Friday, December 27, 2024

ನೋಟುಗಳ ಮೂಲಕ ಮಾಜಿ ಪ್ರಧಾನಿ ನಿಧನಕ್ಕೆ ಸಂತಾಪ

ಭದ್ರಾವತಿ ನಗರದ ಹಿರಿಯ ನಾಣ್ಯ, ನೋಟು ಹಾಗು ಅಂಚೆ ಚೀಟಿ ಸಂಗ್ರಹಗಾರ ಗಣೇಶ್‌ರವರು ದೇಶದ ಆರ್ಥಿಕ ಸುಧಾರಣೆಗಳ ಹರಿಕಾರ, ಮಾಜಿ ಪ್ರಧಾನಿ ಮನಮೋಹನ ಸಿಂಗ್‌ರವರ ನಿಧನಕ್ಕೆ ವಿಶೇಷವಾಗಿ ೧೦ ರು. ಮುಖಬೆಲೆ ನೋಟು ಮೂಲಕ ಸಂತಾಪ ಸೂಚಿಸಿದ್ದಾರೆ. 
    ಭದ್ರಾವತಿ : ನಗರದ ಹಿರಿಯ ನಾಣ್ಯ, ನೋಟು ಹಾಗು ಅಂಚೆ ಚೀಟಿ ಸಂಗ್ರಹಗಾರ ಗಣೇಶ್‌ರವರು ದೇಶದ ಆರ್ಥಿಕ ಸುಧಾರಣೆಗಳ ಹರಿಕಾರ, ಮಾಜಿ ಪ್ರಧಾನಿ ಮನಮೋಹನ ಸಿಂಗ್‌ರವರ ನಿಧನಕ್ಕೆ ವಿಶೇಷವಾಗಿ ೧೦ ರು. ಮುಖಬೆಲೆ ನೋಟು ಮೂಲಕ ಸಂತಾಪ ಸೂಚಿಸಿದ್ದಾರೆ. 
    ಸಿಂಗ್‌ರವರ ಜನ್ಮದಿನ ಹಾಗು ನಿಧನ ಹೊಂದಿದ ದಿನದ ದಿನಾಂಕ ಹೊಂದಿರುವ ೧೦ ರು. ಮುಖಬೆಲೆಯ ನೋಟುಗಳ ಮೂಲಕ ಸಂತಾಪ ಸೂಚಿಸಿದ್ದಾರೆ. ಗಣೇಶ್‌ರವರು ಸುಮಾರು ೫ ದಶಕ್ಕೂ ಹೆಚ್ಚು ಕಾಲದಿಂದ ನಾಣ್ಯ, ನೋಟು ಹಾಗು ಅಂಚೆ ಚೀಟಿ ಸಂಗ್ರಹ ಹವ್ಯಾಸದಲ್ಲಿ ತೊಡಗಿಸಿಕೊಂಡಿದ್ದು, ಗಣ್ಯ ವ್ಯಕ್ತಿಗಳ ಹುಟ್ಟು, ನಿಧನ ಹೊಂದಿದ ದಿನ ಹಾಗು ಪ್ರಮುಖ ಐತಿಹಾಸಿಕ ಘಟನೆಗಳ ಸಂದರ್ಭದಲ್ಲಿ ನೋಟುಗಳ ಮೂಲಕ ಶುಭ ಹಾರೈಕೆ, ಸಂತಾಪ ಸೂಚಿಸುವ ಮೂಲಕ ವಿಶೇಷವಾಗಿ ಗಮನ ಸೆಳೆಯುತ್ತಿದ್ದಾರೆ. 

ಡಿ.೨೮ರಂದು ಶ್ರೀ ರಾಮಾಯಣ ದರ್ಶನಂ ಆಧಾರಿತ ಉಪನ್ಯಾಸ-ಪ್ರಾತ್ಯಕ್ಷಿಕೆ



    ಭದ್ರಾವತಿ: ನಗರದ ರೋಟರಿ ಕ್ಲಬ್ ವತಿಯಿಂದ ಆನಂದ ಆರೋಗ್ಯ ನೃತ್ಯ ಪ್ರಾತ್ಯಕ್ಷಿಕಾ ಮಾಲಿಕೆ `ರಾಮಂಗೆ ಮೊದಲಲ್ತೆ ರಾಮಾಯಣಂ?' ವಿಶೇಷ ಕಾರ್ಯಕ್ರಮ ರಾಷ್ಟ್ರಕವಿ ಕುವೆಂಪುರವರ ಜ್ಞಾನಪೀಠ ಪುರಸ್ಕೃತ ಶ್ರೀ ರಾಮಾಯಣ ದರ್ಶನಂ ಆಧಾರಿತ ಉಪನ್ಯಾಸ-ಪ್ರಾತ್ಯಕ್ಷಿಕೆ ಡಿ.೨೮ರಂದು ಸಂಜೆ ೬ ಗಂಟೆಗೆ ನಗರದ ರೋಟರಿ ಕ್ಲಬ್ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. 
    ಮನೋವೈದ್ಯೆ, ನೃತ್ಯ ಕಲಾವಿದೆ ಡಾ.ಕೆ.ಎಸ್ ಪವಿತ್ರಾ ಅವರಿಂದ ಉಪನ್ಯಾಸ-ಪ್ರಾತ್ಯಕ್ಷಿಕೆ ನಡೆಯಲಿದ್ದು, ಡಾ. ಅನುರಾಧ ಪಟೇಲ್ ಉದ್ಘಾಟಿಸಲಿದ್ದಾರೆ. ರೋಟರಿ ಕ್ಲಬ್ ಅಧ್ಯಕ್ಷ ಜಿ. ರಾಘವೇಂದ್ರ ಉಪಾಧ್ಯಾಯ ಅಧ್ಯಕ್ಷತೆ ವಹಿಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

ಜ.೪ರಂದು `ಸಾರ್ಥಕ ಸೇವೆಯ ಸವಿನೆನಪಿನ ಕ್ಷಣದ' ಅಭಿನಂದನಾ ಕಾರ್ಯಕ್ರಮ

ಅಪೇಕ್ಷ ಮಂಜುನಾಥ್ 
    ಭದ್ರಾವತಿ: ಜ್ಯೂನಿಯರ್ ವಿಷ್ಣವರ್ಧನ್ ಎಂದೇ ಗುರುತಿಸಿಕೊಂಡಿರುವ ಕಾಗದನಗರ ಪ್ರೌಢಶಾಲೆ ದೈಹಿಕ ಶಿಕ್ಷಣ ಶಿಕ್ಷಕ ಅಪೇಕ್ಷ ಮಂಜುನಾಥ್ ೩೫ ವರ್ಷಗಳ ವೃತ್ತಿ ಕರ್ತವ್ಯದಿಂದ ನಿವೃತ್ತಿ ಹೊಂದುತ್ತಿದ್ದು, ಈ ಹಿನ್ನಲೆಯಲ್ಲಿ ಜ.೪ರಂದು `ಸಾರ್ಥಕ ಸೇವೆಯ ಸವಿನೆನಪಿನ ಕ್ಷಣದ' ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ. 
    ಅಪೇಕ್ಷ ಕಲಾ ನೃತ್ಯ ವೃಂದ ಹಾಗು ಸ್ನೇಹ ಬಳಗದ ವತಿಯಿಂದ ಸಿದ್ಧಾರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಮಧ್ಯಾಹ್ನ ೩ ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಸ್ನೇಹ ಬಳಗದವರು, ಅಭಿಮಾನಿಗಳು, ಶಿಕ್ಷಕರು, ಕಲಾವಿದರು, ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಕೋರಲಾಗಿದೆ. 
    ಅಪೇಕ್ಷ ಮಂಜುನಾಥ್ : 
    ಅಪೇಕ್ಷ ಮಂಜುನಾಥ್‌ರವರು ವೃತ್ತಿಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದು, ವೃತ್ತಿ ಜೊತೆಯಲ್ಲಿ ನೃತ್ಯ ಕಲಾವಿದರಾಗಿ ಬೆಳೆದು ಅಪೇಕ್ಷ ಕಲಾ ನೃತ್ಯ ವೃಂದ ಆರಂಭಿಸಿ ಆ ಮೂಲಕ ನೂರಾರು ಯುವ ಕಲಾ ಪ್ರತಿಭೆಗಳನ್ನು ಪ್ರೋತ್ಸಾಯಿಸುವ ಮೂಲಕ ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳುವಲ್ಲಿ ಕಾರಣಕರ್ತರಾಗಿದ್ದಾರೆ. ಅಲ್ಲದೆ ಮಂಜುನಾಥ್‌ರವರು ಹಿರಿಯ ನಟ, ದಿವಂಗತ ಡಾ. ವಿಷ್ಣುವರ್ಧನ್‌ರವರ ಅಭಿಮಾನಿಯಾಗಿದ್ದು, ಅವರ ಅಭಿನಯದ ಮೂಲಕ ಜ್ಯೂನಿಯರ್ ವಿಷ್ಣುವರ್ಧನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರಾಜ್ಯದ ವಿವಿಧೆಡೆ ಹಲವಾರು ಕಾರ್ಯಕ್ರಮಗಳಲ್ಲಿ ತಮ್ಮ ಅಭಿನಯ ಪ್ರದರ್ಶಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಲ್ಲದೆ ಪ್ರತಿವರ್ಷ ವಿಷ್ಣುವರ್ಧನ್‌ರವರ ಜನ್ಮದಿನ ಹಾಗು ಪುಣ್ಯಸ್ಮರಣೆ ಕಾರ್ಯಕ್ರಮಗಳನ್ನು ವಿಶೇಷವಾಗಿ ಆಚರಿಸಿಕೊಂಡು ಬರುತ್ತಿದ್ದು, ವಿಷ್ಣುವರ್ಧನ್‌ರವರ ಹೆಸರಿನಲ್ಲಿ ಪ್ರಶಸ್ತಿಗಳನ್ನು ಸಹ ನೀಡುತ್ತಿದ್ದಾರೆ. ಅಲ್ಲದೆ ಅಪೇಕ್ಷ ಕಲಾ ನೃತ್ಯ ವೃಂದ ಮೂಲಕ ಪ್ರತಿಭಾವಂತ ಸಾಧಕರನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಿದ್ದಾರೆ. ಇವರಿಗೆ ಜಿಲ್ಲಾ ಹಾಗು ರಾಜ್ಯಮಟ್ಟದ ಹಲವಾರು ಪ್ರಶಸ್ತಿಗಳು ಲಭಿಸಿವೆ. 

ಡಿ.೨೯ರಂದು ರಕ್ತದಾನ ಶಿಬಿರ


    ಭದ್ರಾವತಿ: ಶಿವಮೊಗ್ಗ ಆಶಾ ಜ್ಯೋತಿ ರಕ್ತಕೇಂದ್ರರವರ ಸಹಯೋಗದೊಂದಿಗೆ ನಗರದ ಹೊಸಮನೆ ಶಿವಾಜಿ ಸರ್ಕಲ್, ಹಳೇನಗರ, ನ್ಯೂಟೌನ್ ಮತ್ತು ಸಂಚಾರಿ ಪೊಲೀಸ್ ಠಾಣೆಗಳ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿದೆ. 
    ಹಳೇನಗರ ಪೊಲೀಸ್ ಠಾಣೆ ಆವರಣದಲ್ಲಿ ಡಿ.೨೯ರ ಭಾನುವಾರ ಬೆಳಿಗ್ಗೆ ೧೦ ಗಂಟೆಯಿಂದ ಶಿಬಿರ ನಡೆಯಲಿದ್ದು, ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶಿಬಿರ ಯಶಸ್ವಿಗೊಳಿಸುವಂತೆ ಕೋರಲಾಗಿದೆ. ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಪ್ರತಿ ಭಾನುವಾರ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದ್ದು, ಈ ಪೈಕಿ ರಕ್ತದಾನ ಶಿಬಿರ ಸಹ ಒಂದಾಗಿದೆ. 

ವಿದ್ಯಾರ್ಥಿಗಳು ಅವಕಾಶಗಳ ಸದುಪಯೋಗ ಪಡೆದುಕೊಂಡು ಮುಂದೆ ಬನ್ನಿ : ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ

ಭದ್ರಾವತಿ ಹೊಸಸಿದ್ಧಾಪುರ ಎನ್‌ಟಿಬಿ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸಹ್ಯಾದ್ರಿ ಪಬ್ಲಿಕ್ ಸ್ಕೂಲ್ ಕಟ್ಟಡ  ಶಿವಮೊಗ್ಗ ಬೆಕ್ಕಿನಕಲ್ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಶ್ರೀ ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು. 
    ಭದ್ರಾವತಿ : ಆಧುನಿಕ ಯುಗದಲ್ಲಿ ಬೆಳವಣಿಗೆ ಹೊಂದಲು ವಿಫುಲವಾದ ಅವಕಾಶಗಳು ಮುಕ್ತವಾಗಿದ್ದು, ವಿದ್ಯಾರ್ಥಿಗಳು ತಮಗೆ ಲಭ್ಯವಾಗುವ ಅವಕಾಶಗಳ ಸದುಪಯೋಗ ಪಡೆದುಕೊಂಡು ಮುಂದೆ ಬರಬೇಕೆಂದು ಶಿವಮೊಗ್ಗ ಬೆಕ್ಕಿನಕಲ್ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು. 
    ಅವರು ಹೊಸಸಿದ್ಧಾಪುರ ಎನ್‌ಟಿಬಿ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸಹ್ಯಾದ್ರಿ ಪಬ್ಲಿಕ್ ಸ್ಕೂಲ್ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
    ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಹೊರತರುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ತರವಾಗಿದ್ದು, ಕೇವಲ ಅಕ್ಷರಾಭ್ಯಾಸ, ಅಂಕಗಳಿಕೆಯ ಸ್ಪರ್ಧೆಗೆ ಮಾತ್ರ ಮಕ್ಕಳನ್ನು ಮೀಸಲುಗೊಳಿಸಲು ಸಜ್ಜುಗೊಳಿಸುವ ಬದಲು ಕ್ರಿಯಾತ್ಮಕವಾಗಿ ರೂಪಿಸಬೇಕಾಗಿದೆ. ಪೋಷಕರ ಪಾತ್ರ ಈ ನಿಟ್ಟಿನಲ್ಲಿ ಪ್ರಮುಖವಾಗಿದೆ ಎಂದರು.
    ಶಿಕ್ಷಣ ಸಂಸ್ಥೆಯ ಪ್ರಮುಖರಾದ ಟ್ರಸ್ಟ್ ಕಾರ್ಯದರ್ಶಿ ಕಾಳೇಗೌಡರವರ ರಾಜೀರಹಿತ ತತ್ವ, ಸಿದ್ಧಾಂತ, ನಿಷ್ಟುರ ಸ್ವಭಾವ, ಕಾರ್ಮಿಕ ರಂಗದ ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿ ಅವರ ಬದ್ಧತೆ ಮಾದರಿಯಾಗಿದೆ ಎಂದು ಸ್ವಾಮೀಜಿಯವರು ಬಣ್ಣಿಸಿದರು. 
    ಸಮಾರಂಭದ ದಿವ್ಯ ಸಾನ್ನಿಧ್ಯವಹಿಸಿದ್ದ ಶ್ರೀ ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಸಂಸ್ಕೃತಿ-ಸಂಸ್ಕಾರ ಕಲಿಸಿದಾಗ ಮಾತ್ರ ಪರಿಪೂರ್ಣ ವ್ಯಕ್ತಿತ್ವ ರೂಪುಗೊಳ್ಳಲು ಸಾಧ್ಯ ಎಂದರು.
    ಹತ್ತು ಹಲವು ಸವಾಲು ಹಾಗೂ ಸಂಕಷ್ಟಗಳ ನಡುವೆಯೂ ಛಲಬಿಡದ ತ್ರಿವಿಕ್ರಮನಂತೆ ಶಿಕ್ಷಣ ಸಂಸ್ಥೆಯನ್ನು ಕಟ್ಟಿಬೆಳೆಸಿರುವ ಕಾರ್ಯದರ್ಶಿ ಕಾಳೇಗೌಡರವರ ಕಾರ್ಯವೈಖರಿ ಅನುಕರಣೀಯ ಎಂದು ಶ್ಲಾಘಿಸಿದರು.
    ಖಾಸಗಿ ಶಾಲೆಗಳ ಒಕ್ಕೂಟದ ತಾಲೂಕು ಅಧ್ಯಕ್ಷ ಡಾ. ಡಿ. ಪ್ರಭಾಕರ ಬೀರಯ್ಯ ಮತನಾಡಿ, ಶಿಕ್ಷಣ ಸಂಸ್ಥೆಗಳು ಮೌಲ್ಯಯುತ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕಿದೆ ಎಂದರು.
    ಕಾರ್ಮಿಕ ಮುಖಂಡ ಡಿ.ಸಿ. ಮಾಯಣ್ಣ ಮಾತನಾಡಿ, ವಿದ್ಯಾವಂತರ ಸಂಖ್ಯೆಗೆ ಅನುಗುಣವಾಗಿ ಉದ್ಯೋಗ ಸೃಜನೆಮಾಡಿದಾಗ ಮಾತ್ರ ದೇಶ ಪ್ರಗತಿಪಥದತ್ತ ಸಾಗಲು ಸಾಧ್ಯ ಎಂದರು.
    ಕಾರ್ಯದರ್ಶಿ ಕಾಳೇಗೌಡ ಪ್ರಾಸ್ತವಿಕವಾಗಿ ಮಾತನಾಡಿ, ಶಿಕ್ಷಣ ಸಂಸ್ಥೆ ಬೆಳೆದುಬಂದ ದಾರಿ ಹಾಗೂ ಸಿದ್ಧಾಪುರ ಬಡಾವಣೆಯ ಪೋಷಕರು ನೀಡಿದ ಸಹಕಾರ ಸ್ಮರಿಸಿದರು. 
    ಟ್ರಸ್ಟ್ ಅಧ್ಯಕ್ಷ ಪಿ.ದೊರೈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಸದಸ್ಯೆ ಆರ್. ನಾಗರತ್ನ ಅನಿಲ್ ಕುಮಾರ್, ಟ್ರಸ್ಟಿ ಉಷಾ ಕಾಳೇಗೌಡ, ಲೆಕ್ಕ ಪರಿಶೋಧಕ ಜಿ. ಧರ್ಮಪ್ರಸಾದ್, ಶಿವಲಿಂಗೇಗೌಡ ಮುಂತಾದವರು ಉಪಸ್ಥಿತರಿದ್ದರು.  ಟ್ರಸ್ಟಿ ರವಿಕುಮಾರ್ ವಂದಿಸಿದರು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ರೈತರಿಗೆ ಸಮಗ್ರ ಕೃಷಿ ನೀರಾವರಿ, ಹೈನುಗಾರಿಕೆ ಮಾಹಿತಿ ಕಾರ್ಯಕ್ರಮ

ಭದ್ರಾವತಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ-೧ರ ವತಿಯಿಂದ ವಿದ್ಯಾಮಂದಿರ ವಲಯದ ತಿಮ್ಲಾಪುರ ಕಾರ್ಯಕ್ಷೇತ್ರದಲ್ಲಿ ರೈತರಿಗೆ ಸಮಗ್ರ ಕೃಷಿ ನೀರಾವರಿ, ಹೈನುಗಾರಿಕೆ ಮಾಹಿತಿ ಕಾರ್ಯಕ್ರಮ ನಡೆಸಲಾಯಿತು.
    ಭದ್ರಾವತಿ: ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ-೧ರ ವತಿಯಿಂದ ವಿದ್ಯಾಮಂದಿರ ವಲಯದ ತಿಮ್ಲಾಪುರ ಕಾರ್ಯಕ್ಷೇತ್ರದಲ್ಲಿ ರೈತರಿಗೆ ಸಮಗ್ರ ಕೃಷಿ ನೀರಾವರಿ, ಹೈನುಗಾರಿಕೆ ಮಾಹಿತಿ ಕಾರ್ಯಕ್ರಮ ನಡೆಸಲಾಯಿತು.
  ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ರೈತರಿಗಾಗಿ ರೂಪಿಸಿರುವ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳುವ ಜೊತೆಗೆ ಮಾಹಿತಿ ಕಾರ್ಯಾಗಾರಗಳಲ್ಲಿ ಪಾಲ್ಗೊಂಡು ಲಾಭದಾಯಕ ಕೃಷಿ ಕೈಗೊಳ್ಳುವ ವಿಧಾನಗಳ  ಕುರಿತು ಸಮಗ್ರವಾಗಿ ಯೋಜನಾಧಿಕಾರಿ ಪ್ರಕಾಶ್ ವೈ ನಾಯ್ಕ ವಿವರಿಸಿದರು. ಕಾರ್ಯಕ್ರಮದಲ್ಲಿ ತಿಮ್ಲಾಪುರ ಕಾರ್ಯಕ್ಷೇತ್ರದ ರೈತರು, ಜನಜಾಗೃತಿ ವೇದಿಕೆ ಸದಸ್ಯೆ ಮಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮನಮೋಹನ ಸಿಂಗ್ ನಿಧನಕ್ಕೆ ಶಾಸಕ ಸಂಗಮೇಶ್ವರ್ ಸಂತಾಪ

    ಭದ್ರಾವತಿ : ದೇಶದ ಆರ್ಥಿಕ ಸುಧಾರಣೆಗಳ ಹರಿಕಾರ, ಮಾಜಿ ಪ್ರಧಾನಿ ಮನಮೋಹನ ಸಿಂಗ್‌ರವರ ನಿಧನಕ್ಕೆ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಸಂತಾಪ ಸೂಚಿಸಿದ್ದಾರೆ. 
    ಮನಮೋಹನ ಸಿಂಗ್‌ರವರು ಅರ್ಥಶಾಸ್ತ್ರದ ಪ್ರಾಧ್ಯಾಪಕ, ಪ್ರಧಾನ ಆರ್ಥಿಕ ಸಲಹೆಗಾರ ಕೇಂದ್ರ ವಿತ್ತ ಕಾರ್ಯದರ್ಶಿ, ರಿಸರ್ವ್ ಬ್ಯಾಂಕ್ ಗವರ್ನರ್, ಯೋಜನಾ ಆಯೋಗದ ಉಪಾಧ್ಯಕ್ಷ,  ವಿಶ್ವ ವಿದ್ಯಾಲಯ ಧನಸಹಾಯ ಆಯೋಗದ ಅಧ್ಯಕ್ಷ, ಕೇಂದ್ರ ವಿತ್ತ ಸಚಿವ ಹಾಗು ೨ ಬಾರಿ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸುವ ಮೂಲಕ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. 
    ಧೀಮಂತ ನಾಯಕ, ದೇಶದ ಹಿರಿಯ ಮುತ್ಸದ್ದಿ, ಅಜಾತ ಶತೃ ಮನಮೋಹನ ಸಿಂಗ್‌ರವರ ನಿಧನ ದೇಶಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ. ಇವರ ನಿಧನದಿಂದ ಉಂಟಾಗಿರುವ ದುಃಖವನ್ನು ಭರಿಸುವ ಶಕ್ತಿ ಭಗವಂತ ಕುಟುಂಬ ವರ್ಗಕ್ಕೆ, ಅಭಿಮಾನಿಗಳಿಗೆ ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ಸಂತಾಪ ಸೂಚಿಸಿದ್ದಾರೆ.