Tuesday, March 25, 2025

ಮಹಾನ್ ನಾಯಕರಿಗೆ ಗೌರವ ತಂದುಕೊಡುವ ರೀತಿಯಲ್ಲಿ ಅರ್ಥಪೂರ್ಣವಾಗಿ ಜಯಂತಿ ಆಚರಿಸಿ

ಭದ್ರಾವತಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಡಾ. ಬಿ.ಆರ್ ಅಂಬೇಡ್ಕರ್ ಮತ್ತು ಬಾಬು ಜಗ ಜೀವನ್‌ರಾಂರವರ ಜಯಂತಿ ಅಂಗವಾಗಿ ಜರುಗಿದ ಪೂರ್ವಭಾವಿ ಸಭೆ ಅಧ್ಯಕ್ಷತೆವಹಿಸಿ ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್  ಮಾತನಾಡಿದರು. 
     ಭದ್ರಾವತಿ : ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ.ಆರ್ ಅಂಬೇಡ್ಕರ್‌ರವರ ೧೩೪ನೇ ಮತ್ತು ಹಸಿರು ಕ್ರಾಂತಿ ಹರಿಕಾರ ಬಾಬು ಜಗಜೀವನರಾಂರವರ ೧೧೭ನೇ ಜಯಂತಿ ಎಲ್ಲರೂ ಒಗ್ಗಟ್ಟಾಗಿ ಈ ಇಬ್ಬರು ಮಹಾನ್ ನಾಯಕರಿಗೆ ಗೌರವ ತಂದುಕೊಡುವ ರೀತಿಯಲ್ಲಿ ಅರ್ಥಪೂರ್ಣವಾಗಿ ಆಚರಿಲು ಮುಂದಾಗಿ ಎಂದು ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು. 
    ಅವರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಡಾ. ಬಿ.ಆರ್ ಅಂಬೇಡ್ಕರ್ ಮತ್ತು ಬಾಬು ಜಗ ಜೀವನ್‌ರಾಂರವರ ಜಯಂತಿ ಅಂಗವಾಗಿ ಜರುಗಿದ ಪೂರ್ವಭಾವಿ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದರು. 
    ಎಲ್ಲರೂ ಒಗ್ಗಟ್ಟಾಗಿ ಜಾತ್ಯಾತೀತವಾಗಿ ಮಹಾನ್ ವ್ಯಕ್ತಿಗಳ ಜಯಂತಿ ಆಚರಿಸಬೇಕು. ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು ಸಹ ಕಡ್ಡಾಯವಾಗಿ ಪಾಲ್ಗೊಳ್ಳಬೇಕೆಂದರು.  
    ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಅಂಬೇಡ್ಕರ್ ಭವನ ಉದ್ಘಾಟನೆ ಸಂಬಂಧ ದಲಿತ ಮುಖಂಡರು ಒಮ್ಮತದ ನಿರ್ಧಾರ ಕೈಗೊಳ್ಳುವುದು ಸೂಕ್ತ. ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ ಮಹಾದೇವಪ್ಪ ಅವರನ್ನು ಉದ್ಘಾಟನೆಗೆ ಆಹ್ವಾನಿಸಬಹುದು. ಈ ಸಂಬಂಧ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಿ  ಎಂದರು.  
    ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಮಾತನಾಡಿ, ಡಾ. ಬಿ.ಆರ್ ಅಂಬೇಡ್ಕರ್ ಮತ್ತು ಬಾಬು ಜಗಜೀವನ್‌ರಾಂರವರ ಜಯಂತಿ ಅಂಗವಾಗಿ ೨ ನೇ ಪೂರ್ವಭಾವಿ ಸಭೆ ಕರೆಯಲಾಗಿದೆ. ಕೆಲ ಅಧಿಕಾರಿಗಳು ಬಾರದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಈ ಅಧಿಕಾರಿಗಳ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕೆಂದರು. 
    ಆರಂಭದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾದ ತಹಸೀಲ್ದಾರ್ ಪರುಸಪ್ಪ ಕುರುಬರ ಕಾರ್ಯಕ್ರಮದ ವಿವರಣೆ ನೀಡಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಶ್ ರೆಡ್ಡಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ. ಗಂಗಣ್ಣ, ಪೊಲೀಸ್ ನಗರ ವೃತ್ತ ನಿರೀಕ್ಷಕ ಶ್ರೀಶೈಲಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಸಮಾಜ ಕಲ್ಯಾಧಿಕಾರಿ ಸುರೇಶ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಸಿದ್ದಬಸಪ್ಪ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 
    ಸಭೆಯಲ್ಲಿ ಬಿ.ಟಿ.ನಾಗರಾಜ್, ಉಮಾ, ಶಿವಬಸಪ್ಪ, ಬಿ.ಎನ್.ರಾಜು, ಪ್ರಜಾಪ್ರತಿನಿಧಿ ಸುರೇಶ್, ಮುತ್ತು, ಪುಟ್ಟರಾಜು, ರಂಗನಾಥ್, ವಿನೋದ್, ಮಂಜುನಾಥ್, ರಾಜು, ಹೊಳೆಹೊನ್ನೂರು ಭಾಗದ ದಲಿತ ಮುಖಂಡರಾದ ಸುರೇಶ್, ಕೃಷ್ಣಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 

ಡಿ.ಕೆ ಶಿವಕುಮಾರ್ ಹೇಳಿಕೆಯಿಂದ ಅಂಬೇಡ್ಕರ್, ಹಿಂದು-ದಲಿತರಿಗೆ ಅವಮಾನ

ಭದ್ರಾವತಿಯಲ್ಲಿ ಬಿಜೆಪಿ ಮಂಡಲ ವತಿಯಿಂದ ಮಂಗಳವಾರ ನಗರದ ರಂಗಪ್ಪ ವೃತ್ತದಲ್ಲಿ ಡಿ.ಕೆ ಶಿವಕುಮಾರ್‌ರವರ ಸಂವಿಧಾನ ವಿರೋಧಿ ಹೇಳಿಕೆ ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. 
    ಭದ್ರಾವತಿ: ಕಾಂಗ್ರೆಸ್ ಸರ್ಕಾರ ಮುಸ್ಲಿಂ ಧರ್ಮದವರಿಗೆ ಶೇ.೪ರಷ್ಟು ಮೀಸಲಾತಿ ನೀಡಿದ್ದು, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ರವರು ಹೇಳಿರುವ ಹಾಗೆ ಸಂವಿಧಾನ ಬದಲಾಯಿಸುವ ಅವಶ್ಯಕತೆ ಬಂದರೆ ಸಂವಿಧಾನವನ್ನೂ ಸಹ ಬದಲಾಯಿಸುತ್ತೇವೆ. ಕಾಂಗ್ರೆಸ್ ಸರ್ಕಾರವೇ ಸಂವಿಧಾನ ಜಾರಿಗೆ ತಂದದ್ದು ಎಂಬ ಹೇಳಿಕೆ ಮೂಲಕ ಸಂವಿಧಾನ ಶಿಲ್ಪಿ, ಮಹಾಮಾನವತಾವಾದಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್, ಹಿಂದುಗಳಿಗೆ ಹಾಗು ದಲಿತರಿಗೆ ಅವಮಾನಿಸಲಾಗಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಆರೋಪಿಸಿದರು. 
    ಬಿಜೆಪಿ ಮಂಡಲ ವತಿಯಿಂದ ಮಂಗಳವಾರ ನಗರದ ರಂಗಪ್ಪ ವೃತ್ತದಲ್ಲಿ ಡಿ.ಕೆ ಶಿವಕುಮಾರ್‌ರವರ ಸಂವಿಧಾನ ವಿರೋಧಿ ಹೇಳಿಕೆ ಖಂಡಿಸಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆ ನೇತೃತ್ವವಹಿಸಿ ಮಾತನಾಡಿದರು. 
    ಸ್ವಾತಂತ್ರ್ಯ ಪೂರ್ವದಲ್ಲಿ ಮುಸ್ಲಿಂ ಧರ್ಮದವರಿಗೆ ಪಾಕಿಸ್ತಾನ ಬಿಟ್ಟುಕೊಡುವ ಜೊತೆಗೆ ಅವರಿಗಾಗಿ ದೇಶದಲ್ಲಿ ವಿಶೇಷ ಸ್ಥಾನಮಾನ ಸಹ ನೀಡಲಾಗಿದೆ. ಆದರೂ ಸಹ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಎಲ್ಲಾ ವಿಷಯದಲ್ಲೂ ತಾರತಮ್ಯ ಮಾಡುವ ಮೂಲಕ ಹಿಂದುಗಳನ್ನು ದಮನ ಮಾಡುವ ಪ್ರಜಾಪ್ರಭುತ್ವ ವಿರೋಧಿ ನಿಲುವು, ಧೋರಣೆ ಅನುಸರಿಸಲಾಗುತ್ತಿದೆ. ಸಂವಿಧಾನ ದೇಶದ ರಕ್ಷಣೆಗಾಗಿ ಇದ್ದು, ಆದರೆ ಅದನ್ನು ಆಟಿಕೆಯಂತೆ ವೋಟ್ ಬ್ಯಾಂಕ್‌ಗಾಗಿ ಮುಸ್ಲಿಂ ಧರ್ಮದವರ ಓಲೈಕೆಗಾಗಿ ಪ್ರತಿ ಸಂದರ್ಭದಲ್ಲಿ ಬಳಸಿಕೊಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  
    ಹಿಂದೂ ವಿರೋಧಿ ನೀತಿ ತಾಳುತ್ತಿರುವ ಡಿ.ಕೆ ಶಿವಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ರಾಹುಲ್‌ಗಾಂಧಿ ಅವರಿಗೆ ಸಂವಿಧಾನದ ಮೇಲೆ ಸ್ವಲ್ಪವಾದರೂ ಗೌರವವಿದ್ದಲ್ಲಿ ಡಿ.ಕೆ ಶಿವಕುಮಾರ್ ಅವರನ್ನು ತಕ್ಷಣ ಪಕ್ಷದಿಂದ ಉಚ್ಛಾಟಿಸಬೇಕೆಂದು ಆಗ್ರಹಿಸಿದರು. 
ಪ್ರ    ತಿಭಟನೆಯಲ್ಲಿ ಡಿ.ಕೆ ಶಿವಕುಮಾರ್ ಅವರ ಭಾವಚಿತ್ರ ದಹನ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಲಾಯಿತು. ಪಕ್ಷದ ಯುವ ಮುಖಂಡ ಮಂಗೋಟೆ ರುದ್ರೇಶ್, ಜಿಲ್ಲಾ ಉಪಾಧ್ಯಕ್ಷ ಜಿ. ಆನಂದ್ ಕುಮಾರ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಚನ್ನೇಶ್, ಮೊಸರಳ್ಳಿ ಅಣ್ಣಪ್ಪ, ವಿವಿಧ ಮೋರ್ಚಾಗಳ ಅಧ್ಯಕ್ಷರಾದ ಹನುಮಂತ ನಾಯ್ಕ, ಸರಸ್ವತಿ, ಧನುಷ್ ಬೋಸ್ಲೆ, ರಾಜಶೇಖರ್ ಉಪ್ಪಾರ, ಮಹಾಶಕ್ತಿ ಕೇಂದ್ರದ ಅಧ್ಯಕ್ಷರುಗಳಾದ ಸತೀಶ್, ರಘುರಾವ್, ನಿರಂಜನ್ ಗೌಡ, ಪ್ರಸನ್ನಕುಮಾರ್, ಜಿ.ವಿ ಕುಮಾರ್, ಶಿವಮೂರ್ತಿ, ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಸುಲೋಚನ ಪ್ರಕಾಶ್,ನಂಜಪ್ಪ, ಆಟೋ ಮೂರ್ತಿ ಸೇರಿದಂತೆ  ಕಾರ್ಯಕರ್ತರು ಪಾಲ್ಗೊಂಡಿದ್ದರು. 

ಜಾನಪದ ಕಲಾವಿದ, ಶಿಕ್ಷಕ ಎಂ.ಆರ್ ರೇವಣಪ್ಪರಿಗೆ ಜನಪದ ಕಲಾ ಸೇವಾ ರತ್ನ ಪ್ರಶಸ್ತಿ

ಕನ್ನಡ ಫಿಲಂ ಚೇಂಬರ್ ವತಿಯಿಂದ ನೀಡಲಾಗುವ ರಾಜ್ಯಮಟ್ಟದ ಜನಪದ ಕಲಾ ಸೇವಾ ರತ್ನ ಪ್ರಶಸ್ತಿ ಭದ್ರಾವತಿ ತಾಲೂಕಿನ ಸುಲ್ತಾನ್‌ಮಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ, ಜನಪದ ಕಲಾವಿದ ಎಂ.ಆರ್ ರೇವಣಪ್ಪ ಅವರಿಗೆ ಲಭಿಸಿದೆ. 
    ಭದ್ರಾವತಿ : ಕನ್ನಡ ಫಿಲಂ ಚೇಂಬರ್ ವತಿಯಿಂದ ನೀಡಲಾಗುವ ರಾಜ್ಯಮಟ್ಟದ ಜನಪದ ಕಲಾ ಸೇವಾ ರತ್ನ ಪ್ರಶಸ್ತಿ ತಾಲೂಕಿನ ಸುಲ್ತಾನ್‌ಮಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ, ಜನಪದ ಕಲಾವಿದ ಎಂ.ಆರ್ ರೇವಣಪ್ಪ ಅವರಿಗೆ ಲಭಿಸಿದೆ. 
    ಕನ್ನಡ ಫಿಲಂ ಚೇಂಬರ್ ವತಿಯಿಂದ ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಾಗು ಸಾಧನೆಯ ದಾರಿಯಲ್ಲಿ ಸಾಗುತ್ತಿರುವ ಸಾಧಕರಿಗೆ ಸರಳತೆಯ ಶಿಖರ, ಕರ್ನಾಟಕ ರತ್ನ, ನಗು ಮುಖದ ಪರಮಾತ್ಮ, ಅಭಿಮಾನಿಗಳ ಪ್ರೀತಿಯ ಅಪ್ಪು, ಪವರ್ ಸ್ಟಾರ್ ಡಾ. ಪುನೀತ್ ರಾಜ್‌ಕುಮಾರ್‌ರವರ ಸ್ಪೂರ್ತಿಯೊಂದಿಗೆ ರಾಜ್ಯಮಟ್ಟದ ಪ್ರಶಸ್ತಿನೀಡಿ ಗೌರವಿಸಲಾಗುತ್ತಿದೆ. 
    ಎಂ.ಆರ್ ರೇವಣಪ್ಪರವರು ಮೂಲತಃ ಶಿಕ್ಷಕರಾಗಿದ್ದು, ವೃತ್ತಿಯೊಂದಿಗೆ ಜಾನಪದ ಅಂತರರಾಷ್ಟ್ರೀಯ ಡೊಳ್ಳು ನೃತ್ಯ ಕಲಾವಿದರು ಹಾಗು ಸುಗ್ಗಿ ಕುಣಿತ ಕೋಲಾಟ ಕಲಾವಿದರಾಗಿದ್ದಾರೆ. ಅಲ್ಲದೆ ಕರ್ನಾಟಕ ಜಾನಪದ ಪರಿಷತ್ ತಾಲೂಕು ಶಾಖೆ ಅಧ್ಯಕ್ಷರಾಗಿದ್ದು, ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇವರಿಗೆ ಅಂತರರಾಷ್ಟ್ರೀಯ ಹಾಗು ರಾಜ್ಯ ಮಟ್ಟದ ಹಲವಾರು ಪ್ರಶಸ್ತಿಗಳು ಲಭಿಸಿವೆ. 
    ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಮಾ.೨೩ರಂz ಆಯೋಜಿಸಲಾಗಿದ್ದ ಸಮಾರಂಭದಲ್ಲಿ ರೇವಣಪ್ಪರವರು `ಜನಪದ ಕಲಾ ಸೇವಾರತ್ನ' ಪ್ರಶಸ್ತಿ  ಸ್ವೀಕರಿಸಿದರು. ರೇವಣಪ್ಪ ಅವರನ್ನು ನಗರದ ಜನಪ್ರತಿನಿನಿಧಿಗಳು, ವಿವಿಧ ಸಂಘ ಸಂಸ್ಥೆಗಳು, ಗಣ್ಯರು ಅಭಿನಂದಿಸಿದ್ದಾರೆ.

Monday, March 24, 2025

ಲಕ್ಷಾಂತರ ರು. ಮೌಲ್ಯದ ಅಡಕೆ ಸಸಿ ನಾಶ : ಕ್ರಮ ಕೈಗೊಳ್ಳಲು ಆಗ್ರಹಿಸಿ ಅಹೋ ರಾತ್ರಿ ಧರಣಿ ಸತ್ಯಾಗ್ರಹ

ಸರ್ಕಾರದ ಆದೇಶ ಪತ್ರ ಅಥವಾ ತಿಳುವಳಿಕೆ ಪತ್ರ ಅಥವಾ ಸೂಚನಾ ಪತ್ರ ಸೇರಿದಂತೆ ಯಾವುದನ್ನು ಸಹ ನೀಡದೆ ಏಕಾಏಕಿ ಜಮೀನಿನಲ್ಲಿ ಬೆಳೆಯಲಾಗಿದ್ದ  ಅಡಕೆ ಸಸಿಗಳನ್ನು ಕಿತ್ತು ಹಾಕಿ ಲಕ್ಷಾಂತರ ರು. ನಷ್ಟ ಉಂಟು ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಾಲೂಕಿನ  ಕೂಡ್ಲಿಗೆರೆ ಹೋಬಳಿ, ರತ್ನಾಪುರ ಗ್ರಾಮದಲ್ಲಿ ಸೋಮವಾರದಿಂದ ಅಹೋ ರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. 
    ಭದ್ರಾವತಿ: ಸರ್ಕಾರದ ಆದೇಶ ಪತ್ರ ಅಥವಾ ತಿಳುವಳಿಕೆ ಪತ್ರ ಅಥವಾ ಸೂಚನಾ ಪತ್ರ ಸೇರಿದಂತೆ ಯಾವುದನ್ನು ಸಹ ನೀಡದೆ ಏಕಾಏಕಿ ಜಮೀನಿನಲ್ಲಿ ಬೆಳೆಯಲಾಗಿದ್ದ  ಅಡಕೆ ಸಸಿಗಳನ್ನು ಕಿತ್ತು ಹಾಕಿ ಲಕ್ಷಾಂತರ ರು. ನಷ್ಟ ಉಂಟು ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಾಲೂಕಿನ  ಕೂಡ್ಲಿಗೆರೆ ಹೋಬಳಿ, ರತ್ನಾಪುರ ಗ್ರಾಮದಲ್ಲಿ ಸೋಮವಾರದಿಂದ ಅಹೋ ರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. 
    ತಾಲೂಕಿನ ಕೂಡ್ಲಿಗೆರೆ ಹೋಬಳಿ, ರತ್ನಾಪುರ ಗ್ರಾಮದ ನಿವಾಸಿ, ಪರಿಶಿಷ್ಟ ಜಾತಿ ಭೋವಿ ಜನಾಂಗಕ್ಕೆ ಸೇರಿರುವ ಉತ್ರೇಶ್ ಕುಟುಂಬದವರು ಸರ್ವೆ ನಂ.೬೩ ಮತ್ತು ೬೪ರಲ್ಲಿ ತಲಾ ೨ ಎಕರೆ ಜಮೀನು  ಸುಮಾರು ೫೦-೬೦ ವರ್ಷಗಳಿಂದ  ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಬಂಡಿ ರಸ್ತೆ ಇದ್ದರೂ ಸಹ  ಮೇಲ್ವರ್ಗದವರು ಇವರ ಜಮೀನಿನಲ್ಲಿ ದಾರಿ ಪಡೆಯುವ ಉದ್ದೇಶದಿಂದ ಸುಮಾರು ೫೦ ರಿಂದ ೬೦ ಅಡಕೆ ಸಸಿಗಳನ್ನು ಕಿತ್ತು ಹಾಕಿ ಸುಮಾರು ೧೫ ರಿಂದ ೨೦ ಲಕ್ಷ ರು. ನಷ್ಟ ಉಂಟು ಮಾಡಿದ್ದಾರೆಂದು ಆರೋಪಿಸಿ ಅಹೋ ರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. 
    ತಪ್ಪಿತಸ್ಥರ ವಿರುದ್ಧ  ಕ್ರಮ ಕೈಗೊಂಡು ನ್ಯಾಯ ದೊರಕಿಸಿಕೊಡುವಂತೆ ಕೋರಲಾಗಿದೆ. ಅಲ್ಲದೆ ಜಿಲ್ಲಾಧಿಕಾರಿಗಳು ಹಾಗು ಉಪ ವಿಭಾಗಾಧಿಕಾರಿಗಳು  ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸುವವರೆಗೂ ಧರಣಿ ಸತ್ಯಾಗ್ರಹ ಮುಂದುವರೆಯಲಿದೆ ಎಂದು ಎಚ್ಚರಿಸಲಾಗಿದೆ. 
    ಉತ್ರೇಶ್ ಹಾಗು ಕುಟುಂಬ ವರ್ಗದವರು, ಭೋವಿ ಸಮುದಾಯದ ಮುಖಂಡರು, ಗ್ರಾಮಸ್ಥರು ಸೇರಿದಂತೆ ಇನ್ನಿತರರು ಅಹೋ ರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಾರೆ. 

ಅಧ್ಯಕ್ಷರಾಗಿ ಎಂ. ಪರಮೇಶ್ವರಪ್ಪ, ಉಪಾಧ್ಯಕ್ಷರಾಗಿ ರಾಜಣ್ಣ

ಕೂಡ್ಲಿಗೆರೆ ಎಂ ಪರಮೇಶ್ವರಪ್ಪ 
    ಭದ್ರಾವತಿ: ತಾಲೂಕಿನ ಕೂಡ್ಲಿಗೆರೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕೂಡ್ಲಿಗೆರೆ ಎಂ ಪರಮೇಶ್ವರಪ್ಪ ಹಾಗೂ  ಉಪಾಧ್ಯಕ್ಷರಾಗಿ ಅರಳಿಹಳ್ಳಿ ರಾಜಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
     ಸದಸ್ಯರಾದ ಜಿ.ಆರ್ ಪಂಚಾಕ್ಷರಿ, ಮಹೇಶ್ವರನಾಯ್ಕ, ರಾಜ್ ಕುಮಾರ್, ಜಿ.ಆರ್ ಸಿದ್ದೇಶಪ್ಪ,  ಆರ್.ಎನ್ ರುದ್ರೇಶ್, ಗಿರಿಜಮ್ಮ, ವಿಜಯಲಕ್ಷ್ಮಿ ಬಾಯಿ, ವೆಂಕಟೇಶ್, ಆರ್. ಶಿವಣ್ಣ ಮತ್ತು ಟಿ.ತಿಪ್ಪೆಸ್ವಾಮಿ ಚುನಾವಣೆಯಲ್ಲಿ ಪಾಲ್ಗೊಂಡಿದ್ದರು.  


ಅರಳಿಹಳ್ಳಿ ರಾಜಣ್ಣ
     ಸಂಘದ ಮಾಜಿ ಅಧ್ಯಕ್ಷ ಎನ್.ಎಚ್ ಮಹೇಶ್, ಪಿ. ಎಲ್.ಡಿ ಬ್ಯಾಂಕ್ ಅಧ್ಯಕ್ಷ ಬಿ. ಕೆ  ಶಿವಕುಮಾರ್,  ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮಣಿಶೇಖರ್,  ಅರಳಿಹಳ್ಳಿ ಮಲ್ಲಿಕಾರ್ಜುನ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಪ್ರಮುಖರು, ಕೂಡ್ಲಿಗೆರೆ, ಸೀತಾರಾಮಪುರ, ಅತ್ತಿಗುಂದ, ಅರಳಿಹಳ್ಳಿ, ಕಲ್ಪನಹಳ್ಳಿ, ಬಸಲೀಕಟ್ಟೆ, ತಿಪ್ಲಾಪುರ, ಕೋಡಿಹಳ್ಳಿ ಗ್ರಾಮದ ಗ್ರಾಮಸ್ಥರು, ಹಿತೈಷಿಗಳು ಉಪಸ್ಥಿತರಿದ್ದರು.

ಕಾರೇಹಳ್ಳಿ ಸಂತ ಅಂತೋಣಿಯವರ ಪುಣ್ಯ ಕ್ಷೇತ್ರಕ್ಕೆ ಪಾದಯಾತ್ರೆ

ಭದ್ರಾವತಿ ಹಳೇನಗರದ ಗಾಂಧಿನಗರದಲ್ಲಿರುವ ವೇಳಾಂಗಣಿ ಆರೋಗ್ಯ ಮಾತೆ ಧರ್ಮ ಕೇಂದ್ರದ ವತಿಯಿಂದ ಭಾನುವಾರ ಆಯೋಗಗಳ ನಿರ್ದೇಶಕಿ ಸಿಸ್ಟರ್ ಬರ್ನಿ ಅವರ ನೇತೃತ್ವದಲ್ಲಿ ತಾಲೂಕಿನ ಕಾರೆಹಳ್ಳಿ ಸಂತ ಅಂತೋಣಿಯವರ ಪುಣ್ಯಕ್ಷೇತ್ರಕ್ಕೆ ಭಕ್ತರು ಪಾದಯಾತ್ರೆ ಕೈಗೊಂಡರು. 
    ಭದ್ರಾವತಿ : ಹಳೇನಗರದ ಗಾಂಧಿನಗರದಲ್ಲಿರುವ ವೇಳಾಂಗಣಿ ಆರೋಗ್ಯ ಮಾತೆ ಧರ್ಮ ಕೇಂದ್ರದ ವತಿಯಿಂದ ಭಾನುವಾರ ಆಯೋಗಗಳ ನಿರ್ದೇಶಕಿ ಸಿಸ್ಟರ್ ಬರ್ನಿ ಅವರ ನೇತೃತ್ವದಲ್ಲಿ ತಾಲೂಕಿನ ಕಾರೆಹಳ್ಳಿ ಸಂತ ಅಂತೋಣಿಯವರ ಪುಣ್ಯಕ್ಷೇತ್ರಕ್ಕೆ ಭಕ್ತರು ಪಾದಯಾತ್ರೆ ಕೈಗೊಂಡರು. 
    ೨೦೨೫ ಜ್ಯೂಬಿಲಿ ವರ್ಷವನ್ನು "ಭರವಸೆಯ ಯಾತ್ರಿಗಳ " ವರ್ಷವನ್ನಾಗಿ ಕ್ರೈಸ್ತ ಕಥೋಲಿಕ ಧರ್ಮದ ಜಗದ್ಗುರು ಪೋಪ್ ಫ್ರಾನ್ಸಿಸ್ ಅವರು ಘೋಷಿಸಿದ್ದಾರೆ. ಈ ಹಿನ್ನಲೆಯಲ್ಲಿ ಸಾಧ್ಯವಾದಷ್ಟು ಪುಣ್ಯಕ್ಷೇತ್ರಗಳಿಗೆ ತೆರಳಿ ಪ್ರಾರ್ಥಿಸಲು ಭಕ್ತರಿಗೆ ಕರೆ ನೀಡಲಾಗಿದೆ. ಕೆಲವು ದಿನಗಳ ಹಿಂದೆ ಶಿವಮೊಗ್ಗ ಪ್ರಧಾನಾಲಯ ಸೆಕ್ರೆಟ್ ಹಾರ್ಟ್ ದೇವಾಲಯಕ್ಕೆ ಪಾದಯಾತ್ರೆ ಕೈಗೊಂಡಿದ್ದರು. 
    ಇದೀಗ ನಗರ ಪ್ರದೇಶದಿಂದ ಸುಮಾರು ೮ ಕಿ.ಮೀ. ದೂರದಲ್ಲಿರುವ ಬಾರಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರೇಹಳ್ಳಿಯಲ್ಲಿರುವ ಸಂತ ಅಂತೋಣಿಯವರ ಪುಣ್ಯಕ್ಷೇತ್ರಕ್ಕೆ ಧರ್ಮ ಕೇಂದ್ರದಿಂದ ೨೦೦ಕ್ಕೂ ಅಧಿಕ ಭಕ್ತರು ಕಾಲ್ನಡಿಗೆಯಲ್ಲಿ ಸಾಗಿ ದೇವಾಲಯವನ್ನು ತಲುಪಿದರು ಎಂದು ಧರ್ಮ ಕೇಂದ್ರದ ಗುರುಗಳಾದ ಫಾದರ್ ಸ್ಟೀವನ್ ಡೇಸಾ ತಿಳಿಸಿದರು. 
    ನಂತರ ಕಾರೆಹಳ್ಳಿ ದೇವಾಲಯದ ಧರ್ಮ ಗುರುಗಳಾದ ಫಾದರ್ ಸಂತೋಷ್ ಅಲ್ಮೇಡರವರಿಂದ ಪ್ರಾರ್ಥನೆ ನೆರವೇರಿತು. 
    ಸಿಸ್ಟರ್ ಗ್ಲಾಡಿಸ್ ಪಿಂಟೋ, ಸಿಸ್ಟರ್ ವಿನ್ಸಿ, ಸಿಸ್ಟರ್ ಶೋಭನ, ಸಿಸ್ಟರ್ ನಿರ್ಮಲ, ಸಿಸ್ಟರ್ ತೆರೇಸಾ, ಸಿಸ್ಟರ್ ಸರಿತಾ, ಸಿಸ್ಟರ್ ಮಂಜು, ಸಿಸ್ಟರ್ ಶಾಲ್ಬಿ, ಸಿಸ್ಟರ್ ಸಿಲ್ಜಿ ಸೇರಿದಂತೆ ಭಕ್ತರು ಪಾಲ್ಗೊಂಡಿದ್ದರು.

ಎಚ್.ಎಸ್ ಮಾಯಮ್ಮರವರ ಮೊದಲ ಕೃತಿ `ಮನಸ್ಸು' ಮಾ.೨೫ರಂದು ಬಿಡುಗಡೆ

ಎಚ್.ಎಸ್ ಮಾಯಮ್ಮ ನರಸಿಂಹಮೂರ್ತಿ ಅವರ ಮೊದಲ ಕವನ ಸಂಕಲನ `ಮನಸ್ಸು' ಕೃತಿ ಮುಖ ಪುಟ. 
    ಭದ್ರಾವತಿ : ತಾಲೂಕಿನ ದೇವರ ನರಸೀಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಭಾರ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎಚ್.ಎಸ್ ಮಾಯಮ್ಮ ನರಸಿಂಹಮೂರ್ತಿ ಅವರ ಮೊದಲ ಕವನ ಸಂಕಲನ `ಮನಸ್ಸು' ಕೃತಿ ಮಾ.೨೫ರಂದು sಸಂಜೆ ೭ ಗಂಟೆಗೆ ಬಿಡುಗಡೆಗೊಳ್ಳಲಿದೆ. 
    ಶ್ರೀ ಮಾರುತಿ ಕೃಪಾ ಪೋಷಿತ ನಾಟಕ ಮಂಡಳಿ ಸಂಯುಕ್ತಾಶ್ರಯದಲ್ಲಿ ಕುಣಿಗಲ್ ತಾಲೂಕಿನ ಹಾಲುವಾಗಿಲು ಗ್ರಾಮದಲ್ಲಿ ಶಾಸಕ ಎಚ್.ಡಿ ರಂಗನಾಥ್‌ರವರು ಕೃತಿ ಬಿಡುಗಡೆಗೊಳಿಸುತ್ತಿದ್ದಾರೆ. ಮೊದಲ ಕವನ ಸಂಕಲನ `ಮನಸ್ಸು' ಕೃತಿಗೆ ನಗರದ ಎಮೆರಿಟಸ್ ಪ್ರಾಧ್ಯಾಪಕಿ ಡಾ. ವಿಜಯಾದೇವಿ ಮುನ್ನುಡಿ ಬರೆದಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮತ್ತು ಶಾಸಕ ಬಿ.ಕೆ ಸಂಗಮೇಶ್ವರ್ ಕೃತಿಯನ್ನು ಅಭಿನಂದಿಸಿದ್ದಾರೆ.
    ಕೃತಿ ಬಿಡುಗಡೆ ಕಾರ್ಯಕ್ರಮಕ್ಕೆ ತಾಲೂಕಿನ ಶಿಕ್ಷಕ ವೃಂದ, ಸಾಹಿತ್ಯಾಭಿಮಾನಿಗಳು, ಹಿತೈಷಿಗಳು ಸೇರಿದಂತೆ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.