭ ಭಾಯ್ ಪಟೇಲ್‌ರವರ ಜನ್ಮದಿನದ ಅಂಗವಾಗಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಏಕತಾ ದಿವಸ್ ಕಾರ್ಯಕ್ರಮದಲ್ಲಿ ಪ್ರಾಲ್ಗೊಂಡು ಮಾತನಾಡಿದರು.  
    ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ  ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ದಿವಾಕರ್ ಮಾತನಾಡಿ, ಪಟೇಲರ ಇಚ್ಚಾ ಶಕ್ತಿ ಇಂದಿನ ಅಖಂಡ ಭಾರತ ನಿರ್ಮಾಣಕ್ಕೆ ಕಾರಣವಾಗಿದ್ದು, ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯಕ್ಕೆ ಅವರೇ ಸಾಟಿ. ನಮ್ಮೆಲ್ಲರಿಗೂ ಸರ್ದಾರ್ ಪಟೇಲರು ಪ್ರೇರಣಾದಾಯಕ. ಅವರ ವ್ಯಕ್ತಿತ್ವ, ಆದರ್ಶ ಗುಣಗಳನ್ನು ಅಳವಡಿಸಿಕೊಳ್ಳಬೇಕೆಂದರು.  
    ಅರಳಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತ ಮತ್ತು ಉಪಾಧ್ಯಕ್ಷೆ ಅನಿತಾರವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. ಶಾಲೆಯ ಎಸ್‌ಡಿಎಂಸಿ ಉಪಾಧ್ಯಕ್ಷ ಸುರೇಶ್, ಚಂದ್ರಶೇಖರ್ ಮತ್ತು ಅನಿತಾ ಉಪಸ್ಥಿತರಿದ್ದರು.
ರುದ್ರೇಶ್ ಪ್ರಾರ್ಥಿಸಿ, ರಂಗರಾಜ್ ಸ್ವಾಗತಿಸಿ, ಇಮ್ರಾನ್ ಖಾನ್ ಕಾರ್ಯಕ್ರಮ ನಿರೂಪಿಸಿದರು. ಪಲ್ಲವಿ ಪ್ರತಿಜ್ಞಾ ವಿಧಿ ಬೋಧಿಸಿದರು, ಶಾಂತಪ್ಪ ವಿಶೇಷ ಉಪನ್ಯಾಸ ನೀಡಿದರು. 

ನ.೧ರಂದು ಕನ್ನಡ ರಾಜ್ಯೋತ್ಸವ

    ಭದ್ರಾವತಿ: ರಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನ.೧ರಂದು ೬೯ನೇ ಕನ್ನಡ ರಾಜ್ಯೋತ್ಸವ ಹಳೇನಗರದ ಕನಕ ಮಂಟಪ ಮೈದಾನದಲ್ಲಿ ನಡೆಯಲಿದೆ. 
    ಬೆಳಿಗ್ಗೆ ೮ ಗಂಟೆಗೆ ನಗರದ ಬಿ.ಎಚ್ ರಸ್ತೆ, ಅಂಬೇಡ್ಕರ್ ವೃತ್ತದಿಂದ ತಾಯಿ ಶ್ರೀ ಭುವನೇಶ್ವರಿ ದೇವಿಯ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಯಲಿದ್ದು, ೯ ಗಂಟೆಗೆ ಕನಕಮಂಟಪ ಮೈದಾನದಲ್ಲಿ ತಹಸೀಲ್ದಾರ್ ಕೆ.ಆರ್ ನಾಗರಾಜು ಧ್ವಜಾರೋಹಣ ನೆರವೇರಿಸಲಿದ್ದಾರೆ. 
    ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಶಾರದಾ ಪೂರ್‍ಯಾನಾಯ್ಕ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನಪರಿಷತ್ ಸದಸ್ಯೆ ಬಲ್ಕೀಶ್ ಬಾನು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ, ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ನಗರಸಭೆ ಆಶ್ರಯ ಸಮಿತಿ ಅಧ್ಯಕ್ಷ ಬಿ.ಎಸ್ ಗೋಪಾಲ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೋಡ್ಲುಯಜ್ಞಯ್ಯ ಸೇರಿದಂತೆ ಇನ್ನಿತರರು ತಹಸೀಲ್ದಾರ್ ಕೆ.ಆರ್ ನಾಗರಾಜು, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ. ಗಂಗಣ್ಣ ಮತ್ತು ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್, ಪೊಲೀಸ್ ಉಪಾಧೀಕ್ಷಕ ಕೆ.ಆರ್ ನಾಗರಾಜು, ವಿವಿಧ ಸರ್ಕಾರಿ ಇಲಾಖೆಗಳ, ಸಂಘ-ಸಂಸ್ಥೆಗಳ ಪ್ರಮುಖರು, ಗ್ರಾಮ ಪಂಚಾಯಿತಿ, ನಗರಸಭೆ ಚುನಾಯಿತ ಪ್ರತಿನಿಧಿಗಳು ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

Wednesday, October 30, 2024

ನ.೫ರಂದು ಶ್ರೀ ಭೈರವೇಶ್ವರ ಪತ್ತಿನ ಸಹಕಾರ ಸಂಘದ ರಜತ ಮಹೋತ್ಸವ ಸಂಭ್ರಮಾಚರಣೆ

ಭದ್ರಾವತಿ ಶ್ರೀ ಭೈರವೇಶ್ವರ ಪತ್ತಿನ ಸಹಕಾರ ಸಂಘದ ರಜತ ಮಹೋತ್ಸವ ಸಂಭ್ರಮಾಚರಣೆ ಕುರಿತು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮಾಹಿತಿ ನೀಡಿದರು. 
    ಭದ್ರಾವತಿ: ನಗರದ ಅಪ್ಪರ್‌ಹುತ್ತಾ ಶ್ರೀ ಭೈರವೇಶ್ವರ ಪತ್ತಿನ ಸಹಕಾರ ಸಂಘದ ರಜತ ಮಹೋತ್ಸವ ಸಂಭ್ರಮಾಚರಣೆ ಹಾಗು ಸರ್ವ ಸದಸ್ಯರ ವಾರ್ಷಿಕ ಸಭೆ ನ.೫ರಂದು ಸಂಜೆ ೫ ಗಂಟೆಗೆ ಜನ್ನಾಪುರ ಮಲ್ಲೇಶ್ವರ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಬಿ.ಎಸ್ ಮಲ್ಲೇಶ್ ಹೇಳಿದರು. 
    ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ೧೯೯೮ರಲ್ಲಿ ಆರಂಭಗೊಂಡ ಸಂಘ ನಿರಂತರವಾಗಿ ಲಾಭದಲ್ಲಿ ಮುನ್ನಡೆದುಕೊಂಡು ಬರುತ್ತಿದೆ. ಇದೀಗ ೨೫ ವರ್ಷಗಳನ್ನು ಪೂರೈಸಿರುವ ಹಿನ್ನಲೆಯಲ್ಲಿ ಸಂಭ್ರಮಾಚರಣೆಗೆ ಮುಂದಾಗಿದ್ದು, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರು ಸಮಾರಂಭದ ದಿವ್ಯ ಸಾನಿಧ್ಯವಹಿಸಲಿದ್ದಾರೆ. ಶಿವಮೊಗ್ಗ ಶಾಖಾ ಮಠದ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಹೃದಯ ರೋಗ ತಜ್ಞ, ಸಂಸದ ಡಾ. ಸಿ.ಎನ್ ಮಂಜುನಾಥ್ ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದರು. 
    ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಸಂಘದ ಪ್ರವರ್ತಕರಾದ ತಾಲೂಕು ಒಕ್ಕಲಿಗರ ಸಂಘದ ಹಾಲಿ ಮತ್ತು ಮಾಜಿ ಪೋಷಕರು, ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು ಮತ್ತು ನಿರ್ದೇಶಕರು ಉಪಸ್ಥಿತರಿರುವರು ಎಂದರು. 
    ನ.೧ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ: 
    ರಜತ ಮಹೋತ್ಸವ ಸಂಭ್ರಮಾಚರಣೆ ಅಂಗವಾಗಿ ನ.೧ರಂದು ಶಿವಮೊಗ್ಗ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯ, ಮಲ್ಲೇಶ್ವರ ಸಮುದಾಯ ಭವನ ಟ್ರಸ್ಟ್, ರೋಟರಿ ಕ್ಲಬ್, ತಾಲೂಕು ಒಕ್ಕಲಿಗರ ಸಂಘ, ಶುಗರ್ ಟೌನ್, ಕಾಲಭೈರವೇಶ್ವರ ಚಾರಿಟಬಲ್ ಟ್ರಸ್ಟ್ ಮತ್ತು ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘ ವತಿಯಿಂದ ನ.೧ರಂದು ಜನ್ನಾಪುರ ಮಲ್ಲೇಶ್ವರ ಸಭಾ ಭವನದಲ್ಲಿ ಬೆಳಿಗ್ಗೆ ೯ ಗಂಟೆಯಿಂದ ಮಧ್ಯಾಹ್ನ ೨.೩೦ರ ವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. 
    ಮಧುಮೇಹ ವಿಭಾಗ, ಶ್ವಾಸಕೋಶ ವಿಭಾಗ, ಹೃದಯ ರೋಗ ವಿಭಾಗ, ಕೀಲು ಮತ್ತು ಮೂಳೆ ವಿಭಾಗ, ಕಿವಿ, ಮೂಗು ಗಂಟಲು ವಿಭಾಗ, ಚರ್ಮರೋಗ ವಿಭಾಗ, ನರರೋಗ ವಿಭಾಗ, ದಂತ ಚಿಕಿತ್ಸಾ ವಿಭಾಗ, ಪ್ರಸೂತಿ, ಸ್ತ್ರೀ ರೋಗ ವಿಭಾಗ ಮತ್ತು ಮಕ್ಕಳ ವಿಭಾಗಗಳಲ್ಲಿ ತಪಾಸಣೆ ನಡೆಯಲಿದೆ. ವೈದ್ಯರ ಸಲಹೆ ಮೇರೆಗೆ ಇ.ಸಿ.ಜಿ, ಶ್ವಾಸಕೋಶ ಸ್ಕ್ಯಾನಿಂಗ್(ಉಸಿರಾಟ), ಹೃದಯ ಪರೀಕ್ಷೆ(ಇಕೋ), ಬಿ.ಪಿ, ಶುಗರ್, ಮೂಳೆ ಸಾಂದ್ರತೆ ಪರೀಕ್ಷೆಗಳನ್ನು ಉಚಿತವಾಗಿ ನಡೆಸಲಾಗುವುದು ಎಂದರು. 
    ಸಂಘದ ಉಪಾಧ್ಯಕ್ಷ ಎಲ್. ದೇವರಾಜ್, ಕುಮಾರ್, ಗಾಯಿತ್ರಿ, ಕೆಂಪಯ್ಯ, ಪರಮಶಿವ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. 

ಧರ್ಮ ಸತ್ಯದ ದಾರಿಯಲ್ಲಿ ನಡೆಯಿರಿ : ಶ್ರೀ ರಂಭಾಪುರಿ ಜಗದ್ಗುರುಗಳು

ಭದ್ರಾವತಿ ತಾಲೂಕಿನ ಬಿಳಕಿ ಹಿರೇಮಠದಲ್ಲಿ ಬುಧವಾರ ಜರುಗಿದ ಲಿಂ.ಶ್ರೀ ರಾಚೋಟಿ ಶಿವಾಚಾರ್ಯ ಸ್ವಾಮಿಗಳವರ ೫೭ನೇ ವರ್ಷದ ಪುಣ್ಯ ಸ್ಮರಣೋತ್ಸವ ಧರ್ಮ ಸಮಾರಂಭ ಸಂಸದ ಬಿ.ವೈ ರಾಘವೇಂದ್ರ ಉದ್ಘಾಟಿಸಿದರು. 
    ಭದ್ರಾವತಿ : ಮನುಷ್ಯ ಆಶೆ ಕಳೆದುಕೊಂಡು ಬದುಕಬಹುದು. ಆದರೆ ಆಸಕ್ತಿ ಕಳೆದುಕೊಂಡು ಬಾಳಲಾಗದು. ಧರ್ಮ ಸತ್ಯದ ದಾರಿಯಲ್ಲಿ ನಡೆಯುವವನಿಗೆ ನೂರೆಂಟು ಕಷ್ಟಗಳು ಬಂದರೂ ಕೊನೆಗೆ ಸತ್ಯ ಧರ್ಮಗಳ ಪರಿಪಾಲನೆ ನಮ್ಮನ್ನು ಕಾಪಾಡುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು. 
    ಅವರು ಬುಧವಾರ ತಾಲೂಕಿನ ಬಿಳಕಿ ಹಿರೇಮಠದಲ್ಲಿ ಜರುಗಿದ ಲಿಂ.ಶ್ರೀ ರಾಚೋಟಿ ಶಿವಾಚಾರ್ಯ ಸ್ವಾಮಿಗಳವರ ೫೭ನೇ ವರ್ಷದ ಪುಣ್ಯ ಸ್ಮರಣೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. 
    ಹುಟ್ಟು ಎಷ್ಟು ಸಹಜವೋ ಸಾವು ಅಷ್ಟೇ ನಿಶ್ಚಿತ. ಭೌತಿಕ ಸಂಪತ್ತು ಜೀವನ ಶಾಶ್ವತವಲ್ಲ. ಆದರೆ ಸತ್ಯ ಧರ್ಮ ಒಂದೇ ಸ್ಥಿರ. ಅರಳಿದ ಪುಷ್ಪಗಳು ಬೀರುವ ಸುಗಂಧ ಗಾಳಿಯಲ್ಲಿ ಹರಡುವಂತೆ ಸತ್ಕಾರ್ಯಗಳಿಂದ ಮನುಷ್ಯನ ಕೀರ್ತಿ ಎಲ್ಲೆಡೆ ಹರಡುತ್ತದೆ. ದೇವರ ಹೆಸರಿನಲ್ಲಿ ಉಪವಾಸ ಮಾಡುವುದು ದೊಡ್ಡ ಸಾಧನೆಯಲ್ಲ. ಜನ್ಮ ಕೊಟ್ಟ ತಂದೆ ತಾಯಿ ಮಾರ್ಗದರ್ಶನ ನೀಡುವ ಗುರುವಿನಲ್ಲಿ ಶ್ರದ್ಧೆಯಿಟ್ಟು ಕಾಪಾಡುವುದೇ ದೊಡ್ಡ ಸಾಧನೆ ಎಂಬುದನ್ನು ಮರೆಯಬಾರದು ಎಂದರು. 
    ವೀರಶೈವ ಧರ್ಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಆದರ್ಶ ಮೌಲ್ಯಗಳನ್ನು ಪರಿಪಾಲಿಸಿ ನಡೆದರೆ ಜೀವನ ಸಾರ್ಥಕ. ಲಿಂ.ರಾಚೋಟಿ ಶಿವಾಚಾರ್ಯರು ಧರ್ಮಮುಖಿಯಾಗಿ ಮತ್ತು ಸಮಾಜ ಮುಖಿಯಾಗಿ ಸತ್ಕಾರ್ಯಗಳನ್ನು ಮಾಡಿ ಭಕ್ತ ಸಮುದಾಯವನ್ನು ಸನ್ಮಾರ್ಗಕ್ಕೆ ತಂದ ಕೀರ್ತಿ ಅವರದಾಗಿದೆ. ಇಂದಿನ ರಾಚೋಟೇಶ್ವರ ಶಿವಾಚಾರ್ಯರು ಪೂರ್ವದ ಆದರ್ಶ ಪರಿಪಾಲನೆಯನ್ನು ಪರಿಪಾಲಿಸುವ ಭಕ್ತ ಸಂಕುಲದಲ್ಲಿ ಸಂಸ್ಕಾರ, ಸದ್ವಿಚಾರಗಳನ್ನು ಬೆಳೆಸುತ್ತಿರುವುದು ಅತ್ಯಂತ ಸಂತೋಷವನ್ನುಂಟು ಮಾಡಿದೆ ಎಂದರು. 
      ಸಮಾರಂಭ ಉದ್ಘಾಟಿಸಿದ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಮನಸೊಂದಿದ್ದರೆ ಮಾರ್ಗವಿದೆ. ನಂಬಿಕೆಯೊಂದಿದ್ದರೆ ಜೀವನವಿದೆ, ನಿಷ್ಕಲ್ಮಶವಾದ ಭಕ್ತಿಯೊಂದಿದ್ದರೆ ಪರಮಾತ್ಮನ ಅನುಗ್ರಹ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಶ್ರೀ ಜಗದ್ಗುರು ರೇಣುಕಾಚಾರ್ಯರ ತತ್ವ ಚಿಂತನೆಗಳನ್ನು ರಾಚೋಟಿ ಶ್ರೀಗಳು ಪರಿಪಾಲಿಸಿ ಭಕ್ತರಿಗೆ ಬೋಧಿಸಿದ ಶಕ್ತಿಯನ್ನು ಮರೆಯಲಾಗದು. ಅವರ ಜೀವನದ ಸಿದ್ಧಿ ಸಾಧನೆಗಳು ನಮ್ಮೆಲ್ಲರಿಗೂ ದಾರಿ ದೀಪವಾಗಲೆಂದರು. 
    ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮನುಷ್ಯ ಎಷ್ಟು ವರುಷ ಬದುಕಿದನೆಂಬುದು ಮುಖ್ಯವಲ್ಲ. ಬದುಕಿರುವಷ್ಟು ದಿನ ಹೇಗೆ ಬದುಕಿದನೆಂಬುದು ಬಹಳ ಮುಖ್ಯ. ಹಣ ಇವತ್ತು ಅಥವಾ ನಾಳೆ ಗಳಿಸಬಹುದು. ಆದರೆ ಯಾವಾಗಲೂ ಜೊತೆಯಾಗಿ ನಿಲ್ಲುವ ವ್ಯಕ್ತಿಯನ್ನು ಕಳೆದುಕೊಳ್ಳಬಾರದು. ಲಿಂ.ರಾಚೋಟಿ ಶ್ರೀಗಳವರು ಎಲ್ಲ ಭಕ್ತರನ್ನು ಸಮಾನವಾಗಿ ಕಂಡು ಸತ್ಕರಿಸಿ ಒಳಿತನ್ನು ಬಯಸಿದ ಮಹಾನ್ ಚೇತನ ಶಕ್ತಿ ಎಂದು ಸ್ಮರಿಸಿದರು. 
    ಎಡೆಯೂರು ಬಾಳೆಹೊನ್ನೂರು ಖಾಸಾ ಶಾಖಾ ಮಠದ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಆದರ್ಶ ಮೌಲ್ಯಗಳ ಪರಿಪಾಲನೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಬೆಳೆಯುವ ಯುವ ಜನಾಂಗದಲ್ಲಿ ಸ್ವಧರ್ಮ ನಿಷ್ಠೆ ಮತ್ತು ಪರಧರ್ಮ ಸಹಿಷ್ಣುತೆಯ ಪಾಠಗಳನ್ನು ಮಾಡುವ ಅವಶ್ಯಕತೆ ಇದೆ ಎಂದರು. 
    ನಗರಸಭೆ ಹಿರಿಯ ಸದಸ್ಯ ಬಿ.ಕೆ.ಮೋಹನ ಮಾತನಾಡಿ, ಇಂದಿನ ಅತ್ಯಾಧುನಿಕ ಯುಗದಲ್ಲಿ ಮನುಷ್ಯನ ಮನಸ್ಸು ಬಹಳಷ್ಟು ಚಂಚಲಗೊಂಡಿದೆ. ಧರ್ಮ ಪರಿಪಾಲನೆಯ ದಾರಿಯಲ್ಲಿ ನಡೆದಾಗ ಬದುಕಿನಲ್ಲಿ ಶಾಂತಿ, ಸಂತೃಪ್ತಿ, ಸಮಾಧಾನ ಪ್ರಾಪ್ತಿಗಾಗಿ ಇಂತಹ ಸಮಾರಂಭಗಳ ಅವಶ್ಯಕತೆ ಇದೆ. ಶ್ರೀ ರಂಭಾಪುರಿ ಜಗದ್ಗುರುಗಳು ನಿತ್ಯ ಸಂಚರಿಸಿ ಜನ ಸಮುದಾಯಗಳಲ್ಲಿ ಸದಭಿಮಾನ, ಶ್ರದ್ಧೆ, ದೇಶಭಕ್ತಿ, ಧರ್ಮ ಪರಿಪಾಲನೆಯ ವಿಚಾರಗಳನ್ನು ಬೋಧಿಸಿ ಉದ್ಧರಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದರು. 
    ಹುಣಸಘಟ್ಟ, ಹಾಲಸ್ವಾಮಿಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ರಟ್ಟಿಹಳ್ಳಿ ಕಬ್ಬಿಣಕಂಥಿಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಮಾದಿಹಳ್ಳಿ ಹಿರೇಮಠದ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಬೀರೂರು ಬಾಳೆಹೊನ್ನೂರು ಖಾಸಾ ಶಾಖಾಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಕೆ. ಬಿದಿರೆ ದೊಡ್ಡಮಠದ ಶ್ರೀ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ, ಮೆಟಿಕುರ್ಕೆಮಠದ ಶ್ರೀ ಶಶಿಶೇಖರ ಸಿದ್ದಬಸವ ಸ್ವಾಮೀಜಿ, ಸಂಸ್ಥಾನ ಮಳಲಿಮಠದ ಶ್ರೀ ಡಾ. ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಹಾರನಹಳ್ಳಿ ರಾಮಲಿಂಗೇಶ್ವರಮಠದ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ತಾವರೆಕೆರೆ ಶಿಲಾಮಠ, ಶ್ರೀ ಡಾ. ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಕುರವತ್ತಿ ಹಿರೇಮಠದ ಶ್ರೀ ಸಿದ್ಧನಂದೀಶ್ವರ ಶಿವಾಚಾರ್ಯ ಸ್ವಾಮೀಜಿ, ನಂದಿಪುರ ನಂದಿಪುರಮಠದ ಶ್ರೀ ನಂದೀಶ್ವರ ಶಿವಾಚಾರ್ಯ ಸ್ವಾಮೀಜಿ ಮತ್ತು ಹಣ್ಣೆಮಠದ ಶ್ರೀ ಮರುಳಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. 
    ಶ್ರೀ ಮಠದ ಗೌರವಾಧ್ಯಕ್ಷ ಟಿ.ವಿ.ಈಶ್ವರಯ್ಯ, ಉದ್ಯಮಿ ಬಿ.ಕೆ.ಜಗನ್ನಾಥ, ಎಸ್.ಎನ್ ಮಹಾಲಿಂಗಶಾಸ್ತ್ರಿ, ಎಸ್.ಎಸ್.ಜ್ಯೋತಿಪ್ರಕಾಶ್, ಎ.ಎಂ.ಚಂದ್ರಯ್ಯ, ಹೆಚ್.ಮಲ್ಲಿಕಾರ್ಜುನಸ್ವಾಮಿ, ಡಾ.ರೇಣುಕಾರಾಧ್ಯ ಶಾಸ್ತ್ರಿಗಳು, ಸಿದ್ಧಲಿಂಗಯ್ಯ, ಉಮೇಶ ಹಿರೇಮಠ, ಮಂಗೋಟೆ ರುದ್ರೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಹೊನ್ನಾಳಿ ಕೋಟೆಮಲ್ಲೂರಿನ ಶತಾಯುಷಿ, ನಿವೃತ್ತ ಮುಖ್ಯೋಪಾಧ್ಯಾಯ ಶಿವಲಿಂಗಾರಾಧ್ಯ ಶಾಸ್ತ್ರಿಗಳವರಿಗೆ `ಸೌಜನ್ಯ ಸುಧಾಕರ ರತ್ನ' ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.  ಶ್ರೀ ಮಠದ ನಿಯೋಜಿತ ಪೀಠಾಧಿಪತಿ ಶ್ರೀ ಗುರುಪ್ರಸಾದ ದೇವರು ಸ್ವಾಗತಿಸಿದರು. ಶಿವಮೊಗ್ಗದ ಶಾಂತಾ ಆನಂದ ನಿರೂಪಿಸಿದರು. ಗಂಜಿಗಟ್ಟಿ ಕೃಷ್ಣಮೂರ್ತಿ  ಜಾನಪದ ಗೀತೆಗಳನ್ನು ಹಾಡಿದರು. 
    ಬೆಳಿಗ್ಗೆ ಲಿಂ.ರಾಚೋಟಿ ಶ್ರೀಗಳವರ ಗದ್ದುಗೆಗೆ ಹಾಗೂ ಶ್ರೀ ಮಠದ ಎಲ್ಲ ದೇವರುಗಳಿಗೆ ಶಾಸ್ತ್ರೋಕ್ತ ರುದ್ರಾಭಿಷೇಕ, ಅಷ್ಟೋತ್ತರ ಮಹಾಮಂಗಳಾರತಿ ಜರುಗಿದವು. ಬೆಳಿಗ್ಗೆ ಲೋಕಕಲ್ಯಾಣಾರ್ಥವಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಪೂಜೆ ನೆರವೇರಿಸಿ ಭಕ್ತರಿಗೆ ಶುಭ ಹಾರೈಸಿದರು.
 
    ಲಿಂ.ಹಾನಗಲ್ಲ ಕುಮಾರಸ್ವಾಮಿಗಳು ಮಾಡಿರುವ ನಿರ್ಣಯದಂತೆ ನಡೆದುಕೊಳ್ಳಿ...
    ಇತ್ತೀಚೆಗೆ ಜಾತಿ ಜನಗಣತಿ ಹಿನ್ನೆಲೆಯಲ್ಲಿ ಸೇರಿದ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭೆಯ ಅಧ್ಯಕ್ಷರು ಮೊದಲ್ಗೊಂಡು ಹಲವಾರು ಗಣ್ಯರು ಪಾಲ್ಗೊಂಡಿದ್ದು ಸಂತೋಷದ ಸಂಗತಿ. ಈ ಸಂದರ್ಭದಲ್ಲಿ ಹಲವಾರು ಠರಾವುಗಳನ್ನು ಮಹಾಸಭೆ ಪ್ರಕಟಪಡಿಸಿದ್ದು, ಮೊದಲನೆಯ ಠರಾವಿನಲ್ಲಿ ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರ ತತ್ವ ಸಿದ್ಧಾಂತ ಮತ್ತು ಶ್ರೀ ಬಸವಾದಿ ಶಿವಶರಣರ ವಿಚಾರ ಧಾರೆಯಂತೆ ಮಹಾಸಭಾ ಕಾರ್ಯ ನಿರ್ವಹಿಸುತ್ತದೆ ಎಂದಾಗಬೇಕಿತ್ತು. ಆದರೆ ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರ ಹೆಸರು ಕೈ ಬಿಟ್ಟಿರುವುದು ಒಳ್ಳೆಯದಲ್ಲ. ಮಹಾಸಭಾ ಯಾವಾಗಲೂ ಗುರು ವಿರಕ್ತ ಸಮುದಾಯವನ್ನು ಸಮಾನ ದೃಷ್ಟಿಯಿಂದ ಕಾಣಬೇಕೆಂದು ನಿಯಮ ಇರುವಾಗಲೂ ಈ ರೀತಿ ನಿರ್ಣಯ ಕೈಗೊಂಡಿರುವುದು ನೋವಿನ ಸಂಗತಿ. ಈ ವಿಚಾರವನ್ನು ಮಹಾಸಭಾ ಗಂಭೀರವಾಗಿ ಅವಲೋಕನ ಮಾಡಿ ಸರಿಪಡಿಸುವತ್ತ ಗಮನ ಕೊಡಬೇಕಾದ ಅಗತ್ಯವಿದೆ.  ಲಿಂ.ಹಾನಗಲ್ಲ ಕುಮಾರಸ್ವಾಮಿಗಳು ಮಾಡಿರುವ ನಿರ್ಣಯದಂತೆ ವೀರಶೈವ ಮಹಾಸಭೆ ನಡೆದುಕೊಳ್ಳಬೇಕಲ್ಲದೇ ತಪ್ಪು ನಿರ್ಣಯ ಕೈಕೊಳ್ಳಬೇಡಿ ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ಎಚ್ಚರಿಸಿದರು. 
 

ಭದ್ರಾವತಿ ತಾಲೂಕಿನ ಬಿಳಕಿ ಹಿರೇಮಠದಲ್ಲಿ ಬುಧವಾರ ಜರುಗಿದ ಲಿಂ.ಶ್ರೀ ರಾಚೋಟಿ ಶಿವಾಚಾರ್ಯ ಸ್ವಾಮಿಗಳವರ ೫೭ನೇ ವರ್ಷದ ಪುಣ್ಯ ಸ್ಮರಣೋತ್ಸವ ಧರ್ಮ ಸಮಾರಂಭದಲ್ಲಿ ಹೊನ್ನಾಳಿ ಕೋಟೆಮಲ್ಲೂರಿನ ಶತಾಯುಷಿ, ನಿವೃತ್ತ ಮುಖ್ಯೋಪಾಧ್ಯಾಯ ಶಿವಲಿಂಗಾರಾಧ್ಯ ಶಾಸ್ತ್ರಿಗಳವರಿಗೆ `ಸೌಜನ್ಯ ಸುಧಾಕರ ರತ್ನ' ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.  

ಉಕ್ಕಿನ ನಗರಕ್ಕೆ ಆಗಮಿಸಿದ ೧೨ ಅಡಿ ಎತ್ತರದ ನೂತನ ಡಾ. ಬಿ.ಆರ್ ಅಂಬೇಡ್ಕರ್ ಕಂಚಿನ ಪ್ರತಿಮೆ

ದಲಿತ ಸಂಘಟನೆಗಳ ಮುಖಂಡರು ಉಪಸ್ಥಿತಿ : ಸಿಹಿ ಹಂಚಿ ಸಂಭ್ರಮ 

 ೧೨ ಅಡಿ ಎತ್ತರದ ನೂತನ ಡಾ. ಬಿ.ಆರ್ ಅಂಬೇಡ್ಕರ್ ಕಂಚಿನ ಪ್ರತಿಮೆ ಬುಧವಾರ ಭದ್ರಾವತಿ ನಗರಕ್ಕೆ ಆಗಮಿಸಿದ್ದು, ಹಳೇಯ ಪ್ರತಿಮೆ ಸ್ಥಳದಲ್ಲಿಯೇ ಪ್ರತಿಷ್ಠಾಪನೆಗೊಳ್ಳುತ್ತಿದೆ. 
    ಭದ್ರಾವತಿ : ೧೨ ಅಡಿ ಎತ್ತರದ ನೂತನ ಡಾ. ಬಿ.ಆರ್ ಅಂಬೇಡ್ಕರ್ ಕಂಚಿನ ಪ್ರತಿಮೆ ಬುಧವಾರ ನಗರಕ್ಕೆ ಆಗಮಿಸಿದ್ದು, ದಲಿತ ಸಂಘಟನೆಗಳ ಮುಖಂಡರು ಸಿಹಿ ಹಂಚಿ ಸಂಭ್ರಮಿಸಿದರು. 
    ಬಿ.ಎಚ್ ರಸ್ತೆ ಅಂಡರ್ ಬ್ರಿಡ್ಜ್ ಬಳಿ ಹಳೇಯ ಪ್ರತಿಮೆ ಸ್ಥಳದಲ್ಲಿಯೇ ನೂತನ ಪ್ರತಿಮೆ ಅನಾವರಣಗೊಳ್ಳುತ್ತಿದ್ದು, ಮಧ್ಯಾಹ್ನ ೩ ಗಂಟೆ ಸಮಯಕ್ಕೆ ಪ್ರತಿಷ್ಠಾಪನಾ ಸ್ಥಳಕ್ಕೆ ಆಗಮಿಸಿದ ಪ್ರತಿಮೆಯನ್ನು ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ಸದಸ್ಯರಾದ ಚನ್ನಪ್ಪ, ಬಸವರಾಜ ಬಿ. ಆನೇಕೊಪ್ಪ, ದಲಿತ ಮುಖಂಡರಾದ ಸತ್ಯ ಭದ್ರಾವತಿ, ಶಿವಬಸಪ್ಪ, ಚಿನ್ನಯ್ಯ, ವಿ. ವಿನೋದ್, ಈಶ್ವರಪ್ಪ, ಎಸ್. ಕುಮಾರ್, ಯುವ ಮುಖಂಡರಾದ ಬಿ.ಎಸ್ ಗಣೇಶ್, ಗೋಪಾಲ್, ರಾಜೇಂದ್ರ, ವೆಂಕಟೇಶ್ ಉಜ್ಜನಿಪುರ ಹಾಗು ಕೆ. ಪ್ರಸಾದ್, ಸಂತೋಷ್ ಪಾಟೀಲ್ ಸೇರಿದಂತೆ ನಗರಸಭೆ ಅಧಿಕಾರಿಗಳು ಇನ್ನಿತರರು ಉಪಸ್ಥಿತರಿದ್ದರು. 
    ನೂತನ ಅಂಬೇಡ್ಕರ್ ಪ್ರತಿಮೆ ಸಂಪೂರ್ಣವಾಗಿ ಕಂಚಿನಿಂದ ನಿರ್ಮಿಸಲಾಗಿದ್ದು, ಸುಮಾರು ೧,೫೦೦ ಕೆ.ಜಿ ತೂಕವಿದೆ. ಪ್ರತಿಷ್ಠಾಪನಾ ಮಂಟಪ ೬ ಅಡಿ ಎತ್ತರವಿದ್ದು, ೧೨ ಅಡಿ ಪ್ರತಿಮೆ ಸೇರಿ ಒಟ್ಟು ೧೮ ಅಡಿ ಎತ್ತರಕ್ಕೆ ಮೆಟ್ಟಿಲುಗಳನ್ನು ಸಹ ನಿರ್ಮಿಸಲಾಗುತ್ತದೆ. ಈಗಾಗಲೇ ಪ್ರತಿಷ್ಠಾಪನಾ ಸ್ಥಳದ ಸುತ್ತ ಲೋಹದ ಗ್ರಿಲ್‌ಗಳನ್ನು ಅಳವಡಿಸಲಾಗಿದೆ. ಉಳಿದಂತೆ ಪ್ರತಿಮೆ ಅನಾವರಣಕ್ಕೆ ದಿನಾಂಕ ನಿಗದಿಯಾಗಬೇಕಿದೆ.