ಬುಧವಾರ, ಜೂನ್ 4, 2025

ವಿಇಎಸ್ ವಿದ್ಯಾಸಂಸ್ಥೆಯಲ್ಲಿ ವಿಶ್ವ ತಂಬಾಕು ನಿಷೇಧ ದಿನ ಆಚರಣೆ

ಭದ್ರಾವತಿಯಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆಶ್ರಿತ ವಿಶ್ವೇಶ್ವರಾಯ ವಿದ್ಯಾ ಸಂಸ್ಥೆ ಸಹಯೋಗದೊಂದಿಗೆ ಬುಧವಾರ ವಿಶ್ವ ತಂಬಾಕು ನಿಷೇಧ ದಿನ ಆಚರಿಸಲಾಯಿತು. 
    ಭದ್ರಾವತಿ : ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆಶ್ರಿತ ವಿಶ್ವೇಶ್ವರಾಯ ವಿದ್ಯಾ ಸಂಸ್ಥೆ ಸಹಯೋಗದೊಂದಿಗೆ ಬುಧವಾರ ವಿಶ್ವ ತಂಬಾಕು ನಿಷೇಧ ದಿನ ಆಚರಿಸಲಾಯಿತು. 
    ರಾಷ್ಟ್ರೀಯ ತಂಬಾಕು ನಿಷೇಧ ಇಲಾಖೆ ಸಂಪನ್ಮೂಲ ವ್ಯಕ್ತಿಗ ಕೆ.ಎಂ ಹೇಮಂತ್ ರಾಜ್‌ಅರಸ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ವಕೀಲರ ಸಂಘದ ಅಧ್ಯಕ್ಷ ಎಂ.ಎಚ್ ಉಮೇಶ್ ಸೇರಿದಂತೆ ಇನ್ನಿತರರು ಮಾತನಾಡಿ, ತಂಬಾಕು ಸೇವನೆಯ ದುಷ್ಪರಿಣಾಮಗಳು ಹಾಗೂ ತಂಬಾಕು ನಿಷೇಧದ ಬಗ್ಗೆ ಜಾಗೃತಿ ಮೂಡಿಸಿದರು. 
    ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಹಾಗೂ ಬಿ.ಇಡಿ ವಿಭಾಗದ ಪ್ರಾಂಶುಪಾಲ ಡಾ. ಎಸ್.ಪಿ ರಾಕೇಶ್,  ದೈಹಿಕ ಶಿಕ್ಷಣ ನಿರ್ದೇಶಕ ಶಿವಲಿಂಗೇಗೌಡ ಹಾಗೂ ವಕೀಲ ಎನ್. ರಂಗಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಂಪನ್ಮೂಲ ವ್ಯಕ್ತಿ ದಯಾನಂದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
     ಬಿ.ಇಡಿ ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಪ್ರಾರ್ಥಿಸಿ,  ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕೆ. ಸುಶೀಲಾ ಬಾಯಿ ನಿರೂಪಿಸಿದರು. ಉಪನ್ಯಾಸಕಿ ವೀಣಾ ಸ್ವಾಗತಿಸಿ, ಹಿರಿಯ ಆರೋಗ್ಯ ನಿರೀಕ್ಷಕ ಆನಂದ ಮೂರ್ತಿ ವಂದಿಸಿದರು. 

ಸರ್ಕಾರಿ ಕಛೇರಿಗಳಿಗೆ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಭಾವಚಿತ್ರ ವಿತರಣೆ

ಭದ್ರಾವತಿ ನಗರದ ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸಾರ್ವಜನಿಕ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಒಡೆಯರ್‌ರವರ ಭಾವಚಿತ್ರ ಹಾಗು ಕರ್ನಾಟಕ ರಾಜ್ಯ ಲಾಂಛನ ಕಛೇರಿಗಳಿಗೆ ನೀಡುವ ಮೂಲಕ ಬುಧವಾರ ಒಡೆಯರ್‌ರವರ ಜನ್ಮದಿನ ವಿಶಿಷ್ಟವಾಗಿ ಆಚರಿಸಲಾಯಿತು. 
    ಭದ್ರಾವತಿ: ನಗರದ ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸಾರ್ವಜನಿಕ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಒಡೆಯರ್‌ರವರ ಭಾವಚಿತ್ರ ಹಾಗು ಕರ್ನಾಟಕ ರಾಜ್ಯ ಲಾಂಛನ ಕಛೇರಿಗಳಿಗೆ ನೀಡುವ ಮೂಲಕ ಬುಧವಾರ ಒಡೆಯರ್‌ರವರ ಜನ್ಮದಿನ ವಿಶಿಷ್ಟವಾಗಿ ಆಚರಿಸಲಾಯಿತು. 
ನಗರದಲ್ಲಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಹಾಗು ಮೈಸೂರು ಕಾಗದ ಕಾರ್ಖಾನೆ ಆರಂಭಿಸುವ ಮೂಲಕ ಲಕ್ಷಾಂತರ ಕುಟುಂಬಗಳಿಗೆ ಅನ್ನದಾತರಾದ ಮೈಸೂರು ಮಹಾರಾಜ ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ನೆನಪಿನಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ  ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸಾರ್ವಜನಿಕ ಕ್ಷೇಮಾಭಿವೃದ್ಧಿ ಸಂಘ ಹಲವಾರು ಜನಪರ ಹಾಗು ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳುವ ಜೊತೆಗೆ ಅನ್ಯಾಯ, ಶೋಷಣೆಗಳ ವಿರುದ್ಧ ಹೋರಾಟ ನಡೆಸಿಕೊಂಡು ಬರುತ್ತಿದೆ. 
ಒಡೆಯರ್‌ರವರ ಹೆಸರನ್ನು ಅಜರಾಮರಗೊಳಿಸುವ ನಿಟ್ಟಿನಲ್ಲಿ ಅವರ ಭಾವಚಿತ್ರ ಸರ್ಕಾರಿ ಕಛೇರಿಗಳಿಗೆ ಉಚಿತವಾಗಿ ನೀಡುವ ಕಾರ್ಯಕ್ಕೆ ಮುಂದಾಗಿದೆ. ಬುಧವಾರ ನಗರದ ನ್ಯೂಟೌನ್ ಪೊಲೀಸ್ ಠಾಣೆಗೆ ತೆರಳಿ ಠಾಣಾ ಉಪ ನಿರೀಕ್ಷಕ ರಮೇಶ್‌ರವರಿಗೆ ಭಾವಚಿತ್ರ ವಿತರಿಸಲಾಯಿತು. 
ಸಂಘದ ಅಧ್ಯಕ್ಷ ಆರ್. ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ರವಿನಾಯ್ಕ, ಉಪಾಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಕುಮಾರ್, ಖಜಾಂಚಿ ಶಂಕರ್ ನಾಯ್ಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಉಕ್ಕಿನ ನಗರದ ಅನ್ನದಾತ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನ ಆಚರಣೆ

ಭದ್ರಾವತಿಯಲ್ಲಿ ಕೈಗಾರಿಕೆಗಳ ನಿರ್ಮಾತೃ, ನಗರದ ಅನ್ನದಾತ ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ಜನ್ಮದಿನ ಬುಧವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಚರಿಸಲಾಯಿತು. 
    ಭದ್ರಾವತಿ: ಕೈಗಾರಿಕೆಗಳ ನಿರ್ಮಾತೃ, ನಗರದ ಅನ್ನದಾತ ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ಜನ್ಮದಿನ ಬುಧವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಚರಿಸಲಾಯಿತು. 
    ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ರಾಜ್ಯಕ್ಕೆ, ನಾಡಿಗೆ ಅವರ ಕೊಡುಗೆಗಳನ್ನು ಸ್ಮರಿಸಲಾಯಿತು. ತಹಸೀಲ್ದಾರ್ ಗ್ರೇಡ್-೨ ಮಂಜಾನಾಯ್ಕರವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪತಹಸೀಲ್ದಾರ್ ರಾಜ್ ಅರಸ್, ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸಾರ್ವಜನಿಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆರ್. ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ರವಿನಾಯ್ಕ, ಉಪಾಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಕುಮಾರ್, ಖಜಾಂಚಿ ಶಂಕರ್, ತಾಲೂಕು ಕಛೇರಿ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು. 

ಮಂಗಳವಾರ, ಜೂನ್ 3, 2025

ಕೊಲೆ ಪ್ರಕರಣ : ಆರೋಪಿಗಳಿಗೆ ಜೀವಾವಧಿ ಶಿಕ್ಷೆ

    ಭದ್ರಾವತಿ:  ಜಮೀನು ವಿವಾದ ಸಂಬಂಧ ವ್ಯಕ್ತಿಯೋರ್ವನ ಮೇಲೆ ಮರಾಣಾಂತಿಕ ಹಲ್ಲೆ ನಡೆಸಿ ಆತನ ಸಾವಿಗೆ ಕಾರಣರಾಗಿದ್ದ ೭ ಆರೋಪಿಗಳಿಗೆ ನಗರದ ೪ನೇ ಹೆಚ್ಚುವರಿ ಜಿಲ್ಲಾ ಸತ್ರನ್ಯಾಯಾಲಯದ ನ್ಯಾಯಾಧೀಶಿರಾದ ಇಂದಿರಾ ಮೈಲಸ್ವಾಮಿ ಚಿಟ್ಟಿಯರ್ ಮಂಗಳವಾರ ಸಂಜೆ ಜೀವಾವಧಿ ಶಿಕ್ಷಿವಿಧಿಸಿ ತೀರ್ಪು ನೀಡಿದರು.
    ತಾಲೂಕಿನ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಭದ್ರಾಪುರದ ನಿವಾಸಿ ಕರಿಯಪ್ಪ ಎಂಬುವರಿಗೆ ಕೂಡ್ಲಿಯ ಸರ್ವೆ ನಂಬರ್ ೧೯೬ರಲ್ಲಿ ಜಮೀನಿದ್ದು, ಜಮೀನಿನ ಸಂಬಂಧ ಕರಿಯಪ್ಪರಿಗೂ ಹಾಗೂ ಆರೋಪಿಗಳ ನಡುವೆ ವಿವಾದ, ಮನಸ್ಥಾಪವಿತ್ತು.
    ೫ ಮಾರ್ಚ್ ೨೦೨೦ರಂದು ರಾತ್ರಿ ೯.೩೦ರ ಸಮಯದಲ್ಲಿ ಕರಿಯಪ್ಪನ ಮಗ ನಾಗರಾಜ ಹಾಗೂ ಇವರ ಜೊತೆ ಅರುಣ ಎಂಬುವರು ಜಮೀನಿನ ಭತ್ತದಗದ್ದೆಗೆ ನೀರು ಕಟ್ಟಲು ಹೋದಾಗ ಅಲ್ಲಿಗೆ ಎರಡು ಬೈಕ್‌ಗಳಲ್ಲಿ ಬಂದ ಆರೋಪಿ ಬಡ್ಡಿ ಪರಮೇಶಿ, ಜಗದೀಶ, ರಮೇಶ್, ಗೌತಮ, ಅಭಿಷೇಕ್, ವಿಕ್ರಂ, ಸಂಜಯ್‌ಎಂಬುವವರು ಕಬ್ಬಣದ ಪೈಪು ಮತ್ತಿತರ ಮಾರಾಕಾಸ್ತ್ರಗಳಿಂದ ನಾಗರಾಜ, ಅರುಣನ ಮೇಲೆ ಹಲ್ಲೆ ನಡೆಸಿದ್ದಾರೆ, ಘಟನಾಸ್ಥಳಕ್ಕೆ ಹೋಗಿ ಆರೋಪಿಗಳನ್ನು ತಡೆಯಲು ಯತ್ನಿಸಿದ ಕರಿಯಪ್ಪರ ಮೇಲೆ ಹಾಗೂ ಉಳಿದವರ ಮೇಲೆ ಆರೋಪಿಗಳು  ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು.


    ಹಲ್ಲೆಯಿಂದಾಗಿ ಗಂಭೀರವಗಿ ಗಾಯಗೊಂಡಿದ್ದ ಕರಿಯಪ್ಪರನ್ನು ಶಿವಮೊಗ್ಗ ಮೆಗ್ಹಾನ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕರಿಯಪ್ಪ ಮೃತಪಟ್ಟಿದ್ದರು. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರು ದಾಖಲಾಗಿತ್ತು.  ತನಿಖೆ ನಡೆಸಿದ ಪೋಲಿಸರು, ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ. ೩೦೨, ೩೦೭, ೩೨೪, ೩೨೩, ೩೪೧, ೫೦೪, ೧೪೨, ೧೪೭, ೫೦೬ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವೆಸಗಿದ್ದಾರೆಂದು ೪ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು.
    ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು, ಸರ್ಕಾರಿ ಅಭಿಯೋಜಕರ ಹಾಗೂ ಆರೋಪಿಗಳಪರ ವಕೀಲರ ವಾದ, ಪ್ರತಿವಾದಗಳನ್ನು ಆಲಿಸಿದ ನಂತರ ಆರೋಪಿಗಳ ಪೈಕಿ ೪ನೇ ಆರೋಪಿ ಮಂಜಪ್ಪ ಮತ್ತು  ೭ನೇ ಆರೋಪಿ ಶರತ್ ಎಂಬುವವರ ಮೇಲಿನ ಆರೋಪ ಸಾಭೀತಾಗದ ಕಾರಣ ಅವರಿಬ್ಬರ ಬಿಡುಗಡೆಗೆ ಆದೇಶಿಸಿ, ಉಳಿದ ಆರೋಪಿಗಳಾದ ಬಡ್ಡಿಪರಮೇಶಿ, ಜಗದೀಶ, ರಮೇಶ, ಗೌತಮ, ಅಭಿಷೇಕ್, ವಿಕ್ರಂ ಮತ್ತು ಸಂಜಯ್ ಅವರುಗಳ ಮೇಲಿನ ಆರೋಪ ಸಾಬೀತಾದ ಕಾರಣ ೭ ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗು ದಂಡ ವಿಧಿಸಿ ಆದೇಶಿಸಿದ್ದಾರೆ. 
    ಆರೋಪಿಗಳಿಂದ ಹತ್ಯೆಗೊಳಗಾದ ಕರಿಯಪ್ಪನ ಪತ್ನಿ ಗಂಗಮ್ಮರಿಗೆ ೩ ಲಕ್ಷ ಪರಿಹಾರ ಹಾಗು ಆರೋಪಿಗಳಿಂದ ಹಲ್ಲೆಗೊಳಗಾಗಿರುವ ನಾಗರಾಜ, ಅರುಣ, ವೀರಪ್ಪ, ಮನೋಹರ ಮತ್ತು ನಾಗರಾಜ ೫ ಮಂದಿಗೆ ತಲಾ ಒಂದೊಂದು ಲಕ್ಷ ಪರಿಹಾರ ಆರೋಪಿಗಳು ನೀಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಪಿ.ರತ್ಮಮ್ಮ ವಾದ ಮಂಡಿಸಿದ್ದರು. 

ಜೂ. ೪ ಮತ್ತು ೫ ರಂದು ವಿದ್ಯುತ್ ವ್ಯತ್ಯಯ


    ಭದ್ರಾವತಿ : ಘಟಕ ೨ ನಗರ ಉಪವಿಭಾಗ ಶಾಖಾ ವ್ಯಾಪ್ತಿಯಲ್ಲಿ ಶಿಥಿಲಗೊಂಡಿರುವ ಕಂಬಗಳನ್ನು ಬದಲಾವಣೆ ಮಾಡುವ ಕೆಲಸ ಹಮ್ಮಿಕೊಂಡಿರುವುದರಿಂದ ಜೂ.೪ ಮತ್ತು ೫ ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 
    ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೪ ಗಂಟೆಯವರೆಗೆ ಸಿ.ಎನ್.ರಸ್ತೆ, ಡಬ್ಬಲ್ ಟಾಕೀಸ್ ರೋಡ್, ರಂಗಪ್ಪ ಸರ್ಕಲ್, ಮಾರ್ಕೆಟ್, ಬಸವೇಶ್ವರ ವೃತ್ತ, ಎನ್‌ಎಸ್‌ಟಿ ರೋಡ್, ಭೂತನಗುಡಿ, ಮಾಧವನಗರ, ಗಾಂಧಿ ವೃತ್ತ, ಕೋಡಿಹಳ್ಳಿ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಗ್ರಾಹಕರು ಸಹಕರಿಸುವಂತೆ ಕೋರಲಾಗಿದೆ. 

ಜೂ.೪ರಂದು ಮೆಸ್ಕಾಂ ಜನ ಸಂಪರ್ಕ ಸಭೆ



    ಭದ್ರಾವತಿ : ಮೆಸ್ಕಾಂ ಗ್ರಾಮೀಣ ಉಪ ವಿಭಾಗದ ವತಿಯಿಂದ ಜೂ.೪ರಂದು ಬೆಳಿಗ್ಗೆ ೧೧ ಗಂಟೆಯಿಂದ ಮಧ್ಯಾಹ್ನ ೧ ಗಂಟೆಯವರೆಗೆ ಜನ ಸಂಪರ್ಕ ಸಭೆ ಆಯೋಜಿಸಲಾಗಿದೆ. 
    ಗ್ರಾಮೀಣ ಉಪ ವಿಭಾಗದ ಕಛೇರಿಯಲ್ಲಿ ನಡೆಯಲಿರುವ ಸಭೆ ಅಧ್ಯಕ್ಷತೆಯನ್ನು ಅಧೀಕ್ಷಕ ಇಂಜಿನಿಯರ್‌ರವರು ವಹಿಸಲಿದ್ದು, ತಾಲೂಕಿನ ಕಾರೇಹಳ್ಳಿ, ಬಾರಂದೂರು, ಅಂತರಗಂಗೆ, ದೊಡ್ಡೇರಿ, ಬಿ.ಆರ್‌ಪಿ, ದೊಣಬಘಟ್ಟ, ತಡಸ, ಬಿಳಿಕಿ, ಅರಳಿಕೊಪ್ಪ, ಕಂಬದಾಳ್, ಹೊಸೂರು, ಅರಳಿಹಳ್ಳಿ, ಕೂಡ್ಲಿಗೆರೆ, ಅತ್ತಿಗುಂದ, ವೀರಾಪುರ, ಕಲ್ಲಹಳ್ಳಿ ಸುತಮುತ್ತಲಿನ ಪ್ರದೇಶಗಳ ವ್ಯಾಪ್ತಿಯ ಗ್ರಾಹಕರು ಸಭೆಯಲ್ಲಿ ಭಾಗವಹಿಸಿ ಕುಂದುಕೊರತೆ, ಅಹವಾಲುಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ. ಇದರ ಸದುಪಯೋಗ ಪಡಿಸಿಕೊಳ್ಳಲು ಕೋರಲಾಗಿದೆ.

ಲ್ಯಾಟರಲ್ ಎಂಟ್ರಿ ಮುಖಾಂತರ ೨ನೇ/೩ನೇ ವರ್ಷದ ಸೆಮಿಸ್ಟರ್ ಡಿಪ್ಲೋಮಾ ಕೋರ್ಸುಗಳಿಗೆ ಅರ್ಜಿ ಆಹ್ವಾನ


    ಭದ್ರಾವತಿ  ೨೦೨೫-೨೬ನೇ ಸಾಲಿನಲ್ಲಿ ೨ ವರ್ಷಗಳ ಐ.ಟಿ.ಐ/ ದ್ವಿತೀಯ ಪಿ.ಯು.ಸಿ.(ವಿಜ್ಞಾನ)/ದ್ವಿತೀಯ ಪಿ.ಯು.ಸಿ(ತಾಂತ್ರಿಕ ವಿಷಯಗಳಲ್ಲಿ) ಉತ್ತೀರ್ಣರಾಗಿರುವ ಅರ್ಹ ಅಭ್ಯರ್ಥಿಗಳಿಗೆ ಲ್ಯಾಟರಲ್ ಎಂಟ್ರಿ ಮುಖಾಂತರ ೨ನೇ /೩ನೇ ವರ್ಷದ ಸೆಮಿಸ್ಟರ್ ಡಿಪ್ಲೋಮಾ ಕೋರ್ಸುಗಳಿಗೆ ನಗರದ ನ್ಯೂಟೌನ್ ವಿ.ಐ.ಎಸ್.ಎಸ್.ಜೆ ಸರ್ಕಾರಿ ಪಾಲಿಟೆಕ್ನಿಕ್ ವತಿಯಿಂದ ಆಫ್-ಲೈನ್ ಮೂಲಕ ಪ್ರವೇಶ ಅರ್ಜಿ ಆಹ್ವಾನಿಸಲಾಗಿದೆ. 
    (೧) ಸಿವಿಲ್ ಇಂಜಿನಿಯರಿಂಗ್, (೨) ಎಲೆಕ್ನಿಕಲ್ ಆಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, (೩)ಮೆಕ್ಯಾನಿಕಲ್ ಇಂಜಿನಿಯರಿಂಗ್ ಮತ್ತು (೪)ಮೆಟಲರ್ಜಿ ಇಂಜಿನಿಯರಿಂಗ್ ವಿಭಾಗಗಳು ಲಭ್ಯವಿರುತ್ತವೆ. ೨ ವರ್ಷಗಳ ಐ.ಟಿ.ಐ. / ದ್ವಿತೀಯ ಪಿ.ಯು.ಸಿ.(ವಿಜ್ಞಾನ)/ದ್ವಿತೀಯ ಪಿ.ಯು.ಸಿ.(ತಾಂತ್ರಿಕ ವಿಷಯಗಳಲ್ಲಿ) ಉತ್ತೀರ್ಣರಾಗಿರುವ ಅರ್ಹ ಅಭ್ಯರ್ಥಿಗಳಿಗೆ ಲ್ಯಾಟರಲ್ ಎಂಟ್ರಿ ಮುಖಾಂತರ ೨ನೇ ವರ್ಷದ/೩ನೇ ಸೆಮಿಸ್ಟರ್ ಡಿಪ್ಲೋಮಾ ಕೋರ್ಸುಗಳಿಗೆ ಆಫ್-ಲೈನ್ ಮೂಲಕ ಪ್ರವೇಶ ಪಡೆಯಲು ಆಹ್ವಾನಿಸಲಾಗಿದೆ. ಮೇ.೨೯ ರಿಂದ ಪ್ರವೇಶ ಪ್ರಕ್ರಿಯೆಗಳು ನಡೆಯುತ್ತಿದ್ದು, ಇಚ್ಛೆಯುಳ್ಳ ವಿದ್ಯಾರ್ಥಿಗಳು ಪಾಲಿಟೆಕ್ನಿಕ್‌ಗೆ ಸಂಸ್ಥೆಗೆ ಖುದ್ದಾಗಿ ಬಂದು ಪ್ರವೇಶ ಅರ್ಜಿಯನ್ನು ಪಡೆದು ಜೂ. ೧೪ರೊಳಗೆ ಸಲ್ಲಿಸಲು ತಿಳಿಸಲಾಗಿದೆ.  
    ಭರ್ತಿ ಮಾಡಿದ ಅರ್ಜಿಯನ್ನು ಅಭ್ಯರ್ಥಿಗಳು ಖುದ್ದಾಗಿ ಪ್ರಾಂಶುಪಾಲರಿಗೆ ಸಲ್ಲಿಸಲು ಅಂತಿಮ ದಿನಾಂಕ ಜೂ.೧೪ರ ಸಂಜೆ ೫ ಗಂಟೆಯೊಳಗೆ ಕಾಲವಕಾಶವಿದ್ದು, ದಿನಾಂಕ ಜೂ.೧೬ ಸಂಜೆ ೫:೩೦ರ ನಂತರ ಅಂತಿಮ ಮೆರಿಟ್ ಪಟ್ಟಿ ಪ್ರಕಟಣೆಯಾಗಲಿದೆ. ಆಫ್‌ಲೈನ್ ಮೂಲಕ ಮೆರಿಟ್ ಆಧಾರದ ಮೇರೆಗೆ ನಿಯಮಗಳ ಅನುಸಾರ ಸೀಟು ಹಂಚಿಕೆ ಮಾಡಲಾಗುವುದರಿಂದ ಅಭ್ಯರ್ಥಿಗಳು ಅರ್ಹ ಮೂಲ ದಾಖಲಾತಿಗಳು ಹಾಗೂ ನಿಗದಿತ ಶುಲ್ಕದೊಂದಿಗೆ ಖುದ್ದಾಗಿ ಹಾಜರಿದ್ದು,  ಜೂ.೧೭ ಅಥವಾ ೧೮ರಂದು ಪ್ರವೇಶ ಪಡೆಯಬಹುದಾಗಿದೆ. 
    ಹೆಚ್ಚಿನ ಮಾಹಿತಿಯನ್ನು ಪಾಲಿಟೆಕ್ನಿಕ್ ಕಛೇರಿ ವೇಳೆಯಲ್ಲಿ ಪಡೆಯಬಹುದಾಗಿದೆ. ಪ್ರಾಂಶುಪಾಲರು/ಕಛೇರಿ ಮೊ: ೮೭೬೨೭೧೭೧೯೬, ೮೮೬೧೯೩೧೫೩೯, ೭೯೭೫೦೪೧೧೩೪, ೯೯೮೬೪೦೬೯೪೧, ೭೨೫೯೩೪೪೨೦೩, ೯೪೮೧೫೦೧೦೦೧, ೯೭೩೧೨೮೩೮೬೮ ಇವರನ್ನು ಸಂಪರ್ಕಿಸಬಹುದಾಗಿದೆ.