Thursday, April 3, 2025

ಸಂಗೀತ ತರಬೇತಿ ಶಿಬಿರ ಉದ್ಘಾಟನೆ

ಭದ್ರಾವತಿ ಹಳೇ ನಗರದ ಮಹಿಳಾ ಸೇವಾ ಸಮಾಜದಲ್ಲಿ ಏರ್ಪಡಿಸಿದ್ದ ಸಂಗೀತ ತರಬೇತಿ ಶಿಬಿರವನ್ನು ಆಕಾಶವಾಣಿಯ ನಿವೃತ್ತ ಸಂಗೀತ ನಿರ್ದೇಶಕ ಸಂಜೀವ ಆರ್. ನಾಮಣ್ಣನವರ್ ಉದ್ಘಾಟಿಸಿದರು.
    ಭದ್ರಾವತಿ: ನಗರದ ಭದ್ರಾ ಸುಗಮ ಸಂಗೀತ ವೇದಿಕೆಯವತಿಯಿಂದ ಹಳೇನಗರದ ಮಹಿಳಾ ಸೇವಾ ಸಮಾಜದಲ್ಲಿ ಆಯೋಜಿಸಲಾಗಿರುವ ಸಂಗೀತ ತರಬೇತಿ ಶಿಬಿರ ಆಕಾಶವಾಣಿ ನಿವೃತ್ತ ಸಂಗೀತ ನಿರ್ದೇಶಕ ಸಂಜೀವ ಆರ್. ನಾಮಣ್ಣನವರ್ ಉದ್ಘಾಟಿಸಿದರು.
    ತಾಲೂಕು ಜಂಗಮ ಸಂಘದ ಅಧ್ಯಕ್ಷ ಎಸ್. ಅಡವೀಶಯ್ಯ ಅಧ್ಯಕ್ಷತೆ ವಹಿಸಿದ್ದರು.  ಕಲಾವಿದ ಬಿ.ಕೆ ಮೋಹನ್ ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜೀ ಟಿವಿ ಸರಿಗಮಪ ಸಂಗೀತ ಸ್ಪರ್ಧೆಯ ನರಹರಿ ದೀಕ್ಷಿತ್ ಮಂಚಾಲೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು.
    ವೇದಿಕೆಯಲ್ಲಿ ಸೀಮಾ ಮಂಗೋಟೆ ರುದ್ರೇಶ್, ಶೋಭಾ, ಸುನಂದ, ಜ್ಯೋತಿ, ಡಾ. ವೀಣಾಭಟ್, ಎಚ್.ಮಲ್ಲಿಕಾರ್ಜುನ್, ಜಿ.ವಿ ಸದಾಶಿವಪ್ಪ, ಲೋಲಾಕ್ಷಿ, ಶಾಮಾಚಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು. 

೩.೮೦ ಕೋ. ವೆಚ್ಚದಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಾಣದ ಗುರಿ : ಡಾ. ವಿಜಯದೇವಿ

ಆರ್ಥಿಕ ನೆರವಿನೊಂದಿಗೆ ಎಲ್ಲಾ ರೀತಿಯ ಸಹಕಾರ ನೀಡಲು ಪತ್ರಿಕಾಗೋಷ್ಠಿಯಲ್ಲಿ ಮನವಿ 

ಭದ್ರಾವತಿ ತಾಲೂಕು ಕನ್ನಡ ಸಾಹಿತ್ಯ ಭವನ ನಿರ್ಮಾಣ ಸಮಿತಿ ವತಿಯಿಂದ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಆರ್ಥಿಕ ಸಹಾಯ ಹಸ್ತದ ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು. 
    ಭದ್ರಾವತಿ: ತಾಲೂಕಿನಲ್ಲಿ ಸಾಹಿತ್ಯ, ಕನ್ನಡಾಭಿಮಾನಿಗಳು ಹಾಗು ಸಮಸ್ತ ನಾಗರಿಕರ ಬಹುಬೇಡಿಕೆಯಾಗಿರುವ ಕನ್ನಡ ಸಾಹಿತ್ಯ ಭವನ ನಿರ್ಮಾಣ ಮಾಡುವ ಆಶಯ ಇದೀಗ ಈಡೇರುತ್ತಿದ್ದು, ಸುಮಾರು ೩.೮೦ ಕೋ. ರು. ವೆಚ್ಚದಲ್ಲಿ ಮಾದರಿ ಭವನ ನಿರ್ಮಿಸುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಆರ್ಥಿಕ ನೆರವಿನೊಂದಿಗೆ ಎಲ್ಲಾ ರೀತಿಯ ಸಹಕಾರ ನೀಡುವಂತೆ ಕನ್ನಡ ಸಾಹಿತ್ಯ ಭವನ ನಿರ್ಮಾಣ ಸಮಿತಿ ಅಧ್ಯಕ್ಷೆ ಎಮೆರಿಟಸ್ ಪ್ರಾಧ್ಯಾಪಕಿ ಡಾ. ವಿಜಯದೇವಿ ಮನವಿ ಮಾಡಿದರು. 
    ಅವರು ಈ ಸಂಬಂಧ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,  ನಮ್ಮ ಮಾತೃಭಾಷೆ ಕನ್ನಡಕ್ಕೆ ಸುಮಾರು ೨೦೦೦ ವರ್ಷಗಳಿಗೂ ಮಿಗಿಲಾದ ಇತಿಹಾಸವಿದೆ. ಭಾರತದಲ್ಲಿ ಶಾಸ್ತ್ರೀಯ ಸ್ಥಾನಮಾನವನ್ನು ಪಡೆದ ಕೆಲವೇ ಭಾಷೆಗಳಲ್ಲಿ ಕನ್ನಡವು ಒಂದಾಗಿದ್ದು, ವಿಶ್ವಭಾಷಾ ಪರಂಪರೆಯಲ್ಲಿ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಕನ್ನಡದ ಶ್ರೇಷ್ಠತೆಗೆ ಹಾಗೂ ಅದರ ಭವ್ಯ ಪರಂಪರೆಗೆ ಅನೇಕರ ಕೊಡುಗೆ ಅಪಾರವಾಗಿದೆ. ೮ ಜ್ಞಾನಪೀಠ ಪ್ರಶಸ್ತಿಗಳನ್ನು ಕನ್ನಡಕ್ಕೆ ತಂದುಕೊಟ್ಟವರಲ್ಲಿ ಮೊಟ್ಟ ಮೊದಲಿಗರು ನಮ್ಮ ಶಿವಮೊಗ್ಗ ಜಿಲ್ಲೆಯ ಡಾ. ಕುವೆಂಪು ಮತ್ತು ಡಾ. ಯು.ಆರ್. ಅನಂತಮೂರ್ತಿಯವರು. ರಾಷ್ಟ್ರಕವಿಗಳಾದ ಡಾ. ಕುವೆಂಪು ಮತ್ತು ಜಿ.ಎಸ್. ಶಿವರುದ್ರಪ್ಪನವರು ನಮ್ಮ ಜಿಲ್ಲೆಯವರು, ಖ್ಯಾತ ಕವಿಗಳಾದ ಲಕ್ಷ್ಮೀನಾರಾಯಣ ಭಟ್ ಮತ್ತು ಎಸ್.ವಿ ಪರಮೇಶ್ವರ ಭಟ್, ಶ್ರೇಷ್ಠ ನಾಟಕಕಾರರು ಹಾಗೂ ಪತ್ರಕರ್ತರಾದ ಪಿ. ಲಂಕೇಶ್, ಕಾದಂಬರಿಕಾರರಾದ ಪೂರ್ಣಚಂದ್ರ ತೇಜಸ್ವಿ, ನಾ. ಡಿಸೋಜಾ ಮತ್ತು ಎಂ.ಕೆ. ಇಂದಿರಾ, ಖ್ಯಾತ ಸಂಶೋಧಕರಾದ ಡಾ. ಎಂ. ಚಿದಾನಂದಮೂರ್ತಿ ಹಾಗೂ ರಂಗ ನಿರ್ದೇಶಕರಾದ ಕೆ.ವಿ. ಸುಬ್ಬಣ್ಣ ಇವರುಗಳೂ ಸಹ ನಮ್ಮ ಜಿಲ್ಲೆಯವರೆ. ಹೀಗೆ ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿಗೆ ಅತ್ಯಮೂಲ್ಯವಾದ ಕೊಡುಗೆಗಳನ್ನು ಕೊಟ್ಟ ಮಹನೀಯರು ಜನ್ಮತಾಳಿದ ಹೆಗ್ಗಳಿಕೆ ನಮ್ಮ ಜಿಲ್ಲೆಗಿದೆ ಎಂದರು. 
  ಕನ್ನಡಿಗರ ನಾಡು-ನುಡಿ, ನೆಲ-ಜಲ, ಸಂಸ್ಕೃತಿ-ಸಾಹಿತ್ಯಗಳ ಅಭಿವೃದ್ಧಿ ಹಾಗೂ ಸಂರಕ್ಷಣೆಗಾಗಿ ದುಡಿಯುವ ಸಂಸ್ಥೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು. ಇದು ಪ್ರತಿ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಶಾಖೆಗಳನ್ನು ಸ್ಥಾಪಿಸಿ ಕನ್ನಡ ಜನತೆಯ ಸಾಂಸ್ಕೃತಿಕ ಬದುಕನ್ನು ಸಂರಕ್ಷಿಸುತ್ತಾ ಬಂದಿದೆ. ಇದರಲ್ಲಿ ನಮ್ಮ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಂಸ್ಥೆ ಅಸ್ತಿತ್ವದಲ್ಲಿದ್ದು, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ. ಸಂಗೀತ ಮೊದಲಾದವುಗಳಿಗೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಕನ್ನಡ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ದತ್ತಿ ಕಾರ್ಯಕ್ರಮ, ವಿಶೇಷ ಉಪನ್ಯಾಸ, ಕಮ್ಮಟಗಳು, ಸಾಹಿತ್ಯ ಸಮ್ಮೇಳನಗಳನ್ನು ನಡೆಸುತ್ತಾ ಬಂದಿದ್ದು, ಜನರಲ್ಲಿ ಕನ್ನಡದ ಬಗ್ಗೆ ಅರಿವು ಮತ್ತು ಅಭಿಮಾನಗಳನ್ನು ಬೆಳೆಸುತ್ತಾ ಬಂದಿದೆ. ಕನ್ನಡದ ಸೇವೆಗಾಗಿ ಹಲವು ವರ್ಷಗಳಿಂದ ಸಕ್ರಿಯವಾಗಿ ದುಡಿಯುತ್ತಿರುವುದು ಶ್ಲಾಘನೀಯ ಎಂದರು. 
    ಇಂತಹ ತಾಲೂಕು ಪರಿಷತ್ ಯಾವುದೇ ಕಾರ್ಯಕ್ರಮ ಮಾಡಬೇಕಾದರೆ ಬಾಡಿಗೆಗೆ ಭವನವನ್ನು ತೆಗೆದುಕೊಂಡು ಆರ್ಥಿಕ ಹೊರೆಯನ್ನು ಅನುಭವಿಸುತ್ತಿದೆ. ಈ ಕೊರತೆಯನ್ನು ನಿವಾರಿಸಲು, ಕನ್ನಡಿಗರಿಗೆ ಉತ್ತಮ ಕಾರ್ಯಕ್ರಮಗಳನ್ನು ನೀಡಲು ಪರಿಷತ್ತಿಗೆ ಸ್ವತಂತ್ರ ಕಟ್ಟಡದ ಅನಿವಾರ್ಯತೆ ಇದೆ. ಪರಿಷತ್ ೧೦ ವರ್ಷಗಳ ಹಿಂದೆಯೇ ೧೦೦*೭೯ ಅಡಿಗಳ ನಿವೇಶನ ವಾರ್ಡ್ ನಂ.೨೮ ಹೊಸ ಸಿದ್ದಾಪುರದಲ್ಲಿ ಹೊಂದಿದೆ. ಈಗ ಇಲ್ಲಿ `ಕನ್ನಡ ಸಾಹಿತ್ಯ ಭವನ' ನಿರ್ಮಾಣ ಮಾಡಬೇಕೆಂದು ನಿರ್ಣಯ ಕೈಗೊಂಡು ಸಮಿತಿಯನ್ನು ರಚಿಸಲಾಗಿದೆ. ಸುಮಾರು ೩.೮೦ ಕೋಟಿಗಳ ವೆಚ್ಚದಲ್ಲಿ ಕನ್ನಡ ಸಾಹಿತ್ಯ ಭವನವನ್ನು ನಿರ್ಮಿಸಲು ಮುಂದಾಗಿದ್ದು, ಮೊದಲ ಹಂತದಲ್ಲಿ ಒಂದು ಕೋಟಿ ರೂ.ಗಳ ವೆಚ್ಚದಲ್ಲಿ ನೆಲ ಕಟ್ಟಡವನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದರು. 
     ತಾಲೂಕಿನ ಸಮಸ್ತ ನಾಗರಿಕರು, ಕನ್ನಡ ಹಾಗು ಸಾಹಿತ್ಯಾಭಿಮಾನಿಗಳು ಕನ್ನಡ ನಾಡಿನ ಜಲ, ಭಾಷೆ ಮತ್ತು ಭೂಮಿಯ ಋಣ ತೀರಿಸಲು ಕನ್ನಡ ಸಾಹಿತ್ಯ ಭವನದ ನಿರ್ಮಾಣಕ್ಕೆ ಆರ್ಥಿಕ ಸಹಾಯದೊಂದಿಗೆ ಎಲ್ಲಾ ರೀತಿಯ ಸಹಕಾರ ನೀಡುವಂತೆ ಕೋರಿದರು. 
    ಹೆಚ್ಚಿನ ಮಾಹಿತಿಗೆ  ೯೪೪೮೯೩೯೪೯೦/೯೯೦೨೨೧೦೧೫೦  ೯೧೧೩೨೧೪೩೪೬/೯೮೮೦೦೭೦೯೮೯ ಮೊಬೈಲ್ ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದರು. 
    ಡಾ. ಡಿ. ಪ್ರಭಾಕರ್ ಬೀರಯ್ಯ ಮಾತನಾಡಿ, ಸಾಹಿತ್ಯ ಭವನ ನಿರ್ಮಾಣ ಸಮಿತಿಯ ಪ್ರತಿಯೊಬ್ಬರು ತಮಗೆ ವಹಿಸಿರುವ ಜವಾಬ್ದಾರಿಗಳನ್ನು ಹೆಚ್ಚಿನ ಪಾರದರ್ಶಕವಾಗಿ ನಿರ್ವಹಿಸಲು ಕಟ್ಟಿಬದ್ಧರಾಗಿದ್ದೇವೆ. ಇದಕ್ಕೆ ತಕ್ಕಂತೆ ರೂಪುರೇಷೆಗಳನ್ನು ಸಿದ್ದಪಡಿಸಿಕೊಳ್ಳಲಾಗಿದೆ. ಯಾವುದೇ ರೀತಿಯ ಗೊಂದಲಗಳಿಗೆ ಆಸ್ಪದವಿಲ್ಲದ ರೀತಿಯಲ್ಲಿ ಭವನ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ. ಆರ್ಥಿಕ ವರ್ಷದ ಕೊನೆಯಲ್ಲಿ ಲೆಕ್ಕಪತ್ರ ಮಂಡಿಸಲಾಗುವುದು ಎಂದರು. 
    ಭವನ ಪರಿಷತ್ತಿನ ಕಾರ್ಯಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಿದ್ದರೂ ಸಹ ಇದರ ನಿರ್ವಹಣೆ ವೆಚ್ಚ ಭರಿಸುವ ನಿಟ್ಟಿನಲ್ಲಿ ಶಾಲಾ-ಕಾಲೇಜು ಸೇರಿದಂತೆ ಸಂಘ-ಸಂಸ್ಥೆಗಳಿಗೆ ಸಣ್ಣಪುಟ್ಟ ಕಾರ್ಯಕ್ರಮಗಳನ್ನು ಆಯೋಜಿಸಲು ಬಾಡಿಗೆಗೆ ನೀಡಲಾಗುವುದು. ಇದನ್ನು ಬಿಟ್ಟರೇ ಭವನವನ್ನು ಆರ್ಥಿಕ ಲಾಭ ಅಥವಾ ಬಾಡಿಗೆ ನೀಡುವ ಉದ್ದೇಶದಿಂದ ಬಳಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು. 
    ಪತ್ರಿಕಾಗೋಷ್ಠಿಯಲ್ಲಿ ಎಂ.ಈ ಜಗದೀಶ್, ಎಂ.ಎಸ್. ಸುಧಾಮಣಿ ವೆಂಕಟೇಶ್, ಡಿ. ನಾಗೋಜಿರಾವ್, ಬಿ.ಎಲ್. ಮೋಹನಕುಮಾರ್, ಕೋಡ್ಲು ಯಜ್ಞಯ್ಯ, ಟಿ. ತಿಮ್ಮಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

Wednesday, April 2, 2025

ಏ.೩ರಂದು ವಿಶ್ವ ರಂಗಭೂಮಿ ದಿನಾಚರಣೆ

    ಭದ್ರಾವತಿ : ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದ ವತಿಯಿಂದ ಏ.೩ರಂದು ಸಂಜೆ ೬ ಗಂಟೆಗೆ ಜನ್ನಾಪುರ, ರಾಜಪ್ಪ ಲೇಔಟ್, ಅಂಗಾಳ ಪರಮೇಶ್ವರಿ ನಿಲಯದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. 
    ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜ್‌ಕುಮಾರ್, ವಿಕಸಂ ಹಿರಿಯ ರಂಗಕಲಾವಿದ ಕೆ.ಬಿ ಕಪನಿಗೌಡ, ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಬಿ. ಜಗದೀಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸಂಘದ ಉಪಾಧ್ಯಕ್ಷೆ ರತ್ನಾ ಗಂಗಾಧರ್ ಅಧ್ಯಕ್ಷತೆ ವಹಿಸಲಿದ್ದಾರೆ. ವಿಕಸಂ ಹಿರಿಯ ರಂಗಕಲಾವಿದ ಕೆ.ಎಸ್ ರವಿಕುಮಾರ್‌ರವರಿಗೆ ಗೌರವ ಸಮರ್ಪಣೆ ನಡೆಯಲಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಜಾನಪದ ಕಲಾವಿದ ತಮಟೆ ಜಗದೀಶ್ ಮನವಿ ಮಾಡಿದ್ದಾರೆ. 

ಅಕ್ಕಮಹಾದೇವಿ ಜಯಂತಿ ಅಂಗವಾಗಿ ಏ.೧೫ರಂದು ವಚನ ಗಾಯನ ಸ್ಪರ್ಧೆ

    ಭದ್ರಾವತಿ: ತಾಲೂಕು ವೀರಶೈವ ಲಿಂಗಾಯಿತ ಮಹಿಳಾ ಸಮಾಜದ ವತಿಯಿಂದ ಅಕ್ಕಮಹಾದೇವಿ ಜಯಂತಿ ಅಂಗವಾಗಿ ಮಹಿಳೆಯರಿಗೆ ತಾಲೂಕು ಮಟ್ಟದ ವಚನ ಗಾಯನ ಸ್ಪರ್ಧೆ ಏ.೧೫ರ ಮಂಗಳವಾರ ಬೆಳಿಗ್ಗೆ ೧೦.೩೦ಕ್ಕೆ ಏರ್ಪಡಿಸಲಾಗಿದೆ. 
    ಹಳೇನಗರದ ತಾಲೂಕು ಕಚೇರಿ ರಸ್ತೆಯಲ್ಲಿರುವ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಸ್ಪರ್ಧೆ ಜರುಗಲಿದೆ. ಭಾಗವಹಿಸಲಿಚ್ಚಿಸುವವರು ಹೆಸರು ನೋಂದಾಯಿಸಲು ಏ.೧೩ ಕಡೆ ದಿನಾಂಕವಾಗಿರುತ್ತದೆ.  ಹೆಚ್ಚಿನ ಮಾಹಿತಿಗೆ ಮೊ: ೯೪೮೦೨೦೫೭೧೨ ಅಥವಾ ೯೪೪೯೫ ೮೨೮೦೦ ಸಂಪರ್ಕಿಸಬಹುದಾಗಿದೆ ಎಂದು ಸಮಾಜದ ಅಧ್ಯಕ್ಷೆ ನಾಗರತ್ನ ವಾಗೀಶ್ ಕೋಠಿ ತಿಳಿಸಿದ್ದಾರೆ. 

ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಿಂದ ಗೋವುಗಳ ರಕ್ಷಣೆ

ಜಿಲ್ಲೆಯಾದ್ಯಂತ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಗೋ ರಕ್ಷಣೆಯಲ್ಲಿ ತೊಡಗಿದ್ದು, ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ೪ ಗೋವುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.  
    ಭದ್ರಾವತಿ: ಜಿಲ್ಲೆಯಾದ್ಯಂತ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಗೋ ರಕ್ಷಣೆಯಲ್ಲಿ ತೊಡಗಿದ್ದು, ತಾಲೂಕಿನ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ೪ ಗೋವುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.  
    ಅಶೋಕ್ ಲೇಲ್ಯಾಂಡ್ ವಾಹನದಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ೪ ಮಲ್ನಾಡ್ ಗಿಡ್ಡ ತಳಿಯ ಗೋವುಗಳನ್ನು ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರೊಂದಿಗೆ ವೇದಿಕೆ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. 
    ಗೋವುಗಳನ್ನು ರಕ್ಷಿಸಿ ಗೋ ಶಾಲೆಗೆ ಬಿಡಲಾಗಿದ್ದು, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆಂದು ವೇದಿಕೆ ಮುಖಂಡರು ಮಾಹಿತಿ ನೀಡಿದ್ದಾರೆ. 
    ಕ್ಷೇತ್ರದಲ್ಲಿ ಇತ್ತೀಚೆಗೆ ಅಪಾರ ಪ್ರಮಾಣದಲ್ಲಿ ಗೋವುಗಳ ಮೂಳೆ ಪತ್ತೆ ಪತ್ತೆಯಾಗಿದ್ದು, ಸರ್ಕಾರ ಗೋ ನಿಷೇಧ ಕಾಯ್ಕೆ ಜಾರಿಗೆ ತಂದಿದ್ದರೂ ಸಹ ನಿರಂತರವಾಗಿ ಗೋವು ಹತ್ಯೆ ನಡೆಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿದ್ದವು. 

ಫಾಸ್ಟರ್ ಪ್ರವೀಣ್ ಪಗಡಾಲ ಸಾವಿನ ಕುರಿತು ಸಿ.ಬಿ.ಐ ತನಿಖೆ ನಡೆಸಿ

ಅಖಲ ಭಾರತ ಕ್ರೈಸ್ತ ಮಹಾಸಭಾ ರಾಷ್ಟ್ರಪತಿಗಳಿಗೆ ಮನವಿ 

ಅಂಧ್ರ ಪ್ರದೇಶದ ರಾಜಮಂಡ್ರಿ ಫಾಸ್ಟರ್ ಪ್ರವೀಣ್ ಪಗಡಾಲರವರ ಸಾವಿನ ಕುರಿತು ಸಿ.ಬಿ.ಐ ತನಿಖೆ ನಡೆಸಿ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿ ಬುಧವಾರ ಭದ್ರಾವತಿಯಲ್ಲಿ ಅಖಲ ಭಾರತ ಕ್ರೈಸ್ತ ಮಹಾಸಭಾ ವತಿಯಿಂದ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು. 
    ಭದ್ರಾವತಿ : ಅಂಧ್ರ ಪ್ರದೇಶದ ರಾಜಮಂಡ್ರಿ ಫಾಸ್ಟರ್ ಪ್ರವೀಣ್ ಪಗಡಾಲರವರ ಸಾವಿನ ಕುರಿತು ಸಿ.ಬಿ.ಐ ತನಿಖೆ ನಡೆಸಿ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿ ಬುಧವಾರ ಅಖಲ ಭಾರತ ಕ್ರೈಸ್ತ ಮಹಾಸಭಾ ವತಿಯಿಂದ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು. 
    ತಹಸೀಲ್ದಾರ್ ಪರುಸಪ್ಪ ಕುರುಬರ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಕ್ರೈಸ್ತ ಮುಖಂಡರು, ದೇಶದಲ್ಲಿ ಅನೇಕ ಧರ್ಮಗಳ ನಡುವೆ ಅಲ್ಪಸಂಖ್ಯಾತರೆಂಬ ಶಿರೋನಾಮೆಯೊಂದಿಗೆ ಕ್ರೈಸ್ತರು ಪ್ರೀತಿ, ಸೌಹಾರ್ದತೆ, ಸಾಮ್ಯರಸ್ಯಗಳಿಂದ ಕೂಡಿ ಬದುಕುತ್ತಿದ್ದೇವೆ. ಅಲ್ಲದೆ ದೇಶಕ್ಕೆ ನಮ್ಮದೇ ಆದ ಕೊಡುಗೆಗಳನ್ನು ನೀಡಿದ್ದೇವೆ ಎಂದರು. 
    ಆಂಧ್ರ ಪ್ರದೇಶದ ರಾಜಮಂಡ್ರಿ ಫಾಸ್ಟರ್ ಪ್ರವೀಣ್ ಪಗಡಾಲರವರು ಒಬ್ಬ ಒಳ್ಳೆಯ ದೇವರ ಸೇವಕರು ಮತ್ತು ಸ್ವಂತ ಸಾಫ್ಟ್‌ವೇರ್ ಕಂಪನಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಅಲ್ಲದೆ ಹಲವಾರು ಸಾಮಾಜಿಕ ಕಾರ್ಯಗಳೊಂದಿಗೆ ಸಮಾಜ ಸೇವಕರಾಗಿದ್ದಾರೆ. ಆಂಧ್ರ ಪ್ರದೇಶ ಸರ್ಕಾರ ಯಾವುದೇ ಸಾಕ್ಷಿ ಇಲ್ಲದೆ ಇವರ ಸಾವು ಅಪಘಾತ ಎಂದು ಪರಿಗಣಿಸಿದೆ. ಆದರೆ ಇವರ ಸಾವು ಹಲವಾರು ಅನುಮಾನದಿಂದ ಕೂಡಿದೆ ಎಂದು ಆರೋಪಿಸಿದರು. 
    ಪ್ರವೀಣ್ ಪಗಡಾಲರವರ ಸಾವಿನ ಸತ್ಯಾಂಶ ಹೊರಬರಬೇಕು. ಅವರ ಕುಟುಂಬಕ್ಕೂ ಮತ್ತು ಕ್ರೈಸ್ತರಿಗೂ ನ್ಯಾಯ ದೊರಕಿಸಿ ಕೊಡಬೇಕು. ದೇಶದಲ್ಲಿ ಅಲ್ಪ ಸಂಖ್ಯಾತರಾಗಿರುವ ಕ್ರೈಸ್ತರಿಗೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು. 
    ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಆರ್ ಸುರೇಶ್ ನಾಯ್ಕ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ವಿವಿಧ ಕ್ರೈಸ್ತ ಸಂಘಟನೆಗಳ ಪ್ರಮುಖರಾದ ಫಾಸ್ಟರ್ ರೈಮಂಡ್, ಸೆಲ್ವರಾಜ್, ನಗರಸಭೆ ಸದಸ್ಯರಾದ ಜಾರ್ಜ್, ಐ.ವಿ ಸಂತೋಷ್, ಮಾಜಿ ಸದಸ್ಯ ಫ್ರಾನ್ಸಿಸ್, ಸೂಡಾ ಸದಸ್ಯ ಎಚ್. ರವಿಕುಮಾರ್, ಆರ್. ಮೋಸಸ್, ವಿಲ್ಸನ್‌ಬಾಬು, ದಾಸ್, ಸ್ಪೀಫನ್, ಕಾಕನಿ ಪ್ರಕಾಶ್, ಅಂತೋಣಿ ಪ್ರಕಾಶ್, ಕೃಪಾ ಮೇರಿ ಮತ್ತು ಶೈನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

Tuesday, April 1, 2025

ಏ.೨ರಂದು ವಿದ್ಯುತ್ ವ್ಯತ್ಯಯ


    ಭದ್ರಾವತಿ: ಮೆಸ್ಕಾಂ ನಗರ ಉಪವಿಭಾಗ, ಘಟಕ-೩ರ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗಗಳ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಏ.೨ ರ ಬುಧವಾರ ಬೆಳಿಗ್ಗೆ ೯.೩೦ ರಿಂದ ಸಂಜೆ ೫.೩೦ರವರೆಗೆ ವಿದ್ಯುತ್ ಅಡಚಣೆ ವ್ಯತ್ಯಯ ಉಂಟಾಗಲಿದೆ. 
    ನಗರ ವ್ಯಾಪ್ತಿಯ ಜನ್ನಾಪುರ, ಹುತ್ತಾ ಕಾಲೋನಿ, ಅಪ್ಪರ್‌ಹುತ್ತ, ಜಿಂಕ್‌ಲೈನ್ ವೇಲೂರುಶೆಡ್, ಭಂಡಾರಹಳ್ಳಿ ಸುತ್ತ ಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ, ಗ್ರಾಹಕರು ಸಹಕರಿಸಲು ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.