Wednesday, April 9, 2025

`ಶಿಮುಲ್ ಶಿವಮೊಗ್ಗ'ಕ್ಕೆ ಒಂದು ದಿನದ ಕೈಗಾರಿಕಾ ಭೇಟಿ

ಭದ್ರಾವತಿ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಮಂಗಳವಾರ `ಶಿಮುಲ್ ಶಿವಮೊಗ್ಗ'ಕ್ಕೆ ಒಂದು ದಿನದ ಕೈಗಾರಿಕಾ ಭೇಟಿ ಹಮ್ಮಿಕೊಂಡಿತ್ತು. 
    ಭದ್ರಾವತಿ: ನಗರದ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಮಂಗಳವಾರ ಮಾಚೇನಹಳ್ಳಿಯಲ್ಲಿರುವ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟಕ್ಕೆ `ಶಿಮುಲ್ ಶಿವಮೊಗ್ಗ'ಕ್ಕೆ ಒಂದು ದಿನದ ಕೈಗಾರಿಕಾ ಭೇಟಿ ಹಮ್ಮಿಕೊಂಡಿತ್ತು. 
    ವಾಣಿಜ್ಯ ಮತ್ತು ನಿರ್ವಹಣಾ ವಿದ್ಯಾರ್ಥಿಗಳ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಸುಮಾರು ೭೪ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಿಮುಲ್ ರಚನೆ, ಕಾರ್ಯ ನಿರ್ವಹಣೆ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಮಾಹಿತಿ ಪಡೆದುಕೊಂಡರು. . 
    ಕಾಲೇಜಿನ ಪ್ರಭಾರ ಪ್ರಾಂಶುಪಾಲ ಪ್ರೊ. ಆರ್. ಮಂಜಪ್ಪ ಮತ್ತು ನಿರ್ವಹಣಾ ವಿಭಾಗದ ಮುಖ್ಯಸ್ಥೆ ಡಾ. ಟಿ.ಜಿ ಉಮಾ, ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ   
    ಪ್ರೊ. ಆರ್. ವೆಂಕಟೇಶ್, ಪ್ರೊ. ವಿ.ಬಿ ಚಿರಂಜೀವಿ, ಡಾ. ಅಕ್ಷತಾ, ಶಂಕರ್ ಯಾದವ್ ,ಶಾಂತಿ, ಸುಷ್ಮಾ, ವಾಣಿ, ನಂದಿತಾ ಮತ್ತು ನಾಗಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ರಾಜ್ಯಮಟ್ಟದ ನಾಲ್ವಡಿ ಕೃಷ್ಣರಾಜ ಒಡೆಯರ್ ಸದ್ಭಾವನಾ ಪ್ರಶಸ್ತಿಗೆ ಭಾಜನರಾದ ಎಂ.ಆರ್ ರೇವಣಪ್ಪ

ಎಂ.ಆರ್ ರೇವಣಪ್ಪ 
    ಭದ್ರಾವತಿ: ತಾಲೂಕಿನ ಸುಲ್ತಾನ್‌ಮಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ, ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಎಂ.ಆರ್ ರೇವಣಪ್ಪರವರು ರಾಜ್ಯಮಟ್ಟದ ನಾಲ್ವಡಿ ಕೃಷ್ಣರಾಜ ಒಡೆಯರ್ ಸದ್ಭಾವನಾ ಪ್ರಶಸ್ತಿಗೆ ಭಾಜನರಾಗಿದ್ದಾರೆ.  
ರೇವಣಪ್ಪರವರು ಸಾಹತ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಬೆಂಗಳೂರು ಕೊಡಿಗೆಹಳ್ಳಿಯ ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್ ಕರ್ನಾಟಕ ವತಿಯಿಂದ  ಪ್ರಶಸ್ತಿ ನೀಡಲಾಗುತ್ತಿದೆ. 
    ರೇವಣಪ್ಪರವರು ಉತ್ತಮ ಶಿಕ್ಷಕರಾಗಿದ್ದು, ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಶಿಕ್ಷಕ ವೃತ್ತಿ ಜೊತೆಗೆ ಕಳೆದ ಸುಮಾರು ೩೦ ವರ್ಷಗಳಿಂದ ಜಾನಪದ, ನಾಟಕ ಸೇರಿದಂತೆ ಹಲವು ಕಲೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಂಗ್ಯಾಬಾಳ್ಯ, ರಾಜಾವಿಕ್ರಮ, ಸತ್ಯಹರಿಶ್ಚಂದ್ರ ಸೇರಿದಂತೆ ಸುಮಾರು ೩೦ ರಿಂದ ೪೦ ಪೌರಾಣಿಕ ಹಾಗು ಸಾಮಾಜಿಕ ನಾಟಕಗಳನ್ನು ನಿರ್ದೇಶಿಸಿ ಪ್ರದರ್ಶನಗೊಳಿಸಿದ್ದಾರೆ. ಅಲ್ಲದೆ ಕರ್ನಾಟಕ ನಾಟ್ಯ ವೈಭವ ಮಂಡಳಿಯ ಹಲವು ನಾಟಕದಲ್ಲಿ ಅಭಿನಯಿಸಿದ್ದಾರೆ. 
    ರೇವಣಪ್ಪರವರು ಡೊಳ್ಳು ಕುಣಿತ, ಕೋಲಾಟ, ಸುಗ್ಗಿ ಕುಣಿತ ಕಲಾವಿದರೂ ಸಹ ಆಗಿದ್ದು, ರಾಜ್ಯ ಹಾಗು ರಾಷ್ಟ್ರಮಟ್ಟದ ಪ್ರದರ್ಶನಗಳಲ್ಲಿ ಭಾಗವಹಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತಮ್ಮ ಕಲೆಗಳನ್ನು ತಿಳಿಸಿಕೊಡುವ ಕಾರ್ಯದಲ್ಲೂ ಯಶಸ್ವಿಯಾಗಿದ್ದಾರೆ. ವಿಶೇಷವಾಗಿ ಕಾರಾಗೃಹದಲ್ಲೂ ಶಿಬಿರಗಳನ್ನು ಆಯೋಜಿಸಿ ಕೈದಿಗಳಿಗೂ ತಮ್ಮ ಕಲೆಗಳನ್ನು ಕಲಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. 
    ರೇವಣಪ್ಪರವರು ಏ.೧೦ರಂದು ಮೈಸೂರಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ನಡೆಯಲಿರುವ `ಕರ್ನಾಟಕ ಸಾಂಸ್ಕೃತಿಕ ವೈಭವ-೨೦೨೫' ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. 

ಕುಡಿಯುವ ನೀರಿನ ಸಮಸ್ಯೆ ಉಲ್ಬಣ, ಯುಜಿಡಿ ಕಾಮಗಾರಿ ನಿರ್ಲಕ್ಷ್ಯ ; ಅಧಿಕಾರಿಗಳ ವಿರುದ್ಧ ಆಕ್ರೋಶ

ನಗರಸಭೆ ಸಾಮಾನ್ಯಸಭೆಯಲ್ಲಿ ಆಡಳಿತ ರೂಢ ಪಕ್ಷದ ಸದಸ್ಯರಿಂದಲೇ ಪ್ರತಿಭಟನೆ 

ಕುಡಿಯುವ ನೀರಿನ ಸಮಸ್ಯೆ ಉಲ್ಬಣ, ಯುಜಿಡಿ ಕಾಮಗಾರಿ ನಿರ್ಲಕ್ಷ್ಯದ ಹಿನ್ನಲೆಯಲ್ಲಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಬುಧವಾರ ಭದ್ರಾವತಿ ನಗರಸಭೆಯಲ್ಲಿ ನಡೆದ ಸಭೆಯಲ್ಲಿ ಆಡಳಿತ ರೂಢ ಪಕ್ಷದ ಸದಸ್ಯರೇ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಅದರಲ್ಲೂ ಸದಸ್ಯೆ ಲತಾ ಚಂದ್ರಶೇಖರ್ ಬಳೆ ತೋರಿಸಿ ಆಕ್ರೋಶ ಹೊರ ಹಾಕಿದರು. 
    ಭದ್ರಾವತಿ: ನಗರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದ್ದು, ಅಲ್ಲದೆ ವಾರ್ಡ್‌ಗಳಲ್ಲಿ ಚರಂಡಿ, ರಸ್ತೆ ಸೇರಿದಂತೆ ಯುಜಿಡಿ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸದೆ ಅಧಿಕಾರಿಗಳು ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆಂದು ಆಡಳಿತ ರೂಢ ಪಕ್ಷದ ಸದಸ್ಯರೇ ಬುಧವಾರ ನಡೆದ ಸಾಮಾನ್ಯಸಭೆಯಲ್ಲಿ ಸಭೆಯ ಬಾವಿಗಿಳಿದು ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
    ನಗರಸಭೆ ಅಧ್ಯಕ್ಷೆ ಗೀತಾರಾಜ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಆರಂಭದಲ್ಲಿ ಆಡಳಿತ ರೂಢ ಪಕ್ಷದ ವಾರ್ಡ್ ನಂ.೬ರ ಸದಸ್ಯ ಆರ್. ಶ್ರೇಯಸ್ ವಾರ್ಡ್ ನಂ.೩ರ ಸದಸ್ಯ ಜಾರ್ಜ್ ಮತ್ತು ವಾರ್ಡ್ ನಂ.೩೩ರ ಪಕ್ಷೇತರ ಸದಸ್ಯ ಆರ್. ಮೋಹನ್ ಕುಮಾರ್ ಸಭೆಯ ಬಾವಿಗಿಳಿದು ಪ್ರತಿಭಟಿಸುವ ಮೂಲಕ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು. 
    ಅಭಿಯಂತರರಾದ ಶಿವಪ್ರಸಾದ್ ಹಾಗು ಪ್ರಸಾದ್ ಮತ್ತು ಸಂತೋಷ್ ಪಾಟೀಲ್ ಸೇರಿದಂತೆ ಇನ್ನಿತರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿರುವ ಕುರಿತು ಮಾಹಿತಿ ನೀಡಿದರೂ ಸಹ ಯಾರು ಗಮನ ಹರಿಸುತ್ತಿಲ್ಲ. ಇದರಿಂದಾಗಿ ನಿವಾಸಿಗಳು ಸಂಕಷ್ಟಕ್ಕೆ ಒಳಗಾಗಿದ್ದಾರೆ. ತಕ್ಷಣ ನೀರಿನ ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಿದರು. 
    ಈ ನಡುವೆ ಅಧಿಕಾರಿಗಳು ಸಮಜಾಯಿಷಿ ನೀಡಲು ಪ್ರಯತ್ನಿಸಿದರೂ ಸಹ ಸಾಧ್ಯವಾಗಲಿಲ್ಲ. ಸದಸ್ಯರಾದ ಬಿ.ಕೆ ಮೋಹನ್, ಬಿ.ಟಿ ನಾಗರಾಜ್, ಚನ್ನಪ್ಪ, ವಿ. ಕದಿರೇಶ್, ಟಿಪ್ಪುಸುಲ್ತಾನ್, ಕೆ. ಸುದೀಪ್ ಕುಮಾರ್ ಸೇರಿದಂತೆ ಇನ್ನಿತರ ಸದಸ್ಯರು ಸುಮಾರು ಅರ್ಧ ತಾಸು ಅಧಿಕಾರಿಗಳ ವರ್ತನೆ ಹಾಗು ವಾರ್ಡ್‌ಗಳಲ್ಲಿ ಎದುರಾಗಿರುವ ಸಮಸ್ಯೆಗಳನ್ನು ಸಭೆಯ ಗಮನಕ್ಕೆ ತಂದರು. ಈ ನಡುವೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಮಾತನಾಡಿ, ೧ ವಾರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. 
    ಈ ನಡುವೆ ವಿದ್ಯುತ್ ಸಮಸ್ಯೆಯಿಂದ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪದ ಹಿನ್ನಲೆಯಲ್ಲಿ ಮೆಸ್ಕಾಂ ಅಧಿಕಾರಿಗಳಿಂದ ವಿದ್ಯುತ್ ಸಮಸ್ಯೆ ಕುರಿತು ಮಾಹಿತಿ ಪಡೆಯಲಾಯಿತು.  
    ಕುಡಿಯುವ ನೀರಿನ ಸಮಸ್ಯೆ ಜೊತೆಗೆ ವಾರ್ಡ್‌ಗಳಲ್ಲಿ ಚರಂಡಿ, ರಸ್ತೆ ಸೇರಿದಂತೆ ಯುಜಿಡಿ ಕಾಮಗಾರಿಗಳು ಸ್ಥಗಿತಗೊಂಡಿವೆ. ಅಧಿಕಾರಿಗಳು ಹಾಗು ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸುವಲ್ಲಿ ನಿರ್ಲಕ್ಷ್ಯತನವಹಿಸಿದ್ದಾರೆ. ಅವರಿಗೆ ಕಾಮಗಾರಿ ನಡೆಸಲು ಸಾಧ್ಯವಾಗದಿದ್ದರೆ ಕೈಗಳಿಗೆ ಬಳೆ ಧರಿಸಿಕೊಂಡು ಇರಲಿ ಎಂದು ವಾರ್ಡ್ ನಂ. ೩೪ರ ಸದಸ್ಯೆ ಲತಾ ಚಂದ್ರಶೇಖರ್ ಬಳೆ ಪ್ರದರ್ಶಿಸುವ ಮೂಲಕ ಆಕ್ರೋಶ ಹೊರ ಹಾಕಿದರು. ಸುಮಾರು ೬ ತಿಂಗಳಿಂದ ಕಾಮಗಾರಿ ಸ್ಥಗಿತಗೊಂಡಿದೆ. ವಾರ್ಡ್‌ಗಳ ನಿವಾಸಿಗಳು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಕಾಮಗಾರಿ ತಕ್ಷಣ ಪೂರ್ಣಗೊಳಿಸುವಂತೆ ಅಧಿಕಾರಿಗಳು ಹಾಗು ಗುತ್ತಿಗೆದಾರರಿಗೆ ಹಲವು ಬಾರಿ ಮನವಿ ಮಾಡಿದರೂ ಸಹ ಏನೂ ಪ್ರಯೋಜನವಾಗಿಲ್ಲ ಎಂದು  ಅಳಲು ತೋರ್ಪಡಿಸಿಕೊಂಡರು. 
    ಗುತ್ತಿಗೆದಾರ ಸತೀಶ್ ಪರವಾಗಿ ಜಿಪಿಎ ಹೋಲ್ಡರ್ ಪಡೆದಿರುವ ಅಭಿಲಾಷ್ ಸಭೆಗೆ ಹಣದ ಸಮಸ್ಯೆ ಎದುರಾಗಿರುವ ಕುರಿತು ಮಾಹಿತಿ ನೀಡಿದರು. ಈಗಾಗಲೇ ನಡೆಸಿರುವ ಕಾಮಗಾರಿಗೆ ಇನ್ನೂ ಹಣ ಬಂದಿಲ್ಲ. ಈ ಹಿನ್ನಲೆಯಲ್ಲಿ ವಿಳಂಬವಾಗಿದೆ. ಆದರೂ ಸಹ ಕಾಮಗಾರಿ ಪೂರ್ಣಗೊಳಿಸಲಾಗುವುದು. ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಈ ನಡುವೆ ಸದಸ್ಯ ಚನ್ನಪ್ಪ ಮಾತನಾಡಿ, ಕಾಮಗಾರಿ ಮುಕ್ತಾಯಗೊಳಿಸುವುದು ಗುತ್ತಿಗೆದಾರರ ಜವಾಬ್ದಾರಿಯಾಗಿದೆ. ಈಗಾಗಲೇ ಮುಂಗಡ ಹಣ ಸಹ ಪಾವತಿಸಲಾಗಿದೆ. ಆದರೂ ಸಹ ಕಾಮಗಾರಿ ಪೂರ್ಣಗೊಳಿಸದಿರುವುದು ಸರಿಯಲ್ಲ ಎಂದರು. 
    ಈ ನಡುವೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಮಾತನಾಡಿ, ಚರಂಡಿ, ರಸ್ತೆ ಸೇರಿದಂತೆ ಯುಜಿಡಿ ಕಾಮಗಾರಿಗಳನ್ನು ಮುಂದಿನ ೧೫ ದಿನಗಳಲ್ಲಿ ಬಗೆಹರಿಸುವುದಾಗಿ ಭರವಸೆ ನೀಡಿದರು. 
    ಸದಸ್ಯರಾದ ಟಿಪ್ಪು ಸುಲ್ತಾನ್, ಬಿ.ಟಿ ನಾಗರಾಜ್ ಸೇರಿದಂತೆ ಇನ್ನಿತರರು ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗಗಳನ್ನು ಕಬಳಿಸಲಾಗುತ್ತಿದೆ. ಈ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಸಹ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು. 
    ಸಭೆ ಆರಂಭವಾಗಿ ೨ ತಾಸು ಕಳೆದರೂ ಸಹ ಅಜೆಂಡಾದಲ್ಲಿನ ಪ್ರಸ್ತಾವನೆಗಳ ಕುರಿತು ಚರ್ಚೆ ನಡೆಯಲಿಲ್ಲ. ನಗರಸಭೆ ಉಪಾಧ್ಯಕ್ಷ ಎಂ. ಮಣಿ ಎಎನ್‌ಎಸ್ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್ ಉಪಸ್ಥಿತರಿದ್ದರು. 
 

Tuesday, April 8, 2025

ಸರ್ಕಾರಿ ಸಂಚಿಯ ಹೊನ್ನಮ್ಮ ಪದವಿ ಪೂರ್ವ ಕಾಲೇಜಿಗೆ ಶೇ.೬೯ ಫಲಿತಾಂಶ


ಭದ್ರಾವತಿ ಹಳೇನಗರದ ಸರ್ಕಾರಿ ಸಂಚಿಯ ಹೊನ್ನಮ್ಮ ಪದವಿ ಪೂರ್ವ ಕಾಲೇಜು. 
    ಭದ್ರಾವತಿ: ಹಳೆನಗರದ ಸರ್ಕಾರಿ ಸಂಚಿಯ ಹೊನ್ನಮ್ಮ ಪದವಿ ಪೂರ್ವ ಕಾಲೇಜು ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.೬೯ರಷ್ಟು ಫಲಿತಾಂಶ ಪಡೆದುಕೊಂಡಿದ್ದು, ಕಾಲೇಜಿನ ೫ ವಿದ್ಯಾರ್ಥಿನಿಯರು ಅತ್ಯುನ್ನತ ಶ್ರೇಣಿ(ಡಿಸ್ಟಿಂಕ್ಷನ್)ಯಲ್ಲಿ ಉತ್ತೀರ್ಣರಾಗುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ. .
    ವಿಜ್ಞಾನ ವಿಭಾಗದ ತಹೀರಾ ಅಂಜುಮ್-೫೩೦ ಮತ್ತು ಮಾಯಾವತಿ-೫೨೨, ವಾಣಿಜ್ಯ ವಿಭಾಗದ ಡಿ. ಶೀಫಾ-೫೨೩ ಮತ್ತು ಎಂ. ಗಗನಶ್ರೀ-೫೨೧ ಹಾಗು ಕಲಾ ವಿಭಾಗದ ಪ್ರಿಯಾಂಕ-೫೧೦ ಅತಿಹೆಚ್ಚು ಅಂಕ ವಿದ್ಯಾರ್ಥಿನಿಯರಾಗಿದ್ದಾರೆ. 
    ಈ ಬಾರಿ ಕಾಲೇಜಿನಲ್ಲಿ ಪರೀಕ್ಷೆಗೆ ಹಾಜರಾದ ೨೫೦ ವಿದ್ಯಾರ್ಥಿನಿಯರ ಪೈಕಿ ೧೦೪ ವಿದ್ಯಾರ್ಥಿನಿಯರು ಪ್ರಥಮ ಹಾಗೂ ೬೦ ವಿದ್ಯಾರ್ಥಿನಿಯರು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ಕಾಲೇಜಿಗೆ ಶೇ. ೬೯ ಫಲಿತಾಂಶ ಲಭಿಸಿದೆ. 
    ಶಾಸಕ ಬಿ.ಕೆ ಸಂಗಮೇಶ್ವರ್ ಹಾಗೂ ಕಾಲೇಜಿನ ಅಭಿವೃದ್ಧಿ ಸಮಿತಿ ಸದಸ್ಯರು, ಪ್ರಾಂಶುಪಾಲರು ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ. 

ಏ.೯ರಂದು ವಿದ್ಯುತ್ ವ್ಯತ್ಯಯ

    ಭದ್ರಾವತಿ: ಮೆಸ್ಕಾಂ ಘಟಕ-೧, ೨, ೩ ಮತ್ತು ೪ರ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗಗಳ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಏ.೯ರಂದು ಬೆಳಿಗ್ಗೆ ೯.೩೦ ರಿಂದ ಸಂಜೆ ೫.೩೦ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 
    ರಬ್ಬರ್ ಕಾಡು, ಬಾಳೇಮಾರನಹಳ್ಳಿ, ಸುಲ್ತಾನ್‌ಮಟ್ಟಿ, ತಾರೀಕಟ್ಟೆ, ಹೊಳೆಗಂಗೂರು, ಚಿಕ್ಕಗೊಪ್ಪೇನಹಳ್ಳಿ, ಗೊಂದಿ, ಕಾಳನಕಟ್ಟೆ, ಕಂಬದಾಳ್‌ಹೊಸೂರು, ಹೊನ್ನಟ್ಟಿಹೊಸೂರು, ಹೊನ್ನಟ್ಟಿಹೊಸೂರು ಕ್ಯಾಂಪ್, ಸಿದ್ದರಹಳ್ಳಿ, ತಮ್ಮಡಿಹಳ್ಳಿ, ಕಲ್ಪನಹಳ್ಳಿ, ಹೊಸಳ್ಳಿ, ಕುಮರಿನಾರಾಯಣಪುರ, ಬಾರಂದೂರು, ಹಳ್ಳಿಕೆರೆ, ಬೊಮ್ಮೇನಹಳ್ಳಿ, ಕೆಂಪೇಗೌಡನಗರ, ಕಾರೇಹಳ್ಳಿ, ಕಾಳಿಂಗನಹಳ್ಳಿ ಸೇರಿದಂತೆ ಇತ್ಯಾದಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸುವಂತೆ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಕೋರಿದ್ದಾರೆ. 

ಉತ್ತಮ ಆರೋಗ್ಯಕ್ಕೆ ಉತ್ತಮ ಜೀವನ ಶೈಲಿ ಅಳವಡಿಸಿಕೊಳ್ಳಿ : ಡಾ. ವೀಣಾ ಭಟ್

ಭದ್ರಾವತಿಯಲ್ಲಿ ಭಾರತೀಯ ವೈದ್ಯಕೀಯ ಸಂಘ ತಾಲೂಕು ಶಾಖೆ ಮಹಿಳಾ ವಿಭಾಗ ಹಾಗೂ ಸ್ತ್ರೀ ರೋಗ ತಜ್ಞರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ಆರೋಗ್ಯ ದಿನಾಚರಣೆಯಲ್ಲಿ ವೈದ್ಯಕೀಯ ಸಂಘ ತಾಲೂಕು ಶಾಖೆ ಮಹಿಳಾ ವಿಭಾಗದ ಅಧ್ಯಕ್ಷೆ ಹಾಗು ಸ್ತ್ರೀ ರೋಗ ತಜ್ಞರ ಸಂಘದ ಸಾರ್ವಜನಿಕ ಅರಿವು ಸಮಿತಿಯ ರಾಜ್ಯಾಧ್ಯಕ್ಷೆ ಡಾ. ವೀಣಾ ಭಟ್ ಪಾಲ್ಗೊಂಡು ಮಾತನಾಡಿದರು. 
    ಭದ್ರಾವತಿ: ಪ್ರತಿಯೊಬ್ಬರು ಉತ್ತಮ ಆರೋಗ್ಯಕ್ಕೆ ಉತ್ತಮ ಜೀವನ ಶೈಲಿ ಅಳವಡಿಸಿಕೊಳ್ಳಬೇಕೆಂದು ಭಾರತೀಯ ವೈದ್ಯಕೀಯ ಸಂಘ ತಾಲೂಕು ಶಾಖೆ ಮಹಿಳಾ ವಿಭಾಗದ ಅಧ್ಯಕ್ಷೆ ಹಾಗು ಸ್ತ್ರೀ ರೋಗ ತಜ್ಞರ ಸಂಘದ ಸಾರ್ವಜನಿಕ ಅರಿವು ಸಮಿತಿಯ ರಾಜ್ಯಾಧ್ಯಕ್ಷೆ ಡಾ. ವೀಣಾ ಭಟ್ ಹೇಳಿದರು. 
    ಅವರು ಭಾರತೀಯ ವೈದ್ಯಕೀಯ ಸಂಘ ತಾಲೂಕು ಶಾಖೆ ಮಹಿಳಾ ವಿಭಾಗ ಹಾಗೂ ಸ್ತ್ರೀ ರೋಗ ತಜ್ಞರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ಆರೋಗ್ಯ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.  
    ಉತ್ತಮ ಆರೋಗ್ಯ ಪಡೆಯುವುದು ಪ್ರತಿಯೊಬ್ಬರ ಹಕ್ಕು. ಆರೋಗ್ಯವನ್ನು ದಾನವಾಗಿ ಕೊಡಲು ಅಥವಾ ಎರವಲಾಗಿ ಪಡೆಯಲು ಸಾದ್ಯವಿಲ್ಲ. ಅದನ್ನು ಪ್ರತಿಯೊಬ್ಬರೂ ಸ್ವಯಂ ಪ್ರಯತ್ನದಿಂದಲೇ ಸಂಪಾದಿಸಬೇಕು. ಈ ಹಿನ್ನಲೆಯಲ್ಲಿ ಪ್ರತಿಯೊಬ್ಬರೂ ಉತ್ತಮ ಜೀವನಶೈಲಿ ಅಳವಡಿಸಿಕೊಳ್ಳಬೇಕೆಂದರು.  
    ಪ್ರತಿವರ್ಷ ಏ.೭ರಂದು ವಿಶ್ವ ಆರೋಗ್ಯ ದಿನವನ್ನು ಒಂದೊಂದು ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. `ಆಶಾದಾಯಕ ಭವಿಷ್ಯಕ್ಕಾಗಿ ಆರೋಗ್ಯಕರ ಆರಂಭ' ಎಂಬುದು ಈ ಬಾರಿಯ ಘೋಷವಾಕ್ಯವಾಗಿದೆ ಎಂದರು. 
    ತಾಯಿ ಮತ್ತು ನವಜಾತ ಶಿಶುವಿನ ಆರೋಗ್ಯಯುತ ಬೆಳವಣಿಗೆ ಜೊತೆಗೆ ಹೆರಿಗೆಯ ನಂತರವೂ ಮಹಿಳೆಯರ ಸರ್ವತೋಮುಖ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು. ಈ ಮೂಲಕ ಸದೃಡ ಕುಟುಂಬ, ಸದೃಢ ಸಮಾಜ ಮತ್ತು ಸದೃಢ ರಾಷ್ಟ್ರ ನಿರ್ಮಾಣಕ್ಕೆ ಬುನಾದಿ ಹಾಕುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದ ಅವರು ತಾಯಿ ಮಕ್ಕಳ ಆರೋಗ್ಯಕ್ಕೆ ವಹಿಸಬೇಕಾದ ಕಾಳಜಿಗಳ ಬಗ್ಗೆ ವಿವರವಾಗಿ ತಿಳಿಸಿದರು.
    ಡಾ. ಕುಮಾರಸ್ವಾಮಿ, ಡಾ. ಆಶಾ, ವಿಂದ್ಯಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಜಗಜ್ಯೋತಿ ಬಸವಣ್ಣನವರ ಅನುಭವ ಮಂಟಪ ಅಸ್ತಿತ್ವ ಕುರಿತು ಪ್ರಶ್ನೆ : ಜಾಗೃತರಾಗಿರಿ

ಶಿವಮೊಗ್ಗ ಬಸವ ಕೇಂದ್ರ, ಚಿಕ್ಕಮಗಳೂರು ಬಸವತತ್ವ ಪೀಠದ ಶ್ರೀ ಮ.ನಿ.ಪ್ರ ಬಸವ ಮರುಳಸಿದ್ದ ಸ್ವಾಮೀಜಿ

ಭದ್ರಾವತಿಯಲ್ಲಿ ಶ್ರೀ ಮಲ್ಲೇಶ್ವರ ಸಮುದಾಯ ಭವನ ಟ್ರಸ್ಟ್ ಸಹಯೋಗದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ಮತ್ತು ಅಕ್ಕನ ಬಳಗದವತಿಯಿಂದ ಜನ್ನಾಪುರ ಶ್ರೀ ಮಲ್ಲೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ೬೫೯ನೇ ವಚನ ಮಂಟಪ ಮತ್ತು ಸಾವಿತ್ರಮ್ಮ ಎಚ್.ವಿ ಶಿವರುದ್ರಪ್ಪ ಹೆಬ್ಬಂಡಿ ದತ್ತಿ ಕಾರ್ಯಕ್ರಮ ವಿಧಾನ ಪರಿಷತ್ ಮಾಜಿ ಸದಸ್ಯ, ಕೈಗಾರಿಕೋದ್ಯಮಿ ಎಸ್. ರುದ್ರೇಗೌಡ ಸಮಾರಂಭ ಉದ್ಘಾಟಿಸಿದರು.  
    ಭದ್ರಾವತಿ: ವೇದ ಉಪನಿಷತ್‌ಗಳ ಕಾಲದಲ್ಲೂ ಸಂವಾದ, ಚರ್ಚೆಗಳು ನಡೆಯುತ್ತಿತ್ತು. ಜನರ ಅಹವಾಲುಗಳನ್ನು ಆಲಿಸಲಾಗುತ್ತಿತ್ತು. ಅನುಭವ ಮಂಟಪ ಎಂಬುದು ಇರಲೇ ಇಲ್ಲ ಎಂಬ ವಾದ ಇತ್ತೀಚಿನ ದಿನಗಳಲ್ಲಿ ಕೇಳಿ ಬರುತ್ತಿದೆ. ಇದರ ಬಗ್ಗೆ ಜನರು ಜಾಗೃತರಾಗಿರಬೇಕೆಂದು ಶಿವಮೊಗ್ಗ ಬಸವ ಕೇಂದ್ರ ಹಾಗು ಚಿಕ್ಕಮಗಳೂರು ಬಸವತತ್ವ ಪೀಠದ ಶ್ರೀ ಮ.ನಿ.ಪ್ರ ಬಸವ ಮರುಳಸಿದ್ದ ಸ್ವಾಮೀಜಿಯವರು ಕರೆ ನೀಡಿದರು. 
    ಶ್ರೀ ಮಲ್ಲೇಶ್ವರ ಸಮುದಾಯ ಭವನ ಟ್ರಸ್ಟ್ ಸಹಯೋಗದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ಮತ್ತು ಅಕ್ಕನ ಬಳಗದವತಿಯಿಂದ ಜನ್ನಾಪುರ ಶ್ರೀ ಮಲ್ಲೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ೬೫೯ನೇ ವಚನ ಮಂಟಪ ಮತ್ತು ಸಾವಿತ್ರಮ್ಮ ಎಚ್.ವಿ ಶಿವರುದ್ರಪ್ಪ ಹೆಬ್ಬಂಡಿ ದತ್ತಿ ಕಾರ್ಯಕ್ರಮದಲ್ಲಿ ಶ್ರೀಗಳು ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. 
       ೧೨ನೇ ಶತಮಾನದ ಅನುಭವ ಮಂಟಪದ ಅಸ್ತಿತ್ವ ಕುರಿತು ವಿದ್ವಾಂಸರು, ಸಾಹಿತಿಗಳು, ಇತಿಹಾಸಕಾರರು ಸೂಕ್ತ ಸಾಕ್ಷ್ಯಾಧಾರ ಹಾಗು ಐತಿಹಾಸಿಕ ದಾಖಲೆಗಳು, ಸಂಗತಿಗಳೊಂದಿಗೆ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಅದು ಏನು ಮಾಡಿತು ಎಂಬುದನ್ನು ಸಹ ತಿಳಿಸಿದ್ದಾರೆ. ಪ್ರಸ್ತುತ ಕೆಲವರು ಇದರ ಅಸ್ತಿತ್ವ ಕುರಿತು ಪ್ರಶ್ನಿಸುವ ಮೂಲಕ ಅತಿಸೂಕ್ಷ್ಮವಾಗಿ, ವ್ಯವಸ್ಥಿತವಾಗಿ ಮರೆಮಾಚುವ ಪಿತೂರಿ ನಡೆಸುತ್ತಿದ್ದಾರೆ ಎಂದರು. 
    ಅಂದು ಅನುಭವ ಮಂಟಪದಲ್ಲಿ ನಡೆಯುತ್ತಿದ್ದ ಚರ್ಚೆಗಳಲ್ಲಿ ಶ್ರೀಸಾಮಾನ್ಯರು, ತಳಸಮುದಾಯದವರು ಹಾಗು ಮಹಿಳೆಯರು ಭಾಗವಹಿಸುತ್ತಿದ್ದರು. ಎಲ್ಲರಿಗೂ ಸೂಕ್ತ ಪ್ರಾತಿನಿಧ್ಯ ನೀಡಲಾಗಿತ್ತು.  ಅನುಭವ ಮಂಟಪ ಕೇವಲ ಕಾಲ್ಪನಿಕ ಹಾಗು ಕಟ್ಟು ಕಥೆಯಲ್ಲ. ಇಲ್ಲಿ ಜನಸಾಮಾನ್ಯರ ಅನುಭವಗಳ ಆಧಾರದ ಮೇಲೆ ಶಿವಶರಣರು ವಚನ ಸಾಹಿತ್ಯವನ್ನು ರಚಿಸಿದ್ದಾರೆ. ಇದನ್ನು ಎಲ್ಲರೂ ಅರಿಯುಬೇಕಿದೆ ಎಂದರು. 
    ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ, ನಗರದ ನಿವಾಸಿ ಡಾ.ಬಿ.ಜಿ ಧನಂಜಯ ಮಾತನಾಡಿ, ಬಸವಣ್ಣನವರು ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದರು. ಅಲ್ಲದೆ ಸಾಮಾಜಿಕ ಸುಧಾರಣೆಯಲ್ಲಿ ಬಹುಮುಖ್ಯ ಪಾತ್ರವಹಿಸಿರುವ ಶಿವಶರಣರ ತಂಡವನ್ನು ನಿರ್ಮಾಣ ಮಾಡಿದರು. ಬಸವಣ್ಣನವರ ಆದರ್ಶ, ಚಿಂತನೆಗಳು ಇಡೀ ವಿಶ್ವವ್ಯಾಪ್ತಿಯಾದವು. ಅವರು ಕಂಡ ಕನಸನ್ನು ನನಸು ಮಾಡುವ ಮೂಲಕ ನಿಜವಾದ ಅರ್ಥದಲ್ಲಿ ಕ್ರಾಂತಿಕಾರಿಯಾದರು ಎಂದರು.
    ಶರಣಾಗತಿಯ ಬದಲಾಗಿ ಸ್ವಾಭಿಮಾನದ ಕಿಚ್ಚನ್ನು ಸಮಾಜಕ್ಕೆ ತಿಳಿಸಿದರು. ದಾನದ ಸಂಸ್ಕೃತಿ ಬದಲಿಗೆ ದಾಸೋಹ, ದೇವಾಲಯ ಸಂಸ್ಕೃತಿಗೆ ಬದಲಾಗಿ ದೇಹವೇ ದೇವಾಲಯ, ಯಜಮಾನ ಸಂಸ್ಕೃತಿ ವಿರುಧ್ಧ ಸಮಾಜವಾದ, ಸಮಾನತೆಯನ್ನು ಪ್ರತಿಪಾದಿಸಿ ಜನರಲ್ಲಿ ಜಾಗೃತಿಯನ್ನು ಉಂಟುಮಾಡಿದರು. ಸಂದೇಹಗಳಿಗೆ ಪ್ರಶ್ನೆ ಮಾಡುವ ಅದನ್ನು ತಿರಸ್ಕರಿಸುವ, ನಿರಾಕಾರ ಮಾಡುವ ಧೈರ್ಯದ ಬಗ್ಗೆ ತಿಳಿಸಿದರು. ಸಂಪ್ರದಾಯ ಪದ್ದತಿಗೆ ಪರ್ಯಾಯವಾಗಿ ಪರಂಪರೆಯ ಪ್ರಜ್ಞೆಯನ್ನು ಹುಟ್ಟು ಹಾಕಿದ ಮಹಾನ್ ಪುರುಷ ಬಸವಣ್ಣಎಂದರು.
    ವಿಧಾನ ಪರಿಷತ್ ಮಾಜಿ ಸದಸ್ಯ, ಕೈಗಾರಿಕೋದ್ಯಮಿ ಎಸ್. ರುದ್ರೇಗೌಡ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶರಣ ಸಾಹಿತ್ಯ ಪರಿಷತ್ ಯಾವುದೇ ಒಂದು ನಿರ್ದಿಷ್ಟ ಜಾತಿ, ಜನಾಂಗಕ್ಕೆ ಸೀಮಿತವಾದ ಸಂಘಟನೆಯಾಗಿಲ್ಲ. ಎಲ್ಲಾ ಜಾತಿ ಜನಾಂಗದವರಿಗೂ ಮುಕ್ತ ಮನಸ್ಸಿನಿಂದ ತೆರೆದ ಸಂಘಟನೆಯಾಗಿದೆ ಎಂದರು.
    ಅಂದು ವೀರಶೈವ ಮಠಗಳು ದೇಶದಲ್ಲಿ ಮಾಡಿರುವ ಕ್ರಾಂತಿ ಹಾಗು ತ್ರಿವಿಧ ದಾಸೋಹ ಬೇರೆ ಯಾವ ಮಠಗಳು ಮಾಡಿಲ್ಲ ಎಂಬುದು ಹೆಮ್ಮೆಯ ಸಂಗತಿ ಎಂದರು.
    ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಎನ್ ಮಲ್ಲಿಕಾರ್ಜುನಯ್ಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಎಚ್.ಎನ್ ಮಹಾರುದ್ರ, ಶ್ರೀ ಮಲ್ಲೇಶ್ವರ ಸಮುದಾಯ ಭವನ ಟ್ರಸ್ಟ್ ಪ್ರಮುಖರಾದ ಕೆ. ಮಂಜಪ್ಪ ವೇದಿಯಲ್ಲಿ ಉಪಸ್ಥಿತರಿದ್ದರು.
    ಎಚ್.ಎಸ್ ಹರೀಶ್, ಎಚ್.ಎಸ್ ಧರಣೇಶ್ ಕುಟುಂಬದವರು ಆತಿಥ್ಯವಹಿಸಿದ್ದರು. ಕದಳಿ ವೇದಿಕೆ ಸದಸ್ಯರುಗಳು ವಚನ ಗಾಯನ ನಡೆಸಿಕೊಟ್ಟರು. ನಂದಿನಿ ಮಲ್ಲಿಕಾರ್ಜುನ್ ಸ್ವಾಗತಿಸಿ, ಬಾರಂದೂರು ಪ್ರಕಾಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎನ್.ಎಸ್ ಮಹೇಶ್ವರಪ್ಪ ಅತಿಥಿ ಪರಿಚಯ, ಮಲ್ಲಿಕಾಂಬ ವಿರುಪಾಕ್ಷ ಕಾರ್ಯಕ್ರಮ ನಿರೂಪಿಸಿ, ಗಂಗಾ ಕುಬ್ಸದ್ ವಂದಿಸಿದರು. 
 
ಬಸವಾದಿ ಶಿವಶರಣರು ಪ್ರತಿಪಾದಿಸಿದ ವಚನ ಸಾಹಿತ್ಯದ ಮೌಲ್ಯಗಳನ್ನು ಇಂದಿನ ಯುವ ಜನರಿಗೆ ತಿಳಿಸಿಕೊಡದೆ ಹಾಗು ಮೌಲ್ಯಗಳನ್ನು ಪಾಲನೆ ಮಾಡದೆ ಐಪಿಎಲ್ ನಂತಹ ಕ್ರಿಕೆಟ್ ಪಂದ್ಯಾವಳಿಗಳನ್ನು ವಿಕ್ಷೀಸಿ ಅದರ ಮೇಲೆ ಬೆಟ್ಟಿಂಗ್ ಕಟ್ಟುವಂತಹ, ಅದರಿಂದ ಹಣ ಮಾಡುವ ಕಾರ್ಯ ಮಾಡುತ್ತಿರುವುದು ಶೋಚನೀಯ ಸಂಗತಿ. ಇದರಿಂದ ಕುಟುಂಬ ವ್ಯವಸ್ಥೆ ಆರ್ಥಿಕವಾಗಿ ನಾಶವಾಗುತ್ತಿದೆ. ಶ್ರಮ ಸಂಸ್ಕೃತಿ ಇಲ್ಲದೆ ದಿಢೀರ್ ಶ್ರೀಮಂತರಾಗಬೇಕು ಎಂಬ ಮನೋಭಾವನೆ ಸರಿಯಲ್ಲ. 
                                     -ಶ್ರೀ ಮ.ನಿ.ಪ್ರ ಬಸವ ಮರುಳಸಿದ್ದ ಸ್ವಾಮೀಜಿ