Friday, November 22, 2024

ಉಪ ವಿಭಾಗಾಧಿಕಾರಿ ವಿರುದ್ಧ ಪಿ.ಟಿ.ಸಿ.ಎಲ್ ಕಾಯ್ದೆ ನಿರ್ಲಕ್ಷ, ಉಲ್ಲಂಘನೆ ಆರೋಪ

ಕ್ರಮಕ್ಕೆ ಆಗ್ರಹಿಸಿ ನ.೨೬ರಂದು ತಾಲೂಕು ಕಛೇರಿ ಮುಂಭಾಗ ಧರಣಿ ಸತ್ಯಾಗ್ರಹ 

 
ಭದ್ರಾವತಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಮಾತನಾಡಿದರು
   ಭದ್ರಾವತಿ : ಪಿ.ಟಿ.ಸಿ.ಎಲ್ ಕಾಯ್ದೆ ನಿರ್ಲಕ್ಷಿಸುವ ಜೊತೆಗೆ ಉಲ್ಲಂಘನೆ ಮಾಡುತ್ತಿರುವ ಹಾಗು ಮನಸ್ಸಿಗೆ ಬಂದಂತೆ ಆದೇಶಿಸುತ್ತಿರುವ ಶಿವಮೊಗ್ಗ ಉಪವಿಭಾಗಾಧಿಕಾರಿ ಸತ್ಯನಾರಾಯಣರವರ ವಿರುದ್ಧ ಜಾತಿನಿಂದನೆ(ಅಟ್ರಾಸಿಟಿ) ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಆಗ್ರಹಿಸುವ ಜೊತೆಗೆ ನ.೨೬ರಂದು ಬೆಳಿಗ್ಗೆ ೧೧ ಗಂಟೆಗೆ ಈ ಸಂಬಂಧ ತಾಲೂಕು ಕಛೇರಿ ಮುಂಭಾಗ ಪ್ರತಿಭಟನಾ ಧರಣಿ ಸತ್ಯಾಗ್ರಹ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. 
    ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಿ.ಟಿ.ಸಿ.ಎಲ್ ಕಾಯ್ದೆ ಪ್ರಕಾರ ಪ.ಜಾ/ವರ್ಗದ ಜನರಿಗೆ ಸರ್ಕಾರ ನೀಡಿದಂತಹ ಜಮೀನು ಸರ್ಕಾರದ ಅನುಮತಿ ಇಲ್ಲದೆ ಮಾರಾಟವಾಗಲೀ, ಭೋಗ್ಯವಾಗಲೀ ಇನ್ನಿತರೆ ಯಾವುದೇ ರೂಪದಲ್ಲಿ ಮಾರಾಟ ಮಾಡುವುದು ನಿಷೇಧವಾಗಿದೆ. ಒಂದು ವೇಳೆ ಸರ್ಕಾರದ ಅನುಮತಿ ಪಡೆಯದೆ ಪರಬಾರೆ ಮಾಡಿದರೆ ಪಿ.ಟಿ.ಸಿ.ಎಲ್ ಕಾಯ್ದೆಯ ಪ್ರಕಾರ ಪುನಃ ಮೂಲ ಮಂಜೂರುದಾರರಿಗೆ ಜಮೀನು ಹಿಂತಿರುಗಿಸಿ ಅವರ ಹೆಸರಿಗೆ ವರ್ಗಾವಣೆ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಆದರೆ ಬಹುತೇಕ ಪ್ರಕರಣಗಳಲ್ಲಿ ಅಧಿಕಾರಿಗಳು ಈ ಕಾಯ್ದೆ ಕುರಿತು ಸರಿಯಾಗಿ ತಿಳಿದುಕೊಳ್ಳದೆ ಮನಸ್ಸಿಗೆ ಬಂದಂತೆ ತೀರ್ಪು ನೀಡಿ ಆದೇಶಿಸುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದರು. 
    ತಾಲೂಕಿನ ಹೆಬ್ಬಂಡಿ ಲಕ್ಷ್ಮೀಪುರದ ನಿವಾಸಿ ವೆಂಕಟರಾಮಣ್ಣ ಬಿನ್ ವೆಂಕಟಸ್ವಾಮಯ್ಯ ಎಂಬ ಭೋವಿ ಜಾತಿಯ ಇವರುಗಳ ಜಮೀನು ೧.೨೦ ಗುಂಟೆ ಸರ್ಕಾರವು ದರಕಾಸ್ತ್‌ನಲ್ಲಿ ಮಂಜೂರು ಮಾಡಿದ್ದು, ಲಕ್ಷ್ಮೀಪುರದ ನಿವಾಸಿ ಬ್ಯಾಡ್ ತಿಮ್ಮೇಗೌಡ ಎಂಬ ವ್ಯಕ್ತಿ ೨೦೦೦ ರು. ಕೈ ಸಾಲಕ್ಕೆ ಸದರಿ ಹಣಕ್ಕೆ ಆಧಾರವಾಗಿ ಜಮೀನನ್ನು ಭೋಗ್ಯಕ್ಕೆ ಪಡೆದಿದ್ದು, ನಂತರ ಬ್ಯಾಡ್ ತಿಮ್ಮೇಗೌಡ ಲಕ್ಷ್ಮೀಪುರ ಗ್ರಾಮದ ನಿವಾಸಿ ಕೆಂಪಮ್ಮ ಕೋಂ ಸಿದ್ದೇಗೌಡ ರವರ ಹೆಸರಿಗೆ ಅಕ್ರಮವಾಗಿ ಮಾರಾಟ ಮಾಡಿರುತ್ತಾರೆ. ಈ ವಿಚಾರವಾಗಿ ಪ್ರಶ್ನೆ ಮಾಡಿದ ವೆಂಕಟರಾಮಣ್ಣನವರ ಮೇಲೆ ಅನೇಕ ಬಾರಿ ಹಲ್ಲೆ ಮಾಡಿ ದೌರ್ಜನ್ಯ ನಡೆಸಿರುತ್ತಾರೆ ಎಂದು ಆರೋಪಿಸಿದರು. 
    ಶ್ರೀಮಂತರಾದ ಬ್ಯಾಡ್ ತಿಮ್ಮೇಗೌಡ ದೌರ್ಜನ್ಯ ದಬ್ಬಾಳಿಕೆಯಿಂದ ಜಮೀನನ್ನು ಪಡೆದಿದ್ದರಿಂದ ಇವರ ವಿರುದ್ಧ ೧೯೭೮ರ ಪಿ.ಟಿ.ಸಿ.ಎಲ್ ಕಾಯ್ದೆಯ ಪ್ರಕಾರ ಮಾನ್ಯ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ೧೯೯೩ ರಲ್ಲಿ ವೆಂಕಟರಾಮಣ್ಣ ರವರ ಪರವಾಗಿ ಆದೇಶವಾಗಿ ಸ್ವತಃ ಅಂದಿನ ಉಪವಿಭಾಗಾಧಿಕಾರಿಗಳು ಜಮೀನು ಮತ್ತು ಜಮೀನಿನಲ್ಲಿ ಇದ್ದ ಮನೆಯನ್ನು ಬಿಡಿಸಿಕೊಟ್ಟಿರುತ್ತಾರೆ. ನಂತರದಲ್ಲಿ ಕೆಂಪಮ್ಮ ಮತ್ತು ಸಿದ್ದೇಗೌಡ ರವರು ಎ.ಸಿ/ಡಿ.ಸಿ ಕೋರ್ಟ್, ಸುಪ್ರೀಂ ಕೋರ್ಟ್ ವರೆಗೂ ಪ್ರಕರಣ ಮುಂದುವರೆಸಿಕೊಂಡು ಹೋಗಿದ್ದು, ಆದರೆ ಕೆಂಪಮ್ಮರವರ ವಿರುದ್ಧ ಖುಲಾಸೆಗೊಂಡಿರುತ್ತದೆ ಎಂದರು. 
    ವೆಂಕಟರಾಮಣ್ಣನವರು ಅವರ ಮಕ್ಕಳಾದ ಲಕ್ಷ್ಮಮ್ಮ, ನಾಗರತ್ನ, ಜಯಮ್ಮ, ಮತ್ತು ಸೀನಪ್ಪ ಎಂಬುವವರಿಗೆ ವಿಲ್ ರಿಜಿಸ್ಟರ್ ಮಾಡಿಸಿದ್ದರು. ಆದರೆ ಖಾತೆ ಮಾಡುವ ಮುನ್ನವೆ ಜಮೀನು ಉಳುಮೆ ಮಾಡಲು ಬಿಡದೆ ಕೆಂಪಮ್ಮ ಮತ್ತು ಮಕ್ಕಳು ಪದೇ ಪದೇ ಗಲಾಟೆ ನಡೆಸಿ ಜಮೀನಿಗೆ ಬಾರದಂತೆ ತೊಂದರೆ ನೀಡುತ್ತಿದ್ದರು. ಜಮೀನು ಸಾಗುವಳಿ ಮಾಡುತ್ತಿದ್ದಾಗ ಪದೇ ಪದೇ ಕೆಂಪಮ್ಮ ಮತ್ತು ಅವರ ಮಕ್ಕಳು ನಾಗರಾಜ. ಗೌತಮಿ, ಬೇಬಿಯಮ್ಮ. ರಾಘವೇಂದ್ರ, ದೇವರಾಜ ಸೇರಿದಂತೆ ಇನ್ನಿತರರು
ಹಲ್ಲೆ ನಡೆಸಿ ಜಾತಿ ನಿಂದನೆ ಮಾಡುತ್ತಿದ್ದರು. ಈ ವೇಳೆ ೨ ಬಾರಿ ನ್ಯೂಟೌನ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆ. ೧೨ ರಂದು ತಹಶೀಲ್ದಾರ್, ಆರ್.ಐ/ವಿ.ಎ ಸರ್ವೆ ಇಲಾಖೆಯ ಅಧಿಕಾರಿಗಳು, ನ್ಯೂಟೌನ್ ಪೋಲಿಸರು ಸುಮಾರು ೨೦ ಮಂದಿ ವೆಂಕಟರಾಮಣ್ಣರವರ ಮಕ್ಕಳ ರಕ್ಷಣೆಗಾಗಿ ನಿಂತು ಜಮೀನಿನಲ್ಲಿ ಕೆಲಸ ಮಾಡಲು ರಕ್ಷಣೆ ನೀಡಿ ಎದುರುದಾರರಿಗೆ ಯಾವುದೇ ತೊಂದರೆ ನೀಡದಂತೆ ಎಚ್ಚರಿಸಿದರು. ಈ ಬಗ್ಗೆ ವೀಡಿಯೋ ಸಹ ದಾಖಲಾಗಿರುತ್ತದೆ. ಮತ್ತೊಮ್ಮೆ ಆ.೨೦ ರಂದು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಪ್ರವೇಶ ಮಾಡಿ ಬಿಸಿಲಿನ ತಾಪಕ್ಕೆ ಕಟ್ಟಿಕೊಂಡಿದ್ದ ತಾರ್ಪಲ್/ಗೂಟಗಳನ್ನು ಕಿತ್ತುಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದು, ಈ ಬಗ್ಗೆ ಮತ್ತೊಮ್ಮೆ ದೂರು ದಾಖಲಾಗಿರುತ್ತದೆ ಎಂದರು. 
     ಒಮ್ಮೆ ಪಿ.ಟಿ.ಸಿಎಲ್ ಕಾಯ್ದೆಯ ಪ್ರಕಾರ ಬಿಡಿಸಿಕೊಟ್ಟ ಜಮೀನಿನ ವಿಚಾರದಲ್ಲಿ ಎ.ಸಿ/ಡಿ.ಸಿ/ತಹಶೀಲ್ದಾರ್ ಆಗಲೀ ತೀರ್ಪು ನೀಡಲು ಅವಕಾಶ ಇರುವುದಿಲ್ಲ. ಆದರೆ ಉಪವಿಭಾಗಾಧಿಕಾರಿ ಜಿ.ಎಚ್ ಸತ್ಯನಾರಾಯಣರವರು ಎದುರುದಾರರ ಪರವಾಗಿ ಈ ಪ್ರಕರಣದಲ್ಲಿ ಕಂದಾಯ ಅಧಿಕಾರಿಗಳು ಮಧ್ಯಸ್ಥಿಕೆ ವಹಿಸಬಾರದು ಎಂದು ತಿಳುವಳಿಕೆ ನೀಡಿದ್ದಾರೆ. ಇದೆ ಉಪವಿಭಾಗಾಧಿಕಾರಿ ಜ.೨೫ ರಂದು ಸೀನಪ್ಪ ರವರ ಕುಟುಂಬಕ್ಕೆ ಪೋಲಿಸ್ ರಕ್ಷಣೆ ನೀಡಬೇಕೆಂದು ಸಹ ತಿಳುವಳಿಕೆ ನೀಡಿದ್ದಾರೆ. ಎರಡನ್ನೂ ಕೂಲಂಕುಶವಾಗಿ ಪರಿಶೀಲಿಸದೆ ಪಿ.ಟಿ.ಸಿ.ಎಲ್ ಕಾಯ್ದೆ ನಿರ್ಲಕ್ಷಿಸುವ ಜೊತೆಗೆ ಉಲ್ಲಂಘನೆ ಮಾಡುತ್ತಿರುವ ಹಾಗು ಮನಸ್ಸಿಗೆ ಬಂದಂತೆ ಆದೇಶಿಸುತ್ತಿರುವ ಇವರ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಹಿನ್ನಲೆಯಲ್ಲಿ ಪ್ರತಿಭಟನಾ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದರು. 
     ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಬ್ರಹ್ಮಲಿಂಗಯ್ಯ, ಲಕ್ಷ್ಮಮ್ಮ, ಜಯಮ್ಮ, ನಾಗರತ್ನಮ್ಮ, ಸೀನಪ್ಪ, ರಾಜುಸ್ವಾಮಿ, ವೀರೇಶ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
 

ರಾಜಮ್ಮ ನಿಧನ

ರಾಜಮ್ಮ
   ಭದ್ರಾವತಿ: ತಾಲೂಕಿನ ನಿವಾಸಿ, ರಾಜ್ಯ ಆದಿ ದ್ರಾವಿಡ ತಮಿಳ್ ಹಿತರಕ್ಷಣಾ ಸಮಿತಿ ರಾಜ್ಯ ಉಪಾಧ್ಯಕ್ಷ ಇ. ವಿಶ್ವನಾಥ್‌ರವರ ಮಾತೃಶ್ರೀ ರಾಜಮ್ಮ(೮೦) ಗುರುವಾರ ನಿಧನ ಹೊಂದಿದರು. 
   ಇವರಿಗೆ ೫ ಜನ ಮಕ್ಕಳಿದ್ದು, ವಯೋಸಹಜವಾಗಿ ನಿಧನ ಹೊಂದಿದ್ದಾರೆ. ಇವರ ಅಂತ್ಯಕ್ರಿಯೆ ಶುಕ್ರವಾರ ಹಿರಿಯೂರಿನ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ರಾಜ್ಯ ಆದಿ ದ್ರಾವಿಡ ತಮಿಳ್ ಹಿತರಕ್ಷಣಾ ಸಮಿತಿ ವತಿಯಿಂದ ಇವರ ನಿಧನಕ್ಕೆ ಸಂತಾಪ ಸೂಚಿಸಲಾಗಿದೆ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಜೆ. ಸೆಂದಿಲ್ ಕುಮಾರ್ ತಿಳಿಸಿದ್ದಾರೆ. 
 

Thursday, November 21, 2024

ದಲಿತ ಮುಖಂಡ ಕುಪ್ಪಸ್ವಾಮಿ ನಿಧನ

ಕುಪ್ಪಸ್ವಾಮಿ
ಭದ್ರಾವತಿ: ನಗರದ ಬಿ.ಎಚ್ ರಸ್ತೆ, ಅಂಬೇಡ್ಕರ್ ನಗರದ ನಿವಾಸಿ, ದಲಿತ ಮುಖಂಡ ಕುಪ್ಪಸ್ವಾಮಿ(೬೨) ನಿಧನ ಹೊಂದಿದರು. 
    ಪತ್ನಿ, ಪುತ್ರಿ ಹಾಗು ಪುತ್ರ ಇದ್ದಾರೆ. ಇವರ ಅಂತ್ಯಕ್ರಿಯೆ ಗುರುವಾರ ಲೋಯರ್ ಹುತ್ತಾ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ಸುಮಾರು ೩ ದಶಕಗಳಿಂದ ಕರ್ನಾಟಕ ದಲಿತ ಸಂಘರ್ಷ ಸಮಿತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. 
    ಇವರ ನಿಧನಕ್ಕೆ ದಲಿತ ಸಂಘರ್ಷ ಸಮಿತಿ ಮುಖಂಡರಾದ ಸತ್ಯ ಭದ್ರಾವತಿ, ಚಿನ್ನಯ್ಯ ಸೇರಿದಂತೆ ಇನ್ನಿತರರ ಗಣ್ಯರು ಸಂತಾಪ ಸೂಚಿಸಿದ್ದಾರೆ. 

ಶಾಸ್ತ್ರ ಹೇಳುವ ನೆಪದಲ್ಲಿ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ, ನಗದು ವಂಚನೆ

ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸುಮಾರು ೪ ತಿಂಗಳ ನಂತರ ದೂರು ದಾಖಲು 

    ಭದ್ರಾವತಿ :  ಶಾಸ್ತ್ರ ಹೇಳುವ ನೆಪದಲ್ಲಿ ಮನೆಗೆ ಆಗಮಿಸಿ ಲಕ್ಷಾಂತರ ರು. ನಗದು, ಚಿನ್ನಾಭರಣ ಪಡೆದು ವಂಚಿಸಿರುವ ಘಟನೆ ತಾಲೂಕಿನ ಎರಡು ಗ್ರಾಮಗಳಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 
    ತಾಲೂಕಿನ ಹಳೇ ಕೂಡ್ಲಿಗೆರೆ ಗ್ರಾಮದ ಎಚ್. ಮಹೇಶ್ ಎಂಬುವರ ಮನೆಗೆ ಯಾರೋ ಒಬ್ಬ ವ್ಯಕ್ತಿ ಶಾಸ್ತ್ರ ಹೇಳುವವನಾಗಿ ಪರಿಚಯವಾಗಿ ಮನೆಯ ಸಮಸ್ಯೆಯನ್ನು ಬಗೆಹರಿಸಿಕೊಡುವುದಾಗಿ ನಂಬಿಸಿ ಜು.೨೨ರಂದು ಆಗಮಿಸಿದ್ದು,  ಮನೆಯವರಿಂದ ಸುಮಾರು ೩ ಲಕ್ಷ ರು. ಮೌಲ್ಯದ ೪೭ ಗ್ರಾಂ. ತೂಕದ ಆಭರಣಗಳನ್ನು ತೆಗೆದುಕೊಂಡು ಪೆಟ್ಟಿಗೆಯಲ್ಲಿಟ್ಟಂತೆ ಮಾಡಿ ಮನೆಯ ಕೋಣೆಯಲ್ಲಿ ಇಟ್ಟು ತಾನೊಬ್ಬನೆ ಹೋಗಿ ಪೂಜೆ ಮಾಡಿ ೪೧ ದಿನಗಳ ಬಳಿಕ ಬೀಗವನ್ನು ತೆಗೆಯಬೇಕು ಹಾಗೂ ಪ್ರತಿನಿತ್ಯ ಪೂಜೆ ಮಾಡುವಂತೆ ತಿಳಿಸಿರುತ್ತಾರೆ. ೪೧ ದಿನಗಳ ನಂತರ ಮನೆಯವರು ಆ ವ್ಯಕ್ತಿಗೆ ಪೋನ್ ಮಾಡಿದಾಗ ಪೋನ್ ಸ್ವಿಚ್ ಆಫ್ ಆಗಿದ್ದು, ಅನುಮಾನದ ಮೇರೆಗೆ ಪೆಟ್ಟಿಗೆಯ ಬೀಗ ತೆಗೆದಾಗ ಯಾವುದೋ ನಕಲಿ ಆಭರಣಗಳನ್ನು ಇಟ್ಟು ಮೋಸಮಾಡಿರುವುದು ತಿಳಿದು ಬಂದಿದೆ. 
    ಈ ಹಿನ್ನಲೆಯಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಳುವಾದ ಆಭರಣಗಳನ್ನು ಹಾಗೂ ೧.೫ ಲಕ್ಷ ರು. ನಗದು ಹಣ ವಾಪಸ್ ದೊರಕಿಸಿಕೊಡಬೇಕಾಗಿ ನ.೨೦ರಂದು ದೂರು ನೀಡಲಾಗಿದೆ. 
    ಮತ್ತೊಂದು ಪ್ರಕರಣದಲ್ಲಿ ತಾಲೂಕಿನ ಅತ್ತಿಗುಂದ ಗ್ರಾಮದ  ದೇವೇಂದ್ರಪ್ಪ  ಎಂಬುವರ ಮನೆಗೆ  ಯಾರೋ ಒಬ್ಬ ವ್ಯಕ್ತಿ ಶಾಸ್ತ್ರ ಹೇಳುವವನಾಗಿ ಪರಿಚಯವಾಗಿದ್ದು, ನಿಮ್ಮ ಮನೆಯ ಎಲ್ಲಾ ಸಮಸ್ಯೆ ಬಗೆಹರಿಸಲು ಪೂಜೆ ಮಾಡುವುದಾಗಿ ಅದಕ್ಕಾಗಿ ೪೦ ತೊಲ ಬಂಗಾರ ಹಾಗು ನಗದು ಹಣ ಪೂಜೆಗೆ ಇಡಲು ತಿಳಿಸಿರುತ್ತಾನೆ. ಆತನನ್ನು ನಂಬಿ ಮನೆಯವರು ಬಂಗಾರವನ್ನು ನೀಡಿದ್ದಾರೆ.  ಮನೆಯ ಕೋಣೆಯಲ್ಲಿ ಈತನೊಬ್ಬನೆ ಹೋಗಿ ಪೂಜೆ ಮಾಡಿದ್ದು, ಬಂಗಾರವನ್ನು ಪೆಟ್ಟಿಗೆಯಲ್ಲಿಟ್ಟು ಬೀಗ ಹಾಕಿ ೪೮ ದಿನಗಳ ಕಾಲ ಪೂಜೆಮಾಡಬೇಕು ಹಾಗು ಅಲ್ಲಿಯವರೆಗೂ ಯಾರೂ ಬೀಗವನ್ನು ತೆಗೆಯಬಾರದಾಗಿ ತಿಳಿಸಿರುತ್ತಾನೆ. ೪೮ ದಿನಗಳ ನಂತರ ಮನೆಯವರು ಈತನಿಗೆ ಫೋನ್ ಮಾಡಲಾಗಿ ಫೋನ್ ಸ್ವಿಚ್ ಆಫ್ ಬಂದಿದ್ದು, ಅನುಮಾನದ ಮೇರೆಗೆ ಬೀಗವನ್ನು ತೆಗೆದಾಗ ಪೆಟ್ಟಿಗೆ ಖಾಲಿ ಇದ್ದು, ಮೋಸ ಹೋಗಿರುವುದು ತಿಳಿದು ಬಂದಿರುತ್ತದೆ.
    ಈ ಹಿನ್ನಲೆಯಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಳುವಾದ ಸುಮಾರು ೨೩.೧೦ ಲಕ್ಷ ರು. ಮೌಲ್ಯದ ಆಭರಣಗಳನ್ನು ಹಾಗೂ ೨.೨೫ ಲಕ್ಷ ರು. ನಗದು ದೊರಕಿಸಿಕೊಡಬೇಕಾಗಿ ನ.೨೦ರಂದು ದೂರು ನೀಡಲಾಗಿದೆ.  

ನ.೨೨ರಂದು ಕನ್ನಡ ರಾಜ್ಯೋತ್ಸವ

ಭದ್ರಾವತಿ: ನಗರದ ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ನ.೨೨ರಂದು ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಸಂಜೆ ೬ ಗಂಟೆಗೆ  ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. 
ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್, ಸಂಘದ ಗೌರವಾಧ್ಯಕ್ಷ ಮೇಜರ್ ಡಾ. ವಿಕ್ರಮ್ ಕೆದ್ಲಾಯ ಸೇರಿದಂತೆ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿಕೊಡುವಂತೆ ಸಂಘದ ಕಾರ್ಯದರ್ಶಿ ಕೋರಿದ್ದಾರೆ. 

ಮಕ್ಕಳು ತಮ್ಮಲ್ಲಿನ ಪ್ರತಿಭೆಗಳ ಮೂಲಕ ಗುರು, ಹಿರಿಯರ ಮಾರ್ಗದರ್ಶನ, ಸಹಕಾರದಲ್ಲಿ ಗುರಿ ತಲುಪಿ : ಸಿ.ಎನ್ ಉಮೇಶ್

ಭದ್ರಾವತಿ ತಾಲೂಕಿನ ಶ್ರೀಶಾ ಕಲಾ ವೇದಿಕೆ, ಶಂಕರಘಟ್ಟ ವತಿಯಿಂದ ೬೯ನೇ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಪ್ರಯುಕ್ತ ಬಿ.ಆರ್ ಪ್ರಾಜೆಕ್ಟ್ ಸರ್ಕಾರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಪ್ರಮುಖರಾದ ದಾಳೇಗೌಡ, ಸಿ.ಎನ್ ಉಮೇಶ್, ಶ್ರೀಧರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 
    ಭದ್ರಾವತಿ: ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ತಮ್ಮಲ್ಲಿನ ಪ್ರತಿಭೆಗಳ ಮೂಲಕ ಗುರು, ಹಿರಿಯರ ಮಾರ್ಗದರ್ಶನ, ಸಹಕಾರ ಪಡೆದು ಗುರಿ ತಲುಪಬೇಕೆಂದು ಸಿರಗನ್ನಡ ವೇದಿಕೆ ರಾಜ್ಯ ಸಮಿತಿ ಉಪಾಧ್ಯಕ್ಷ ಸಿ.ಎನ್ ಉಮೇಶ್ ಹೇಳಿದರು. 
    ತಾಲೂಕಿನ ಶ್ರೀಶಾ ಕಲಾ ವೇದಿಕೆ, ಶಂಕರಘಟ್ಟ ವತಿಯಿಂದ ೬೯ನೇ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಪ್ರಯುಕ್ತ ಬಿ.ಆರ್ ಪ್ರಾಜೆಕ್ಟ್ ಸರ್ಕಾರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 
    ಮಕ್ಕಳು ಚನ್ನಾಗಿ ಓದಿ ವಿದ್ಯಾವಂತರಾಗಿ, ಪಾಠ, ಪಠ್ಯೇತರ ಚಟುವಟಿಕೆಗಳ ಜೊತೆಗೆ ತಮ್ಮಲ್ಲಿನ ಪ್ರತಿಭೆ ಮೂಲಕ ಆಸಕ್ತಿ ಇರುವಂತಹ, ತಮಗೆ ತಿಳಿದಿರುವಂತಹ ಕ್ಷೇತ್ರದಲ್ಲಿಯೇ ಮುಂದುವರೆಯಬೇಕು. ಆ ಮೂಲಕ ದೇಶಕ್ಕೆ, ನಾಡಿಗೆ ಕೀರ್ತಿ ತಂದಿರುವಂತಹ ದಿಜ್ಜಗರ ಸಾಲಿನಲ್ಲಿ ನೀವು ಒಬ್ಬರಾಗಬೇಕೆಂದರು.  
    ಕಾರ್ಯಕ್ರಮದಲ್ಲಿ ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾದ ೧ ರಿಂದ ೮ ನೇ ತರಗತಿ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ಹಾಗೂ ಕ್ರೀಡೆಗಳಲ್ಲಿ ಭಾಗವಹಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾದ ಮತ್ತು ಕನ್ನಡದಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ನೀಡಿ ಸನ್ಮಾನಿಸಲಾಯಿತು. 
   ನಿವೃತ್ತ ಅಭಿಯಂತರ, ಪತ್ರ ಸಂಸ್ಕೃತಿ ಸಂಸ್ಥಾಪಕ ದಾಳೇಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀಶಾ ಕಲಾ ವೇದಿಕೆ ಗೌರವಾಧ್ಯಕ್ಷ ಶ್ರೀಧರ್ ಉಪಸ್ಥಿತರಿದ್ದರು. 
    ವಿದ್ಯಾರ್ಥಿಗಳಾದ ರಕ್ಷಾ ಮತ್ತು ಹಿತಾ ಪ್ರಾರ್ಥಿಸಿ, ಶಿಕ್ಷಕಿ ರಂಜಿತಾ ಕಾರ್ಯಕ್ರಮ ನಿರೂಪಿಸಿದರು. ಆಶಾ ಶ್ರೀಧರ್ ವಂದಿಸಿದರು. ದಾಳೇಗೌಡ ದಂಪತಿ ಹಾಗು ಶಾಲೆಯ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. 

Wednesday, November 20, 2024

ಗಾಂಜಾ ಸೇವನೆ : ಪ್ರಕರಣ ದಾಖಲು


    ಭದ್ರಾವತಿ: ಮಾದಕ ವಸ್ತು ಗಾಂಜಾ ಸೇವನೆ ಮಾಡಿದ್ದ ವ್ಯಕ್ತಿಯೋರ್ವನನ್ನು ನಗರಸಭೆ ವ್ಯಾಪ್ತಿಯ ಬೊಮ್ಮನಕಟ್ಟೆ ವೃತ್ತದ ಬಳಿ ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ನ್ಯಾಯಾಲಯದ ಅನುಮತಿ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಘಟನೆ ನಡೆದಿದೆ. 
    ಪೇಪರ್‌ಟೌನ್ ಪೊಲೀಸ್ ಠಾಣೆ ಸಿಬ್ಬಂದಿ ಮಂಜುನಾಥ ಮಳ್ಳಿ ನ.೧೭ರಂದು ರಾತ್ರಿ ೭ ಗಂಟೆ ಸಮಯದಲ್ಲಿ ಗಸ್ತು ಕರ್ತವ್ಯದಲ್ಲಿದ್ದಾಗ ವ್ಯಕ್ತಿಯೋರ್ವ ಮಾದಕ ವಸ್ತು ಸೇವನೆ ಮಾಡಿರುವಂತೆ ಕಂಡು ಬಂದಿದ್ದು, ಈ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡಬಹುದೆಂಬ ಮುನ್ನಚ್ಚರಿಕೆಯಿಂದ ವಶಕ್ಕೆ ಪಡೆದು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿ ಮಾದಕ ವಸ್ತು ಗಾಂಜಾ ಸೇವನೆ ದೃಢಪಟ್ಟ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
: 9482007466