ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಗ್ರಾಮ ಸಮೀಪದ ಎಪಿಎಂಸಿ ಮಾಜಿ ಸದಸ್ಯೆ ಟಿ.ವಿ ಸುಜಾತರವರ ಟಿವಿಎಸ್ ಫಾರಂ ತೋಟದ ಮನೆಯಲ್ಲಿ ಚಿರತೆ ಪ್ರತ್ಯಕ್ಷವಾಗಿರುವ ದೃಶ್ಯ ಸೋಮವಾರ ರಾತ್ರಿ ಕಂಡು ಬಂದಿದೆ.
ಭದ್ರಾವತಿ: ತಾಲೂಕಿನ ಕೂಡ್ಲಿಗೆರೆ ಗ್ರಾಮ ಸಮೀಪದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ) ಮಾಜಿ ಸದಸ್ಯೆ ಟಿ.ವಿ ಸುಜಾತ ಅವರ ಟಿವಿಎಸ್ ಫಾರಂ ತೋಟದ ಮನೆಯಲ್ಲಿ ಚಿರತೆ ಪ್ರತ್ಯಕ್ಷವಾಗಿರುವ ದೃಶ್ಯ ಸೋಮವಾರ ರಾತ್ರಿ ಕಂಡು ಬಂದಿದೆ.
ರಾತ್ರಿ ೯.೩೦ರ ಸಮಯದಲ್ಲಿ ಅವರ ಸಾಕು ನಾಯಿಗಳು ಬೊಗಳಿದ ಕಾರಣ ಮನೆಯೊಳಗಿನಿಂದ ಬಾಗಿಲ ಬಳಿ ನಿಂತು ಗಮನಿಸಿದಾಗ ಮನೆಯ ಜಗಲಿಕಟ್ಟೆಯ ಮೇಲಿಂದ ಚಿರತೆ ಹಾದು ಹೋಗುವುದನ್ನು ಕಂಡು ಭಯಭೀತರಾಗಿದ್ದಾರೆ. ಸುಜಾತರವರು ಕೋಡಿಹಳ್ಳಿ ಸತೀಶ್, ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜಣ್ಣ ಅವರಿಗೆ ಮಾಹಿತಿ ನೀಡಿ ಅವರನ್ನು ಕರೆಸಿ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಚಿರತೆ ನಾಯಿಗಳ ಬೇಟೆಗೆ ಮೂರ್ನಾಲ್ಕು ಬಾರಿ ಮನೆ ಸುತ್ತಾ ಓಡಾಡಿರುವ ದೃಶ್ಯ ಕಂಡು ಬಂದಿದೆ.
ಅಲ್ಲದೆ ಕಳೆದ ಏ.೧೫ರ ಮಂಗಳವಾರ ಸಹ ಬಂದು ಹೋಗಿದೆ. ಎರಡು ನಾಯಿಗಳು ಮತ್ತು ಒಂದು ಬೆಕ್ಕು ನಾಪತ್ತೆಯಾಗಿದೆ. ಸಿಸಿ ಕ್ಯಾಮರಾದಲ್ಲಿ ನಾಯಿವೊಂದನ್ನು ಹಿಡಿದು ಓಡುವ ದೃಶ್ಯ ಕಂಡು ಬಂದಿದೆ. ವಿಷಯ ತಿಳಿದ ಅರಣ್ಯ ಇಲಾಖೆಯವರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಮನೆಯವರಿಗೆ ಚಿರತೆ ಸೆರೆ ಹಿಡಿಯಲು ಬೋನ್ ಇಡುವುದಾಗಿ ಹಾಗು ಯಾವುದಕ್ಕೂ ಮುಂಜಾಗ್ರತೆ ವಹಿಸುವಂತೆ ತಿಳಿಸಿದ್ದಾರೆಂದು ತಿಳಿದು ಬಂದಿದೆ.