Wednesday, June 11, 2025

ಜೂ.೧೨ರಂದು ವಿದ್ಯುತ್ ವ್ಯತ್ಯಯ


    ಭದ್ರಾವತಿ : ತಾಲೂಕಿನ ಮೆಸ್ಕಾಂ ಕೂಡ್ಲಿಗೆರೆ ಶಾಖಾ ವ್ಯಾಪ್ತಿಯಲ್ಲಿ ವಾಹಕ ಬದಲಾವಣೆ ಮತ್ತು ತುರ್ತು ಕಾಮಗಾರಿ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜೂ.೧೨ರ ಗುರುವಾರ ಬೆಳಿಗ್ಗೆ ೯.೩೦ ರಿಂದ ಸಂಜೆ ೬ ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 
    ಬದನೆಹಾಳ್, ಬೆಳ್ಳಿಗೆರೆ, ಬಂಡಿಗುಡ್ಡ, ಹೊಸಹಳ್ಳಿ, ಕಲ್ಪನಹಳ್ಳಿ, ಕೂಡ್ಲಿಗೆರೆ, ಅರಳಿಹಳ್ಳಿ, ಅತ್ತಿಗುಂದ, ಗುಡ್ಡದನೇರಲೆಕೆರೆ, ಕೋಮಾರನಹಳ್ಳಿ, ಕುಮರಿನಾರಾಯಣಪುರ, ಸೀತಾರಾಂಪುರ, ಸಿದ್ದರಮಟ್ಟಿ, ದೇವರಹಳ್ಳಿ, ಸಂಜೀವನಗರ, ಜಯನಗರ, ತಿಪ್ಲಾಪುರ, ಬಸಲೀಕಟ್ಟೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 

ಜೂ.೧೩ರಂದು ಕಾರೇಹಳ್ಳಿ ಸಂತ ಅಂತೋಣಿಯವರ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ

ಭದ್ರಾವತಿ ತಾಲೂಕಿನ ಕಾರೇಹಳ್ಳಿ ಗ್ರಾಮದ ಸಂತ ಅಂತೋಣಿಯವರ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ ಜೂ.೧೩ ರಂದು ವಿಜೃಂಭಣೆಯಿಂದ ಜರುಗಲಿದ್ದು, ವಾರ್ಷಿಕ ಮಹೋತ್ಸವ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. 
    ಭದ್ರಾವತಿ : ತಾಲೂಕಿನ ಕಾರೇಹಳ್ಳಿ ಗ್ರಾಮದ ಸಂತ ಅಂತೋಣಿಯವರ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ ಜೂ.೧೩ ರಂದು ವಿಜೃಂಭಣೆಯಿಂದ ಜರುಗಲಿದ್ದು, ವಾರ್ಷಿಕ ಮಹೋತ್ಸವ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. 
    ಪ್ರತಿ ವರ್ಷ ಗ್ರಾಮದ ಸರ್ವ ಧರ್ಮದವರು ಒಟ್ಟಾಗಿ ಈ ಮಹೋತ್ಸವ ಆಚರಿಸಿಕೊಂಡು ಬರುತ್ತಿದ್ದು,  ಗ್ರಾಮದೆಲ್ಲೆಡೆ ಹಬ್ಬದ ವಾತಾವರಣ ಕಂಡು ಬರುತ್ತಿದೆ. ಮಹೋತ್ಸವದ ಮೊದಲು ೩ ದಿನಗಳ ಕಾಲ ಆಧ್ಯಾತ್ಮಿಕ ಭಕ್ತಿ ಕಾರ್ಯಗಳು ಪ್ರಾರಂಭಗೊಂಡಿದ್ದು, ಮಂಗಳವಾರ ಸಂಜೆ ಶಿವಮೊಗ್ಗ ಸೆಕ್ರೆಟ್ ಆರ್ಟ್ ಪ್ರಧಾನಾಲಯದ ಧರ್ಮಗುರುಗಳಾದ ಫಾದರ್ ಸ್ಟ್ಯಾನಿ ಡಿಸೋಜರವರಿಂದ ದ್ವಜಾರೋಹಣ, ಪೂಜಾ ವಿಧಿವಿಧಾನದೊಂದಿಗೆ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.  ಬುಧವಾರ ಸಂಜೆ ಸೊರಬ ಧರ್ಮಕೇಂದ್ರದ ಧರ್ಮಗುರುಗಳಾದ ಫಾದರ್ ರಾಬರ್ಟ್ ಡಿಮೆಲ್ಲೊ ರವರಿಂದ ದಿವ್ಯ ಬಲಿ ಪೂಜೆ ಜರುಗಿತು. 
    ಜೂ.೧೨ರ ಗುರುವಾರ ಸಂಜೆ ಶಿವಮೊಗ್ಗ ಧರ್ಮ ಕ್ಷೇತ್ರದ ಯುವಜನ ನಿರ್ದೇಶಕರಾದ ಫಾದರ್ ಫ್ರಾಂಕ್ಲಿನ್ ಡಿಸೋಜಾರವರಿಂದ ಪೂಜಾ ವಿಧಿ ವಿಧಾನಗಳು ನೆರವೇರಲಿದ್ದು, ನಂತರ ಗ್ರಾಮದ ರಸ್ತೆಗಳಲ್ಲಿ ಭವ್ಯ ತೇರಿನ ಮೆರವಣಿಗೆ ನಡೆಯಲಿದೆ. 
    ಜೂ.೧೩ರ ಶುಕ್ರವಾರ ಸಂತ ಅಂತೋಣಿಯವರು ಮೃತಪಟ್ಟ ದಿನವಾಗಿದ್ದು, ಅವರ ಸ್ಮರಣೆಗಾಗಿ ವಾರ್ಷಿಕ ಮಹೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ.  ಶಿವಮೊಗ್ಗ ಧರ್ಮ ಕ್ಷೇತ್ರದ ಧರ್ಮಾದ್ಯಕ್ಷರಾದ ಫ್ರಾನ್ಸಿಸ್ ಸೆರಾವೋರವರಿಂದ ಭಕ್ತಿಭಾವದ ವಿಶೇಷ ಪೂಜಾ ವಿಧಿ-ವಿಧಾನಗಳು, ಪ್ರಾರ್ಥನೆಗಳು, ಪ್ರಭೋದನೆಗಳು, ಅನ್ನಸಂತರ್ಪಣೆ ಕಾರ್ಯ ನಡೆಯಲಿದೆ. 
    ಮಹೋತ್ಸವಕ್ಕೆ ತಾಲೂಕಿನ ಹಳೇನಗರ, ನ್ಯೂಟೌನ್, ಮಾವಿನಕೆರೆ, ಕಾಗದನಗರ, ಹಿರಿಯೂರು ಧರ್ಮ ಕೇಂದ್ರಗಳ ಹಾಗು ಜಿಲ್ಲೆಯ ಶಿವಮೊಗ್ಗ, ಸಾಗರ, ಶಿಕಾರಿಪುರ, ಸೊರಬ ಸೇರಿದಂತೆ ತಾಲೂಕು ಹಾಗು ಜಿಲ್ಲಾ ಧರ್ಮಕೇಂದ್ರಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. 


ಭದ್ರಾವತಿ ತಾಲೂಕಿನ ಕಾರೇಹಳ್ಳಿ ಗ್ರಾಮದ ಸಂತ ಅಂತೋಣಿಯವರ ಪುಣ್ಯಕ್ಷೇತ್ರದ 
ಧರ್ಮಗುರು ಫಾದರ್ ಸಂತೋಷ ಅಲ್ಮೇಡ 
    ಪ್ರತಿವರ್ಷದ ಜಾತ್ರಾಮಹೋತ್ಸವಕ್ಕೆ ಎಲ್ಲೆಡೆಯಿಂದ ಸಾವಿರಾರು ಭಕ್ತಾದಿಗಳು ಪುಣ್ಯಕ್ಷೇತ್ರಕ್ಕೆ ಭೇಟಿ ನೀಡುವುದರಿಂದ ಅವರಿಗೆ ಬೇಕಾದ ಸಲಹೆ, ಸೂಚನೆ, ಮಾರ್ಗದರ್ಶನ ನೀಡಲು ಅಕ್ಕ-ಪಕ್ಕದ ಧರ್ಮ ಕೇಂದ್ರದ ಗುರುಗಳ, ಧರ್ಮ ಭಗಿನಿಯರ ಸಹಾಯ ಪಡೆಯಲಾಗಿದೆ. ಸ್ಥಳೀಯ ಧರ್ಮ ಕೇಂದ್ರದ ಭಕ್ತಾದಿಗಳನ್ನು ಪ್ರತ್ಯೇಕ ಗುಂಪುಗಳನ್ನಾಗಿ ವಿಂಗಡಿಸಿ, ವಿವಿಧ ಜವಾಬ್ದಾರಿಗಳನ್ನು ನೀಡಲಾಗಿದೆ ಎಂದು ಧರ್ಮ ಕೇಂದ್ರದ ಗುರುಗಳಾದ ಫಾದರ್ ಸಂತೋಷ ಅಲ್ಮೇಡ ತಿಳಿಸಿದ್ದಾರೆ.
    ಪುಣ್ಯಕ್ಷೇತ್ರ ವಿಶೇಷತೆ : 
    ಈ ಪುಣ್ಯಕ್ಷೇತ್ರದಲ್ಲಿ ಬೇಡಿದ್ದನ್ನು ಪಡೆದಿರುವ ನಂಬಿಕೆ ಭಕ್ತರಲ್ಲಿ ಹಾಳವಾಗಿ ಬೇರೂರಿದೆ. ಅನೇಕ ಪವಾಡಗಳು ನಡೆದಿರುವುದು ಭಕ್ತರಿಂದ ತಿಳಿದು ಬಂದಿದೆ. ಈ ಹಿಂದೆ ಸೇವೆ ಸಲ್ಲಿಸಿ, ಇತ್ತೀಚೆಗಷ್ಟೇ ರಸ್ತೆ ಅಪಘಾತದಲ್ಲಿ ಮೃತರಾದ ದಿವಂಗತ ಫಾದರ್ ಅಂತೋಣಿ ಪೀಟರ್ ರವರ ಸೇವಾ ಅವಧಿಯಲ್ಲಿ `ದೇವರ ಸುವಾರ್ತೆಯನ್ನು ಪ್ರಬೋಧಿಸಿದ ಸಂತ ಅಂತೋಣಿಯವರ ನಾಲಿಗೆಯ ಅವಶೇಷವನ್ನು' ಇಟಲಿಯ ಪಾದುವ ದೇಶದಿಂದ ತಂದು ಪ್ರತಿಷ್ಠಾಪಿಸಲಾಗಿದೆ. ಅಂದಿನಿಂದ ಪ್ರತಿ ತಿಂಗಳ ಮೂರನೇ ಭಾನುವಾರ ಪ್ರತಿಷ್ಠಾಪಿಸಿರುವ ಅವಶೇಷ ಹೊರಗೆ ತೆಗೆದು ಭಕ್ತಾದಿಗಳ ದರ್ಶನಕ್ಕೆ ಇಡಲಾಗುತ್ತದೆ.  ಅಂದು ತಿಂಗಳ ಹಬ್ಬ ಎಂದು ವಿಶೇಷ ಪೂಜಾ ವಿಧಿ-ವಿಧಾನ, ಆರಾಧನೆ, ರೋಗಿಗಳಿಗೆ ತೈಲಾಭಿಷೇಕದ ಪ್ರಾರ್ಥನೆ ಮತ್ತು ಅನ್ನಸಂತರ್ಪಣೆ ಕಾರ್ಯಗಳು ನಡೆಯುತ್ತವೆ. 
    ಅವಶೇಷದ ಬಳಿ ಬಂದು ಪ್ರಾರ್ಥಿಸುವವರ ಪ್ರಾರ್ಥನೆಗಳು ನೆರವೇರುತ್ತಿದ್ದು, ಭಕ್ತಾಧಿಗಳಲ್ಲಿ ಹೆಚ್ಚು ವಿಶ್ವಾಸ, ನಂಬಿಕೆ, ಭಕ್ತಿ ಬೆಳೆಯುವಂತೆ ಮಾಡಿದೆ. ಇದರಿಂದ ಪುಣ್ಯಕ್ಷೇತ್ರವು ಪ್ರಸಿದ್ದಿ ಮತ್ತು ಪ್ರಖ್ಯಾತಿ ಪಡೆದಿದೆ ಎಂದು ಸೈಂಟ್ ಡೊಮಿನಿಕ್ ಸಿಸ್ಟರ್ ಲಾಲಾಮ್ಮ ತಿಳಿಸಿದ್ದಾರೆ. 
    ವಾರ್ಷಿಕ ಮಹೋತ್ಸವಕ್ಕೆ ಆಗಮಿಸಲಿರುವ ಭಕ್ತರಿಗಾಗಿ ಚರ್ಚ್ ವತಿಯಿಂದ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಬಂದಂತಹ ಭಕ್ತರಿಗೆ ಊಟದ ವ್ಯವಸ್ಥೆ, ಶೌಚಾಲಯ, ಪಾರ್ಕಿಂಗ್, ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಬೇಡಿಕೊಂಡ ಬೇಡಿಕೆಗಳು ಫಲಿಸಿರುವ ಕಾರಣ ಹರಕೆ ತೀರಿಸಲು ಅಂದು ದೂರದ ಊರುಗಳಿಂದ ಅನೇಕ ಭಕ್ತಾಧಿಗಳು ಕಾಲ್ನಡಿಗೆಯಲ್ಲೇ ಬರುವುದು ವಿಶೇಷ ಎಂದು ಧರ್ಮ ಕೇಂದ್ರದ ಕಾರ್ಯದರ್ಶಿ ಬೆರ್ನಡೆಟ್ ಮೇರಿ ತಿಳಿಸಿದ್ದಾರೆ. 

Tuesday, June 10, 2025

ಜೂ.೧೧ರಿಂದ ವಿದ್ಯುತ್ ವ್ಯತ್ಯಯ

    

ಭದ್ರಾವತಿ : ಮೆಸ್ಕಾಂ ಘಟಕ-೨ ನಗರ ಉಪವಿಭಾಗ ವ್ಯಾಪ್ತಿಯಲ್ಲಿ ಶಿಥಿಲಗೊಂಡಿರುವ ವಿದ್ಯುತ್ ತಂತಿ ಬದಲಾವಣೆ ಮಾಡುವ ಕಾರ್ಯ ಹಮ್ಮಿಕೊಂಡಿರುವುದರಿಂದ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 
    ಜೂ.೧೧ರ ಬುಧವಾರ, ೧೩ರ ಶುಕ್ರವಾರ ಮತ್ತು ೧೫ರ ಭಾನುವಾರ ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೫ ಗಂಟೆವರೆಗೆ ಭೂತನಗುಡಿ, ಮಾಧವನಗರ, ಗಾಂಧಿನಗರ, ಎನ್‌ಎಂಸಿ ರೋಡ್, ಗಾಂಧಿ ವೃತ್ತ ಸೇರಿದಂತೆ ಇತ್ಯಾದಿ ಪ್ರದೇಶಗಳಲ್ಲಿ ಹಾಗು ಜೂ.೧೨ರ ಗುರುವಾರ, ೧೪ರ ಶನಿವಾರ ಮತ್ತು ೧೬ರ ಸೋಮವಾರ ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೫ ಗಂಟೆವರೆಗೆ ಸಾದತ್ ಕಾಲೋನಿ, ನೆಹರು ನಗರ, ಪಿಡಬ್ಲ್ಯೂಡಿ ಕಚೇರಿ ಮುಂಭಾಗ ಮತ್ತು ಎಂ.ಎಂ ಕಾಂಪೌಂಡ್ ಸೇರಿದಂತೆ ಇತ್ಯಾದಿ ಪ್ರದೇಶಗಳಲ್ಲಿ ವಿದ್ಯುತ್ ಉಂಟಾಗಲಿದೆ. ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ. 

ವಿಐಎಸ್‌ಎಲ್ ಕಾರ್ಖಾನೆ ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ : ಪೇಜಾವರ ಶ್ರೀ

ಶಿವಮೊಗ್ಗಕ್ಕೆ ಆಗಮಿಸಿದ್ದ ಪೇಜಾವರ ಮಠದ ಶ್ರೀ ವಿಶ್ವತೀರ್ಥ ಪ್ರಸನ್ನ ಸ್ವಾಮೀಜಿಯವರಿಗೆ ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆಯ ಗುತ್ತಿಗೆ ಕಾರ್ಮಿಕರ ಸಂಘದ ಪದಾಧಿಕಾರಿಗಳು ಭೇಟಿ ಮಾಡಿ ಕಾರ್ಖಾನೆಯಲ್ಲಿನ ವಿದ್ಯಮಾನಗಳನ್ನು ವಿವರಿಸಿದರು.  
    ಭದ್ರಾವತಿ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ. ಸುಮಾರು ೨ ವರ್ಷಗಳ ಹಿಂದೆ ಕಾರ್ಖಾನೆ ಮುಂಭಾಗ ಹೋರಾಟ ಬೆಂಬಲಿಸಿದ ಸಂದರ್ಭದಲ್ಲಿ ಹೇಳಿದ ಮಾತಿಗೆ ಈಗಲೂ ಬದ್ಧವಾಗಿದ್ದೇನೆ. ಮುಂದಿನ ದಿನಗಳಲ್ಲಿ ಕಾರ್ಖಾನೆಯ ಗುತ್ತಿಗೆ ಕಾರ್ಮಿಕರ ಎಲ್ಲಾ ಸಮಸ್ಯೆಗಳು ಸಹ ಬಗೆಹರಿಯಲಿವೆ ಎಂದು ಪೇಜಾವರ ಮಠದ ಶ್ರೀ ವಿಶ್ವತೀರ್ಥ ಪ್ರಸನ್ನ ಸ್ವಾಮೀಜಿಯವರು ಹೇಳಿದರು. 
    ಶ್ರೀಗಳು ಮಂಗಳವಾರ ಶಿವಮೊಗ್ಗದಲ್ಲಿ ತಮ್ಮನ್ನು ಭೇಟಿ ಮಾಡಿದ ಕಾರ್ಖಾನೆಯ ಗುತ್ತಿಗೆ ಕಾರ್ಮಿಕರ ಸಂಘದ ಪದಾಧಿಕಾರಿಗಳ ನಿಯೋಗಕ್ಕೆ ಆಶೀರ್ವದಿಸಿ, ಪ್ರಸ್ತುತ ಕಾರ್ಖಾನೆಯ ವಿದ್ಯಾಮಾನಗಳ ಕುರಿತು ಮಾಹಿತಿ ಪಡೆದು ಮಾತನಾಡಿದರು. 
    ಕಾರ್ಖಾನೆಗೆ ತನ್ನದೇ ಆದ ಇತಿಹಾಸವಿದೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಭಾರತ ರತ್ನ ಸರ್.ಎಂ ವಿಶ್ವೇಶ್ವರಾಯ ಅವರ ಪರಿಶ್ರಮದಿಂದ ಸ್ಥಾಪನೆಗೊಂಡ ಕಾರ್ಖಾನೆ ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ. ಪ್ರಸ್ತುತ ಆಶಾದಾಯಕ ಬೆಳವಣಿಗೆಗಳು ಕಂಡು ಬರುತ್ತಿವೆ. ಮುಂದಿನ ದಿನಗಳಲ್ಲಿ ಕಾರ್ಖಾನೆಯ ಎಲ್ಲಾ ಸಮಸ್ಯೆಗಳು ದೂರವಾಗಲಿದ್ದು, ಗುತ್ತಿಗೆ ಕಾರ್ಮಿಕರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಗುತ್ತಿಗೆ ಕಾರ್ಮಿಕರ ಸಮಸ್ಯೆಗಳ ಕುರಿತು ಉಕ್ಕು ಸಚಿವರು ಹಾಗು ಸಂಸದರೊಂದಿಗೆ ಚರ್ಚಿಸುವುದಾಗಿ ಶ್ರೀಗಳು ಭರವಸೆ ವ್ಯಕ್ತಪಡಿಸದರು.   
    ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ರಾಕೇಶ್, ಕಾರ್ಯದರ್ಶಿ ಮಂಜುನಾಥ್, ಖಜಾಂಚಿ ಆನಂದ್, ನಿವೃತ್ತ ಕಾರ್ಮಿಕ ನರಸಿಂಹಾಚಾರ್ ಸೇರಿದಂತೆ ಇನ್ನಿತರರು ನಿಯೋಗದಲ್ಲಿದ್ದರು. 

ಆನ್‌ಲೈನ್‌ನಲ್ಲಿ ಸಾಲ ನೀಡುವ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಿ : ಮನವಿ

ಆನ್‌ಲೈನ್‌ನಲ್ಲಿ ಸಾಲ ನೀಡುವ ಕಂಪನಿಗಳಿಂದ ರಾಜ್ಯದಲ್ಲಿ ಬಡಕುಟುಂಬಗಳಿಗೆ ತೊಂದರೆಯಾಗುತ್ತಿದ್ದು, ಈ ಹಿನ್ನಲೆಯಲ್ಲಿ ಅಗತ್ಯ ಕೈಗೊಳ್ಳುವಂತೆ ಭದ್ರಾವತಿ ಜನ್ನಾಪುರ, ಫಿಲ್ಟರ್ ಶೆಡ್ ನಿವಾಸಿ, ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ ಗೃಹ ಸಚಿವರಿಗೆ ತಹಸೀಲ್ದಾರ್ ಪರುಸಪ್ಪ ಕುರುಬರ ಅವರ ಮೂಲಕ ಮಂಗಳವಾರ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. 
    ಭದ್ರಾವತಿ : ಆನ್‌ಲೈನ್‌ನಲ್ಲಿ ಸಾಲ ನೀಡುವ ಕಂಪನಿಗಳಿಂದ ರಾಜ್ಯದಲ್ಲಿ ಬಡಕುಟುಂಬಗಳಿಗೆ ತೊಂದರೆಯಾಗುತ್ತಿದ್ದು, ಈ ಹಿನ್ನಲೆಯಲ್ಲಿ ಅಗತ್ಯ ಕೈಗೊಳ್ಳುವಂತೆ ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ ಗೃಹ ಸಚಿವರಿಗೆ ತಹಸೀಲ್ದಾರ್ ಪರುಸಪ್ಪ ಕುರುಬರ ಅವರ ಮೂಲಕ ಮಂಗಳವಾರ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. 
    ಆನ್‌ಲೈನ್‌ನಲ್ಲಿ ಸಾಲ ನೀಡುವ ಕಂಪನಿಗಳು ನಾಯಿ ಕೊಡೆಗಳಂತೆ ಹುಟ್ಟಿಕೊಂಡಿವೆ. ಈ ಕಂಪನಿಗಳಿಂದ ಸಾಲ ಪಡೆದ ಬಡ ಗ್ರಾಹಕರು ಸಂಪೂರ್ಣವಾಗಿ ಸಾಲ ಮರು ಪಾವತಿ ಮಾಡಿದರೂ ಸಹ ಗ್ರಾಹಕರ ಖಾತೆಗಳಿಂದ ಗೊತ್ತಿಲ್ಲದಂತೆ ಹಣ ಕಡಿತಗೊಳ್ಳುತ್ತಿದೆ. ಇದರಿಂದಾಗಿ ಬಡಕುಟುಂಬಗಳು ತೊಂದರೆ ಅನುಭವಿಸುವಂತಾಗಿದೆ. 
    ಈ ಹಿನ್ನಲೆಯಲ್ಲಿ ಆನ್‌ಲೈನ್‌ನಲ್ಲಿ ಸಾಲ ನೀಡುವ ಕಂಪನಿಗಳ ವಿರುದ್ಧ ಕ್ರಮ ಕೈಗೊಂಡು ಪ್ರತಿ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಆನ್‌ಲೈನ್‌ನಲ್ಲಿ ಸಾಲ ನೀಡುವ ಕಂಪನಿಗಳಿಂದ ಸಾಲ ಪಡೆಯದಂತೆ ಜಾಗೃತಿ ಮೂಡಿಸಬೇಕೆಂದು ಶಶಿಕುಮಾರ್ ಗೌಡ ಮನವಿಯಲ್ಲಿ ಆಗ್ರಹಿಸಿದ್ದಾರೆ.

ನಿವೃತ್ತ ಪೊಲೀಸ್ ಸಿಬ್ಬಂದಿ ನಿಟ್ಟೂರು ರಾಜಶೇಖರ್ ನಿಧನ

ನಿಟ್ಟೂರು ರಾಜಶೇಖರ್ 
    ಭದ್ರಾವತಿ : ನಗರದ ಲೋಯರ್ ಹುತ್ತಾ ನಿವಾಸಿ, ನಿವೃತ್ತ ಪೊಲೀಸ್ ಸಿಬ್ಬಂದಿ ನಿಟ್ಟೂರು ರಾಜಶೇಖರ್(೭೨) ಮಂಗಳವಾರ ನಿಧನ ಹೊಂದಿದರು. 
    ಪತ್ನಿ, ಪುತ್ರ ಹಾಗು ಪುತ್ರಿ ಇದ್ದಾರೆ. ಹಿರಿಯ ಪತ್ರಕರ್ತ ದಿವಂಗತ ನಿಟ್ಟೂರು ಶ್ರೀರಾಮ್‌ರವರ ಸಹೋದರರಾದ ರಾಜಶೇಖರ್‌ರವರು ಮಾಚೇನಹಳ್ಳಿ ಸಶಸ್ತ್ರ ಮೀಸಲು ಪಡೆ (ಕೆಎಸ್‌ಆರ್‌ಪಿ)ಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ನಂತರ ನಗರದ ಪೊಲೀಸ್ ಉಪಾಧೀಕ್ಷಕರ ಕಛೇರಿಯಲ್ಲಿ ಸ್ಟೆನೋಗ್ರಾಫರ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು. 
    ರಾಜಶೇಖರ್ ಹಲವಾರು ವರ್ಷಗಳವರೆಗೆ ಪತ್ರಿಕಾ ವಿತರಕರಾಗಿ ಸಹ ಕಾರ್ಯ ನಿರ್ವಹಿಸಿದ್ದು,  ಇವರ ನಿಧನಕ್ಕೆ ನಗರದ ಗಣ್ಯರು ಸಂತಾಪ ಸೂಚಿಸಿದ್ದಾರೆ. 

Monday, June 9, 2025

ತೀರ್ಥಹಳ್ಳಿ ನ್ಯಾಯವಾದಿ ಮೇಲೆ ಹಲ್ಲೆ ಪ್ರಕರಣ ಖಂಡಿಸಿ ಪ್ರತಿಭಟನೆ

ತೀರ್ಥಹಳ್ಳಿ ನ್ಯಾಯವಾದಿ ಮಧುಕರ್ .ಆರ್ ಮಯ್ಯ ಅವರನ್ನು ಅಪರಿಚಿತರು ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ಖಂಡಿಸಿ ಭದ್ರಾವತಿ ತಾಲೂಕು ವಕೀಲರ ಸಂಘದಿಂದ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ :  ತೀರ್ಥಹಳ್ಳಿ ನ್ಯಾಯವಾದಿ ಮಧುಕರ್ .ಆರ್ ಮಯ್ಯ ಅವರನ್ನು ಅಪರಿಚಿತರು ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ಖಂಡಿಸಿ ತಾಲೂಕು ವಕೀಲರ ಸಂಘದಿಂದ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
    ಇದಕ್ಕೂ ಮೊದಲು ಸಂಘದ ಅಧ್ಯಕ್ಷ ಉಮೇಶ್‌ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನ್ಯಾಯವಾದಿಗಳಾದ ಕೆ.ಎನ್ ಶ್ರೀಹರ್ಷ, ವೆಂಕಟೇಶ್, ಕೇಶವಮೂರ್ತಿ, ಟಿ. ಚಂದ್ರೇಗೌಡ, ಜಯರಾಂ, ಪ್ರಶಾಂತ್ ಸೇರಿದಂತೆ ಇನ್ನಿತರರು ಮಾತನಾಡಿ, ಸಮಾಜ ಘಾತಕ ಶಕ್ತಿಗಳಿಂದ ಇತ್ತೀಚೆಗೆ ನ್ಯಾಯವಾದಿಗಳ ಮೇಲೆ ಹಲ್ಲೆ, ದಬ್ಬಾಳಿಕೆಗಳು ಹೆಚ್ಚಾಗುತ್ತಿವೆ. ಸರ್ಕಾರ ವಕೀಲರ ಹಿತರಕ್ಷಣಾ ಕಾಯಿದೆ ಸಮರ್ಪಕವಾಗಿ ಜಾರಿಗೆ ತರಬೇಕು. ನ್ಯಾಯವಾದಿಗಳಿಗೆ ಸೂಕ್ತ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಹಲವು ಬಾರಿ ಸರ್ಕಾರಕ್ಕೆ ಒತ್ತಾಯಿಸುತ್ತಾ ಬಂದಿದ್ದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ನ್ಯಾಯವಾದಿಗಳ ಮೇಲಿನ ಹಲ್ಲೆ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿದೆ ಎಂದು ಆರೋಪಿಸಲಾಯಿತು. 
ಜೂ:೬ರಂದು ತೀರ್ಥಹಳ್ಳಿ ನ್ಯಾಯವಾದಿ ಮಧುಕರ್ .ಆರ್ ಮಯ್ಯರವರ ಮೇಲೆ ಅಪರಿಚಿತ ವ್ಯಕ್ತಿಗಳು ರಸ್ತೆಯಲ್ಲಿ ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ತಪ್ಪಿತಸ್ಥರನ್ನು ಪೊಲೀಸರು ತಕ್ಷಣ ಪತ್ತೆಹಚ್ಚಿ ಬಂಧಿಸಬೇಕೆಂದು ಗೃಹ ಸಚಿವರಿಗೆ ಒತ್ತಾಯಿಸಲಾಯಿತು. 
    ಪ್ರತಿಭಟನಾ ಮೆರವಣಿಗೆ.-ಮನವಿ.
    ನ್ಯಾಯಾಲಯದ ಆವರಣದಿಂದ ತಾಲೂಕು ಕಚೇರಿವರೆಗೂ ಘೋಷಣೆಗಳನ್ನು ಕೂಗುತ್ತಾ ಸಾಗಿದ ನ್ಯಾಯವಾದಿಗಳು ಉಪತಹಸೀಲ್ದಾರ್ ಮಂಜಾನಾಯ್ಕರವರ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.  
    ಸಂಘದ ಉಪಾಧ್ಯಕ್ಷ ಬಿ.ಎಸ್ ನಾಗರಾಜ್, ಕಾರ್ಯದರ್ಶಿ ರಾಜೇಶ್, ಖಜಾಂಚಿ ಆಶಾ, ಪಾಧಿಕಾರಿಗಳಾದ ಆದರ್ಶ, ಪವನ್, ಹರೀಶ್‌ಬರ್ಗೆ, ರೇಖಾ, ಉಮಾಪತಿ, ಉದಯಕುಮಾರ್, ಪ್ರಕಾಶ್, ಕಾಂತರಾಜ್, ಪುಟ್ಟಸ್ವಾಮಿ, ಭರತ್, ರಾಜು, ಶ್ರೀನಿವಾಸ, ಉಮಾಶಂಕರ್, ಪಂಡರಿನಾಥ್, ಆಂಥೋಣಿ, ಕೃಷ್ಣೇಗೌಡ, ವಿನಾಯಕ್, ಲೋಕೇಶ್, ಸೋಮಶೇಖರ್, ಶಿವಕುಮಾರ್, ಎ.ಟಿ ರವಿ, ಮಹೆಶ್, ಕೂಡ್ಲಿಗೆರೆಮಂಜುನಾಥ್, ಮಹೆಶ್‌ಕುಮಾರ್, ಅನಿತ, ಮುಖ್ತಾಬಾಯಿ, ನರಸಿಂಹಮೂರ್ತಿ, ನಾರಾಯಣಸ್ವಾಮಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.