Monday, March 17, 2025

ಪುನೀತ್ ಸೇವಾ ಕಾರ್ಯ ಮೈಗೂಡಿಸಿಕೊಂಡಿರುವ ಅಭಿಮಾನಿ

ರಾಜುನಾಯ್ಕ ಕನ್ನಡಿಗ ವಯೋವೃದ್ಧರು, ನಿರಾಶ್ರಿತರಿಗೆ ಆಸರೆ 

 ಭದ್ರಾವತಿ ಬೊಮ್ಮನಕಟ್ಟೆ-ತಿಮ್ಲಾಪುರ ರಸ್ತೆಯಲ್ಲಿರುವ ಹೋಂ ಆಫ್ ಹೋಂ ಜನಸ್ನೇಹಿ ಸೇವಾ ಟ್ರಸ್ಟ್ ನಿರಾಶ್ರಿತರ ಆಶ್ರಮ. 
    * ಅನಂತಕುಮಾರ್ 
    ಭದ್ರಾವತಿ: ಚಲನಚಿತ್ರ ನಟ, ಸಮಾಜ ಸೇವಕ, ಕರ್ನಾಟಕ ರತ್ನ, ಪವರ್‌ಸ್ಟಾರ್ ದಿವಂಗತ ಪುನೀತ್ ರಾಜ್‌ಕುಮಾರ್ ಅವರ ೫೦ನೇ ವರ್ಷದ ಹುಟ್ಟುಹಬ್ಬ ಸೋಮವಾರ ಎಲ್ಲೆಡೆ ಆಚರಿಸಲಾಗುತ್ತಿದ್ದು, ಅವರ ಅಭಿಮಾನಿ ಬಳಗದಲ್ಲಿ ಸಂತಸ, ಸಂಭ್ರಮ ಮನೆಮಾಡಿದೆ. 
    ಪುನೀತ್‌ರಾಜ್‌ಕುಮಾರ್ ಕೇವಲ ಸಿನಿಮಾ ನಟರಾಗಿ ಬದುಕಿರಲಿಲ್ಲ. ಹಲವಾರು ಸಮಾಜಮುಖಿ ಸೇವಾ ಕಾರ್ಯಗಳೊಂದಿಗೆ ಅವರೊಬ್ಬ ಸಮಾಜ ಸೇವಕರಾಗಿದ್ದರು ಎಂಬುದು ವಿಶೇಷವಾಗಿದೆ. ವಿಶೇಷ ಎಂದರೆ ಅವರ ನಿಧನ ನಂತರ ಅವರ ಸೇವಾಕಾರ್ಯಗಳು ಬೆಳಕಿಗೆ ಬಂದವು. ಪುನೀತ್‌ರಾಜ್‌ಕುಮಾರ್ ಅಭಿಮಾನಿಗಳು ಎಲ್ಲಡೆ ಇದ್ದಾರೆ. ಆದರೆ ಅವರ ಅಭಿಮಾನಿಯಾಗಿ ಅವರಂತೆ ಸೇವಾಕಾರ್ಯಗಳನ್ನು ಮೈಗೂಡಿಸಿಕೊಂಡವರು ವಿರಳ. ಇಂತಹ ವಿರಳ ವ್ಯಕ್ತಿಗಳಲ್ಲಿ ಬೊಮ್ಮನಕಟ್ಟೆ-ತಿಮ್ಲಾಪುರ ರಸ್ತೆಯಲ್ಲಿರುವ ಹೋಂ ಆಫ್ ಹೋಂ ಜನಸ್ನೇಹಿ ಸೇವಾ ಟ್ರಸ್ಟ್ ನಿರಾಶ್ರಿತರ ಆಶ್ರಮದ ಸಂಸ್ಥಾಪಕ ರಾಜುನಾಯ್ಕ ಕನ್ನಡಿಗ ಸಹ ಒಬ್ಬರಾಗಿದ್ದಾರೆ. 
    ದಾವಣಗೆರೆ ಜಿಲ್ಲೆ, ಚನ್ನಗಿರಿ ತಾಲೂಕು, ಕತ್ತಲಗೆರೆ ಕವಳಿ ತಾಂಡ ಎಂಬ ಚಿಕ್ಕ ಗ್ರಾಮದಲ್ಲಿ ಒಬ್ಬ ಬಡ ರೈತನ ಮಗನಾಗಿ ಜನಿಸಿರುವ ರಾಜುನಾಯ್ಕರವರು ಪುನೀತ್‌ರಾಜ್‌ಕುಮಾರ್ ಅಭಿಮಾನಿಯಾಗಿದ್ದು, ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಆಶಯದೊಂದಿಗೆ ಸುಮಾರು ೯ ವರ್ಷಗಳ ಹಿಂದೆ  ಹೋಂ ಆಫ್ ಹೋಂ ಜನಸ್ನೇಹಿ ಸೇವಾ ಟ್ರಸ್ಟ್ ಆರಂಭಿಸುವ ಮೂಲಕ ವಯೋವೃದ್ಧರು, ನಿರಾಶ್ರಿತರಿಗೆ ಆಸರೆಯಾಗಿದ್ದಾರೆ. 


ಭದ್ರಾವತಿ ಬೊಮ್ಮನಕಟ್ಟೆ-ತಿಮ್ಲಾಪುರ ರಸ್ತೆಯಲ್ಲಿರುವ ಹೋಂ ಆಫ್ ಹೋಂ ಜನಸ್ನೇಹಿ ಸೇವಾ ಟ್ರಸ್ಟ್ ನಿರಾಶ್ರಿತರ ಆಶ್ರಮದಲ್ಲಿರುವ ವಯೋವೃದ್ಧರು, ನಿರಾಶ್ರಿತರು. 
      ಹೋಂ ಆಫ್ ಹೋಂ ಜನಸ್ನೇಹಿ ಸೇವಾ ಟ್ರಸ್ಟ್ ನಿರಾಶ್ರಿತರ ಆಶ್ರಮ ಆರಂಭಿಸಲು ರಾಜುರವರು ಸಾಕಷ್ಟು ಶ್ರಮಪಟ್ಟಿದ್ದಾರೆ. ಆರಂಭದಲ್ಲಿ ಶಿವಮೊಗ್ಗ ಸೋಮಿನಕೊಪ್ಪದ ಆದರ್ಶನಗರದಲ್ಲಿ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ನೆರವಿನೊಂದಿಗೆ ನಿರ್ಮಿತಿ ಕೇಂದ್ರದಿಂದ ಕಟ್ಟಿರುವ ಪಾಳು ಬಿದ್ದಿರುವ ಒಂದು ಕಟ್ಟಡ ಇವರಿಗೆ ಲಭಿಸಿತ್ತು. ಇದನ್ನು ಸ್ವಚ್ಛಗೊಳಿಸಿ ೨೦೧೬ರಲ್ಲಿ ಆಶ್ರಮ ಪ್ರಾರಂಭಿಸಿದರು. ಆರಂಭದಲ್ಲಿ ಇವರ ಕಾರ್ಯಕ್ಕೆ ಮತ್ತೊಬ್ಬ ಸಮಾಜ ಸೇವಕ ಕೈಜೋಡಿಸಿದ್ದರು. ೨೦೧೮ರಿಂದ ಇವರೊಬ್ಬರೇ ಆಶ್ರಮ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಈ ನಡುವೆ ನಿರ್ಮಿತಿ ಕೇಂದ್ರದ ವೈಕ್ತಿಯೋರ್ವ ಏಕಾಏಕಿ ಇವರನ್ನು ಹೊರಹಾಕಿದ್ದು, ರಸ್ತೆಯಲ್ಲಿ ಬಿದ್ದಿರುವ ನಿರಾಶ್ರಿತರನ್ನು ರಕ್ಷಿಸಿ ಸಲಹಲು ರಾಜುರವರು ತಮ್ಮ  ಆಸ್ತಿಯನ್ನು ಮಾರಾಟ ಮಾಡಬೇಕಾದ ಸ್ಥಿತಿ ಎದುರಾಯಿತು. ಆದರೂ ಧೈರ್ಯ ಕಳೆದುಕೊಳ್ಳದೆ ತಮ್ಮ ಸೇವಾ ಕಾರ್ಯ ಮುಂದುವರೆಸಿದ್ದಾರೆ. 
    ಶಿವಮೊಗ್ಗದಿಂದ ಸ್ಥಳಾಂತರಗೊಂಡು ನಗರದ ಬೊಮ್ಮನಕಟ್ಟೆ ತಿಮ್ಲಾಪುರ ರಸ್ತೆಯಲ್ಲಿ ವ್ಯಕ್ತಿಯೊಬ್ಬರ ಸಹಾಯದೊಂದಿಗೆ ಆಶ್ರಮ ಮುಂದುವರೆಸಿದ್ದಾರೆ. ಯಾವುದೇ ಆದಾಯ ಮೂಲ ಹೊಂದಿರುದ ರಾಜುರವರು ತಮ್ಮ ಸ್ವಂತ ಹಣದಲ್ಲಿ ಆಶ್ರಮಕ್ಕೆ ಅಗತ್ಯವಿರುವ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಂಡಿದ್ದಾರೆ.  ಸರ್ಕಾರದಿಂದ ಯಾವುದೇ ಸೌಲಭ್ಯಗಳನ್ನು ಪಡೆದುಕೊಳ್ಳದೆ ಸ್ಥಳೀಯರು, ದಾನಿಗಳು ಹಾಗು ಸಂಘ-ಸಂಸ್ಥೆಗಳ ನೆರವಿನೊಂದಿಗೆ ಆಶ್ರಮ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.
    ಕೆಲವು ಅಭಿಮಾನಿಗಳು ಪುನೀತ್ ರಾಜ್‌ಕುಮಾರ್ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸಮಾಜಸೇವಕರಂತೆ ಮುಖವಾಡ ಹಾಕಿಕೊಂಡವರು ಇದ್ದಾರೆ. ಆದರೆ ರಾಜು ಅವರಂತೆ ಎಲೆ-ಮರೆ ಕಾಯಿಯಾಗಿ ಸೇವೆ ಸಲ್ಲಿಸುವವರು ವಿರಳ. ಇಂತಹವರು ಸಮಾಜಕ್ಕೆ ಮಾದರಿ ಎಂದರೆ ತಪ್ಪಾಗಲಾರದು. 
 

ನಾನು ಪುನೀತ್‌ರಾಜ್‌ಕುಮಾರ್ ಅವರ ಅಭಿಮಾನಿಯಾಗಿದ್ದು, ಅವರ ಹೆಸರನ್ನು ನಾನು ಎಲ್ಲೂ ದುರ್ಬಳಕೆ ಮಾಡಿಕೊಂಡಿಲ್ಲ. ವಯೋವೃದ್ದರು, ನಿರಾಶ್ರಿತರ ಸೇವೆ ಮಾಡುತ್ತಿರುವುದು ನನಗೆ ತೃಪ್ತಿ ನೀಡುತ್ತಿದೆ. ಪುನೀತ್ ರಾಜ್‌ಕುಮಾರ್ ಅವರನ್ನು ನಾನು ಭೇಟಿಯಾಗಿಲ್ಲ. ಅವರು ನಿಧನ ಹೊಂದುವ ಒಂದು ವಾರದ ಹಿಂದೆ ನಾನು ಅವರ ಸಹಾಯಕರನ್ನು ಸಂಪರ್ಕಿಸಿದಾಗ ನನಗೆ ಪುನೀತ್ ರಾಜ್‌ಕುಮಾರ್ ಭೇಟಿಯಾಗಲು ಅವಕಾಶ ನೀಡುವುದಾಗಿ ತಿಳಿಸಿದ್ದರು. ಆದರೆ ಭೇಟಿಯಾಗಲು ಸಾಧ್ಯವಾಗಲಿಲ್ಲ. ಅವರ ಬದುಕು ನಮ್ಮೆಲ್ಲರಿಗೂ ಆದರ್ಶವಾಗಿದೆ. 
                                                                                    - ರಾಜುನಾಯ್ಕ ಕನ್ನಡಿಗ, ಸಂಸ್ಥಾಪಕರು, 
ಹೋಂ ಆಫ್ ಹೋಂ ಜನಸ್ನೇಹಿ ಸೇವಾ ಟ್ರಸ್ಟ್ ನಿರಾಶ್ರಿತರ ಆಶ್ರಮ
-------------------------------------------------------------------------------------------- 

ರಾಜುನಾಯ್ಕ ಅವರು ಒಬ್ಬ ಮಾನವೀಯತೆ ಉಳ್ಳ ವ್ಯಕ್ತಿಯಾಗಿದ್ದು, ಯಾವುದೇ ಫಲಾಫೇಕ್ಷೆ ಇಲ್ಲದೆ ವಯೋವೃದ್ಧರು, ನಿರಾಶ್ರಿತರ ಸೇವೆಯಲ್ಲಿ ತೊಡಗಿದ್ದಾರೆ. ಪ್ರಸ್ತುತ ಆಶ್ರಮದಲ್ಲಿ ಸುಮಾರು ೪೫ ಜನರಿದ್ದು, ಅವರ ಜೊತೆಯಲ್ಲಿಯೇ ರಾಜು ದಂಪತಿ ಸಹ ವಾಸಿಸುತ್ತಿದ್ದರು. ಇವರ ಈ ಸೇವಾ ಕಾರ್ಯಕ್ಕೆ ನಗರದ ಜನಪ್ರತಿನಿಧಿಗಳು, ದಾನಿಗಳು ನೆರವಾಗಿದ್ದಾರೆ. 
 - ಅಪೇಕ್ಷ ಮಂಜುನಾಥ್, ಕಲಾವಿದರು,  ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರು, ಭದ್ರಾವತಿ. 

Saturday, March 15, 2025

ಬಣದೋಕುಳಿಯೊಂದಿಗೆ ಹೋಳಿ ಹಬ್ಬ ಸಂಪನ್ನ

ಭದ್ರಾವತಿ ಹಳೇನಗರ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಬಳಿ ಬ್ರಾಹ್ಮಣರ ಬೀದಿಯಲ್ಲಿ ಮಕ್ಕಳು, ಪುರುಷರು, ಮಹಿಳೆಯರು ವಯಸ್ಸಿನ ಬೇಧಭಾವವಿಲ್ಲದೆ ಬಣದೋಕುಳಿಯಲ್ಲಿ ತೊಡಕುವ ಮೂಲಕ ಕುಣಿದು ಸಂಭ್ರಮಿಸಿದರು. 
    ಭದ್ರಾವತಿ : ನಗರದ ವಿವಿಧೆಡೆ ಶನಿವಾರ ಬಣದೋಕುಳಿಯೊಂದಿಗೆ ಸಂಭ್ರಮಾಚರಣೆ ನಡೆಸಿ ರತಿಮನ್ಮಥರ ದಹನದೊಂದಿಗೆ ಹೋಳಿ ಹಬ್ಬ ಸಂಪನ್ನಗೊಳಿಸಲಾಯಿತು. 
    ಹಳೇನಗರ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಬಳಿ ಬ್ರಾಹ್ಮಣರ ಬೀದಿ ಮತ್ತು ಉಪ್ಪಾರರ ಬೀದಿ ಹಾಗು ಕುಂಬಾರರ ಬೀದಿ ಸೇರಿದಂತೆ ವಿವಿಧೆಡೆ ಬೆಳಿಗ್ಗೆಯಿಂದಲೇ ಮಕ್ಕಳು, ಪುರುಷರು, ಮಹಿಳೆಯರು ವಯಸ್ಸಿನ ಬೇಧಭಾವವಿಲ್ಲದೆ ಬಣದೋಕುಳಿಯಲ್ಲಿ ತೊಡಕುವ ಮೂಲಕ ಹಾಡಿನ ಅಬ್ಬರದ ಸದ್ದಿಗೆ ಕುಣಿದು ಸಂಭ್ರಮಿಸಿದರು. ನಂತರ ವಿವಿಧ ಧಾರ್ಮಿಕ ಆಚರಣೆಗಳೊಂದಿಗೆ ಭಕ್ತಿ-ಭಾವದೊಂದಿಗೆ ರತಿ-ಮನ್ಮಥರ ಮೆರವಣಿಗೆ ನಡೆಸಿ ದಹನದೊಂದಿಗೆ ಸಂಪನ್ನಗೊಳಿಸಿದರು. 
    ನಗರಸಭೆ ಸಮೀಪದ ಭೂತನಗುಡಿಯಲ್ಲಿ ಶ್ರೀ ನೇತಾಜಿ ಸೇವಾ ಸಮಿತಿ ಹಾಗು ಶ್ರೀ ನೇತಾಜಿ ಯುವಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ೮೮ನೇ ವರ್ಷದ ಹೋಳಿ ಹಬ್ಬ ಆಚರಣೆ ಸಹ ಸಂಪನ್ನಗೊಂಡಿತು. 


    ನಗರಸಭೆ ಸಮೀಪದ ಭೂತನಗುಡಿಯಲ್ಲಿ ಶ್ರೀ ನೇತಾಜಿ ಸೇವಾ ಸಮಿತಿ ಹಾಗು ಶ್ರೀ ನೇತಾಜಿ ಯುವಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ೮೮ನೇ ವರ್ಷದ ಹೋಳಿ ಹಬ್ಬ ಆಚರಣೆ ಕೊನೆಯ ದಿನ ಪ್ರಮುಖ ರಸ್ತೆಗಳಲ್ಲಿ ಮನ್ಮಥ ದೇವರ ಭವ್ಯ ಮೆರವಣಿಗೆ ನಡೆಸಲಾಯಿತು. 
    ಭೂತನಗುಡಿ ವ್ಯಾಪ್ತಿಯ ರಸ್ತೆ ರಸ್ತೆಗಳಲ್ಲಿ ಮಕ್ಕಳು, ಪುರುಷರು, ಮಹಿಳೆಯರು ವಯಸ್ಸಿನ ಬೇಧಭಾವವಿಲ್ಲದೆ ಬಣದೋಕುಳಿಯಲ್ಲಿ ತೊಡಕಿರುವುದು ಕಂಡು ಬಂದಿತು. ಪ್ರಮುಖ ರಸ್ತೆಗಳಲ್ಲಿ ಮನ್ಮಥ ದೇವರ ಭವ್ಯ ಮೆರವಣಿಗೆ ನಡೆಸಿ ಅಂತಿಮವಾಗಿ ನಗರಸಭೆ ಬಳಿ ದಹನದೊಂದಿಗೆ ಸಂಪನ್ನಗೊಳಿಸಿದರು. 
    ಉಳಿದಂತೆ ನಗರದಾದ್ಯಂತ ಕಳೆದ ೨-೩ ದಿನಗಳಿಂದ ಸಾಮಾನ್ಯವಾಗಿ ಹೋಳಿ ಆಚರಣೆಯಲ್ಲಿ ತೊಡಗಿರುವುದು ಕಂಡು ಬಂದಿತು. ವಿಶೇಷ ಎಂದರೆ ಈ ಬಾರಿ ಹೆಚ್ಚಾಗಿ ಯುವಕರು-ಯುವತಿಯರು ಬಣದೋಕುಳಿಯಲ್ಲಿ ತೊಡಗುವ ಮೂಲಕ ಗಮನ ಸೆಳೆದರು. 
    ಹೋಳಿ ಆಚರಣೆ ಹಿನ್ನಲೆಯಲ್ಲಿ ನಗರದ ಆಯಾಕಟ್ಟಿನ ಸ್ಥಳಗಳಲ್ಲಿ ಹಾಗು ಹೋಳಿ ಆಚರಣೆ ನಡೆಸುವ ಸ್ಥಳಗಳಲ್ಲಿ ಹೆಚ್ಚಿನ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. 

ಜಗತ್ತಿನಲ್ಲಿ ಯಾರು ದೊಡ್ಡವರಲ್ಲ ಎಲ್ಲರೂ ಸಮಾನರು : ಅಕ್ರಮ್ ಉಲ್ಲಾ ಷರೀಬ್

ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಇಫ್ತಾರ್ ಕೂಟ 

ಪಾವನ ಮಾಸ ರಂಜಾನ್ ಪ್ರಯುಕ್ತ ಜಮಾಅತೆ ಇಸ್ಲಾಮಿ ಹಿಂದ್ ಭದ್ರಾವತಿ ತಾಲೂಕು ಘಟಕದ ವತಿಯಿಂದ ನಗರದ ಡಾ. ರಾಜ್‌ಕುಮಾರ್ ರಸ್ತೆ(ಬಿ.ಎಚ್ ರಸ್ತೆ) ಆಯಿಷಾ ಮಸೀದಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸೌಹಾರ್ದ ಇಫ್ತಾರ್ ಕೂಟ ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕ ಜನಾಬ್ ಅಕ್ರಮ್ ಉಲ್ಲಾ ಷರೀಬ್ ಪಾಲ್ಗೊಂಡು ಮಾತನಾಡಿದರು. 
    ಭದ್ರಾವತಿ: ಜಗತ್ತಿನಲ್ಲಿ ಯಾರು ದೊಡ್ಡವರಲ್ಲ ಎಲ್ಲರೂ ಸಮಾನರು. ನಮ್ಮ ಸೃಷ್ಟಿಕರ್ತ ಮಾತ್ರ ದೊಡ್ಡವನು. ಇದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ಈ ಉದ್ದೇಶದಿಂದ ಇಫ್ತಾರ್ ಕೂಟ ಆಯೋಜಿಸಲಾಗುತ್ತದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಜಿಲ್ಲಾ ಸಂಚಾಲಕ ಜನಾಬ್ ಅಕ್ರಮ್ ಉಲ್ಲಾ ಷರೀಬ್ ಹೇಳಿದರು. 
    ಅವರು ಶನಿವಾರ ಪಾವನ ಮಾಸ ರಂಜಾನ್ ಪ್ರಯುಕ್ತ ಜಮಾಅತೆ ಇಸ್ಲಾಮಿ ಹಿಂದ್ ತಾಲೂಕು ಘಟಕದ ವತಿಯಿಂದ ನಗರದ ಡಾ. ರಾಜ್‌ಕುಮಾರ್ ರಸ್ತೆ(ಬಿ.ಎಚ್ ರಸ್ತೆ) ಆಯಿಷಾ ಮಸೀದಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸೌಹಾರ್ದ ಇಫ್ತಾರ್ ಕೂಟ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 
    ಮುಸ್ಲಿಂ ಸಮುದಾಯದವರು ನಮ್ಮ ಸೃಷ್ಟಿಕರ್ತ ಒಬ್ಬನೆ. ಆತ ಮಾತ್ರ ನಮ್ಮೆಲ್ಲರಿಗೂ ದೊಡ್ಡವನು ಎಂಬುದನ್ನು ಅರಿಯಬೇಕು. ಈ ನಿಟ್ಟಿನಲ್ಲಿ ೫ ಕರ್ಮಗಳನ್ನು ಕಡ್ಡಾಯವಾಗಿ ಆಚರಿಸಬೇಕು. ಆಗ ಮಾತ್ರ ನಮ್ಮಲ್ಲಿ ಒಳ್ಳೆಯ ಗುಣಗಳನ್ನು ರೂಪುಗೊಳ್ಳಲು ಸಾಧ್ಯ. ಜಾತಿ-ಧರ್ಮ, ಬಡವ-ಶ್ರೀಮಂತ ಯಾವುದೇ ಭಾವಿಸದೆ ಎಲ್ಲರನ್ನು ಒಂದಾಗಿ ನೋಡುವ ಮನೋಭಾವ, ಕಷ್ಟದಲ್ಲಿ ಇರುವವರಿಗೆ ನೆರವಾಗುವುದು. ಯಾರು ಮೊದಲು ಬರುತ್ತಾರೆಯೋ ಅವರಿಗೆ ಮೊದಲ ಆದ್ಯತೆ ನೀಡುವುದು. ಹೀಗೆ ಹಲವು ಸಮಾನತೆ ನಮ್ಮಲ್ಲಿ ಬೆಳೆಸಿಕೊಳ್ಳಬೇಕು. ಇಫ್ತಾರ್ ಕೂಟ ಇದನ್ನು ತಿಳಿಸುವ ಉದ್ದೇಶವಾಗಿದೆ ಎಂದರು. 
    ಜಮಾಅತೆ ಇಸ್ಲಾಮಿ ಹಿಂದ್ ತಾಲೂಕು ಸಂಚಾಲಕ ಉಪಸ್ಥಿತರಿದ್ದರು. ನಗರಸಭೆ ಸದಸ್ಯ ಜಾರ್ಜ್, ಮುಖಂಡರಾದ ತೀರ್ಥೇಶ, ಮಂಜುನಾಥ್, ರಾಜು, ಮಹಮದ್ ರಫಿ(ಟೈಲರ್), ಖದೀರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 

ವಿಜೃಂಭಣೆಯಿಂದ ಜುರುಗಿದ ಶ್ರೀ ವೀರಾಂಜನೇಯ ಸ್ವಾಮಿ ರಥೋತ್ಸವ

ಭದ್ರಾವತಿ ಶ್ರೀ ಕ್ಷೇತ್ರ ಸುಣ್ಣದಹಳ್ಳಿ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸ್ವಾಮಿಯ ರಥೋತ್ಸವ ಶನಿವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. 
ಭದ್ರಾವತಿ: ಶ್ರೀ ಕ್ಷೇತ್ರ ಸುಣ್ಣದಹಳ್ಳಿ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸ್ವಾಮಿಯ ರಥೋತ್ಸವ ಶನಿವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.    ಪ್ರತಿ ವರ್ಷದಂತೆ ಈ ಬಾರಿ ಸಹ ದೇವಸ್ಥಾನದ ಆವರಣದಿಂದ ಆರಂಭಗೊಂಡ ರಥೋತ್ಸವ ಮಧ್ಯಾಹ್ನ ೧೨.೪೫ಕ್ಕೆ ಗ್ರಾಮದ ಅಗಸೆ ಬಾಗಿಲಿನವರೆಗೆ ಬಂದು ತಲುಪಿತು. ರಥೋತ್ಸವ ಆರಂಭಗೊಳ್ಳುತ್ತಿದ್ದಂತೆ ಭಕ್ತರು ಸ್ವಾಮಿಗೆ ಜಯಘೋಷಗಳನ್ನು ಹಾಕಿದರು. ಭಜನಾ ಮಂಡಳಿ ಸದಸ್ಯರಿಂದ ಭಜನೆ ನಡೆಯಿತು. ಸ್ವಾಮಿ ಪ್ರತಿಷ್ಠಾಪನೆಗೊಂಡ ಅಲಂಕೃತ ಭವ್ಯ ರಥಕ್ಕೆ ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಅಲ್ಲದೆ ಓಂಕಾರ ಚಿತ್ತಾರ ಹಾಗು ಆಯೋಧ್ಯೆ ಶ್ರೀರಾಮನ ಬಿಲ್ಲು-ಬಾಣ ಬಿಡಿಸಿ ಕರ್ಪೂರ ಹಚ್ಚಿ ಭಕ್ತಿಯಿಂದ ಕುಣಿದು ಸಂಭ್ರಮಿಸಲಾಯಿತು. 



ರಥೋತ್ಸವ ನಂತರ ಅನ್ನ ಸಂತರ್ಪಣೆ ನೆರವೇರಿತು. ಅಲ್ಲದೆ ಸೇವಾಕರ್ತರಿಂದ ಮಜ್ಜಿಗೆ, ಪಾನಕ, ಕಲ್ಲು ಸಕ್ಕರೆ ಸೇರಿದಂತೆ ಇನ್ನಿತರೆ ಪ್ರಸಾದ ವಿತರಣೆ ನಡೆಯಿತು. ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಗಣ್ಯರು, ಸುಣ್ಣದಹಳ್ಳಿ, ಮಾರುತಿ ನಗರ, ಮೊಸರಹಳ್ಳಿ, ತಾಷ್ಕೆಂಟ್ ನಗರ, ಎರೇಹಳ್ಳಿ, ಆನೆಕೊಪ್ಪ, ಬಾರಂದೂರು, ಉಜ್ಜನಿಪುರ, ಕಾಗದನಗರ, ಜೆಪಿಎಸ್ ಕಾಲೋನಿ ಮತ್ತು ನಗರ ಹಾಗು ಗ್ರಾಮಾಂತರ ಪ್ರದೇಶಗಳ ಭಕ್ತರು ಭಕ್ತರು ಪಾಲ್ಗೊಂಡಿದ್ದರು. 

Friday, March 14, 2025

ಆರ್. ಗೌರಮ್ಮ ನಿಧನ


ಆರ್. ಗೌರಮ್ಮ 
ಭದ್ರಾವತಿ: ನಗರದ ಡಾ. ರಾಜ್‌ಕುಮಾರ್ ರಸ್ತೆ, ಹಾಲಪ್ಪ ವೃತ್ತ ಸಮೀಪದ ನಿವಾಸಿ ಆರ್. ಗೌರಮ್ಮ(೮೨) ನಿಧನ ಹೊಂದಿದರು. ಇವರ ಅಂತ್ಯಕ್ರಿಯೆ ಮಾ.೧೨ರಂದು ತಾಲೂಕಿನ ಗೌರಪುರ ಗ್ರಾಮದ ತೋಟದಲ್ಲಿ ನೆರವೇರಿತು. 
ಗೌರಮ್ಮ ವಯೋಸಹಜವಾಗಿ ನಿಧನ ಹೊಂದಿದ್ದು, ಇವರಿಗೆ ಪತಿ, ಉದ್ಯಮಿ ಟಿ.ಎಂ ನಾಗರಾಜ್, ಮೂವರು ಪುತ್ರರರು, ಓರ್ವ ಪುತ್ರಿ ಇದ್ದಾರೆ. ಇವರ ನಿಧನಕ್ಕೆ ನಗರದ ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಗಣ್ಯರು ಸಂತಾಪ ಸೂಚಿಸಿದ್ದಾರೆ. ಇವರ ಪುಣ್ಯಸ್ಮರಣೆ ಮಾ.೧೯ರಂದು ಹಾಲಪ್ಪ ವೃತ್ತ ಸಮೀಪದ ಭದ್ರಾ ಪ್ರೌಢಶಾಲೆ ಮುಂಭಾಗದಲ್ಲಿರುವ ಇವರ ನಿವಾಸದಲ್ಲಿ ನೆರವೇರಲಿದೆ. 



ಮಾ.೧೫ರಂದು ಮಹಿಳಾ ದಿನಾಚರಣೆ : ಒಡಲಾಳ ನಾಟಕ ಪ್ರದರ್ಶನ


    ಭದ್ರಾವತಿ: ತಾಲೂಕಿನ ಗ್ರಾಮ ಪಂಚಾಯಿತಿಗಳ ಚುನಾಯಿತ ಮಹಿಳಾ ಪ್ರತಿನಿಧಿಗಳ ಒಕ್ಕೂಟ ಸುಗ್ರಾಮ ವತಿಯಿಂದ ಮಾ.೧೫ರಂದು ಹಮ್ಮಿಕೊಳ್ಳಲಾಗಿರುವ ಮಹಿಳಾ ದಿನಾಚರಣೆ ಅಂಗವಾಗಿ ಒಡಲಾಳ ನಾಟಕ ಪ್ರದರ್ಶನಗೊಳ್ಳಲಿದೆ. 
    ನಗರದ ಡಾ. ರಾಜ್‌ಕುಮಾರ್ ರಸ್ತೆ (ಬಿ.ಎಚ್ ರಸ್ತೆ), ಕಾಂಚನ ಹೋಟೆಲ್ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮದಲ್ಲಿ ದೇವನೂರ ಮಹಾದೇವ ಅವರ ಒಡಲಾಳ ನಾಟಕ ಪ್ರದರ್ಶನಗೊಳ್ಳಲಿದ್ದು, ನಗರದ ರಂಗ ಕಲಾವಿದೆ ಇಂದು ಡಿ. ನೀನಾಸಂ ಸಾಕವ್ವನ ಪಾತ್ರ ಅಭಿನಯಿಸಲಿದ್ದಾರೆ. ರಂಗ ಕಲಾವಿದರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

೮೮ನೇ ವರ್ಷದ ಹೋಳಿ ಹಬ್ಬ ಆಚರಣೆ : ಮಾ.೧೫ರಂದು ಸಂಪನ್ನ

ಭದ್ರಾವತಿ ನಗರಸಭೆ ಸಮೀಪದ ಭೂತನಗುಡಿಯಲ್ಲಿ ಶ್ರೀ ನೇತಾಜಿ ಸೇವಾ ಸಮಿತಿ ಹಾಗು ಶ್ರೀ ನೇತಾಜಿ ಯುವಕರ ಸಂಘದ ವತಿಯಿಂದ ೮೮ನೇ ವರ್ಷದ ಹೋಳಿ ಹಬ್ಬದ ಆಚರಣೆ ಅಂಗವಾಗಿ ಪ್ರತಿಷ್ಠಾಪಿಸಲಾಗಿರುವ ಮನ್ಮಥ ದೇವರು. 
    ಭದ್ರಾವತಿ : ನಗರಸಭೆ ಸಮೀಪದ ಭೂತನಗುಡಿಯಲ್ಲಿ ಶ್ರೀ ನೇತಾಜಿ ಸೇವಾ ಸಮಿತಿ ಹಾಗು ಶ್ರೀ ನೇತಾಜಿ ಯುವಕರ ಸಂಘದ ವತಿಯಿಂದ ೮೮ನೇ ವರ್ಷದ ಹೋಳಿ ಹಬ್ಬದ ಆಚರಣೆ ಮಾ.೧೫ರ ಶನಿವಾರ ಸಂಪನ್ನಗೊಳ್ಳಲಿದೆ. 
    ಶ್ರೀ ಕೃಷ್ಣ ರುಕ್ಮಿಣಿ ದೇವಸ್ಥಾನದ ಬಳಿ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ಭವ್ಯ ಮಂಟಪದಲ್ಲಿ ಕಳೆದ ೪ ದಿನಗಳಿಂದ ಮನ್ಮಥ ದೇವರನ್ನು ಪ್ರತಿಷ್ಠಾಪಿಸಲಾಗಿದ್ದು, ಪ್ರತಿದಿನ ವಿಶೇಷ ಪೂಜೆ ಹಾಗು ಮನಂಜನಾ ಕಾರ್ಯಕ್ರಮಗಳು ಜರುಗುತ್ತಿವೆ. ಶುಕ್ರವಾರ ಸಂಜೆ ಕೊಬ್ಬರಿ ತುಪ್ಪ ಗುಗ್ಗಳದ ಪೂಜೆ ನೆರವೇರಿತು. 
    ಮಾ.೧೫ರ ಶನಿವಾರ ಬೆಳಿಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೩ ಗಂಟೆವರೆಗೆ ಓಕುಳಿ ಆಟ(ಬಣ್ಣ ಹಚ್ಚುವ ಆಟ)ನಡೆಯಲಿದೆ. ನಂತರ ಪ್ರಮುಖ ರಸ್ತೆಗಳಲ್ಲಿ ಮನ್ಮಥ ದೇವರ ಭವ್ಯ ಮೆರವಣಿಗೆ ನಡೆಯಲಿದ್ದು, ಅಂತಿಮವಾಗಿ ಮನ್ಮಥ ದೇವರ ದಹನದೊಂದಿಗೆ ಸಂಪನ್ನಗೊಳ್ಳಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.