Sunday, November 10, 2024

ಭದ್ರಾವತಿ ವಿಧಾನಸಭಾ ಕ್ಷೇತ್ರ ಪ್ರವಾಸಿಗರ ತಾಣ ಮನವಿಗೆ : ಸಂಸದ ಬಿ.ವೈ ರಾಘವೇಂದ್ರ ಸ್ಪಂದನೆ

ಸಚಿವ ಎಚ್.ಕೆ ಪಾಟೀಲ್‌ರಿಗೆ ಪತ್ರ ಬರೆದು ಕ್ರಮ ಕೈಗೊಳ್ಳಲು ಒತ್ತಾಯ 

ಭದ್ರಾವತಿ ವಿಧಾನಸಭಾ ಕ್ಷೇತ್ರವನ್ನು ಆಕರ್ಷಣೀಯ ಪ್ರವಾಸಿಗರ ತಾಣ ಮಾಡುವ ಸಂಬಂಧ ರಾಜ್ಯ ಸರ್ಕಾರದಿಂದ ಆರ್ಥಿಕ ನೆರವು ದೊರಕಿಸಿಕೊಡಬೇಕೆಂದು ಭದ್ರಾವತಿ ನಗರದ ಜನ್ನಾಪುರ ಡಿ.ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್, ಸುವರ್ಣ ಮಹಿಳಾ ವೇದಿಕೆ ವತಿಯಿಂದ  ಸಲ್ಲಿಸಲಾಗಿದ್ದ ಮನವಿಗೆ ಸಂಸದ ಬಿ.ವೈ ರಾಘವೇಂದ್ರರವರು ಸ್ಪಂದಿಸಿ ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗು ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ ಪಾಟೀಲ್‌ರವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. 
    ಭದ್ರಾವತಿ: ಭದ್ರಾವತಿ ವಿಧಾನಸಭಾ ಕ್ಷೇತ್ರವನ್ನು ಆಕರ್ಷಣೀಯ ಪ್ರವಾಸಿಗರ ತಾಣ ಮಾಡುವ ಸಂಬಂಧ ರಾಜ್ಯ ಸರ್ಕಾರದಿಂದ ಆರ್ಥಿಕ ನೆರವು ದೊರಕಿಸಿಕೊಡಬೇಕೆಂದು ನಗರದ ಜನ್ನಾಪುರ ಡಿ.ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್, ಸುವರ್ಣ ಮಹಿಳಾ ವೇದಿಕೆ ವತಿಯಿಂದ  ಸಲ್ಲಿಸಲಾಗಿದ್ದ ಮನವಿಗೆ ಸಂಸದ ಬಿ.ವೈ ರಾಘವೇಂದ್ರರವರು ಸ್ಪಂದಿಸಿ ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗು ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ ಪಾಟೀಲ್‌ರವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. 



    ಟ್ರಸ್ಟ್ ಛೇರ್ಮನ್, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ರವರು ಭದ್ರಾವತಿ ವಿಧಾನಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಕಳೆದ ಸುಮಾರು ೫೦ ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ನಗರಸಭೆ ವ್ಯಾಪ್ತಿ ಸರ್ವೆ ನಂ.೧೧೨ರ ಹೊಸಮನೆ ತಮ್ಮಣ್ಣ ಕಾಲೋನಿ ಸಮೀಪವಿರುವ ಸುಮಾರು ೮೦೦ ವರ್ಷಗಳ ಇತಿಹಾಸವಿರುವ ಸುಮಾರು ೫೦ ಎಕರೆ ೨೦ ಗುಂಟೆ ವಿಸ್ತೀರ್ಣವುಳ್ಳ ಸರ್ಕಾರಿ ಹಿರೇಕೆರೆ ಹಾಗೂ ಹಳೇನಗರದ ಪುರಾಣ ಪ್ರಸಿದ್ದ ಕ್ಷೇತ್ರಪಾಲಕ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ, ಕಲ್ಲಹಳ್ಳಿ ಗ್ರಾಮ ಪಂಚಾಯತಿ ಸಿರಿಯೂರು ಗ್ರಾಮದಲ್ಲಿರುವ ಸಿರಿಯೂರು ಸರ್ಕಾರಿ ಕೆರೆ, ನಾಗತಿಬೆಳಗಲು ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಸ್ಥಾನ ಸಮೀಪವಿರುವ ಸರ್ಕಾರಿ ಕೆರೆ ಮತ್ತು ಅರಳಿಕೊಪ್ಪ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗೊಂದಿ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ ಸಮೀಪವಿರುವ ವಿಶಾಲವಾದ ಖಾಲಿ ಜಾಗ ಆಕರ್ಷಣೀಯ ಪ್ರವಾಸಿಗರ ತಾಣವನ್ನಾಗಿಸುವುದು. 
ಗೊಂದಿ ಜಲಾಶಯ ಆಕರ್ಷಣಿಯ ಪ್ರವಾಸಿಗರ ತಾಣವನ್ನಾಗಿಸುವ ಜೊತೆಗೆ ಭದ್ರಾ ಜಲಾಶಯ ಕೆಳಭಾಗದಲ್ಲಿರುವ ನೂರಾರು ಎಕರೆ ವಿಶಾಲವಾದ ಖಾಲಿ ಜಾಗದಲ್ಲಿ ಕೆಆರ್‌ಎಸ್ ಮಾದರಿಯಲ್ಲಿ ಆಕರ್ಷಣೀಯ ತಾಣವನ್ನಾಗಿಸುವುದು ಹಾಗು ಬಿಳಕಿ ಗ್ರಾಮಪಂಚಾಯತಿ ವ್ಯಾಪ್ತಿಯ ಬೆಳಕಿ ಸರ್ಕಾರಿ ಕೆರೆಯನ್ನು ಆಕರ್ಷಣೀಯ ಪ್ರವಾಸಿಗರ ತಾಣವನ್ನಾಗಿ ಮಾಡುವಂತೆ ಒತ್ತಾಯಿಸುವ ಮೂಲಕ ಅಗತ್ಯವಿರುವ ಆರ್ಥಿಕ ನೆರವು ರಾಜ್ಯ ಸರ್ಕಾರದಿಂದ ಬಿಡುಗಡೆಗೊಳಿಸಿಕೊಡುವಂತೆ ಇತ್ತೀಚಿಗೆ ಸಂಸದರಿಗೆ ಮನವಿ ಸಲ್ಲಿಸಿದ್ದರು. 
    ಮನವಿಗೆ ಸ್ಪಂದಿಸಿರುವ ಸಂಸದರು, ಹೆಚ್.ಕೆ.ಪಾಟೀಲ್‌ರವರಿಗೆ ಪತ್ರ ಬರೆದು ಭದ್ರಾವತಿ ವಿಧಾನಸಭಾ ಕ್ಷೇತ್ರವನ್ನು ಕೇಂದ್ರ ಸರ್ಕಾರದಿಂದ ಪ್ರವಾಸಿ ತಾಣವನ್ನಾಗಿಸಲು ಕ್ರಮವಹಿಸಲಾಗಿದೆ. ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರದಿಂದಲೂ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆಂದು ಟ್ರಸ್ಟ್ ಪ್ರಧಾನಕಾರ್ಯದರ್ಶಿ
ಬಿ.ವಿ.ಗಿರಿನಾಯ್ಡು ತಿಳಿಸಿದ್ದಾರೆ. 

Saturday, November 9, 2024

ನಗರಸಭೆ ಕಂದಾಯಾಧಿಕಾರಿಯಾಗಿ ರಮೇಶ್ ಅಧಿಕಾರ ಸ್ವೀಕಾರ : ಕಾಂಗ್ರೆಸ್ ಓಬಿಸಿ ಅಭಿನಂದನೆ

ಕಳೆದ ಕೆಲವು ತಿಂಗಳಿನಿಂದ ತೆರವಾಗಿದ್ದ ಭದ್ರಾವತಿ ನಗರಸಭೆ ಕಂದಾಯ ಅಧಿಕಾರಿ ಹುದ್ದೆಗೆ ರಮೇಶ್‌ರವರು ವರ್ಗಾವಣೆಗೊಂಡು ಬಂದಿದ್ದು, ಅವರನ್ನು ಬ್ಲಾಕ್ ಕಾಂಗ್ರೆಸ್ ನಗರ ಹಿಂದುಳಿದ ವರ್ಗಗಳ ಘಟಕದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. 
    ಭದ್ರಾವತಿ: ಕಳೆದ ಕೆಲವು ತಿಂಗಳಿನಿಂದ ತೆರವಾಗಿದ್ದ ನಗರಸಭೆ ಕಂದಾಯ ಅಧಿಕಾರಿ ಹುದ್ದೆಗೆ ರಮೇಶ್‌ರವರು ವರ್ಗಾವಣೆಗೊಂಡು ಬಂದಿದ್ದು, ಅವರನ್ನು ಬ್ಲಾಕ್ ಕಾಂಗ್ರೆಸ್ ನಗರ ಹಿಂದುಳಿದ ವರ್ಗಗಳ ಘಟಕದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. 
    ಈ ಹಿಂದೆ ಕಂದಾಯಾಧಿಕಾರಿಯಾಗಿದ್ದ ರಾಜ್‌ಕುಮಾರ್‌ರವರು ಸಾಗರ ನಗರಸಭೆಗೆ ವರ್ಗಾವಣೆಗೊಂಡಿದ್ದು, ಈ ಹಿನ್ನಲೆಯಲ್ಲಿ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ನಗರಸಭೆ ಕಂದಾಯ ವಿಭಾಗದ ಸಿಬ್ಬಂದಿ ಓಂಕಾರಪ್ಪನವರಿಗೆ ಪ್ರಭಾರ ವಹಿಸಿಕೊಡಲಾಗಿತ್ತು. ಇದೀಗ ಚಿಕ್ಕನಾಯಕನಹಳ್ಳಿ ಪುರಸಭೆಯಿಂದ ಮುಂಬಡ್ತಿಹೊಂದಿರಮೇಶ್‌ರವರು ವರ್ಗಾವಣೆಗೊಂಡು ಬಂದಿದ್ದಾರೆ. 
    ಬ್ಲಾಕ್ ಕಾಂಗ್ರೆಸ್ ನಗರ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಬಿ. ಗಂಗಾಧರ್ ನೇತೃತ್ವದಲ್ಲಿ ಇವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.  ಪದಾಧಿಕಾರಿಗಳಾದ ಉಪಾಧ್ಯಕ್ಷ ಎನ್. ಮಂಜುನಾಥ್, ಸಂಚಾಲಕ ಮಂಜಣ್ಣ ಸಿದ್ದಾಪುರ, ಸಂಘಟನೆ ಕಾರ್ಯದರ್ಶಿಗಳಾದ ಹರೀಶ್ ಮತ್ತು ಮಹಮದ್ ರಫೀಕ್, ವಸಂತ್ ವಸಂತ್ ಕುಮಾರ್, ನಗರಸಭೆ ಸದಸ್ಯ ಸಯ್ಯದ್ ರಿಯಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಅಲಂಕಾರಿಗ ಉಡುಗೆಗಳೊಂದಿಗೆ ಕಣ್ಮನ ಸೆಳೆದ ಅನನ್ಯ ಹ್ಯಾಪಿ ಹಾರ್ಟ್ಸ್ ವಿದ್ಯಾರ್ಥಿಗಳು

ಭದ್ರಾವತಿ ಅಪ್ಪರ್ ಹುತ್ತಾ, ಅನನ್ಯ ಎಜ್ಯುಕೇಷನ್ ಟ್ರಸ್ಟ್, ಅನನ್ಯ ಶಾಲೆಯ ಆವರಣದಲ್ಲಿ  ಶನಿವಾರ ಅನನ್ಯ ಹ್ಯಾಪಿ ಹಾರ್ಟ್ಸ್ ಎಲ್‌ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿಗಳಿಗೆ ಅನನ್ಯೋತ್ಸವದ ಅಂಗವಾಗಿ ಅಲಂಕಾರಿಗ ಉಡುಗೆ(ಪ್ಯಾನ್ಸಿ ಡ್ರೆಸ್) ಕಾರ್ಯಕ್ರಮ ಆಯೋಜಿಸಲಾಗಿತ್ತು. 
    ಭದ್ರಾವತಿ: ನಗರದ ಅಪ್ಪರ್ ಹುತ್ತಾ, ಅನನ್ಯ ಎಜ್ಯುಕೇಷನ್ ಟ್ರಸ್ಟ್, ಅನನ್ಯ ಶಾಲೆಯ ಆವರಣದಲ್ಲಿ  ಶನಿವಾರ ಅನನ್ಯ ಹ್ಯಾಪಿ ಹಾರ್ಟ್ಸ್ ಎಲ್‌ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿಗಳಿಗೆ ಅನನ್ಯೋತ್ಸವದ ಅಂಗವಾಗಿ ಅಲಂಕಾರಿಗ ಉಡುಗೆ(ಪ್ಯಾನ್ಸಿ ಡ್ರೆಸ್) ಕಾರ್ಯಕ್ರಮ ಆಯೋಜಿಸಲಾಗಿತ್ತು. 
    ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ವೇಷಭೂಷಣ ಉಡುಗೆಗಳೊಂದಿಗೆ ಕಣ್ಮನ ಸೆಳೆದರು.  ಅನನ್ಯ ಎಜ್ಯುಕೇಷನ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರತಿವರ್ಷ ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಇತ್ತೀಚೆಗೆ ನಾಡಹಬ್ಬ ದಸರಾ ವಿಶೇಷವಾಗಿ ಆಚರಿಸುವ ಮೂಲಕ ಗಮನ ಸೆಳೆಯಲಾಗಿತ್ತು. 
    ಟ್ರಸ್ಟ್ ಕಾರ್ಯದರ್ಶಿ ಬಿ. ಎಸ್ ಅನಿಲ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ವೇಣುಗೋಪಾಲ್ ಹಾಗೂ ಮುಖ್ಯ ಶಿಕ್ಷಕಿಯರಾದ ತನುಜಾ,  ಸುನಿತಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ರಮ್ಯಾ ನಿರೂಪಿಸಿ, ಮಿನು ಪೆರೇರ ಸ್ವಾಗತಿಸಿದರು. ರೋಹಿಣಿ ವಂದಿಸಿದರು.

ಉಕ್ಕುಂದ ಗ್ರಾಮದಲ್ಲಿ ಮಣ್ಣು ಮಾದರಿ ಸಂಗ್ರಹದ ವಿಧಾನ ಪ್ರಾತ್ಯಕ್ಷಿಕೆ

ಶಿವಮೊಗ್ಗ ಇಡುವಕ್ಕಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗು ಕೃಷಿ ಮಹಾವಿದ್ಯಾಲಯದ ಕೃಷಿ ವಿಸ್ತರಣಾ ಶಿಕ್ಷಣ ವಿಭಾಗ ಸಹಯೋಗದೊಂದಿಗೆ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ವಿದ್ಯಾರ್ಥಿಗಳಿಂದ ಭದ್ರಾವತಿ ತಾಲೂಕಿನ ಉಕ್ಕುಂದ ಗ್ರಾಮದ ಅನುಗೌಡರವರ ತೋಟದಲ್ಲಿ ಮಣ್ಣು ಮಾದರಿ ಸಂಗ್ರಹ ವಿಧಾನದ ಪ್ರಾತ್ಯಕ್ಷಿಕೆಯನ್ನು ಆಯೋಜಿಸಲಾಗಿತ್ತು. 
    ಭದ್ರಾವತಿ: ಶಿವಮೊಗ್ಗ ಇಡುವಕ್ಕಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗು ಕೃಷಿ ಮಹಾವಿದ್ಯಾಲಯದ ಕೃಷಿ ವಿಸ್ತರಣಾ ಶಿಕ್ಷಣ ವಿಭಾಗ ಸಹಯೋಗದೊಂದಿಗೆ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ವಿದ್ಯಾರ್ಥಿಗಳಿಂದ ಉಕ್ಕುಂದ ಗ್ರಾಮದ ಅನುಗೌಡರವರ ತೋಟದಲ್ಲಿ ಮಣ್ಣು ಮಾದರಿ ಸಂಗ್ರಹ ವಿಧಾನದ ಪ್ರಾತ್ಯಕ್ಷಿಕೆಯನ್ನು ಆಯೋಜಿಸಲಾಗಿತ್ತು. 
    ಮಣ್ಣು ಪರೀಕ್ಷೆಯ ಪ್ರಾಮುಖ್ಯತೆ, ಮಣ್ಣು ಮಾದರಿ ಸಂಗ್ರಹಿಸುವಾಗ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಹಾಗೂ ಮಣ್ಣು ಮಾದರಿ ಸಂಗ್ರಹ ಮಾಡುವ ಸಂದರ್ಭದಲ್ಲಿ ಬಳಸುವ ವಿಧಾನಗಳ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡಲಾಯಿತು.
    ಎಲ್ಲಾ ಬೆಳೆಗೂ ಶಿಫಾರಸ್ಸು ಮಾಡಿದ ಗೊಬ್ಬರದ ಪ್ರಮಾಣ ಒಂದೇ ರೀತಿ ಇರದ ಕಾರಣ ಮಣ್ಣು ಪರೀಕ್ಷೆ ಮಾಡಿಸಿ, ಮಣ್ಣಿನ ಫಲವತ್ತತೆಯ ಆಧಾರದ ಮೇಲೆ ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ಎಷ್ಟು ಗೊಬ್ಬರ ಕೊಡಬೇಕೆಂದು ತಿಳಿದು ಬರುತ್ತದೆ. ಕೆಲವೊಂದು ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ಮಣ್ಣಲ್ಲಿ ಸಿಗುತ್ತವೆ. ಅಂತಹ ಪೋಷಕಾಂಶಗಳನ್ನು ಮತ್ತೆ ಸೇರಿಸುವುದರಿಂದ ಹೆಚ್ಚಿನ ಗೊಬ್ಬರ ಹಾಕಿದಂತೆ ಆಗುತ್ತದೆ. ಹಣವು ವ್ಯರ್ಥವಾಗುತ್ತದೆ. ಈ ಹಿನ್ನಲೆಯಲ್ಲಿ ಮಣ್ಣಿನ ಫಲವತ್ತತೆ, ಇಳುವರಿ ಮತ್ತು ಆರ್ಥಿಕ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚು ರಾಸಾಯನಿಕ ಗೊಬ್ಬರ ಕೊಡುವುದಕ್ಕೂ ಮುಂಚೆ ಮಣ್ಣು ಪರೀಕ್ಷೆ ಮಾಡಿಸುವುದು ಮುಖ್ಯ ಎಂದು ಮಾಹಿತಿ ನೀಡಲಾಯಿತು.

ನ.೧೨ರಂದು ಕೆಡಿಪಿ ಸಭೆ

    ಭದ್ರಾವತಿ: ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ತಾಲೂಕು ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಮಿತಿ ಸಭೆ ನ.೧೨ರಂದು ಬೆಳಿಗ್ಗೆ ೧೧ ಗಂಟೆಗೆ ತಾಲೂಕು ಪಂಚಾಯಿತಿ ಕಛೇರಿ ಸಭಾಂಗಣದಲ್ಲಿ ನಡೆಯಲಿದೆ. 
    ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದಾರೆ. ಎಲ್ಲಾ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಏ.೧ ರಿಂದ ಸೆ.೩೦ರವರೆಗಿನ ಪ್ರಗತಿ ಪರಿಶೀಲನಾ ವರದಿ ಸಲ್ಲಿಸುವುದು. ಅಲ್ಲದೆ ಸಭೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೋರಿದ್ದಾರೆ. 

Friday, November 8, 2024

ಅಪ್ರಾಪ್ತ ಬಾಲಿಕಯ ಮೇಲೆ ಲೈಂಗಿಕ ದೌರ್ಜನ್ಯ : ೪ ವರ್ಷ ಕಠಿಣ ಜೈಲು ಶಿಕ್ಷೆ

ಭದ್ರಾವತಿ :  ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಎಫ್‌ಟಿಎಸ್‌ಸಿ-೧) ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ವ್ಯಕ್ತಿಯೋರ್ವನಿಗೆ ೪ ವರ್ಷ ಕಠಿಣ ಜೈಲು ಶಿಕ್ಷೆ ಹಾಗು ೫೧ ಸಾವಿರ ರು. ದಂಡ ವಿಧಿಸಿರುವ ಘಟನೆ ನಡೆದಿದೆ. 
        ಸಾಲಿನಲ್ಲಿ ಭದ್ರಾವತಿ ತಾಲೂಕಿನ ೪೩ ವರ್ಷದ ವ್ಯಕ್ತಿಯೊಬ್ಬರು ೯ ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ೨೦೨೩ರಲ್ಲಿ ಲೈಂಗಿಕ ದೌರ್ಜನ್ಯ ವೆಸಗಿದ್ದು, ಈ ಸಂಬಂಧ ನೊಂದ ಬಾಲಕಿ ನೀಡಿದ ದೂರಿನ ಮೇರೆಗೆ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಕಲಂ ೩೭೬(ಎ)(ಬಿ) ಐಪಿಸಿ ಮತ್ತು ಕಲಂ ೦೮ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. 
    ಅಂದಿನ ತನಿಖಾಧಿಕಾರಿಯಾಗಿದ್ದ ನಗರವೃತ್ತ ನಿರೀಕ್ಷಕ ಶಾಂತಿನಾಥ್‌ರವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಿಯ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಆರೋಪಿಯ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ,   ನ್ಯಾಯಾಧೀಶರಾದ ಜೆ.ಎಸ್ ಮೋಹನ್ ರವರು ನ.೭ ರಂದು ೪  ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ೫೧ ಸಾವಿರ  ದಂಡ, ದಂಡ ಕಟ್ಟಲು ವಿಫಲನಾದಲ್ಲಿ ೩ ತಿಂಗಳು ಸಾದಾ ಜೈಲು ಶಿಕ್ಷೆ ವಿಧಿಸಿದ್ದು, ಪರಿಹಾರ ರೂಪವಾಗಿ  ದಂಡದ ಮೊತ್ತದಲ್ಲಿ  ೫೦ ಸಾವಿರ ಮತ್ತು ಸರ್ಕಾರದಿಂದ ೨ ಲಕ್ಷ ರು. ಗಳನ್ನು  ನೊಂದ ಬಾಲಕಿಗೆ ನೀಡಲು ಆದೇಶಿಸಿರುತ್ತಾರೆ. ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ  ಸರ್ಕಾರಿ ಅಭಿಯೋಜಕ ಎಚ್.ಆರ್ ಶ್ರೀಧರ್‌ರವರು ವಾದ ಮಂಡಿಸಿದ್ದರು. 

ಸಸಿಗಳನ್ನು ನೆಡುವ ಮೂಲಕ ವಿಶಿಷ್ಟವಾಗಿ ಕನ್ನಡರಾಜ್ಯೋತ್ಸವ ಆಚರಣೆ

 ಹಲವು ವಿಭಿನ್ನ ರೀತಿಯ ಸಾಮಾಜಿಕ ಸೇವಾಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಶ್ರೀ ತಿರುಮಲ ಚಾರಿಟಬಲ್ ಫೌಂಡೇಷನ್ ವತಿಯಿಂದ ೬೯ನೇ ಕನ್ನಡ ರಾಜ್ಯೋತ್ಸವ, ಮಾಜಿ ರಾಷ್ಟ್ರಪತಿ, ಕ್ಷಿಪಣಿ ಜನಕ ದಿವಂಗತ ಎಪಿಜೆ ಅಬ್ದುಲ್ ಕಲಾಂರವರ ಜನ್ಮದಿನ ಹಾಗು ದೇಶದ ಪ್ರತಿಷ್ಠಿತ ಉದ್ಯಮಿ ದಿವಂಗತ ರತನ್ ಟಾಟಾರವರ ಪುಣ್ಯಸ್ಮರಣೆ ಭದ್ರಾವತಿ ನಗರದ ಬಿ.ಎಚ್ ರಸ್ತೆಯಲ್ಲಿ ಪರಿಸರ ಪ್ರೇಮಿಗಳೊಂದಿಗೆ ವಿಶಿಷ್ಟವಾಗಿ ಆಚರಿಸಲಾಯಿತು. 
    ಭದ್ರಾವತಿ: ಹಲವು ವಿಭಿನ್ನ ರೀತಿಯ ಸಾಮಾಜಿಕ ಸೇವಾಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಶ್ರೀ ತಿರುಮಲ ಚಾರಿಟಬಲ್ ಫೌಂಡೇಷನ್ ವತಿಯಿಂದ ೬೯ನೇ ಕನ್ನಡ ರಾಜ್ಯೋತ್ಸವ, ಮಾಜಿ ರಾಷ್ಟ್ರಪತಿ, ಕ್ಷಿಪಣಿ ಜನಕ ದಿವಂಗತ ಎಪಿಜೆ ಅಬ್ದುಲ್ ಕಲಾಂರವರ ಜನ್ಮದಿನ ಹಾಗು ದೇಶದ ಪ್ರತಿಷ್ಠಿತ ಉದ್ಯಮಿ ದಿವಂಗತ ರತನ್ ಟಾಟಾರವರ ಪುಣ್ಯಸ್ಮರಣೆ ನಗರದ ಬಿ.ಎಚ್ ರಸ್ತೆಯಲ್ಲಿ ಪರಿಸರ ಪ್ರೇಮಿಗಳೊಂದಿಗೆ ವಿಶಿಷ್ಟವಾಗಿ ಆಚರಿಸಲಾಯಿತು. 
    ಸುಮಾರು ೮೦ ಗಿಡಗಳನ್ನು ನೆಡುವ ಮೂಲಕ ಯುವ ಸಮುದಾಯಕ್ಕೆ ಪರಿಸರದ ಜಾಗೃತಿಯೊಂದಿಗೆ ಮುಂದಿನ ಪೀಳಿಗೆಗೆ ನಮ್ಮೆಲ್ಲರ ಕೊಡುಗೆಯನ್ನು ತಿಳಿಸಿಕೊಡಲಾಯಿತು.  ಅಲ್ಲದೆ ದೇಶಕ್ಕೆ ಎಪಿಜೆ ಅಬ್ದುಲ್ ಕಲಾಂರವರ ಕೊಡುಗೆಗಳನ್ನು  ಹಾಗು ಉದ್ಯಮ ಕ್ಷೇತ್ರದಲ್ಲಿ ರತನ್ ಟಾಟಾರವರ ಸಾಧನೆಗಳನ್ನು ಸ್ಮರಿಸಲಾಯಿತು. ಚಾರಿಟಬಲ್ ಟ್ರಸ್ಟ್ ವತಿಯಿಂದ ಹಲವಾರು ಸಮಾಜಮುಖಿ ಕಾರ್ಯಗಳನ್ನು ವಿಶಿಷ್ಟವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.  
    ರೋಟರಿ ಕ್ಲಬ್ ಅಧ್ಯಕ್ಷ  ರಾಘವೇಂದ್ರ ಉಪಾಧ್ಯಾಯ, ಕ್ರೈಸ್ತ ಮುಖಂಡ ಸೆಲ್ವರಾಜ್, ಮುಸ್ಲಿಂ ಧರ್ಮಗುರು ಸೈಯದ್ ಮುಜಾಹಿದ್ ರಜ್ವಿ, ಸಂಚಾರಿ ಪೊಲೀಸ್ ಠಾಣೆ ಸಿಬ್ಬಂದಿ, ಪರಿಸರ ಪ್ರೇಮಿ ಹಾಲೇಶಪ್ಪ,  ಮೈಸೂರು ಕಾಗದ ಕಾರ್ಖಾನೆ ನೊಂದ ನಿವೃತ್ತ ಕಾರ್ಮಿಕರ ಹೋರಾಟ ವೇದಿಕೆ ಪ್ರಧಾನ ಸಂಚಾಲಕ ಟಿ.ಜಿ ಬಸವರಾಜಯ್ಯ, ಶ್ರೀರಾಮ ಸೇನೆ ಮುಖಂಡ ಉಮೇಶ್, ಸಮಾಜ ಸೇವಕ ರಾಜು ನಾಯಕ್ ಕನ್ನಡಿಗ, ಸೂಡ ಸದಸ್ಯ ಎಚ್. ರವಿಕುಮಾರ್, ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಮುರುಗನ್, ಮೀನು ವ್ಯಾಪಾರಿ ಬಾಬು,  ದೈಹಿಕ ಶಿಕ್ಷಕ ಇಮ್ರಾನ್,  ತಿರುಮಲ ಚಾರಿಟಬಲ್ ಫೌಂಡೇಷನ್ ಸಂಸ್ಥಾಪಕ ಪ್ರಶಾಂತ್, ಪ್ರಮುಖರಾದ ಅಶೋಕ್, ಉಮಾಪತಿ, ತೀರ್ಥೇಶ್, ನರಸಿಂಹ, ನಾಗರಾಜ್ ದಾಸರಕಲ್ಲಹಳ್ಳಿ, ಜಮೀರ್, ಇಂದ್ರೇಶ್, ರತಿಲ್, ಕೌಶಿಕ್, ಪ್ರೀತು, ಹರೀಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.