Thursday, December 26, 2024

ಮಾಡೆಲ್ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿಗೆ ನೂತನ ನಿರ್ದೇಶಕರು

    ಭದ್ರಾವತಿ : ಹಳೇನಗರದ ಮಾಡೆಲ್ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿಗೆ ನೂತನವಾಗಿ ೧೨ ಮಂದಿ ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. 
    ಈ ಕುರಿತು ಡಿ.೨೪ರಂದು ಚುನಾವಣಾಧಿಕಾರಿ ಅವಿರೋಧ ಆಯ್ಕೆ ಘೋಷಿಸಿದ್ದಾರೆ. ಸಾಮಾನ್ಯ ಸ್ಥಾನದಿಂದ ಸಿದ್ಧಾರೂಢನಗರದ ನಿವಾಸಿ ವಿಶ್ವನಾಥ ಕೋಠಿ, ನ್ಯೂಕಾಲೋನಿ ನಿವಾಸಿ ಜಿ.ಟಿ ಬಸವರಾಜಪ್ಪ, ಹುತ್ತಾ ಕಾಲೋನಿ, ಸಹ್ಯಾದ್ರಿ ಬಡಾವಣೆ ನಿವಾಸಿ  ಕೆ.ಎನ್ ಭೈರಪ್ಪಗೌಡ, ಜನ್ನಾಪುರ ಮರಾಠ ಬೀದಿ ನಿವಾಸಿ ಟಿ.ಎನ್ ರಮೇಶ್, ಸಿದ್ಧಾರೂಢ ನಗರದ ನಿವಾಸಿ ಬಿ.ಪಿ ಶಂಕರ್, ಜನ್ನಾಪುರ ಕೆ.ಸಿ ರಸ್ತೆ ನಿವಾಸಿ ನರಸಿಂಹಸ್ವಾಮಿ ಮತ್ತು ಹೊಸಮನೆ ಮುಖ್ಯರಸ್ತೆ ವಿನಾಯಕ ಚಿತ್ರಮಂದಿರದ ಮುಂಭಾಗದ ನಿವಾಸಿ ಎಂ.ಎನ್ ಸತೀಶ್, ಪರಿಶಿಷ್ಟ ಜಾತಿ ಸ್ಥಾನದಿಂದ ಗೋಲ್ಡನ್ ಜ್ಯೂಬಿಲಿ ನಿವಾಸಿ ಎಂ. ನಾಗರಾಜ, ಪ್ರವರ್ಗ ಎ ಸ್ಥಾನದಿಂದ ಅಪ್ಪರ್ ಹುತ್ತಾ ನಿವಾಸಿ ಸಣ್ಣಯ್ಯ, ಪ್ರವರ್ಗ ಬಿ ಸ್ಥಾನದಿಂದ ತಾಲೂಕಿನ ಗೌರಾಪುರ ಗ್ರಾಮದ ನಿವಾಸಿ ಸಿ.ಆರ್ ಶಿವರಾಮು, ಮಹಿಳಾ ಮೀಸಲು ಸ್ಥಾನದಿಂದ ನ್ಯೂಕಾಲೋನಿ ನಿವಾಸಿ ಉಮಾ ರಮೇಶ್ ಹಾಗು ಜನ್ನಾಪುರ ನಿವಾಸಿ ಟಿ.ಎಸ್ ವಿಜಯಲಕ್ಷ್ಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಜೀವ ಸಂಜೀವಿನಿ ಸ್ವಯಂಪ್ರೇರಿತ ರಕ್ತ ಕೇಂದ್ರ ಉದ್ಘಾಟನೆ

ಭದ್ರಾವತಿ ನಗರದ ಬಿ.ಎಚ್ ರಸ್ತೆ, ಎಸ್.ಎಸ್ ಕಾಂಪ್ಲೆಕ್ಸ್(ನಮ್ಮ ಬಜಾರ್) ಮೊದಲನೇ ಮಹಡಿಯಲ್ಲಿ ನೂತನವಾಗಿ ಆರಂಭಗೊಂಡಿರುವ ಜೀವ ಸಂಜೀವಿನಿ ಸ್ವಯಂಪ್ರೇರಿತ ರಕ್ತ ಕೇಂದ್ರ ಗುರುವಾರ ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಶ್ರೀ ಡಾ. ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. 
    ಭದ್ರಾವತಿ : ನಗರದ ಬಿ.ಎಚ್ ರಸ್ತೆ, ಎಸ್.ಎಸ್ ಕಾಂಪ್ಲೆಕ್ಸ್(ನಮ್ಮ ಬಜಾರ್) ಮೊದಲನೇ ಮಹಡಿಯಲ್ಲಿ ನೂತನವಾಗಿ ಆರಂಭಗೊಂಡಿರುವ ಜೀವ ಸಂಜೀವಿನಿ ಸ್ವಯಂಪ್ರೇರಿತ ರಕ್ತ ಕೇಂದ್ರ ಗುರುವಾರ ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಶ್ರೀ ಡಾ. ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. 
    ನಗರದಲ್ಲಿ ತುರ್ತು ಸಂದರ್ಭದಲ್ಲಿ ರಕ್ತ ಕೇಂದ್ರದ ಅವಶ್ಯಕತೆ ಇದ್ದು, ಪ್ರಸ್ತುತ ಶಿವಮೊಗ್ಗದಲ್ಲಿರುವ ವಿವಿಧ ರಕ್ತ ನಿಧಿ ಕೇಂದ್ರಗಳಿಂದ ತುರ್ತು ಸಂದರ್ಭದಲ್ಲಿ ರಕ್ತ ಪೂರೈಕೆ ಮಾಡಿಕೊಳ್ಳಲಾಗುತ್ತಿದೆ. ಇದೀಗ ಸಿರಿ ವೆಲ್‌ಫೇರ್ ಫೌಂಡೇಷನ್‌ರವರು ರಕ್ತ ಕೇಂದ್ರದ ಘಟಕ ಆರಂಭಿಸಿದ್ದು, ರಕ್ತ ಮತ್ತು ರಕ್ತದ ಅಂಶಗಳು ಸುಲಭವಾಗಿ ಲಭ್ಯವಾಗಲಿವೆ. 


    ಶಿವಮೊಗ್ಗ-ಚಿಕ್ಕಮಗಳೂರು ಬಸವಕೇಂದ್ರದ ಶ್ರೀ ಬಸವ ಮರುಳಸಿದ್ದಸ್ವಾಮೀಜಿ, ಮುಸ್ಲಿಂ ಧರ್ಮಗುರು ಶಾಹುಲ್ ಹಮೀದ್ ಮಡಾಡಿ, ನಗರಸಭೆ ಸದಸ್ಯರಾದ ಬಿ.ಕೆ ಮೋಹನ್, ಬಷೀರ್ ಅಹಮದ್, ತಾಲೂಕು ಬಗರ್‌ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ಎಸ್.ಎಸ್ ಕಾಂಪ್ಲೆಕ್ಸ್ ಮಾಲೀಕ ಶಶಿಕುಮಾರ್, ಮುಖಂಡರಾದ ಜೆಬಿಟಿ ಬಾಬು, ಕೇಸರಿಪಡೆ ಗಿರೀಶ್ ಹಾಗು ರಕ್ತ ಕೇಂದ್ರದ ಪ್ರಮುಖರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  ಉದ್ಘಾಟನೆ ಅಂಗವಾಗಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. 

Wednesday, December 25, 2024

ಪ್ರೊ.ಜೆ.ಎಲ್ ಪದ್ಮನಾಭರಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ

ಇತ್ತೀಚೆಗೆ ಮಂಡ್ಯದಲ್ಲಿ ನಡೆದ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳದಲ್ಲಿ ಶಿವಮೊಗ್ಗದ ಶಿಕ್ಷಣತಜ್ಞರು ಹಾಗೂ ಕಮಲಾ ನೆಹರು ಮಹಿಳಾ ಕಾಲೇಜಿನ ಪ್ರಾಂಶುಪಾಲರಾಗಿದ್ದ ಪ್ರೊ.ಜೆ.ಎಲ್ ಪದ್ಮನಾಭರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ: ಇತ್ತೀಚೆಗೆ ಮಂಡ್ಯದಲ್ಲಿ ನಡೆದ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳದಲ್ಲಿ ಶಿವಮೊಗ್ಗದ ಶಿಕ್ಷಣತಜ್ಞರು ಹಾಗೂ ಕಮಲಾ ನೆಹರು ಮಹಿಳಾ ಕಾಲೇಜಿನ ಪ್ರಾಂಶುಪಾಲರಾಗಿದ್ದ ಪ್ರೊ.ಜೆ.ಎಲ್ ಪದ್ಮನಾಭರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಪ್ರೊ.ಪದ್ಮನಾಭ ಅವರು ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಇವರು ಕುವೆಂಪು ವಿಶ್ವವಿದ್ಯಾನಿಲಯದ ಶಿಕ್ಷಣಮಂಡಳಿ, ಸೆನೆಟ್ ಹಾಗೂ ಹಣಕಾಸು ಸಮಿತಿ ಸದಸ್ಯರಾಗಿ ಕೆಲಸ ನಿರ್ವಹಿಸಿದ್ದರಲ್ಲದೇ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿಯು ಸೇವೆ ಸಲ್ಲಿಸಿದ್ದು, ಶಿವಮೊಗ್ಗ ಜಿಲ್ಲಾ ಶೈಕ್ಷಣಿಕ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. 
    ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ೪೬ ಜನರಿಗೆ ಸನ್ಮಾನಿಸಲಾಯಿತು. ಪರಿಷತ್ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ್ ಜೋಷಿ, ಸಚಿವ ಚಲುವರಾಯಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಜ.೧ರಂದು ಕೋರೆಗಾಂವ್ ವಿಜಯೋತ್ಸವ ಆಚರಣೆ : ದಲಿತ ಸಂಘಟನೆಗಳ ಸಭೆ

ನೂತನ ವರ್ಷ ಆರಂಭದ ಮೊದಲ ದಿನ ಕೋರೆಗಾಂವ್ ವಿಜಯೋತ್ಸವ ಆಚರಿಸುವ ಸಂಬಂಧ ಭದ್ರಾವತಿ ನಗರದ ವಿವಿಧ ದಲಿತ ಸಂಘಟನೆಗಳು ಸಭೆ ನಡೆಸಿ ಚರ್ಚಿಸಿದವು. 
    ಭದ್ರಾವತಿ: ನೂತನ ವರ್ಷ ಆರಂಭದ ಮೊದಲ ದಿನ ಕೋರೆಗಾಂವ್ ವಿಜಯೋತ್ಸವ ಆಚರಿಸುವ ಸಂಬಂಧ ನಗರದ ವಿವಿಧ ದಲಿತ ಸಂಘಟನೆಗಳು ಸಭೆ ನಡೆಸಿ ಚರ್ಚಿಸಿದವು. 
    ಹೊಲಯ ಮಾದಿಗ ಸಮನ್ವಯ ಸಮಿತಿ ರಚಿಸಿಕೊಂಡು ಜ.೧ರಂದು ವಿಜಯೋತ್ಸವ ನಡೆಸುವ ಮೂಲಕ ಯಶಸ್ವಿಗೊಳಿಸಲು ಹಾಗು ಮುಂದಿನ ದಿನಗಳಲ್ಲಿ ಒಳಮೀಸಲಾತಿಗಾಗಿ ಜಂಟಿ ಹೋರಾಟ ನಡೆಸಲು ನಿರ್ಣಯ ಕೈಗೊಳ್ಳಲಾಯಿತು. 
    ಸಭೆಯಲ್ಲಿ ವಿವಿಧ ದಲಿತ ಸಂಘಟನೆಗಳ ಮುಖಂಡರುಗಳಾದ  ಶಿವಬಸಪ್ಪ, ಸತ್ಯ ಭದ್ರಾವತಿ, ಸುರೇಶ್, ಕುಬೇಂದ್ರಪ್ಪ, ಪುಟ್ಟರಾಜ, ಜಯರಾಮ್, ಧರ್ಮರಾಜ್, ಕೃಷ್ಣ, ಮಹೇಶ್, ಜಿಂಕ್‌ಲೈನ್ ಮಣಿ, ಮೂರ್ತಿ, ಸಿ. ಚನ್ನಪ್ಪ, ಜಗದೀಶ್, ಎಸ್. ಉಮಾ, ಗಂಗಾಧರ್, ಕೂಡ್ಲಿಗೆರೆ ರಮೇಶ್, ನಂಜಾಪುರ ರವಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 

ತಾಲೂಕಿನಲ್ಲಿ ಸಂಭ್ರಮದ ಕ್ರಿಸ್‌ಮಸ್ ಆಚರಣೆ

ಕ್ರೈಸ್ತ ದೇವಾಲಯಗಳಲ್ಲಿ ಸಿಹಿ ಹಂಚಿ ಪರಸ್ಪರ ಶುಭಾಶಯಗಳು  

ಜಗತ್ತಿಗೆ ತ್ಯಾಗ, ಪ್ರೀತಿಯ ಸಂದೇಶ ಸಾರಿದ ಯೇಸುಕ್ರಿಸ್ತರ ಜನ್ಮದಿನ ಬುಧವಾರ ಭದ್ರಾವತಿ ತಾಲೂಕಿನಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. 
    ಭದ್ರಾವತಿ : ಜಗತ್ತಿಗೆ ತ್ಯಾಗ, ಪ್ರೀತಿಯ ಸಂದೇಶ ಸಾರಿದ ಯೇಸುಕ್ರಿಸ್ತರ ಜನ್ಮದಿನ ಬುಧವಾರ ತಾಲೂಕಿನಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. 
    ತಾಲೂಕಿನ ಹಳೇನಗರ ಗಾಂಧಿನಗರದ ವೇಳಾಂಗಣಿ ಆರೋಗ್ಯ ಮಾತೆ ದೇವಾಲಯ, ನ್ಯೂಟೌನ್ ಅಮಲೋಧ್ಭವಿ ಮಾತೆ ದೇವಾಲಯ, ಕಾರೆಹಳ್ಳಿಯ ಸಂತ ಅಂತೋಣಿಯವರ ದೇವಾಲಯ, ಕಾಗದ ನಗರದ ಸಂತ ಜೋಸೆಫರ ದೇವಾಲಯಗಳು ಸೇರಿದಂತೆ ತಾಲೂಕಿನ ಇನ್ನಿತರ ಕ್ರೈಸ್ತ ದೇವಾಲಯಗಳಲ್ಲಿ ನಿರ್ಮಾಣ ಮಾಡಲಾದ ಕ್ರಿಸ್‌ಮಸ್ ಟ್ರೀ, ವಿವಿಧ ರೀತಿಯ ನಕ್ಷತ್ರಗಳು, ಯೇಸುವಿನ ಜನನ ಸಂದರ್ಭದ ಕ್ಷಣಗಳನ್ನು ನೆನಪಿಸುವ ಗೋದಲಿಗಳು ಗಮನ ಸೆಳೆದವು. ಮಂಗಳವಾರ ಮಧ್ಯರಾತ್ರಿ ಹಾಗೂ ಬುಧವಾರ ಮುಂಜಾನೆ ವಿಶೇಷ ಪ್ರಾರ್ಥನೆಗಳಲ್ಲಿ ಕ್ರೈಸ್ತ ಧರ್ಮೀಯರು ಪಾಲ್ಗೊಂಡಿದ್ದರು. 
    ಚರ್ಚ್‌ಗಳಲ್ಲಿ ಕೇಕ್, ಚಾಕೋಲೇಟ್, ಸಿಹಿತಿಂಡಿಗಳನ್ನು ಹಂಚಲಾಯಿತು. ಮನೆಗಳಲ್ಲಿ ವಿಶೇಷ ಖಾದ್ಯಗಳನ್ನು ತಯಾರಿಸಿ, ಹಬ್ಬಕ್ಕಾಗಿ ವಿಶೇಷ ಭೋಜನ ವ್ಯವಸ್ಥೆ ಕೈಗೊಂಡಿರುವುದು ಕಂಡು ಬಂದಿತು. ಕ್ರಿಸ್ತನ ಜನನದ ಶುಭ ಗಳಿಗೆಯ ಸ್ಮರಣೆಗೆ ಸಂಕೇತವಾಗಿ ಮೇಣದ ಬತ್ತಿಗಳನ್ನು ಬೆಳಗಿಸಲಾಯಿತು. ಪುಟ್ಟ ಮಕ್ಕಳು ಸಾಂತಾ ಕ್ಲಾಸ್ ವೇಷ ಧರಿಸಿ ಗಮನ ಸೆಳೆದರು. 
    ಶಾಂತಿ, ದೀನತೆಗಾಗಿ ಪ್ರಾರ್ಥನೆ ಸಲ್ಲಿದ ಭಕ್ತರು :  
    ಕ್ರಿಸ್‌ಮಸ್ ಬಾಹ್ಯ ಆಡಂಬರವಾಗಿರದೆ ಪರರ ಕಷ್ಟಕ್ಕೆ ಸಹಾಯ, ಸೇವೆ ಸಲ್ಲಿಸುವ ಹಬ್ಬವಾಗಿದೆ ಎಂದು ಕಾರೇಹಳ್ಳಿ ಸಂತ ಅಂತೋಣಿ ದೇವಾಲಯದ ಧರ್ಮಕೇಂದ್ರದ ಗುರುಗಳಾದ ಫಾದರ್ ಸಂತೋಷ್ ಅಲ್ಮೇಡ ತಿಳಿಸಿದರು. 
    ಪ್ರತಿಯೊಬ್ಬರ ಮನಸ್ಸು, ಹೃದಯದಲ್ಲಿ ಯೇಸು ಜನಿಸಬೇಕು. ಇರುವವರು ಇಲ್ಲದವರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಬೇಕು ಎಂದು ಮನವಿ ಮಾಡಿದರು. 
    ದೇಶಗಳ ನಡುವೆ ನಡೆಯುತ್ತಿರುವ ಯುದ್ಧಗಳು, ದೇಶದ ಭ್ರಷ್ಟಾಚಾರದ ರಾಜಕಾರಣ ದೂರವಾಗಿ ಎಲ್ಲರ ನಡುವೆ ಐಕ್ಯತೆ, ಸಮಾನತೆ ಮೂಡಲಿ, ವಿಶ್ವದಲ್ಲಿ ಶಾಂತಿ ನೆಲೆಸಲಿ. ಯುವಜನರು ಆಧುನಿಕ ಜೀವನದ ಭರಾಟೆಯಲ್ಲಿ ದಾರಿ ತಪ್ಪದೆ ಉತ್ತಮ ಜೀವನ ನಡೆಸಲು ಬೇಕಾದ ಸ್ಥೈರ್ಯ, ಮನೋಬಲವನ್ನು ದೇವರು ನೀಡಲಿ ಎಂದು ಪ್ರಾರ್ಥಿಸಲಾಯಿತು.

ಡಿ.೨೬ರಂದು ನಗರಸಭೆ ಸಾಮಾನ್ಯ ಸಭೆ



    ಭದ್ರಾವತಿ: ಪ್ರಸಕ್ತ ಸಾಲಿನ ಕೊನೆಯ ನಗರಸಭೆ ಸಾಮಾನ್ಯ ಸಭೆ ಡಿ.೨೬ರ ಗುರುವಾರ ಬೆಳಿಗ್ಗೆ ೧೧ ಗಂಟೆಗೆ ಅಧ್ಯಕ್ಷ ಮಣಿ ಎಎನ್‌ಎಸ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. 
    ಸಭೆಯಲ್ಲಿ ಸದಸ್ಯರು ತಪ್ಪದೇ ಭಾಗವಹಿಸಿ ಯಶಸ್ವಿಗೊಳಿಸುವಂತೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಕೋರಿದ್ದಾರೆ. 

ಅಟಲ್ ಬಿಹಾರಿ ವಾಜಪೇಯಿ ಜನ್ಮಶತಮಾನೋತ್ಸವ ಆಚರಣೆ

ಭಾರತರತ್ನ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ೧೦೦ನೇ ವರ್ಷದ ಜನ್ಮಶತಮಾನೋತ್ಸವ, ಸುಶಾಸನ ದಿನ ಪ್ರಯುಕ್ತ ಭದ್ರಾವತಿ ತಾಲೂಕು ಬಿಜೆಪಿ ಮಂಡಲ ವತಿಯಿಂದ ಬುಧವಾರ ಶತದೀಪೋತ್ಸವ ಆಚರಿಸಲಾಯಿತು. 
    ಭದ್ರಾವತಿ :  ಭಾರತರತ್ನ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ೧೦೦ನೇ ವರ್ಷದ ಜನ್ಮಶತಮಾನೋತ್ಸವ, ಸುಶಾಸನ ದಿನ ಪ್ರಯುಕ್ತ ತಾಲೂಕು ಬಿಜೆಪಿ ಮಂಡಲ ವತಿಯಿಂದ ಬುಧವಾರ ಶತದೀಪೋತ್ಸವ ಆಚರಿಸಲಾಯಿತು. 
    ನಗರದ ಮಂಡಲದ ಕಾರ್ಯಾಲಯದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ನೇತೃತ್ವ ವಹಿಸಿದ್ದರು. ಕಾರ್ಯಾಲಯದ ಆವರಣ  ಸ್ವಚ್ಛಗೊಳಿಸುವ ಮೂಲಕ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ನಂತರ ಕಾರ್ಯಕರ್ತರು ಶತ ದೀಪಗಳನ್ನು ಬೆಳಗಿಸಿ ಪುಷ್ಪ ನಮನ ಸಲ್ಲಿಸಿದರು.
    ಪಕ್ಷದ ಮುಖಂಡರಾದ ಕೆ.ಎನ್ ಶ್ರೀಹರ್ಷ ಮಾತನಾಡಿ, ಕವಿ ಹೃದಯದ ಅಟಲ್ ಜೀ ಅವರಿಗೂ ಭದ್ರಾವತಿ ನಗರಕ್ಕೂ ಅವಿನಾಭಾವ ಸಂಬಂಧವಿದೆ. ೧೯೮೪ರ ಲೋಕಸಭಾ ಚುನಾವಣೆಯಲ್ಲಿ ಗ್ವಾಲಿಯರ್ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ವಾಜಪೇಯಿ ಸೋಲು ಕಂಡಿದ್ದರು, ಇದರಿಂದ ನೊಂದ ಸಿದ್ದಾಪುರ ಲಕ್ಷ್ಮೀನಾರಾಯಣ ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದರು. ವಿಷಯ ತಿಳಿದ ವಾಜಪೇಯಿ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಇದಾದ ನಂತರ ಈ ಜಿಲ್ಲೆಗೆ ಬಂದಾಗಲೆಲ್ಲ ಲಕ್ಷ್ಮೀನಾರಾಯಣನನ್ನು ನೆನೆಯುತ್ತಿದ್ದರು. ಅಟಲ್ ಜೀ ಕಡೆಯದಾಗಿ ೧೯೯೩ರಲ್ಲಿ ಕನಕಮಂಟಪಕ್ಕೆ ಬಂದು ಭಾಷಣ ಮಾಡುವ ವೇಳೆ ಮಳೆ ಹೆಚ್ಚಾಗಿದ್ದರಿಂದ ಭಾಷಣ ಮೊಟಕು ಮಾಡಿ ಪುನಃ ಬರುತ್ತೇನೆ ಎಂದು ಹೇಳಿ ಹೋದವರು ಬರಲೇ ಇಲ್ಲ ಎಂದು ಅಟಲ್ ಜೀ ಅವರನ್ನು ನೆನಪು ಮಾಡಿದರು. 
    ರಾಷ್ಟ್ರದ ಅಭಿವೃದ್ಧಿಗೆ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡುವ ಮೂಲಕ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಅವರ ಆಡಳಿತದಲ್ಲಿ ದೇಶದ ಪ್ರಗತಿಗೆ ಹೊಸ ದಾರಿ ಕೊಂಡುಕೊಳ್ಳುವ ಜೊತೆಗೆ ವಿದೇಶಾಂಗ ನೀತಿಯಲ್ಲಿ ಹೊಸ ದಿಕ್ಕು ಕಾಣಲಾಯಿತು. ರಾಷ್ಟ್ರದ ಸಮಸ್ಯೆಗಳಿಗೆ ಸೂಕ್ತ ದೂರದೃಷ್ಟಿಯ ನಿವಾರಣೆ ಕಂಡವರು. ಅವರ ದರ್ಶನ ಭಾಗ್ಯ ಪಡೆದ ನಾವೇ ಪುಣ್ಯವಂತರು ಎಂದರು. 
    ಮಂಡಲ ಪ್ರಧಾನ ಕಾರ್ಯದರ್ಶಿ ಚನ್ನೇಶ್, ಸುಶಾಸನ ದಿನ ಕಾರ್ಯಕ್ರಮದ ಸಂಚಾಲಕ ಡಿ.ಆರ್ ಸಾಗರ್,  ಸಹ ಸಂಚಾಲಕ ಕಲ್ಲೇಶ್, ಎಂ. ಮಂಜುನಾಥ್, ಪ್ರಮುಖರಾದ ಬಿ.ಜಿ ರಾಮಲಿಂಗಯ್ಯ, ವಿವಿಧ ಮೋರ್ಚಾಗಳ ಅಧ್ಯಕ್ಷರಾದ ರಾಜಶೇಖರ್, ಧನುಷ್ ಬೋಸ್ಲೆ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರಸನ್ನ ಕುಮಾರ್ ಬಾರಂದೂರು, ಸಚ್ಚಿದಾನಂದ, ಉಮಾವತಿ, ಲೋಲಾಕ್ಷಿ, ಜಯಲಕ್ಷ್ಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.