Wednesday, March 19, 2025

ಮದ್ಯದಂಗಡಿ ಗೋಡೆ ಕನ್ನ ಕೊರೆದು ಲಕ್ಷಾಂತರ ರು. ನಗದು, ಮದ್ಯ ದರೋಡೆ

    

ಭದ್ರಾವತಿ: ಮದ್ಯದಂಗಡಿ ಗೋಡೆ ಕನ್ನ ಕೊರೆದು ಲಕ್ಷಾಂತರ ರು. ನಗದು ಹಾಗು ಬೆಲೆ ಬಾಳುವ ಮದ್ಯ ದರೋಡೆ ಮಾಡಿರುವ ಘಟನೆ ತಾಲೂಕಿನ ಬಾರಂದೂರು ಗ್ರಾಮದಲ್ಲಿ ನಡೆದಿದೆ. 
    ಶಿವಮೊಗ್ಗ ವಿನೋಬನಗರ ನಿವಾಸಿ ಎಚ್.ಆರ್ ಪಂದೇಶ್ ಬಾರಂದೂರು ಗ್ರಾಮದಲ್ಲಿರುವ ಶ್ರೀ ವೆಂಕಟೇಶ್ವರ ವೈನ್ ಶಾಪ್ ಮಾಲೀಕರಾಗಿದ್ದು, ವೈನ್ ಶಾಪ್ ಕ್ಯಾಷಿಯರ್ ಸಚಿನ್ ಮಾ.೧೬ರಂದು ದಿನದ ವ್ಯಾಪಾರ ಮುಗಿಸಿಕೊಂಡು ರಾತ್ರಿ ೧೦.೨೦ರ ಸಮಯದಲ್ಲಿ ಬೀಗ ಹಾಕಿಕೊಂಡು ಮನೆಗೆ ಹೋಗಿದ್ದಾರೆ. ಬೆಳಿಗ್ಗೆ ಬಂದು ನೋಡಿದಾಗ ವೈನ್‌ಶಾಪ್‌ಗೆ ಹೊಂದಿಕೊಂಡಂತೆ ಇರುವ ರೆಸ್ಟ್ ರೂಂ ಕಬ್ಬಿಣದ ಬಾಗಿಲಿಗೆ ಹಾಕಿದ್ದ ಬೀಗ ಮುರಿದು ಒಳಗೆ ಪ್ರವೇಶಿಸಿ ರೆಸ್ಟ್ ರೂಂ ಒಳಗಿನ ಗೋಡೆ ಒಬ್ಬ ವ್ಯಕ್ತಿ ಒಳಗೆ ನುಸುಳ ಬಹುದಾದಷ್ಟು ದೊಡ್ಡದಾದ ಕನ್ನ ಕೊರೆದು ದರೋಡೆ ಮಾಡಿರುವುದು ಕಂಡು ಬಂದಿರುತ್ತದೆ. 
    ಬ್ಯಾಂಕ್ ಖಾತೆಗೆ ಜಮಾ ಮಾಡಲು ಇಡಲಾಗಿದ್ದ ೧,೦೦,೦೦೦ ರು. ನಗದು ಹಣ ಮತ್ತು ಮಾ. ೧೫ ಹಾಗು ೧೬ ಶನಿವಾರ ಮತ್ತು ಭಾನುವಾರ ಎರಡು ದಿನದ ವ್ಯಾಪಾರದ ಹಣ ೨,೫೬,೫೦೦ ರು. ಮತ್ತು ವೈನ್ ಶಾಪ್ ಕ್ಯಾಶ್ ಡ್ರಾನಲ್ಲಿದ್ದ ಚಿಲ್ಲರೆ ಹಣ ಒಟ್ಟು ೪,೦೦೦g ರು. ಹಾಗೂ ವೈನ್ ಶಾಪ್ ಶೋಕೇಸ್‌ನಲ್ಲಿದ್ದ ಬ್ಲಾಕ್ & ವ್ಹೈಟ್ ೧೮೦ ಎಂ.ಎಲ್ ಒಟ್ಟು ಸುಮಾರು ೪೬೮೦ ರು. ಮೌಲ್ಯದ ೮ ಬಾಟಲ್‌ಗಳು ಮತ್ತು ವೋಡ್ಕಾ ೧೮೦ ಎಂ.ಎಲ್ ಒಟ್ಟು ಸುಮಾರು ೮೯೦ ರು. ಮೌಲ್ಯದ ೨ ಕ್ವಾಟರ್‌ಗಳನ್ನು ಕಳವು ಮಾಡಲಾಗಿದೆ. ಒಟ್ಟು ನಗದು ಹಣ ೩,೬೦,೫೦೦ ರು. ಮತ್ತು ೫೫೭೦ ರು. ಬೆಲೆಬಾಳುವ ಮಧ್ಯದ ಬಾಟಲ್‌ಗಳನ್ನು ದರೋಡೆ ಮಾಡಲಾಗಿದೆ ಎಂದು ಪೇಪರ್‌ಟೌನ್ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಡಾ. ಪುನೀತ್ ರಾಜ್‌ಕುಮಾರ್ ಒಬ್ಬ ಶ್ರೇಷ್ಠ ಮಾನವೀಯ ಮೌಲ್ಯಗಳನ್ನು ಹೊಂದಿದ ಧೀಮಂತ ನಾಯಕ : ಆರ್.ಎಸ್ ಮಾಧುರಿ

ಭದ್ರಾವತಿ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ಡಾ. ಪುನೀತ್ ರಾಜಕುಮಾರ್‌ರವರ ೫೦ನೇ ವರ್ಷದ ಹುಟ್ಟುಹಬ್ಬ ಹಮ್ಮಿಕೊಳ್ಳಲಾಗಿತ್ತು. 
    ಭದ್ರಾವತಿ : ಪುನೀತ್‌ರಾಜ್‌ಕುಮಾರ್‌ರವರು ಬಡ ವಿದ್ಯಾರ್ಥಿಗಳು, ವಿಕಲಚೇತನರು ಹಾಗು ಅನಾಥರಿಗಾಗಿ ಶಿಕ್ಷಣ ಸಂಸ್ಥೆ ಮತ್ತು ವಸತಿ ನಿಲಯಗಳನ್ನು ತೆರೆದು ಅವರ ಏಳಿಗೆಗಾಗಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದ ಒಬ್ಬ ಶ್ರೇಷ್ಠ ಮಾನವೀಯ ಮೌಲ್ಯಗಳನ್ನು ಹೊಂದಿದ ಧೀಮಂತ ನಾಯಕ ಎಂದು ತಾಲೂಕಿನ ಬಾರಂದೂರು ಜನತಾ ಸಹಕಾರ ಸಂಘದ ಗ್ರಾಹಕರ ಸಂಪರ್ಕ ಅಧಿಕಾರಿ ಆರ್.ಎಸ್ ಮಾಧುರಿ ಬಣ್ಣಿಸಿದರು. 
    ಅವರು ನಗರದ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ. ಪುನೀತ್ ರಾಜಕುಮಾರ್‌ರವರ ೫೦ನೇ ವರ್ಷದ ಹುಟ್ಟುಹಬ್ಬ ಉದ್ಘಾಟಿಸಿ ಮಾತನಾಡಿದರು.   
  ಪುನೀತ್ ರಾಜಕುಮಾರ್ ಒಬ್ಬ ಶ್ರೇಷ್ಠ ಚಿತ್ರನಟ ಮಾತ್ರವಲ್ಲದೆ ಮಾನವೀಯ ಮೌಲ್ಯ ಹೊಂದಿದ್ದ ಒಬ್ಬ ಸಮಾಜ ಸೇವಕರಾಗಿದ್ದರು. ಅವರ ಆದರ್ಶತನ ನಮಗೆ ಮಾದರಿಯಾಗಿವೆ ಎಂದರು. 
ಜನತಾ ಸಹಕಾರ ಸಂಘದ ಅಧಿಕಾರಿಗಳಾದ ಶಮಂತ, ಚೈತ್ರ ಹಾಗೂ ವಿದ್ಯಾ ಉಪಸ್ಥಿತರಿದ್ದರು. ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಅಂಧರ ಕೇಂದ್ರದ ವಿಕಲಚೇತನರು ಪುನೀತ್ ರಾಜಕುಮಾರ್ ಅಭಿನಯದ ಚಲನ ಚಿತ್ರಗೀತೆಗಳನ್ನು ಹಾಡುವ ಮೂಲಕ ಸಂಭ್ರಮಿಸಿದರು. 

ಜಿಲ್ಲಾಧ್ಯಕ್ಷರಾಗಿ ಎಂ.ಆರ್ ಸುರೇಶ್ ನಾಯಕ್ ನೇಮಕ

ಎಂ.ಆರ್ ಸುರೇಶ್ ನಾಯಕ್ 
    ಭದ್ರಾವತಿ : ಅಖಿಲ ಭಾರತ ಕ್ರೈಸ್ತ ಮಹಾಸಭಾ ಜಿಲ್ಲಾಧ್ಯಕ್ಷರಾಗಿ ಶಿವಮೊಗ್ಗ ಅಂಜನಾಪುರ ಗ್ರಾಮದ ಎಂ.ಆರ್ ಸುರೇಶ್ ನಾಯಕ್ ಅವರನ್ನು ನೇಮಕಗೊಳಿಸಿ ಆದೇಶಿಸಲಾಗಿದೆ. 
    ಮಹಾಸಭಾ ಸಂಸ್ಥಾಪಕ ಅಧ್ಯಕ್ಷರಾದ ಎಸ್. ಪ್ರಜ್ವಲ್ ಸ್ವಾಮಿರವರ ಆದೇಶದ ಮೇರೆಗೆ ಎಂ.ಆರ್ ಸುರೇಶ್ ನಾಯಕ್ ಅವರನ್ನು ಒಂದು ವರ್ಷದ ಅವಧಿಗೆ ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಮಹಾಸಭಾ ಮತ್ತಷ್ಟು ಸಂಘಟಿಸುವ ಮೂಲಕ ಸಮುದಾಯ ಏಳಿಗೆಗೆ ಶ್ರಮಿಸುವಂತೆ ಆದೇಶ ಪತ್ರದಲ್ಲಿ ಸೂಚಿಸಲಾಗಿದೆ. 

ಮಾ.೨೦ರಂದು ಸ್ಮಾರ್ಟ್ ಕಾರ್ಡ್ ವಿತರಣಾ ಕಾರ್ಯಕ್ರಮ




    ಭದ್ರಾವತಿ : ಆಯುಷ್ಮಾನ್ ಭಾರತ್ ಯೋಜನೆಯಡಿ ೭೦ ವರ್ಷ ಮೇಲ್ಪಟ್ಟವರಿಗೆ ಸ್ಮಾರ್ಟ್ ಕಾರ್ಡ್ ವಿತರಣಾ ಕಾರ್ಯಕ್ರಮ ಮಾ.೨೦ರ ಗುರುವಾರ ಸಂಜೆ ೬ ಗಂಟೆಗೆ   ತಾಲೂಕು ಕಚೇರಿ ರಸ್ತೆಯಲ್ಲಿರುವ ಶ್ರೀ ವೀರಭದ್ರೇಶ್ವರ ಸಮುದಾಯದ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. 
    ಪಕ್ಷದ ಯುವ ಮುಖಂಡರಾದ ಜಿ. ಆನಂದ ಕುಮಾರ್ ಮತ್ತು ಮಂಗೋಟೆ ರುದ್ರೇಶ್ ನೇತೃತ್ವದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ ರಾಘವೇಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. 
    ಕ್ಯಾಲೆಂಡರ್ ಬಿಡುಗಡೆ : 
    ಪ್ರತಿವರ್ಷದಂತೆ ಈ ಬಾರಿ ಸಹ ಆನಂದ ಸಾಮಾಜಿ ಸೇವಾ ಸಂಸ್ಥೆ ವತಿಯಿಂದ ಕ್ಯಾಲೆಂಡರ್ ಬಿಡುಗಡೆ ಮಾಡಲಾಗುತ್ತಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

Tuesday, March 18, 2025

ಸಾಗುವಳಿದಾರರ ಜಮೀನಿನ ಖಾತೆ ಪತ್ರ ರದ್ದುಗೊಳಿಸಿರುವ ಕ್ರಮ ಖಂಡಿಸಿ ಧರಣಿ ಸತ್ಯಾಗ್ರಹ

ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ 

ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಹೋಬಳಿ, ಯಡೇಹಳ್ಳಿ ಸರ್ವೆ ನಂ.೬೬ರ ೧೯೬೦-೬೧ನೇ ಸಾಲಿನಲ್ಲಿ ಮಂಜೂರು ಮಾಡಿದ ಜಮೀನಿನ ಖಾತೆ ಪತ್ರಗಳನ್ನು ರದ್ದುಪಡಿಸಿರುವ ಕ್ರಮ ಖಂಡಿಸಿ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ತಾಲೂಕು ಕಛೇರಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಿ ಮನವಿ ಸಲ್ಲಿಸಲಾಯಿತು. 
    ಭದ್ರಾವತಿ: ತಾಲೂಕಿನ ಹೊಳೆಹೊನ್ನೂರು ಹೋಬಳಿ, ಯಡೇಹಳ್ಳಿ ಸರ್ವೆ ನಂ.೬೬ರ ೧೯೬೦-೬೧ನೇ ಸಾಲಿನಲ್ಲಿ ಮಂಜೂರು ಮಾಡಿದ ಜಮೀನಿನ ಖಾತೆ ಪತ್ರಗಳನ್ನು ರದ್ದುಪಡಿಸಿರುವ ಕ್ರಮ ಖಂಡಿಸಿ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ತಾಲೂಕು ಕಛೇರಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಿ ಮನವಿ ಸಲ್ಲಿಸಲಾಯಿತು. 
    ಯಡೇಹಳ್ಳಿ ಗ್ರಾಮದ ಸರ್ವೆ ನಂ. ೬೬ರಲ್ಲಿ ೧೯೬೦-೬೧ನೇ ಸಾಲಿನಲ್ಲಿ ಸರ್ಕಾರ ೩೦ ಜನರಿಗೆ ತಲಾ ೨ ಎಕರೆ ಜಮೀನಿನಂತೆ ಒಟ್ಟು ೬೬ ಎಕರೆ ಜಮೀನನ್ನು ಮಂಜೂರು ಮಾಡಿ ಆದೇಶಿಸಿತ್ತು. ಈ ನಡುವೆ ೧೯೮೦ ರಿಂದ ಅರಣ್ಯ ಜಮೀನು ಎಂದು ರೈತರ ಮೇಲೆ ಅನೇಕ ಮೊಕದ್ದಮೆಗಳನ್ನು ದಾಖಲಿಸುವ ಜೊತೆಗೆ ೨೦೨೪ರಲ್ಲಿ ಸಾಗುವಳಿ ಮಾಡುತ್ತಿದ್ದ ರೈತರ ಜಮೀನನ್ನು ಕಿತ್ತುಕೊಂಡು ಅವರುಗಳ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿತ್ತು ಎಂದು ಧರಣಿನಿರತರು ಆರೋಪಿಸಿದರು. 
    ೨೦೨೦ರಲ್ಲಿ ಬೆಂಗಳೂರು ಪ್ರಾದೇಶಿಕ ಕಛೇರಿಯ ಆಯುಕ್ತರು ಸರ್ವೆ ನಂ : ೬೬ರ ಜಮೀನು ಅರಣ್ಯ ಎಂದು ರದ್ದುಗೊಳಿಸಿ ಬದಲಿ ಜಮೀನು ನೀಡಲು ಆದೇಶಿಸಿದ್ದರು. ಆದರೆ ೨೦೧೦ ರಿಂದ ೨೦ ರವರೆಗೂ ಬೆಂಗಳೂರು ಆರ್.ಸಿ ಕಛೇರಿಯಲ್ಲಿ ಪ್ರಕರಣ ನಡೆಯುತ್ತಿರುವಾಗಲೇ ಆಕ್ರಮವಾಗಿ ಸರ್ವೆ ನಂ. ೬೬ರ ಜಮೀನಿನ ಪೈಕಿ ೧೮ ಎಕರೆ ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಖಾತೆ ಬದಲಾವಣೆ ಮಾಡಿ ಕಾನೂನು ಉಲ್ಲಂಘನೆ ಮಾಡಲಾಗಿದೆ ಎಂದು ಧರಣಿನಿರತರು ದೂರಿದರು. ಈ ಅಕ್ರಮಕ್ಕೆ ಕಾರಣಕರ್ತರಾಗಿರುವ ತಾಲೂಕು ಕಛೇರಿಯ ಕಂದಾಯ ಅಧಿಕಾರಿಗಳು ಮತ್ತು ಮಾವಿನಕಟ್ಟೆ ವಲಯ ಅರಣ್ಯಾಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಸರ್ವೆ ನಂ.೬೬ರ ಸಾಗುವಳಿದಾರರಿಗೆ ಅದೇ ಜಮೀನಿನ ಸಾಗುವಳಿದಾರರನ್ನಾಗಿ ಮುಂದುವರೆಸಬೇಕೆಂದು ಆಗ್ರಹಿಸಿದರು. 
    ಧರಣಿ ಸತ್ಯಾಗ್ರಹ ಸ್ಥಳಕ್ಕೆ ತಹಸೀಲ್ದಾರ್ ಪರುಸಪ್ಪ ಕುರುಬರ, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಸೇರಿದಂತೆ ಇನ್ನಿತರರು ಆಗಮಿಸಿ ಮನವಿ ಸ್ವೀಕರಿಸಿ ಸಮಸ್ಯೆ ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.  ಮಾನವ ಹಕ್ಕುಗಳ ವೇದಿಕೆ ಅಧ್ಯಕ್ಷ ಬಿ.ಎನ್ ರಾಜು ಧರಣಿ ಸತ್ಯಾಗ್ರಹ ನೇತೃತ್ವವಹಿಸಿದ್‌ದರು. 

ಸಾಧಕ ಮಹಿಳೆಯರ ನೆನಪಿನೊಂದಿಗೆ ಸಾಧನೆ ದಾರಿಯಲ್ಲಿ ಸಾಗಿ : ಗೀತಾ ರಾಜ್‌ಕುಮಾರ್

ಭದ್ರಾವತಿ ನಗರಸಭೆ ವತಿಯಿಂದ ಬಿ.ಎಚ್ ರಸ್ತೆ, ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಪಿ. ಭವ್ಯ, ಡಾ. ವಿಜಯದೇವಿ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು. 
    ಭದ್ರಾವತಿ : ಸಾಧಕ ಮಹಿಳೆಯರನ್ನು ನೆನಪಿಕೊಳ್ಳುವ ಜೊತೆಗೆ ಅವರ ದಾರಿಯಲ್ಲಿ ನಾವುಗಳು ಸಹ ಸಾಗುವಂತಹ ದಿನ ಮಹಿಳಾ ದಿನಾಚರಣೆಯಾಗಬೇಕೆಂದು ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಹೇಳಿದರು. 
    ನಗರಸಭೆ ವತಿಯಿಂದ ಬಿ.ಎಚ್ ರಸ್ತೆ, ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. 
    ಮಹಿಳೆಯರು ಮನೆಗಳಿಂದ ಹೊರಬಾರದಿರುವ ಕಾಲಘಟ್ಟದಲ್ಲಿ ಶಿಕ್ಷಣಪಡೆದು ಈ ದೇಶದ ಪ್ರಪ್ರಥಮ ಮಹಿಳಾ ಶಿಕ್ಷಕಿಯಾಗುವ ಮೂಲಕ ಮಹಿಳೆಯರ ಆಶಾಕಿರಣವಾಗಿ ಭವಿಷ್ಯದ ಸಮಾಜಕ್ಕೆ ಮಾದರಿಯಾಗಿರುವ ಸಾವಿತ್ರಿಬಾಯಿ ಪುಲೆ ಅವರ ಬದುಕು, ಶಿಕ್ಷಣ ಪಡೆಯಲು ಅವರು ಅನುಭವಿಸಿದ ಸಂಕಷ್ಟ ಹಾಗು ಶಿಕ್ಷಕಿಯಾಗಿ ಕೈಗೊಂಡ ಸಾಮಾಜಿಕ ಸುಧಾರಣೆಗಳು ಇಂದಿಗೂ ಅವಿಸ್ಮರಣೀಯವಾಗಿವೆ. ಇಂತಹ ಮಹಿಳಾ ಸಾಧಕಿಯನ್ನು ಹಾಗು ಒನಕೆ ಓಬವ್ವ, ಕಿತ್ತೂರು ರಾಣಿ ಚನ್ನಮ್ಮ, ಝಾನ್ಸಿರಾಣಿ ಲಕ್ಷ್ಮೀಬಾಯಿ, ಅಕ್ಕಮಹಾದೇವಿ ಸೇರಿದಂತೆ ಅನೇಕ ಸಾಧಕ ಮಹಿಳೆಯರು ನಮಗೆ ಆದರ್ಶಪ್ರಾಯರಾಗಿದ್ದಾರೆ. ಇಂತಹ ಸಾಧಕ ಮಹಿಳೆಯರನ್ನು ನೆನಪಿಕೊಳ್ಳುವ ಜೊತೆಗೆ ಅವರ ದಾರಿಯಲ್ಲಿ ನಾವುಗಳು ಸಹ ಸಾಗಬೇಕೆಂದರು. 
    ಶಿವಮೊಗ್ಗ ಕಾರಾಗೃಹ ಸಹಾಯಕ ಅಧೀಕ್ಷಕಿ ಪಿ. ಭವ್ಯ, ಸಾಹಿತಿ, ನಿವೃತ್ತ ಪ್ರಾಧ್ಯಾಪಕಿ ಎಮೆರಿಟಸ್ ಡಾ. ವಿಜಯದೇವಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಸದಸ್ಯರಾದ ಬಿ.ಕೆ ಮೋಹನ್, ಬಸವರಾಜ ಬಿ. ಆನೇಕೊಪ್ಪ, ಅನುಸುಧಾ ಮೋಹನ್ ಪಳನಿ, ಶೃತಿ ವಸಂತಕುಮಾರ್, ಮಂಜುಳಾ ಸುಬ್ಬಣ್ಣ, ಶಶಿಕಲಾ ನಾರಾಯಣ, ಜಯಶೀಲ ಸುರೇಶ್, ಪಲ್ಲವಿ, ಕೋಟೇಶ್ವರಾವ್, ಲತಾ ಚಂದ್ರಶೇಖರ್, ಅನುಪಮ ಚನ್ನೇಶ್, ಐ.ವಿ ಸಂತೋಷ್, ರಾಜೇಂದ್ರ, ನಗರಸಭೆ ಸಮುದಾಯ ಸಂಘಟನಾ ಅಧಿಕಾರಿ ಸುಹಾಸಿನಿ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 
    ನಗರಸಭೆ ಮಹಿಳಾ ಸಿಬ್ಬಂದಿಗಳು, ಮಹಿಳಾ ಪೌರಕಾರ್ಮಿಕರು, ಸ್ವಸಹಾಯ ಸಂಘಗಳ ಒಕ್ಕೂಟದ ಮಹಿಳೆಯರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.  

ಚುಂಚಾದ್ರಿ ಮಹಿಳಾ ವೇದಿಕೆಯಿಂದ ವಿಶ್ವ ಮಹಿಳಾ ದಿನಾಚರಣೆ

ಪ್ರತಿ ವರ್ಷದಂತೆ ಈ ಬಾರಿ ಸಹ ಭದ್ರಾವತಿ ನಗರದ ಚುಂಚಾದ್ರಿ ಮಹಿಳಾ ವೇದಿಕೆ ವತಿಯಿಂದ ರೋಟರಿ ಕ್ಲಬ್ ಸಭಾಂಗಣದಲ್ಲಿ ವಿಶ್ವ ಮಹಿಳಾ ದಿನಾಚರಣೆ ಆಯೋಜಿಸಲಾಗಿತ್ತು. ಕಾವೇರಿ ನದಿ ರಕ್ಷಣಾ ಸಮಿತಿ ಕಾರ್ಯಾಧ್ಯಕ್ಷೆ ಕೆ.ವಿ ಯಶೋಧ ರಾಜಣ್ಣ ಕಾರ್ಯಕ್ರಮ ಉದ್ಘಾಟಿಸಿದರು. 
    ಭದ್ರಾವತಿ : ಪ್ರತಿ ವರ್ಷದಂತೆ ಈ ಬಾರಿ ಸಹ ನಗರದ ಚುಂಚಾದ್ರಿ ಮಹಿಳಾ ವೇದಿಕೆ ವತಿಯಿಂದ ರೋಟರಿ ಕ್ಲಬ್ ಸಭಾಂಗಣದಲ್ಲಿ ವಿಶ್ವ ಮಹಿಳಾ ದಿನಾಚರಣೆ ಆಯೋಜಿಸಲಾಗಿತ್ತು. 
    ಕಾವೇರಿ ನದಿ ರಕ್ಷಣಾ ಸಮಿತಿ ಕಾರ್ಯಾಧ್ಯಕ್ಷೆ ಕೆ.ವಿ ಯಶೋಧ ರಾಜಣ್ಣ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆ ಗೌರವಾಧ್ಯಕ್ಷೆ ಡಾ. ಆರ್. ಅನುರಾಧ ಪಟೇಲ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆ ಅಧ್ಯಕ್ಷೆ ಸುಧಾಮಣಿ ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. 
    ಮಂಡ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಸುಜಾತ, ರೋಟರಿ ಕ್ಲಬ್ ಅಧ್ಯಕ್ಷ ಜಿ. ರಾಘವೇಂದ್ರ ಉಪಾಧ್ಯಾಯ, ನಳಿನ, ತಾರಾಮಣಿ ಮತ್ತು ಗಾಯತ್ರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  ವೇದಿಕೆ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. 
    ಮಹಿಳಾ ದಿನಾಚರಣೆ ಅಂಗವಾಗಿ ರೋಟರಿ ಕ್ಲಬ್ ಸಹಕಾರದೊಂದಿಗೆ ನೇತ್ರದಾನ ನೋಂದಾಣಿ ಶಿಬಿರ ಹಾಗು ಕ್ಯಾನ್ಸರ್ ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು. ಸುಮಾರು ೩೫ ಮಹಿಳೆಯರು ನೇತ್ರದಾನ ನೋಂದಾಣಿ ಮಾಡಿಸಿಕೊಳ್ಳುವ ಮೂಲಕ ಗಮನ ಸೆಳೆದರು.